ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಮೂರು

ಭೂಮಿಗಾಗಿ ದೇವರ ಉದ್ದೇಶವೇನು?

ಭೂಮಿಗಾಗಿ ದೇವರ ಉದ್ದೇಶವೇನು?
  • ಮಾನವಕುಲಕ್ಕಾಗಿರುವ ದೇವರ ಉದ್ದೇಶವೇನು?

  • ದೇವರ ವಿರುದ್ಧ ಹೇಗೆ ಸವಾಲೊಡ್ಡಲಾಗಿದೆ?

  • ಭವಿಷ್ಯತ್ತಿನಲ್ಲಿ ಭೂಜೀವನವು ಹೇಗಿರುವುದು?

1. ಭೂಮಿಗಾಗಿರುವ ದೇವರ ಉದ್ದೇಶವೇನು?

ಭೂಮಿಗಾಗಿರುವ ದೇವರ ಉದ್ದೇಶವು ನಿಜವಾಗಿಯೂ ಅದ್ಭುತಕರವಾದುದಾಗಿದೆ. ಈ ಭೂಮಿಯು ಸಂತೋಷಭರಿತ, ಆರೋಗ್ಯವಂತ ಜನರಿಂದ ತುಂಬಿರಬೇಕೆಂಬುದು ಯೆಹೋವನ ಇಷ್ಟ. ದೇವರು “ಏದೆನ್‌ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಮಾಡಿ . . . ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರಗಳನ್ನು . . . ಬೆಳೆಯಮಾಡಿದನು” ಎಂದು ಬೈಬಲು ಹೇಳುತ್ತದೆ. ದೇವರು ಪ್ರಥಮ ಪುರುಷನಾದ ಆದಾಮನನ್ನು ಮತ್ತು ಪ್ರಥಮ ಸ್ತ್ರೀಯಾದ ಹವ್ವಳನ್ನು ಸೃಷ್ಟಿಸಿದ ಬಳಿಕ, ಅವರನ್ನು ಆ ಮನೋಹರವಾದ ಬೀಡಿನಲ್ಲಿ ಇರಿಸಿ, “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ” ಎಂದು ಹೇಳಿದನು. (ಆದಿಕಾಂಡ 1:28; 2:8, 9, 15) ಹೀಗೆ ಮಾನವರು ಮಕ್ಕಳನ್ನು ಪಡೆದು, ತಮ್ಮ ಬೀಡಾದ ಆ ಉದ್ಯಾನವನವನ್ನು ಭೂವ್ಯಾಪಕವಾಗಿ ವಿಸ್ತರಿಸಿ, ಪ್ರಾಣಿಗಳನ್ನು ಪರಿಪಾಲಿಸಬೇಕೆಂಬುದು ದೇವರ ಉದ್ದೇಶವಾಗಿತ್ತು.

2. (ಎ) ಭೂಮಿಗಾಗಿರುವ ದೇವರ ಉದ್ದೇಶವು ನೆರವೇರುವುದೆಂದು ನಮಗೆ ಹೇಗೆ ಗೊತ್ತು? (ಬಿ) ಶಾಶ್ವತವಾಗಿ ಬದುಕಲಿರುವ ಮಾನವರ ವಿಷಯದಲ್ಲಿ ಬೈಬಲು ಏನನ್ನುತ್ತದೆ?

2 ಜನರು ಒಂದು ಭೂಪರದೈಸಿನಲ್ಲಿ ಜೀವಿಸಬೇಕೆಂಬ ಯೆಹೋವ ದೇವರ ಉದ್ದೇಶವು ಎಂದಾದರೂ ಕೈಗೂಡೀತೆಂದು ನೀವು ನೆನಸುತ್ತೀರೊ? “ನಾನು ನುಡಿದಿದ್ದೇನೆ; ಈಡೇರಿಸುವೆನು” ಎಂದು ದೇವರು ಪ್ರಕಟಿಸುತ್ತಾನೆ. (ಯೆಶಾಯ 46:9-11; 55:11) ಹೌದು, ದೇವರು ತಾನು ಉದ್ದೇಶಿಸಿದ್ದನ್ನು ಮಾಡಿಯೇ ತೀರುವನು! ಭೂಮಿಯನ್ನು “ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿ”ದೆನು ಎನ್ನುತ್ತಾನೆ ಆತನು. (ಯೆಶಾಯ 45:18) ಈ ಭೂಮಿಯಲ್ಲಿ ಯಾವ ರೀತಿಯ ಜನರು ಜೀವಿಸಬೇಕೆಂದು ದೇವರು ಬಯಸಿದನು? ಮತ್ತು ಅವರು ಇಲ್ಲಿ ಎಷ್ಟು ಸಮಯ ಜೀವಿಸಬೇಕೆಂದು ಆತನು ಬಯಸಿದನು? ಬೈಬಲು ಉತ್ತರ ಕೊಡುವುದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”ಕೀರ್ತನೆ 37:29; ಪ್ರಕಟನೆ 21:3, 4.

3. ಈಗ ಭೂಮಿಯ ಮೇಲೆ ಯಾವ ದುರವಸ್ಥೆಯಿದೆ, ಮತ್ತು ಇದು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತದೆ?

3 ಆದರೆ ಇದುವರೆಗೆ ಹೀಗೆ ಸಂಭವಿಸಿರುವುದಿಲ್ಲವೆಂಬುದು ಸ್ಪಷ್ಟ. ಜನರು ಈಗ ರೋಗಪೀಡಿತರಾಗಿ ಸಾಯುವುದಲ್ಲದೆ, ಒಬ್ಬರೊಂದಿಗೊಬ್ಬರು ಹೋರಾಡಿ ಕೊಲ್ಲುತ್ತಾರೆ ಕೂಡ. ಏನೋ ತಪ್ಪು ಸಂಭವಿಸಿತು. ಆದರೆ ಭೂಮಿಯು, ನಾವು ಇಂದು ನೋಡುವಂಥ ಸ್ಥಿತಿಯಲ್ಲಿರಬೇಕೆಂದು ದೇವರು ಉದ್ದೇಶಿಸಲಿಲ್ಲವೆಂಬುದು ಖಂಡಿತ! ಹಾಗಾದರೆ ಏನಾಯಿತು? ದೇವರ ಉದ್ದೇಶವು ಏಕೆ ನೆರವೇರಿಲ್ಲ? ಮಾನವನಿಂದ ಬರೆಯಲ್ಪಟ್ಟಿರುವ ಯಾವುದೇ ಇತಿಹಾಸ ಪುಸ್ತಕವು ಇದನ್ನು ನಮಗೆ ತಿಳಿಸಸಾಧ್ಯವಿಲ್ಲ, ಏಕೆಂದರೆ ತೊಂದರೆ ಆರಂಭವಾದದ್ದು ಸ್ವರ್ಗದಲ್ಲಿಯೇ.

