ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವುದೂ ನಿಮ್ಮನ್ನು ಯೆಹೋವನಿಂದ ದೂರಮಾಡುವಂತೆ ಬಿಡಬೇಡಿ

ಯಾವುದೂ ನಿಮ್ಮನ್ನು ಯೆಹೋವನಿಂದ ದೂರಮಾಡುವಂತೆ ಬಿಡಬೇಡಿ

ಯಾವುದೂ ನಿಮ್ಮನ್ನು ಯೆಹೋವನಿಂದ ದೂರಮಾಡುವಂತೆ ಬಿಡಬೇಡಿ

“ಯಾರನ್ನು ಸೇವಿಸಬೇಕೆಂದಿ ದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ.”—ಯೆಹೋ. 24:15.

ಉತ್ತರ ಹುಡುಕಿ

ನಿಮ್ಮ ಉದ್ಯೋಗ ನಿಮ್ಮನ್ನು ಯೆಹೋವನಿಂದ ದೂರ ಮಾಡದಂತೆ ಹೇಗೆ ನೋಡಿಕೊಳ್ಳಬಲ್ಲಿರಿ?

ಮನರಂಜನೆ, ವಿನೋದವಿಹಾರದ ವಿಷಯದಲ್ಲಿ ನೀವು ಹೇಗೆ ಒಳ್ಳೇ ಆಯ್ಕೆಗಳನ್ನು ಮಾಡಬಲ್ಲಿರಿ?

ನಿಮ್ಮ ಕುಟುಂಬದಲ್ಲಿ ಒಬ್ಬರು ಯೆಹೋವನನ್ನು ತೊರೆದಾಗ ಆ ದುಃಖವನ್ನು ಹೇಗೆ ಸಹಿಸಿಕೊಳ್ಳಬಲ್ಲಿರಿ?

1-3. (1) ಜೀವನದಲ್ಲಿ ಸರಿಯಾದ ಆಯ್ಕೆಯನ್ನು ಮಾಡುವ ವಿಷಯದಲ್ಲಿ ಯೆಹೋಶುವ ನಮಗೇಕೆ ಒಳ್ಳೇ ಮಾದರಿ? (2) ನಿರ್ಣಯ ಮಾಡಲಿರುವಾಗ ಯಾವುದನ್ನು ಮನಸ್ಸಿನಲ್ಲಿಡಬೇಕು?

ನಾವು ಮಾಡುವ ಆಯ್ಕೆ ಬಹು ಪ್ರಾಮುಖ್ಯ. ಏಕೆಂದರೆ ನಮ್ಮ ಬದುಕು ಯಾವ ದಿಕ್ಕಿನಲ್ಲಿ ಸಾಗಬೇಕೆನ್ನುವುದನ್ನು ನಿರ್ಧರಿಸಲು ಅದರಿಂದ ಸಾಧ್ಯವಾಗುತ್ತದೆ. ಈ ಉದಾಹರಣೆ ಗಮನಿಸಿ. ಒಬ್ಬನು ನಡೆದು ಬರುತ್ತಿರುವಾಗ ದಾರಿ ಕವಲೊಡೆದಿರುವುದನ್ನು ನೋಡುತ್ತಾನೆ. ಅವನ ಮುಂದೆ ಎರಡು ದಾರಿಗಳಿವೆ. ಒಂದನ್ನು ಆರಿಸಿಕೊಳ್ಳಬೇಕು. ಸರಿ ದಾರಿಯನ್ನು ಆರಿಸಿಕೊಳ್ಳಲು ಮೊದಲು ಅವನಿಗೆ ತಾನು ಹೋಗಬೇಕಿರುವ ಸ್ಥಳ ಯಾವುದೆಂದು ಮನಸ್ಸಿನಲ್ಲಿ ಸ್ಪಷ್ಟವಾಗಿರಬೇಕು. ಆಗ ಮಾತ್ರ ಅಲ್ಲಿಗೆ ನಡೆಸುವ ದಾರಿಯನ್ನು ಅವನು ಆರಿಸಿಕೊಳ್ಳುವನು. ತನ್ನನ್ನು ಬೇರೆಲ್ಲಿಗೋ ದೂರ ಕೊಂಡೊಯ್ಯುವ ದಾರಿಯನ್ನಲ್ಲ.

2 ಇಂಥದ್ದೇ ಸನ್ನಿವೇಶವನ್ನು ಎದುರಿಸಿದ ಅನೇಕರ ಕುರಿತು ಬೈಬಲ್‌ ತಿಳಿಸುತ್ತದೆ. ಉದಾಹರಣೆಗೆ, ಕಾಯಿನನು ತನ್ನ ಕೋಪಕ್ಕೆ ಕಡಿವಾಣ ಹಾಕುವ ಇಲ್ಲವೆ ಕೋಪವನ್ನು ಹೊರಗೆಡಹುವ ಆಯ್ಕೆ ಮಾಡಬೇಕಿತ್ತು. (ಆದಿ. 4:6, 7) ಯೆಹೋಶುವನು ಒಂದೋ ಸತ್ಯದೇವರನ್ನು ಇಲ್ಲವೆ ಸುಳ್ಳು ದೇವರುಗಳನ್ನು ಆರಾಧಿಸುವ ಆಯ್ಕೆ ಮಾಡಬೇಕಿತ್ತು. (ಯೆಹೋ. 24:15) ಯೆಹೋಶುವನಿಗೆ ತನ್ನ ಬಾಳ ಗುರಿ ಮನಸ್ಸಿನಲ್ಲಿ ಸ್ಪಷ್ಟವಾಗಿತ್ತು. ಅದು ಯೆಹೋವನಿಗೆ ಆಪ್ತವಾಗಿ ಉಳಿಯುವುದೇ. ಹಾಗಾಗಿ ಆ ಗುರಿ ತಲಪಿಸುವ ಮಾರ್ಗವನ್ನು ಅವನು ಆರಿಸಿಕೊಂಡನು. ಆದರೆ ಅಂಥ ಯಾವುದೇ ಗುರಿ ಕಾಯಿನನಿಗೆ ಇರಲಿಲ್ಲ. ಆದ್ದರಿಂದ ತನ್ನನ್ನು ಯೆಹೋವನಿಂದ ದೂರಮಾಡುವ ಮಾರ್ಗವನ್ನು ಆರಿಸಿಕೊಂಡನು.

