ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ನಾಲ್ಕು

ಯೇಸು ಕ್ರಿಸ್ತನು ಯಾರು?

ಯೇಸು ಕ್ರಿಸ್ತನು ಯಾರು?
  • ಯೇಸುವಿನ ವಿಶೇಷ ಪಾತ್ರವೇನು?

  • ಅವನು ಎಲ್ಲಿಂದ ಬಂದನು?

  • ಅವನು ಯಾವ ರೀತಿಯ ವ್ಯಕ್ತಿಯಾಗಿದ್ದನು?

1, 2. (ಎ) ಪ್ರಸಿದ್ಧ ವ್ಯಕ್ತಿಯೊಬ್ಬನ ಹೆಸರನ್ನು ತಿಳಿದಿರುವ ಮಾತ್ರಕ್ಕೆ ನಿಮಗೆ ನಿಜವಾಗಿಯೂ ಅವನ ಪರಿಚಯವಿದೆ ಎಂದು ಅರ್ಥವಲ್ಲ ಏಕೆ? (ಬಿ) ಯೇಸುವಿನ ವಿಷಯದಲ್ಲಿ ಯಾವ ಗಲಿಬಿಲಿಯಿದೆ?

ಈ ಜಗತ್ತಿನಲ್ಲಿ ಅನೇಕ ಪ್ರಸಿದ್ಧ ವ್ಯಕ್ತಿಗಳಿದ್ದಾರೆ. ಕೆಲವರು ಅವರ ಸ್ವಂತ ಸಮುದಾಯ, ನಗರ ಅಥವಾ ದೇಶದಲ್ಲಿ ಪ್ರಖ್ಯಾತರು. ಇತರರು ಲೋಕವ್ಯಾಪಕವಾಗಿ ಹೆಸರುವಾಸಿಗಳು. ಆದರೂ, ಪ್ರಸಿದ್ಧ ವ್ಯಕ್ತಿಯೊಬ್ಬನ ಹೆಸರನ್ನು ತಿಳಿದಿರುವ ಮಾತ್ರಕ್ಕೆ ನಿಮಗೆ ಅವನ ಪರಿಚಯವಿದೆ ಎಂದಾಗುವುದಿಲ್ಲ. ಅವನ ಹಿನ್ನೆಲೆಯ ವಿವರಗಳನ್ನು ಮತ್ತು ಅವನು ನಿಜವಾಗಿಯೂ ಎಂತಹ ವ್ಯಕ್ತಿ ಎಂಬುದನ್ನು ನೀವು ತಿಳಿದಿದ್ದೀರಿ ಎಂದು ಇದರ ಅರ್ಥವಲ್ಲ.

2 ಯೇಸು ಕ್ರಿಸ್ತನು ಭೂಮಿಯ ಮೇಲೆ ಸುಮಾರು 2,000 ವರುಷಗಳ ಹಿಂದೆ ಜೀವಿಸಿದ್ದರೂ ಲೋಕವ್ಯಾಪಕವಾಗಿ ಜನರು ಅವನ ಕುರಿತು ಸ್ವಲ್ಪವನ್ನಾದರೂ ಕೇಳಿಸಿಕೊಂಡಿದ್ದಾರೆ. ಹಾಗಿದ್ದರೂ, ಯೇಸು ನಿಜವಾಗಿಯೂ ಯಾರಾಗಿದ್ದನೆಂಬ ವಿಷಯದಲ್ಲಿ ಅನೇಕರಿಗೆ ಗಲಿಬಿಲಿಯಿದೆ. ಅವನು ಒಬ್ಬ ಒಳ್ಳೇ ವ್ಯಕ್ತಿಯಾಗಿದ್ದನು ಅಷ್ಟೇ ಎಂಬುದು ಕೆಲವರ ಹೇಳಿಕೆ. ಅವನು ಕೇವಲ ಒಬ್ಬ ಪ್ರವಾದಿಯಾಗಿದ್ದನು ಎಂಬುದು ಇತರರ ವಾದ. ಇನ್ನು ಕೆಲವರು, ಯೇಸು ದೇವರೆಂದೂ ಅವನನ್ನು ಆರಾಧಿಸಬೇಕೆಂದೂ ನಂಬುತ್ತಾರೆ. ಇದು ಸರಿಯೊ?

3. ಯೇಸುವಿನ ಕುರಿತಾದ ಸತ್ಯವನ್ನು ನೀವು ತಿಳಿಯುವುದು ಏಕೆ ಪ್ರಾಮುಖ್ಯ?

3 ನೀವು ಯೇಸುವಿನ ಕುರಿತಾದ ಸತ್ಯವನ್ನು ತಿಳಿದುಕೊಳ್ಳುವುದು ಪ್ರಾಮುಖ್ಯವಾಗಿದೆ. ಏಕೆ? ಏಕೆಂದರೆ ಬೈಬಲ್‌ ಹೇಳುವುದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಹೌದು, ಯೆಹೋವ ದೇವರ ಕುರಿತು ಮತ್ತು ಯೇಸು ಕ್ರಿಸ್ತನ ಕುರಿತಾದ ಸತ್ಯವನ್ನು ತಿಳಿದುಕೊಳ್ಳುವುದು ಭೂಪರದೈಸಿನಲ್ಲಿ ನಿತ್ಯಜೀವಕ್ಕೆ ನಡೆಸಬಲ್ಲದು. (ಯೋಹಾನ 14:6) ಇದಲ್ಲದೆ, ಹೇಗೆ ಜೀವಿಸಬೇಕು ಮತ್ತು ಇತರರೊಂದಿಗೆ ಹೇಗೆ ವರ್ತಿಸಬೇಕು ಎಂಬ ವಿಷಯದಲ್ಲಿ ಯೇಸು ಇಟ್ಟಿರುವ ಮಾದರಿಯೇ ಅತ್ಯುತ್ತಮವಾಗಿದೆ. (ಯೋಹಾನ 13:34, 35) ಈ ಪುಸ್ತಕದ ಒಂದನೆಯ ಅಧ್ಯಾಯದಲ್ಲಿ, ದೇವರ ಕುರಿತಾದ ಸತ್ಯವನ್ನು ಚರ್ಚಿಸಿದೆವು. ಈಗ ನಾವು, ಯೇಸು ಕ್ರಿಸ್ತನ ಕುರಿತು ಬೈಬಲು ನಿಜವಾಗಿಯೂ ಏನನ್ನು ಬೋಧಿಸುತ್ತದೆ ಎಂಬುದನ್ನು ಪರಿಗಣಿಸೋಣ.

ವಾಗ್ದತ್ತ ಮೆಸ್ಸೀಯ

4. “ಮೆಸ್ಸೀಯ” ಮತ್ತು “ಕ್ರಿಸ್ತ” ಎಂಬ ಬಿರುದುಗಳ ಅರ್ಥವೇನು?