ವೈರಿಯ ಆರಂಭ

4, 5. (ಎ) ವಾಸ್ತವದಲ್ಲಿ ಸರ್ಪದ ಮೂಲಕ ಹವ್ವಳೊಂದಿಗೆ ಮಾತಾಡಿದ್ದು ಯಾರು? (ಬಿ) ಈ ಮುಂಚೆ ಸಜ್ಜನನೂ ಪ್ರಾಮಾಣಿಕನೂ ಆಗಿದ್ದ ವ್ಯಕ್ತಿಯೊಬ್ಬನು ಹೇಗೆ ಕಳ್ಳನಾಗಬಹುದು?

4 ಬೈಬಲಿನ ಪ್ರಥಮ ಪುಸ್ತಕವು, ಏದೆನ್‌ ತೋಟದಲ್ಲಿ ಕಾಣಿಸಿಕೊಂಡ ದೇವವೈರಿಯೊಬ್ಬನ ಕುರಿತು ತಿಳಿಸುತ್ತದೆ. ಅವನನ್ನು “ಸರ್ಪ” ಎಂದು ವರ್ಣಿಸಲಾಗಿರುವುದಾದರೂ ಅವನು ಒಂದು ಪ್ರಾಣಿಯಾಗಿರಲಿಲ್ಲ. ಬೈಬಲಿನ ಕೊನೆಯ ಪುಸ್ತಕವು ಅವನನ್ನು, “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ” ಹೆಸರುಳ್ಳವನೆಂದು ಕರೆಯುತ್ತದೆ. ಅವನನ್ನು “ಪುರಾತನ ಸರ್ಪ” ಎಂದೂ ಕರೆಯಲಾಗಿದೆ. (ಆದಿಕಾಂಡ 3:1; ಪ್ರಕಟನೆ 12:9) ಈ ಬಲಶಾಲಿಯಾದ ದೇವದೂತನು ಇಲ್ಲವೆ ಅದೃಶ್ಯ ಆತ್ಮಜೀವಿಯು ಹವ್ವಳೊಂದಿಗೆ ಮಾತಾಡಲಿಕ್ಕಾಗಿ ಒಂದು ಸರ್ಪವನ್ನು ಉಪಯೋಗಿಸಿದನು. ಇದು, ಚತುರ ವ್ಯಕ್ತಿಯೊಬ್ಬನು ತನ್ನ ಸ್ವರವು ಸಮೀಪದಲ್ಲಿರುವ ಒಂದು ಬೊಂಬೆಯಿಂದ ಅಥವಾ ಕೈಗೊಂಬೆಯಿಂದ ಬರುತ್ತದೆಯೊ ಎಂಬಂತೆ ಹೇಗೆ ತೋರಿಸಿಕೊಡಸಾಧ್ಯವಿದೆಯೊ ಹಾಗೆ ಇತ್ತು. ದೇವರು ಮಾನವರಿಗಾಗಿ ಭೂಮಿಯನ್ನು ಅಣಿಗೊಳಿಸಿದಾಗ ಆ ಆತ್ಮಜೀವಿಯು ಅಲ್ಲಿ ಉಪಸ್ಥಿತನಿದ್ದನೆಂಬುದರಲ್ಲಿ ಸಂದೇಹವಿಲ್ಲ.—ಯೋಬ 38:4, 6.

5 ಆದರೆ ಯೆಹೋವನ ಸೃಷ್ಟಿಯೆಲ್ಲ ಪರಿಪೂರ್ಣವಾಗಿರುವುದರಿಂದ, ಈ “ಪಿಶಾಚ”ನನ್ನು, “ಸೈತಾನ”ನನ್ನು ಯಾರು ನಿರ್ಮಿಸಿದರು? ಸರಳವಾಗಿ ಹೇಳುವುದಾದರೆ, ದೇವರ ಬಲಾಢ್ಯ ಆತ್ಮಪುತ್ರರಲ್ಲಿ ಒಬ್ಬನು ಸ್ವತಃ ತನ್ನನ್ನು ಪಿಶಾಚನಾಗಿ ಮಾಡಿಕೊಂಡನು. ಇದು ಹೇಗೆ ಸಾಧ್ಯ? ಇಂದು ಸಹ, ಒಂದೊಮ್ಮೆ ಸಜ್ಜನನೂ ಪ್ರಾಮಾಣಿಕನೂ ಆಗಿದ್ದ ವ್ಯಕ್ತಿಯೊಬ್ಬನು ಕಳ್ಳನಾಗಿ ಪರಿಣಮಿಸಬಹುದು. ಅದು ಹೇಗೆ? ಒಂದು ತಪ್ಪು ಅಭಿಲಾಷೆಯು ತನ್ನ ಹೃದಯದಲ್ಲಿ ಬೆಳೆಯುವಂತೆ ಆ ವ್ಯಕ್ತಿಯು ಬಿಡಬಹುದು. ಅವನು ಅದರ ಕುರಿತು ಯೋಚಿಸುತ್ತ ಇರುವಲ್ಲಿ, ಆ ತಪ್ಪು ಅಭಿಲಾಷೆಯು ತುಂಬ ಬಲವಾಗಬಹುದು. ಮತ್ತು ಆಗ, ಸಂದರ್ಭವು ಬಂದೊದಗುವಲ್ಲಿ ಅವನು ಯಾವುದರ ಬಗ್ಗೆ ಯೋಚಿಸುತ್ತಾ ಇದ್ದನೊ ಆ ಕೆಟ್ಟ ಅಭಿಲಾಷೆಯನ್ನು ಕಾರ್ಯದಲ್ಲಿ ಹೊರಗೆಡಬಹುದು.—ಯಾಕೋಬ 1:13-15.