3 ನಮ್ಮ ಬಾಳ ಹಾದಿಯಲ್ಲೂ ಕೆಲವೊಮ್ಮೆ ಕವಲೊಡೆದಿರುವ ಮಾರ್ಗ ಎದುರಾಗಬಹುದು. ಆಗ ಯಾವುದನ್ನು ಆರಿಸಿಕೊಳ್ಳಬೇಕೆಂಬ ನಿರ್ಣಯ ಮಾಡಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ನೀವು ಎಲ್ಲಿಗೆ ತಲಪಬೇಕಿದೆಯೆಂದು ಅಂದರೆ ನಿಮ್ಮ ಗುರಿ ಏನೆಂದು ಮನಸ್ಸಿನಲ್ಲಿಡಿ. ಏನೇ ಮಾಡಿದರೂ ಯೆಹೋವನಿಗೆ ಮಹಿಮೆ ತರುವುದು ಮತ್ತು ಆತನಿಂದ ದೂರ ಕೊಂಡೊಯ್ಯುವ ಯಾವುದನ್ನೂ ಮಾಡದಿರುವುದು ನಿಮ್ಮ ಗುರಿಯಲ್ಲವೇ? (ಇಬ್ರಿಯ 3:12 ಓದಿ.) ಜೀವನದ ಏಳು ಕ್ಷೇತ್ರಗಳಲ್ಲಿ ಸರಿಯಾದ ಆಯ್ಕೆಗಳನ್ನು ಮಾಡುವ ಮೂಲಕ ಯೆಹೋವನಿಂದ ದೂರಸರಿಯದಂತೆ ನೋಡಿಕೊಳ್ಳುವುದು ಹೇಗೆಂದು ನಾವು ಈ ಲೇಖನ ಮತ್ತು ಮುಂದಿನ ಲೇಖನದಲ್ಲಿ ಚರ್ಚಿಸಲಿದ್ದೇವೆ.

ಉದ್ಯೋಗ ಮತ್ತು ಜೀವನವೃತ್ತಿ

4. ಉದ್ಯೋಗ ನಮಗೇಕೆ ಅಗತ್ಯ?

4 ತನ್ನನ್ನು ಮತ್ತು ತನ್ನ ಕುಟುಂಬವನ್ನು ನೋಡಿಕೊಳ್ಳಬೇಕಾದದ್ದು ಕ್ರೈಸ್ತನೊಬ್ಬನ ಕರ್ತವ್ಯ. ಕುಟುಂಬಕ್ಕೆ ಅಗತ್ಯವಿರುವುದನ್ನು ಒದಗಿಸಲು ಬಯಸದವನು ನಂಬದವನಿಗಿಂತ ಕಡೆ ಎಂದು ಬೈಬಲ್‌ ಸೂಚಿಸುತ್ತದೆ. (2 ಥೆಸ. 3:10; 1 ತಿಮೊ. 5:8) ಹಾಗಾಗಿ ಉದ್ಯೋಗ ಮಾಡಲೇಬೇಕು. ಆದರೆ ಜಾಗ್ರತೆ ವಹಿಸದಿದ್ದರೆ ನಮ್ಮ ಉದ್ಯೋಗವೇ ನಮ್ಮನ್ನು ಯೆಹೋವನಿಂದ ದೂರ ಮಾಡಬಲ್ಲದು. ಹೇಗೆ?

5. ಉದ್ಯೋಗವನ್ನು ಆರಿಸಿಕೊಳ್ಳುವಾಗ ಯಾವ ಅಂಶಗಳನ್ನು ನೆನಪಿನಲ್ಲಿಡಬೇಕು?

5 ನೀವು ಉದ್ಯೋಗಕ್ಕಾಗಿ ಹುಡುಕುತ್ತಿದ್ದೀರೆಂದು ನೆನಸಿ. ನೀವಿರುವ ಪ್ರದೇಶದಲ್ಲಿ ಉದ್ಯೋಗ ಸಿಗುವುದು ತುಂಬ ಕಷ್ಟವಾಗಿರುವಲ್ಲಿ ಯಾವ ಕೆಲಸ ಸಿಕ್ಕಿದರೂ ಅದನ್ನು ಸ್ವೀಕರಿಸಲು ಮನಸ್ಸಾಗಬಹುದು. ಆದರೆ ಆ ಉದ್ಯೋಗ ಬೈಬಲ್‌ ಮೂಲತತ್ವಗಳಿಗೆ ವಿರುದ್ಧವಾಗಿರುವಲ್ಲಿ ಆಗೇನು ಮಾಡುವಿರಿ? ಕೆಲಸದ ವೇಳೆ ಅಥವಾ ಹೋಗಿಬರಲು ತಗಲುವ ಸಮಯ ನಿಮ್ಮ ಕ್ರೈಸ್ತ ಚಟುವಟಿಕೆಗೆ ಅಡ್ಡಿ ಉಂಟುಮಾಡುವಲ್ಲಿ? ಕುಟುಂಬದೊಂದಿಗೆ ಕಳೆಯಲು ಸಮಯವೇ ಇರದಂತೆ ಮಾಡುವಲ್ಲಿ? ಕೆಲಸ ಸಿಕ್ಕಿದ್ದೇ ದೊಡ್ಡದು ಎಂದು ಆ ಕೆಲಸಕ್ಕೆ ಸೈ ಅನ್ನುತ್ತೀರಾ? ನೆನಪಿಡಿ, ತಪ್ಪು ಮಾರ್ಗವನ್ನು ಆರಿಸಿಕೊಂಡರೆ ಅದು ನಿಮ್ಮನ್ನು ಯೆಹೋವನಿಂದ ದೂರ ಮಾಡುವುದು. (ಇಬ್ರಿ. 2:1) ನೀವು ಉದ್ಯೋಗಕ್ಕಾಗಿ ಹುಡುಕುತ್ತಿರಲಿ ಈಗಿರುವ ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿರಲಿ ಹೇಗೆ ವಿವೇಕಯುತ ನಿರ್ಣಯ ಮಾಡಬಲ್ಲಿರಿ?

6, 7. (1) ಉದ್ಯೋಗವನ್ನು ಆರಿಸಿಕೊಳ್ಳುವುದರ ಹಿಂದೆ ಯಾವೆಲ್ಲ ಉದ್ದೇಶಗಳಿರಬಹುದು? (2) ಯಾವ ಉದ್ದೇಶ ಯೆಹೋವನಿಗೆ ಆಪ್ತರನ್ನಾಗಿ ಮಾಡುತ್ತದೆ? (3) ಏಕೆ?

