ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿವೇಚನೆಯಿಂದ ಕ್ರಿಯೆಗೈದಾಕೆ

ವಿವೇಚನೆಯಿಂದ ಕ್ರಿಯೆಗೈದಾಕೆ

ಅವರ ನಂಬಿಕೆಯನ್ನು ಅನುಕರಿಸಿರಿ

ವಿವೇಚನೆಯಿಂದ ಕ್ರಿಯೆಗೈದಾಕೆ

ಅಬೀಗೈಲ್‌ ಬಳಿ ಓಡಿಬಂದಿದ್ದ ಆ ಯುವ ಸೇವಕನ ಕಣ್ಣುಗಳಲ್ಲಿ ಆತಂಕ ತುಂಬಿತ್ತು. ಅವನ ಭೀತಿಗೆ ಕಾರಣವಿತ್ತು. ಒಂದು ದೊಡ್ಡ ಗಂಡಾಂತರ ಅವರೆಲ್ಲರ ಮೇಲೆ ಬಂದೆರಗಲಿತ್ತು. ಅವನು ಅಲ್ಲಿ ಮಾತಾಡುತ್ತಿದ್ದಂತೆಯೇ, ಅಬೀಗೈಲಳ ಗಂಡನಾದ ನಾಬಾಲನ ಮನೆಯ ಪುರುಷರೆಲ್ಲರನ್ನೂ ಹತಿಸಲು ಪಣತೊಟ್ಟಿದ್ದ ಸುಮಾರು 400 ಯೋಧರು ದಾರಿಯಲ್ಲಿದ್ದರು. ಕಾರಣವೇನು?

ಇಷ್ಟಕ್ಕೆಲ್ಲ ಕಾರಣ ನಾಬಾಲನೇ. ಎಂದಿನಂತೆ ಈ ಬಾರಿಯೂ ಅವನು ಸೊಕ್ಕಿನಿಂದ ನಿರ್ದಯವಾಗಿ ವರ್ತಿಸಿದ್ದ. ಆದರೆ ಈ ಸಲವಂತೂ ಅವನು ಅವಮಾನಿಸಿದ್ದು ತಪ್ಪಾದ ವ್ಯಕ್ತಿಯನ್ನು. ತಾಲೀಮು ಪಡೆದ ನಿಷ್ಠಾವಂತ ಯೋಧತಂಡದ ನೆಚ್ಚಿನ ಸೇನಾಪತಿಯನ್ನು. ಆದುದರಿಂದಲೇ, ನಾಬಾಲನ ಕೈಕೆಳಗೆ ಬಹುಶಃ ಒಬ್ಬ ಕುರುಬನಾಗಿದ್ದ ಆ ಯುವ ಸೇವಕನು ಅಬೀಗೈಲಳ ಬಳಿ ಓಡಿಬಂದಿದ್ದ. ತಮ್ಮನ್ನು ಆ ಗಂಡಾಂತರದಿಂದ ಹೇಗಾದರೂ ರಕ್ಷಿಸಲು ದಾರಿ ಹುಡುಕುವಳೆಂಬ ಭರವಸೆ ಅವನಿಗೆ. ಆದರೆ ನಾನೂರು ಮಂದಿಯ ಸೈನ್ಯವನ್ನು ಎದುರಿಸಲು ಒಂಟಿ ಸ್ತ್ರೀ ಏನು ತಾನೇ ಮಾಡಿಯಾಳು?

ಮೊದಲು, ಈ ಗುಣವಂತೆಯ ಬಗ್ಗೆ ಇನ್ನಷ್ಟನ್ನು ಕಲಿಯೋಣ. ಅಬೀಗೈಲ್‌ ಯಾರು? ಈ ಬಿಕ್ಕಟ್ಟು ತಲೆದೋರಿದ್ದು ಹೇಗೆ? ಅವಳ ನಂಬಿಕೆಯ ಮಾದರಿಯಿಂದ ನಾವೇನು ಕಲಿಯಬಲ್ಲೆವು?

‘ಬಹುಬುದ್ಧಿವಂತೆ ಮತ್ತು ಸುಂದರಿ’

ಅಬೀಗೈಲಳಿಗೆ ನಾಬಾಲ ಸರಿಯಾದ ಜೋಡಿಯಾಗಿರಲಿಲ್ಲ. ನಾಬಾಲನಿಗೆ ಸಿಕ್ಕಿದ್ದು ಮುತ್ತಿನಂಥ ಹೆಂಡತಿಯಾದರೂ, ಅಬೀಗೈಲಳಿಗೆ ಗಂಟುಬಿದ್ದಿದ್ದು ಈ ನೀಚ. ಅವನ ಬಳಿ ಬೇಕಾದಷ್ಟು ಹಣವಿತ್ತು ನಿಜ. ಆದುದರಿಂದಲೇ ತನ್ನ ದೃಷ್ಟಿಯಲ್ಲಿ ತಾನೇ ಮಹಾನ್‌ ಆಗಿದ್ದ. ಆದರೆ ಬೇರೆಯವರ ದೃಷ್ಟಿಯಲ್ಲಿ? ಅವನನ್ನು ವರ್ಣಿಸಲು ಬಳಸಿರುವ ತುಚ್ಛ ಪದಗಳನ್ನು ಬೈಬಲಿನಲ್ಲಿ ಬೇರಾವ ವ್ಯಕ್ತಿಗೂ ಬಳಸಿಲ್ಲ. ಅವನ ಹೆಸರಿನ ಅರ್ಥವೇ “ಬುದ್ಧಿಹೀನ” ಅಥವಾ “ಮೂರ್ಖ.” ಇದು, ಹುಟ್ಟಿದಾಗ ಹೆತ್ತವರು ಅವನಿಗಿಟ್ಟ ಹೆಸರಾಗಿತ್ತೊ? ಅಥವಾ ಅವನ ಗುಣದಿಂದಾಗಿ ಕಾಲಾನಂತರ ಅವನಿಗೆ ಅಂಟಿಕೊಂಡ ಹೆಸರಾಗಿತ್ತೋ? ಅದೇನೇ ಇರಲಿ, ಅವನು ತನ್ನ ಹೆಸರಿಗೆ ತಕ್ಕ ವ್ಯಕ್ತಿಯಾಗಿದ್ದ. “ನಿಷ್ಠುರನೂ ದುಷ್ಕರ್ಮಿಯೂ ಆಗಿದ್ದ.” ಅವನು ದಬ್ಬಾಳಿಕೆಮಾಡುತ್ತಿದ್ದ ಒಬ್ಬ ಕುಡುಕನಾಗಿದ್ದ. ಅವನೆಂದರೆ ಎಲ್ಲರಿಗೆ ಭಯ, ಯಾರಿಗೂ ಇಷ್ಟವಾಗುತ್ತಿರಲಿಲ್ಲ.—1 ಸಮುವೇಲ 25:2, 3, 17, 21, 25.

