ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ

ಬೈಬಲ್‌ ಒಂದು ಒಳ್ಳೇ ಪುಸ್ತಕ! ಅಷ್ಟೇನಾ?

ಬೈಬಲ್‌ ಒಂದು ಒಳ್ಳೇ ಪುಸ್ತಕ! ಅಷ್ಟೇನಾ?

ಬೈಬಲನ್ನು ಬರೆದು ಮುಗಿಸಿ 2,000 ವರ್ಷಗಳಾಗಿವೆ. ಅದರ ನಂತರ ಎಷ್ಟೋ ಪುಸ್ತಕಗಳು ಬಂದು ತೆರೆಮರೆಗೆ ಸರಿದಿವೆ. ಆದರೆ ಬೈಬಲನ್ನು ಜನ ಇನ್ನೂ ಬಳಸುತ್ತಿದ್ದಾರೆ. ಯಾಕೆ ಅಂತ ನೋಡಿ . . .

  • ಬೈಬಲನ್ನು ನಾಶಮಾಡಲು ದೊಡ್ಡದೊಡ್ಡ ವ್ಯಕ್ತಿಗಳು ಎಷ್ಟೋ ಪ್ರಯತ್ನ ಮಾಡಿದ್ದಾರೆ. 13-15ರ ಶತಮಾನದಲ್ಲಿ ಕೆಲವು ಕ್ರೈಸ್ತ ದೇಶಗಳ ಪರಿಸ್ಥಿತಿ ಹೇಗಿತ್ತು ಗೊತ್ತಾ? ಮಧ್ಯಯುಗದ ಬೈಬಲಿನ ಪರಿಚಯ (ಇಂಗ್ಲಿಷ್‌) ಎಂಬ ಪುಸ್ತಕದ ಪ್ರಕಾರ, ಯಾರಾದರು ಸಾಮಾನ್ಯ ಜನರ ಭಾಷೆಯಲ್ಲಿ ತರ್ಜುಮೆಯಾದ ಬೈಬಲನ್ನು ಇಟ್ಟುಕೊಂಡು ಓದಿದರೆ ಧಾರ್ಮಿಕ ಗುರುಗಳು ಇಷ್ಟಪಡುತ್ತಿರಲಿಲ್ಲ, ಅದು ದೊಡ್ಡ ಪಾಪ ಎಂದು ಹೇಳುತ್ತಿದ್ದರು. ಜನರಾಡುವ ಭಾಷೆಗೆ ಬೈಬಲನ್ನು ಭಾಷಾಂತರ ಮಾಡಿದ ಅಥವಾ ಅದನ್ನು ಓದಿ ಎಂದು ಹೇಳುತ್ತಿದ್ದ ವಿದ್ವಾಂಸರು ಜೀವ ಕೈಯಲ್ಲಿಟ್ಟುಕೊಂಡು ಬದುಕಬೇಕಿತ್ತು. ಕೆಲವರನ್ನಂತೂ ಕೊಂದೇ ಹಾಕಿದರು.

  • ಬೈಬಲಿಗೆ ನೂರೆಂಟು ವೈರಿಗಳಿದ್ದರೂ ಅದು ಜನರ ಕೈಗೆ ಸೇರದಂತೆ ಮಾಡಲು ಯಾವನಿಂದಲೂ ಸಾಧ್ಯವಾಗಿಲ್ಲ. ಇವತ್ತಿನ ತನಕ ಇಡೀ ಬೈಬಲ್‌ ಅಥವಾ ಅದರ ಕೆಲವು ಭಾಗಗಳು 2,800ಕ್ಕಿಂತ ಹೆಚ್ಚು ಭಾಷೆಗಳಲ್ಲಿ ತರ್ಜುಮೆಯಾಗಿ, ಸುಮಾರು 500 ಕೋಟಿ ಪ್ರತಿಗಳನ್ನು ಮುದ್ರಿಸಲಾಗಿದೆ. ಆದರೆ ತತ್ವಜ್ಞಾನ, ವಿಜ್ಞಾನಕ್ಕೆ ಸಂಬಂಧಪಟ್ಟ ಪುಸ್ತಕಗಳು ಇಷ್ಟೊಂದು ವಿತರಣೆ ಆಗುವುದಿಲ್ಲ. ಅವುಗಳಲ್ಲಿರುವ ಮಾಹಿತಿ ಸಹ ಬೇಗ ಹಳೆಯದಾಗಿ ಹೋಗುತ್ತದೆ.