6 ಆರಂಭದಲ್ಲಿ ಹೇಳಿದಂತೆ ನಿಮ್ಮ ಗುರಿ ಏನೆಂದು ನೆನಪಿನಲ್ಲಿಡಿ. ‘ನಾನು ಯಾಕೆ ಈ ಉದ್ಯೋಗ ಮಾಡಲು ಬಯಸುತ್ತೇನೆ?’ ಎಂದು ಕೇಳಿಕೊಳ್ಳಿ. ನೀವು ಉದ್ಯೋಗವನ್ನು ಆರಿಸಿಕೊಳ್ಳುವುದರ ಉದ್ದೇಶ ನೀವು ಮತ್ತು ನಿಮ್ಮ ಕುಟುಂಬ ಯೆಹೋವನ ಸೇವೆಯಲ್ಲಿ ಮುಂದುವರಿಯಬೇಕೆನ್ನುವುದೇ ಆಗಿರುವಲ್ಲಿ ಯೆಹೋವನು ನಿಮ್ಮನ್ನು ಖಂಡಿತ ಆಶೀರ್ವದಿಸುವನು. (ಮತ್ತಾ. 6:33) ನೀವು ಉದ್ಯೋಗ ಕಳಕೊಂಡರೆ ಇಲ್ಲವೆ ಆರ್ಥಿಕ ಬಿಕ್ಕಟ್ಟು ಉಂಟಾದರೆ ನಿಮ್ಮನ್ನು ಹೇಗೆ ಪೋಷಿಸುವುದೆಂದು ತಿಳಿಯದೆ ಯೆಹೋವನು ದಿಕ್ಕೆಡುವುದಿಲ್ಲ. (ಯೆಶಾ. 59:1) ‘ದೇವಭಕ್ತಿಯುಳ್ಳ ಜನರನ್ನು ಪರೀಕ್ಷೆಯಿಂದ ತಪ್ಪಿಸುವುದು’ ಹೇಗೆಂದು ಆತನು ಬಲ್ಲನು.—2 ಪೇತ್ರ 2:9.

7 ಒಂದುವೇಳೆ ನೀವು ಉದ್ಯೋಗವನ್ನು ಆರಿಸಿಕೊಳ್ಳುವುದರ ಉದ್ದೇಶ ಹಣ, ಆಸ್ತಿಪಾಸ್ತಿಯನ್ನು ಕೂಡಿಸುವುದೇ ಆಗಿರುವಲ್ಲಿ ಆಗೇನು? ಬಯಸಿದ್ದೆಲ್ಲ ನಿಮಗೆ ಸಿಗಲೂಬಹುದು. ಆದರೆ ಅದೇ ನಿಮಗೆ ಉರ್ಲಾಗುವುದು. (1 ತಿಮೊಥೆಯ 6:9, 10 ಓದಿ.) ಉದ್ಯೋಗ, ಸಿರಿಸಂಪತ್ತಿಗೆ ಹೆಚ್ಚು ಮಹತ್ವ ಕೊಡುವಲ್ಲಿ ನೀವು ಯೆಹೋವನಿಂದ ದೂರವಾಗುವಿರಿ.

8, 9. ಉದ್ಯೋಗದ ಕಡೆಗಿನ ತಮ್ಮ ಮನೋಭಾವದ ಕುರಿತು ಹೆತ್ತವರು ಏನನ್ನು ಪರಿಗಣಿಸಬೇಕು? ವಿವರಿಸಿ.

8 ನೀವು ಹೆತ್ತವರಾಗಿರುವಲ್ಲಿ ನಿಮ್ಮ ಮಾದರಿ ಮಕ್ಕಳ ಮೇಲೆ ಎಂಥ ಪ್ರಭಾವ ಬೀರುತ್ತದೆಂದು ಯೋಚಿಸಿ. ಜೀವನದಲ್ಲಿ ನೀವು ಯಾವುದಕ್ಕೆ ಹೆಚ್ಚು ಮಹತ್ವ ಕೊಡುವುದನ್ನು ಅವರು ನೋಡುತ್ತಾರೆ? ಯೆಹೋವನೊಂದಿಗಿನ ಸ್ನೇಹಕ್ಕೊ? ಉದ್ಯೋಗಕ್ಕೊ? ಸ್ಥಾನಮಾನ, ಪ್ರತಿಷ್ಠೆ, ಸಿರಿವಂತಿಕೆಯೇ ನಿಮಗೆ ಮುಖ್ಯವೆಂದು ಅವರು ನೋಡುವಲ್ಲಿ ನಾಳೆ ಅದೇ ಹಾನಿಕರ ಮಾರ್ಗವನ್ನು ಅವರು ಕೂಡ ಆರಿಸಿಕೊಳ್ಳಬಹುದಲ್ಲವೇ? ನಿಮ್ಮ ಮೇಲೆ ಅವರಿಗಿರುವ ಗೌರವ ಕಡಿಮೆಯಾಗುವುದಿಲ್ಲವೇ? ಕ್ರೈಸ್ತ ತರುಣಿಯೊಬ್ಬಳು ಏನನ್ನುತ್ತಾಳೆ ಕೇಳಿ: “ಚಿಕ್ಕ ವಯಸ್ಸಿನಿಂದ ನಾನು ನೋಡಿದ ಮಟ್ಟಿಗೆ ಅಪ್ಪ ಮೂರೂ ಹೊತ್ತು ಉದ್ಯೋಗದಲ್ಲಿ ಮುಳುಗಿರುತ್ತಿದ್ದರು. ನಾವು ಚೆನ್ನಾಗಿರಬೇಕು, ಏನೂ ಕೊರತೆಯಾಗಬಾರದು ಅನ್ನೋದೇ ಅಪ್ಪನ ಆಸೆ, ಅದಕ್ಕೇ ಇಷ್ಟು ಕಷ್ಟಪಟ್ಟು ದುಡಿಯುತ್ತಿದ್ದಾರೆಂದು ಮೊದಲು ಅನಿಸುತ್ತಿತ್ತು. ಆದರೆ ಇತ್ತೀಚೆಗೆ ಹಾಗಿಲ್ಲ. ಹಗಲೂರಾತ್ರಿ ದುಡಿಯುತ್ತಾರೆ. ಅವಶ್ಯವಿಲ್ಲದ ದುಬಾರಿ ವಸ್ತುಗಳನ್ನು ತರುತ್ತಾರೆ. ಇದರಿಂದಾಗಿ ಬೇರೆಯವರು ನಮ್ಮ ಬಗ್ಗೆ ಮಾತಾಡುವಾಗ ನಮ್ಮನ್ನು ತುಂಬ ಹಣವಂತರು ಎಂದು ಹೇಳುತ್ತಾರೆ ವಿನಃ ಇನ್ನೊಬ್ಬರನ್ನು ಆಧ್ಯಾತ್ಮಿಕವಾಗಿ ಉತ್ತೇಜಿಸುವ ಕುಟುಂಬ ಎಂಬ ಹೆಸರು ನಮಗಿಲ್ಲ. ಹಣ ಕೂಡಿಡುವುದಕ್ಕಿಂತ ಅಪ್ಪ ಆಧ್ಯಾತ್ಮಿಕ ವಿಷಯಗಳಲ್ಲಿ ನಮಗೆ ಬೆಂಬಲ ಕೊಟ್ಟಿದ್ರೆ ನನಗೆ ತುಂಬ ಸಂತೋಷ ಆಗುತ್ತಿತ್ತು.”