ಆದರೆ ಅವನಿಗೂ ಅಬೀಗೈಲಳಿಗೂ ರಾತ್ರಿ-ಹಗಲಿನಷ್ಟು ವ್ಯತ್ಯಾಸ. ಅವಳ ಹೆಸರಿನ ಅರ್ಥ “ನನ್ನ ತಂದೆ ಆನಂದತುಂದಿಲನಾಗಿದ್ದಾನೆ” ಎಂದು. ತಂದೆಯೊಬ್ಬನು ಚೆಲುವಾದ ಮಗಳ ಬಗ್ಗೆ ಹೆಮ್ಮೆಪಡುತ್ತಾನೆ. ಆದರೆ ವಿವೇಕಿಯಾದ ತಂದೆ ತನ್ನ ಮಗಳ ಆಂತರಿಕ ಸೌಂದರ್ಯದ ಬಗ್ಗೆ ಹೆಚ್ಚು ಆನಂದಪಡುತ್ತಾನೆ. ಅನೇಕವೇಳೆ, ಬಾಹ್ಯ ಸೌಂದರ್ಯವಿರುವವರಿಗೆ ವಿವೇಚನೆ, ವಿವೇಕ, ಧೈರ್ಯ, ನಂಬಿಕೆ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯವೆಂದೆಣಿಸುವುದಿಲ್ಲ. ಆದರೆ ಅಬೀಗೈಲ್‌ ಹಾಗಿಲ್ಲ. “ಆಕೆಯು ಬಹುಬುದ್ಧಿವಂತೆಯೂ ಸುಂದರಿಯೂ ಆಗಿದ್ದಳು” ಎಂದು ಬೈಬಲ್‌ ಹೇಳುತ್ತದೆ.—1 ಸಮುವೇಲ 25:3.

ಬುದ್ಧಿವಂತೆಯಾದ ಈ ಯುವತಿ ಇಂಥ ಮೂರ್ಖನನ್ನು ಮದುವೆಯಾದದ್ದಾದರೂ ಹೇಗೆಂದು ಅನೇಕರಿಂದು ಸೋಜಿಗಪಡಬಹುದು. ಬೈಬಲ್‌ ಕಾಲಗಳಲ್ಲಿ ಅನೇಕ ವಿವಾಹಗಳನ್ನು ಹಿರಿಯರು ನಿಶ್ಚಯಿಸುತ್ತಿದ್ದರೆಂಬುದನ್ನು ನೆನಪಿಡಿ. ಒಂದುವೇಳೆ ಹಾಗಿರದಿದ್ದರೂ, ಹೆತ್ತವರ ಒಪ್ಪಿಗೆಗೆ ತುಂಬ ಮಹತ್ತ್ವವನ್ನು ಕೊಡಲಾಗುತ್ತಿತ್ತು. ಅಬೀಗೈಲಳ ಹೆತ್ತವರು ನಾಬಾಲನ ಆಸ್ತಿ-ಅಂತಸ್ತನ್ನು ನೋಡಿ ಈ ಮದುವೆಗೆ ಒಪ್ಪಿಗೆ ನೀಡಿದ್ದರೊ ಅಥವಾ ಅವರೇ ಏರ್ಪಡಿಸಿದ್ದರೋ? ಬಡತನಕ್ಕೆ ಕಟ್ಟುಬಿದ್ದು ಮಗಳನ್ನು ಅವನಿಗೆ ಮದುವೆಮಾಡಿಸಿದರೋ? ಕಾರಣ ಏನೇ ಇದ್ದರೂ, ನಾಬಾಲನ ಹಣ ಅವನನ್ನು ಒಳ್ಳೇ ಗಂಡನನ್ನಾಗಿ ಮಾಡಲಿಲ್ಲ.

ವಿವೇಕಿ ಹೆತ್ತವರು ತಮ್ಮ ಮಕ್ಕಳಿಗೆ ವಿವಾಹವನ್ನು ಗೌರವದಿಂದ ನೋಡುವಂತೆ ತಪ್ಪದೆ ಕಲಿಸುತ್ತಾರೆ. ಹಣಕ್ಕಾಗಿ ಒಬ್ಬರನ್ನು ಮದುವೆಯಾಗುವಂತೆ ಅವರು ಪ್ರೋತ್ಸಾಹಿಸುವುದಿಲ್ಲ. ಇಲ್ಲವೆ ವಯಸ್ಕರ ಪಾತ್ರಗಳನ್ನೂ ಜವಾಬ್ದಾರಿಗಳನ್ನೂ ಹೆಗಲಿಗೇರಿಸಲಾಗದಷ್ಟು ಎಳೆ ವಯಸ್ಸಿನಲ್ಲೇ ಜೋಡಿ ಹುಡುಕುವಂತೆ ಒತ್ತಾಯಿಸುವುದಿಲ್ಲ. (1 ಕೊರಿಂಥ 7:36) ಅಬೀಗೈಲಳ ವಿಷಯದಲ್ಲಾದರೋ ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿರಲಿಲ್ಲ. ಆಕೆ ನಾಬಾಲನನ್ನು ಮದುವೆಯಾಗಲು ಕಾರಣ ಏನೇ ಆಗಿರಲಿ, ಪರಿಸ್ಥಿತಿಯನ್ನು ತನ್ನಿಂದಾದಷ್ಟು ಮಟ್ಟಿಗೆ ಸುಧಾರಿಸಲು ಅವಳು ಗಟ್ಟಿಮನಸ್ಸು ಮಾಡಿದ್ದಳು.

“ಬಂದವರ ಮೇಲೆ ಬಿದ್ದು ಬೈದನು”

ಈಗ ಅಬೀಗೈಲಳ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ಏಕೆಂದರೆ ನಾಬಾಲನು ಅವಮಾನಿಸಿದ್ದು ಅಂಥಿಂಥ ವ್ಯಕ್ತಿಯನ್ನಲ್ಲ. ಇವನು ಯೆಹೋವನ ನಂಬಿಗಸ್ತ ಸೇವಕ, ರಾಜ ಸೌಲನ ಬಳಿಕ ಪಟ್ಟಕ್ಕೇರಲು ದೇವರು ಆರಿಸಿ ಪ್ರವಾದಿ ಸಮುವೇಲನಿಂದ ಅಭಿಷೇಕಿಸಲ್ಪಟ್ಟಿದ್ದ ದಾವೀದನೇ. (1 ಸಮುವೇಲ 16:1, 2, 11-13) ಹೊಟ್ಟೆಕಿಚ್ಚಿನಿಂದಾಗಿ ತನ್ನನ್ನು ಕೊಲ್ಲಲು ಹವಣಿಸುತ್ತಿದ್ದ ರಾಜ ಸೌಲನಿಂದ ತಪ್ಪಿಸಿಕೊಂಡು ದಾವೀದನು 600 ಮಂದಿ ನಿಷ್ಠಾವಂತ ಯೋಧರೊಂದಿಗೆ ಅರಣ್ಯದಲ್ಲಿ ವಾಸಿಸುತ್ತಿದ್ದನು.

