ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಎಂಟು

ದೇವರ ರಾಜ್ಯ ಎಂದರೇನು?

ದೇವರ ರಾಜ್ಯ ಎಂದರೇನು?
  • ದೇವರ ರಾಜ್ಯದ ಕುರಿತು ಬೈಬಲು ನಮಗೆ ಏನು ಹೇಳುತ್ತದೆ?

  • ದೇವರ ರಾಜ್ಯವು ಏನು ಮಾಡುವುದು?

  • ದೇವರ ರಾಜ್ಯವು ಭೂಮಿಯ ಮೇಲೆ ಆತನ ಚಿತ್ತವನ್ನು ಯಾವಾಗ ನೆರವೇರಿಸುವುದು?

1. ಯಾವ ಪ್ರಸಿದ್ಧ ಪ್ರಾರ್ಥನೆಯನ್ನು ಈಗ ಪರಿಶೀಲಿಸಲಾಗುವುದು?

ಅನೇಕರು, ‘ನಮ್ಮ ತಂದೆ’ ಅಥವಾ ‘ಕರ್ತನ ಪ್ರಾರ್ಥನೆ’ ಎಂದು ಕರೆಯುವ ಪ್ರಾರ್ಥನೆಯು ಲೋಕವ್ಯಾಪಕವಾಗಿ ಕೋಟ್ಯಂತರ ಜನರಿಗೆ ಪರಿಚಿತವಾಗಿದೆ. ಆ ಎರಡೂ ಅಭಿವ್ಯಕ್ತಿಗಳು ಯೇಸು ಕ್ರಿಸ್ತನು ತಾನೇ ಮಾದರಿಯಾಗಿ ಕೊಟ್ಟ ಒಂದು ಪ್ರಸಿದ್ಧ ಪ್ರಾರ್ಥನೆಯನ್ನು ಸೂಚಿಸುತ್ತವೆ. ಇದೊಂದು ಅರ್ಥಗರ್ಭಿತ ಪ್ರಾರ್ಥನೆಯಾಗಿದೆ ಮತ್ತು ಇದರ ಪ್ರಥಮ ಮೂರು ಬೇಡಿಕೆಗಳನ್ನು ಪರಿಶೀಲಿಸುವುದು ಬೈಬಲು ನಿಜವಾಗಿಯೂ ಏನನ್ನು ಬೋಧಿಸುತ್ತದೆಂಬ ವಿಷಯದಲ್ಲಿ ಹೆಚ್ಚನ್ನು ಕಲಿಯುವಂತೆ ನಿಮಗೆ ಸಹಾಯಮಾಡುವುದು.

2. ಯಾವ ಮೂರು ವಿಷಯಗಳಿಗಾಗಿ ಪ್ರಾರ್ಥಿಸುವಂತೆ ಯೇಸು ತನ್ನ ಶಿಷ್ಯರಿಗೆ ಕಲಿಸಿದನು?

2 ಈ ಮಾದರಿ ಪ್ರಾರ್ಥನೆಯ ಪ್ರಾರಂಭದಲ್ಲಿ ಯೇಸು ತನ್ನ ಕೇಳುಗರಿಗೆ ಕಲಿಸಿದ್ದು: “ಆದದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು—ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:9-13) ಈ ಮೂರು ಬೇಡಿಕೆಗಳ ಅರ್ಥವೇನು?

3. ದೇವರ ರಾಜ್ಯದ ಬಗ್ಗೆ ನಾವೇನು ತಿಳಿಯಬೇಕಾಗಿದೆ?

3 ಯೆಹೋವ ಎಂಬ ದೇವರ ಹೆಸರಿನ ಬಗ್ಗೆ ನಾವಾಗಲೇ ಬಹಳಷ್ಟು ವಿಷಯಗಳನ್ನು ಕಲಿತಿದ್ದೇವೆ. ಮತ್ತು ಸ್ವಲ್ಪಮಟ್ಟಿಗೆ ನಾವು ದೇವರ ಚಿತ್ತವನ್ನು—ಆತನು ಮಾನವಕುಲಕ್ಕಾಗಿ ಈಗಾಗಲೇ ಏನನ್ನು ಮಾಡಿದ್ದಾನೆ ಮತ್ತು ಇನ್ನೂ ಮುಂದಕ್ಕೆ ಏನನ್ನು ಮಾಡಲಿದ್ದಾನೆ ಎಂಬ ಸಂಗತಿಗಳನ್ನು ಚರ್ಚಿಸಿದ್ದೇವೆ. ಆದರೆ “ನಿನ್ನ ರಾಜ್ಯವು ಬರಲಿ” ಎಂದು ನಾವು ಪ್ರಾರ್ಥಿಸುವಂತೆ ಯೇಸು ಹೇಳಿದಾಗ, ಅವನು ಯಾವುದಕ್ಕೆ ಸೂಚಿಸುತ್ತಿದ್ದನು? ದೇವರ ರಾಜ್ಯ ಎಂದರೇನು? ಅದರ ಬರೋಣವು ದೇವರ ನಾಮವನ್ನು ಪರಿಶುದ್ಧಗೊಳಿಸುವುದು ಅಥವಾ ಪವಿತ್ರಗೊಳಿಸುವುದು ಹೇಗೆ? ಮತ್ತು ರಾಜ್ಯದ ಬರೋಣವು ದೇವರ ಚಿತ್ತದ ನೆರವೇರಿಕೆಗೆ ಹೇಗೆ ಸಂಬಂಧಿಸಿದೆ?

ದೇವರ ರಾಜ್ಯ ಎಂದರೇನು?

4. ದೇವರ ರಾಜ್ಯ ಎಂದರೇನು, ಮತ್ತು ಅದರ ಅರಸನು ಯಾರು?