9 ಹೆತ್ತವರೇ, ಕೆಲಸ ಕೆಲಸ ಅಂತ ಯೆಹೋವನಿಂದ ದೂರ ಹೋಗಬೇಡಿ. ಹಣ, ಸಿರಿಸಂಪತ್ತು ಅಲ್ಲ, ಯೆಹೋವನೊಂದಿಗಿನ ಸುಸಂಬಂಧವೇ ಬಹು ದೊಡ್ಡ ಆಸ್ತಿಯೆಂದು ನಿಮ್ಮ ಮಾದರಿಯ ಮೂಲಕ ಮಕ್ಕಳಿಗೆ ತೋರಿಸಿಕೊಡಿ.—ಮತ್ತಾ. 5:3.

10. ಯುವಜನರು ಜೀವನವೃತ್ತಿಯನ್ನು ಆರಿಸಿಕೊಳ್ಳುವಾಗ ಏನನ್ನು ಪರಿಗಣಿಸಬೇಕು?

10 ನೀವು ಒಬ್ಬ ಯುವ ವ್ಯಕ್ತಿಯಾಗಿದ್ದೀರಾ? ಹಾಗಿದ್ದಲ್ಲಿ ‘ನಾನು ಮುಂದೆ ಯಾವ ಜೀವನವೃತ್ತಿಯನ್ನು ಆರಿಸಿಕೊಳ್ಳಲಿ?’ ಎಂದು ಯೋಚಿಸುತ್ತಿರಬಹುದು. ನೀವು ಸರಿಯಾದ ಆಯ್ಕೆಯನ್ನು ಹೇಗೆ ಮಾಡಬಲ್ಲಿರಿ? ಈಗಾಗಲೇ ಪರಿಗಣಿಸಿದಂತೆ ನಿಮ್ಮ ಬದುಕು ಯಾವ ದಿಕ್ಕಿನೆಡೆ ಸಾಗಬೇಕೆಂದು ನಿಮಗೆ ಗೊತ್ತಿರಬೇಕು. ನೀವು ಮುಂದೆ ಯಾವ ಉದ್ಯೋಗ ಮಾಡಬೇಕೆಂದಿದ್ದೀರೋ ಅದು ಮತ್ತು ಅದಕ್ಕಾಗಿ ಪಡೆದುಕೊಳ್ಳಬೇಕಾದ ತರಬೇತಿ ಯೆಹೋವನ ಸೇವೆಯಲ್ಲಿ ಪೂರ್ಣವಾಗಿ ಒಳಗೂಡಲು ನಿಮಗೆ ನೆರವಾಗುವುದೋ? ಅಥವಾ ಯೆಹೋವನಿಂದ ನಿಮ್ಮನ್ನು ದೂರಕ್ಕೆ ಕೊಂಡೊಯ್ಯುವುದೋ? (2 ತಿಮೊ. 4:10) ಹಣದ ಕಂತೆ ದೊಡ್ಡದಿದ್ದಾಗ ಸಂತೋಷದಿಂದ ಹಿಗ್ಗುವ, ಕಡಿಮೆಯಾದಾಗ ಕುಗ್ಗಿಹೋಗುವ ಜನರಂತೆ ನೀವಿರಲು ಬಯಸುತ್ತೀರಾ? ಇಲ್ಲವೆ ದಾವೀದನಂತೆ ದೇವರಲ್ಲಿ ನಿಮ್ಮ ಭರವಸೆಯನ್ನು ಇಡುತ್ತೀರಾ? ಅವನ ಭರವಸೆಯ ಮಾತುಗಳು ಹೀಗಿವೆ: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.” (ಕೀರ್ತ. 37:25) ಯುವಜನರೇ ನೆನಪಿಡಿ, ನಿಮ್ಮ ಮುಂದೆ ಎರಡು ಮಾರ್ಗಗಳಿವೆ. ಒಂದು ಮಾರ್ಗ ನಿಮ್ಮನ್ನು ಯೆಹೋವನಿಂದ ದೂರಹೋಗುವಂತೆ ಮಾಡುವುದು. ಇನ್ನೊಂದು ನಿಮ್ಮನ್ನು ಅತ್ಯುತ್ತಮ ಜೀವನಕ್ಕೆ ನಡೆಸುವುದು. (ಜ್ಞಾನೋಕ್ತಿ 10:22; ಮಲಾಕಿಯ 3:10 ಓದಿ.) ನೀವು ಯಾವುದನ್ನು ಆರಿಸಿಕೊಳ್ಳುವಿರಿ? *

ಮನರಂಜನೆ ಮತ್ತು ವಿನೋದವಿಹಾರ

11. (1) ಮನರಂಜನೆ ಮತ್ತು ವಿನೋದವಿಹಾರದ ಬಗ್ಗೆ ಬೈಬಲ್‌ ಏನನ್ನುತ್ತದೆ? (2) ನಾವೇನನ್ನು ಮನಸ್ಸಿನಲ್ಲಿಡಬೇಕು?

11 ಮೋಜುಮಸ್ತಿ ತಪ್ಪು, ಮನರಂಜನೆ ವಿನೋದವಿಹಾರ ಎಲ್ಲ ಸಮಯ ಹಾಳು ಎಂದು ಬೈಬಲ್‌ ಹೇಳುವುದಿಲ್ಲ. “ದೈಹಿಕ ತರಬೇತಿಯು ಸ್ವಲ್ಪಮಟ್ಟಿಗೆ ಪ್ರಯೋಜನಕರ” ಎಂದು ಪೌಲ ತಿಮೊಥೆಯನಿಗೆ ಹೇಳಿದನು. (1 ತಿಮೊ. 4:8) “ನಗುವ ಸಮಯ” ಮತ್ತು “ಕುಣಿದಾಡುವ ಸಮಯ” ಇದೆಯೆಂದು ಬೈಬಲ್‌ ಹೇಳುತ್ತದೆ. ತಕ್ಕಮಟ್ಟಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆಯೂ ಉತ್ತೇಜಿಸುತ್ತದೆ. (ಪ್ರಸಂ. 3:4; 4:6) ಆದರೆ ಜಾಗ್ರತೆ ತಪ್ಪಿದಲ್ಲಿ ಮನರಂಜನೆ ಮತ್ತು ವಿನೋದವಿಹಾರ ನಮ್ಮನ್ನು ಯೆಹೋವನಿಂದ ದೂರ ಮಾಡಬಲ್ಲದು. ಹೇಗೆ? ಅಪಾಯ ಮನರಂಜನೆಯಲ್ಲಿಲ್ಲ, ನೀವು ಯಾವ ರೀತಿಯ ಮನರಂಜನೆಯನ್ನು ಆರಿಸಿಕೊಳ್ಳುತ್ತೀರಿ ಮತ್ತು ಅದರಲ್ಲಿ ಎಷ್ಟು ಸಮಯ ಕಳೆಯುತ್ತೀರಿ ಎನ್ನುವುದರಲ್ಲಿದೆ.

