ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಹದಿಮೂರು

ಜೀವದ ಬಗ್ಗೆ ದೇವರಿಗಿರುವ ನೋಟವನ್ನು ಹೊಂದಿರುವುದು

ಜೀವದ ಬಗ್ಗೆ ದೇವರಿಗಿರುವ ನೋಟವನ್ನು ಹೊಂದಿರುವುದು
  • ಜೀವದ ಬಗ್ಗೆ ದೇವರ ನೋಟವೇನು?

  • ಗರ್ಭಪಾತದ ಬಗ್ಗೆ ದೇವರ ನೋಟವೇನು?

  • ನಾವು ಜೀವಕ್ಕೆ ಹೇಗೆ ಗೌರವವನ್ನು ತೋರಿಸುತ್ತೇವೆ?

1. ಸಕಲ ಜೀವಿಗಳನ್ನು ಸೃಷ್ಟಿಸಿದವನು ಯಾರು?

‘ಯೆಹೋವನಾದರೋ ಸತ್ಯದೇವರು, ಆತನು ಚೈತನ್ಯ [“ಜೀವ,” NIBV] ಸ್ವರೂಪನಾದ ದೇವರು’ ಎನ್ನುತ್ತಾನೆ ಪ್ರವಾದಿ ಯೆರೆಮೀಯನು. (ಯೆರೆಮೀಯ 10:10) ಇದಲ್ಲದೆ, ಯೆಹೋವ ದೇವರು ಸಕಲ ಜೀವಿಗಳ ಸೃಷ್ಟಿಕರ್ತನು. “ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು” ಎಂದು ಸ್ವರ್ಗೀಯ ಜೀವಿಗಳು ಆತನಿಗೆ ಹೇಳಿದವು. (ಪ್ರಕಟನೆ 4:11) ರಾಜ ದಾವೀದನು ದೇವರಿಗೆ ಹಾಡಿದ ಸ್ತುತಿಗೀತೆಯಲ್ಲಿ, “ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ” ಎಂದು ಹೇಳಿದನು. (ಕೀರ್ತನೆ 36:9) ಹಾಗಾದರೆ ಜೀವವು ದೇವರು ಕೊಟ್ಟಿರುವ ಒಂದು ವರದಾನವಾಗಿದೆ.

2. ನಮ್ಮ ಜೀವಗಳನ್ನು ಪೋಷಿಸಲು ದೇವರು ಏನು ಮಾಡುತ್ತಾನೆ?

2 ಯೆಹೋವನು ನಮ್ಮ ಜೀವವನ್ನು ಪೋಷಿಸುತ್ತಾನೆ ಸಹ. (ಅ. ಕೃತ್ಯಗಳು 17:28) ನಾವು ತಿನ್ನುವ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ ಮತ್ತು ವಾಸಿಸುವ ನೆಲ—ಇವೆಲ್ಲವನ್ನು ಒದಗಿಸುವಾತನು ಆತನೇ. (ಅ. ಕೃತ್ಯಗಳು 14:15-17) ನಮ್ಮ ಜೀವನವನ್ನು ಹರ್ಷಗೊಳಿಸುವಂಥ ವಿಧದಲ್ಲಿ ಯೆಹೋವನು ಇದನ್ನು ಮಾಡಿರುತ್ತಾನೆ. ಆದರೆ ನಮ್ಮ ಜೀವನದಲ್ಲಿ ಪೂರ್ಣವಾಗಿ ಸಂತೋಷಿಸಬೇಕಾದರೆ ದೇವರ ನಿಯಮಗಳನ್ನು ಕಲಿತು ಅವುಗಳಿಗೆ ವಿಧೇಯತೆ ತೋರಿಸುವುದು ಅಗತ್ಯ.—ಯೆಶಾಯ 48:17, 18.

ಜೀವಕ್ಕೆ ಗೌರವವನ್ನು ತೋರಿಸುವುದು

3. ಹೇಬೆಲನ ಕೊಲೆಯ ಬಗ್ಗೆ ದೇವರ ನೋಟವೇನಾಗಿತ್ತು?