6. ದೇವರ ಬಲಾಢ್ಯ ಆತ್ಮಪುತ್ರರಲ್ಲಿ ಒಬ್ಬನು ಪಿಶಾಚನಾದ ಸೈತಾನನಾದುದು ಹೇಗೆ?

6 ಪಿಶಾಚನಾದ ಸೈತಾನನ ವಿಷಯದಲ್ಲೂ ಇದೇ ಸಂಭವಿಸಿತು. ದೇವರು ಆದಾಮಹವ್ವರಿಗೆ, ಅವರು ಮಕ್ಕಳನ್ನು ಪಡೆಯುವಂತೆಯೂ ತಮ್ಮ ಸಂತತಿಯಿಂದ ಭೂಮಿಯನ್ನು ತುಂಬಿಸುವಂತೆಯೂ ಹೇಳಿದ್ದನ್ನು ಅವನು ಕೇಳಿಸಿಕೊಂಡನೆಂಬುದು ಸ್ಪಷ್ಟ. (ಆದಿಕಾಂಡ 1:27, 28) ‘ಈ ಮಾನವರೆಲ್ಲರೂ ದೇವರ ಬದಲು ನನ್ನನ್ನು ಆರಾಧಿಸಬಹುದಲ್ಲವೆ!’ ಎಂದು ಸೈತಾನನು ಯೋಚಿಸಿದನೆಂದು ವ್ಯಕ್ತವಾಗುತ್ತದೆ. ಹೀಗೆ ಅವನ ಹೃದಯದಲ್ಲಿ ಒಂದು ತಪ್ಪು ಅಭಿಲಾಷೆಯು ಬೆಳೆಯತೊಡಗಿತು. ಕಟ್ಟಕಡೆಗೆ, ಅವನು ಹವ್ವಳಿಗೆ ದೇವರ ಬಗ್ಗೆ ಸುಳ್ಳುಗಳನ್ನು ಹೇಳಿ ವಂಚಿಸುವ ಮೂಲಕ ಕಾರ್ಯಕ್ಕಿಳಿದನು. (ಆದಿಕಾಂಡ 3:1-5) ಈ ರೀತಿಯಲ್ಲಿ ಅವನು “ಮಿಥ್ಯಾಪವಾದಿ” ಎಂಬ ಅರ್ಥವಿರುವ “ಪಿಶಾಚನು” ಆದನು. ಅದೇ ಸಮಯದಲ್ಲಿ, ಅವನು “ವಿರೋಧಿ” ಎಂಬ ಅರ್ಥವಿರುವ “ಸೈತಾನ”ನೂ ಆದನು.

7. (ಎ) ಆದಾಮಹವ್ವರು ಸತ್ತದ್ದೇಕೆ? (ಬಿ) ಆದಾಮನ ಸಂತತಿಯವರೆಲ್ಲ ವೃದ್ಧರಾಗುವುದೂ ಸಾಯುವುದೂ ಏಕೆ?

7 ಪಿಶಾಚನಾದ ಸೈತಾನನು ಸುಳ್ಳುಗಳನ್ನು ಮತ್ತು ವಂಚನೆಯನ್ನು ಉಪಯೋಗಿಸುವ ಮೂಲಕ ಆದಾಮಹವ್ವರು ದೇವರಿಗೆ ಅವಿಧೇಯರಾಗುವಂತೆ ಮಾಡಿದನು. (ಆದಿಕಾಂಡ 2:17; 3:6) ಇದರ ಪರಿಣಾಮವಾಗಿ, ಅವಿಧೇಯರಾದರೆ ಸಾಯುವಿರೆಂದು ದೇವರಂದಂತೆಯೇ ಅವರು ಕೊನೆಗೆ ಮರಣ ಹೊಂದಿದರು. (ಆದಿಕಾಂಡ 3:17-19) ಪಾಪಮಾಡಿದ್ದರ ಪರಿಣಾಮವಾಗಿ ಆದಾಮನು ಅಪರಿಪೂರ್ಣನಾದುದರಿಂದ, ಅವನ ಸಂತತಿಯೆಲ್ಲ ಪಾಪವನ್ನು ಆನುವಂಶಿಕವಾಗಿ ಪಡೆಯಿತು. (ರೋಮಾಪುರ 5:12) ಈ ಸ್ಥಿತಿಯನ್ನು, ಬ್ರೆಡ್‌ ಮಾಡಲು ಉಪಯೋಗಿಸುವ ತಟ್ಟೆಯಿಂದ ದೃಷ್ಟಾಂತಿಸಬಹುದು. ಆ ತಟ್ಟೆಯಲ್ಲಿ ಒಂದು ಕಚ್ಚು ಇರುವುದಾದರೆ, ಅದರಲ್ಲಿ ಮಾಡಲ್ಪಡುವ ಪ್ರತಿಯೊಂದು ಬ್ರೆಡ್ಡಿಗೆ ಏನಾಗುತ್ತದೆ? ಪ್ರತಿಯೊಂದು ಬ್ರೆಡ್ಡಿನಲ್ಲಿ ಒಂದು ಕಚ್ಚು ಅಥವಾ ಅಪೂರ್ಣತೆ ಇರುತ್ತದೆ. ಅದೇ ರೀತಿ, ಪ್ರತಿ ಮಾನವನು ಆದಾಮನಿಂದ ಅಪರಿಪೂರ್ಣತೆಯೆಂಬ “ಕಚ್ಚನ್ನು” ಆನುವಂಶಿಕವಾಗಿ ಪಡೆದಿದ್ದಾನೆ. ಇದೇ ಕಾರಣಕ್ಕಾಗಿ ಎಲ್ಲ ಮಾನವರು ವೃದ್ಧರಾಗುತ್ತಾರೆ ಮತ್ತು ಸಾಯುತ್ತಾರೆ.—ರೋಮಾಪುರ 3:23.