12. ಮನರಂಜನೆ, ವಿನೋದವಿಹಾರ ಆರಿಸಿಕೊಳ್ಳುವಾಗ ನೀವು ಯಾವೆಲ್ಲ ವಿಷಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು?

12 ಯಾವ ರೀತಿಯ ಮನರಂಜನೆ ಆರಿಸಿಕೊಳ್ಳಬೇಕೆಂದು ಮೊದಲು ನೋಡೋಣ. ಒಳ್ಳೇ ರೀತಿಯ ಮನರಂಜನೆ ನಿಮಗೆ ಖಂಡಿತ ಸಿಗುತ್ತದೆ. ಆದರೂ ಈ ಲೋಕದಲ್ಲಿ ಸಿಗುವ ಹೆಚ್ಚಿನ ಮನರಂಜನೆ ದೇವರು ದ್ವೇಷಿಸುವ ವಿಷಯಗಳಿಂದ ತುಂಬಿದೆ. ಹಿಂಸಾಚಾರ, ಪ್ರೇತವ್ಯವಹಾರ, ಅನೈತಿಕತೆ ಇದ್ದೇ ಇರುತ್ತದೆ. ಹಾಗಾಗಿ ನೀವು ಯಾವ ಮನರಂಜನೆ, ವಿನೋದವಿಹಾರ ಆರಿಸಿಕೊಳ್ಳುತ್ತೀರೋ ಅದನ್ನು ಪರಿಶೀಲಿಸಿ. ನೀವು ಆರಿಸಿಕೊಳ್ಳುವ ಮನರಂಜನೆ ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ? ಹಿಂಸಾಕೃತ್ಯ, ಪೈಪೋಟಿ, ರಾಷ್ಟ್ರಾಭಿಮಾನವನ್ನು ನಿಮ್ಮಲ್ಲಿ ಕೆರಳಿಸುತ್ತದೋ? (ಜ್ಞಾನೋ. 3:31) ನಿಮ್ಮ ಜೇಬಿಗೆ ಕತ್ತರಿಹಾಕುತ್ತದೋ? ಬೇರೆಯವರು ಎಡವುವಂತೆ ಮಾಡುತ್ತದೋ? (ರೋಮ. 14:21) ಆ ಮನರಂಜನೆ ನಿಮ್ಮನ್ನು ಎಂಥ ಜನರೊಂದಿಗೆ ಬೆರೆಯುವಂತೆ ಮಾಡುತ್ತದೆ? (ಜ್ಞಾನೋ. 13:20) ತಪ್ಪು ಮಾಡುವಂತೆ ಆಸೆಯನ್ನು ಹುಟ್ಟಿಸುತ್ತದೋ?—ಯಾಕೋ. 1:14, 15.

13, 14. ಮನರಂಜನೆಯಲ್ಲಿ ಕಳೆಯುವ ಸಮಯದ ಬಗ್ಗೆ ಯಾಕೆ ಹೆಚ್ಚು ಗಮನಕೊಡಬೇಕು?

13 ಮನರಂಜನೆ, ವಿನೋದವಿಹಾರದಲ್ಲಿ ನೀವೆಷ್ಟು ಸಮಯ ಕಳೆಯುತ್ತೀರೆಂದು ಕೂಡ ಗಮನಿಸಿ. ‘ಆಧ್ಯಾತ್ಮಿಕ ಚಟುವಟಿಕೆಗಳಿಗೆ ಸಮಯವೇ ಇರದಷ್ಟು ಮಟ್ಟಿಗೆ ನಾನು ಮನರಂಜನೆಯಲ್ಲಿ ಮುಳುಗಿರುತ್ತೇನಾ?’ ಎಂದು ಕೇಳಿಕೊಳ್ಳಿ. ಒಂದುವೇಳೆ ಮನರಂಜನೆಗೆ ಮಿತಿಮೀರಿ ಸಮಯಕೊಡುವಲ್ಲಿ ಅದು ಹೆಚ್ಚು ಚೈತನ್ಯವನ್ನು ನೀಡಲಿಕ್ಕಿಲ್ಲ. ‘ಅತಿಯಾದರೆ ಅಮೃತವೂ ವಿಷ’ ಅಲ್ಲವೇ? ನಿಜ ಹೇಳಬೇಕಾದರೆ ಮನರಂಜನೆಯಲ್ಲಿ ಯಾರು ಹಿತಮಿತವಾಗಿ ಒಳಗೂಡುತ್ತಾರೋ ಅವರು ಬಹಳ ಆನಂದಿಸುತ್ತಾರೆ. ಏಕೆ? ಏಕೆಂದರೆ ಹೆಚ್ಚು ಪ್ರಮುಖವಾದ ವಿಷಯಗಳನ್ನು ಈಗಾಗಲೇ ಮಾಡಿದ್ದೇವೆ ಎಂಬ ತೃಪ್ತಿ ಅವರಲ್ಲಿರುತ್ತದೆ. ಹಾಗಾಗಿ ಮನರಂಜನೆಯಲ್ಲಿ ಆನಂದಿಸುವಾಗ ಯಾವುದೇ ಅಳುಕು ಅವರಿಗಿರುವುದಿಲ್ಲ.—ಫಿಲಿಪ್ಪಿ 1:10, 11 ಓದಿ.