  • ಬೈಬಲು ಭಾಷಾಂತರ ಆದದ್ದರಿಂದ ಕೆಲವು ಭಾಷೆಗಳು ಇಂದಿನ ತನಕ ಉಳಿದಿವೆ. ಇದರಿಂದ ಅಂಥ ಭಾಷೆಗಳನ್ನು ಉತ್ತಮಗೊಳಿಸಲೂ ಸಾಧ್ಯವಾಗಿದೆ. ಉದಾಹರಣೆಗೆ ಮಾರ್ಟಿನ್‌ ಲೂಥರ್‌ರವರು ಜರ್ಮನ್‌ ಭಾಷೆಗೆ ಬೈಬಲನ್ನು ಅನುವಾದ ಮಾಡಿದ್ದು ಆ ಭಾಷೆ ಮೇಲೆ ದೊಡ್ಡ ಪ್ರಭಾವ ಬೀರಿತು. ಕಿಂಗ್‌ ಜೇಮ್ಸ್ ವರ್ಷನ್‌ನ ಮೊದಲನೇ ಆವೃತ್ತಿಯನ್ನು “ಇಂದಿನ ವರೆಗೆ [ಇಂಗ್ಲಿಷ್‌ ಭಾಷೆಯಲ್ಲಿ] ಮುದ್ರಣ ಆಗಿರುವ ಪುಸ್ತಕಗಳಲ್ಲೇ ಅತ್ಯಂತ ಪ್ರಭಾವಶಾಲಿ ಪುಸ್ತಕ” ಎಂದು ಕರೆಯಲಾಗುತ್ತದೆ.

  • ಪಾಶ್ಚಾತ್ಯ ದೇಶಗಳ ಸಂಸ್ಕೃತಿಯ ಮೇಲೂ ಬೈಬಲ್‌ ದೊಡ್ಡ ಪ್ರಭಾವ ಬೀರಿದೆ. ಅವರ ಧಾರ್ಮಿಕ ನಂಬಿಕೆಗಳು ಆಚರಣೆಗಳು ಮಾತ್ರವಲ್ಲ ಅವರ ಸಾಹಿತ್ಯ, ಕಲೆ, ಕಾನೂನು, ರಾಜಕೀಯ ಮತ್ತು ಇನ್ನೂ ಅನೇಕ ವಿಷಯಗಳು ಬೈಬಲಿನ ಮೇಲೆ ಆಧರಿಸಿದೆ.—ದಿ ಆಕ್ಸ್‌ಫರ್ಡ್‌ ಎನ್‌ಸೈಕ್ಲೊಪೀಡಿಯ ಆಫ್‌ ದ ಬುಕ್ಸ್‌ ಆಫ್‌ ದ ಬೈಬಲ್‌.

ಇವೆಲ್ಲಾ ಬೈಬಲಿನ ಬಗ್ಗೆ ಇರುವ ನಿಜಾಂಶಗಳಲ್ಲಿ ಕೆಲವು ಅಷ್ಟೆ. ಆದರೆ ಬೈಬಲ್‌ ಯಾಕಷ್ಟು ಪ್ರಸಿದ್ಧ? ಬೈಬಲಿಗಾಗಿ ಜನ ತಮ್ಮ ಜೀವವನ್ನೇ ಪಣಕ್ಕೊಡ್ಡಿದ್ದಾರೆ. ಅಂಥದ್ದೇನಿದೆ ಅದರಲ್ಲಿ? ನಾವು ಹೇಗೆ ಜೀವಿಸಬೇಕು, ದೇವರ ಜೊತೆ ಸ್ನೇಹ ಬೆಳೆಸಿಕೊಳ್ಳುವುದು ಹೇಗೆ ಎಂಬ ಮುತ್ತಿನಂಥ ಮಾತುಗಳು ಬೈಬಲಿನಲ್ಲಿವೆ. ಇವತ್ತು ನಮ್ಮೆಲ್ಲ ಕಷ್ಟಸಂಕಟಗಳಿಗೆ, ಜನರ ಮಧ್ಯೆ ಇರುವ ಕಚ್ಚಾಟಕ್ಕೆ ಮೂಲ ಕಾರಣ ಏನೆಂದು ತಿಳಿಸುವುದು ಬೈಬಲ್‌ ಮಾತ್ರ. ಅಷ್ಟೇ ಅಲ್ಲ ಇವಕ್ಕೆಲ್ಲ ಒಂದು ಕೊನೆ ಇದೆ ಮತ್ತು ಅದು ಹೇಗೆ ಬರುತ್ತದೆ ಅಂತನೂ ತಿಳಿಸುತ್ತದೆ.