4 ದೇವರ ರಾಜ್ಯವು ಯೆಹೋವ ದೇವರಿಂದ ಸ್ಥಾಪಿಸಲ್ಪಟ್ಟಿರುವ ಮತ್ತು ಆತನಿಂದಲೇ ಆಯ್ಕೆಮಾಡಲ್ಪಟ್ಟಿರುವ ಅರಸನಿರುವ ಒಂದು ಸರಕಾರವಾಗಿದೆ. ದೇವರ ರಾಜ್ಯದ ಅರಸನು ಯಾರು? ಯೇಸು ಕ್ರಿಸ್ತನೇ. ರಾಜನಾಗಿರುವ ಯೇಸು ಎಲ್ಲ ಮಾನವ ಪ್ರಭುಗಳಿಗಿಂತ ಶ್ರೇಷ್ಠನಾಗಿದ್ದಾನೆ ಮತ್ತು ಅವನನ್ನು “ಕರ್ತರ ಕರ್ತನೂ ರಾಜಾಧಿರಾಜನೂ” ಎಂದು ಕರೆಯಲಾಗಿದೆ. (ಪ್ರಕಟನೆ 17:14) ಯಾವನೇ ಮಾನವ ಪ್ರಭುವು, ಅತ್ಯುತ್ತಮ ಮಾನವ ಪ್ರಭುವು ಕೂಡ ಮಾಡುವ ಒಳಿತಿಗಿಂತ ಎಷ್ಟೋ ಹೆಚ್ಚು ಒಳಿತನ್ನು ಮಾಡುವ ಶಕ್ತಿ ಯೇಸುವಿಗಿದೆ.

5. ದೇವರ ರಾಜ್ಯವು ಎಲ್ಲಿಂದ ಆಳುತ್ತದೆ, ಮತ್ತು ಯಾವುದರ ಮೇಲೆ ಆಳುತ್ತದೆ?

5 ದೇವರ ರಾಜ್ಯವು ಎಲ್ಲಿಂದ ಆಳುವುದು? ಸರಿ, ಯೇಸು ಎಲ್ಲಿದ್ದಾನೆ? ಅವನು ಯಾತನಾಕಂಬದ ಮೇಲೆ ಕೊಲ್ಲಲ್ಪಟ್ಟನು, ಬಳಿಕ ಅವನ ಪುನರುತ್ಥಾನವಾಯಿತು ಎಂಬುದನ್ನು ಕಲಿತದ್ದು ನಿಮ್ಮ ಜ್ಞಾಪಕಕ್ಕೆ ಬರಬಹುದು. ಅದಾಗಿ ಸ್ವಲ್ಪದರಲ್ಲಿ ಅವನ ಸ್ವರ್ಗಾರೋಹಣವಾಯಿತು. (ಅ. ಕೃತ್ಯಗಳು 2:33) ಆದಕಾರಣ, ದೇವರ ರಾಜ್ಯವಿರುವುದು ಅಲ್ಲಿಯೇ, ಅಂದರೆ ಸ್ವರ್ಗದಲ್ಲಿ. ಆದುದರಿಂದಲೇ ಬೈಬಲು ಅದನ್ನು “ಪರಲೋಕರಾಜ್ಯ” ಎಂದು ಕರೆಯುತ್ತದೆ. (2 ತಿಮೊಥೆಯ 4:18) ದೇವರ ರಾಜ್ಯವು ಸ್ವರ್ಗದಲ್ಲಿರುವುದಾದರೂ ಅದು ಭೂಮಿಯನ್ನು ಆಳುವುದು.—ಪ್ರಕಟನೆ 11:15.

6, 7. ಯಾವುದು ಯೇಸುವನ್ನು ಒಬ್ಬ ಮಹೋನ್ನತ ಅರಸನನ್ನಾಗಿ ಮಾಡುತ್ತದೆ?

6 ಯೇಸುವನ್ನು ಮಹೋನ್ನತ ರಾಜನನ್ನಾಗಿ ಮಾಡುವುದು ಯಾವುದು? ಒಂದು ವಿಷಯವು, ಅವನು ಎಂದಿಗೂ ಸಾಯದಿರುವುದೇ. ಮಾನವ ಅರಸರಿಗೆ ಹೋಲಿಸುವಾಗ, ಬೈಬಲು ಯೇಸುವಿಗೆ “ನಿರ್ಲಯವಾದ ಜೀವ” ಇದೆಯೆಂದು ಹೇಳುತ್ತದೆ. (ಇಬ್ರಿಯ 7:15, 16) ಇದರರ್ಥ, ಯೇಸು ಮಾಡುವಂತಹ ಸಕಲ ಒಳಿತು ನಿತ್ಯಕ್ಕೂ ಬಾಳುವುದು. ಮತ್ತು ಅವನು ನಿಶ್ಚಯವಾಗಿಯೂ ಮಹತ್ತಾದ ಹಾಗೂ ಉತ್ತಮವಾದ ವಿಷಯಗಳನ್ನು ಮಾಡುವನು.

7 ಯೇಸುವಿನ ಕುರಿತಾಗಿ ತಿಳಿಸಲ್ಪಟ್ಟಿರುವ ಈ ಬೈಬಲ್‌ ಪ್ರವಾದನೆಯನ್ನು ಪರ್ಯಾಲೋಚಿಸಿ: “ಆ ಅಂಕುರದ ಮೇಲೆ ಜ್ಞಾನವಿವೇಕದಾಯಕ ಆತ್ಮ, ಆಲೋಚನಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆಯನ್ನೂ ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವದು; ಯೆಹೋವನ ಭಯವು ಅವನಿಗೆ ಪರಿಮಳಿಸುವದು; ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡುವದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವದಿಲ್ಲ; ಬಡವರಿಗೋಸ್ಕರ ನ್ಯಾಯವಾಗಿ ತೀರ್ಪುಮಾಡುವನು, ಲೋಕದ ದೀನರಿಗೋಸ್ಕರ ಧರ್ಮವಾಗಿ ನಿರ್ಣಯಿಸುವನು.” (ಯೆಶಾಯ 11:2-4) ಈ ಮಾತುಗಳು, ಯೇಸು ಭೂಮಿಯಲ್ಲಿರುವ ಜನರಿಗೆ ನೀತಿವಂತನಾದ ಮತ್ತು ಕನಿಕರವುಳ್ಳ ಅರಸನಾಗಲಿದ್ದನೆಂದು ತಿಳಿಸುತ್ತವೆ. ನೀವು ಇಂತಹ ಒಬ್ಬ ಪ್ರಭುವನ್ನು ಇಷ್ಟಪಡುವಿರೊ?

8. ಯೇಸುವಿನೊಂದಿಗೆ ಯಾರು ಆಳುವರು?

