ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಹತ್ತು

ಆತ್ಮಜೀವಿಗಳು ನಮ್ಮ ಮೇಲೆ ಪರಿಣಾಮ ಬೀರುವ ವಿಧ

ಆತ್ಮಜೀವಿಗಳು ನಮ್ಮ ಮೇಲೆ ಪರಿಣಾಮ ಬೀರುವ ವಿಧ
  • ದೇವದೂತರು ಜನರಿಗೆ ಸಹಾಯಮಾಡುತ್ತಾರೊ?

  • ದುಷ್ಟಾತ್ಮಗಳು ಮಾನವರ ಮೇಲೆ ಹೇಗೆ ಪ್ರಭಾವ ಬೀರಿವೆ?

  • ನಾವು ದುಷ್ಟಾತ್ಮಗಳಿಗೆ ಭಯಪಡುವ ಅಗತ್ಯವಿದೆಯೆ?

1. ನಮಗೆ ದೇವದೂತರ ಕುರಿತು ಕಲಿಯುವ ಅಪೇಕ್ಷೆ ಏಕಿರಬೇಕು?

ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳುವುದರಲ್ಲಿ ಸಾಮಾನ್ಯವಾಗಿ ಅವನ ಕುಟುಂಬದ ಬಗ್ಗೆಯೂ ಸ್ವಲ್ಪ ತಿಳಿದುಕೊಳ್ಳುವುದು ಸೇರಿರುತ್ತದೆ. ಅದೇ ರೀತಿಯಲ್ಲಿ, ಯೆಹೋವ ದೇವರ ಪರಿಚಯವನ್ನು ಮಾಡಿಕೊಳ್ಳುವುದರಲ್ಲಿ, ಆತನ ದೂತರಿಂದ ಕೂಡಿದ ಕುಟುಂಬದೊಂದಿಗೆ ಪರಿಚಿತರಾಗುವುದು ಸೇರಿರುತ್ತದೆ. ಬೈಬಲು ದೇವದೂತರನ್ನು ‘ದೇವಕುಮಾರರು’ ಎಂದು ಕರೆಯುತ್ತದೆ. (ಯೋಬ 38:6) ಹಾಗಾದರೆ ದೇವರ ಉದ್ದೇಶದಲ್ಲಿ ಅವರಿಗಿರುವ ಪಾತ್ರವೇನು? ಮಾನವ ಇತಿಹಾಸದಲ್ಲಿ ಅವರು ಪಾತ್ರವಹಿಸಿರುತ್ತಾರೊ? ದೇವದೂತರು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಾರೊ? ಹೌದಾದರೆ, ಹೇಗೆ?

2. ದೇವದೂತರು ಎಲ್ಲಿಂದ ಬಂದರು, ಮತ್ತು ಅವರ ಸಂಖ್ಯೆಯೆಷ್ಟು?

2 ಬೈಬಲು ನೂರಾರು ಬಾರಿ ದೇವದೂತರನ್ನು ಸೂಚಿಸಿ ಮಾತಾಡುತ್ತದೆ. ದೇವದೂತರ ಕುರಿತು ಹೆಚ್ಚನ್ನು ಕಲಿಯುವ ಸಲುವಾಗಿ ಇವುಗಳಲ್ಲಿ ಕೆಲವು ಉಲ್ಲೇಖಗಳನ್ನು ಪರಿಗಣಿಸೋಣ. ಈ ದೇವದೂತರು ಎಲ್ಲಿಂದ ಬಂದರು? ಕೊಲೊಸ್ಸೆ 1:16 ಹೇಳುವುದು: “ಭೂಪರಲೋಕಗಳಲ್ಲಿರುವ . . . ಸರ್ವವು ಆತನ [ಯೇಸು ಕ್ರಿಸ್ತನ] ಮುಖಾಂತರವಾಗಿ . . . ಸೃಷ್ಟಿಸಲ್ಪಟ್ಟಿತು.” ಹೀಗೆ ದೇವದೂತರೆಂದು ಕರೆಯಲಾಗುವ ಸಕಲ ಆತ್ಮಜೀವಿಗಳು ಯೆಹೋವ ದೇವರಿಂದ ಆತನ ಜ್ಯೇಷ್ಠಪುತ್ರನ ಮೂಲಕ ಒಬ್ಬೊಬ್ಬರಾಗಿ ಸೃಷ್ಟಿಸಲ್ಪಟ್ಟರು. ಹಾಗಾದರೆ ಎಷ್ಟು ಮಂದಿ ದೇವದೂತರಿದ್ದಾರೆ? ಕೋಟ್ಯಂತರ ಮಂದಿ ದೇವದೂತರನ್ನು ಸೃಷ್ಟಿಸಲಾಗಿತ್ತೆಂದು ಬೈಬಲು ಸೂಚಿಸುತ್ತದೆ ಮತ್ತು ಅವರೆಲ್ಲರೂ ಬಲಾಢ್ಯರಾಗಿದ್ದಾರೆ.—ಕೀರ್ತನೆ 103:20. *

3. ಯೋಬ 38:4-7 ದೇವದೂತರ ಕುರಿತು ನಮಗೇನು ಹೇಳುತ್ತದೆ?

3 ಈ ಭೂಮಿಯು ಸ್ಥಾಪನೆಗೊಂಡಾಗ, ‘ದೇವಕುಮಾರರೆಲ್ಲರೂ ಆನಂದಘೋಷ ಮಾಡುತ್ತಿದ್ದರು’ ಎಂದು ದೇವರ ವಾಕ್ಯವಾದ ಬೈಬಲು ನಮಗೆ ತಿಳಿಸುತ್ತದೆ. (ಯೋಬ 38:4-7) ಹೀಗೆ ಮಾನವರ ಸೃಷ್ಟಿಯಾಗುವ ಎಷ್ಟೋ ಮೊದಲೇ, ಭೂಮಿಯ ಸೃಷ್ಟಿಗೂ ಮುಂಚೆ ದೇವದೂತರು ಅಸ್ತಿತ್ವದಲ್ಲಿದ್ದರು. ದೇವದೂತರಿಗೆ ಭಾವನೆಗಳೂ ಇವೆಯೆಂದು ಈ ಬೈಬಲ್‌ ವಚನವು ತೋರಿಸುತ್ತದೆ, ಏಕೆಂದರೆ ಅವರು “ಒಟ್ಟಾಗಿ ಉತ್ಸಾಹಧ್ವನಿಯೆತ್ತುತ್ತಾ” ಇದ್ದರು ಎಂದು ಅದು ಹೇಳುತ್ತದೆ. “ದೇವಕುಮಾರರೆಲ್ಲರೂ” ಒಟ್ಟಾಗಿ ಹರ್ಷಿಸಿದ್ದನ್ನು ಗಮನಿಸಿರಿ. ಆ ಸಮಯದಲ್ಲಿ, ದೇವದೂತರೆಲ್ಲರೂ ಯೆಹೋವ ದೇವರನ್ನು ಸೇವಿಸುತ್ತಿದ್ದ ಒಂದು ಐಕ್ಯ ಕುಟುಂಬದ ಭಾಗವಾಗಿದ್ದರು.