ನಾಬಾಲನು ವಾಸಿಸುತ್ತಿದ್ದದ್ದು ಮಾವೋನಿನಲ್ಲಿ. ಅವನ ಬಳಿ 3,000 ಕುರಿಗಳಿದ್ದವು. ಜಮೀನು ಇದದ್ದು ಮತ್ತು ಕೆಲಸಮಾಡುತ್ತಿದ್ದದ್ದು ಹತ್ತಿರದ ಕರ್ಮೆಲಿನಲ್ಲಿ. * ಅಲ್ಲಿಂದ ಕುರಿಸಾಕಣೆಗೆ ಸೂಕ್ತವಾಗಿದ್ದ ಮಲೆನಾಡಿನ ಹುಲ್ಲುಗಾವಲುಗಳಿಗೆ ಹೋಗಲು ಸುಲಭವಾಗುತ್ತಿತ್ತು. ಸುತ್ತ ಕಾಡು ಪ್ರದೇಶ. ದಕ್ಷಿಣದಲ್ಲಿ ವಿಶಾಲವಾಗಿ ಹರಡಿಕೊಂಡಿದ್ದ ಪಾರಾನ್‌ ಅರಣ್ಯ. ಪೂರ್ವದಲ್ಲಿ ಲವಣ ಸಮುದ್ರಕ್ಕೆ ಹೋಗುವ ಮಾರ್ಗದುದ್ದಕ್ಕೂ ಕಡಿದಾದ ಕಮರಿಗಳು ಹಾಗೂ ಗುಹೆಗಳಿಂದ ಕೂಡಿದ ನಿರ್ಜನ ಬಂಜರುಭೂಮಿ. ಇಂಥ ಪ್ರದೇಶಗಳಲ್ಲಿ ವಾಸಹೂಡಿದ್ದ ದಾವೀದನೂ ಅವನ ಸೈನಿಕರೂ ಬದುಕಿರಲು ಹೆಣಗಾಡುತ್ತಾ ಆಹಾರಕ್ಕಾಗಿ ಬೇಟೆಯಾಡುತ್ತಿದ್ದರು. ಅವರು ಪಟ್ಟ ಕಷ್ಟ ಒಂದೆರಡಲ್ಲ. ಈ ಪ್ರದೇಶಗಳಲ್ಲೇ ಅವರು ಧನಿಕ ನಾಬಾಲನ ಆಳುಗಳಾದ ಯುವ ಕುರುಬರನ್ನು ಆಗಾಗ್ಗೆ ಎದುರುಗೊಳ್ಳುತ್ತಿದ್ದರು.

ಶ್ರಮಜೀವಿಗಳಾದ ದಾವೀದನ ಸೈನಿಕರು ಆ ಕುರುಬರೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದರು? ಬೇಕಾದಾಗಲೆಲ್ಲ ಹೇಳದೆಕೇಳದೆ ಕುರಿಯನ್ನು ತೆಗೆದುಕೊಳ್ಳುವುದು ಅವರಿಗೇನೂ ಕಷ್ಟಕರವಾಗಿರಲಿಲ್ಲ. ಆದರೆ ಹಾಗೆ ಮಾಡದೆ ಅವರು ನಾಬಾಲನ ಹಿಂಡುಗಳಿಗೂ ಸೇವಕರಿಗೂ ಕಾವಲುಗೋಡೆಯಂತಿದ್ದರು. (1 ಸಮುವೇಲ 25:15, 16) ಕುರಿಗಳು ಮತ್ತು ಕುರುಬರಿಗೆ ಹಲವಾರು ಅಪಾಯಗಳಿದ್ದವು. ಏಕೆಂದರೆ ಆ ಕಾಲದಲ್ಲಿ ತುಂಬ ಪರಭಕ್ಷಕ ಪ್ರಾಣಿಗಳಿದ್ದವು. ಅಲ್ಲದೆ, ಇಸ್ರಾಯೇಲಿನ ದಕ್ಷಿಣ ಗಡಿಯು ಹತ್ತಿರದಲ್ಲೇ ಇದ್ದದರಿಂದ ಪರದೇಶಿ ಸುಲಿಗೆಗಾರರೂ ಕಳ್ಳಕಾಕರೂ ಆಗಾಗ್ಗೆ ದಾಳಿಮಾಡುತ್ತಿದ್ದರು. *

ಆ ಅರಣ್ಯದಲ್ಲಿ ತನ್ನೆಲ್ಲ ಸೈನಿಕರಿಗೆ ಸಾಕಷ್ಟು ಆಹಾರ ಒದಗಿಸುವುದು ದಾವೀದನಿಗೆ ಒಂದು ದೊಡ್ಡ ಕೆಲಸವಾಗಿದ್ದಿರಬೇಕು. ಆದುದರಿಂದ ಒಂದು ದಿನ ದಾವೀದನು ನಾಬಾಲನ ಬಳಿ ಹತ್ತು ಮಂದಿ ದೂತರನ್ನು ಕಳುಹಿಸಿದನು. ಅವರನ್ನು ಕಳುಹಿಸಲು ಅವನು ಜಾಣ್ಮೆಯಿಂದ ಆರಿಸಿದ ಸಮಯ ಸೂಕ್ತವಾಗಿತ್ತು. ಏಕೆಂದರೆ ಅದು ಕುರಿಗಳ ಉಣ್ಣೆ ಕತ್ತರಿಸುವ ಸಮಯವಾಗಿತ್ತು. ಇಂಥ ಸಮಯಗಳಲ್ಲಿ ಹಬ್ಬದಂಥ ವಾತಾವರಣವಿದ್ದು, ರಸದೌತಣ ಮತ್ತು ಉದಾರವಾಗಿ ದಾನಕೊಡುವ ವಾಡಿಕೆಯಿತ್ತು. ದಾವೀದನು ತನ್ನ ಮಾತುಗಳನ್ನೂ ಜಾಗ್ರತೆಯಿಂದ ಆಯ್ಕೆಮಾಡಿದನು. ನಾಬಾಲನನ್ನು ವಿನಯದಿಂದ ಸಂಬೋಧಿಸಿ ಮಾತಾಡಿದನು. ತನಗಿಂತ ಹಿರಿಯವನಾಗಿದ್ದ ನಾಬಾಲನ ವಯಸ್ಸಿಗೆ ಮರ್ಯಾದೆ ತೋರಿಸುತ್ತಾ ತನ್ನನ್ನು ‘ನಿನ್ನ ಮಗನಾದ ದಾವೀದ’ ಎಂದು ಸೂಚಿಸಿದನು. ದಾವೀದನ ಬಿನ್ನಹಕ್ಕೆ ನಾಬಾಲನ ಪ್ರತಿಕ್ರಿಯೆ ಏನಾಗಿತ್ತು?—1 ಸಮುವೇಲ 25:5-8.

