ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 42

ಕತ್ತೆ ಮಾತಾಡುತ್ತದೆ

ಕತ್ತೆ ಮಾತಾಡುತ್ತದೆ

 ತ್ತೆ ಮಾತಾಡಿದ್ದನ್ನು ಎಂದಾದರೂ ನೀವು ಕೇಳಿದ್ದೀರೋ? ‘ಇಲ್ಲ, ಪ್ರಾಣಿಗಳು ಮಾತಾಡುವುದಿಲ್ಲವಲ್ಲಾ’ ಎಂದು ನೀವು ಹೇಳಬಹುದು. ಆದರೆ ಒಂದು ಕತ್ತೆ ಮಾತಾಡಿದ್ದರ ಕುರಿತು ಬೈಬಲ್‌ ಹೇಳುತ್ತದೆ. ಅದು ಹೇಗೆಂದು ನಾವು ನೋಡೋಣ.

ಇಸ್ರಾಯೇಲ್ಯರು ಕಾನಾನ್‌ ದೇಶದೊಳಗೆ ಹೋಗಲು ಸಿದ್ಧರಾಗಿರುತ್ತಾರೆ. ಮೋವಾಬಿನ ಅರಸ ಬಾಲಾಕನು ಇಸ್ರಾಯೇಲ್ಯರಿಗೆ ಹೆದರುತ್ತಾನೆ. ಆದುದರಿಂದ ಇಸ್ರಾಯೇಲ್ಯರನ್ನು ಶಪಿಸುವುದಕ್ಕಾಗಿ ಬಿಳಾಮನೆಂಬ ಒಬ್ಬ ಚತುರ ಪುರುಷನನ್ನು ಅವನು ಕರೇಕಳುಹಿಸುತ್ತಾನೆ. ಮಾತ್ರವಲ್ಲ, ಬಿಳಾಮನಿಗೆ ತುಂಬಾ ಹಣ ಕೊಡುವುದಾಗಿ ಸಹ ಬಾಲಾಕನು ಮಾತುಕೊಡುತ್ತಾನೆ. ಆದ್ದರಿಂದ ಬಿಳಾಮನು ತನ್ನ ಕತ್ತೆಯನ್ನೇರಿ ಬಾಲಾಕನನ್ನು ನೋಡಲು ಹೊರಡುತ್ತಾನೆ.

ತನ್ನ ಜನರನ್ನು ಬಿಳಾಮನು ಶಪಿಸುವುದು ಯೆಹೋವನಿಗೆ ಇಷ್ಟವಿಲ್ಲ. ಆದುದರಿಂದ ಬಿಳಾಮನನ್ನು ದಾರಿಯಲ್ಲಿ ತಡೆದು ನಿಲ್ಲಿಸಲಿಕ್ಕಾಗಿ ಉದ್ದವಾದ ಕತ್ತಿಯನ್ನು ಹಿಡಿದುಕೊಂಡ ಒಬ್ಬ ದೇವದೂತನನ್ನು ಕಳುಹಿಸುತ್ತಾನೆ. ಬಿಳಾಮನಿಗೆ ದೇವದೂತನು ಕಾಣಿಸುವುದಿಲ್ಲ. ಆದರೆ ಕತ್ತೆಗೆ ಕಾಣಿಸುತ್ತದೆ. ಆದುದರಿಂದ ಕತ್ತೆಯು ದೇವದೂತನಿಂದ ದೂರ ಸರಿಯಲು ಪ್ರಯತ್ನಿಸುತ್ತಾ, ಕೊನೆಗೆ ದಾರಿಯಲ್ಲೇ ಮಲಗಿಬಿಡುತ್ತದೆ. ಬಿಳಾಮನು ಬಹಳ ಕೋಪಗೊಂಡು ತನ್ನ ಕತ್ತೆಯನ್ನು ಕೋಲಿನಿಂದ ಹೊಡೆಯುತ್ತಾನೆ.