ಬೈಬಲ್‌—ನೈತಿಕ ಮತ್ತು ಆಧ್ಯಾತ್ಮಿಕ ವಿಷಯಗಳ ಮಾರ್ಗದರ್ಶಿ

ಶಿಕ್ಷಣ ಪ್ರಾಮುಖ್ಯ. ಅದು ಎಲ್ಲರಿಗೂ ಬೇಕು. ಆದರೆ ‘ಹೆಸರಿನ ಹಿಂದೆ ಒಂದು ಡಿಗ್ರಿ ಇದೆ ಅಂದ ಮಾತ್ರಕ್ಕೆ ಜೀವನದಲ್ಲಿ ಯಾವಾಗಲೂ ಜನ ಒಳ್ಳೇ ಕೆಲಸಾನೇ ಮಾಡ್ತಾರೆ ಅಂತಲ್ಲ’ ಎಂದು ಒಟಾವಾ ಸಿಟಿಜೆನ್‌ ಎಂಬ ಕೆನಡಾ ವಾರ್ತಾಪತ್ರಿಕೆಯ ಪತ್ರಕರ್ತನೊಬ್ಬ ಹೇಳುತ್ತಾನೆ. ಚೆನ್ನಾಗಿ ಓದಿರುವ ವ್ಯಕ್ತಿಗಳು, ವ್ಯಾಪಾರೋದ್ಯಮಿಗಳು, ರಾಜಕೀಯ ಧುರೀಣರು ಮೋಸ ವಂಚನೆ ಕಳ್ಳತನದಂಥ ನೀಚ ಕೆಲಸಗಳನ್ನು ಮಾಡುತ್ತಿರುವುದರಿಂದ “ಜನರು ಅವರ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ” ಎಂದು ಇಡಲ್‍ಮೆನ್‌ ಎಂಬ ಸಾರ್ವಜನಿಕ ಸಂಪರ್ಕ ಸಂಸ್ಥೆ ಮಾಡಿದ ಅಧ್ಯಯನ ತಿಳಿಸುತ್ತದೆ.

ಬೈಬಲ್‌ ಮುಖ್ಯವಾಗಿ ನೈತಿಕ ಮತ್ತು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಕಲಿಸುತ್ತದೆ. ಅದು ‘ನೀತಿನ್ಯಾಯಗಳನ್ನು ಮತ್ತು ಸಕಲ ಸನ್ಮಾರ್ಗಗಳನ್ನು’ ತಿಳಿದುಕೊಳ್ಳಲು ಸಹಾಯಮಾಡುತ್ತದೆ. (ಜ್ಞಾನೋಕ್ತಿ 2:9) ಪೋಲೆಂಡ್‍ನ ಜೈಲಿನಲ್ಲಿದ್ದ 23 ವಯಸ್ಸಿನ ಸ್ಟೀಫನ್‌ಗೆ ಬೈಬಲ್‌ ಹೇಗೆ ಸಹಾಯಮಾಡಿತೆಂದು ನೋಡಿ. ಅಲ್ಲಿ ಅವರಿಗೆ ಬೈಬಲ್‌ ಕಲಿಯಲು ಅವಕಾಶ ಸಿಕ್ಕಿತು. ಕಲಿಯುತ್ತಾ ಹೋದಂತೆ ಬೈಬಲಿನಲ್ಲಿರುವ ಪ್ರಾಯೋಗಿಕ ಸಲಹೆಗಳು ಅವರಿಗೆ ತುಂಬ ಇಷ್ಟ ಆಯಿತು. ಸ್ಪೀಫನ್‌ ಹೀಗಂದರು: “ತಂದೆ ತಾಯಿಯನ್ನು ಗೌರವಿಸುವುದು ಅಂದರೇನು ಅಂತ ಈಗ ನಂಗೆ ಅರ್ಥ ಆಗುತ್ತಿದೆ. ಮೊದಲು ನಂಗೆ ಸಕ್ಕತ್‌ ಕೋಪ ಬರುತ್ತಿತ್ತು. ಅದನ್ನು ಹತೋಟಿಯಲ್ಲಿಡೋದನ್ನು ಸಹ ನಾನೀಗ ಕಲಿತಿದ್ದೀನಿ.”—ಎಫೆಸ 4:31; 6:2.