ದೇವದೂತರ ಬೆಂಬಲ ಮತ್ತು ಸಂರಕ್ಷಣೆ

4. ನಂಬಿಗಸ್ತ ದೇವದೂತರು ಮಾನವ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದಾರೆಂಬುದನ್ನು ಬೈಬಲು ಹೇಗೆ ತೋರಿಸುತ್ತದೆ?

4 ಪ್ರಥಮ ಮಾನವರ ಸೃಷ್ಟಿಕ್ರಿಯೆಯನ್ನು ನೋಡಿದಂದಿನಿಂದ, ನಂಬಿಗಸ್ತ ಆತ್ಮಜೀವಿಗಳು ಬೆಳೆಯುತ್ತಿರುವ ಮಾನವ ಕುಟುಂಬದಲ್ಲಿ ಮತ್ತು ದೇವರ ಉದ್ದೇಶದ ನೆರವೇರಿಕೆಯಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿದ್ದಾರೆ. (ಜ್ಞಾನೋಕ್ತಿ 8:30, 31; 1 ಪೇತ್ರ 1:11, 12) ಆದರೆ ಸಮಯ ದಾಟಿದಂತೆ, ಮಾನವ ಕುಟುಂಬದಲ್ಲಿ ಹೆಚ್ಚಿನವರು ಅವರನ್ನು ಪ್ರೀತಿಸುತ್ತಿದ್ದ ದೇವರ ಸೇವೆಮಾಡುವುದರಿಂದ ದೂರ ತೊಲಗಿ ಹೋಗುತ್ತಿರುವುದನ್ನು ದೇವದೂತರು ಗಮನಿಸಿದರು. ಇದು ನಂಬಿಗಸ್ತ ದೇವದೂತರನ್ನು ದುಃಖಿತರನ್ನಾಗಿಸಿತೆಂಬುದು ನಿಸ್ಸಂದೇಹ. ಆದರೆ ಇನ್ನೊಂದು ಬದಿಯಲ್ಲಿ, ಕೇವಲ ಒಬ್ಬ ಮಾನವನು ದೇವರ ಬಳಿ ಹಿಂದಿರುವಾಗಲೂ ‘ದೇವದೂತರಿಗೆ ಸಂತೋಷ’ವುಂಟಾಗುತ್ತದೆ. (ಲೂಕ 15:10) ದೇವರನ್ನು ಆರಾಧಿಸುವವರ ಕ್ಷೇಮದ ಬಗ್ಗೆ ದೇವದೂತರಿಗೆ ಅಷ್ಟು ಆಳವಾದ ಚಿಂತೆಯಿರುವುದರಿಂದ, ಯೆಹೋವನು ಭೂಮಿಯಲ್ಲಿರುವ ತನ್ನ ನಂಬಿಗಸ್ತ ಸೇವಕರನ್ನು ಬಲಪಡಿಸಲು ಮತ್ತು ಸಂರಕ್ಷಿಸಲು ದೇವದೂತರನ್ನು ಪದೇ ಪದೇ ಉಪಯೋಗಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ. (ಇಬ್ರಿಯ 1:7, 14) ಕೆಲವು ದೃಷ್ಟಾಂತಗಳನ್ನು ಪರಿಗಣಿಸಿರಿ.

“ನನ್ನ ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು.”—ದಾನಿಯೇಲ 6:22

5. ಬೈಬಲಿನಲ್ಲಿ ದೇವದೂತರ ಬೆಂಬಲದ ಯಾವ ದೃಷ್ಟಾಂತಗಳನ್ನು ನಾವು ಕಂಡುಕೊಳ್ಳುತ್ತೇವೆ?

5 ನೀತಿವಂತ ಮನುಷ್ಯನಾಗಿದ್ದ ಲೋಟ ಮತ್ತು ಅವನ ಪುತ್ರಿಯರು ದುಷ್ಟ ಪಟ್ಟಣಗಳಾಗಿದ್ದ ಸೊದೋಮ್‌ ಗೊಮೋರಗಳ ನಾಶನವನ್ನು ಪಾರಾಗುವಂತೆ, ಅವರನ್ನು ಆ ಕ್ಷೇತ್ರದಿಂದ ಹೊರಗೆ ನಡೆಸಿ ಸಹಾಯಮಾಡಿದವರು ಇಬ್ಬರು ದೇವದೂತರೇ. (ಆದಿಕಾಂಡ 19:15, 16) ಶತಮಾನಗಳ ಬಳಿಕ, ಪ್ರವಾದಿಯಾದ ದಾನಿಯೇಲನನ್ನು ಸಿಂಹಗಳ ಗವಿಗೆ ಎಸೆಯಲಾಗಿತ್ತಾದರೂ ಅವನಿಗೇನೂ ಹಾನಿಯಾಗದೆ ಅಲ್ಲಿಂದ ಪಾರುಗೊಳಿಸಲ್ಪಟ್ಟನು. ಅವನು ಹೇಳಿದ್ದು: “ನನ್ನ ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು.” (ದಾನಿಯೇಲ 6:22) ಸಾ.ಶ. ಒಂದನೆಯ ಶತಮಾನದಲ್ಲಿ, ಒಬ್ಬ ದೇವದೂತನು ಅಪೊಸ್ತಲ ಪೇತ್ರನನ್ನು ಸೆರೆಮನೆಯಿಂದ ಬಿಡಿಸಿದನು. (ಅ. ಕೃತ್ಯಗಳು 12:6-11) ಅಲ್ಲದೆ, ಯೇಸುವಿನ ಭೂಶುಶ್ರೂಷೆಯ ಆರಂಭದಲ್ಲಿ ದೇವದೂತರು ಅವನನ್ನು ಬಲಪಡಿಸಿದರು. (ಮಾರ್ಕ 1:13) ಮತ್ತು ಯೇಸುವಿನ ಮರಣಕ್ಕೆ ತುಸು ಮೊದಲು, ಒಬ್ಬ ದೇವದೂತನು ಬಂದು ಅವನನ್ನು “ಬಲಪಡಿಸಿದನು.” (ಲೂಕ 22:43) ಯೇಸುವಿನ ಜೀವನದ ಆ ಅತಿ ಅಗತ್ಯದ ಸಮಯಗಳಲ್ಲಿ ಆ ದೇವದೂತರ ಬೆಂಬಲವು ಅವನಿಗೆ ಎಷ್ಟೊಂದು ಸಾಂತ್ವನವನ್ನು ಕೊಟ್ಟಿರಬೇಕು!