3 ನಾವು ಜೀವಕ್ಕೆ ಗೌರವ ತೋರಿಸಬೇಕೆಂಬುದು ದೇವರ ಬಯಕೆ. ಇದರಲ್ಲಿ ಸ್ವತಃ ನಮ್ಮ ಮತ್ತು ಇತರರ ಜೀವಕ್ಕೂ ಗೌರವವನ್ನು ತೋರಿಸುವುದು ಒಳಗೂಡಿದೆ. ಉದಾಹರಣೆಗೆ, ಆದಾಮಹವ್ವರ ಸಮಯದಲ್ಲಿ ಅವರ ಪುತ್ರ ಕಾಯಿನನು ಅವನ ತಮ್ಮನಾದ ಹೇಬೆಲನ ಮೇಲೆ ತುಂಬ ಕೋಪಗೊಂಡನು. ಕಾಯಿನನ ಕೋಪವು ಗಂಭೀರವಾದ ಪಾಪಕ್ಕೆ ನಡೆಸಬಲ್ಲದೆಂದು ಯೆಹೋವನು ಅವನನ್ನು ಎಚ್ಚರಿಸಿದನು. ಆದರೆ ಕಾಯಿನನು ಆ ಎಚ್ಚರಿಕೆಯನ್ನು ಅಲಕ್ಷ್ಯಮಾಡಿದನು. ಅವನು “ತನ್ನ ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು.” (ಆದಿಕಾಂಡ 4:3-8) ತನ್ನ ತಮ್ಮನನ್ನು ಕೊಂದದ್ದಕ್ಕಾಗಿ ಯೆಹೋವನು ಕಾಯಿನನಿಗೆ ಶಿಕ್ಷೆವಿಧಿಸಿದನು.—ಆದಿಕಾಂಡ 4:9-11.

4. ಮೋಶೆಯ ಧರ್ಮಶಾಸ್ತ್ರದಲ್ಲಿ ಜೀವದ ಕುರಿತಾದ ಸರಿಯಾದ ನೋಟವನ್ನು ದೇವರು ಹೇಗೆ ಒತ್ತಿಹೇಳಿದನು?

4 ಸುಮಾರು 2,400 ವರುಷಗಳ ಬಳಿಕ ಯೆಹೋವನು ಇಸ್ರಾಯೇಲ್ಯರಿಗೆ, ಅವರು ಆತನನ್ನು ಅಂಗೀಕಾರಾರ್ಹವಾಗಿ ಸೇವಿಸಲು ಸಹಾಯಕರವಾಗುವಂತೆ ನಿಯಮಗಳನ್ನು ಕೊಟ್ಟನು. ಈ ನಿಯಮಗಳು ಪ್ರವಾದಿಯಾದ ಮೋಶೆಯ ಮೂಲಕ ಕೊಡಲ್ಪಟ್ಟದ್ದರಿಂದ, ಅವುಗಳನ್ನು ಕೆಲವು ಬಾರಿ ಮೋಶೆಯ ಧರ್ಮಶಾಸ್ತ್ರವೆಂದು ಕರೆಯಲಾಗುತ್ತದೆ. ಆ ಮೋಶೆಯ ಧರ್ಮಶಾಸ್ತ್ರದ ಒಂದು ಭಾಗವು, “ನರಹತ್ಯಮಾಡಬಾರದು” ಎಂದು ತಿಳಿಸಿತು. (ಧರ್ಮೋಪದೇಶಕಾಂಡ 5:17) ಇದು, ದೇವರು ಮಾನವ ಜೀವವನ್ನು ಅಮೂಲ್ಯವಾದದ್ದಾಗಿ ಪರಿಗಣಿಸುತ್ತಾನೆಂದು ಮತ್ತು ಜನರು ಇತರರ ಜೀವವನ್ನು ಅದೇ ರೀತಿಯಲ್ಲಿ ಪರಿಗಣಿಸಬೇಕೆಂದು ಇಸ್ರಾಯೇಲ್ಯರಿಗೆ ತೋರಿಸಿಕೊಟ್ಟಿತು.

5. ಗರ್ಭಪಾತದ ಬಗ್ಗೆ ನಮ್ಮ ನೋಟವೇನಾಗಿರಬೇಕು?