ಜ್ಞಾನೋಕ್ತಿ 19:11ರಲ್ಲಿರುವ ಮಾತು ಸ್ಟೀಫನ್‌ಗೆ ತುಂಬ ಸಹಾಯಮಾಡಿತು. ಅದು ಹೇಳುತ್ತೆ “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; [ಪರರ] ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.” ಸಿಟ್ಟೆಬ್ಬಿಸೋ ಸನ್ನಿವೇಶ ಎದುರಾದಾಗ ಸ್ಟೀಫನ್‌ ಏನು ಮಾಡುತ್ತಾರೆ ಗೊತ್ತಾ? ಮೊದಲು ಅದರ ಬಗ್ಗೆ ಸಮಾಧಾನದಿಂದ ಯೋಚಿಸುತ್ತಾರೆ, ಆಮೇಲೆ ಬೈಬಲ್‌ ಹೇಳುವ ಹಾಗೆ ನಡಿಯಲಿಕ್ಕೆ ಪ್ರಯತ್ನಿಸುತ್ತಾರೆ. “ಬೈಬಲಿನಂಥ ಅತ್ಯುತ್ತಮ ಮಾರ್ಗದರ್ಶಿ ಬೇರೊಂದಿಲ್ಲ” ಅಂತ ಸ್ಪೀಫನ್‌ ಹೇಳುತ್ತಾರೆ.

ಯೆಹೋವನ ಸಾಕ್ಷಿಗಳ ಬಗ್ಗೆ ತಪ್ಪಭಿಪ್ರಾಯ ಇದ್ದ ಸ್ತ್ರೀಯೊಬ್ಬಳು ಮರಿಯಾ ಎಂಬ ಸಹೋದರಿಯನ್ನು ಒಮ್ಮೆ ಎಲ್ಲರ ಮುಂದೆ ಬೈದುಬಿಟ್ಟಳು. ಆದರೆ ಮರಿಯಾ ಸಿಟ್ಟುಮಾಡಿಕೊಳ್ಳದೆ ಸಮಾಧಾನದಿಂದ ಹೋಗಿಬಿಟ್ಟರು. ತಾನು ನಡಕೊಂಡ ರೀತಿ ನೆನಸಿ ಆಮೇಲೆ ಆ ಸ್ತ್ರೀಗೆ ತುಂಬ ಬೇಜಾರಾಯಿತು. ಹಾಗಾಗಿ ಅವಳು ಯೆಹೋವನ ಸಾಕ್ಷಿಗಳಿಗಾಗಿ ಹುಡುಕಲು ಶುರುಮಾಡಿದಳು. ಸುಮಾರು ಒಂದು ತಿಂಗಳಾದ ಮೇಲೆ ಮರಿಯಾ ಸಿಕ್ಕಿದಾಗ ಆ ಸ್ತ್ರೀ ಅವರನ್ನು ಅಪ್ಪಿಕೊಂಡು ಕ್ಷಮೆ ಕೇಳಿದಳು. ಮರಿಯಾ ಯೆಹೋವನ ಸಾಕ್ಷಿ ಆಗಿರುವುದರಿಂದಲೇ ಸಿಟ್ಟುಮಾಡಿಕೊಳ್ಳದೆ ತಾಳ್ಮೆ ತೋರಿಸಿದ್ದು ಅಂತ ಆ ಸ್ತ್ರೀಗೆ ಗೊತ್ತಾಯಿತು. ನಂತರ ಸಾಕ್ಷಿಗಳ ಬಗ್ಗೆ ತಪ್ಪಭಿಪ್ರಾಯ ಇದ್ದ ಆ ಸ್ತ್ರೀ ಮತ್ತು ಅವಳ ಕುಟುಂಬದ 5 ಮಂದಿ ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯಲು ಶುರುಮಾಡಿದರು.