6. (ಎ) ದೇವದೂತರು ಇಂದು ದೇವಜನರನ್ನು ಕಾಪಾಡುವುದು ಹೇಗೆ? (ಬಿ) ನಾವೀಗ ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

6 ಇಂದು ಭೂಮಿಯಲ್ಲಿರುವ ದೇವಜನರಿಗೆ ದೇವದೂತರು ದೃಶ್ಯವಾದ ರೀತಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮಾನವ ದೃಷ್ಟಿಗೆ ಅದೃಶ್ಯರಾಗಿರುವುದಾದರೂ, ದೇವರ ಆ ಬಲಾಢ್ಯ ದೇವದೂತರು ಆತನ ಜನರನ್ನು ಈಗಲೂ ಸಂರಕ್ಷಿಸುತ್ತಾರೆ, ವಿಶೇಷವಾಗಿ ಆಧ್ಯಾತ್ಮಿಕವಾಗಿ ಹಾನಿಕರವಾಗಿರುವ ಯಾವುದೇ ವಿಷಯದಿಂದ. ಬೈಬಲು ಹೇಳುವುದು: “ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ.” (ಕೀರ್ತನೆ 34:7) ಈ ಮಾತುಗಳು ನಮಗೆ ಏಕೆ ಬಹು ಸಾಂತ್ವನದಾಯಕವಾಗಿರಬೇಕು? ಏಕೆಂದರೆ ನಮ್ಮನ್ನು ಅಳಿಸಿಬಿಡಲು ಬಯಸುವ ಅಪಾಯಕಾರಿಗಳಾದ ದುಷ್ಟಾತ್ಮ ಜೀವಿಗಳಿದ್ದಾರೆ! ಆ ಜೀವಿಗಳು ಯಾರು? ಅವರು ಎಲ್ಲಿಂದ ಬಂದವರು? ಅವರು ನಮಗೆ ಹೇಗೆ ಹಾನಿಮಾಡಲು ಬಯಸುತ್ತಿದ್ದಾರೆ? ಇದನ್ನು ಕಂಡುಕೊಳ್ಳಲಿಕ್ಕಾಗಿ, ಮಾನವ ಇತಿಹಾಸದ ಆರಂಭದಲ್ಲಿ ನಡೆದ ಒಂದು ವಿಷಯವನ್ನು ನಾವು ಸಂಕ್ಷಿಪ್ತವಾಗಿ ಪರಿಗಣಿಸೋಣ.

ನಮ್ಮ ವೈರಿಗಳಾಗಿರುವ ಆತ್ಮಜೀವಿಗಳು

7. ಜನರು ದೇವರಿಗೆ ಬೆನ್ನುಹಾಕುವಂತೆ ಮಾಡುವುದರಲ್ಲಿ ಸೈತಾನನು ಎಷ್ಟರ ಮಟ್ಟಿಗೆ ಯಶಸ್ವಿಯಾದನು?

7 ನಾವು ಈ ಪುಸ್ತಕದ 3ನೆಯ ಅಧ್ಯಾಯದಲ್ಲಿ ಕಲಿತಿರುವಂತೆ, ದೇವದೂತರಲ್ಲಿ ಒಬ್ಬನು ಇತರರ ಮೇಲೆ ಆಳ್ವಿಕೆ ನಡೆಸಬೇಕೆಂಬ ಬಯಕೆಯನ್ನು ಬೆಳೆಸಿಕೊಂಡನು ಮತ್ತು ದೇವರ ವಿರೋಧಿಯಾದನು. ಆ ಬಳಿಕ ಈ ದೇವದೂತನು ಪಿಶಾಚನಾದ ಸೈತಾನನೆಂದು ಪ್ರಸಿದ್ಧನಾದನು. (ಪ್ರಕಟನೆ 12:9) ಸೈತಾನನು ಹವ್ವಳನ್ನು ವಂಚಿಸಿದ ಬಳಿಕ ಸುಮಾರು 1,600 ವರುಷಗಳಲ್ಲಿ, ಹೇಬೆಲ, ಹನೋಕ ಮತ್ತು ನೋಹರಂತಹ ಕೆಲವು ಮಂದಿ ನಂಬಿಗಸ್ತರನ್ನು ಬಿಟ್ಟು ಉಳಿದ ಮಾನವರೆಲ್ಲರೂ ದೇವರಿಗೆ ಬೆನ್ನುಹಾಕುವಂತೆ ಮಾಡುವುದರಲ್ಲಿ ಅವನು ಯಶಸ್ವಿಯಾದನು.—ಇಬ್ರಿಯ 11:4, 5, 7.

8. (ಎ) ಕೆಲವು ಮಂದಿ ದೇವದೂತರು ದೆವ್ವಗಳಾದದ್ದು ಹೇಗೆ? (ಬಿ) ನೋಹನ ದಿನಗಳ ಜಲಪ್ರಳಯವನ್ನು ಪಾರಾಗಲು ದೆವ್ವಗಳು ಏನು ಮಾಡಬೇಕಾಯಿತು?

8 ನೋಹನ ದಿನಗಳಲ್ಲಿ, ಬೇರೆ ದೇವದೂತರು ಯೆಹೋವನಿಗೆ ವಿರುದ್ಧವಾಗಿ ದಂಗೆಯೆದ್ದರು. ಅವರು ದೇವರ ಸ್ವರ್ಗೀಯ ಕುಟುಂಬದಲ್ಲಿ ತಮಗಿದ್ದ ಸ್ಥಾನವನ್ನು ತೊರೆದು, ಭೂಮಿಗೆ ಬಂದು ಮಾಂಸಿಕ ಶರೀರಗಳನ್ನು ಧರಿಸಿದರು. ಕಾರಣವೇನು? ನಾವು ಆದಿಕಾಂಡ 6:2 ರಲ್ಲಿ ಓದುವುದು: “ದೇವಪುತ್ರರು ಮನುಷ್ಯ ಪುತ್ರಿಯರ ಸೌಂದರ್ಯವನ್ನು ನೋಡಿ ತಮಗೆ ಇಷ್ಟರಾದವರನ್ನು ಹೆಂಡರನ್ನಾಗಿ ಮಾಡಿಕೊಂಡರು.” ಆದರೆ ಈ ದೇವದೂತರ ಕ್ರಿಯೆಗಳು ಮತ್ತು ಇದರಿಂದಾಗಿ ಫಲಿಸಿದ ಮಾನವಕುಲದ ಭ್ರಷ್ಟಗೊಳಿಸುವಿಕೆ ಮುಂದುವರಿಯುವಂತೆ ಯೆಹೋವ ದೇವರು ಅನುಮತಿಸಲಿಲ್ಲ. ಸಕಲ ದುಷ್ಟ ಮಾನವರನ್ನು ಬಡಕೊಂಡು ಹೋದ ಒಂದು ಭೌಗೋಳಿಕ ಜಲಪ್ರಳಯವನ್ನು ಬರಮಾಡಿ ಆತನು ಕೇವಲ ತನ್ನ ನಂಬಿಗಸ್ತ ಸೇವಕರನ್ನು ಮಾತ್ರ ಉಳಿಸಿದನು. (ಆದಿಕಾಂಡ 7:17, 23) ಈ ಕಾರಣದಿಂದ ಆ ದಂಗೆಕೋರ ದೂತರು ಅಥವಾ ದೆವ್ವಗಳು ತಮ್ಮ ಶಾರೀರಿಕ ದೇಹಗಳನ್ನು ತ್ಯಜಿಸಿ ಆತ್ಮಜೀವಿಗಳಾಗಿ ಸ್ವರ್ಗಕ್ಕೆ ಹಿಂದಿರುಗುವಂತೆ ನಿರ್ಬಂಧಿಸಲ್ಪಟ್ಟರು. ಅವರು ಆಗಲೇ ಪಿಶಾಚನ ಪಕ್ಷಕ್ಕೆ ಸೇರಿಕೊಂಡಿದ್ದರು ಮತ್ತು ಹೀಗೆ ಅವನು “ದೆವ್ವಗಳ ಒಡೆಯ”ನಾದನು.—ಮತ್ತಾಯ 9:34.