ಅವನು ಕೋಪದಿಂದ ಸಿಡಿದೆದ್ದನು! ಲೇಖನದ ಆರಂಭದಲ್ಲಿ ತಿಳಿಸಲಾದ ಯುವ ಸೇವಕನು ಆ ದೃಶ್ಯವನ್ನು ಕಣ್ಣಾರೆ ನೋಡಿ ಅಬೀಗೈಲಳಿಗೆ ವರ್ಣಿಸಿದ್ದು: “ದಣಿಯು ಬಂದವರ ಮೇಲೆ ಬಿದ್ದು ಬೈದನು.” ಜಿಪುಣ ನಾಬಾಲನು ತಾನು ಸಿದ್ಧಪಡಿಸಿದ ಮಾಂಸ ಆಹಾರಪಾನಗಳನ್ನು ಕಂಡಕಂಡವರಿಗೆಲ್ಲ ಕೊಡಲಾರೆ ಎಂದು ಗುಡುಗಿದ. ದಾವೀದನು ತೃಣಸಮಾನನೂ ಓಡಿಹೋದ ಸೇವಕನೂ ಎಂದು ಅಣಕಿಸಿದ. ನಾಬಾಲನ ದೃಷ್ಟಿಕೋನ ದಾವೀದನನ್ನು ದ್ವೇಷಿಸುತ್ತಿದ್ದ ಸೌಲನಂತಿತ್ತು. ನಾಬಾಲನಿಗಾಗಲಿ ಸೌಲನಿಗಾಗಲಿ ದಾವೀದನ ಬಗ್ಗೆ ಯೆಹೋವ ದೇವರಿಗಿದ್ದ ದೃಷ್ಟಿಕೋನ ಇರಲಿಲ್ಲ. ಯೆಹೋವನಿಗೆ ದಾವೀದನ ಮೇಲೆ ಪ್ರೀತಿಯಿತ್ತು. ಆತನ ದೃಷ್ಟಿಯಲ್ಲಿ ದಾವೀದನು ಬಂಡಾಯವೆದ್ದ ದಾಸನಾಗಿರಲಿಲ್ಲ, ಇಸ್ರಾಯೇಲಿನ ಭಾವೀ ಅರಸನಾಗಿದ್ದನು.—1 ಸಮುವೇಲ 25:10, 11, 14.

ದಾವೀದನ ದೂತರು ವಾಪಸ್ಸು ಹೋಗಿ ನಡೆದ ಸಂಗತಿಯನ್ನು ತಿಳಿಸಿದಾಗ ಅವನು ಕೋಪದಿಂದ ಕೆರಳಿದನು. “ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಳ್ಳಿರಿ” ಎಂದು ತನ್ನ ಯೋಧರಿಗೆ ಅಪ್ಪಣೆಕೊಟ್ಟನು. ತಾನೂ ಶಸ್ತ್ರಸಜ್ಜಿತನಾಗಿ 400 ಮಂದಿ ಯೋಧರೊಂದಿಗೆ ದಾಳಿಮಾಡಲು ಹೊರಟನು. ನಾಬಾಲನ ಮನೆವಾರ್ತೆಯಲ್ಲಿದ್ದ ಪ್ರತಿಯೊಬ್ಬ ಪುರುಷನನ್ನು ಹತಿಸುವ ಪ್ರತಿಜ್ಞೆಮಾಡಿದನು. (1 ಸಮುವೇಲ 25:12, 13, 21, 22) ದಾವೀದನ ಕೋಪ ಸಮಂಜಸವಾಗಿದ್ದರೂ ಅದನ್ನು ವ್ಯಕ್ತಪಡಿಸಲಿದ್ದ ರೀತಿ ತಪ್ಪಾಗಿತ್ತು. “ಮನುಷ್ಯನ ಕೋಪವು ದೇವರ ನೀತಿಯನ್ನು ಸಾಧಿಸುವುದಿಲ್ಲ” ಎನ್ನುತ್ತದೆ ಬೈಬಲ್‌. (ಯಾಕೋಬ 1:20) ಆದರೆ ಈಗ ಅಬೀಗೈಲಳು ತನ್ನ ಮನೆವಾರ್ತೆಯನ್ನು ಹೇಗೆ ಕಾಪಾಡಲಿದ್ದಳು?

‘ನಿನ್ನ ಬುದ್ಧಿ ಸ್ತೋತ್ರಾರ್ಹವೇ ಸರಿ’

ದಾವೀದನಿಗಾದ ಘೋರ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಅಬೀಗೈಲಳು ತೆಗೆದುಕೊಂಡ ಮೊದಲ ಹೆಜ್ಜೆಯನ್ನು ನಾವೀಗಾಗಲೇ ನೋಡಿದ್ದೇವೆ. ಅದೇನೆಂದರೆ ಆಕೆ ಆ ಸೇವಕನ ಮಾತನ್ನು ಗಮನಕೊಟ್ಟು ಕೇಳಿದಳು. ಆಕೆ ತನ್ನ ಗಂಡ ನಾಬಾಲನಂತಿರಲಿಲ್ಲ. “ಮೂರ್ಖನಾದ ಅವನೊಡನೆ ಮಾತಾಡುವದಸಾಧ್ಯ” ಎಂದು ಆ ಸೇವಕನೇ ಹೇಳಿದನು. * (1 ಸಮುವೇಲ 25:17) ನಾಬಾಲನಿಗೆ ಎಷ್ಟು ಅಹಂ ಇತ್ತೆಂದರೆ ಬೇರೆಯವರಿಗೆ ಅವನು ಸುತರಾಂ ಕಿವಿಗೊಡುತ್ತಿರಲಿಲ್ಲ. ಈ ರೀತಿಯ ಸೊಕ್ಕು ನಮ್ಮೀ ದಿನಗಳಲ್ಲಿ ಸರ್ವೇಸಾಮಾನ್ಯ. ಆದರೆ ಅಬೀಗೈಲಳು ಹಾಗಲ್ಲವೆಂದು ಆ ಸೇವಕನಿಗೆ ಚೆನ್ನಾಗಿ ತಿಳಿದಿತ್ತು. ಆದ್ದರಿಂದಲೇ ಅವನು ಈ ಸಮಸ್ಯೆಯನ್ನು ಅವಳ ಮುಂದಿಟ್ಟನು.