8 ದೇವರ ರಾಜ್ಯದ ವಿಷಯದಲ್ಲಿ ಇನ್ನೊಂದು ಸತ್ಯ ಇಲ್ಲಿದೆ: ಯೇಸು ಒಂಟಿಯಾಗಿ ಆಳುವುದಿಲ್ಲ. ಅವನೊಂದಿಗೆ ಇತರರೂ ಆಳುವರು. ಉದಾಹರಣೆಗೆ, ಅಪೊಸ್ತಲ ಪೌಲನು ತಿಮೊಥೆಯನಿಗೆ, “ಸಹಿಸಿಕೊಳ್ಳುವವರಾಗಿದ್ದರೆ ಆತನೊಡನೆ ಆಳುವೆವು” ಎಂದು ಹೇಳಿದನು. (2 ತಿಮೊಥೆಯ 2:12) ಹೌದು, ಪೌಲನು, ತಿಮೊಥೆಯನು ಮತ್ತು ದೇವರು ಆಯ್ಕೆಮಾಡಿರುವಂಥ ಇತರ ನಂಬಿಗಸ್ತರು ಸ್ವರ್ಗೀಯ ರಾಜ್ಯದಲ್ಲಿ ಯೇಸುವಿನೊಂದಿಗೆ ಆಳುವರು. ಆ ಸದವಕಾಶ ಎಷ್ಟು ಜನರಿಗಿರುವುದು?

9. ಯೇಸುವಿನೊಂದಿಗೆ ಎಷ್ಟು ಮಂದಿ ಆಳುವರು, ಮತ್ತು ದೇವರು ಇವರನ್ನು ಆರಿಸಿಕೊಳ್ಳಲು ಆರಂಭಿಸಿದ್ದು ಯಾವಾಗ?

9 ಈ ಪುಸ್ತಕದ 7ನೆಯ ಅಧ್ಯಾಯದಲ್ಲಿ ತೋರಿಸಲ್ಪಟ್ಟಿರುವಂತೆ, ಅಪೊಸ್ತಲ ಯೋಹಾನನಿಗೆ ಕೊಡಲ್ಪಟ್ಟ ಒಂದು ದರ್ಶನದಲ್ಲಿ ಅವನು ಇದನ್ನು ಕಂಡನು: “ಯಜ್ಞದ ಕುರಿಯಾದಾತನು [ಯೇಸು ಕ್ರಿಸ್ತನು] ಚೀಯೋನ್‌ ಪರ್ವತದ ಮೇಲೆ [ಪರಲೋಕದಲ್ಲಿ ಅವನ ರಾಜ ಸ್ಥಾನದಲ್ಲಿ] ನಿಂತಿರುವದನ್ನು ಕಂಡೆನು. ಆತನ ಜೊತೆಯಲ್ಲಿ ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ ಮಂದಿ ಇದ್ದರು; ಅವರವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು.” ಈ 1,44,000 ಮಂದಿ ಯಾರು? ಯೋಹಾನನು ತಾನೇ ಹೇಳುವುದು: “ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು. ಇವರು ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದಾತನಿಗೂ ಪ್ರಥಮಫಲದಂತಾದರು.” (ಪ್ರಕಟನೆ 14:1, 4) ಹೌದು, ಇವರು ಯೇಸು ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳಲು ವಿಶೇಷವಾಗಿ ಆರಿಸಲ್ಪಟ್ಟಿರುವ ಅವನ ನಂಬಿಗಸ್ತ ಹಿಂಬಾಲಕರಾಗಿದ್ದಾರೆ. ಮರಣದಿಂದ ಸ್ವರ್ಗೀಯ ಜೀವನಕ್ಕೆ ಎಬ್ಬಿಸಲ್ಪಟ್ಟ ಬಳಿಕ, ಅವರು ಯೇಸುವಿನೊಂದಿಗೆ “ಭೂಮಿಯ ಮೇಲೆ [“ರಾಜರಾಗಿ,” NW] ಆಳುವರು.” (ಪ್ರಕಟನೆ 5:10) ಅಪೊಸ್ತಲರ ದಿನಗಳಂದಿನಿಂದ, ದೇವರು ಈ 1,44,000 ಮಂದಿಯ ಸಂಖ್ಯೆಯನ್ನು ಪೂರ್ಣಗೊಳಿಸಲು ನಂಬಿಗಸ್ತ ಕ್ರೈಸ್ತರನ್ನು ಆಯ್ಕೆಮಾಡುತ್ತ ಬಂದಿದ್ದಾನೆ.

10. ಯೇಸು ಮತ್ತು 1,44,000 ಮಂದಿ ಮಾನವಕುಲವನ್ನು ಆಳುವುದು ಒಂದು ಪ್ರೀತಿಪೂರ್ವಕ ಏರ್ಪಾಡಾಗಿದೆ ಏಕೆ?

10 ಮಾನವಕುಲವನ್ನು ಯೇಸು ಮತ್ತು 1,44,000 ಮಂದಿ ಆಳುವಂತೆ ಮಾಡಲಾಗಿರುವ ಈ ಏರ್ಪಾಡು ತುಂಬ ಪ್ರೀತಿಪೂರ್ವಕವಾದದ್ದು. ಏಕೆಂದರೆ ಒಂದು ವಿಷಯವನ್ನು ಹೇಳುವುದಾದರೆ, ಯೇಸುವಿಗೆ ಒಬ್ಬ ಮಾನವನಾಗಿರುವುದರಲ್ಲಿ ಮತ್ತು ಕಷ್ಟಾನುಭವಿಸುವುದರಲ್ಲಿ ಏನೆಲ್ಲ ಒಳಗೂಡಿದೆ ಎಂಬುದು ಗೊತ್ತು. ಪೌಲನು ಹೇಳಿದಂತೆ, ಯೇಸು “ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ.” (ಇಬ್ರಿಯ 4:15; 5:8) ಅವನ ಜೊತೆರಾಜರು ಸಹ ಮನುಷ್ಯರಾಗಿ ಬಾಧೆಪಟ್ಟವರು ಮತ್ತು ತಾಳಿಕೊಂಡವರು ಆಗಿದ್ದಾರೆ. ಇದಲ್ಲದೆ, ಅವರು ಅಪರಿಪೂರ್ಣತೆಯೊಂದಿಗೆ ಹೋರಾಡಿದವರೂ ಸಕಲ ವಿಧದ ರೋಗಗಳನ್ನು ಸಹಿಸಿಕೊಂಡವರೂ ಆಗಿದ್ದಾರೆ. ಆದುದರಿಂದ, ಮನುಷ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರು ಅರ್ಥಮಾಡಿಕೊಳ್ಳುವರೆಂಬುದು ನಿಶ್ಚಯ!