9. (ಎ) ದೆವ್ವಗಳು ಸ್ವರ್ಗಕ್ಕೆ ಹಿಂದಿರುಗಿದಾಗ ಅವರಿಗೇನಾಯಿತು? (ಬಿ) ದೆವ್ವಗಳ ಕುರಿತಾಗಿ ನಾವೇನನ್ನು ಪರಿಗಣಿಸುವೆವು?

9 ಆ ಅವಿಧೇಯ ದೇವದೂತರು ಸ್ವರ್ಗಕ್ಕೆ ಹಿಂದಿರುಗಿದಾಗ ಅವರ ಅಧಿಪತಿಯಾದ ಸೈತಾನನಂತೆ ಅವರನ್ನೂ ಬಹಿಷ್ಕೃತರಂತೆ ಉಪಚರಿಸಲಾಯಿತು. (ಯೂದ 6) ಈಗ ಅವರಿಗೆ ಮಾನವ ಶರೀರಗಳನ್ನು ಧರಿಸುವುದು ಅಸಾಧ್ಯವಾದರೂ, ಅವರು ಮಾನವರ ಮೇಲೆ ಇನ್ನೂ ತಮ್ಮ ಕೆಟ್ಟ ಪ್ರಭಾವವನ್ನು ಅತಿಯಾಗಿ ಬೀರುತ್ತ ಇದ್ದಾರೆ. ವಾಸ್ತವದಲ್ಲಿ, ಈ ದೆವ್ವಗಳ ಸಹಾಯದಿಂದಲೇ ಸೈತಾನನು ‘ಭೂಲೋಕದವರನ್ನೆಲ್ಲಾ ಮರುಳುಗೊಳಿಸುತ್ತ’ ಇದ್ದಾನೆ. (ಪ್ರಕಟನೆ 12:9; 1 ಯೋಹಾನ 5:19) ಹೇಗೆ? ಮುಖ್ಯವಾಗಿ ಈ ದೆವ್ವಗಳು ಜನರನ್ನು ದಾರಿತಪ್ಪಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರುವ ವಿಧಾನಗಳನ್ನು ಉಪಯೋಗಿಸುತ್ತವೆ. (2 ಕೊರಿಂಥ 2:11) ನಾವು ಈ ವಿಧಾನಗಳಲ್ಲಿ ಕೆಲವನ್ನು ಪರಿಗಣಿಸೋಣ.

ದೆವ್ವಗಳು ದಾರಿತಪ್ಪಿಸುವ ವಿಧ

10. ಪ್ರೇತವ್ಯವಹಾರ ಎಂದರೇನು?

10 ಜನರನ್ನು ದಾರಿತಪ್ಪಿಸಲು ಈ ದೆವ್ವಗಳು ಪ್ರೇತವ್ಯವಹಾರವನ್ನು ಉಪಯೋಗಿಸುತ್ತವೆ. ಈ ಪ್ರೇತವ್ಯವಹಾರವು, ದೆವ್ವಗಳೊಂದಿಗಿನ ವ್ಯವಹಾರವಾಗಿರುತ್ತದೆ. ಇದು ದೆವ್ವಗಳೊಂದಿಗಿನ ನೇರ ಸಂಪರ್ಕ ಆಗಿರಬಹುದು ಇಲ್ಲವೆ ಮಾನವ ಮಾಧ್ಯಮದ ಮುಖಾಂತರವೂ ಆಗಿರಬಹುದು. ಬೈಬಲಾದರೊ ಈ ಪ್ರೇತವ್ಯವಹಾರವನ್ನು ಖಂಡಿಸುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ಸಕಲ ವಿಷಯಗಳಿಂದ ದೂರವಿರುವಂತೆ ನಮ್ಮನ್ನು ಎಚ್ಚರಿಸುತ್ತದೆ. (ಗಲಾತ್ಯ 5:19-21) ಬೆಸ್ತರು ಮೀನನ್ನು ಆಕರ್ಷಿಸಲಿಕ್ಕಾಗಿ ಗಾಳದ ತೀನಿಯನ್ನು ಉಪಯೋಗಿಸುವಂತೆಯೇ ದೆವ್ವಗಳು ಪ್ರೇತವ್ಯವಹಾರವನ್ನು ಉಪಯೋಗಿಸುತ್ತವೆ. ವಿವಿಧ ರೀತಿಯ ಮೀನುಗಳನ್ನು ಹಿಡಿಯಲಿಕ್ಕಾಗಿ ಬೆಸ್ತನು ವಿವಿಧ ರೀತಿ ತೀನಿಯನ್ನು ಉಪಯೋಗಿಸಿ ಆಕರ್ಷಿಸುವಂತೆಯೇ, ಈ ದುಷ್ಟಾತ್ಮಗಳು ಸಕಲ ರೀತಿಯ ಜನರು ತಮ್ಮ ಪ್ರಭಾವದೊಳಗೆ ಬರುವಂತೆ ಮಾಡಲಿಕ್ಕಾಗಿ ಪ್ರೇತವ್ಯವಹಾರದ ವಿವಿಧ ರೂಪಗಳನ್ನು ಉಪಯೋಗಿಸುತ್ತವೆ.

11. ಕಣಿಕೇಳುವುದೆಂದರೇನು, ಮತ್ತು ನಾವು ಏಕೆ ಅದರಿಂದ ದೂರವಿರಬೇಕು?