4 ಯೇಸು ಜನಿಸುವ ಎಷ್ಟೋ ಸಮಯಕ್ಕೆ ಮುಂಚೆ, ಮೆಸ್ಸೀಯನಾಗಿ ಅಥವಾ ಕ್ರಿಸ್ತನಾಗಿ ಯಾರನ್ನು ದೇವರು ಕಳುಹಿಸಲಿದ್ದನೋ ಅವನ ಬರೋಣವನ್ನು ಬೈಬಲು ಮುಂತಿಳಿಸಿತು. “ಮೆಸ್ಸೀಯ” (ಹೀಬ್ರು ಪದವೊಂದರಿಂದ) ಮತ್ತು “ಕ್ರಿಸ್ತ” (ಗ್ರೀಕ್‌ ಪದವೊಂದರಿಂದ) ಎಂಬ ಎರಡೂ ಬಿರುದುಗಳ ಅರ್ಥವು “ಅಭಿಷಿಕ್ತನು” ಎಂದಾಗಿದೆ. ಈ ವಾಗ್ದತ್ತ ವ್ಯಕ್ತಿಯು ಅಭಿಷಿಕ್ತನಾಗಲಿದ್ದನು, ಅಂದರೆ ಒಂದು ವಿಶೇಷ ಸ್ಥಾನಕ್ಕೆ ದೇವರಿಂದ ನೇಮಿಸಲ್ಪಡಲಿದ್ದನು. ಈ ಪುಸ್ತಕದ ಮುಂದಣ ಅಧ್ಯಾಯಗಳಲ್ಲಿ ನಾವು ದೇವರ ವಾಗ್ದಾನಗಳ ನೆರವೇರಿಕೆಯಲ್ಲಿ ಮೆಸ್ಸೀಯನ ಪ್ರಮುಖ ಪಾತ್ರದ ಬಗ್ಗೆ ಹೆಚ್ಚನ್ನು ಕಲಿಯುವೆವು. ಯೇಸು ಈಗಲೂ ನಮಗೆ ತರಬಲ್ಲ ಆಶೀರ್ವಾದಗಳ ಕುರಿತು ಕೂಡ ನಾವು ಕಲಿಯುವೆವು. ಆದರೆ ಯೇಸು ಜನಿಸುವುದಕ್ಕೆ ಮೊದಲು ಅನೇಕರು, ‘ಯಾರು ಈ ಮೆಸ್ಸೀಯನಾಗಿರುವನು?’ ಎಂದು ಕುತೂಹಲಪಟ್ಟಿರುವುದು ನಿಶ್ಚಯ.

5. ಯೇಸುವಿನ ಶಿಷ್ಯರಿಗೆ ಅವನ ವಿಷಯದಲ್ಲಿ ಯಾವ ಪೂರ್ಣ ನಿಶ್ಚಿತಾಭಿಪ್ರಾಯವಿತ್ತು?

5 ಸಾ.ಶ. ಒಂದನೆಯ ಶತಮಾನದಲ್ಲಿ, ನಜರೇತಿನ ಯೇಸುವಿನ ಶಿಷ್ಯರಿಗೆ ಅವನೇ ಮುಂತಿಳಿಸಲ್ಪಟ್ಟಿದ್ದ ಮೆಸ್ಸೀಯನೆಂಬ ಪೂರ್ಣ ನಿಶ್ಚಿತಾಭಿಪ್ರಾಯವಿತ್ತು. (ಯೋಹಾನ 1:41) ಸೀಮೋನ ಪೇತ್ರನೆಂಬ ಶಿಷ್ಯನು ಯೇಸುವಿಗೆ, “ನೀನು ಬರಬೇಕಾಗಿರುವ ಕ್ರಿಸ್ತನು” ಎಂದು ಬಹಿರಂಗವಾಗಿ ಹೇಳಿದನು. (ಮತ್ತಾಯ 16:16) ಆದರೆ ಯೇಸು ನಿಜವಾಗಿಯೂ ವಾಗ್ದತ್ತ ಮೆಸ್ಸೀಯನೆಂಬ ವಿಷಯದಲ್ಲಿ ಆ ಶಿಷ್ಯರು ಹೇಗೆ ಖಾತ್ರಿಯಿಂದಿರಸಾಧ್ಯವಿತ್ತು ಮತ್ತು ನಾವು ಹೇಗೆ ಖಾತ್ರಿಯಿಂದಿರಬಲ್ಲೆವು?

6. ನಂಬಿಗಸ್ತರು ಮೆಸ್ಸೀಯನನ್ನು ಗುರುತಿಸುವಂತೆ ಯೆಹೋವನು ಹೇಗೆ ಸಹಾಯಮಾಡಿದ್ದಾನೆ ಎಂಬುದನ್ನು ದೃಷ್ಟಾಂತಿಸಿರಿ.

6 ಯೇಸುವಿಗಿಂತ ಮುಂಚೆ ಜೀವಿಸಿದ್ದ ದೇವರ ಪ್ರವಾದಿಗಳು ಮೆಸ್ಸೀಯನ ಬಗ್ಗೆ ಅನೇಕ ವಿವರಗಳನ್ನು ಮುಂತಿಳಿಸಿದರು. ಈ ವಿವರಗಳ ಮೂಲಕ ಇತರರು ಅವನನ್ನು ಗುರುತಿಸಲಿದ್ದರು. ನಾವು ಇದನ್ನು ಈ ರೀತಿ ದೃಷ್ಟಾಂತಿಸಬಹುದು: ನೀವು ಹಿಂದೆಂದೂ ಭೇಟಿಯಾಗಿರದಂಥ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಬರಲು ನಿಮ್ಮನ್ನು ತುಂಬ ಜನಸಂದಣಿಯಿರುವ ಬಸ್‌ ನಿಲ್ದಾಣಕ್ಕೊ, ರೈಲು ನಿಲ್ದಾಣಕ್ಕೊ, ವಿಮಾನ ನಿಲ್ದಾಣಕ್ಕೊ ಕಳುಹಿಸಲಾಗುತ್ತದೆ ಎಂದು ಭಾವಿಸೋಣ. ಆ ವ್ಯಕ್ತಿಯ ಕುರಿತು ಯಾರಾದರೊಬ್ಬರು ಕೆಲವು ವಿವರಗಳನ್ನು ಕೊಡುವಲ್ಲಿ ನಿಮಗೆ ಸಹಾಯವಾಗುವುದು, ಅಲ್ಲವೆ? ಅದೇ ರೀತಿ, ಯೆಹೋವನು ಬೈಬಲ್‌ ಪ್ರವಾದಿಗಳ ಮೂಲಕ ಮೆಸ್ಸೀಯನು ಏನು ಮಾಡಲಿರುವನು ಮತ್ತು ಏನನ್ನು ಅನುಭವಿಸಲಿರುವನು ಎಂಬುದರ ಕುರಿತು ಗಣನೀಯ ವಿವರಗಳುಳ್ಳ ವರ್ಣನೆಯನ್ನು ಕೊಟ್ಟನು. ಈ ಅನೇಕ ಪ್ರವಾದನೆಗಳ ನೆರವೇರಿಕೆಯು ನಂಬಿಗಸ್ತರು ಅವನನ್ನು ಸ್ಪಷ್ಟವಾಗಿ ಗುರುತಿಸುವಂತೆ ಸಹಾಯಮಾಡಲಿತ್ತು.