ದೇವರ ರಾಜ್ಯವು ಏನು ಮಾಡುವುದು?

11. ದೇವರ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ಪ್ರಾರ್ಥಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇಕೆ?

11 ದೇವರ ರಾಜ್ಯವು ಬರುವಂತೆ ಪ್ರಾರ್ಥಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದಾಗ, ದೇವರ ಚಿತ್ತವು ‘ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ’ ಎಂದೂ ಪ್ರಾರ್ಥಿಸುವಂತೆ ಅವರಿಗೆ ಹೇಳಿದನು. ದೇವರು ಪರಲೋಕದಲ್ಲಿದ್ದಾನೆ ಮತ್ತು ನಂಬಿಗಸ್ತ ದೇವದೂತರು ಅಲ್ಲಿ ಆತನ ಚಿತ್ತವನ್ನು ಯಾವಾಗಲೂ ಮಾಡಿರುತ್ತಾರೆ. ಆದರೂ, ಈ ಪುಸ್ತಕದ 3ನೆಯ ಅಧ್ಯಾಯದಲ್ಲಿ, ಒಬ್ಬ ದುಷ್ಟ ದೂತನು ದೇವರ ಚಿತ್ತವನ್ನು ಮಾಡುವುದನ್ನು ನಿಲ್ಲಿಸಿದನೆಂದೂ ಆದಾಮಹವ್ವರು ಪಾಪಮಾಡುವಂತೆ ಅವನು ನಡೆಸಿದನೆಂದೂ ನಾವು ಕಲಿತೆವು. ಅಧ್ಯಾಯ 10ರಲ್ಲಿ, ಪಿಶಾಚನಾದ ಸೈತಾನನೆಂದು ನಾವು ತಿಳಿದಿರುವ ಆ ದುಷ್ಟ ದೂತನ ಕುರಿತು ಬೈಬಲು ಏನು ಬೋಧಿಸುತ್ತದೆ ಎಂಬುದರ ಬಗ್ಗೆ ಇನ್ನೂ ಹೆಚ್ಚು ವಿಷಯಗಳನ್ನು ನಾವು ಕಲಿಯುವೆವು. ಸೈತಾನನು ಮತ್ತು ಅವನನ್ನು ಹಿಂಬಾಲಿಸುವ ಆಯ್ಕೆಮಾಡಿದ, ದೆವ್ವಗಳೆಂದು ಕರೆಯಲ್ಪಡುವ ದೂತಾತ್ಮಜೀವಿಗಳು ಸ್ವರ್ಗದಲ್ಲಿ ಸ್ವಲ್ಪ ಸಮಯ ಇರುವಂತೆ ಬಿಡಲ್ಪಟ್ಟರು. ಈ ಕಾರಣದಿಂದ, ಆಗ ಸ್ವರ್ಗದಲ್ಲಿದ್ದ ಎಲ್ಲರೂ ದೇವರ ಚಿತ್ತವನ್ನು ಮಾಡುತ್ತಿರಲಿಲ್ಲ. ಆದರೆ ದೇವರ ರಾಜ್ಯವು ಆಳಲು ಪ್ರಾರಂಭಿಸಲಿದ್ದಾಗ ಆ ಪರಿಸ್ಥಿತಿಯು ಬದಲಾಗಲಿಕ್ಕಿತ್ತು. ಹೊಸದಾಗಿ ಪಟ್ಟವನ್ನೇರಿದ ಅರಸ ಯೇಸು ಕ್ರಿಸ್ತನು, ಸೈತಾನನ ಮೇಲೆ ಯುದ್ಧ ಹೂಡಲಿದ್ದನು.—ಪ್ರಕಟನೆ 12:7-9.

12. ಪ್ರಕಟನೆ 12:10 ರಲ್ಲಿ ಯಾವ ಎರಡು ಪ್ರಾಮುಖ್ಯ ಘಟನೆಗಳನ್ನು ವರ್ಣಿಸಲಾಗಿದೆ?

12 ತದನಂತರ ಏನು ಸಂಭವಿಸಲಿಕ್ಕಿತ್ತೊ ಅದನ್ನು ಈ ಪ್ರವಾದನಾ ಮಾತುಗಳು ವರ್ಣಿಸುತ್ತವೆ: “ಆಗ ಪರಲೋಕದಲ್ಲಿ ಮಹಾ ಶಬ್ದವನ್ನು ಕೇಳಿದೆನು, ಅದು—ಈಗ ಜಯವೂ ಶಕ್ತಿಯೂ ರಾಜ್ಯವೂ ನಮ್ಮ ದೇವರಿಗೆ ಉಂಟಾಯಿತು; ಆತನು ಅಭಿಷೇಕಿಸಿದವನ ಅಧಿಕಾರವು ಈಗ ಸ್ಥಾಪಿತವಾಯಿತು; ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರುಗಾರನು [ಸೈತಾನನು] ದೊಬ್ಬಲ್ಪಟ್ಟಿದ್ದಾನೆ.” (ಪ್ರಕಟನೆ 12:10) ಈ ಬೈಬಲ್‌ ವಚನದಲ್ಲಿ ವರ್ಣಿಸಲ್ಪಟ್ಟಿರುವ ಅತಿ ಪ್ರಾಮುಖ್ಯವಾದ ಎರಡು ಘಟನೆಗಳನ್ನು ಗಮನಿಸಿದಿರೊ? ಮೊದಲನೆಯದ್ದು, ಯೇಸು ಕ್ರಿಸ್ತನ ಅಧಿಕಾರದಲ್ಲಿರುವ ದೇವರ ರಾಜ್ಯವು ಆಳಲಾರಂಭಿಸುತ್ತದೆ. ಮತ್ತು ಎರಡನೆಯದ್ದು, ಸೈತಾನನನ್ನು ಸ್ವರ್ಗದಿಂದ ಭೂಮಿಗೆ ದೊಬ್ಬಲಾಗುತ್ತದೆ.