11 ದೆವ್ವಗಳು ಉಪಯೋಗಿಸುವ ಒಂದು ರೀತಿಯ ಗಾಳದ ತೀನಿಯು ಕಣಿಕೇಳುವುದಾಗಿದೆ. ಕಣಿಕೇಳುವುದೆಂದರೇನು? ಭವಿಷ್ಯತ್ತಿನ ಕುರಿತು ಅಥವಾ ಅಜ್ಞಾತವಾದ ಯಾವುದೊ ವಿಷಯದ ಕುರಿತು ಕಂಡುಹಿಡಿಯುವ ಪ್ರಯತ್ನವೇ ಅದು. ಕಣಿಕೇಳುವುದರ ಕೆಲವು ರೂಪಗಳು ಜ್ಯೋತಿಶ್ಶಾಸ್ತ್ರ, ಗಿಳಿಶಾಸ್ತ್ರ, ಕವಡೆಶಾಸ್ತ್ರ, ಮಣಿವೀಕ್ಷಣ, ಹಸ್ತಸಾಮುದ್ರಿಕ ಶಾಸ್ತ್ರ, ಮತ್ತು ಸ್ವಪ್ನಗಳಲ್ಲಿ ಅಡಗಿರುವ ನಿಗೂಢವಾದ ಶಕುನಗಳನ್ನು ಅಥವಾ ಸಂಕೇತಗಳನ್ನು ಹುಡುಕುವುದೇ ಆಗಿವೆ. ಕಣಿಕೇಳುವುದರಲ್ಲಿ ತೊಡಗುವುದು ಹಾನಿಕರವಲ್ಲವೆಂದು ಅನೇಕರು ನೆನಸುತ್ತಾರಾದರೂ, ವಾಸ್ತವದಲ್ಲಿ ಭವಿಷ್ಯಹೇಳುವವರೂ ದುಷ್ಟಾತ್ಮಗಳೂ ಜೊತೆಯಾಗಿ ಕೆಲಸಮಾಡುತ್ತವೆಂದು ಬೈಬಲು ತೋರಿಸುತ್ತದೆ. ಉದಾಹರಣೆಗೆ, ಅಪೊಸ್ತಲರ ಕೃತ್ಯಗಳು 16:16-18 (NIBV) ಒಬ್ಬ ಹುಡುಗಿಯನ್ನು ‘ಭವಿಷ್ಯಹೇಳಲು’ ಶಕ್ತಗೊಳಿಸಿದ ‘ದುರಾತ್ಮದ’ ಕುರಿತು ತಿಳಿಸುತ್ತದೆ. ಆದರೆ ಆ ದೆವ್ವವನ್ನು ಅವಳಿಂದ ಬಿಡಿಸಲಾಗಿ, ಅವಳು ಆ ಸಾಮರ್ಥ್ಯವನ್ನು ಕಳೆದುಕೊಂಡಳು.

ದೆವ್ವಗಳು ಜನರನ್ನು ವಂಚಿಸಲಿಕ್ಕಾಗಿ ವಿವಿಧ ವಿಧಾನಗಳನ್ನು ಉಪಯೋಗಿಸುತ್ತವೆ

12. ಮೃತರೊಂದಿಗೆ ಮಾತಾಡಲು ಪ್ರಯತ್ನಿಸುವುದು ಅಪಾಯಕರವೇಕೆ?

12 ದೆವ್ವಗಳು ಜನರನ್ನು ದಾರಿತಪ್ಪಿಸುವ ಇನ್ನೊಂದು ವಿಧವು ಅವರು ಮೃತರನ್ನು ವಿಚಾರಿಸುವಂತೆ ಪ್ರೋತ್ಸಾಹಿಸುವ ಮೂಲಕವೇ. ಒಬ್ಬ ಪ್ರಿಯ ವ್ಯಕ್ತಿಯ ಮರಣದಿಂದ ಶೋಕಿತರಾಗಿರುವ ಜನರು ಅನೇಕವೇಳೆ ಮೃತರ ಸಂಬಂಧದಲ್ಲಿನ ಸುಳ್ಳು ವಿಚಾರಗಳಿಂದ ಮೋಸಹೋಗುತ್ತಾರೆ. ಪ್ರೇತ ಮಾಧ್ಯಮನಾಗಿರುವ ವ್ಯಕ್ತಿಯೊಬ್ಬನು ಸತ್ತವರ ಬಗ್ಗೆ ವಿಶೇಷವಾದ ಮಾಹಿತಿಯನ್ನು ಕೊಡಬಹುದು ಇಲ್ಲವೆ ಮೃತವ್ಯಕ್ತಿಯ ಸ್ವರದಂತೆ ಕೇಳಿಬರುವ ಸ್ವರದಲ್ಲಿ ಮಾತಾಡಬಹುದು. ಹೀಗೆ, ಮೃತರು ನಿಜವಾಗಿಯೂ ಜೀವದಿಂದಿದ್ದಾರೆಂದೂ ಅವರನ್ನು ಸಂಪರ್ಕಿಸುವುದರಿಂದ ಜೀವಿತರಿಗೆ ತಮ್ಮ ಶೋಕವನ್ನು ತಾಳಿಕೊಳ್ಳಲು ಸಹಾಯ ಸಿಗುವುದೆಂದೂ ಅನೇಕ ಜನರಿಗೆ ಬಲವಾಗಿ ಅನಿಸತೊಡಗುತ್ತದೆ. ಆದರೆ ಇಂತಹ ಯಾವುದೇ “ಸಾಂತ್ವನವು” ನಿಜಕ್ಕೂ ಸುಳ್ಳಾಗಿರುವುದು ಮಾತ್ರವಲ್ಲ ಅಪಾಯಕರವೂ ಆಗಿದೆ. ಏಕೆ? ಏಕೆಂದರೆ ದೆವ್ವಗಳು ಮೃತ ವ್ಯಕ್ತಿಯ ಸ್ವರವನ್ನು ಅನುಕರಿಸಶಕ್ತವು ಮಾತ್ರವಲ್ಲ, ಅವು ಮೃತನ ಬಗ್ಗೆ ಮಾಹಿತಿಯನ್ನೂ ಪ್ರೇತ ಮಾಧ್ಯಮನಾಗಿರುವ ವ್ಯಕ್ತಿಗೆ ಒದಗಿಸಬಲ್ಲವು. (1 ಸಮುವೇಲ 28:3-19) ಇದಲ್ಲದೆ, ನಾವು 6ನೆಯ ಅಧ್ಯಾಯದಲ್ಲಿ ಕಲಿತಂತೆ, ಮೃತರು ಅಸ್ತಿತ್ವದಲ್ಲಿಲ್ಲ. (ಕೀರ್ತನೆ 115:17) ಆದುದರಿಂದ “ಸತ್ತವರನ್ನು ವಿಚಾರಿಸುವ” ಯಾವನೂ ದುಷ್ಟಾತ್ಮಗಳಿಂದ ದಾರಿತಪ್ಪಿಸಲ್ಪಟ್ಟವನಾಗಿದ್ದು, ದೇವರ ಚಿತ್ತಕ್ಕೆ ಪ್ರತಿಕೂಲವಾಗಿ ವರ್ತಿಸುವವನಾಗಿದ್ದಾನೆ. (ಧರ್ಮೋಪದೇಶಕಾಂಡ 18:10, 11; ಯೆಶಾಯ 8:19) ಆದುದರಿಂದ ದೆವ್ವಗಳು ಉಪಯೋಗಿಸುವ ಈ ಅಪಾಯಕಾರಿಯಾದ ಆಕರ್ಷಕ ತೀನಿಯನ್ನು ತಿರಸ್ಕರಿಸಲು ಎಚ್ಚರವಾಗಿರಿ.