8, 9. (ಎ) ಸೈತಾನನು ಯಾವ ಸವಾಲೊಡ್ಡಿದನೆಂದು ವ್ಯಕ್ತವಾಗುತ್ತದೆ? (ಬಿ) ದೇವರು ಆ ದಂಗೆಕೋರರನ್ನು ತಕ್ಷಣ ನಾಶಮಾಡಲಿಲ್ಲವೇಕೆ?

8 ಸೈತಾನನು ಆದಾಮಹವ್ವರನ್ನು ದೇವರಿಗೆ ವಿರುದ್ಧ ಪಾಪಮಾಡುವಂತೆ ನಡೆಸಿದಾಗ ಅವನು ವಾಸ್ತವದಲ್ಲಿ ಒಂದು ದಂಗೆಯ ನಾಯಕತ್ವವನ್ನು ವಹಿಸಿದನು. ಅವನು ಯೆಹೋವನು ಆಳುತ್ತಿರುವ ವಿಧದ ಕುರಿತು ಸವಾಲೊಡ್ಡಿದನು. ಕಾರ್ಯತಃ ಸೈತಾನನು ಹೀಗೆ ಹೇಳುವಂತಿತ್ತು: ‘ದೇವರು ಅಪ್ರಯೋಜಕ ಪ್ರಭು. ಆತನು ಸುಳ್ಳುಗಾರನಾಗಿದ್ದು ತನ್ನ ಪ್ರಜೆಗಳಿಂದ ಒಳ್ಳೆಯದನ್ನು ತಡೆದು ಹಿಡಿಯುತ್ತಾನೆ. ಮಾನವರಿಗೆ ದೇವರ ಆಳ್ವಿಕೆಯ ಅಗತ್ಯವಿಲ್ಲ. ಯಾವುದು ಒಳ್ಳೇದು, ಯಾವುದು ಕೆಟ್ಟದ್ದು ಎಂಬುದನ್ನು ಅವರೇ ನಿರ್ಣಯಿಸಬಲ್ಲರು. ಮತ್ತು ಅವರಿಗೆ ನನ್ನ ಆಳ್ವಿಕೆಯ ಕೆಳಗೆ ಹೆಚ್ಚು ಒಳಿತಾಗುವುದು.’ ಇಂತಹ ಅವಮಾನಕರವಾದ ಆರೋಪವನ್ನು ದೇವರು ಹೇಗೆ ನಿಭಾಯಿಸಿದನು? ಆ ದಂಗೆಕೋರರನ್ನು ದೇವರು ಅಲ್ಲಿಯೇ ಸಾಯಿಸಬೇಕಿತ್ತು ಎಂಬುದು ಕೆಲವರ ಆಲೋಚನೆ. ಆದರೆ ಅದು ಸೈತಾನನ ಸವಾಲಿಗೆ ಉತ್ತರ ಕೊಡುತ್ತಿತ್ತೊ? ದೇವರು ಆಳುವ ವಿಧಾನವು ಸರಿ ಎಂಬುದನ್ನು ಅದು ರುಜುಪಡಿಸುತ್ತಿತ್ತೊ?

9 ಆ ದಂಗೆಕೋರರನ್ನು ಒಡನೆ ಸಾಯಿಸಲು ಯೆಹೋವನ ಪರಿಪೂರ್ಣ ನ್ಯಾಯಪ್ರಜ್ಞೆ ಅನುಮತಿಸಲಿಲ್ಲ. ಸೈತಾನನ ಸವಾಲಿಗೆ ತೃಪ್ತಿಕರವಾದ ರೀತಿಯಲ್ಲಿ ಉತ್ತರವನ್ನು ಕೊಡಲು ಮತ್ತು ಸೈತಾನನು ಸುಳ್ಳುಗಾರನೆಂದು ರುಜುಪಡಿಸಲು ಸಮಯವು ಬೇಕಾಗಿದೆಯೆಂದು ದೇವರು ನಿರ್ಣಯಿಸಿದನು. ಆದುದರಿಂದ ಸೈತಾನನ ಪ್ರಭಾವದ ಕೆಳಗೆ ಮನುಷ್ಯರು ಸ್ವಲ್ಪಕಾಲ ತಮ್ಮನ್ನೇ ಆಳಿಕೊಳ್ಳುವಂತೆ ಅನುಮತಿಸಲು ದೇವರು ನಿಶ್ಚಯಿಸಿದನು. ಯೆಹೋವನು ಹಾಗೇಕೆ ಮಾಡಿದನು ಮತ್ತು ಈ ವಿವಾದಾಂಶಗಳನ್ನು ಇತ್ಯರ್ಥಮಾಡಲು ಆತನು ಏಕೆ ಇಷ್ಟೊಂದು ಕಾಲ ದಾಟುವಂತೆ ಬಿಟ್ಟನೆಂಬ ವಿಷಯಗಳನ್ನು ಈ ಪುಸ್ತಕದ 11ನೆಯ ಅಧ್ಯಾಯದಲ್ಲಿ ಚರ್ಚಿಸಲಾಗುವುದು. ಆದರೆ ಈಗ, ಇದರ ಕುರಿತು ಯೋಚಿಸುವುದು ಒಳ್ಳೇದು: ತಮಗೆ ಯಾವುದೇ ಒಳಿತನ್ನು ಮಾಡಿರದಂಥ ಸೈತಾನನನ್ನು ನಂಬುವ ಮೂಲಕ ಆದಾಮಹವ್ವರು ಸರಿಯಾದದ್ದನ್ನು ಮಾಡಿದರೊ? ತಮಗಿದ್ದ ಸರ್ವಸ್ವವನ್ನೂ ಒದಗಿಸಿದ ಯೆಹೋವನು ನಿಷ್ಕರುಣಿಯಾದ ಸುಳ್ಳುಗಾರನೆಂದು ಅವರು ನಂಬಿಬಿಡುವುದು ನ್ಯಾಯವಾಗಿತ್ತೊ? ಆ ಪರಿಸ್ಥಿತಿಯಲ್ಲಿ ನೀವೇನು ಮಾಡುತ್ತಿದ್ದಿರಿ?