7. ಯೇಸುವಿನ ಸಂಬಂಧದಲ್ಲಿ ನೆರವೇರಿರುವ ಪ್ರವಾದನೆಗಳಲ್ಲಿ ಎರಡು ಯಾವುವು?

7 ಕೇವಲ ಎರಡು ಉದಾಹರಣೆಗಳನ್ನು ಪರಿಗಣಿಸಿರಿ. ಒಂದನೆಯದ್ದು, 700ಕ್ಕೂ ಹೆಚ್ಚು ವರ್ಷಗಳಿಗೆ ಮುಂಚಿತವಾಗಿ, ಆ ವಾಗ್ದತ್ತ ವ್ಯಕ್ತಿಯು ಯೆಹೂದದ ಒಂದು ಚಿಕ್ಕ ಪಟ್ಟಣವಾದ ಬೇತ್ಲೆಹೇಮಿನಲ್ಲಿ ಜನಿಸುವನೆಂದು ಪ್ರವಾದಿಯಾದ ಮೀಕನು ಮುಂತಿಳಿಸಿದನು. (ಮೀಕ 5:2) ಯೇಸು ನಿಜವಾಗಿಯೂ ಹುಟ್ಟಿದ್ದೆಲ್ಲಿ? ನಿಖರವಾಗಿ ಅದೇ ಪಟ್ಟಣದಲ್ಲಿ! (ಮತ್ತಾಯ 2:1, 3-9) ಎರಡನೆಯದಾಗಿ, ಅನೇಕ ಶತಮಾನಗಳಿಗೆ ಮುಂಚೆಯೇ, ದಾನಿಯೇಲ 9:25 ರಲ್ಲಿ ದಾಖಲೆಯಾಗಿರುವ ಪ್ರವಾದನೆಯು ಮೆಸ್ಸೀಯನು ಪ್ರತ್ಯಕ್ಷನಾಗಲಿದ್ದ ನಿಖರವಾದ ವರ್ಷವನ್ನು ಸೂಚಿಸಿತು. ಅದು, ಸಾ.ಶ. 29 ಆಗಿತ್ತು. * ಈ ಪ್ರವಾದನೆ ಮತ್ತು ಇತರ ಪ್ರವಾದನೆಗಳ ನೆರವೇರಿಕೆಯು ಯೇಸುವೇ ವಾಗ್ದತ್ತ ಮೆಸ್ಸೀಯನೆಂಬುದನ್ನು ರುಜುಪಡಿಸುತ್ತದೆ.

ಯೇಸು ದೀಕ್ಷಾಸ್ನಾನ ಹೊಂದಿದಾಗ ಮೆಸ್ಸೀಯನು ಅಥವಾ ಕ್ರಿಸ್ತನಾದನು

8, 9. ಯೇಸುವೇ ಮೆಸ್ಸೀಯನೆಂಬ ವಿಷಯದಲ್ಲಿ ಯಾವ ರುಜುವಾತು ಅವನ ದೀಕ್ಷಾಸ್ನಾನದ ಸಮಯದಲ್ಲಿ ಸ್ಪಷ್ಟವಾಗಿ ತೋರಿಬಂತು?

8 ಯೇಸುವೇ ಮೆಸ್ಸೀಯನೆಂಬುದಕ್ಕೆ ಇನ್ನೂ ಹೆಚ್ಚಿನ ರುಜುವಾತು ಸಾ.ಶ. 29ರ ಅಂತ್ಯದ ಸುಮಾರಿಗೆ ಸ್ಪಷ್ಟವಾಗಿ ತೋರಿಬಂತು. ಯೇಸು ಯೊರ್ದನ್‌ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಸ್ನಾನಿಕನಾದ ಯೋಹಾನನ ಬಳಿಗೆ ಹೋದ ವರ್ಷ ಅದಾಗಿತ್ತು. ಯೋಹಾನನು ಮೆಸ್ಸೀಯನನ್ನು ಗುರುತಿಸಲಾಗುವಂತೆ ತಾನೊಂದು ಚಿಹ್ನೆಯನ್ನು ಕೊಡುವೆನೆಂದು ಯೆಹೋವನು ಮಾತುಕೊಟ್ಟಿದ್ದನು. ಮತ್ತು ಆ ಚಿಹ್ನೆಯನ್ನು ಯೋಹಾನನು ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ನೋಡಿದನು. ಆಗ ಏನು ಸಂಭವಿಸಿತೆಂಬುದನ್ನು ಬೈಬಲ್‌ ಹೀಗೆ ಹೇಳುತ್ತದೆ: “ಯೇಸು ಸ್ನಾನಮಾಡಿಸಿಕೊಂಡ ಕೂಡಲೆ ನೀರಿನಿಂದ ಮೇಲಕ್ಕೆ ಬರಲು ಇಗೋ, ಆತನಿಗೆ ಆಕಾಶವು ತೆರೆಯಿತು; ಮತ್ತು ದೇವರ ಆತ್ಮ ಪಾರಿವಾಳದ ಹಾಗೆ ಇಳಿದು ತನ್ನ ಮೇಲೆ ಬರುವದನ್ನು ಕಂಡನು. ಆಗ—ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು.” (ಮತ್ತಾಯ 3:16, 17) ಅಲ್ಲಿ ಸಂಭವಿಸಿದ್ದನ್ನು ನೋಡಿದ ಮತ್ತು ಕೇಳಿಸಿಕೊಂಡ ಬಳಿಕ, ಯೇಸು ದೇವರಿಂದ ಕಳುಹಿಸಲ್ಪಟ್ಟವನೆಂಬ ವಿಷಯದಲ್ಲಿ ಯೋಹಾನನಿಗೆ ಸಂಶಯವೇ ಇರಲಿಲ್ಲ. (ಯೋಹಾನ 1:32-34) ಆ ದಿನ ದೇವರ ಕಾರ್ಯಕಾರಿ ಶಕ್ತಿ ಅಥವಾ ಆತ್ಮವು ಅವನ ಮೇಲೆ ಸುರಿಸಲ್ಪಟ್ಟಾಕ್ಷಣ ಯೇಸು, ನಾಯಕನು ಮತ್ತು ಅರಸನಾಗಿ ನೇಮಿಸಲ್ಪಟ್ಟವನಾದ ಮೆಸ್ಸೀಯನು ಅಥವಾ ಕ್ರಿಸ್ತನಾದನು.—ಯೆಶಾಯ 55:4.

9 ಬೈಬಲ್‌ ಪ್ರವಾದನೆಯ ನೆರವೇರಿಕೆಯೂ ಯೆಹೋವನ ಸ್ವಂತ ಹೇಳಿಕೆಯೂ ಯೇಸುವೇ ವಾಗ್ದತ್ತ ಮೆಸ್ಸೀಯನೆಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದರೆ ಬೈಬಲು ಯೇಸು ಕ್ರಿಸ್ತನ ವಿಷಯದಲ್ಲಿ ಇನ್ನೆರಡು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆ: ಅವನು ಬಂದದ್ದು ಎಲ್ಲಿಂದ, ಮತ್ತು ಅವನು ಯಾವ ರೀತಿಯ ವ್ಯಕ್ತಿಯಾಗಿದ್ದನು?