13. ಒಂದು ಸಮಯದಲ್ಲಿ ದೆವ್ವಗಳಿಗೆ ಭಯಪಡುತ್ತಿದ್ದ ಅನೇಕರು ಈಗ ಏನು ಮಾಡಲು ಶಕ್ತರಾಗಿದ್ದಾರೆ?

13 ದುಷ್ಟಾತ್ಮಗಳು ಜನರನ್ನು ದಾರಿತಪ್ಪಿಸುವುದು ಮಾತ್ರವಲ್ಲ, ಅವರನ್ನು ಹೆದರಿಸುತ್ತವೆ ಸಹ. ಇಂದು, ತಮ್ಮನ್ನು ನಿಷ್ಕ್ರಿಯಗೊಳಿಸಲು ಉಳಿದಿರುವ “ಕಾಲವು ಸ್ವಲ್ಪ”ವೆಂದು ಸೈತಾನನಿಗೂ ಅವನ ದೆವ್ವಗಳಿಗೂ ತಿಳಿದಿದೆ. ಆದುದರಿಂದ ಅವು ಈಗ ಹಿಂದೆಂದಿಗಿಂತಲೂ ಹೆಚ್ಚು ಉಗ್ರಗೊಂಡಿವೆ. (ಪ್ರಕಟನೆ 12:12, 17) ಹಾಗಿದ್ದರೂ, ಈ ಹಿಂದೆ ಪ್ರತಿದಿನ ಇಂತಹ ದುಷ್ಟಾತ್ಮಗಳ ಭಯದಲ್ಲಿ ಜೀವಿಸುತ್ತಿದ್ದ ಸಾವಿರಾರು ಜನರು ಈಗ ಆ ರೀತಿಯ ಭಯದಿಂದ ಮುಕ್ತರಾಗಲು ಶಕ್ತರಾಗಿದ್ದಾರೆ. ಅದು ಹೇಗೆ? ಒಬ್ಬ ವ್ಯಕ್ತಿಯು ಈಗಾಗಲೇ ಪ್ರೇತವ್ಯವಹಾರದಲ್ಲಿ ಒಳಗೂಡಿರುವುದಾದರೂ ಅವನೇನು ಮಾಡಬಲ್ಲನು?

ದುಷ್ಟಾತ್ಮಗಳನ್ನು ಪ್ರತಿರೋಧಿಸುವ ವಿಧ

14. ಎಫೆಸದಲ್ಲಿದ್ದ ಪ್ರಥಮ ಶತಮಾನದ ಕ್ರೈಸ್ತರಂತೆ, ನಾವು ದುಷ್ಟಾತ್ಮಗಳಿಂದ ಹೇಗೆ ಬಿಡುಗಡೆ ಹೊಂದಬಲ್ಲೆವು?

14 ನಾವು ದುಷ್ಟಾತ್ಮಗಳನ್ನು ಹೇಗೆ ಪ್ರತಿರೋಧಿಸಬಲ್ಲೆವು ಮತ್ತು ಅವುಗಳಿಂದ ಹೇಗೆ ಬಿಡುಗಡೆ ಹೊಂದಬಲ್ಲೆವು ಎಂಬ ಎರಡೂ ವಿಷಯಗಳನ್ನು ಬೈಬಲು ನಮಗೆ ತಿಳಿಸುತ್ತದೆ. ಎಫೆಸ ಪಟ್ಟಣದಲ್ಲಿದ್ದ ಪ್ರಥಮ ಶತಮಾನದ ಕ್ರೈಸ್ತರ ಮಾದರಿಯನ್ನು ಪರಿಗಣಿಸಿರಿ. ಅವರಲ್ಲಿ ಕೆಲವರು ಕ್ರೈಸ್ತರಾಗುವ ಮೊದಲು ಪ್ರೇತವ್ಯವಹಾರವನ್ನು ನಡೆಸುತ್ತಿದ್ದರು. ಅವರು ಅದನ್ನು ತ್ಯಜಿಸಲು ನಿರ್ಣಯಿಸಿದಾಗ ಏನು ಮಾಡಿದರು? ಬೈಬಲು ಹೇಳುವುದು: “ಇದಲ್ಲದೆ ಮಾಟ [“ಜಾದೂ,” NW] ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ತಂದು ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು.” (ಅ. ಕೃತ್ಯಗಳು 19:19) ಆ ಜಾದೂಮಂತ್ರದ ಪುಸ್ತಕಗಳನ್ನು ನಾಶಮಾಡುವ ಮೂಲಕ, ಹೊಸದಾಗಿ ಕ್ರೈಸ್ತರಾಗಿದ್ದ ಅವರು ಇಂದು ದುಷ್ಟಾತ್ಮಗಳನ್ನು ಪ್ರತಿರೋಧಿಸಲು ಬಯಸುವವರಿಗೆ ಒಂದು ಮಾದರಿಯನ್ನಿಟ್ಟರು. ಯೆಹೋವನನ್ನು ಸೇವಿಸಬಯಸುವವರು ಪ್ರೇತವ್ಯವಹಾರಕ್ಕೆ ಸಂಬಂಧಪಟ್ಟ ಸಕಲವನ್ನೂ ತೊಲಗಿಸಿಬಿಡುವುದು ಆವಶ್ಯಕ. ಅದರಲ್ಲಿ, ಪ್ರೇತವ್ಯವಹಾರವನ್ನು ಪ್ರೋತ್ಸಾಹಿಸುವ ಮತ್ತು ಅದು ಆಕರ್ಷಕ ಹಾಗೂ ರೋಮಾಂಚಕಾರಿಯಾಗಿದೆ ಎಂದು ತೋರುವಂತೆ ಮಾಡುವ ಪುಸ್ತಕಗಳು, ಪತ್ರಿಕೆಗಳು, ಚಲನಚಿತ್ರಗಳು, ಭಿತ್ತಿಪತ್ರಗಳು ಮತ್ತು ಸಂಗೀತದ ರೆಕಾರ್ಡುಗಳು ಸೇರಿರುತ್ತವೆ. ತೊಲಗಿಸಿಬಿಡಬೇಕಾದ ಇನ್ನು ಕೆಲವು ವಸ್ತುಗಳಲ್ಲಿ, ದುಷ್ಟಶಕ್ತಿಗಳ ವಿರುದ್ಧ ರಕ್ಷಣೆಗಾಗಿ ಧರಿಸಲಾಗುವ ತಾಯಿತಿಗಳು ಅಥವಾ ಇತರ ವಸ್ತುಗಳೂ ಸೇರಿವೆ.—1 ಕೊರಿಂಥ 10:21.