ಅಬೀಗೈಲಳು ಕ್ಷಣದಲ್ಲೇ ಯೋಚಿಸಿ ಕ್ರಿಯೆಗೈದಳು. ಆಕೆ ಶೀಘ್ರವಾಗಿ ಕ್ರಿಯೆಗೈದಳೆಂಬುದನ್ನು ಸೂಚಿಸುವ ಪದಗಳನ್ನು ಈ ವೃತ್ತಾಂತದಲ್ಲಿ ನಾಲ್ಕು ಸಲ ಬಳಸಲಾಗಿದೆ. ಅವಳು ದಾವೀದ ಮತ್ತು ಅವನ ಜನರಿಗಾಗಿ ರೊಟ್ಟಿ, ದ್ರಾಕ್ಷಾರಸ, ಕುರಿಗಳ ಮಾಂಸ, ಹುರಿಗಾಳು, ಒಣಗಿದ ದ್ರಾಕ್ಷೇಗೊಂಚಲುಗಳು, ಅಂಜೂರಹಣ್ಣುಗಳ ಉಂಡೆಗಳು ಸೇರಿದ್ದ ಉದಾರ ಕೊಡುಗೆಯನ್ನು ಸಿದ್ಧಪಡಿಸುತ್ತಾಳೆ. ಅಬೀಗೈಲಳಿಗೆ ತನ್ನ ಮನೆಯಲ್ಲಿ ಏನೇನು ಇದೆಯೆಂದು ಚೆನ್ನಾಗಿ ಗೊತ್ತಿತ್ತು ಮತ್ತು ಮನೆಯ ಕೆಲಸಕಾರ್ಯಗಳೆಲ್ಲವೂ ಅವಳ ಸುಪರ್ದಿನಲ್ಲಿತ್ತು. ಕಾಲಾನಂತರ ಜ್ಞಾನೋಕ್ತಿ ಪುಸ್ತಕದಲ್ಲಿ ವರ್ಣಿಸಲಾದ ಗುಣವತಿ ಸತಿಯಂತೆ ಅವಳಿದ್ದಳು. (ಜ್ಞಾನೋಕ್ತಿ 31:10-31) ಆ ಎಲ್ಲ ಆಹಾರ ಸಾಮಾಗ್ರಿಗಳನ್ನು ತನ್ನ ಸೇವಕರೊಂದಿಗೆ ಮುಂದೆ ಕಳುಹಿಸಿ, ನಂತರ ಆಕೆಯೊಬ್ಬಳೇ ಅವರ ಹಿಂದೆಬಂದಳು. ಆದರೆ ಆಕೆ ತನ್ನ “ಗಂಡನಾದ ನಾಬಾಲನಿಗೆ ಏನೂ ತಿಳಿಸಲಿಲ್ಲ” ಎಂದು ಬೈಬಲ್‌ ಹೇಳುತ್ತದೆ.—1 ಸಮುವೇಲ 25:18, 19.

ಇದರರ್ಥ ಅಬೀಗೈಲಳು ತನ್ನ ಯಜಮಾನನ ಶಿರಸ್ಸುತನದ ವಿರುದ್ಧ ದಂಗೆಯೆದ್ದಳೆಂದೋ? ಖಂಡಿತ ಇಲ್ಲ. ನಾಬಾಲನು ಯೆಹೋವನ ಅಭಿಷಿಕ್ತ ಸೇವಕನೊಂದಿಗೆ ನೀಚತನದಿಂದ ವರ್ತಿಸಿದ್ದನು. ಇದೇ ಅವನ ಮನೆವಾರ್ತೆಯಲ್ಲಿನ ಅನೇಕ ಅಮಾಯಕರ ಸಾವಿಗೆ ಕಾರಣವಾಗಲಿತ್ತು. ಅಬೀಗೈಲಳು ಈಗ ಕೈಕಟ್ಟಿ ಕುಳಿತುಕೊಳ್ಳುತ್ತಿದ್ದಲ್ಲಿ ತನ್ನ ಗಂಡನ ದೋಷದಲ್ಲಿ ಭಾಗಿಯಾಗುತ್ತಿದ್ದಳೋ ಏನೋ. ಅದು ಏನೇ ಆದರೂ, ಗಂಡನಿಗಿಂತ ತನ್ನ ದೇವರಿಗೆ ಅಧೀನತೆ ತೋರಿಸಲು ಆಕೆ ಪ್ರಾಶಸ್ತ್ಯ ಕೊಟ್ಟಳು.

ಸ್ವಲ್ಪ ದೂರದಲ್ಲೇ ಅಬೀಗೈಲಳು ದಾವೀದ ಮತ್ತವನ ಯೋಧರನ್ನು ಸಂಧಿಸಿದಳು. ಈಗಲೂ ಅವಳು ಶೀಘ್ರವಾಗಿ ಕ್ರಿಯೆಗೈದಳು. ಬೇಗನೆ ಕತ್ತೆಯಿಂದಿಳಿದು ದಾವೀದನನ್ನು ದೈನ್ಯದಿಂದ ವಂದಿಸಿದಳು. (1 ಸಮುವೇಲ 25:20, 23) ಅವನ ಮುಂದೆ ತನ್ನ ಮನದಾಳದ ದುಗುಡವನ್ನು ಬಿಚ್ಚಿಟ್ಟಳು. ತನ್ನ ಗಂಡ ಹಾಗೂ ಮನೆವಾರ್ತೆಯವರಿಗೆ ಪ್ರಾಣಭಿಕ್ಷೆ ನೀಡುವಂತೆ ಅಂಗಲಾಚಿದಳು. ಇದು ಪರಿಣಾಮಕಾರಿಯಾಗಿತ್ತು. ಏಕೆ?