13. ಸೈತಾನನನ್ನು ಸ್ವರ್ಗದಿಂದ ದೊಬ್ಬಿರುವುದರ ಪರಿಣಾಮವೇನು?

13 ಆ ಎರಡು ಘಟನೆಗಳ ಪರಿಣಾಮಗಳೇನಾಗಿವೆ? ಸ್ವರ್ಗದಲ್ಲಿ ಏನು ಸಂಭವಿಸಿತೊ ಅದರ ಕುರಿತು ನಾವು ಓದುವುದು: “ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ.” (ಪ್ರಕಟನೆ 12:12) ಹೌದು, ಸ್ವರ್ಗದಲ್ಲಿನ ನಂಬಿಗಸ್ತ ದೇವದೂತರು ಹರ್ಷಿಸುತ್ತಾರೆ, ಏಕೆಂದರೆ ಸೈತಾನನೂ ಅವನ ದೆವ್ವಗಳೂ ಈಗ ಅಲ್ಲಿಲ್ಲ. ಸ್ವರ್ಗದಲ್ಲಿರುವ ಪ್ರತಿಯೊಬ್ಬರೂ ಯೆಹೋವನಿಗೆ ನಂಬಿಗಸ್ತರಾಗಿರುವವರೇ. ಅಲ್ಲಿ ಅವಿಚ್ಛಿನ್ನವಾದ ಸಂಪೂರ್ಣ ಶಾಂತಿ ಮತ್ತು ಸಾಮರಸ್ಯವಿದೆ. ಹೀಗೆ ದೇವರ ಚಿತ್ತವು ಸ್ವರ್ಗದಲ್ಲಿ ನೆರವೇರುತ್ತಿದೆ.

ಸ್ವರ್ಗದಿಂದ ಸೈತಾನನ ಮತ್ತು ಅವನ ದೆವ್ವಗಳ ದೊಬ್ಬುವಿಕೆಯು ಭೂಮಿಗೆ ದುರ್ಗತಿಯನ್ನು ತಂದಿತು. ಇಂತಹ ಕ್ಲೇಶಗಳು ಬೇಗನೆ ಅಂತ್ಯಗೊಳ್ಳುವವು

14. ಸೈತಾನನು ಭೂಮಿಗೆ ದೊಬ್ಬಲ್ಪಟ್ಟಿರುವ ಕಾರಣ ಏನು ಸಂಭವಿಸಿದೆ?

14 ಆದರೆ ಭೂಮಿಯ ಕುರಿತಾಗಿ ಏನು? ಬೈಬಲು ಹೇಳುವುದು: “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” (ಪ್ರಕಟನೆ 12:12) ತನ್ನನ್ನು ಸ್ವರ್ಗದಿಂದ ದೊಬ್ಬಿರುವುದಕ್ಕಾಗಿ ಮತ್ತು ತನಗೆ ಸ್ವಲ್ಪವೇ ಸಮಯ ಬಾಕಿ ಇರುವ ಕಾರಣಕ್ಕಾಗಿ ಸೈತಾನನು ರೌದ್ರಗೊಂಡಿದ್ದಾನೆ. ಈ ಕೋಪದಿಂದ ಅವನು ‘ಭೂಮಿಗೆ’ ಸಂಕಟವನ್ನು ಅಥವಾ “ದುರ್ಗತಿ”ಯನ್ನು ತರುತ್ತಾನೆ. ಮುಂದಿನ ಅಧ್ಯಾಯದಲ್ಲಿ ಈ ‘ದುರ್ಗತಿಯ’ ಬಗ್ಗೆ ನಾವು ಹೆಚ್ಚನ್ನು ಕಲಿಯುವೆವು. ಆದರೆ, ಇದನ್ನು ಮನಸ್ಸಿನಲ್ಲಿಟ್ಟವರಾಗಿ, ನಾವು ಹೀಗೆ ಕೇಳಬಹುದು: ರಾಜ್ಯವು ಹೇಗೆ ದೇವರ ಚಿತ್ತವು ಭೂಮಿಯ ಮೇಲೆ ನೆರವೇರುವಂತೆ ಮಾಡಬಲ್ಲದು?

15. ಭೂಮಿಗಾಗಿರುವ ದೇವರ ಚಿತ್ತವೇನು?

15 ಭೂಮಿಗಾಗಿರುವ ದೇವರ ಚಿತ್ತವೇನೆಂಬುದನ್ನು ಜ್ಞಾಪಿಸಿಕೊಳ್ಳಿ. ಅದನ್ನು 3ನೆಯ ಅಧ್ಯಾಯದಲ್ಲಿ ನೀವು ಕಲಿತುಕೊಂಡಿರಿ. ಈ ಭೂಮಿಯು, ಸಾವೇ ಇಲ್ಲದ ನೀತಿಭರಿತ ಮಾನವಕುಲದಿಂದ ತುಂಬಿರುವ ಪರದೈಸಾಗಬೇಕೆಂಬುದೇ ತನ್ನ ಚಿತ್ತವಾಗಿದೆಯೆಂದು ದೇವರು ಏದೆನಿನಲ್ಲಿ ತೋರಿಸಿದನು. ಆದರೆ ಸೈತಾನನು ಆದಾಮಹವ್ವರು ಪಾಪಗೈಯುವಂತೆ ಮಾಡಿದನು ಮತ್ತು ಇದು ದೇವರ ಚಿತ್ತವು ಭೂಮಿಯ ಮೇಲೆ ನೆರವೇರುವುದನ್ನು ಬಾಧಿಸಿತೇ ಹೊರತು ಆ ಉದ್ದೇಶವು ಮಾತ್ರ ಬದಲಾಗಲಿಲ್ಲ. ‘ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸಬೇಕು’ ಎಂಬುದನ್ನು ಯೆಹೋವನು ಇನ್ನೂ ಉದ್ದೇಶಿಸುತ್ತಾನೆ. (ಕೀರ್ತನೆ 37:29) ಮತ್ತು ದೇವರ ರಾಜ್ಯವು ಅದನ್ನು ನೆರವೇರಿಸುವುದು. ಆದರೆ ಯಾವ ವಿಧದಲ್ಲಿ?