15. ದುರಾತ್ಮ ಸೇನೆಗಳನ್ನು ಪ್ರತಿರೋಧಿಸಲು ನಾವು ಏನು ಮಾಡುವುದು ಅಗತ್ಯ?

15 ಎಫೆಸದ ಕ್ರೈಸ್ತರು ತಮ್ಮ ಜಾದೂಮಂತ್ರಗಳ ಪುಸ್ತಕಗಳನ್ನು ನಾಶಮಾಡಿದ ಕೆಲವು ವರ್ಷಗಳ ಬಳಿಕವೂ, ‘ನಾವು ದುರಾತ್ಮಗಳ ಸೇನೆಯ ಮೇಲೆ ಹೋರಾಡುವವರಾಗಿದ್ದೇವೆ’ ಎಂದು ಅಪೊಸ್ತಲ ಪೌಲನು ಅವರಿಗೆ ಬರೆದನು. (ಎಫೆಸ 6:12) ಆ ದೆವ್ವಗಳು ತಮ್ಮ ಹೋರಾಟವನ್ನು ನಿಲ್ಲಿಸಿರಲಿಲ್ಲ. ಅವು ಆಗಲೂ ಮೇಲುಗೈ ಪಡೆಯಲು ಪ್ರಯತ್ನಿಸುತ್ತಿದ್ದವು. ಹಾಗಾದರೆ ಆ ಕ್ರೈಸ್ತರಿಗೆ ಇನ್ನೇನನ್ನು ಮಾಡುವ ಅಗತ್ಯವಿತ್ತು? ಪೌಲನು ಬರೆದುದು: “ನಂಬಿಕೆಯೆಂಬ [“ದೊಡ್ಡ,” NW] ಗುರಾಣಿಯನ್ನು ಹಿಡುಕೊಳ್ಳಿರಿ; ಅದರಿಂದ ನೀವು ಕೆಡುಕನ [ಸೈತಾನನ] ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ.” (ಎಫೆಸ 6:16) ನಮ್ಮ ನಂಬಿಕೆಯೆಂಬ ಗುರಾಣಿ ಎಷ್ಟು ಹೆಚ್ಚು ಬಲವಾಗಿರುತ್ತದೋ, ದುರಾತ್ಮ ಅಥವಾ ದುಷ್ಟಾತ್ಮ ಸೇನೆಗಳ ವಿರುದ್ಧ ನಮ್ಮ ಪ್ರತಿರೋಧವೂ ಅಷ್ಟೇ ಹೆಚ್ಚು ಬಲವಾಗಿರುವುದು.—ಮತ್ತಾಯ 17:20.

16. ನಾವು ನಮ್ಮ ನಂಬಿಕೆಯನ್ನು ಹೇಗೆ ಬಲಪಡಿಸಿಕೊಳ್ಳಬಲ್ಲೆವು?

16 ಹಾಗಾದರೆ ನಾವು ನಮ್ಮ ನಂಬಿಕೆಯನ್ನು ಹೇಗೆ ಬಲಪಡಿಸಿಕೊಳ್ಳಬಲ್ಲೆವು? ಬೈಬಲ್‌ ಅಧ್ಯಯನ ಮಾಡುವುದರ ಮೂಲಕವೇ. ಒಂದು ಗೋಡೆಯ ಸ್ಥಿರತೆಯು ಅದರ ಅಸ್ತಿವಾರದ ಬಲದ ಮೇಲೆ ಬಹಳಷ್ಟು ಹೊಂದಿಕೊಂಡಿರುತ್ತದೆ. ಅದೇ ರೀತಿ, ನಮ್ಮ ನಂಬಿಕೆಯ ಸ್ಥಿರತೆಯು ಅದರ ಆಧಾರವಾಗಿರುವ ದೇವರ ವಾಕ್ಯವಾದ ಬೈಬಲಿನ ನಿಷ್ಕೃಷ್ಟ ಜ್ಞಾನದ ಮೇಲೆ ಬಹಳವಾಗಿ ಹೊಂದಿಕೊಂಡಿರುತ್ತದೆ. ನಾವು ಪ್ರತಿದಿನ ಬೈಬಲನ್ನು ಓದಿ ಅಧ್ಯಯನ ಮಾಡುವಲ್ಲಿ, ನಮ್ಮ ನಂಬಿಕೆಯು ದೃಢವಾಗುವುದು. ಬಲವಾದ ಗೋಡೆಯೋಪಾದಿ, ಇಂತಹ ನಂಬಿಕೆಯು ದುಷ್ಟಾತ್ಮಗಳ ಪ್ರಭಾವದಿಂದ ನಮಗೆ ರಕ್ಷಣೆಯನ್ನು ನೀಡುವುದು.—1 ಯೋಹಾನ 5:5.

17. ದುಷ್ಟಾತ್ಮಗಳನ್ನು ಪ್ರತಿರೋಧಿಸಬೇಕಾದರೆ ಯಾವ ಹೆಜ್ಜೆ ಅಗತ್ಯ?

17 ಎಫೆಸದ ಕ್ರೈಸ್ತರು ಇನ್ನಾವ ಕ್ರಮವನ್ನು ಕೈಕೊಳ್ಳಬೇಕಾಗಿತ್ತು? ಅವರು ಭೂತಶ್ರದ್ಧೆ ತುಂಬಿದ್ದ ಒಂದು ಪಟ್ಟಣದಲ್ಲಿ ಜೀವಿಸುತ್ತಿದ್ದುದರಿಂದ ಅವರಿಗೆ ಇನ್ನೂ ಹೆಚ್ಚಿನ ಸಂರಕ್ಷಣೆ ಬೇಕಾಗಿತ್ತು. ಆದಕಾರಣ ಪೌಲನು ಅವರಿಗೆ ಹೇಳಿದ್ದು: “ನೀವು ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ದೇವರನ್ನು ಪ್ರಾರ್ಥಿಸಿರಿ.” (ಎಫೆಸ 6:18) ಭೂತಶ್ರದ್ಧೆಯು ತುಂಬಿರುವಂಥ ಲೋಕದಲ್ಲಿ ನಾವೂ ಜೀವಿಸುವುದರಿಂದ, ದುಷ್ಟಾತ್ಮಗಳನ್ನು ಪ್ರತಿರೋಧಿಸುವುದರಲ್ಲಿ ಸಂರಕ್ಷಣೆಗಾಗಿ ಯೆಹೋವನಿಗೆ ಮನಃಪೂರ್ವಕವಾಗಿ ಪ್ರಾರ್ಥಿಸುವುದು ಆವಶ್ಯಕ. ಹೌದು, ನಮ್ಮ ಪ್ರಾರ್ಥನೆಗಳಲ್ಲಿ ನಾವು ಯೆಹೋವನ ಹೆಸರನ್ನು ಉಪಯೋಗಿಸಬೇಕೆಂಬುದು ನಿಶ್ಚಯ. (ಜ್ಞಾನೋಕ್ತಿ 18:10) ಆದಕಾರಣ, “ಕೆಡುಕನಿಂದ” ಅಂದರೆ ಪಿಶಾಚನಾದ ಸೈತಾನನಿಂದ “ನಮ್ಮನ್ನು ತಪ್ಪಿಸು” ಎಂದು ನಾವು ದೇವರಿಗೆ ಪ್ರಾರ್ಥಿಸುತ್ತ ಇರಬೇಕು. (ಮತ್ತಾಯ 6:13, BSI Reference Edition ಪಾದಟಿಪ್ಪಣಿ) ಯೆಹೋವನು ಅಂತಹ ಮನಃಪೂರ್ವಕ ಪ್ರಾರ್ಥನೆಗಳಿಗೆ ಖಂಡಿತ ಉತ್ತರ ನೀಡುವನು.—ಕೀರ್ತನೆ 145:19.