ಆಕೆ ನಡೆದಂಥ ಅನ್ಯಾಯದ ಹೊಣೆಗಾರಿಕೆಯನ್ನು ತನ್ನ ತಲೆ ಮೇಲೆ ತೆಗೆದುಕೊಂಡು ತನ್ನನ್ನು ಕ್ಷಮಿಸುವಂತೆ ದಾವೀದನಲ್ಲಿ ಕೇಳಿಕೊಂಡಳು. ತನ್ನ ಗಂಡನು ಹೆಸರಿಗೆ ತಕ್ಕಂತೆ ಮೂರ್ಖನೆಂಬ ಸತ್ಯಾಂಶವನ್ನು ಒಪ್ಪಿಕೊಂಡಳು. ಬಹುಶಃ ಹೀಗೆ ಅವಳು, ಅಂಥ ವ್ಯಕ್ತಿಯನ್ನು ಶಿಕ್ಷಿಸುವುದರಿಂದ ದಾವೀದನ ಘನತೆ ಕಡಿಮೆಯಾಗುವುದೆಂದು ಪರೋಕ್ಷವಾಗಿ ಸೂಚಿಸುತ್ತಿದ್ದಳು. ದಾವೀದನು ‘ಯೆಹೋವನ ಶತ್ರುಗಳೊಡನೆ ಯುದ್ಧಮಾಡುತ್ತಾನೆ’ ಎಂದು ಅಂಗೀಕರಿಸುವ ಮೂಲಕ ಯೆಹೋವನ ಪ್ರತಿನಿಧಿಯಾದ ಅವನಲ್ಲಿ ಭರವಸೆ ವ್ಯಕ್ತಪಡಿಸಿದಳು. ‘ಯೆಹೋವನು ನಿನ್ನನ್ನು ಇಸ್ರಾಯೇಲ್‌ ಪ್ರಭುವನ್ನಾಗಿ ಮಾಡುವನು’ ಎಂದು ಹೇಳುವ ಮೂಲಕ ಅವನು ಅರಸನಾಗುವುದರ ಬಗ್ಗೆ ಯೆಹೋವನು ಮಾಡಿದ ವಾಗ್ದಾನ ತನಗೆ ತಿಳಿದಿದೆಯೆಂದು ತೋರಿಸಿಕೊಟ್ಟಳು. ಅಷ್ಟುಮಾತ್ರವಲ್ಲದೆ ರಕ್ತಾಪರಾಧಕ್ಕಾಗಲಿ, ಮುಂದೆ “ಪಶ್ಚಾತ್ತಾಪ ಮನೋವ್ಯಥೆಗಳಿಗೆ” ಅಂದರೆ ಬಹುಶಃ ಚುಚ್ಚುವ ಮನಸ್ಸಾಕ್ಷಿಗಾಗಲಿ ಕಾರಣವಾಗಬಲ್ಲ ಕೃತ್ಯವೆಸಗದಂತೆ ದಾವೀದನನ್ನು ಕೇಳಿಕೊಂಡಳು. (1 ಸಮುವೇಲ 25:24-31) ನಿಜವಾಗಿಯೂ ಮನಮುಟ್ಟುವ ದಯಾಪೂರ್ಣ ಮಾತುಗಳಿವು!

ದಾವೀದನ ಪ್ರತಿಕ್ರಿಯೆ ಏನಾಗಿತ್ತು? ಅಬೀಗೈಲಳು ಏನೇನು ತಂದಿದ್ದಳೋ ಅದನ್ನು ಸ್ವೀಕರಿಸಿ, “ಈ ಹೊತ್ತು ನನ್ನನ್ನು ಎದುರುಗೊಳ್ಳುವದಕ್ಕಾಗಿ ನಿನ್ನನ್ನು ಕಳುಹಿಸಿದ ಇಸ್ರಾಯೇಲ್‌ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಸ್ವಹಸ್ತದಿಂದ ಮುಯ್ಯಿತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ನನ್ನನ್ನು ತಡೆದ ನೀನೂ ನಿನ್ನ ಬುದ್ಧಿಯೂ ಸ್ತೋತ್ರಾರ್ಹವೇ ಸರಿ” ಎಂದು ಹೇಳಿದನು. ಧೈರ್ಯದಿಂದ ಬೇಗನೆ ಬಂದು ತನ್ನನ್ನು ಎದುರುಗೊಂಡದಕ್ಕಾಗಿ ದಾವೀದನು ಆಕೆಯನ್ನು ಶ್ಲಾಘಿಸಿದನು. ಅವನು ರಕ್ತಾಪರಾಧಕ್ಕೆ ಗುರಿಯಾಗದಂತೆ ಆಕೆಯೇ ತಡೆದಳೆಂದು ಒಪ್ಪಿಕೊಂಡನು. “ಸಮಾಧಾನದಿಂದ ಮನೆಗೆ ಹೋಗು” ಎಂದು ಆಕೆಗೆ ಹೇಳಿ, “ನಿನ್ನ ವಿಜ್ಞಾಪನೆಯನ್ನು ಲಾಲಿಸಿದ್ದೇನೆ” ಎಂಬ ಮಾತುಗಳನ್ನು ದೀನತೆಯಿಂದ ಕೂಡಿಸಿದನು.—1 ಸಮುವೇಲ 25:32-35.

“ನಿನ್ನ ದಾಸಿ”

ಅವರು ತಮ್ಮ ತಮ್ಮ ದಾರಿ ಹಿಡಿದು ಹೋದ ಬಳಿಕ ಅಬೀಗೈಲಳು ಆ ಭೇಟಿಯ ಬಗ್ಗೆ ಯೋಚಿಸಿದಳು. ನಂಬಿಗಸ್ತನಾದ ದಯಾಪರ ದಾವೀದನಿಗೂ ತಾನು ಮದುವೆಯಾಗಿರುವ ಮೊಂಡನಿಗೂ ಇದ್ದ ವ್ಯತ್ಯಾಸವನ್ನು ಆಕೆ ಗಮನಿಸಿದ್ದಳು. ಆದರೆ ಆಕೆ ಅದರ ಕುರಿತೇ ಯೋಚಿಸುತ್ತಾ ಇರಲಿಲ್ಲ. “ಅಬೀಗೈಲಳು ನಾಬಾಲನ ಬಳಿಗೆ ಬಂದಳು” ಎಂದು ವೃತ್ತಾಂತ ಹೇಳುತ್ತದೆ. ಅವನ ಪತ್ನಿಯಾಗಿ ತನ್ನ ಕರ್ತವ್ಯವನ್ನು ಆದಷ್ಟು ಮಟ್ಟಿಗೆ ಪೂರೈಸುವ ದೃಢನಿಶ್ಚಯದಿಂದ ತನ್ನ ಗಂಡನ ಬಳಿ ಹಿಂದಿರುಗಿದಳು. ತಾನು ದಾವೀದನಿಗೂ ಅವನ ಸೈನಿಕರಿಗೂ ಕೊಟ್ಟ ಕೊಡುಗೆಯ ಬಗ್ಗೆ ಗಂಡನಿಗೆ ಹೇಳಲಿದ್ದಳು. ಏಕೆಂದರೆ ಅದನ್ನು ತಿಳಿಯುವ ಹಕ್ಕು ಅವನಿಗಿತ್ತು. ಅಲ್ಲದೆ, ಅವನು ಈಗಷ್ಟೇ ಯಾವ ಗಂಡಾಂತರದಿಂದ ತಪ್ಪಿಸಿಕೊಂಡಿದ್ದನು ಎಂಬುದನ್ನು ಬೇರೆಯವರ ಬಾಯಿಂದ ಕೇಳಿ ಇನ್ನಷ್ಟು ನಾಚಿಕೆಗೆ ಗುರಿಯಾಗುವ ಮುಂಚೆ ಆಕೆಯೇ ಅವನಿಗೆ ಅದರ ಬಗ್ಗೆ ತಿಳಿಸಬೇಕೆಂದಿದ್ದಳು. ಆದರೆ ಅವನ ಬಳಿ ಹೋದಾಗ ಆಕೆಗೆ ಇದೆಲ್ಲವನ್ನು ತಿಳಿಸಲಾಗಲಿಲ್ಲ. ಅವನು ರಾಜರಂತೆ ದೊಡ್ಡ ಔತಣ ಮಾಡಿಸಿ, ಕಂಠಪೂರ್ತಿ ಕುಡಿದು ಮತ್ತನಾಗಿದ್ದನು.—1 ಸಮುವೇಲ 25:36.