ವಿವೇಕ ಕ್ರಿಯೆಗಳ ಮೂಲಕ ಸಾಬೀತಾಗುತ್ತದೆ ಎಂದು ಯೇಸು ಹೇಳಿದ. (ಲೂಕ 7:35) ಇಂಥ ವಿವೇಕ ಬೈಬಲಿನಲ್ಲಿದೆ. ಬೈಬಲ್‌ ನಮ್ಮನ್ನು ಒಳ್ಳೇ ವ್ಯಕ್ತಿಯನ್ನಾಗಿ ಮಾಡುತ್ತದೆ. ‘ಬುದ್ಧಿಹೀನರನ್ನು ವಿವೇಕಿಗಳನ್ನಾಗಿ’ ಮಾಡುತ್ತದೆ. ‘ಮನಸ್ಸನ್ನು ಹರ್ಷಪಡಿಸುತ್ತದೆ.’ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣ ಕೊಟ್ಟು ನಮ್ಮ “ಕಣ್ಣುಗಳನ್ನು ಕಳೆಗೊಳಿಸುತ್ತದೆ.”—ಕೀರ್ತನೆ 19:7, 8

ಬೈಬಲ್‌—ಮಾನವರ ಕಷ್ಟಸಂಕಟ ಮತ್ತು ಕಚ್ಚಾಟಕ್ಕೆ ಕಾರಣ ತಿಳಿಸುತ್ತದೆ

ಒಂದು ಸೋಂಕುರೋಗ ಯಾಕೆ ಹರಡುತ್ತಿದೆ ಅಂತ ತಿಳುಕೊಳ್ಳಬೇಕಾದರೆ ಅದು ಎಲ್ಲಿಂದ ಶುರುವಾಯಿತು ಎಂದು ಕಂಡುಹಿಡಿಯಬೇಕು. ಮಾನವ ಕಷ್ಟಸಂಕಟ ಮತ್ತು ಕಚ್ಚಾಟದ ವಿಷಯದಲ್ಲೂ ಇದು ಸತ್ಯ. ನಾವು ಯಾಕೆ ಕಷ್ಟಗಳನ್ನು ಅನುಭವಿಸುತ್ತಿದ್ದೇವೆ ಎಂದು ತಿಳುಕೊಳ್ಳಬೇಕಾದರೆ ಮೊದಲು ಅದು ಎಲ್ಲಿಂದ ಶುರುವಾಯಿತು ಅಂತ ತಿಳುಕೊಳ್ಳಬೇಕು. ನಮ್ಮ ಸಮಸ್ಯೆಗಳು 6,000 ವರ್ಷಗಳ ಹಿಂದೆ ಆರಂಭವಾದವು ಎಂದು ಬೈಬಲ್‌ ತಿಳಿಸುತ್ತದೆ.

ಮೊದಲ ಮಾನವ ದಂಪತಿ ದೇವರ ಮಾತು ಕೇಳದೇ ಹೋದರು. ಇದೇ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಬೈಬಲ್‌ ತಿಳಿಸುತ್ತದೆ. ಯಾವುದು ಒಳ್ಳೇದು, ಯಾವುದು ಕೆಟ್ಟದ್ದು ಎಂದು ನಿರ್ಧಾರ ಮಾಡುವುದು ದೇವರ ಕೆಲಸ. ಇದನ್ನು ತಾವೇ ಮಾಡಲು ಹೋದ ಕಾರಣ ಸಮಸ್ಯೆಗಳು ಪ್ರಾರಂಭವಾದವು. (ಆದಿಕಾಂಡ 3:1-7) ಅಂದಿನಿಂದ ಇಂದಿನ ತನಕ ಜನರ ಮನೋಭಾವ ಬದಲಾಗಿಲ್ಲ. ಇದರಿಂದ ಮಾನವನ ಚರಿತ್ರೆ ಬರೀ ಕಷ್ಟ ಸಂಕಟ ನೋವಿನಿಂದ ತುಂಬಿದೆ. (ಪ್ರಸಂಗಿ 8:9) ಅದಕ್ಕೇ “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ” ಎಂದು ಬೈಬಲ್ ಹೇಳುತ್ತೆ. (ಯೆರೆಮಿಾಯ 10:23) ಆದರೆ ಸಂತೋಷದ ವಿಷಯ ಏನೆಂದರೆ ಮಾನವರು ಎದುರಿಸುತ್ತಿರುವ ಸಮಸ್ಯೆಗಳು ಹೆಚ್ಚು ಸಮಯ ಮುಂದುವರಿಯಲ್ಲ.