10. ಸೈತಾನನ ಸವಾಲಿಗೆ ಉತ್ತರವಾಗಿ ನೀವು ಯೆಹೋವನ ಪಕ್ಷವನ್ನು ಹೇಗೆ ಬೆಂಬಲಿಸಬಲ್ಲಿರಿ?

10 ಈ ಪ್ರಶ್ನೆಗಳ ಕುರಿತು ಯೋಚಿಸುವುದು ಒಳ್ಳೇದು, ಏಕೆಂದರೆ ನಮ್ಮಲ್ಲಿ ಪ್ರತಿಯೊಬ್ಬರ ಮುಂದೆ ಅದೇ ವಿವಾದಾಂಶಗಳಿವೆ. ಹೌದು, ಸೈತಾನನ ಸವಾಲಿಗೆ ಉತ್ತರವಾಗಿ ಯೆಹೋವನ ಪಕ್ಷವನ್ನು ಬೆಂಬಲಿಸುವ ಸದವಕಾಶ ನಿಮಗಿದೆ. ಯೆಹೋವನನ್ನು ನಿಮ್ಮ ಪ್ರಭುವಾಗಿ ಅಂಗೀಕರಿಸಿರಿ ಮತ್ತು ಹೀಗೆ ಸೈತಾನನು ಸುಳ್ಳುಗಾರನೆಂದು ತೋರಿಸಲು ಸಹಾಯಮಾಡಬಲ್ಲಿರಿ. (ಕೀರ್ತನೆ 73:28; ಜ್ಞಾನೋಕ್ತಿ 27:11) ವಿಷಾದಕರವಾಗಿ, ಈ ಜಗತ್ತಿನ ಶತಕೋಟ್ಯಂತರ ಜನರಲ್ಲಿ ಕೆಲವರು ಮಾತ್ರ ಇಂತಹ ಆಯ್ಕೆಯನ್ನು ಮಾಡುತ್ತಾರೆ. ಇದು ಪ್ರಮುಖ ಪ್ರಶ್ನೆಯೊಂದನ್ನು ಎಬ್ಬಿಸುತ್ತದೆ. ಅದೇನೆಂದರೆ, ಸೈತಾನನು ಈ ಲೋಕವನ್ನು ಆಳುತ್ತಾನೆಂದು ಬೈಬಲು ನಿಜವಾಗಿಯೂ ಬೋಧಿಸುತ್ತದೊ?

ಈ ಲೋಕವನ್ನು ಯಾರು ಆಳುತ್ತಾನೆ?

ಲೋಕದ ಎಲ್ಲ ರಾಜ್ಯಗಳು ಸೈತಾನನ ಒಡೆತನದಲ್ಲಿ ಇಲ್ಲದಿರುತ್ತಿದ್ದರೆ ಅವನು ಆ ರಾಜ್ಯಗಳನ್ನು ಹೇಗೆ ಯೇಸುವಿಗೆ ನೀಡಸಾಧ್ಯವಿತ್ತು?

11, 12. (ಎ) ಯೇಸುವಿನ ಮುಂದಿಡಲ್ಪಟ್ಟ ಪ್ರಲೋಭನೆಯು ಸೈತಾನನು ಲೋಕಾಧಿಪತಿಯೆಂಬುದನ್ನು ಹೇಗೆ ತಿಳಿಯಪಡಿಸುತ್ತದೆ? (ಬಿ) ಸೈತಾನನು ಇಹಲೋಕಾಧಿಪತಿಯೆಂಬುದನ್ನು ಇನ್ನಾವುದು ರುಜುಪಡಿಸುತ್ತದೆ?

11 ಸೈತಾನನೇ ಈ ಲೋಕಕ್ಕೆ ಅಧಿಪತಿ ಎಂಬ ಮಾತನ್ನು ಯೇಸು ಎಂದಿಗೂ ಅನುಮಾನಿಸಲಿಲ್ಲ. ಒಮ್ಮೆ ಸೈತಾನನು ಯೇಸುವಿಗೆ ಅದ್ಭುತಕರವಾದ ಯಾವುದೊ ಒಂದು ರೀತಿಯಲ್ಲಿ “ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ” ತೋರಿಸಿದನು. ಬಳಿಕ ಸೈತಾನನು, “ನೀನು ನನಗೆ ಸಾಷ್ಟಾಂಗನಮಸ್ಕಾರ ಮಾಡಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು” ಎಂದು ಯೇಸುವಿಗೆ ಮಾತುಕೊಟ್ಟನು. (ಮತ್ತಾಯ 4:8, 9; ಲೂಕ 4:5, 6) ಇದರ ಕುರಿತು ಯೋಚಿಸಿರಿ: ಸೈತಾನನು ಈ ರಾಜ್ಯಗಳ ಅಧಿಪತಿಯಾಗಿ ಇಲ್ಲದಿರುತ್ತಿದ್ದಲ್ಲಿ, ಅವನ ಆ ನೀಡಿಕೆಯು ಯೇಸುವಿಗೆ ಒಂದು ಪ್ರಲೋಭನೆ ಆಗಿರುತ್ತಿತ್ತೊ? ಈ ಲೋಕ ಸರಕಾರಗಳೆಲ್ಲ ಸೈತಾನನಿಗೆ ಸೇರಿದವುಗಳು ಎಂಬುದನ್ನು ಯೇಸು ಅಲ್ಲಗಳೆಯಲಿಲ್ಲ. ಆ ಸರಕಾರಗಳ ಮೇಲೆ ಸೈತಾನನ ಅಧಿಕಾರವಿಲ್ಲದಿರುತ್ತಿದ್ದಲ್ಲಿ ಯೇಸು ನಿಶ್ಚಯವಾಗಿ ಆ ಮಾತನ್ನು ಅಲ್ಲಗಳೆಯುತ್ತಿದ್ದನು.

