ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನ ದೃಷ್ಟಿಕೋನ

ಭೂಮಿ

ಭೂಮಿ

ಭೂಮಿಯನ್ನು ದೇವರು ಯಾವ ಉದ್ದೇಶಕ್ಕಾಗಿ ಸೃಷ್ಟಿಸಿದನು?

“ಯೆಹೋವನ ಮಾತನ್ನು ಕೇಳಿರಿ, . . . ಭೂಲೋಕವನ್ನು ನಿರ್ಮಿಸಿ, . . . ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು.” ಯೆಶಾಯ 45:18.

ಜನರು ಏನು ಹೇಳುತ್ತಾರೆ?

ಭೂಮಿಯನ್ನು ಯಾರೂ ಸೃಷ್ಟಿ ಮಾಡಿಲ್ಲ, ತನ್ನಿಂದತಾನೇ ಉಂಟಾಯಿತೆಂದು ಅನೇಕರು ಹೇಳುತ್ತಾರೆ. ಜನರನ್ನು ಸ್ವರ್ಗಕ್ಕೆ ಕಳುಹಿಸಬೇಕಾ ನರಕಕ್ಕೆ ಕಳುಹಿಸಬೇಕಾ ಅಂತ ದೇವರು ಭೂಮಿಯಲ್ಲಿ ಪರೀಕ್ಷಿಸುತ್ತಾನೆ. ಅದಕ್ಕೇ ಭೂಮಿಯನ್ನು ಸೃಷ್ಟಿ ಮಾಡಿದ್ದಾನೆಂದು ಇನ್ನೂ ಕೆಲವು ಧರ್ಮಗಳು ಕಲಿಸುತ್ತವೆ.

ಬೈಬಲ್‌ ಏನು ಹೇಳುತ್ತದೆ?

“ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು” ಎನ್ನುತ್ತದೆ ಬೈಬಲ್‌. (ಆದಿಕಾಂಡ 1:1) ಮೊದಲ ಮಾನವ ಜೋಡಿಗೆ ದೇವರು ಹೇಳಿದ್ದು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ . . . ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” (ಆದಿಕಾಂಡ 1:28) ಅವರು ತನಗೆ ಅವಿಧೇಯರಾದರೆ ಮಾತ್ರ ಸಾವು ಬರುವುದೆಂದು ದೇವರು ಹೇಳಿದ್ದನು. (ಆದಿಕಾಂಡ 2:17) ಭೂಮಿ ಯಾವಾಗಲೂ ಮನುಷ್ಯರ ಮನೆಯಾಗಿ ಇರಬೇಕೆಂದು ದೇವರು ಅದನ್ನು ಸೃಷ್ಟಿಸಿದನೆಂದು ಇದರಿಂದ ಗೊತ್ತಾಗುತ್ತದೆ. ಅಷ್ಟೇ ಅಲ್ಲ ತನಗೆ ವಿಧೇಯರಾಗುವವರು ಭೂಮಿಯನ್ನು ಚೆನ್ನಾಗಿ ನೋಡಿಕೊಂಡು ಅದರಲ್ಲಿ ಶಾಶ್ವತವಾಗಿ ಜೀವಿಸಬೇಕು ಎನ್ನುವುದೂ ಆತನ ಉದ್ದೇಶ ಆಗಿತ್ತು.

ಭೂಮಿ ನಾಶ ಆಗಲಿದೆಯಾ?

“ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ ಅದನ್ನು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದೀ.”ಕೀರ್ತನೆ 104:5.

ಜನರು ಏನು ಹೇಳುತ್ತಾರೆ?