ಯೇಸು ಬಂದದ್ದು ಎಲ್ಲಿಂದ?

10. ಯೇಸು ಭೂಮಿಗೆ ಬರುವುದಕ್ಕೆ ಮುಂಚಿನ ಅವನ ಅಸ್ತಿತ್ವದ ಬಗ್ಗೆ ಬೈಬಲು ಏನು ಬೋಧಿಸುತ್ತದೆ?

10 ಭೂಮಿಗೆ ಬರುವ ಮೊದಲು ಯೇಸು ಸ್ವರ್ಗದಲ್ಲಿ ಜೀವಿಸಿದ್ದನೆಂದು ಬೈಬಲು ಬೋಧಿಸುತ್ತದೆ. ಮೆಸ್ಸೀಯನು ಬೇತ್ಲೆಹೇಮಿನಲ್ಲಿ ಜನಿಸುವನೆಂದೂ ಅವನ ಮೂಲವು “ಪುರಾತನ” ಎಂದೂ ಮೀಕನು ಪ್ರವಾದಿಸಿದನು. (ಮೀಕ 5:2) ಯೇಸು, ತಾನು ಮನುಷ್ಯನಾಗಿ ಹುಟ್ಟುವ ಮೊದಲು ಸ್ವರ್ಗದಲ್ಲಿದ್ದೆ ಎಂದು ಅನೇಕ ಸಂದರ್ಭಗಳಲ್ಲಿ ಹೇಳಿದನು. (ಯೋಹಾನ 3:13; 6:38, 62; 17:4, 5) ಸ್ವರ್ಗದಲ್ಲಿ ಆತ್ಮಜೀವಿಯಾಗಿದ್ದ ಯೇಸುವಿಗೆ ಯೆಹೋವನೊಂದಿಗೆ ಒಂದು ವಿಶೇಷ ಸಂಬಂಧವಿತ್ತು.

11. ಯೇಸು ಯೆಹೋವನ ಅತ್ಯಮೂಲ್ಯ ಪುತ್ರನೆಂದು ಬೈಬಲು ಹೇಗೆ ತೋರಿಸುತ್ತದೆ?

11 ಯೇಸು ಯೆಹೋವನ ಅತ್ಯಮೂಲ್ಯ ಕುಮಾರನಾಗಿದ್ದಾನೆ ಮತ್ತು ಇದಕ್ಕೆ ಸಕಾರಣವಿದೆ. ಅವನನ್ನು “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನೆಂದು ಕರೆಯಲಾಗುತ್ತದೆ, ಏಕೆಂದರೆ ಅವನು ದೇವರ ಪ್ರಥಮ ಸೃಷ್ಟಿಯಾಗಿದ್ದನು. * (ಕೊಲೊಸ್ಸೆ 1:15) ಈ ಪುತ್ರನನ್ನು ವಿಶೇಷ ವ್ಯಕ್ತಿಯಾಗಿ ಮಾಡುವ ಇನ್ನೊಂದು ವಿಷಯವೂ ಇದೆ. ಅವನು ‘ಒಬ್ಬನೇ ಮಗನು’ ಆಗಿದ್ದಾನೆ. (ಯೋಹಾನ 3:16) ಅಂದರೆ ದೇವರು ನೇರವಾಗಿ ಸೃಷ್ಟಿ ಮಾಡಿದ ಏಕಮಾತ್ರ ವ್ಯಕ್ತಿ ಯೇಸುವಾಗಿದ್ದಾನೆ. ದೇವರು ಬೇರೆಲ್ಲ ವಸ್ತುಗಳನ್ನು ಸೃಷ್ಟಿಸಿದಾಗ ಉಪಯೋಗಿಸಿದ ಒಬ್ಬನೇ ವ್ಯಕ್ತಿಯೂ ಯೇಸುವೇ ಆಗಿದ್ದಾನೆ. (ಕೊಲೊಸ್ಸೆ 1:16) ಇದಲ್ಲದೆ, ಯೇಸುವನ್ನು “ವಾಕ್ಯ” ಎಂದೂ ಕರೆಯಲಾಗಿದೆ. (ಯೋಹಾನ 1:14) ಅವನು ದೇವರ ಪ್ರತಿನಿಧಿಯಾಗಿ ಮಾತಾಡಿದನೆಂದು ಇದು ನಮಗೆ ತಿಳಿಸುತ್ತದೆ. ಅವನು ತನ್ನ ತಂದೆಯ ಬೇರೆ ಪುತ್ರರಿಗೆ ಅಂದರೆ ಆತ್ಮಪುತ್ರರಿಗೂ ಮಾನವಪುತ್ರರಿಗೂ ಸಂದೇಶಗಳನ್ನು ಮತ್ತು ಆದೇಶಗಳನ್ನು ತಲಪಿಸುತ್ತಿದ್ದನೆಂಬುದರಲ್ಲಿ ಸಂಶಯವಿಲ್ಲ.

12. ಜ್ಯೇಷ್ಠಪುತ್ರನು ದೇವರಿಗೆ ಸಮಾನನಲ್ಲವೆಂದು ನಮಗೆ ತಿಳಿದಿರುವುದು ಹೇಗೆ?

12 ಕೆಲವರು ನಂಬುವಂತೆ, ಈ ಜ್ಯೇಷ್ಠಪುತ್ರನು ದೇವರಿಗೆ ಸಮಾನನಾಗಿದ್ದಾನೆಯೆ? ಬೈಬಲು ಹಾಗೆ ಬೋಧಿಸುವುದಿಲ್ಲ. ಹಿಂದಿನ ಪ್ಯಾರಗ್ರಾಫ್‌ನಲ್ಲಿ ನಾವು ಗಮನಿಸಿರುವಂತೆ, ಈ ಪುತ್ರನು ಸೃಷ್ಟಿಸಲ್ಪಟ್ಟಿದ್ದನು. ಹಾಗಿರುವುದರಿಂದ ಅವನಿಗೆ ಆದಿಯಿತ್ತೆಂಬುದು ಸುವ್ಯಕ್ತ, ಆದರೆ ಯೆಹೋವನಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. (ಕೀರ್ತನೆ 90:2) ಈ ಒಬ್ಬನೇ ಪುತ್ರನು ತನ್ನ ತಂದೆಗೆ ಸಮಾನವಾಗಿರುವ ವಿಚಾರದ ಕುರಿತು ಯೋಚಿಸಿದ್ದೂ ಇಲ್ಲ. ಮತ್ತು ತಂದೆಯು ಪುತ್ರನಿಗಿಂತ ದೊಡ್ಡವನೆಂದು ಬೈಬಲು ಸ್ಪಷ್ಟವಾಗಿ ಬೋಧಿಸುತ್ತದೆ. (ಯೋಹಾನ 14:28; 1 ಕೊರಿಂಥ 11:3) ಯೆಹೋವನೊಬ್ಬನೇ “ಸರ್ವಶಕ್ತನಾದ ದೇವರು.” (ಆದಿಕಾಂಡ 17:1) ಆದಕಾರಣ, ಆತನಿಗೆ ಸಮಾನರಿಲ್ಲ. *

13. ಬೈಬಲು ಯೇಸುವನ್ನು “ಅದೃಶ್ಯನಾದ ದೇವರ ಪ್ರತಿರೂಪನು” ಎಂದು ಕರೆಯುವಾಗ ಅದರರ್ಥವೇನು?