ಪುನಃ ಒಮ್ಮೆ ಅಬೀಗೈಲಳು ಧೈರ್ಯ ಹಾಗೂ ವಿವೇಚನೆಯನ್ನು ತೋರಿಸಿದಳು. ಅವನ ನಶೆ ಇಳಿಯುವಂತೆ ಮರುದಿನ ಬೆಳಗ್ಗಿನ ತನಕ ಕಾದಳು. ಆಗ ಅವನು ಆಕೆಯ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿದ್ದರೂ ಅವನ ಸಿಟ್ಟು ನೆತ್ತಿಗೇರುವ ಅಪಾಯವೂ ಇತ್ತು. ಹಾಗಿದ್ದರೂ ಆಕೆ ಅವನ ಬಳಿ ಹೋಗಿ ನಡೆದದ್ದೆಲ್ಲವನ್ನು ಹೇಳಿದಳು. ಅವನು ಕೋಪದಿಂದ ಕೆರಳಿ ತನ್ನ ಮೇಲೆ ಖಂಡಿತ ಕೈಯೆತ್ತುವನು ಎಂದು ಆಕೆ ನೆನಸಿದ್ದಿರಬೇಕು. ಆದರೆ ಅವನು ಮರಗಟ್ಟಿದವನಂತೆ ಕೂತುಕೊಂಡಿದ್ದನು.—1 ಸಮುವೇಲ 25:37.

ಅವನಿಗೇನಾಯಿತು? “ಅವನ ಹೃದಯವು ನಿಂತುಹೋಯಿತು, ಅವನು ಸ್ತಬ್ಧನಾದನು.” ಬಹುಶಃ ಅವನಿಗೆ ಒಂದು ವಿಧದ ಲಕ್ವಹೊಡೆದಿದ್ದಿರಬೇಕು. ಆದರೆ ಅವನು ಅಸುನೀಗಿದ್ದು ಹತ್ತು ದಿನಗಳ ಬಳಿಕವೇ. ಅದು ಕೂಡ ಬರೀ ರೋಗದ ಕಾರಣದಿಂದಲ್ಲ. “ನಾಬಾಲನು ಯೆಹೋವನಿಂದ ಹತನಾಗಿ ಸತ್ತನು.” (1 ಸಮುವೇಲ 25:38) ದೇವಹಸ್ತದಿಂದ ನಡೆದ ಈ ವಧೆಯಿಂದಾಗಿ, ದುಃಸ್ವಪ್ನದಂತಿದ್ದ ಅಬೀಗೈಲಳ ದೀರ್ಘಕಾಲದ ದಾಂಪತ್ಯ ಕೊನೆಕಂಡಿತು. ಇಂದು ಯೆಹೋವನು ಈ ರೀತಿಯ ವಧೆಯ ಮೂಲಕ ಗೃಹಹಿಂಸಾಚಾರವನ್ನು ಅಂತ್ಯಗೊಳಿಸುವುದಿಲ್ಲ ನಿಜ. ಆದರೆ ಒಂದು ಮನೆಯಲ್ಲಿ ನಡೆಯುವ ದೌರ್ಜನ್ಯ ಆತನ ಕಣ್ಣಿಗೆ ಮರೆಯಾಗಿರುವುದಿಲ್ಲ ಎಂಬುದನ್ನು ಈ ವೃತ್ತಾಂತ ಸ್ಪಷ್ಟವಾಗಿ ತೋರಿಸುತ್ತದೆ. ಆತನು ತನ್ನ ತಕ್ಕ ಸಮಯದಲ್ಲಿ ಖಂಡಿತ ನ್ಯಾಯಮಾಡುವನು.

ಅಬೀಗೈಲಳಿಗೆ ಈ ದುರಂತಕರ ದಾಂಪತ್ಯದಿಂದ ಮುಕ್ತಿ ಸಿಕ್ಕಿದ್ದಲ್ಲದೆ ಇನ್ನೊಂದು ಆಶೀರ್ವಾದವೂ ಸಿಕ್ಕಿತು. ದಾವೀದನಿಗೆ ನಾಬಾಲನ ಸಾವಿನ ಸುದ್ದಿ ಸಿಕ್ಕಿದಾಗ ಆಕೆಯ ಬಳಿ ದೂತರನ್ನು ಕಳುಹಿಸಿ ಮದುವೆ ಪ್ರಸ್ತಾಪಮಾಡಿದನು. ಅದಕ್ಕವಳು, “ನಿನ್ನ ದಾಸಿಯಾದ ನಾನು ನನ್ನ ಸ್ವಾಮಿಯ ಸೇವಕರ ಪಾದಗಳನ್ನು ತೊಳೆಯುವ ಸೇವಕಿಯಾಗುವದಕ್ಕೆ ಸಿದ್ಧಳಾಗಿದ್ದೇನೆ” ಎಂದು ಉತ್ತರಕೊಟ್ಟಳು. ಭಾವೀ ರಾಜನ ಪತ್ನಿಯಾಗುತ್ತೇನೆಂದು ಗೊತ್ತಾದಾಗ ಆಕೆ ಹಮ್ಮಿನಿಂದ ಬೀಗಲಿಲ್ಲವೆಂಬುದು ಸ್ಪಷ್ಟ. ಅವನ ಸೇವಕರಿಗೆ ಸೇವಕಿಯಾಗಲಿಕ್ಕೂ ತಾನು ಸಿದ್ಧಳೆಂದು ಆಕೆ ಹೇಳಿದಳು! ದಾವೀದನ ಬಳಿ ಹೋಗಲು ಸಿದ್ಧಳಾದಳು. ಈ ಸಂದರ್ಭದಲ್ಲೂ ಆಕೆ ಶೀಘ್ರವಾಗಿ ಕ್ರಿಯೆಗೈದಳೆಂದು ವೃತ್ತಾಂತ ಹೇಳುತ್ತದೆ.—1 ಸಮುವೇಲ 25:39-42.