14 ಮನರಂಜನೆಯಲ್ಲೇ ಕಾಲ ಕಳೆಯುವುದು ಖುಷಿಕೊಡಬಹುದು. ಆದರೆ ಅದು ನಿಮ್ಮನ್ನು ಯೆಹೋವನಿಂದ ದೂರ ಕೊಂಡೊಯ್ಯಬಲ್ಲದು. 20ರ ಪ್ರಾಯದ ಸಹೋದರಿ ಕಿಮ್‌ ತನ್ನ ಸ್ವಂತ ಅನುಭವದಿಂದ ಇದನ್ನು ಕಲಿತಳು. “ಯಾರಾದರೂ ಪಾರ್ಟಿಗೆ ಕರೆದರೆ ಸಾಕು ನಾನು ಹೋಗಿಬಿಡುತ್ತಿದ್ದೆ. ಪ್ರತಿ ಶುಕ್ರವಾರ, ಶನಿವಾರ, ಭಾನುವಾರ ಏನಾದರೂ ಪಾರ್ಟಿ ಇದ್ದೇ ಇರುತ್ತಿತ್ತು. ಆದರೆ ಇದಕ್ಕಿಂತ ಪ್ರಾಮುಖ್ಯವಾದ ಎಷ್ಟೋ ವಿಷಯಗಳನ್ನು ಮಾಡಲಿಕ್ಕಿದೆ ಎಂದು ನನಗೀಗ ಅರ್ಥ ಆಗಿದೆ. ಉದಾಹರಣೆಗೆ ಪಯನೀಯರ್‌ ಆಗಿರುವ ನಾನು ಮಧ್ಯರಾತ್ರಿ ಒಂದೆರಡು ಗಂಟೆವರೆಗೆ ಹೀಗೆಲ್ಲ ಸಮಯ ಕಳೆದರೆ ಬೆಳಗ್ಗೆ 6ಗಂಟೆಗೆ ಎದ್ದು ಕ್ಷೇತ್ರ ಸೇವೆಗೆ ಹೋಗಲು ಹೇಗೆ ಆಗುತ್ತದೆ? ಪಾರ್ಟಿಗೆ ಹೋಗುವುದು ತಪ್ಪೆಂದಲ್ಲ. ಆದರೆ ಅವುಗಳಿಗೆ ಎಷ್ಟು ಸಮಯ ಕೊಡಬೇಕೋ ಅಷ್ಟೇ ಕೊಡಬೇಕು. ಇಲ್ಲದಿದ್ದರೆ ನಮ್ಮ ಗಮನ ಆಧ್ಯಾತ್ಮಿಕ ವಿಷಯಗಳಿಂದ ಬೇರೆಡೆಗೆ ತಿರುಗಬಲ್ಲದು.”

15. ಚೈತನ್ಯ ತರುವ ಮನರಂಜನೆಯಲ್ಲಿ ಆನಂದಿಸಲು ಮಕ್ಕಳಿಗೆ ಹೆತ್ತವರು ಹೇಗೆ ಸಹಾಯ ನೀಡಬಲ್ಲರು?

15 ತಮ್ಮ ಮತ್ತು ತಮ್ಮ ಮಕ್ಕಳ ಭೌತಿಕ, ಆಧ್ಯಾತ್ಮಿಕ, ಭಾವನಾತ್ಮಕ ಅಗತ್ಯಗಳನ್ನು ಪೂರೈಸುವುದು ಹೆತ್ತವರ ಜವಾಬ್ದಾರಿ. ತನುಮನಗಳ ಚೈತನ್ಯಕ್ಕೆ ಏರ್ಪಾಡು ಮಾಡುವುದೂ ಈ ಜವಾಬ್ದಾರಿಯಲ್ಲಿ ಸೇರಿದೆ. ಹಾಗಾಗಿ ಹೆತ್ತವರೇ, ಎಲ್ಲ ರೀತಿ ಮನರಂಜನೆ ತಪ್ಪು ಎಂದು ನೆನಸಬೇಡಿ. ಅದೇ ಸಮಯದಲ್ಲಿ ಕೆಟ್ಟ ಪ್ರಭಾವ ಬೀರುವ ಮನರಂಜನೆ ಕುರಿತು ಎಚ್ಚರವಹಿಸಿ. (1 ಕೊರಿಂ. 5:6) ಮುಂದಾಗಿಯೇ ಜಾಗ್ರತೆಯಿಂದ ಆಲೋಚಿಸುವಲ್ಲಿ ಚೈತನ್ಯ ತರುವ ಮನರಂಜನೆ, ವಿನೋದವಿಹಾರವನ್ನು ಆರಿಸಿಕೊಳ್ಳಲು ನಿಮ್ಮಿಂದ ಸಾಧ್ಯ. * ಆಗ ನೀವು ಮತ್ತು ನಿಮ್ಮ ಮಕ್ಕಳು ಸರಿಯಾದ ಮಾರ್ಗದಲ್ಲಿ ನಡೆದು ಯೆಹೋವನಿಗೆ ಆಪ್ತರಾಗಿ ಉಳಿಯುವಿರಿ.

ಕುಟುಂಬ ಬಾಂಧವ್ಯ

16, 17. (1) ಎಂಥ ದುಃಖದ ಪರಿಸ್ಥಿತಿಯನ್ನು ಅನೇಕ ಹೆತ್ತವರು ಎದುರಿಸಿದ್ದಾರೆ? (2) ಅವರ ನೋವನ್ನು ಯೆಹೋವನು ಅರ್ಥಮಾಡಿಕೊಳ್ಳುತ್ತಾನೆಂದು ಹೇಗೆ ಹೇಳಸಾಧ್ಯ?

16 ಹೆತ್ತವರು ಮತ್ತು ಮಕ್ಕಳ ನಡುವಿನ ಬಾಂಧವ್ಯ ತುಂಬ ಬಲವಾದದ್ದು. ಹಾಗಾಗಿಯೇ ಯೆಹೋವನು ತನ್ನ ಜನರ ಮೇಲೆ ತನಗೆಷ್ಟು ಪ್ರೀತಿಯಿದೆ ಎಂದು ತಿಳಿಸುವಾಗ ಆ ಬಂಧವನ್ನು ಉದಾಹರಣೆಯಾಗಿ ಬಳಸಿದನು. (ಯೆಶಾ. 49:15) ಕುಟುಂಬ ಬಂಧ ಅಷ್ಟು ಬಲವಾಗಿರುವುದರಿಂದ ನಾವು ತುಂಬ ಪ್ರೀತಿಸುವವರೊಬ್ಬರು ಯೆಹೋವನನ್ನು ತೊರೆದು ಹೋದಾಗ ಅತೀವ ದುಃಖ ಆಗುವುದು ಸಹಜ. ಮಗಳು ಬಹಿಷ್ಕಾರಗೊಂಡಾಗ ಸಹೋದರಿಯೊಬ್ಬರಿಗೆ ಇದೇ ಅನುಭವವಾಯಿತು. ಆಕೆ ಹೇಳುವುದು: “ನನ್ನ ಎದೆಯೊಡೆದು ಹೋಯಿತು. ‘ಅವಳ್ಯಾಕೆ ಯೆಹೋವನನ್ನು ಬಿಟ್ಟು ಹೋದಳು?’ ಎಂಬ ಪ್ರಶ್ನೆ ಮತ್ತೆ ಮತ್ತೆ ಮನಸ್ಸಿಗೆ ಬರುತ್ತಿತ್ತು. ನನ್ನಿಂದ ಏನಾದರೂ ತಪ್ಪಾಯಿತೇ ಎಂಬ ದೋಷಿ ಭಾವನೆ ಕಾಡುತ್ತಾ ಇತ್ತು.”