ಕ್ಷುದ್ರಗ್ರಹ ಅಥವಾ ಧೂಮಕೇತು ಭೂಮಿಗೆ ಅಪ್ಪಳಿಸಬಹುದು, ದೊಡ್ಡ ದೊಡ್ಡ ಜ್ವಾಲಾಮುಖಿ ಸಿಡಿಯಬಹುದು, ಸೂರ್ಯ ಇಲ್ಲದೆ ಹೋಗಬಹುದು, ಭೂಮಿಯ ಬಿಸಿ ಏರುವಿಕೆ ಇನ್ನೂ ಜಾಸ್ತಿ ಆಗಬಹುದು. ಇಲ್ಲವೆ ಅಣು ಯುದ್ಧ ಅಥವಾ ಜೈವಿಕ ಶಸ್ತ್ರಗಳನ್ನು ಬಳಸಿ ನಡೆಸಲಾಗುವ ಭಯೋತ್ಪಾದನೆ ನಡೆಯಬಹುದು. ಹೀಗೆ ನೈಸರ್ಗಿಕ ವಿಪತ್ತುಗಳಿಂದಾಗಿಯೊ ಮನುಷ್ಯನಿಂದಲೊ ಭೂಮಿ ನಾಶ ಆಗಲಿದೆ ಅಥವಾ ಅದರಲ್ಲಿ ಯಾರೂ ಉಳಿಯಲ್ಲ ಎನ್ನುವುದು ವಿಜ್ಞಾನಿಗಳ ಊಹೆ.

ಬೈಬಲ್‌ ಏನು ಹೇಳುತ್ತದೆ?

ಭೂಮಿಯನ್ನು ದೇವರು ಯಾವ ಉದ್ದೇಶಕ್ಕಾಗಿ ಸೃಷ್ಟಿಸಿದನೊ ಅದು ಇವತ್ತಿಗೂ ಬದಲಾಗಿಲ್ಲ. ದೇವರ ವಾಕ್ಯ ಸ್ಪಷ್ಟವಾಗಿ ಹೇಳುವುದು: ‘ಭೂಮಿ ಶಾಶ್ವತವಾಗಿ ನಿಲ್ಲುವದು.’ (ಪ್ರಸಂಗಿ 1:4) ಅಷ್ಟುಮಾತ್ರವಲ್ಲ ‘ನೀತಿವಂತರು ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.’ ಹೌದು ಭೂಮಿಯಲ್ಲಿ ಯಾವಾಗಲೂ ಜನರಿರುವರು. —ಕೀರ್ತನೆ 37:29.

ಇದು ಗಂಭೀರ ವಿಷಯವೇಕೆ?

ಭೂಮಿ ನಾಶವಾಗಲಿದೆ ಅಂದುಕೊಂಡು ಜನರು ಅದರ ಸಂಪನ್ಮೂಲಗಳನ್ನು ಬೇಕಾಬಿಟ್ಟಿ ಬಳಸಿ ಲೂಟಿ ಮಾಡುತ್ತಿದ್ದಾರೆ. ಭವಿಷ್ಯದ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲದೆ ‘ಇವತ್ತು ಸಂತೋಷವಾಗಿದ್ದರೆ ಸಾಕು, ನಾಳೆ ಬಗ್ಗೆ ಚಿಂತೆಯೇಕೆ?’ ಎಂಬ ಮನೋಭಾವ ಜನರಲ್ಲಿ ಮನೆ ಮಾಡಿದೆ. ಇದರಿಂದಾಗಿ ಜೀವನಕ್ಕೆ ಅರ್ಥ ಇರುವುದಿಲ್ಲ. ಇದರ ಬದಲು ಭೂಮಿ ಮೇಲೆ ಶಾಶ್ವತವಾಗಿ ಬದುಕಬಹುದು ಎಂಬ ನಂಬಿಕೆ ನಮಗಿದ್ದರೆ ಈಗ ಮತ್ತು ಭವಿಷ್ಯದಲ್ಲಿ ನಮಗೂ ನಮ್ಮ ಕುಟುಂಬದವರಿಗೂ ಒಳಿತಾಗುವಂಥ ನಿರ್ಣಯಗಳನ್ನು ಮಾಡುವೆವು.

ಮನುಷ್ಯರೆಲ್ಲರೂ ಕೊನೆಗೆ ಹೋಗುವುದು ಸ್ವರ್ಗಕ್ಕೆನಾ?

“ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ.”—ಕೀರ್ತನೆ 115:16.

ಜನರು ಏನು ಹೇಳುತ್ತಾರೆ?

ಒಳ್ಳೆಯವರೆಲ್ಲ ಸ್ವರ್ಗಕ್ಕೆ ಹೋಗುತ್ತಾರೆಂದು ತುಂಬ ಜನ ನಂಬುತ್ತಾರೆ.

ಬೈಬಲ್‌ ಏನು ಹೇಳುತ್ತದೆ?

ಸ್ವರ್ಗ ದೇವರದ್ದು, ಭೂಮಿಯನ್ನು ಮನುಷ್ಯರಿಗೆ ಕೊಟ್ಟಿದ್ದಾನೆ. ಆದ್ದರಿಂದಲೇ “ಬರಲಿರುವ ನಿವಾಸಿತ ಭೂಮಿ”ಯ ಬಗ್ಗೆ ಬೈಬಲಲ್ಲಿ ತಿಳಿಸಲಾಗಿದೆ. (ಇಬ್ರಿಯ 2:5) ಸ್ವರ್ಗಕ್ಕೆ ಹೋದವರಲ್ಲಿ ಮೊದಲನೇ ವ್ಯಕ್ತಿ ಯೇಸು. ಭೂಮಿಯಿಂದ ಆಯ್ಕೆ ಮಾಡಲಾಗಿರುವ ಕೆಲವರು ಮಾತ್ರ ಸ್ವರ್ಗಕ್ಕೆ ಹೋಗುತ್ತಾರೆಂದು ಬೈಬಲ್‌ ತಿಳಿಸುತ್ತದೆ. ಅವರಿಗೆ ಅಲ್ಲೊಂದು ನಿರ್ದಿಷ್ಟ ಕೆಲಸ ಇದೆ. ಯೇಸುವಿನ ಜೊತೆ “ಅವರು ಭೂಮಿಯ ಮೇಲೆ ರಾಜರಾಗಿ ಆಳಲಿದ್ದಾರೆ.”—ಪ್ರಕಟನೆ 5:9,10; ಲೂಕ 12:32; ಯೋಹಾನ 3:13.

ಇದು ಗಂಭೀರ ವಿಷಯವೇಕೆ?

ಒಳ್ಳೆಯವರೆಲ್ಲ ಸ್ವರ್ಗಕ್ಕೆ ಹೋಗುತ್ತಾರೆ ಎಂದು ಬೈಬಲ್‌ ಕಲಿಸುವುದಿಲ್ಲ. ಒಂದುವೇಳೆ ಎಲ್ಲಾ ಒಳ್ಳೇ ಜನರನ್ನು ದೇವರು ಸ್ವರ್ಗಕ್ಕೆ ಕರಕೊಳ್ಳುವುದು ನಿಜವೇ ಆಗಿದ್ದರೆ ಭೂಮಿಯನ್ನು ಸೃಷ್ಟಿ ಮಾಡಿದ್ದರ ತನ್ನ ಉದ್ದೇಶವನ್ನು ಪೂರೈಸಲು ಆತನಿಂದ ಆಗುವುದಿಲ್ಲ ಎಂದಾಗುತ್ತದೆ. ಭೂಮಿಯ ಮೇಲೆ ಮನುಷ್ಯರು ಶಾಶ್ವತವಾಗಿ ಬದುಕುವರು ಎಂದು ಆತನು ಕೊಟ್ಟಿರುವ ಮಾತುಗಳೆಲ್ಲ ಸುಳ್ಳೆಂದು ಸಾಬೀತಾಗುವವು. ಆದರೆ ಬೈಬಲ್‌ ಈ ಆಶ್ವಾಸನೆ ಕೊಡುತ್ತದೆ: “ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ” ಅಂದರೆ ಭೂಮಿಯಲ್ಲಿರುವಂತೆ ಮಾಡುವನು.—ಕೀರ್ತನೆ 37:34. ▪ (g14-E 12)