16, 17. ದಾನಿಯೇಲ 2:44 ದೇವರ ರಾಜ್ಯದ ಕುರಿತು ನಮಗೇನು ತಿಳಿಸುತ್ತದೆ?

16 ದಾನಿಯೇಲ 2:44 ರಲ್ಲಿ ಕಂಡುಬರುವ ಪ್ರವಾದನೆಯನ್ನು ಪರಿಗಣಿಸಿ. ಅಲ್ಲಿ ನಾವು ಓದುವುದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” ಇದು ದೇವರ ರಾಜ್ಯದ ಕುರಿತು ನಮಗೇನು ತಿಳಿಸುತ್ತದೆ?

17 ಮೊದಲನೆಯದಾಗಿ, “ಆ ರಾಜರ ಕಾಲದಲ್ಲಿ” ಅಥವಾ ಬೇರೆ ರಾಜ್ಯಗಳು ಇನ್ನೂ ಅಸ್ತಿತ್ವದಲ್ಲಿರುವಾಗಲೇ ದೇವರ ರಾಜ್ಯವು ಸ್ಥಾಪಿಸಲ್ಪಡಲಿತ್ತೆಂದು ಅದು ನಮಗೆ ತಿಳಿಸುತ್ತದೆ. ಎರಡನೆಯದಾಗಿ, ಆ ರಾಜ್ಯವು ಶಾಶ್ವತವಾಗಿರುವುದೆಂದು ಅದು ಹೇಳುತ್ತದೆ. ಅದು ಸೋಲಿಸಲ್ಪಟ್ಟು, ಅದರ ಸ್ಥಾನದಲ್ಲಿ ಇನ್ನೊಂದು ಸರಕಾರವು ಬರುವುದಿಲ್ಲ. ಮೂರನೆಯದಾಗಿ, ದೇವರ ರಾಜ್ಯ ಮತ್ತು ಈ ಲೋಕದ ರಾಜ್ಯಗಳ ಮಧ್ಯೆ ಯುದ್ಧ ನಡೆಯುವುದೆಂಬುದನ್ನು ನಾವು ನೋಡುತ್ತೇವೆ. ಇದರಲ್ಲಿ ದೇವರ ರಾಜ್ಯಕ್ಕೆ ವಿಜಯವು ದಕ್ಕುವುದು. ಅಂತಿಮವಾಗಿ, ಮಾನವಕುಲವನ್ನಾಳುವ ಒಂದೇ ಸರಕಾರ ಅದಾಗಿರುವುದು. ಆಗ ಮಾನವರು ಇಷ್ಟರ ತನಕ ತಿಳಿದಿದ್ದುದರಲ್ಲೇ ಅತ್ಯುತ್ತಮವಾದ ಪ್ರಭುತ್ವದ ಕೆಳಗೆ ಸಂತೋಷವನ್ನು ಅನುಭವಿಸುವರು.

18. ದೇವರ ರಾಜ್ಯ ಮತ್ತು ಈ ಲೋಕ ಸರಕಾರಗಳ ಮಧ್ಯೆ ನಡೆಯುವ ಅಂತಿಮ ಯುದ್ಧದ ಹೆಸರೇನು?

18 ದೇವರ ರಾಜ್ಯ ಮತ್ತು ಈ ಲೋಕ ಸರಕಾರಗಳ ಮಧ್ಯೆ ನಡೆಯುವ ಆ ಅಂತಿಮ ಯುದ್ಧದ ಕುರಿತು ಬೈಬಲಿಗೆ ಬಹಳಷ್ಟನ್ನು ಹೇಳಲಿಕ್ಕಿದೆ. ದೃಷ್ಟಾಂತಕ್ಕೆ, ಅದು ಬೋಧಿಸುವುದೇನೆಂದರೆ, ಅಂತ್ಯವು ಸಮೀಪಿಸುವಾಗ ದುಷ್ಟಾತ್ಮಗಳು “ಭೂಲೋಕದಲ್ಲೆಲ್ಲಿಯೂ ಇರುವ ರಾಜರ ಬಳಿಗೆ ಹೋಗಿ” ಅವರನ್ನು ವಂಚಿಸಲು ಸುಳ್ಳುಗಳನ್ನು ಹರಡಿಸುವವು. ಇದರ ಉದ್ದೇಶವೇನು? “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ” ಆ ರಾಜರನ್ನು ಕೂಡಿಸುವುದೇ. ಈ ಭೂರಾಜರನ್ನು “ಇಬ್ರಿಯ ಭಾಷೆಯಲ್ಲಿ ಹರ್ಮಗೆದೋನ್‌ ಎಂಬ ಹೆಸರುಳ್ಳ ಸ್ಥಳಕ್ಕೆ” ಕೂಡಿಸಲಾಗುವುದು. (ಪ್ರಕಟನೆ 16:14, 16) ಆ ಎರಡು ವಚನಗಳಲ್ಲಿ ತಿಳಿಸಲ್ಪಟ್ಟಿರುವಂತೆ, ಮಾನವ ಸರಕಾರಗಳು ಮತ್ತು ದೇವರ ರಾಜ್ಯದ ಮಧ್ಯೆ ನಡೆಯುವ ಅಂತಿಮ ಹೋರಾಟವು ಹರ್ಮಗೆದೋನ್‌ ಅಥವಾ ಅರ್ಮಗೆದೋನ್‌ ಯುದ್ಧವೆಂದು ಕರೆಯಲ್ಪಡುತ್ತದೆ.

19, 20. ಈಗ ಭೂಮಿಯ ಮೇಲೆ ದೇವರ ಚಿತ್ತವು ನೆರವೇರುವುದನ್ನು ಯಾವುದು ತಡೆಹಿಡಿದಿರುತ್ತದೆ?