ಇದು ಕಥೆಗಳಲ್ಲಿರುವಂಥ ರೀತಿಯ ಸುಖಾಂತ್ಯವಾಗಿರಲಿಲ್ಲ. ಏಕೆಂದರೆ ದಾವೀದನ ಪತ್ನಿಯಾಗಿ ಅಬೀಗೈಲಳ ಬದುಕು ಯಾವಾಗಲೂ ಹೂವು ಹಾಸಿದ ಹಾದಿಯಾಗಿರಲಿಲ್ಲ. ದಾವೀದನು ಈಗಾಗಲೇ ಅಹೀನೋವಮಳನ್ನು ಮದುವೆಯಾಗಿದ್ದ. ಬಹುಪತ್ನೀತ್ವ ಪದ್ಧತಿಯು ಆ ಕಾಲದಲ್ಲಿ ನಂಬಿಗಸ್ತ ಮಹಿಳೆಯರಿಗೆ ವಿಶೇಷ ರೀತಿಯ ಸವಾಲುಗಳನ್ನು ಒಡ್ಡಿತ್ತು. ಅಷ್ಟುಮಾತ್ರವಲ್ಲದೆ ದಾವೀದನು ಇನ್ನೂ ರಾಜನಾಗಿರಲಿಲ್ಲ. ಅವನು ರಾಜನಾಗಿ ಸೇವೆಮಾಡಲಾರಂಭಿಸುವ ಮುಂಚೆ ಹಲವಾರು ಕಷ್ಟತೊಂದರೆಗಳನ್ನು ಅನುಭವಿಸಲಿದ್ದನು. ಆದರೆ ಬಾಳಹಾದಿಯಲ್ಲಿ ಮುಂದೆ ಸಾಗುವಾಗ ಅಬೀಗೈಲಳು ದಾವೀದನಿಗೆ ಸಹಾಯವನ್ನೂ ಬೆಂಬಲವನ್ನೂ ಕೊಟ್ಟಳು. ಅವನಿಗೊಬ್ಬ ಮಗನನ್ನೂ ಹೆತ್ತಳು. ತನ್ನನ್ನು ಪ್ರಿಯವೆಂದೆಣಿಸಿ ಸಂರಕ್ಷಿಸುವ ಗಂಡನ ಆಸರೆ ಅವಳಿಗಿತ್ತು. ಒಂದು ಸಂದರ್ಭದಲ್ಲಿ ಆಕೆಯನ್ನು ಅಪಹರಣಕಾರರಿಂದಲೂ ರಕ್ಷಿಸಿದ! (1 ಸಮುವೇಲ 30:1-19) ಹೀಗೆ ವಿವೇಚನಾಭರಿತ, ಧೈರ್ಯಶಾಲಿ, ನಂಬಿಗಸ್ತ ಸ್ತ್ರೀಯರನ್ನು ಪ್ರೀತಿಸುವ, ಅಮೂಲ್ಯವೆಂದೆಣಿಸುವ ಯೆಹೋವ ದೇವರನ್ನು ದಾವೀದನು ಅನುಕರಿಸಿದನು. (w09 07/01)

[ಪಾದಟಿಪ್ಪಣಿಗಳು]

^ ಪ್ಯಾರ. 13 ಇದು ದಕ್ಷಿಣ ದಿಕ್ಕಿನ ಅರಣ್ಯದ ಅಂಚಿನಲ್ಲಿದ್ದ ಪಟ್ಟಣವಾಗಿತ್ತು, ಉತ್ತರದಲ್ಲಿದ್ದ ಪ್ರಸಿದ್ಧ ಕರ್ಮೆಲ್‌ ಬೆಟ್ಟವಲ್ಲ.

^ ಪ್ಯಾರ. 14 ಸ್ಥಳಿಕ ಜಮೀನುದಾರರು ಮತ್ತು ಅವರ ಹಿಂಡುಗಳನ್ನು ರಕ್ಷಿಸುವುದನ್ನು ಯೆಹೋವ ದೇವರಿಗೆ ಸಲ್ಲಿಸುವ ಸೇವೆಯಾಗಿ ದಾವೀದನು ಎಣಿಸಿರಬೇಕು. ಆ ಕಾಲದಲ್ಲಿ ಅಬ್ರಹಾಮ, ಇಸಾಕ, ಯಾಕೋಬರ ವಂಶಜರು ಆ ದೇಶದಲ್ಲಿ ವಾಸಿಸಬೇಕೆಂಬುದು ಯೆಹೋವನ ಉದ್ದೇಶವಾಗಿತ್ತು. ಆದಕಾರಣ ಅದನ್ನು ವಿದೇಶೀ ಆಕ್ರಮಣಕಾರರಿಂದ ಮತ್ತು ಸುಲಿಗೆಗಾರರಿಂದ ರಕ್ಷಿಸುವುದು ಒಂದು ರೀತಿಯ ಪವಿತ್ರ ಸೇವೆಯೇ ಆಗಿತ್ತು.

^ ಪ್ಯಾರ. 19 ಈ ಸೇವಕನು ಬಳಸಿದ ವಾಕ್ಸರಣಿಯ ಅರ್ಥ “ಬಿಲಯೇಲನ ಮಗ (ನಿಷ್ಪ್ರಯೋಜಕ)” ಎಂದಾಗಿತ್ತು. ಈ ವಾಕ್ಯದಲ್ಲಿ ಇತರ ಬೈಬಲ್‌ ಭಾಷಾಂತರಗಳು, “ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳದ” ಮತ್ತು ವಾಕ್ಯದ ಕೊನೆಯಲ್ಲಿ, “ಅವನೊಟ್ಟಿಗೆ ಮಾತಾಡಿ ಪ್ರಯೋಜನವಿಲ್ಲ” ಎಂಬ ವರ್ಣನೆಯನ್ನು ಸೇರಿಸುತ್ತವೆ.

[ಪುಟ 15ರಲ್ಲಿರುವ ಚಿತ್ರ]

ಅಬೀಗೈಲಳು ತನ್ನ ಗಂಡನಂತಿರದೆ ಚೆನ್ನಾಗಿ ಕಿವಿಗೊಡುವವಳಾಗಿದ್ದಳು

[ಪುಟ 16ರಲ್ಲಿರುವ ಚಿತ್ರ]

ಅಬೀಗೈಲಳು ದೀನತೆ, ಧೈರ್ಯ, ಬುದ್ಧಿವಂತಿಕೆಯಿಂದ ದಾವೀದನೊಂದಿಗೆ ಮಾತಾಡಿದಳು