ಬೈಬಲ್‌—ನಿರೀಕ್ಷೆ ಕೊಡುತ್ತದೆ

ದೇವರು ಈ ಎಲ್ಲ ಕೆಟ್ಟತನವನ್ನು ಸಹಿಸುತ್ತಾ ಇರಲ್ಲ. ತನ್ನ ಅಧಿಕಾರ ಮತ್ತು ಮೌಲ್ಯಗಳನ್ನು ಗೌರವಿಸುವ ಜನರನ್ನು ದೇವರು ಪ್ರೀತಿಸುವುದರಿಂದ ಬೇಗನೇ ಎಲ್ಲ ಸಮಸ್ಯೆಗಳನ್ನು ತೆಗೆದುಹಾಕುತ್ತಾನೆ ಎಂದು ಬೈಬಲ್‌ ಹೇಳುತ್ತದೆ. ಕೆಟ್ಟ ಜನರು ಖಂಡಿತ ‘ತಮ್ಮ ನಡತೆಯ ಫಲವನ್ನು ಅನುಭವಿಸುವರು.’ (ಜ್ಞಾನೋಕ್ತಿ 1:30, 31) ಆದರೆ “ದೀನರು” ಅಂದರೆ ಒಳ್ಳೆಯವರು “ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:11.

“ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು ಎಂಬುದು [ದೇವರ] ಚಿತ್ತ.”—1 ತಿಮೊಥೆಯ 2:3, 4

ಈ ಭೂಮಿ ಶಾಂತಿಯಿಂದ ತುಂಬಿರಬೇಕು ಅನ್ನೋದು ದೇವರ ಉದ್ದೇಶ. ದೇವರು ತನ್ನ ರಾಜ್ಯ ಅಥವಾ ಸರ್ಕಾರದ ಮೂಲಕ ಈ ಉದ್ದೇಶವನ್ನು ಪೂರೈಸುತ್ತಾನೆ. (ಲೂಕ 4:43) ಈ ಸರ್ಕಾರ ಮುಂದೆ ಇಡೀ ಲೋಕವನ್ನು ಆಳುತ್ತದೆ. ಮಾನವರನ್ನು ಆಳುವ ಹಕ್ಕು ತನಗೆ ಮಾತ್ರ ಇದೆ ಎಂದು ದೇವರು ಈ ಸರ್ಕಾರದ ಮೂಲಕ ತೋರಿಸಿಕೊಡುವನು. ದೇವರ ಸರ್ಕಾರಕ್ಕೂ ಭೂಮಿಗೂ ಇರುವ ಸಂಬಂಧದ ಬಗ್ಗೆ ಮಾತಾಡುತ್ತಾ ಯೇಸು ತನ್ನ ಮಾದರಿ ಪ್ರಾರ್ಥನೆಯಲ್ಲಿ ಹೀಗೆ ಹೇಳಿದನು: ‘ನಿನ್ನ ಚಿತ್ತ ಭೂಮಿಯಲ್ಲಿ ನೆರವೇರಲಿ.’—ಮತ್ತಾಯ 6:10.