19 ಅರ್ಮಗೆದೋನಿನ ಮೂಲಕ ದೇವರ ರಾಜ್ಯವು ಏನನ್ನು ಸಾಧಿಸುವುದು? ಭೂಮಿಗಾಗಿರುವ ದೇವರ ಚಿತ್ತದ ಕುರಿತು ಪುನಃ ಯೋಚಿಸಿ. ಪರದೈಸಿನಲ್ಲಿದ್ದು ತನ್ನನ್ನು ಸೇವಿಸುತ್ತಿರುವ ನೀತಿವಂತ, ಪರಿಪೂರ್ಣ ಮಾನವ ಕುಲದಿಂದ ಭೂಮಿಯು ತುಂಬಿರಬೇಕೆಂಬುದು ಯೆಹೋವ ದೇವರ ಉದ್ದೇಶವಾಗಿತ್ತು. ಅದು ಈಗಲೇ ಸಂಭವಿಸುವುದನ್ನು ಯಾವುದು ತಡೆದುಹಿಡಿದಿದೆ? ಒಂದನೆಯದಾಗಿ, ನಾವು ಪಾಪಪೂರ್ಣರು; ಅಸ್ವಸ್ಥರಾಗಿ ಸಾಯುವವರು. ಆದರೂ, 5ನೆಯ ಅಧ್ಯಾಯದಲ್ಲಿ ನಾವು ಕಲಿತುಕೊಂಡಂತೆ, ನಾವು ನಿತ್ಯವಾಗಿ ಜೀವಿಸಲು ಸಾಧ್ಯವಾಗುವಂತೆ ಯೇಸು ಜೀವವನ್ನು ತೆತ್ತನು. ಯೋಹಾನನ ಸುವಾರ್ತೆಯಲ್ಲಿ ಬರೆಯಲಾಗಿರುವ ಈ ಮಾತುಗಳು ನಿಮ್ಮ ನೆನಪಿಗೆ ಬರುವುದು ಸಂಭವನೀಯ: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.”—ಯೋಹಾನ 3:16.

20 ಇನ್ನೊಂದು ಸಮಸ್ಯೆ, ಅನೇಕರು ದುಷ್ಕೃತ್ಯಗಳನ್ನು ನಡೆಸುವುದಾಗಿದೆ. ಅವರು ಸುಳ್ಳುಹೇಳುತ್ತಾರೆ, ವಂಚಿಸುತ್ತಾರೆ ಮತ್ತು ಲೈಂಗಿಕ ಅನೈತಿಕತೆಯನ್ನು ನಡೆಸುತ್ತಾರೆ. ದೇವರ ಚಿತ್ತವನ್ನು ಮಾಡುವ ಬಯಕೆಯೇ ಅವರಿಗಿಲ್ಲ. ದುಷ್ಕೃತ್ಯಗಳನ್ನು ನಡೆಸುವ ಜನರು ದೇವರ ಯುದ್ಧವಾದ ಅರ್ಮಗೆದೋನಿನಲ್ಲಿ ನಾಶಗೊಳ್ಳುವರು. (ಕೀರ್ತನೆ 37:10) ಭೂಮಿಯಲ್ಲಿ ದೇವರ ಚಿತ್ತವು ಈಗ ನೆರವೇರದೇ ಇರುವುದಕ್ಕಿರುವ ಇನ್ನೊಂದು ಕಾರಣವು, ಜನರು ಅದನ್ನು ಮಾಡುವಂತೆ ಸರಕಾರಗಳು ಪ್ರೋತ್ಸಾಹಿಸದಿರುವುದೇ. ಅನೇಕ ಸರಕಾರಗಳು ಬಲಹೀನವಾಗಿವೆ, ಕ್ರೂರವಾಗಿವೆ ಇಲ್ಲವೆ ಭ್ರಷ್ಟವಾಗಿವೆ. ಬೈಬಲು ಮುಚ್ಚುಮರೆಯಿಲ್ಲದೆ ಹೇಳುವುದು: ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನು ಉಂಟುಮಾಡಿದ್ದಾನೆ.’—ಪ್ರಸಂಗಿ 8:9.

21. ರಾಜ್ಯವು ಭೂಮಿಯ ಮೇಲೆ ದೇವರ ಚಿತ್ತವನ್ನು ಹೇಗೆ ನೆರವೇರಿಸುವುದು?

21 ಅರ್ಮಗೆದೋನಿನ ಬಳಿಕ ಮಾನವಕುಲವು ಕೇವಲ ಒಂದೇ ಸರಕಾರ ಅಂದರೆ ದೇವರ ರಾಜ್ಯದ ಅಧಿಕಾರದ ಕೆಳಗಿರುವುದು. ಆ ರಾಜ್ಯವು ದೇವರ ಚಿತ್ತವನ್ನು ನೆರವೇರಿಸಿ ಅದ್ಭುತಕರವಾದ ಆಶೀರ್ವಾದಗಳನ್ನು ತರುವುದು. ಉದಾಹರಣೆಗಾಗಿ, ಅದು ಸೈತಾನನನ್ನೂ ಅವನ ದೆವ್ವಗಳನ್ನೂ ತೆಗೆದುಬಿಡುವುದು. (ಪ್ರಕಟನೆ 20:1-3) ನಂಬಿಗಸ್ತ ಮಾನವರು ಇನ್ನು ಮುಂದೆ ಕಾಯಿಲೆ ಮತ್ತು ಮರಣಕ್ಕೆ ತುತ್ತಾಗದಂತೆ ಯೇಸುವಿನ ಯಜ್ಞದ ಶಕ್ತಿಯನ್ನು ಅನ್ವಯಿಸಲಾಗುವುದು. ರಾಜ್ಯದ ಆಳ್ವಿಕೆಯ ಕೆಳಗೆ ಅವರು ಅನಂತಕಾಲಕ್ಕೂ ಜೀವಿಸಶಕ್ತರಾಗುವರು. (ಪ್ರಕಟನೆ 22:1-3) ಈ ಭೂಮಿಯು ಒಂದು ಪರದೈಸಾಗುವುದು. ಹೀಗೆ ಆ ರಾಜ್ಯವು ಭೂಮಿಯ ಮೇಲೆ ದೇವರ ಚಿತ್ತವು ನೆರವೇರುವಂತೆ ಮಾಡುವುದು ಮತ್ತು ಅದು ದೇವರ ಹೆಸರನ್ನು ಪವಿತ್ರೀಕರಿಸುವುದು. ಇದರ ಅರ್ಥವೇನು? ಕಟ್ಟಕಡೆಗೆ ದೇವರ ರಾಜ್ಯದ ಅಧಿಕಾರದ ಕೆಳಗೆ ಜೀವಿಸುತ್ತಿರುವ ಪ್ರತಿಯೊಬ್ಬನೂ ಯೆಹೋವನ ಹೆಸರನ್ನು ಗೌರವಿಸುವನೆಂಬುದೇ.