ಆಗ ಬಿಳಾಮನೊಂದಿಗೆ ಮಾತಾಡುವಂತೆ ಯೆಹೋವನು ಕತ್ತೆಗೆ ಶಕ್ತಿಯನ್ನು ಕೊಡುತ್ತಾನೆ. ‘ನೀನು ನನ್ನನ್ನು ಹೀಗೆ ಹೊಡೆಯುವುದೇಕೆ? ನಾನು ನಿನಗೇನು ಮಾಡಿದೆ?’ ಎಂದು ಕೇಳುತ್ತದೆ ಆ ಕತ್ತೆ.

‘ನೀನು ನನ್ನನ್ನು ಮೂರ್ಖನೆಂದು ನೆನಸುತ್ತೀಯೇನು? ನನ್ನ ಕೈಯಲ್ಲೇನಾದರೂ ಕತ್ತಿಯಿದ್ದರೆ ನಿನ್ನನ್ನು ಇಲ್ಲಿಯೇ ಕೊಂದು ಹಾಕಿಬಿಡುತ್ತಿದ್ದೆ!’ ಎನ್ನುತ್ತಾನೆ ಬಿಳಾಮ.

ಆಗ ಕತ್ತೆ, ‘ನಾನು ಹಿಂದೆ ಯಾವಾಗಲಾದರೂ ನಿನಗೆ ಈ ರೀತಿ ಮಾಡಿದ್ದುಂಟೋ?’ ಎಂದು ಕೇಳುತ್ತದೆ.

‘ಇಲ್ಲ’ ಎಂದು ಉತ್ತರಿಸುತ್ತಾನೆ ಬಿಳಾಮ.

ಆಗ ಕತ್ತಿಯನ್ನು ಹಿಡಿದಿದ್ದ ದೇವದೂತನು ದಾರಿಯಲ್ಲಿ ನಿಂತಿರುವುದನ್ನು ಬಿಳಾಮನು ಕಾಣುವಂತೆ ಯೆಹೋವನು ಮಾಡುತ್ತಾನೆ. ದೇವದೂತನು ಅನ್ನುವುದು: ‘ನೀನು ನಿನ್ನ ಕತ್ತೆಯನ್ನು ಹೊಡೆದದ್ದೇಕೆ? ನೀನು ಇಸ್ರಾಯೇಲ್ಯರನ್ನು ಶಪಿಸುವುದಕ್ಕೆ ಹೋಗಬಾರದೆಂದು ತಡೆಯುವುದಕ್ಕಾಗಿ ನಾನು ಬಂದಿರುತ್ತೇನೆ. ನಿನ್ನ ಕತ್ತೆಯು ನನ್ನಿಂದ ದೂರ ಹೋಗದಿದ್ದರೆ, ನಾನು ಆ ಕತ್ತೆಯನ್ನು ಉಳಿಸಿ ನಿನ್ನನ್ನು ಕೊಂದುಬಿಡುತ್ತಿದ್ದೆ.’

ಅದಕ್ಕೆ ಬಿಳಾಮನು, ‘ನಾನು ಪಾಪಮಾಡಿದ್ದೇನೆ. ನೀನು ದಾರಿಯಲ್ಲಿ ನಿಂತಿರುವುದು ನನಗೆ ತಿಳಿದಿರಲಿಲ್ಲ’ ಎಂದು ಹೇಳುತ್ತಾನೆ. ಬಿಳಾಮನು ಹೋಗುವಂತೆ ದೇವದೂತನು ಬಿಡುತ್ತಾನೆ. ಬಾಲಾಕನನ್ನು ನೋಡಲು ಬಿಳಾಮನು ಹೋಗುತ್ತಾನೆ. ಇಷ್ಟಾದರೂ ಅವನು ಇನ್ನೂ ಇಸ್ರಾಯೇಲ್ಯರನ್ನು ಶಪಿಸುವುದಕ್ಕೆ ಪ್ರಯತ್ನಿಸುತ್ತಾನೆ. ಆದರೆ ಅವನು ಇಸ್ರಾಯೇಲ್ಯರನ್ನು ಮೂರು ಬಾರಿಯೂ ಆಶೀರ್ವದಿಸುವಂತೆ ಯೆಹೋವನು ಮಾಡುತ್ತಾನೆ.