5 ಆದರೆ, ಗರ್ಭದಲ್ಲಿರುವ ಶಿಶುವಿನ ಜೀವದ ವಿಷಯದಲ್ಲೇನು? ಮೋಶೆಯ ಧರ್ಮಶಾಸ್ತ್ರವು ತಿಳಿಸಿದ್ದು: “ಪುರುಷರು ಪರಸ್ಪರ ಹೋರಾಡುತ್ತಿರುವಾಗ ಗರ್ಭಿಣಿ ಸ್ತ್ರೀಯೊಬ್ಬಳಿಗೆ ನಿಜವಾಗಿ ಏಟು ತಗಲಿ, ಆಕೆಯ ಶಿಶುಗಳು ಅಕಾಲಿಕವಾಗಿ ಹೊರಗೆ ಬಂದರೂ ಮಾರಕ ಅಪಘಾತವು ಸಂಭವಿಸದೆ ಇದ್ದರೆ, ಆ ಸ್ತ್ರೀಯ ಯಜಮಾನನು ಗೊತ್ತುಮಾಡಬಹುದಾದ ದಂಡವನ್ನು ಅವನಿಗೆ ವಿಧಿಸಬೇಕು, ಮತ್ತು ಅವನು ಅದನ್ನು ನ್ಯಾಯಾಧಿಪತಿಗಳ ಮೂಲಕ ತೆರಬೇಕು. ಆದರೆ ಮಾರಕ ಅಪಘಾತವೇನಾದರೂ ಸಂಭವಿಸುವಲ್ಲಿ, ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡತಕ್ಕದ್ದು.” (ವಿಮೋಚನಕಾಂಡ 21:22, 23, NW) ಹಾಗಾದರೆ ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ತಾಯಿಯ ಗರ್ಭದಲ್ಲಿರುವ ಶಿಶುವಿನ ಮರಣಕ್ಕೆ ಕಾರಣರಾಗುವುದು ತಪ್ಪಾಗಿತ್ತು. ಹೌದು, ಆ ಜೀವವು ಸಹ ಯೆಹೋವನಿಗೆ ಅಮೂಲ್ಯವಾಗಿರುತ್ತದೆ. (ಕೀರ್ತನೆ 127:3) ಇದರರ್ಥ ಗರ್ಭಪಾತ ತಪ್ಪಾಗಿದೆ.

6. ನಾವು ನಮ್ಮ ಜೊತೆಮಾನವರನ್ನು ಏಕೆ ದ್ವೇಷಿಸಬಾರದು?

6 ಜೀವಕ್ಕೆ ಗೌರವ ತೋರಿಸುವುದರಲ್ಲಿ ಜೊತೆಮಾನವರ ವಿಷಯದಲ್ಲಿ ಸರಿಯಾದ ನೋಟವನ್ನು ಹೊಂದಿರುವುದೂ ಸೇರಿರುತ್ತದೆ. “ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ, ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವದಿಲ್ಲವೆಂಬದು ನಿಮಗೆ ಗೊತ್ತಾಗಿದೆ” ಎನ್ನುತ್ತದೆ ಬೈಬಲು. (1 ಯೋಹಾನ 3:15) ನಾವು ನಿತ್ಯಜೀವವನ್ನು ಬಯಸುವಲ್ಲಿ, ಜೊತೆಮಾನವರ ಕಡೆಗೆ ನಮ್ಮ ಹೃದಯದಲ್ಲಿರುವ ಯಾವುದೇ ದ್ವೇಷವನ್ನು ಬೇರುಸಹಿತ ಕಿತ್ತೆಸೆಯುವುದು ಆವಶ್ಯಕ, ಏಕೆಂದರೆ ಹೆಚ್ಚಿನ ಹಿಂಸಾಚಾರಕ್ಕೆ ಮೂಲಕಾರಣವು ದ್ವೇಷವಾಗಿದೆ. (1 ಯೋಹಾನ 3:11, 12) ನಾವು ಒಬ್ಬರನ್ನೊಬ್ಬರು ಪ್ರೀತಿಸಲು ಕಲಿಯುವುದು ಅತ್ಯಗತ್ಯ.

7. ಜೀವಕ್ಕೆ ಅಗೌರವವನ್ನು ತೋರಿಸುವ ಕೆಲವು ದುಶ್ಚಟಗಳಾವುವು?