ದೇವರ ರಾಜ್ಯವು ಯಾವಾಗ ಕ್ರಮಕೈಕೊಳ್ಳುವುದು?

22. ಯೇಸು ಭೂಮಿಯಲ್ಲಿದ್ದಾಗ ಅಥವಾ ಪುನರುತ್ಥಾನ ಹೊಂದಿದ ಕೂಡಲೆ ದೇವರ ರಾಜ್ಯವು ಬರಲಿಲ್ಲವೆಂದು ನಮಗೆ ಹೇಗೆ ಗೊತ್ತು?

22 “ನಿನ್ನ ರಾಜ್ಯವು ಬರಲಿ” ಎಂದು ಪ್ರಾರ್ಥಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಹೇಳಿದಾಗ ಆ ರಾಜ್ಯವು ಆ ಸಮಯದಲ್ಲಿ ಬಂದಿರಲಿಲ್ಲವೆಂಬುದು ಸ್ಪಷ್ಟ. ಹಾಗಾದರೆ ಯೇಸು ಸ್ವರ್ಗಕ್ಕೇರಿಹೋದಾಗ ಅದು ಬಂತೊ? ಇಲ್ಲ. ಪೇತ್ರ ಮತ್ತು ಪೌಲರಿಬ್ಬರೂ ಹೇಳಿದ್ದೇನಂದರೆ, ಯೇಸು ಪುನರುತ್ಥಾನಗೊಂಡ ಬಳಿಕ ಕೀರ್ತನೆ 110:1 ರ ಈ ಪ್ರವಾದನೆ ಅವನಲ್ಲಿ ನೆರವೇರಿತು: “ಯೆಹೋವನು ನನ್ನ ಒಡೆಯನಿಗೆ—ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ನುಡಿದನು.” (ಅ. ಕೃತ್ಯಗಳು 2:32-35; ಇಬ್ರಿಯ 10:12, 13) ಹೀಗೆ ಕಾಯುವ ಒಂದು ಸಮಯಾವಧಿಯಿತ್ತು.

ರಾಜ್ಯದ ಆಳ್ವಿಕೆಯ ಕೆಳಗೆ, ದೇವರ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿದೆ

23. (ಎ) ದೇವರ ರಾಜ್ಯವು ಯಾವಾಗ ಆಳಲಾರಂಭಿಸಿತು? (ಬಿ) ಮುಂದಿನ ಅಧ್ಯಾಯದಲ್ಲಿ ಏನನ್ನು ಚರ್ಚಿಸಲಾಗುವುದು?

23 ಆ ಕಾಯುವ ಸಮಯಾವಧಿಯು ಎಷ್ಟು ದೀರ್ಘವಾಗಿತ್ತು? ಆ ಕಾಯುವ ಸಮಯಾವಧಿಯು 1914ರಲ್ಲಿ ಅಂತ್ಯಗೊಳ್ಳುವುದೆಂದು ಹತ್ತೊಂಬತ್ತನೆಯ ಮತ್ತು ಇಪ್ಪತ್ತನೆಯ ಶತಮಾನಗಳಲ್ಲಿ ಪ್ರಾಮಾಣಿಕ ಬೈಬಲ್‌ ವಿದ್ಯಾರ್ಥಿಗಳು ಪ್ರಗತಿಪರವಾಗಿ ವಿವೇಚಿಸಿ ತಿಳಿದುಕೊಂಡರು. (ಈ ವರುಷದ ಬಗ್ಗೆ ಪರಿಶಿಷ್ಟದ 215-18ನೇ ಪುಟಗಳನ್ನು ನೋಡಿ.) 1914ರಲ್ಲಿ ಆರಂಭಗೊಂಡ ಲೋಕ ಘಟನೆಗಳು ಈ ಪ್ರಾಮಾಣಿಕ ಬೈಬಲ್‌ ವಿದ್ಯಾರ್ಥಿಗಳು ಅರ್ಥಮಾಡಿಕೊಂಡದ್ದು ಸರಿಯಾಗಿತ್ತೆಂಬುದನ್ನು ಪುಷ್ಟೀಕರಿಸಿದವು. ಬೈಬಲ್‌ ಪ್ರವಾದನೆಯ ನೆರವೇರಿಕೆಯು, ಕ್ರಿಸ್ತನು 1914ರಲ್ಲಿ ಅರಸನಾದನೆಂದೂ ದೇವರ ಸ್ವರ್ಗೀಯ ರಾಜ್ಯವು ಆಗ ಆಳಲಾರಂಭಿಸಿತೆಂದೂ ತೋರಿಸಿತು. ಆದಕಾರಣ, ನಾವೀಗ ಸೈತಾನನಿಗಿರುವ ‘ಸ್ವಲ್ಪ ಕಾಲ’ದಲ್ಲಿ ಜೀವಿಸುತ್ತಿದ್ದೇವೆ. (ಪ್ರಕಟನೆ 12:12; ಕೀರ್ತನೆ 110:2) ನಾವು ನಿಶ್ಚಯವಾಗಿ ಇದನ್ನೂ ಹೇಳಬಲ್ಲೆವು, ಏನಂದರೆ ದೇವರ ರಾಜ್ಯವು ಬೇಗನೇ ದೇವರ ಚಿತ್ತವನ್ನು ಭೂಮಿಯಲ್ಲಿ ನೆರವೇರಿಸಲು ಕ್ರಮಕೈಕೊಳ್ಳುವುದು. ಇದು ಆಶ್ಚರ್ಯಕರವಾದ ಸುದ್ದಿಯೆಂದು ನಿಮಗನಿಸುತ್ತದೆಯೆ? ಇದು ಸತ್ಯವೆಂದು ನೀವು ನಂಬುತ್ತೀರಾ? ಈ ವಿಷಯಗಳನ್ನು ಬೈಬಲು ನಿಜವಾಗಿಯೂ ಬೋಧಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಮುಂದಿನ ಅಧ್ಯಾಯವು ನಿಮಗೆ ಸಹಾಯಮಾಡುವುದು.