ನಿಮಗಿರುವ ಗುರಿಗಳು ಮುಟ್ಟಸಾಧ್ಯವೋ?
ನಿಮಗಿರುವ ಗುರಿಗಳು ಮುಟ್ಟಸಾಧ್ಯವೋ?
● ಜೀವನದಲ್ಲಿ ಏನು ಸಾಧಿಸಬೇಕೆಂದಿದ್ದೀರಿ? ನಿಮ್ಮ ನಿರೀಕ್ಷೆಗಳು ವಾಸ್ತವಿಕವಾದವುಗಳೋ? ಅಥವಾ ನಿಮ್ಮ ಶಕ್ತಿ ಸಾಮರ್ಥ್ಯಕ್ಕೆ ಮೀರಿದ ವಿಷಯಗಳ ಬಗ್ಗೆ ಕನಸು ಕಾಣುತ್ತಿರುತ್ತೀರೋ? ಮಾನವ ಸ್ವಭಾವದ ಸೂಕ್ಷ್ಮ ವೀಕ್ಷಕನೊಬ್ಬನು ಬೈಬಲಿನಲ್ಲಿ ಕೊಟ್ಟ ವಿವೇಕಯುತ ಸಲಹೆ ಹೀಗಿದೆ: “ಬಗೆಬಗೆಯಾಗಿ ಆಶಿಸುವದಕ್ಕಿಂತ ಕಣ್ಣೆದುರಿಗಿರುವದನ್ನು ಅನುಭವಿಸುವದೇ ಲೇಸು; ಇದು ಕೂಡ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ.”—ಪ್ರಸಂಗಿ 6:9.
ನಮ್ಮ ‘ಕಣ್ಣೆದುರಿಗಿರುವುದು’ ಯಾವುದೆಂದರೆ ನಮ್ಮ ಸದ್ಯದ ಪರಿಸ್ಥಿತಿ ಮತ್ತು ವಾಸ್ತವಾಂಶಗಳೇ. ನಮ್ಮ ಜೀವನವನ್ನು ಉತ್ತಮಗೊಳಿಸಲು ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ ನಿಜ. ಆದರೆ ಬೈಬಲ್ ತಿಳಿಸುವ ಮೇರೆಗೆ ವಿವೇಕಿಯಾದವನು ತನ್ನಿಂದ ಮುಟ್ಟಲಸಾಧ್ಯವಾದ ಗುರಿಗಳನ್ನು ಇಡುವುದಿಲ್ಲ. ಈ ಗುರಿಗಳು ಕೀರ್ತಿ, ಸಂಪತ್ತು, ಪರಿಪೂರ್ಣ ಪತಿ ಯಾ ಪತ್ನಿ, ಸಂಪೂರ್ಣ ಆರೋಗ್ಯ ಇರಲೂಬಹುದು.
ಅಷ್ಟೇ ಅಲ್ಲ ಒಂದು ನಿರ್ದಿಷ್ಟ ಗುರಿಯನ್ನು ಸಾಧಿಸಿದ ಮೇಲೂ ‘ಇನ್ನೂ ಬೇಕು’ ಎಂಬ ದುರಾಶೆಗೆ ಒಬ್ಬನು ಬಲಿಯಾಗಬಹುದು. ಉದಾಹರಣೆಗೆ ಹಣಸಂಪತ್ತಿನ ಗುರಿಯಿಟ್ಟು ಅದನ್ನು ಗಳಿಸಿದವರನ್ನು ತೆಗೆದುಕೊಳ್ಳಿ. ಬೈಬಲ್ ನೇರವಾಗಿ ಹೇಳುವುದು: “ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು; ಸಮೃದ್ಧಿಯನ್ನು ಬಯಸುತ್ತಲೇ ಇರುವವನಿಗೆ ಆದಾಯವೆಷ್ಟಾದರೂ ಸಾಲದು. ಇದು ಸಹ ವ್ಯರ್ಥ.” (ಪ್ರಸಂಗಿ 5:10) ಆದ್ದರಿಂದ ಆಧ್ಯಾತ್ಮಿಕವಾಗಿ ವಿವೇಕಿಗಳಾದವರು ತಮ್ಮ ‘ಕಣ್ಣೆದುರಿಗಿರುವುದರಲ್ಲೇ’ ತೃಪ್ತರಾಗಿರಲು ಯತ್ನಿಸುತ್ತಾರೆ. ಹೌದು ಅವರು ಈ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ: “ನಾವು ಲೋಕದೊಳಗೆ ಏನನ್ನೂ ತೆಗೆದುಕೊಂಡು ಬಂದಿಲ್ಲ ಮತ್ತು ನಾವು ಅದರೊಳಗಿಂದ ಏನನ್ನೂ ತೆಗೆದುಕೊಂಡು ಹೋಗಲಾರೆವು.”—1 ತಿಮೊಥೆಯ 6:7.
ಮಾನವನು ತನ್ನ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿದಾಗಲೇ ಅವನಿಗೆ ಮಹಾ ಸಂತೋಷ ಲಭಿಸುವ ರೀತಿಯಲ್ಲಿ ಸೃಷ್ಟಿಸಲ್ಪಟ್ಟಿದ್ದಾನೆ. (ಮತ್ತಾಯ 5:3) ಅವುಗಳನ್ನು ಪೂರೈಸುವುದು ಹೇಗೆ? ಯೇಸು ಕ್ರಿಸ್ತನಂದದ್ದು: “ಮನುಷ್ಯನು ರೊಟ್ಟಿ ತಿಂದಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕಬೇಕು.” (ಮತ್ತಾಯ 4:4) ದೇವರ ಬಾಯಿಂದ ಹೊರಡುವ ಅಮೂಲ್ಯ ಮಾತುಗಳು ಬೈಬಲಿನಲ್ಲಿವೆ. ಮಾತ್ರವಲ್ಲ ಅವು ಉಚಿತವಾಗಿ ಸಿಗುತ್ತವೆ.
ಅಂಥ ಒಂದು ಅಮೂಲ್ಯ ಮಾತು ಕೀರ್ತನೆ 37:4ರಲ್ಲಿದೆ. “ಯೆಹೋವನಲ್ಲಿ ಸಂತೋಷಿಸು . . . ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.” ಪರಿಪೂರ್ಣ ಆರೋಗ್ಯ, ಐಹಿಕ ಭದ್ರತೆ ಮತ್ತು ಭೂಮಿಯ ಮೇಲೆ ಉದ್ಯಾನವನದಂಥ ಪರಿಸ್ಥಿತಿಯಲ್ಲಿ ನಿತ್ಯಜೀವ ಇವೆಲ್ಲವನ್ನು ಯಾವ ಮನುಷ್ಯನೂ ಕೊಡಲಾರನು. ಸರ್ವಶಕ್ತನಾದ ಯೆಹೋವ ದೇವರು ತನ್ನ ನಂಬಿಗಸ್ತ ಆರಾಧಕರಿಗೆ ಅವನ್ನು ಖಂಡಿತ ಕೊಡುವನು. (ಲೂಕ 23:43; ಪ್ರಕಟನೆ 21:3, 4) ಈ ಮಾತುಗಳು ನಂಬತಕ್ಕದಾಗಿವೆ. (g11-E 02)