7 ನಮ್ಮ ಸ್ವಂತ ಜೀವಕ್ಕೆ ಗೌರವ ತೋರಿಸುವುದರ ಕುರಿತು ಏನು? ಸಹಜವಾಗಿ, ಜನರು ಸಾಯಬಯಸುವುದಿಲ್ಲವಾದರೂ ಕೆಲವರು ಸುಖಾಭಿಲಾಷೆಯ ನಿಮಿತ್ತ ಮರಣಾಪಾಯಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ದೃಷ್ಟಾಂತಕ್ಕಾಗಿ, ಅನೇಕರು ತಂಬಾಕನ್ನು ಬಳಸುತ್ತಾರೆ, ಸುಪಾರಿ ಜಗಿಯುತ್ತಾರೆ ಇಲ್ಲವೆ ಮನರಂಜನೆಗಾಗಿ ಅಮಲೌಷಧಗಳನ್ನು ಉಪಯೋಗಿಸುತ್ತಾರೆ. ಇಂತಹ ಪದಾರ್ಥಗಳು ದೇಹಕ್ಕೆ ಹಾನಿಯನ್ನು ಉಂಟುಮಾಡುತ್ತವೆ ಮತ್ತು ಅನೇಕವೇಳೆ ಇವುಗಳನ್ನು ಉಪಯೋಗಿಸುವವರನ್ನು ಕೊಲ್ಲುತ್ತವೆ. ಆದುದರಿಂದ, ಇಂತಹ ಪದಾರ್ಥಗಳನ್ನು ಉಪಯೋಗಿಸುವ ಚಟವನ್ನು ಬೆಳೆಸಿಕೊಳ್ಳುವವನು ಜೀವವನ್ನು ಪವಿತ್ರವೆಂದು ವೀಕ್ಷಿಸುವುದಿಲ್ಲ. ಈ ದುಶ್ಚಟಗಳು ದೇವರ ದೃಷ್ಟಿಯಲ್ಲಿ ಅಶುದ್ಧವಾಗಿವೆ. (ರೋಮಾಪುರ 6:19; 12:1; 2 ಕೊರಿಂಥ 7:1) ದೇವರನ್ನು ಅಂಗೀಕಾರಾರ್ಹವಾಗಿ ಸೇವಿಸಬೇಕಾದರೆ ನಾವು ಅಂತಹ ದುಶ್ಚಟಗಳನ್ನು ಬಿಟ್ಟುಬಿಡಲೇಬೇಕು. ಹಾಗೆ ಮಾಡುವುದು ಅತಿ ಕಷ್ಟಕರವಾಗಿರಬಹುದಾದರೂ ಯೆಹೋವನು ನಮಗೆ ಅಗತ್ಯವಿರುವ ಬಲವನ್ನು ಒದಗಿಸಬಲ್ಲನು. ಮತ್ತು ನಮ್ಮ ಜೀವವನ್ನು ಆತನು ಕೊಟ್ಟಿರುವ ಅಮೂಲ್ಯ ವರದಾನದಂತೆ ವೀಕ್ಷಿಸಲು ನಾವು ಮಾಡುವ ಪ್ರಯತ್ನವನ್ನು ಆತನು ಮಾನ್ಯಮಾಡುತ್ತಾನೆ.

8. ನಾವು ಸುರಕ್ಷಿತತೆಯ ಪ್ರಜ್ಞೆಯುಳ್ಳವರಾಗಿರುವ ಅಗತ್ಯವನ್ನು ಏಕೆ ಮನಸ್ಸಿನಲ್ಲಿಟ್ಟುಕೊಳ್ಳಬೇಕು?