17 ನೀವು ಇಂಥ ಸನ್ನಿವೇಶದಲ್ಲಿದ್ದರೆ ನಿಮ್ಮ ನೋವು ಯೆಹೋವನಿಗೆ ಅರ್ಥವಾಗುತ್ತದೆ. ತನ್ನ ಮೊದಲನೇ ಮಾನವ ಪುತ್ರ ಅವಿಧೇಯನಾದಾಗ ಮತ್ತು ಜಲಪ್ರಳಯಕ್ಕೆ ಮುಂಚೆ ಬಹುಮಂದಿ ದಂಗೆ ಎದ್ದಾಗ ಯೆಹೋವನೂ “ತನ್ನ ಹೃದಯದಲ್ಲಿ ನೊಂದುಕೊಂಡನು.” (ಆದಿ. 6:5, 6) ಇಂಥ ಸನ್ನಿವೇಶ ಎದುರಾಗದವರಿಗೆ ಅದರಿಂದಾಗುವ ನೋವು ಎಷ್ಟೆಂದು ಅರ್ಥವಾಗಲಿಕ್ಕಿಲ್ಲ. ಆದರೆ ಬಹಿಷ್ಕೃತ ವ್ಯಕ್ತಿಯ ತಪ್ಪು ಕೃತ್ಯವು ನಿಮ್ಮನ್ನು ಯೆಹೋವನಿಂದ ದೂರ ಮಾಡುವಂತೆ ಬಿಡುವುದು ಅಪಾಯಕಾರಿ. ಹಾಗಾದರೆ ಈ ದುಃಖವನ್ನು ತಾಳಿಕೊಳ್ಳುವುದು ಹೇಗೆ?

18. ಮಗ ಅಥವಾ ಮಗಳು ಯೆಹೋವನನ್ನು ತೊರೆದು ಹೋದಾಗ ಹೆತ್ತವರು ತಮ್ಮನ್ನೇ ದೂರಿಕೊಳ್ಳಬಾರದು ಏಕೆ?

18 ನಡೆದದ್ದಕ್ಕೆ ನಿಮ್ಮನ್ನು ದೂರಿಕೊಳ್ಳಬೇಡಿ. ಯೆಹೋವನು ಎಲ್ಲರ ಮುಂದೆ ಆಯ್ಕೆಯನ್ನು ಇಟ್ಟಿದ್ದಾನೆ. ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದಿರುವ ಪ್ರತಿಯೊಬ್ಬನು ‘ತನ್ನ ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.’ (ಗಲಾ. 6:5) ಪಾಪ ಮಾಡಿರುವ ವ್ಯಕ್ತಿಯ ನಿರ್ಣಯಕ್ಕೆ ಯೆಹೋವನು ಅವನನ್ನೇ ಹೊಣೆಗಾರನನ್ನಾಗಿ ಮಾಡುತ್ತಾನೆ ಹೊರತು ನಿಮ್ಮನ್ನಲ್ಲ. (ಯೆಹೆ. 18:20) ಬೇರೆಯವರನ್ನು ಕೂಡ ದೂರಬೇಡಿ. ಶಿಸ್ತನ್ನು ನೀಡಲು ಯೆಹೋವನು ಮಾಡಿರುವ ಏರ್ಪಾಡನ್ನು ಗೌರವಿಸಿ. ಪಿಶಾಚನ ವಿರುದ್ಧ ನಿಲುವನ್ನು ತೆಗೆದುಕೊಳ್ಳಿ, ಸಭೆಯನ್ನು ಸಂರಕ್ಷಿಸುತ್ತಿರುವ ಹಿರಿಯರ ವಿರುದ್ಧ ಅಲ್ಲ.—1 ಪೇತ್ರ 5:8, 9.

19, 20. (1) ಮಗ ಅಥವಾ ಮಗಳು ಬಹಿಷ್ಕೃತರಾಗಿದ್ದರೆ ಹೆತ್ತವರು ದುಃಖವನ್ನು ಸಹಿಸಿಕೊಳ್ಳಲು ಏನು ಮಾಡಬೇಕು? (2) ಇಂಥ ಹೆತ್ತವರು ಯಾವ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ?

19 ಇಂಥ ಸಂದರ್ಭದಲ್ಲಿ ಯೆಹೋವನ ಮೇಲೆ ಕೋಪಿಸಿಕೊಳ್ಳುವುದಾದರೆ ಅದು ನಿಮ್ಮನ್ನು ಆತನಿಂದ ದೂರ ಮಾಡುವುದು. ನೀವು ಕುಟುಂಬ ಬಂಧಕ್ಕಿಂತಲೂ ಯೆಹೋವನನ್ನು ತುಂಬ ಪ್ರೀತಿಸುತ್ತೀರಿ ಎಂಬುದು ಸತ್ಯವನ್ನು ಬಿಟ್ಟುಹೋದ ನಿಮ್ಮ ನೆಚ್ಚಿನ ವ್ಯಕ್ತಿಗೆ ಗೊತ್ತಾಗಬೇಕು. ಹಾಗಾಗಿ ಯೆಹೋವನೊಂದಿಗಿನ ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳಲು ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡಿ. ಇದು ದುಃಖವನ್ನು ಸಹಿಸಿಕೊಳ್ಳಲು ನೆರವಾಗುವುದು. ನಂಬಿಗಸ್ತ ಸಹೋದರ ಸಹೋದರಿಯರಿಂದ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಡಿ. (ಜ್ಞಾನೋ. 18:1) ಪ್ರಾರ್ಥನೆಯಲ್ಲಿ ಯೆಹೋವನ ಬಳಿ ನಿಮ್ಮ ಭಾವನೆಗಳನ್ನು ತೋಡಿಕೊಳ್ಳಿ. (ಕೀರ್ತ. 62:7, 8) ಬಹಿಷ್ಕೃತ ವ್ಯಕ್ತಿಯೊಂದಿಗೆ ಸಹವಾಸಿಸಲು ಕಾರಣಗಳನ್ನು ಹುಡುಕಬೇಡಿ. ಇ-ಮೇಲ್‌, ಮೆಸೆಜ್‌ ಮೂಲಕವೂ ಸಂಪರ್ಕವನ್ನಿಡಬೇಡಿ. (1 ಕೊರಿಂ. 5:11) ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಮಗ್ನರಾಗಿರಿ. (1 ಕೊರಿಂ. 15:58) ಈ ಮುಂಚೆ ತಿಳಿಸಲಾದ ಸಹೋದರಿ ಹೇಳುವುದು: “ನಾನೀಗ ಯೆಹೋವನ ಸೇವೆಯಲ್ಲಿ ತಲ್ಲೀನಳಾಗಿದ್ದರೆ ಮತ್ತು ಆಧ್ಯಾತ್ಮಿಕವಾಗಿ ದೃಢವಾಗಿ ಉಳಿದರೆ ಮಾತ್ರ ನನ್ನ ಮಗಳು ಯೆಹೋವನ ಬಳಿ ಹಿಂದಿರುಗಿ ಬಂದಾಗ ಅವಳಿಗೆ ಸಹಾಯ ಮಾಡಲು ನನ್ನಿಂದಾಗುತ್ತದೆ.”