12 ಯೆಹೋವನು ಸರ್ವಶಕ್ತನಾದ ದೇವರು, ಈ ಅದ್ಭುತಕರವಾದ ವಿಶ್ವದ ಸೃಷ್ಟಿಕರ್ತನೆಂಬುದು ನಿಶ್ಚಯ. (ಪ್ರಕಟನೆ 4:11) ಆದರೂ, ಯೆಹೋವ ದೇವರಾಗಲಿ ಯೇಸು ಕ್ರಿಸ್ತನಾಗಲಿ ಈ ಲೋಕದ ಅಧಿಪತಿಗಳೆಂದು ಬೈಬಲು ಎಲ್ಲಿಯೂ ಹೇಳುವುದಿಲ್ಲ. ವಾಸ್ತವವೇನಂದರೆ, ಯೇಸು ಸೈತಾನನನ್ನು ನಿರ್ದಿಷ್ಟವಾಗಿ “ಇಹಲೋಕಾಧಿಪತಿ” ಎಂದು ಸೂಚಿಸಿದನು. (ಯೋಹಾನ 12:31; 14:30; 16:11) ಬೈಬಲು ಪಿಶಾಚನಾದ ಸೈತಾನನನ್ನು “ಈ ಪ್ರಪಂಚದ ದೇವರು” ಎಂದೂ ಕರೆಯುತ್ತದೆ. (2 ಕೊರಿಂಥ 4:3, 4) ಈ ವಿರೋಧಿ ಇಲ್ಲವೆ ಸೈತಾನನ ವಿಷಯದಲ್ಲಿ ಕ್ರೈಸ್ತ ಅಪೊಸ್ತಲನಾದ ಯೋಹಾನನು ಬರೆದುದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.”—1 ಯೋಹಾನ 5:19.

ಸೈತಾನನ ಲೋಕವು ತೆಗೆದುಹಾಕಲ್ಪಡುವ ವಿಧ

13. ನೂತನ ಲೋಕವೊಂದರ ಅಗತ್ಯ ಏಕಿದೆ?

13 ವರುಷಗಳು ಗತಿಸಿದಂತೆ, ಲೋಕವು ಹೆಚ್ಚೆಚ್ಚು ಅಪಾಯಕಾರಿಯಾಗುತ್ತಿದೆ. ಹೋರಾಡುತ್ತಿರುವ ಸೈನ್ಯಗಳು, ಅಪ್ರಾಮಾಣಿಕ ರಾಜಕಾರಣಿಗಳು, ಕಪಟಿಗಳಾದ ಧಾರ್ಮಿಕ ನಾಯಕರು ಮತ್ತು ಮೊಂಡರಾದ ಪಾತಕಿಗಳಿಂದ ಅದು ತುಂಬಿಕೊಂಡಿದೆ. ಆದುದರಿಂದ ಇಡೀ ಲೋಕವನ್ನು ಸುಧಾರಣೆ ಮಾಡುವುದು ಅಸಾಧ್ಯ. ಆದರೆ ದೇವರು, ಅರ್ಮಗೆದೋನ್‌ ಎಂಬ ತನ್ನ ಯುದ್ಧದಲ್ಲಿ ದುಷ್ಟರನ್ನು ತೆಗೆದುಹಾಕುವ ಕಾಲವು ಸಮೀಪವಿದೆಯೆಂದು ಬೈಬಲು ತಿಳಿಯಪಡಿಸುತ್ತದೆ. ಇದು ನೀತಿಯ ನೂತನ ಲೋಕವೊಂದು ಬರಲು ದಾರಿಮಾಡಿಕೊಡುವುದು.—ಪ್ರಕಟನೆ 16:14-16.

14. ದೇವರು ಯಾರನ್ನು ತನ್ನ ರಾಜ್ಯದ ಪ್ರಭುವಾಗಿ ಆಯ್ಕೆ ಮಾಡಿರುತ್ತಾನೆ, ಮತ್ತು ಇದನ್ನು ಹೇಗೆ ಮುಂತಿಳಿಸಲಾಗಿತ್ತು?

14 ಯೆಹೋವ ದೇವರು ತನ್ನ ಸ್ವರ್ಗೀಯ ರಾಜ್ಯ ಅಥವಾ ಸರಕಾರದ ಪ್ರಭುವಾಗಿರುವಂತೆ ಯೇಸು ಕ್ರಿಸ್ತನನ್ನು ಆಯ್ಕೆಮಾಡಿದ್ದಾನೆ. ದೀರ್ಘಕಾಲದ ಹಿಂದೆಯೇ ಬೈಬಲ್‌ ಮುಂತಿಳಿಸಿದ್ದು: “ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು; . . . ಸಮಾಧಾನದ ಪ್ರಭು . . . ಅವನ ಹೆಸರು. ಅವನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವದು, ದಾವೀದನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು.” (ಯೆಶಾಯ 9:6, 7) ಇದೇ ಸರಕಾರದ ಬಗ್ಗೆ ಹೀಗೆ ಪ್ರಾರ್ಥಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:10) ನಾವು ಈ ಪುಸ್ತಕದಲ್ಲಿ ಮುಂದೆ ತಿಳಿಯಲಿರುವಂತೆ, ದೇವರ ರಾಜ್ಯವು ಈ ಲೋಕದ ಸರಕಾರಗಳನ್ನೆಲ್ಲ ತೆಗೆದುಹಾಕಿ ಅವುಗಳ ಸ್ಥಾನದಲ್ಲಿ ನಿಲ್ಲುವುದು. (ದಾನಿಯೇಲ 2:44) ಆಗ ದೇವರ ರಾಜ್ಯವು ಭೂಪರದೈಸನ್ನು ತರುವುದು.

ನೂತನ ಲೋಕವೊಂದು ನಿಕಟ!

15. “ನೂತನ ಭೂಮಂಡಲ” ಎಂದರೇನು?

15 “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಎದುರು ನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು” ಎಂದು ಬೈಬಲು ನಮಗೆ ಆಶ್ವಾಸನೆ ನೀಡುತ್ತದೆ. (2 ಪೇತ್ರ 3:13; ಯೆಶಾಯ 65:17) ಕೆಲವು ಬಾರಿ ಬೈಬಲು ‘ಭೂಮಿಯ’ ಕುರಿತು ಮಾತಾಡುವಾಗ, ಅದು ಭೂಮಿಯ ಮೇಲೆ ಜೀವಿಸುವ ಜನರಿಗೆ ಸೂಚಿಸುತ್ತದೆ. (ಯೆಶಾಯ 1:2) ಆದಕಾರಣ, ನೀತಿಯ “ನೂತನ ಭೂಮಂಡಲ”ವೆಂದರೆ ದೇವರ ಒಪ್ಪಿಗೆಯನ್ನು ಪಡೆಯುವ ಒಂದು ಮಾನವ ಸಮಾಜವಾಗಿದೆ.