8 ನಾವು ಜೀವಕ್ಕೆ ಗೌರವವನ್ನು ತೋರಿಸುವಲ್ಲಿ, ನಾವು ಸದಾ ಸುರಕ್ಷಿತತೆಯ ಪ್ರಜ್ಞೆಯುಳ್ಳವರಾಗಿರುವೆವು. ನಾವು ಅಲಕ್ಷ್ಯದಿಂದ ವರ್ತಿಸೆವು ಮತ್ತು ಬರಿಯ ಸುಖಾಭಿಲಾಷೆಗಾಗಿ ಅಥವಾ ಉದ್ವೇಗಕ್ಕಾಗಿ ನಮ್ಮನ್ನು ಗಂಡಾಂತರಕ್ಕೊಳಪಡಿಸಿಕೊಳ್ಳೆವು. ನಾವು ಅಪಾಯವನ್ನು ಲೆಕ್ಕಿಸದೆ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವುದರಿಂದ ಮತ್ತು ಹಿಂಸಾಚಾರ ಅಥವಾ ಅಪಾಯಕರವಾದ ಕ್ರೀಡೆಗಳಿಂದ ದೂರವಿರುವೆವು. (ಕೀರ್ತನೆ 11:5) ಪುರಾತನಕಾಲದ ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ದೇವರ ನಿಯಮವು ಹೀಗಿತ್ತು: “ಹೊಸ ಮನೆಯನ್ನು ಕಟ್ಟಿಸಿಕೊಳ್ಳುವಾಗ ಯಾವನಾದರೂ ಅದರ ಮಾಳಿಗೆಯಿಂದ ಬಿದ್ದು ನಿಮಗೆ ಜೀವಹತ್ಯದೋಷವುಂಟಾಗದಂತೆ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಗೋಡೆಯನ್ನು ಕಟ್ಟಿಸಬೇಕು.” (ಧರ್ಮೋಪದೇಶಕಾಂಡ 22:8) ಈ ಆಜ್ಞೆಯಲ್ಲಿರುವ ಮೂಲತತ್ತ್ವಕ್ಕನುಸಾರ, ಯಾರಾದರೂ ಎಡವಿ ಬಿದ್ದು ಗಂಭೀರವಾಗಿ ಗಾಯಗೊಳ್ಳದಂತೆ ನಿಮ್ಮ ಮನೆಯಲ್ಲಿ ಮೆಟ್ಟಲುಗಳಂತಹ ಸ್ಥಳಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಿರಿ. ನಿಮಗೆ ವಾಹನವಿರುವಲ್ಲಿ, ಅದು ಚಲಾಯಿಸಲು ಸುರಕ್ಷಿತವಾದ ಸ್ಥಿತಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಮನೆಯಾಗಲಿ ವಾಹನವಾಗಲಿ ನಿಮಗೆ ಅಥವಾ ಇತರರಿಗೆ ಅಪಾಯಕಾರಿಯಾಗಿರುವಂತೆ ಬಿಡಬೇಡಿರಿ.

9. ನಾವು ಜೀವಕ್ಕೆ ಗೌರವವನ್ನು ತೋರಿಸುವಲ್ಲಿ ಪ್ರಾಣಿಗಳನ್ನು ಹೇಗೆ ನೋಡಿಕೊಳ್ಳುವೆವು?

9 ಆದರೆ ಒಂದು ಪ್ರಾಣಿಯ ಜೀವದ ಕುರಿತೇನು? ಅದು ಸಹ ಸೃಷ್ಟಿಕರ್ತನಿಗೆ ಪವಿತ್ರವಾಗಿದೆ. ಆಹಾರ ಮತ್ತು ಉಡುಪುಗಳಿಗಾಗಿ ಅಥವಾ ಜನರನ್ನು ಅಪಾಯದಿಂದ ರಕ್ಷಿಸಲಿಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದನ್ನು ದೇವರು ಅನುಮತಿಸುತ್ತಾನೆ. (ಆದಿಕಾಂಡ 3:21; 9:3; ವಿಮೋಚನಕಾಂಡ 21:28) ಆದರೆ ಪ್ರಾಣಿಗಳಿಗೆ ಕ್ರೌರ್ಯವನ್ನು ತೋರಿಸುವುದು ಇಲ್ಲವೆ ಕೇವಲ ಕ್ರೀಡೆಗಾಗಿ ಅವುಗಳನ್ನು ಹತಿಸುವುದು ತಪ್ಪಾಗಿದೆ ಮತ್ತು ಇದು ಜೀವದ ಪಾವಿತ್ರ್ಯಕ್ಕೆ ಘೋರ ತಾತ್ಸಾರವನ್ನು ತೋರಿಸುತ್ತದೆ.—ಜ್ಞಾನೋಕ್ತಿ 12:10.

