ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 11

ಮೊದಲ ಮುಗಿಲುಬಿಲ್ಲು

ಮೊದಲ ಮುಗಿಲುಬಿಲ್ಲು

ನೋಹ ಮತ್ತು ಅವನ ಕುಟುಂಬವು ನಾವೆಯಿಂದ ಹೊರಗೆ ಬಂದಾಗ ಅವನು ಮಾಡಿದ ಮೊದಲ ಕೆಲಸ ಏನೆಂದು ನಿಮಗೆ ಗೊತ್ತೋ? ಅವನು ದೇವರಿಗೆ ಒಂದು ಯಜ್ಞವನ್ನು ಅರ್ಪಿಸಿದನು ಅಂದರೆ ಕಾಣಿಕೆಯನ್ನು ಕೊಟ್ಟನು. ಅವನಿದನ್ನು ಮಾಡುವುದನ್ನು ಕೆಳಗಿನ ಚಿತ್ರದಲ್ಲಿ ನೀವು ಕಾಣಬಲ್ಲಿರಿ. ಮಹಾ ಜಲಪ್ರಳಯದಿಂದ ಅವನನ್ನು ಮತ್ತು ಅವನ ಕುಟುಂಬವನ್ನು ರಕ್ಷಿಸಿದಕ್ಕಾಗಿ ದೇವರಿಗೆ ಕೃತಜ್ಞತೆ ಹೇಳಲು ನೋಹನು ಈ ಪ್ರಾಣಿಗಳನ್ನು ಕಾಣಿಕೆಯಾಗಿ ಅರ್ಪಿಸಿದನು.

ಯೆಹೋವನು ಆ ಕಾಣಿಕೆಯನ್ನು ಮೆಚ್ಚಿದನೆಂದು ನೀವು ನೆನಸುತ್ತೀರೋ? ಹೌದು, ಆತನು ಮೆಚ್ಚಿದನು. ಮಾತ್ರವಲ್ಲ, ತಾನು ಪುನಃ ಎಂದೂ ಲೋಕವನ್ನು ಜಲಪ್ರಳಯದಿಂದ ನಾಶಮಾಡುವುದಿಲ್ಲವೆಂದು ನೋಹನಿಗೆ ವಚನಕೊಟ್ಟನು.

ಬೇಗನೆ ನೆಲವೆಲ್ಲವೂ ಒಣಗಿಬಿಟ್ಟಿತು. ನೋಹ ಮತ್ತು ಅವನ ಕುಟುಂಬದವರು ನಾವೆಯ ಹೊರಗೆ ಒಂದು ಹೊಸ ಜೀವಿತವನ್ನು ಪ್ರಾರಂಭಿಸಿದರು. ದೇವರು ಅವರನ್ನು ಆಶೀರ್ವದಿಸಿ, ‘ನೀವು ತುಂಬ ಮಕ್ಕಳನ್ನು ಪಡೆದು ಭೂಮಿಯಲ್ಲೆಲ್ಲಾ ಜನರು ವಾಸಿಸುವಂತಾಗುವ ಹಾಗೆ ವೃದ್ಧಿಯಾಗಿರಿ’ ಎಂದು ಹೇಳಿದನು.

ಆದರೆ ಮುಂದೆ, ಆ ಮಹಾ ಜಲಪ್ರಳಯದ ಕುರಿತು ಜನರು ಕೇಳುವಾಗ ಅಂಥ ಒಂದು ಪ್ರಳಯವು ಪುನಃ ಸಂಭವಿಸಬಹುದೆಂದು ಹೆದರಬಹುದು. ಆದುದರಿಂದ ಇಡೀ ಭೂಮಿಯನ್ನೆಂದೂ ಜಲಪ್ರಳಯದಿಂದ ಮುಳುಗಿಸೆನೆಂಬ ತನ್ನ ವಾಗ್ದಾನವನ್ನು ಜನರಿಗೆ ನೆನಪಿಸುವ ಏನನ್ನೋ ದೇವರು ಕೊಟ್ಟನು. ಏನೆಂದು ನಿಮಗೆ ಗೊತ್ತಿದೆಯೇ? ಅದು ಒಂದು ಮುಗಿಲುಬಿಲ್ಲು ಆಗಿತ್ತು.

ಮಳೆ ಬಂದ ಮೇಲೆ ಸೂರ್ಯನು ಪ್ರಕಾಶಿಸುವಾಗ ಮುಗಿಲುಬಿಲ್ಲು ಅನೇಕ ಸಲ ಆಕಾಶದಲ್ಲಿ ಕಂಡುಬರುತ್ತದೆ. ಮುಗಿಲುಬಿಲ್ಲುಗಳು ಅನೇಕ ಸುಂದರವಾದ ಬಣ್ಣಗಳಿಂದ ಕೂಡಿರುತ್ತವೆ. ನೀವೆಂದಾದರೂ ಅದನ್ನು ನೋಡಿದ್ದೀರೋ? ಚಿತ್ರದಲ್ಲಿ ಅದನ್ನು ನೀವು ನೋಡುತ್ತೀರೋ?

ದೇವರು ಹೀಗೆ ಹೇಳಿದನು: ‘ಪುನಃ ಎಂದಿಗೂ ಜನರೂ ಪ್ರಾಣಿಗಳೂ ಜಲಪ್ರಳಯದಿಂದ ನಾಶವಾಗುವುದಿಲ್ಲವೆಂದು ನಾನು ವಚನ ಕೊಡುತ್ತೇನೆ. ನಾನು ಮುಗಿಲುಬಿಲ್ಲನ್ನು ಮೇಘಗಳಲ್ಲಿ ಇಡುತ್ತಿದ್ದೇನೆ. ಮುಗಿಲುಬಿಲ್ಲು ಕಾಣಬರುವಾಗ ನಾನು ಅದನ್ನು ನೋಡುವೆನು ಮತ್ತು ನಾನು ಮಾಡಿದ ವಾಗ್ದಾನವನ್ನು ಜ್ಞಾಪಕಮಾಡಿಕೊಳ್ಳುವೆನು.’

ಹೀಗೆ ನೀವು ಒಂದು ಮುಗಿಲುಬಿಲ್ಲನ್ನು ನೋಡುವಾಗ ಅದು ನಿಮಗೆ ಏನನ್ನು ಜ್ಞಾಪಕಕ್ಕೆ ತರಬೇಕು? ಹೌದು, ಒಂದು ಮಹಾ ಜಲಪ್ರಳಯದಿಂದ ಪುನಃ ಲೋಕವನ್ನೆಂದೂ ನಾಶಮಾಡೇನೆಂದು ದೇವರು ಕೊಟ್ಟ ವಾಗ್ದಾನವನ್ನೇ.