13 ಯೆಹೋವನೂ ಆತನ ಜ್ಯೇಷ್ಠಪುತ್ರನೂ ಶತಕೋಟ್ಯಂತರ ವರುಷಗಳಲ್ಲಿ—ತಾರಾಮಂಡಲವೂ ಭೂಮಿಯೂ ಸೃಷ್ಟಿಸಲ್ಪಡುವುದಕ್ಕೆ ಎಷ್ಟೋ ಮುಂಚೆ—ನಿಕಟ ಒಡನಾಟದ ಸಂತಸವನ್ನು ಅನುಭವಿಸಿದರು. ಅವರು ಪರಸ್ಪರರನ್ನು ಎಷ್ಟೊಂದು ಪ್ರೀತಿಸಿದ್ದಿರಬೇಕು! (ಯೋಹಾನ 3:35; 14:31) ಈ ಪ್ರಿಯ ಕುಮಾರನು ಅವನ ತಂದೆಯಂತೆಯೇ ಇದ್ದನು. ಈ ಕಾರಣದಿಂದಲೇ ಬೈಬಲು ಈ ಪುತ್ರನನ್ನು, “ಅದೃಶ್ಯನಾದ ದೇವರ ಪ್ರತಿರೂಪನು” ಎಂದು ಸೂಚಿಸುತ್ತದೆ. (ಕೊಲೊಸ್ಸೆ 1:15) ಹೌದು, ಹೇಗೆ ಮಾನವ ಪುತ್ರನೊಬ್ಬನು ತನ್ನ ತಂದೆಯನ್ನು ವಿವಿಧ ವಿಧಗಳಲ್ಲಿ ನಿಕಟವಾಗಿ ಹೋಲುತ್ತಿರಬಹುದೊ ಹಾಗೆಯೇ ಈ ಸ್ವರ್ಗೀಯ ಪುತ್ರನು ತನ್ನ ತಂದೆಯ ಗುಣಗಳನ್ನೂ ವ್ಯಕ್ತಿತ್ವವನ್ನೂ ಪ್ರತಿಬಿಂಬಿಸಿದನು.

14. ಯೆಹೋವನ ಒಬ್ಬನೇ ಮಗನು ಮನುಷ್ಯನಾಗಿ ಹುಟ್ಟಿದ್ದು ಹೇಗೆ?

14 ಯೆಹೋವನ ಒಬ್ಬನೇ ಮಗನು ಇಚ್ಛಾಪೂರ್ವಕವಾಗಿ ಸ್ವರ್ಗವನ್ನು ಬಿಟ್ಟು, ಮನುಷ್ಯನಾಗಿ ಜೀವಿಸಲು ಭೂಮಿಗೆ ಬಂದನು. ಆದರೆ, ‘ಆತ್ಮಜೀವಿಯೊಬ್ಬನು ಮನುಷ್ಯನಾಗಿ ಹುಟ್ಟುವುದು ಹೇಗೆ ಸಾಧ್ಯ?’ ಎಂದು ತಿಳಿಯಲು ನೀವು ಕುತೂಹಲಪಟ್ಟೀರಿ. ಇದನ್ನು ಪೂರೈಸಲು ಯೆಹೋವನು ಒಂದು ಅದ್ಭುತವನ್ನು ಮಾಡಿದನು. ಆತನು ತನ್ನ ಜ್ಯೇಷ್ಠಪುತ್ರನ ಜೀವವನ್ನು ಸ್ವರ್ಗದಿಂದ, ಮರಿಯಳೆಂಬ ಹೆಸರಿನ ಯೆಹೂದಿ ಕನ್ಯೆಯ ಗರ್ಭಕ್ಕೆ ಸ್ಥಳಾಂತರಿಸಿದನು. ಇದರಲ್ಲಿ ಒಬ್ಬ ಮಾನವ ಪಿತನು ಒಳಗೂಡಿರಲಿಲ್ಲ. ಹೀಗೆ ಮರಿಯಳು ಪರಿಪೂರ್ಣ ಮಗನೊಬ್ಬನನ್ನು ಹೆತ್ತು, ಅವನಿಗೆ ಯೇಸು ಎಂದು ಹೆಸರಿಟ್ಟಳು.—ಲೂಕ 1:30-35.

ಯೇಸು ಯಾವ ರೀತಿಯ ವ್ಯಕ್ತಿಯಾಗಿದ್ದನು?

15. ಯೇಸುವಿನ ಮೂಲಕ ನಾವು ಯೆಹೋವನನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುತ್ತೇವೆಂದು ಏಕೆ ಹೇಳಸಾಧ್ಯವಿದೆ?

15 ಯೇಸು ಭೂಮಿಯಲ್ಲಿದ್ದಾಗ ಹೇಳಿದಂಥ ಮತ್ತು ಮಾಡಿದಂಥ ವಿಷಯಗಳು ನಾವು ಅವನ ಉತ್ತಮ ಪರಿಚಯ ಮಾಡಿಕೊಳ್ಳುವಂತೆ ಸಹಾಯಮಾಡುತ್ತವೆ. ಇದಕ್ಕಿಂತಲೂ ಹೆಚ್ಚಾಗಿ, ಯೇಸುವಿನ ಮೂಲಕ ನಾವು ಯೆಹೋವನನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುತ್ತೇವೆ. ಅದು ಹೇಗೆ? ಈ ಪುತ್ರನು ತನ್ನ ತಂದೆಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುತ್ತಾನೆ ಎಂಬುದನ್ನು ಜ್ಞಾಪಕಕ್ಕೆ ತನ್ನಿರಿ. ಈ ಕಾರಣದಿಂದಲೇ ಯೇಸು ತನ್ನ ಶಿಷ್ಯರಲ್ಲಿ ಒಬ್ಬನಿಗೆ ಹೇಳಿದ್ದು: “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.” (ಯೋಹಾನ 14:9) ಸುವಾರ್ತೆ ಪುಸ್ತಕಗಳು ಎಂದು ಪ್ರಸಿದ್ಧವಾಗಿರುವ ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನ ಎಂಬ ನಾಲ್ಕು ಬೈಬಲ್‌ ಪುಸ್ತಕಗಳು, ಯೇಸು ಕ್ರಿಸ್ತನ ಜೀವನ, ಚಟುವಟಿಕೆ ಮತ್ತು ಅವನ ವೈಯಕ್ತಿಕ ಗುಣಗಳ ಬಗ್ಗೆ ಬಹಳಷ್ಟನ್ನು ನಮಗೆ ತಿಳಿಯಪಡಿಸುತ್ತವೆ.