ದೇವರ ಸರ್ಕಾರದ ಪ್ರಜೆಗಳು ದೇವರು ಬಯಸುವುದನ್ನೇ ಮಾಡುತ್ತಾರೆ. ದೇವರೇ ಭೂಮಿಯನ್ನು ಆಳಲು ಸರಿಯಾದ ನಾಯಕ ಎಂದು ಒಪ್ಪುತ್ತಾರೆ. ಭ್ರಷ್ಟಾಚಾರ, ದುರಾಶೆ, ಯುದ್ಧ, ಶ್ರೀಮಂತರು-ಬಡವರು, ಈ ಜಾತಿ-ಆ ಜಾತಿ ಅನ್ನೋ ಭೇದಭಾವ ಆತನ ಸರ್ಕಾರದಲ್ಲಿ ಇರಲ್ಲ. ಆತನ ಆಳ್ವಿಕೆಯಡಿ ಎಲ್ಲರೂ ಒಂದೇ ಕುಟುಂಬದಂತೆ ಜೀವಿಸುತ್ತಾರೆ. ಒಂದೇ ಸರ್ಕಾರ ಇರುತ್ತದೆ. ಒಂದೇ ರೀತಿಯ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳಿರುತ್ತವೆ.—ಪ್ರಕಟನೆ 11:15.

ದೇವರ ಸರ್ಕಾರದ ಪ್ರಜೆಗಳಾಗಬೇಕೆಂದರೆ ನಮಗೆ ಸತ್ಯದ ನಿಷ್ಕೃಷ್ಟ ಜ್ಞಾನ ಬೇಕು. “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು ಎಂಬುದು [ದೇವರ] ಚಿತ್ತವಾಗಿದೆ” ಎಂದು 1 ತಿಮೊಥೆಯ 2:3, 4 ಹೇಳುತ್ತದೆ. ದೇವರ ಸರ್ಕಾರಕ್ಕೆ ಅದರದ್ದೇ ಆದ ಸಂವಿಧಾನ ಇದೆ, ಅಂದರೆ ನೀತಿ ನಿಯಮಗಳಿವೆ. ಯೇಸುವಿನ ಪರ್ವತ ಪ್ರಸಂಗವನ್ನು ಓದುವಾಗ ಈ ಕೆಲವು ನೀತಿ ನಿಯಮಗಳ ಬಗ್ಗೆ ನಮಗೆ ತಿಳಿದುಬರುತ್ತದೆ. (ಮತ್ತಾಯ, 5-7 ಅಧ್ಯಾಯಗಳು) ಈ ಮೂರು ಅಧ್ಯಾಯಗಳಲ್ಲಿರುವ ನೀತಿಸೂತ್ರಗಳಂತೆ ಒಬ್ಬನು ಬದುಕಿದರೆ ಜೀವನ ಎಷ್ಟು ಚೆನ್ನಾಗಿರುತ್ತೆ ಗೊತ್ತಾ!

ಆದ್ದರಿಂದ ಇಡೀ ಲೋಕದಲ್ಲಿ ಅತೀ ಹೆಚ್ಚು ಜನರು ಬಳಸುವ ಪುಸ್ತಕ ಬೈಬಲ್‌ ಅನ್ನುವುದರಲ್ಲಿ ಆಶ್ಚರ್ಯ ಇಲ್ಲ. ಬೈಬಲ್‌ ದೇವರ ಸಹಾಯದಿಂದ ಬರೆಯಲಾದ ಪುಸ್ತಕ ಅಂತ ಅದರಲ್ಲಿರುವ ವಿಷಯಗಳಿಂದಲೇ ಗೊತ್ತಾಗುತ್ತದೆ. ಇಷ್ಟೊಂದು ಜನರ ಕೈಗೆ ಬೈಬಲ್‌ ಸಿಗುವಂತೆ ದೇವರು ಯಾಕೆ ಮಾಡಿದ್ದಾನೆ ಗೊತ್ತಾ? ಎಲ್ಲ ಭಾಷೆಯ, ಎಲ್ಲ ರೀತಿಯ ಜನರು ತನ್ನ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ತನ್ನ ಸರ್ಕಾರದಿಂದ ಸಿಗುವ ಆಶೀರ್ವಾದಗಳನ್ನು ಪಡೆದುಕೊಳ್ಳಬೇಕು ಎಂದು ಆತನು ಬಯಸುವುದರಿಂದಲೇ.—ಅಪೊಸ್ತಲರ ಕಾರ್ಯಗಳು 10:34, 35. ▪ (g16-E No. 2)