ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 34

ಹೊಸ ವಿಧದ ಆಹಾರ

ಹೊಸ ವಿಧದ ಆಹಾರ

ಜನರು ನೆಲದಿಂದ ಏನನ್ನು ಹೆಕ್ಕುತ್ತಿದ್ದಾರೆಂದು ನೀವು ಹೇಳಬಲ್ಲಿರೋ? ಅದು ಹಿಮದ ಅರಳುಗಳಂತೆ ಇದೆ. ಬೆಳ್ಳಗೆ, ಚಿಕ್ಕ ಚಿಕ್ಕ ಪರೆಗಳಂತೆಯೂ ಇದೆ. ಆದರೆ ಅದು ನಿಜವಾಗಿಯೂ ಹಿಮದ ಅರಳುಗಳಲ್ಲ, ತಿನ್ನುವಂಥ ವಸ್ತು.

ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟು ಸುಮಾರು ಒಂದು ತಿಂಗಳು ಮಾತ್ರ ದಾಟಿದೆ. ಅವರು ಅರಣ್ಯದಲ್ಲಿದ್ದಾರೆ. ಅಲ್ಲಿ ದವಸಧಾನ್ಯಗಳು ಬೆಳೆಯುವುದಿಲ್ಲ. ಆದುದರಿಂದ ಜನರು ದೂರುತ್ತಾ ಅನ್ನುವುದು: ‘ಯೆಹೋವನು ನಮ್ಮನ್ನು ಐಗುಪ್ತದಲ್ಲೇ ಸಾಯಿಸಿದ್ದರೆ ಎಷ್ಟು ಒಳ್ಳೇದಿತ್ತು. ಅಲ್ಲಿ ಬೇಕಾದ ಆಹಾರವೆಲ್ಲಾ ಸಿಗುತ್ತಿತ್ತಲ್ಲಾ.’

ಅವರು ಹಾಗೆ ಗುಣುಗುಟ್ಟಿದ್ದರಿಂದ ಯೆಹೋವನು, ‘ನಾನು ಆಕಾಶದಿಂದ ಆಹಾರವು ಮಳೆಗರೆಯುವಂತೆ ಮಾಡುತ್ತೇನೆ’ ಎಂದು ಹೇಳುತ್ತಾನೆ. ಮತ್ತು ಹಾಗೆಯೇ ಮಾಡುತ್ತಾನೆ. ಮರುದಿನ ಮುಂಜಾನೆ ನೆಲದಲ್ಲಿ ಬಿದ್ದಿರುವ ಬೆಳ್ಳಗಿನ ಚಿಕ್ಕ ಚಿಕ್ಕ ಪರೆಗಳನ್ನು ಇಸ್ರಾಯೇಲ್ಯರು ಕಂಡಾಗ ಒಬ್ಬರಿಗೊಬ್ಬರು, ‘ಇದೇನಿರಬಹುದು?’ ಎಂದು ಕೇಳುತ್ತಾರೆ.

‘ಇದು ಯೆಹೋವನು ನಿಮಗೋಸ್ಕರ ಕೊಟ್ಟ ಆಹಾರ’ ಎಂದು ಮೋಶೆ ಹೇಳುತ್ತಾನೆ. ಜನರು ಅದಕ್ಕೆ ಮನ್ನ ಎಂದು ಹೆಸರಿಡುತ್ತಾರೆ. ಅದರ ರುಚಿಯು ಜೇನುತುಪ್ಪ ಕಲಸಿದ ತೆಳ್ಳಗಿನ ದೋಸೆಗಳಂತೆ ಇದೆ.

‘ಒಬ್ಬೊಬ್ಬನು ತಿನ್ನುವಷ್ಟನ್ನು ಮಾತ್ರ ನೀವು ಹೆಕ್ಕಬೇಕು’ ಎನ್ನುತ್ತಾನೆ ಮೋಶೆ ಜನರಿಗೆ. ಪ್ರತಿದಿನ ಬೆಳಗ್ಗೆ ಅವರು ಹಾಗೆಯೇ ಮಾಡುತ್ತಾರೆ. ಅನಂತರ ಬಿಸಿಲು ಹೆಚ್ಚಾದಾಗ ನೆಲದಲ್ಲಿ ಉಳಿದಿರುವ ಮನ್ನ ಕರಗಿಹೋಗುತ್ತದೆ.

ಮೋಶೆಯು ಇದನ್ನೂ ಹೇಳುತ್ತಾನೆ: ‘ಯಾರೂ ಮನ್ನವನ್ನು ಮಾರಣೆಯ ದಿನದ ತನಕ ಇಟ್ಟುಕೊಳ್ಳಬಾರದು.’ ಆದರೆ ಕೆಲವರು ಅದನ್ನು ಕಿವಿಗೆಹಾಕಿಕೊಳ್ಳುವುದಿಲ್ಲ. ಆಗ ಏನಾಗುತ್ತದೆಂದು ನಿಮಗೆ ಗೊತ್ತೋ? ಅವರು ಉಳಿಸಿಟ್ಟ ಮನ್ನ ಮಾರಣೆ ದಿನ ಹುಳಬಿದ್ದು ನಾತಹಿಡಿದು ಕೆಟ್ಟುಹೋಗುತ್ತದೆ!

ಆದರೂ, ವಾರದ ಒಂದು ದಿನ ಮಾತ್ರ ಜನರು ಎರಡರಷ್ಟು ಮನ್ನವನ್ನು ಒಟ್ಟುಗೂಡಿಸುವಂತೆ ಯೆಹೋವನು ಹೇಳುತ್ತಾನೆ. ಅದು ಆರನೆಯ ದಿನ. ಅದರಲ್ಲಿ ಸ್ವಲ್ಪವನ್ನು ಮರುದಿನಕ್ಕಾಗಿ ಉಳಿಸಿಕೊಳ್ಳುವಂತೆ ಯೆಹೋವನು ತಿಳಿಸುತ್ತಾನೆ. ಏಕೆಂದರೆ ಏಳನೆಯ ದಿನದಲ್ಲಿ ಆತನು ಆಕಾಶದಿಂದ ಮನ್ನವನ್ನು ಬೀಳುವಂತೆ ಮಾಡುವುದಿಲ್ಲ. ಅವರು ಏಳನೆಯ ದಿನಕ್ಕಾಗಿ ಮನ್ನವನ್ನು ಇಟ್ಟುಕೊಂಡಾಗ, ಅದು ನಾರಲಿಲ್ಲ ಹುಳವೂ ಬೀಳಲಿಲ್ಲ! ಇದು ಇನ್ನೊಂದು ಅದ್ಭುತ!

ಇಸ್ರಾಯೇಲ್ಯರು ಅರಣ್ಯದಲ್ಲಿರುವ ವರ್ಷಗಳಲ್ಲೆಲ್ಲಾ ಯೆಹೋವನು ಅವರಿಗೆ ಮನ್ನವನ್ನು ಕೊಟ್ಟು ಪೋಷಿಸುತ್ತಾನೆ.