16. ಯೇಸುವಿನ ಪ್ರಧಾನ ಸಂದೇಶವೇನಾಗಿತ್ತು, ಮತ್ತು ಅವನ ಬೋಧನೆಗಳು ಎಲ್ಲಿಂದ ಬಂದವುಗಳಾಗಿದ್ದವು?

16 ಯೇಸು ಒಬ್ಬ “ಗುರು” ಅಥವಾ ಬೋಧಕನಾಗಿ ಪ್ರಸಿದ್ಧನಾಗಿದ್ದನು. (ಯೋಹಾನ 1:38; 13:13) ಅವನು ಏನನ್ನು ಬೋಧಿಸಿದನು? ಅವನ ಸಂದೇಶವು ಪ್ರಧಾನವಾಗಿ, “ರಾಜ್ಯದ ಸುವಾರ್ತೆ”ಯಾಗಿತ್ತು. ಈ ರಾಜ್ಯವು ದೇವರ ರಾಜ್ಯವಾಗಿದೆ ಮತ್ತು ಇಡೀ ಭೂಮಿಯನ್ನು ಆಳುತ್ತಾ ವಿಧೇಯ ಮಾನವರಿಗೆ ನಿತ್ಯಾಶೀರ್ವಾದಗಳನ್ನು ತರಲಿರುವ ಒಂದು ಸ್ವರ್ಗೀಯ ಸರಕಾರವಾಗಿದೆ. (ಮತ್ತಾಯ 4:23) ಇದು ಯಾರ ಸಂದೇಶವಾಗಿತ್ತು? ಯೇಸು ತಾನೇ ಹೇಳಿದ್ದು, “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು,” ಅಂದರೆ ಯೆಹೋವನದು. (ಯೋಹಾನ 7:16) ಮಾನವರು ರಾಜ್ಯದ ಸುವಾರ್ತೆಯನ್ನು ಕೇಳಿಸಿಕೊಳ್ಳಬೇಕು ಎಂಬುದು ತನ್ನ ತಂದೆಯ ಅಪೇಕ್ಷೆಯಾಗಿದೆಯೆಂದು ಯೇಸುವಿಗೆ ತಿಳಿದಿತ್ತು. ದೇವರ ರಾಜ್ಯ ಮತ್ತು ಅದು ಸಾಧಿಸಲಿರುವ ಸಂಗತಿಗಳ ಕುರಿತು ನಾವು 8ನೆಯ ಅಧ್ಯಾಯದಲ್ಲಿ ಹೆಚ್ಚನ್ನು ಕಲಿಯುವೆವು.

17. ಯೇಸು ಎಲ್ಲೆಲ್ಲಿ ಬೋಧಿಸಿದನು, ಮತ್ತು ಇತರರಿಗೆ ಬೋಧಿಸಲು ಅವನು ತುಂಬ ಪ್ರಯಾಸಪಟ್ಟದ್ದೇಕೆ?

17 ಯೇಸು ಬೋಧಿಸಿದ್ದೆಲ್ಲಿ? ಎಲ್ಲಿ ಜನರು ಸಿಕ್ಕಿದರೊ ಅಲ್ಲೆಲ್ಲಾ, ಅಂದರೆ ಗ್ರಾಮಗಳಲ್ಲಿ, ನಗರಗಳಲ್ಲಿ, ಹಳ್ಳಿಗಳಲ್ಲಿ, ಮಾರುಕಟ್ಟೆಗಳಲ್ಲಿ ಮತ್ತು ಜನರ ಮನೆಗಳಲ್ಲಿ ಅವನು ಬೋಧಿಸಿದನು. ಜನರು ತನ್ನ ಬಳಿ ಬರುವಂತೆ ಯೇಸು ಅಪೇಕ್ಷಿಸದೆ, ತಾನೇ ಅವರ ಬಳಿಗೆ ಹೋದನು. (ಮಾರ್ಕ 6:56; ಲೂಕ 19:5, 6) ಯೇಸು ಅಷ್ಟು ಪ್ರಯಾಸಪಟ್ಟು, ತನಗಿದ್ದ ಸಮಯದಲ್ಲಿ ಹೆಚ್ಚಿನದ್ದನ್ನು ಸಾರುವುದರಲ್ಲಿ ಮತ್ತು ಬೋಧಿಸುವುದರಲ್ಲಿ ವ್ಯಯಿಸಿದ್ದೇಕೆ? ಏಕೆಂದರೆ, ಹಾಗೆ ಮಾಡುವುದು ಅವನಿಗಾಗಿದ್ದ ದೇವರ ಚಿತ್ತವಾಗಿತ್ತು. ಮತ್ತು ಯೇಸು ಯಾವಾಗಲೂ ತನ್ನ ತಂದೆಯ ಚಿತ್ತವನ್ನೇ ಮಾಡಿದನು. (ಯೋಹಾನ 8:28, 29) ಆದರೆ ಅವನು ಸಾರಿದ್ದಕ್ಕೆ ಇನ್ನೊಂದು ಕಾರಣವೂ ಇತ್ತು. ತನ್ನನ್ನು ನೋಡಲು ಬಂದ ಜನಸಮೂಹವನ್ನು ಕಂಡು ಅವನು ಕನಿಕರಪಟ್ಟನು. (ಮತ್ತಾಯ 9:35, 36) ಏಕೆಂದರೆ ಅವರಿಗೆ ದೇವರ ಮತ್ತು ಆತನ ಉದ್ದೇಶಗಳ ಕುರಿತಾದ ಸತ್ಯವನ್ನು ಕಲಿಸಬೇಕಾಗಿದ್ದ ಧಾರ್ಮಿಕ ಮುಖಂಡರು ಅದನ್ನು ಮಾಡದೆ ಅವರನ್ನು ಅಲಕ್ಷ್ಯಮಾಡಿದ್ದರು. ರಾಜ್ಯ ಸಂದೇಶವನ್ನು ಜನರು ಕೇಳಿಸಿಕೊಳ್ಳುವುದು ಎಷ್ಟು ಅಗತ್ಯವಾದದ್ದಾಗಿತ್ತೆಂದು ಯೇಸು ತಿಳಿದಿದ್ದನು.

18. ಯೇಸುವಿನ ಯಾವ ಗುಣಗಳು ನಿಮಗೆ ಅತ್ಯಂತ ಆಕರ್ಷಣೀಯವಾಗಿವೆ?