20 ಪ್ರೀತಿಯು “ಎಲ್ಲವನ್ನೂ ನಿರೀಕ್ಷಿಸುತ್ತದೆ” ಎನ್ನುತ್ತದೆ ಬೈಬಲ್‌. (1 ಕೊರಿಂ. 13:4, 7) ಯೆಹೋವನಿಂದ ದೂರ ಹೋಗಿರುವ ನಿಮ್ಮ ಪ್ರೀತಿಯ ವ್ಯಕ್ತಿ ಹಿಂತಿರುಗಿ ಬರುವರೆಂದು ನಿರೀಕ್ಷಿಸುವುದು ತಪ್ಪಲ್ಲ. ಪ್ರತಿ ವರ್ಷ ಅನೇಕ ತಪ್ಪಿತಸ್ಥ ವ್ಯಕ್ತಿಗಳು ಪಶ್ಚಾತ್ತಾಪಪಟ್ಟು ಯೆಹೋವನ ಸಂಘಟನೆಗೆ ಹಿಂತಿರುಗಿ ಬರುತ್ತಾರೆ. ಅಂಥವರ ಮೇಲೆ ಯೆಹೋವನು ಅಸಮಾಧಾನವನ್ನು ಇಟ್ಟುಕೊಳ್ಳುವುದಿಲ್ಲ. “ಕ್ಷಮಿಸುವುದಕ್ಕೆ ಸಿದ್ಧನೂ” ಆಗಿದ್ದಾನೆ.—ಕೀರ್ತ. 86:5, ಪವಿತ್ರ ಗ್ರಂಥ ಭಾಷಾಂತರ.

ಸರಿಯಾದದ್ದನ್ನೇ ಆರಿಸಿಕೊಳ್ಳಿ

21, 22. ನಿಮ್ಮ ಇಚ್ಛಾಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸಬೇಕೆಂದು ನಿಶ್ಚಯಿಸಿದ್ದೀರಿ?

21 ಯೆಹೋವನು ಮಾನವರಿಗೆ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ. (ಧರ್ಮೋಪದೇಶಕಾಂಡ 30:19, 20 ಓದಿ.) ಇದರಿಂದಾಗಿ ಸರಿಯಾದುದ್ದನ್ನು ಆಯ್ಕೆ ಮಾಡುವ ಹೊಣೆ ನಮ್ಮ ಮೇಲಿದೆ. ಆದ್ದರಿಂದ ಪ್ರತಿಯೊಬ್ಬ ಕ್ರೈಸ್ತನು ಹೀಗೆ ಕೇಳಿಕೊಳ್ಳಬೇಕು: ‘ನಾನು ಮಾಡುವ ಆಯ್ಕೆಗಳು ಸರಿಯಾದ ಮಾರ್ಗದಲ್ಲಿ ಹೆಜ್ಜೆಯಿಡಲು ನನಗೆ ನೆರವಾಗುತ್ತಿವೆಯೇ? ಉದ್ಯೋಗ, ಜೀವನವೃತ್ತಿ, ಮನರಂಜನೆ, ವಿನೋದವಿಹಾರ ಅಥವಾ ಕುಟುಂಬ ಬಂಧವು ನನ್ನನ್ನು ಯೆಹೋವನಿಂದ ದೂರಮಾಡುವಂತೆ ಬಿಟ್ಟಿದ್ದೇನೋ?’

22 ಯೆಹೋವನಿಗೆ ತನ್ನ ಜನರ ಮೇಲಿರುವ ಪ್ರೀತಿ ಎಂದಿಗೂ ಬಾಡುವುದಿಲ್ಲ. ತಪ್ಪು ಮಾರ್ಗವನ್ನು ನಾವು ಆರಿಸಿಕೊಂಡಾಗ ಮಾತ್ರ ಆತನಿಂದ ದೂರವಾಗುತ್ತೇವೆ. (ರೋಮ. 8:38, 39) ಆದರೆ ನಾವೆಂದೂ ಹಾಗೆ ಮಾಡದಿರೋಣ! ಹಾಗಾಗಿ ಯಾವುದೂ ನಿಮ್ಮನ್ನು ಯೆಹೋವನಿಂದ ದೂರಮಾಡುವಂತೆ ಬಿಡಬೇಡಿ. ಹಾಗೆ ಬಿಡುವುದಿಲ್ಲವೆಂದು ದೃಢಸಂಕಲ್ಪ ಮಾಡಿ. ನಾವು ಎಚ್ಚರಿಕೆ ವಹಿಸಬೇಕಾದ ಇನ್ನೂ ನಾಲ್ಕು ಕ್ಷೇತ್ರಗಳನ್ನು ಮುಂದಿನ ಲೇಖನ ಚರ್ಚಿಸುತ್ತದೆ.

[ಪಾದಟಿಪ್ಪಣಿಗಳು]

^ ಪ್ಯಾರ. 10 ಜೀವನವೃತ್ತಿಯನ್ನು ಆರಿಸಿಕೊಳ್ಳುವುದರ ಕುರಿತು ಹೆಚ್ಚಿನ ಮಾಹಿತಿಗಾಗಿ ಯುವ ಜನರೇ—ನಿಮ್ಮ ಜೀವಿತವನ್ನು ಹೇಗೆ ಉಪಯೋಗಿಸುವಿರಿ? ಎಂಬ ಕರಪತ್ರ ನೋಡಿ.

^ ಪ್ಯಾರ. 15 ಹೆಚ್ಚಿನ ಮಾಹಿತಿಗಾಗಿ 2012ರ ಏಪ್ರಿಲ್‌-ಜೂನ್‌ ಎಚ್ಚರ! ಪತ್ರಿಕೆಯ ಪುಟ 23-25 ನೋಡಿ.

[ಅಧ್ಯಯನ ಪ್ರಶ್ನೆಗಳು]

[ಪುಟ 12ರಲ್ಲಿರುವ ಚಿತ್ರ]

[ಪುಟ 14ರಲ್ಲಿರುವ ಚಿತ್ರ]

ಹಿತಮಿತವಾದ ಯೋಗ್ಯ ಮನರಂಜನೆ ಮನಸ್ಸಿಗೆ ಉಲ್ಲಾಸಕರ

[ಪುಟ 16ರಲ್ಲಿರುವ ಚಿತ್ರ]

ನೀವು ಪ್ರೀತಿಸುವ ವ್ಯಕ್ತಿ ಯೆಹೋವನ ಬಳಿ ಹಿಂತಿರುಗಿ ಬರುವರೆಂಬ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