16. ದೇವರ ಒಪ್ಪಿಗೆಯಿರುವವರಿಗೆ ಆತನು ಕೊಡುವ ಬೆಲೆಕಟ್ಟಲಾಗದ ಒಂದು ವರದಾನವು ಯಾವುದು, ಮತ್ತು ಅದನ್ನು ಪಡೆಯಬೇಕಾದರೆ ನಾವೇನು ಮಾಡತಕ್ಕದ್ದು?

16 ಬರಲಿರುವ ನೂತನ ಲೋಕದಲ್ಲಿ, ದೇವರ ಒಪ್ಪಿಗೆ ಪಡೆದಿರುವವರಿಗೆ “ನಿತ್ಯಜೀವ” ಎಂಬ ವರದಾನವು ಸಿಗುವುದೆಂದು ಯೇಸು ವಚನ ಕೊಟ್ಟನು. (ಮಾರ್ಕ 10:30) ನಿತ್ಯಜೀವವನ್ನು ಪಡೆಯಬೇಕಾದರೆ ನಾವೇನು ಮಾಡತಕ್ಕದ್ದು ಎಂಬುದರ ಬಗ್ಗೆ ಯೇಸು ಹೇಳಿದ ಮಾತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ನಿಮ್ಮ ಬೈಬಲಿನಲ್ಲಿ ಯೋಹಾನ 3:16 ಮತ್ತು 17:3 ನ್ನು ತೆರೆದು ಓದಿರಿ. ಈಗ, ಬರಲಿರುವ ಆ ಭೂಪರದೈಸಿನಲ್ಲಿ ದೇವರ ಆ ಆಶ್ಚರ್ಯಕರವಾದ ವರದಾನಕ್ಕೆ ಅರ್ಹರಾಗುವವರು ಅನುಭವಿಸುವ ಆಶೀರ್ವಾದಗಳನ್ನು ಬೈಬಲಿನಿಂದ ಪರಿಗಣಿಸಿರಿ.

17, 18. ಭೂಮಿಯಲ್ಲೆಲ್ಲೂ ಶಾಂತಿ ಮತ್ತು ಭದ್ರತೆಯಿರುವುದೆಂದು ನಾವು ಹೇಗೆ ನಿಶ್ಚಿತರಾಗಿರಬಲ್ಲೆವು?

17 ದುಷ್ಟತನ, ಯುದ್ಧಗಳು, ಪಾತಕ ಮತ್ತು ಹಿಂಸಾಚಾರಗಳು ಇಲ್ಲದೆ ಹೋಗುವವು. “ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು.” (ಕೀರ್ತನೆ 37:10, 11) ಅಲ್ಲಿ ಶಾಂತಿಯು ನೆಲೆಸಿರುವುದು, ಏಕೆಂದರೆ ‘ದೇವರು ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿರುವನು.’ (ಕೀರ್ತನೆ 46:9; ಯೆಶಾಯ 2:4) ಆಗ “ನೀತಿವಂತನು ವೃದ್ಧಿಯಾಗುವನು. ಸಮೃದ್ಧಿಯಾದ ಸಮಾಧಾನವು ಚಂದ್ರನು ಇರುವವರೆಗೂ,” ಅಂದರೆ ಸದಾಕಾಲಕ್ಕೂ “ಇರುವುದು.”—ಕೀರ್ತನೆ 72:7, NIBV.

18 ಯೆಹೋವನ ಆರಾಧಕರು ಭದ್ರತೆಯಿಂದ ಜೀವಿಸುವರು. ಬೈಬಲ್‌ ಕಾಲಗಳಲ್ಲಿ ಜೀವಿಸುತ್ತಿದ್ದ ಇಸ್ರಾಯೇಲ್ಯರು ದೇವರಿಗೆ ವಿಧೇಯರಾಗಿದ್ದಷ್ಟು ಸಮಯ ಭದ್ರತೆಯಿಂದಿದ್ದರು. (ಯಾಜಕಕಾಂಡ 25:18, 19) ಪರದೈಸಿನಲ್ಲಿ ತದ್ರೀತಿಯ ಭದ್ರತೆಯನ್ನು ಅನುಭವಿಸುವುದು ಎಷ್ಟೊಂದು ಅದ್ಭುತಕರ ಸಂಗತಿಯಾಗಿರುವುದು!—ಯೆಶಾಯ 32:18; ಮೀಕ 4:4.

19. ದೇವರ ನೂತನ ಲೋಕದಲ್ಲಿ ಆಹಾರವು ಸಮೃದ್ಧವಾಗಿ ಲಭ್ಯವಿರುವುದೆಂದು ನಮಗೆ ಹೇಗೆ ತಿಳಿದಿದೆ?

19 ಆಹಾರದ ಅಭಾವಗಳು ಇರವು. ಕೀರ್ತನೆಗಾರನು ಹಾಡಿದ್ದು: “ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಲಿ.” (ಕೀರ್ತನೆ 72:16) ಯೆಹೋವ ದೇವರು ತನ್ನ ನೀತಿವಂತ ಜನರನ್ನು ಹರಸುವನು, ಮತ್ತು ‘ಭೂಮಿಯು ಒಳ್ಳೇ ಬೆಳೆಯನ್ನು ಕೊಡುವುದು.’—ಕೀರ್ತನೆ 67:6.

20. ಇಡೀ ಭೂಮಿಯು ಪರದೈಸಾಗುವುದು ಎಂದು ನಾವು ಏಕೆ ಖಾತ್ರಿಯಿಂದಿರಬಲ್ಲೆವು?