18 ಯೇಸು, ಬೇರೆಯವರ ಬಗ್ಗೆ ಕಾಳಜಿವಹಿಸುತ್ತಿದ್ದ ಪ್ರೀತಿಭರಿತ ಮನುಷ್ಯನಾಗಿದ್ದನು. ಆದಕಾರಣ ಯಾವುದೇ ಅಂಜಿಕೆಯಿಲ್ಲದೆ ಅವನ ಬಳಿ ಹೋಗಬಹುದಾದ ದಯಾಪರ ವ್ಯಕ್ತಿ ಅವನಾಗಿದ್ದಾನೆಂದು ಇತರರು ಕಂಡುಕೊಂಡರು. ಮಕ್ಕಳು ಕೂಡ ಅವನ ಸಂಗಡ ಹಾಯಾಗಿರುತ್ತಿದ್ದರು. (ಮಾರ್ಕ 10:13-16) ಯೇಸು ನಿಷ್ಪಕ್ಷಪಾತಿಯಾಗಿದ್ದನು. ಭ್ರಷ್ಟತೆ, ಅನ್ಯಾಯಗಳನ್ನು ಅವನು ದ್ವೇಷಿಸಿದನು. (ಮತ್ತಾಯ 21:12, 13) ಸ್ತ್ರೀಯರಿಗೆ ಕಡಿಮೆ ಮಾನ ಮತ್ತು ಹಕ್ಕುಗಳು ಕೊಡಲ್ಪಡುತ್ತಿದ್ದ ಆ ಕಾಲದಲ್ಲಿ, ಅವನು ಅವರನ್ನು ಘನತೆಯಿಂದ ಉಪಚರಿಸಿದನು. (ಯೋಹಾನ 4:9, 27) ಯೇಸು ನಿಜವಾಗಿಯೂ ನಮ್ರನಾಗಿದ್ದನು. ಒಂದು ಸಂದರ್ಭದಲ್ಲಿ ಅವನು ತನ್ನ ಅಪೊಸ್ತಲರ ಕಾಲುಗಳನ್ನು ಸಹ ತೊಳೆದನು. ಇದು ಸಾಮಾನ್ಯವಾಗಿ ಕೆಳಮಟ್ಟದ ದಾಸನೊಬ್ಬನು ಮಾಡುವ ಸೇವೆಯಾಗಿತ್ತು.

ಜನರು ಸಿಕ್ಕಿದಲ್ಲೆಲ್ಲ ಯೇಸು ಸಾರಿದನು

19. ಯೇಸು ಬೇರೆಯವರ ಆವಶ್ಯಕತೆಗಳಿಗೆ ಶೀಘ್ರವಾಗಿ ಪ್ರತಿಕ್ರಿಯೆ ತೋರಿಸುವವನಾಗಿದ್ದನೆಂದು ಯಾವ ಉದಾಹರಣೆ ತೋರಿಸುತ್ತದೆ?

19 ಬೇರೆಯವರ ಆವಶ್ಯಕತೆಗಳಿಗೆ ಯೇಸು ಶೀಘ್ರ ಪ್ರತಿಕ್ರಿಯೆ ತೋರಿಸುವವನಾಗಿದ್ದನು. ಅವನು ದೇವರಾತ್ಮದ ಶಕ್ತಿಯಿಂದ ವಾಸಿಮಾಡುವ ಅದ್ಭುತಗಳನ್ನು ನಡೆಸಿದಾಗ ಇದು ವಿಶೇಷವಾಗಿ ವ್ಯಕ್ತವಾಯಿತು. (ಮತ್ತಾಯ 14:14) ಉದಾಹರಣೆಗೆ, ಕುಷ್ಠರೋಗಿಯೊಬ್ಬನು ಯೇಸುವನ್ನು ಸಮೀಪಿಸಿ, “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಹೇಳಿದನು. ಆ ಮನುಷ್ಯನ ಬೇನೆ ಮತ್ತು ಸಂಕಟ ಸ್ವತಃ ತನಗೇ ಆಗುತ್ತಿರುವಂತೆ ಯೇಸುವಿಗೆ ಅನಿಸಿತು. ಕನಿಕರದಿಂದ ಪ್ರಚೋದಿತನಾಗಿ ಯೇಸು ತನ್ನ ಕೈಚಾಚಿ ಆ ಮನುಷ್ಯನನ್ನು ಮುಟ್ಟಿ “ನನಗೆ ಮನಸ್ಸುಂಟು; ಶುದ್ಧವಾಗು” ಎಂದು ಹೇಳಿದಾಗ ಆ ರೋಗಿಯು ಸ್ವಸ್ಥನಾದನು! (ಮಾರ್ಕ 1:40-42) ಆಗ ಆ ಮನುಷ್ಯನಿಗೆ ಹೇಗನಿಸಿದ್ದಿರಬೇಕೆಂದು ಊಹಿಸಬಲ್ಲಿರಾ?

ಕಡೇ ವರೆಗೂ ನಂಬಿಗಸ್ತನು

20, 21. ದೇವರಿಗೆ ನಿಷ್ಠೆಯ ವಿಧೇಯತೆಯನ್ನು ತೋರಿಸುವುದರಲ್ಲಿ ಯೇಸು ಹೇಗೆ ಮಾದರಿಯನ್ನಿಟ್ಟನು?

20 ದೇವರಿಗೆ ನಿಷ್ಠೆಯ ವಿಧೇಯತೆ ತೋರಿಸುವುದರಲ್ಲಿ ಯೇಸು ಅತ್ಯುತ್ತಮ ಮಾದರಿಯನ್ನಿಟ್ಟನು. ಅವನು ಸಕಲ ವಿಧವಾದ ಪರಿಸ್ಥಿತಿಗಳಲ್ಲಿ ಮತ್ತು ಸಕಲ ರೀತಿಯ ವಿರೋಧ ಹಾಗೂ ಕಷ್ಟಾನುಭವಗಳ ಮಧ್ಯದಲ್ಲೂ ತನ್ನ ಸ್ವರ್ಗೀಯ ಪಿತನಿಗೆ ನಂಬಿಗಸ್ತನಾಗಿ ಸ್ಥಿರನಿಂತನು. ಸೈತಾನನ ಪ್ರಲೋಭನೆಗಳನ್ನು ಯೇಸು ದೃಢವಾಗಿ ಮತ್ತು ಯಶಸ್ವಿಯಾಗಿ ಪ್ರತಿಭಟಿಸಿದನು. (ಮತ್ತಾಯ 4:1-11) ಒಂದು ಕಾಲದಲ್ಲಿ, ಯೇಸುವಿನ ಸ್ವಂತ ಸಂಬಂಧಿಕರಲ್ಲೇ ಕೆಲವರು ಅವನಲ್ಲಿ ನಂಬಿಕೆಯನ್ನಿಡಲಿಲ್ಲ. ಅವನಿಗೆ “ಹುಚ್ಚುಹಿಡಿದದೆ” ಎಂದು ಸಹ ಹೇಳಿದರು. (ಮಾರ್ಕ 3:21) ಆದರೆ ಅವರು ತನ್ನ ಮೇಲೆ ಪ್ರಭಾವ ಬೀರುವಂತೆ ಯೇಸು ಬಿಡಲಿಲ್ಲ. ಅವನು ದೇವರ ಕೆಲಸವನ್ನು ಮಾಡುತ್ತ ಹೋದನು. ತುಚ್ಛೀಕರಿಸುವ ಮಾತುಗಳು ಮತ್ತು ನಿಂದೆಗಳ ಮಧ್ಯೆಯೂ ಯೇಸು ಆತ್ಮನಿಯಂತ್ರಣವನ್ನು ಕಾಪಾಡಿಕೊಂಡನು. ಅವನು ಎಂದೂ ತನ್ನ ವಿರೋಧಿಗಳಿಗೆ ಹಾನಿಮಾಡಲು ಪ್ರಯತ್ನಿಸಲಿಲ್ಲ.—1 ಪೇತ್ರ 2:21-23.