18, 19. (ಎ) ದುಷ್ಟಾತ್ಮ ಜೀವಿಗಳ ವಿರುದ್ಧ ನಡೆಸಲ್ಪಡುವ ಹೋರಾಟದಲ್ಲಿ ನಮಗೆ ವಿಜಯವು ಖಂಡಿತ ಎಂಬ ವಿಷಯದಲ್ಲಿ ನಾವೇಕೆ ಖಾತ್ರಿಯಿಂದಿರಬಲ್ಲೆವು? (ಬಿ) ಮುಂದಿನ ಅಧ್ಯಾಯದಲ್ಲಿ ಯಾವ ಪ್ರಶ್ನೆಗೆ ಉತ್ತರ ದೊರೆಯುವುದು?

18 ದುಷ್ಟಾತ್ಮಗಳು ಅಪಾಯಕಾರಿಯಾಗಿವೆ ಎಂಬುದು ನಿಜವಾದರೂ, ನಾವು ಪಿಶಾಚನನ್ನು ವಿರೋಧಿಸಿ ದೇವರ ಚಿತ್ತವನ್ನು ಮಾಡುತ್ತ ಆತನಿಗೆ ಸಮೀಪವಾಗುವಲ್ಲಿ, ಅವುಗಳ ಭೀತಿಯಿಂದ ಜೀವಿಸಬೇಕಾಗಿರುವುದಿಲ್ಲ. (ಯಾಕೋಬ 4:7, 8) ಏಕೆಂದರೆ ದುಷ್ಟಾತ್ಮಗಳಿಗಿರುವ ಶಕ್ತಿಯು ಸೀಮಿತವಾಗಿದೆ. ನೋಹನ ದಿನಗಳಲ್ಲಿ ಅವುಗಳನ್ನು ಶಿಕ್ಷಿಸಲಾಗಿತ್ತು, ಮತ್ತು ಭವಿಷ್ಯತ್ತಿನಲ್ಲಿ ಅವು ತಮ್ಮ ಅಂತಿಮ ತೀರ್ಪನ್ನು ಎದುರಿಸುವವು. (ಯೂದ 6) ಮತ್ತು ಯೆಹೋವನ ಬಲಾಢ್ಯ ದೇವದೂತರ ಸಂರಕ್ಷಣೆಯೂ ನಮಗಿದೆಯೆಂಬುದು ನೆನಪಿರಲಿ. (2 ಅರಸುಗಳು 6:15-17) ನಾವು ದುಷ್ಟಾತ್ಮಗಳನ್ನು ಪ್ರತಿರೋಧಿಸುವುದರಲ್ಲಿ ಜಯಹೊಂದುವುದನ್ನು ನೋಡಲು ಆ ದೇವದೂತರಿಗೆ ಅತ್ಯಾಸಕ್ತಿಯಿದೆ. ಆ ನೀತಿವಂತ ದೇವದೂತರು ನಮ್ಮನ್ನು ಉತ್ತೇಜಿಸಿ ಹುರಿದುಂಬಿಸುತ್ತಿದ್ದಾರೋ ಎಂಬಂತಿದೆ. ಆದಕಾರಣ, ನಾವು ಯೆಹೋವನಿಗೂ ಆತನ ನಂಬಿಗಸ್ತ ಆತ್ಮಜೀವಿಗಳ ಕುಟುಂಬಕ್ಕೂ ನಿಕಟವಾಗಿ ಉಳಿಯೋಣ. ನಾವು ಕೂಡ ಪ್ರತಿಯೊಂದು ವಿಧದ ಪ್ರೇತವ್ಯವಹಾರದಿಂದ ದೂರವಿದ್ದು, ದೇವರ ವಾಕ್ಯದ ಸಲಹೆಯನ್ನು ಸದಾ ಅನ್ವಯಿಸಿಕೊಳ್ಳೋಣ. (1 ಪೇತ್ರ 5:6, 7; 2 ಪೇತ್ರ 2:9) ಆಗ, ದುಷ್ಟಾತ್ಮ ಜೀವಿಗಳ ವಿರುದ್ಧ ನಾವು ಮಾಡುವ ಹೋರಾಟದಲ್ಲಿ ನಮಗೆ ವಿಜಯವು ಖಂಡಿತ.

19 ಆದರೆ ಜನರನ್ನು ಇಷ್ಟೊಂದು ನರಳಾಟಕ್ಕೀಡುಮಾಡಿರುವ ದುಷ್ಟಾತ್ಮಗಳನ್ನೂ ದುಷ್ಟತನವನ್ನೂ ದೇವರು ಏಕೆ ಸಹಿಸಿಕೊಂಡಿದ್ದಾನೆ? ಆ ಪ್ರಶ್ನೆಗೆ ಮುಂದಿನ ಅಧ್ಯಾಯದಲ್ಲಿ ಉತ್ತರ ದೊರೆಯುವುದು.

^ ಪ್ಯಾರ. 2 ನೀತಿವಂತ ದೇವದೂತರ ಕುರಿತಾಗಿ ಪ್ರಕಟನೆ 5:11 ಹೇಳುವುದು: “ಅವರ ಸಂಖ್ಯೆಯು ಕೋಟ್ಯಾನುಕೋಟಿಯಾಗಿಯೂ ಲಕ್ಷೋಪಲಕ್ಷವಾಗಿಯೂ ಇತ್ತು.” ಹೀಗೆ ಕೋಟಿಗಟ್ಟಲೆ ದೇವದೂತರು ಸೃಷ್ಟಿಸಲ್ಪಟ್ಟಿದ್ದರೆಂಬುದನ್ನು ಬೈಬಲು ಸೂಚಿಸುತ್ತದೆ.