20 ಸಮಸ್ತ ಭೂಮಿಯು ಪರದೈಸಾಗುವುದು. ಪಾಪಿಗಳಾದ ಮಾನವರು ಒಂದು ಕಾಲದಲ್ಲಿ ಧ್ವಂಸಮಾಡಿದಂಥ ಜಮೀನಿನಲ್ಲಿ ಸುಂದರವಾದ ಹೊಸ ಮನೆಗಳು ಮತ್ತು ಉದ್ಯಾನವನಗಳನ್ನು ನಿರ್ಮಿಸಲಾಗುವುದು. (ಯೆಶಾಯ 65:21-24; ಪ್ರಕಟನೆ 11:18) ಸಮಯ ದಾಟಿದಷ್ಟಕ್ಕೆ, ಮನುಷ್ಯನು ಹೆಚ್ಚೆಚ್ಚು ಭೂಭಾಗಗಳನ್ನು ಸ್ವಾಧೀನಪಡಿಸಿಕೊಳ್ಳುವನು, ಮತ್ತು ಇದು ಇಡೀ ಭೂಗೋಳವು ಏದೆನ್‌ ತೋಟದಷ್ಟೇ ಸುಂದರ ಹಾಗೂ ಫಲದಾಯಕವಾಗುವ ತನಕ ಮುಂದುವರಿಯುವುದು. ಮತ್ತು ದೇವರು ತಪ್ಪದೆ ‘ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುವನು.’—ಕೀರ್ತನೆ 145:16.

21. ಮಾನವರ ಮತ್ತು ಮೃಗಗಳ ಮಧ್ಯೆ ಶಾಂತಿಯಿರುವುದೆಂದು ಯಾವುದು ತೋರಿಸುತ್ತದೆ?

21 ಮಾನವರ ಮತ್ತು ಮೃಗಗಳ ಮಧ್ಯೆ ಶಾಂತಿಯಿರುವುದು. ಕಾಡುಮೃಗಗಳು ಮತ್ತು ಸಾಧುಪ್ರಾಣಿಗಳು ಒಟ್ಟಿಗೆ ಮೇಯುವವು. ಚಿಕ್ಕ ಮಗು ಸಹ, ಈಗ ಅಪಾಯಕಾರಿಯಾಗಿರುವ ಮೃಗಗಳಿಗೆ ಹೆದರಲು ಯಾವ ಕಾರಣವೂ ಅಲ್ಲಿರದು.—ಯೆಶಾಯ 11:6-9; 65:25.

22. ಅಸ್ವಸ್ಥತೆಗೆ ಏನು ಸಂಭವಿಸುವುದು?

22 ಅಸ್ವಸ್ಥತೆಯು ಇಲ್ಲವಾಗುವುದು. ದೇವರ ಸ್ವರ್ಗೀಯ ರಾಜ್ಯದ ಪ್ರಭುವಾಗಿ ಯೇಸು, ತಾನು ಭೂಮಿಯಲ್ಲಿದ್ದಾಗ ಗುಣಪಡಿಸಿದ್ದಕ್ಕಿಂತ ಎಷ್ಟೋ ಹೆಚ್ಚು ವಿಸ್ತಾರವಾದ ಪ್ರಮಾಣದಲ್ಲಿ ಗುಣಪಡಿಸುವನು. (ಮತ್ತಾಯ 9:35; ಮಾರ್ಕ 1:40-42; ಯೋಹಾನ 5:5-9) ಆಗ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾಯ 33:24; 35:5, 6.

23. ಪುನರುತ್ಥಾನವು ನಮಗೆ ಏಕೆ ಹೃದಯಾನಂದವನ್ನು ತರುತ್ತದೆ?

23 ಮೃತಪಟ್ಟಿರುವ ಪ್ರಿಯರು ಪುನಃ ಜೀವ ಪಡೆದು ಇನ್ನೆಂದಿಗೂ ಸಾಯದಿರುವ ಪ್ರತೀಕ್ಷೆಯನ್ನು ಹೊಂದುವರು. ದೇವರ ಸ್ಮರಣೆಯಲ್ಲಿದ್ದು ಮರಣದಲ್ಲಿ ನಿದ್ರೆ ಹೋಗಿರುವವರೆಲ್ಲರೂ ಪುನರುತ್ಥಾನ ಹೊಂದುವರು. ವಾಸ್ತವದಲ್ಲಿ, “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.”—ಅ. ಕೃತ್ಯಗಳು 24:15; ಯೋಹಾನ 5:28, 29.

24. ಭೂಮಿಯ ಮೇಲೆ ಬರಲಿರುವ ಪರದೈಸಿನಲ್ಲಿ ಜೀವಿಸುವುದರ ಬಗ್ಗೆ ನಿಮಗೆ ಹೇಗನಿಸುತ್ತದೆ?

24 ನಮ್ಮ ಮಹಾ ಸೃಷ್ಟಿಕರ್ತನಾದ ಯೆಹೋವ ದೇವರ ಕುರಿತು ಕಲಿತುಕೊಳ್ಳಲು ಮತ್ತು ಆತನನ್ನು ಸೇವಿಸಲು ಆರಿಸಿಕೊಳ್ಳುವವರಿಗೆ ಎಂತಹ ಅದ್ಭುತಕರವಾದ ಭವಿಷ್ಯತ್ತು ಕಾದಿದೆ! ಯೇಸು ತನ್ನ ಪಕ್ಕದಲ್ಲಿ ಸತ್ತ ಆ ದುಷ್ಕರ್ಮಿಗೆ, “ನನ್ನ ಸಂಗಡ ಪರದೈಸಿನಲ್ಲಿರುವಿ” ಎಂದು ವಚನವಿತ್ತಾಗ, ಭೂಮಿಯ ಮೇಲೆ ಬರಲಿರುವ ಆ ಪರದೈಸಿಗೇ ಸೂಚಿಸಿ ಮಾತಾಡಿದನು. (ಲೂಕ 23:43) ಆದುದರಿಂದ, ಯಾರ ಮೂಲಕ ಈ ಎಲ್ಲ ಆಶೀರ್ವಾದಗಳು ಸಾಧ್ಯವಾಗುವವೊ ಆ ಯೇಸು ಕ್ರಿಸ್ತನ ಕುರಿತು ನಾವು ಹೆಚ್ಚನ್ನು ಕಲಿಯುವುದು ಅತ್ಯಾವಶ್ಯಕ.