21 ಯೇಸು ಮರಣದ ವರೆಗೂ, ಅದೂ ತನ್ನ ವೈರಿಗಳ ಕೈಯಿಂದ ಬಂದ ಕ್ರೂರ ಹಾಗೂ ಯಾತನಾಮಯ ಮರಣದ ವರೆಗೂ ನಂಬಿಗಸ್ತನಾಗಿ ಉಳಿದನು. (ಫಿಲಿಪ್ಪಿ 2:8) ಅವನು ತನ್ನ ಮಾನವ ಜೀವನದ ಕೊನೆಯ ದಿನದಲ್ಲಿ ಸಹಿಸಿಕೊಂಡ ಸಂಗತಿಗಳನ್ನು ಪರಿಗಣಿಸಿರಿ. ಅವನು ಬಂಧಿಸಲ್ಪಟ್ಟನು, ಸುಳ್ಳು ಸಾಕ್ಷಿಗಳ ಆರೋಪಕ್ಕೊಳಗಾದನು, ಭ್ರಷ್ಟರಾದ ನ್ಯಾಯಾಧೀಶರಿಂದ ಅಪರಾಧಿ ಎಂಬ ತೀರ್ಪುಪಡೆದನು, ಜನಜಂಗುಳಿಯ ಅಪಹಾಸ್ಯಕ್ಕೀಡಾದನು ಮತ್ತು ಸೈನಿಕರ ಕೈಗಳಲ್ಲಿ ಚಿತ್ರಹಿಂಸೆಗೊಳಗಾದನು. ಕಂಬಕ್ಕೆ ಜಡಿಯಲ್ಪಟ್ಟ ಅವನು “ತೀರಿತು” ಎಂದು ಉದ್ಗರಿಸಿ ತನ್ನ ಕೊನೆಯುಸಿರೆಳೆದನು. (ಯೋಹಾನ 19:30) ಆದರೂ, ಯೇಸುವಿನ ಮರಣಾನಂತರ ಮೂರನೆಯ ದಿನದಲ್ಲಿ, ಅವನ ಸ್ವರ್ಗೀಯ ತಂದೆಯು ಅವನನ್ನು ಆತ್ಮಜೀವನಕ್ಕೆ ಪುನರುತ್ಥಾನಗೊಳಿಸಿದನು. (1 ಪೇತ್ರ 3:18) ಕೆಲವು ವಾರಗಳಾನಂತರ ಅವನು ಸ್ವರ್ಗಕ್ಕೆ ಹಿಂದಿರುಗಿ ಹೋದನು. ಅಲ್ಲಿ ಅವನು ‘ದೇವರ ಬಲಗಡೆಯಲ್ಲಿ ಕೂತುಕೊಂಡನು’ ಮತ್ತು ರಾಜ್ಯಾಧಿಕಾರವನ್ನು ಪಡೆಯಲು ಕಾಯತೊಡಗಿದನು.—ಇಬ್ರಿಯ 10:12, 13.

22. ಮರಣದ ವರೆಗೂ ನಂಬಿಗಸ್ತನಾಗಿ ಉಳಿಯುವ ಮೂಲಕ ಯೇಸು ಏನನ್ನು ಸಾಧ್ಯಗೊಳಿಸಿದನು?

22 ಮರಣದ ವರೆಗೂ ನಂಬಿಗಸ್ತನಾಗಿ ಉಳಿಯುವ ಮೂಲಕ ಯೇಸು ಏನನ್ನು ಸಾಧ್ಯಗೊಳಿಸಿದನು? ಯೇಸು ತನ್ನ ಮರಣದ ಮೂಲಕ ವಾಸ್ತವವಾಗಿ ನಮಗೆ ಯೆಹೋವನ ಮೂಲ ಉದ್ದೇಶಕ್ಕೆ ಹೊಂದಿಕೆಯಲ್ಲಿ ಪರದೈಸ್‌ ಭೂಮಿಯಲ್ಲಿ ನಿತ್ಯಜೀವವನ್ನು ಪಡೆಯುವ ಸಂದರ್ಭವನ್ನು ಸಾಧ್ಯಗೊಳಿಸಿದನು. ಯೇಸುವಿನ ಮರಣವು ಅದನ್ನು ಸಾಧ್ಯಗೊಳಿಸುವುದು ಹೇಗೆಂಬುದನ್ನು ಮುಂದಿನ ಅಧ್ಯಾಯವು ಚರ್ಚಿಸುವುದು.

^ ಪ್ಯಾರ. 7 ಯೇಸುವಿನ ಸಂಬಂಧದಲ್ಲಿ ನೆರವೇರಿದ ದಾನಿಯೇಲನ ಪ್ರವಾದನೆಯ ವಿವರಣೆಗಾಗಿ ಪರಿಶಿಷ್ಟದ 198-9ನೇ ಪುಟಗಳನ್ನು ನೋಡಿರಿ.

^ ಪ್ಯಾರ. 11 ಯೆಹೋವನು ತಂದೆಯೆಂದು ಕರೆಯಲ್ಪಡುವುದು ಆತನು ಸೃಷ್ಟಿಕರ್ತನಾಗಿರುವ ಕಾರಣವೇ. (ಯೆಶಾಯ 64:8) ದೇವರು ಯೇಸುವನ್ನು ಸೃಷ್ಟಿಸಿದ್ದರಿಂದ ಅವನು ದೇವರ ಮಗನೆಂದು ಕರೆಯಲ್ಪಡುತ್ತಾನೆ. ತದ್ರೀತಿಯ ಕಾರಣಗಳಿಂದಾಗಿ, ಬೇರೆ ಆತ್ಮಜೀವಿಗಳು ಮತ್ತು ಮನುಷ್ಯನಾಗಿದ್ದ ಆದಾಮನು ಸಹ ದೇವರ ಪುತ್ರರೆಂದು ಕರೆಯಲ್ಪಡುತ್ತಾರೆ.—ಆದಿಕಾಂಡ 6:1; ಲೂಕ 3:38.

^ ಪ್ಯಾರ. 12 ಜ್ಯೇಷ್ಠಪುತ್ರನು ದೇವರಿಗೆ ಸಮಾನನಲ್ಲವೆಂಬುದಕ್ಕೆ ಹೆಚ್ಚಿನ ರುಜುವಾತಿಗಾಗಿ ಪರಿಶಿಷ್ಟದ 202-4ನೇ ಪುಟಗಳನ್ನು ನೋಡಿ.