ರಕ್ತಕ್ಕೆ ಗೌರವವನ್ನು ತೋರಿಸುವುದು

10. ಜೀವ ಮತ್ತು ರಕ್ತದ ನಡುವೆ ಸಂಬಂಧವಿದೆಯೆಂದು ದೇವರು ಹೇಗೆ ತೋರಿಸಿದ್ದಾನೆ?

10 ಕಾಯಿನನು ತನ್ನ ತಮ್ಮನಾದ ಹೇಬೆಲನನ್ನು ಕೊಂದಾಗ, ಯೆಹೋವನು ಅವನಿಗೆ, “ನಿನ್ನ ತಮ್ಮನ ರಕ್ತವು ಭೂಮಿಯ ಕಡೆಯಿಂದ ನನ್ನನ್ನು ಕೂಗುತ್ತದೆ” ಎಂದು ಹೇಳಿದನು. (ಆದಿಕಾಂಡ 4:10) ದೇವರು ಹೇಬೆಲನ ರಕ್ತದ ಕುರಿತು ಹೇಳಿದಾಗ ಆತನು ಹೇಬೆಲನ ಜೀವದ ಕುರಿತಾಗಿ ಮಾತಾಡುತ್ತಿದ್ದನು. ಕಾಯಿನನು ಹೇಬೆಲನ ಜೀವತೆಗೆದಿದ್ದರಿಂದ ಈಗ ಅವನಿಗೆ ಶಿಕ್ಷೆ ವಿಧಿಸಬೇಕಾಗಿತ್ತು. ಅದು ಹೇಬೆಲನ ರಕ್ತ ಇಲ್ಲವೆ ಜೀವವು ನ್ಯಾಯಕ್ಕಾಗಿ ಯೆಹೋವನ ಬಳಿ ಕೂಗುತ್ತಿತ್ತೊ ಎಂಬಂತಿತ್ತು. ಜೀವ ಮತ್ತು ರಕ್ತಗಳ ಮಧ್ಯೆ ಇದ್ದ ಸಂಬಂಧವು ಪುನಃ ನೋಹನ ದಿನಗಳ ಜಲಪ್ರಳಯದ ಬಳಿಕ ತೋರಿಸಲ್ಪಟ್ಟಿತು. ಜಲಪ್ರಳಯಕ್ಕೆ ಮೊದಲು ಮನುಷ್ಯರು ಹಣ್ಣು, ತರಕಾರಿ, ಧಾನ್ಯ ಮತ್ತು ಕರಟಕಾಯಿಗಳನ್ನು ಮಾತ್ರ ತಿನ್ನುತ್ತಿದ್ದರು. ಆದರೆ ಜಲಪ್ರಳಯಾನಂತರ, ಯೆಹೋವನು ನೋಹನಿಗೆ ಮತ್ತು ಅವನ ಪುತ್ರರಿಗೆ ಹೇಳಿದ್ದು: “ಭೂಮಿಯ ಮೇಲೆ ತಿರುಗುವ ಎಲ್ಲಾ ಜೀವಜಂತುಗಳೂ ನಿಮಗೆ ಆಹಾರವಾಗಿರುವವು. ನಾನು ನಿಮ್ಮ ಆಹಾರಕ್ಕೆ ಪೈರುಗಳನ್ನು ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ.” ಆದರೆ ದೇವರು ಈ ನಿರ್ಬಂಧವನ್ನೂ ಹಾಕಿದನು: “ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಬಾರದು; ರಕ್ತವು ಜೀವವಷ್ಟೆ.” (ಆದಿಕಾಂಡ 1:29; 9:3, 4) ಒಂದು ಜೀವಿಯ ಜೀವ ಮತ್ತು ರಕ್ತದ ನಡುವೆ ತುಂಬ ಹತ್ತಿರದ ಸಂಬಂಧವಿರುವಂತೆ ಯೆಹೋವನು ವೀಕ್ಷಿಸುತ್ತಾನೆಂಬುದು ಸುವ್ಯಕ್ತ.

11. ನೋಹನ ದಿನಗಳಿಂದಲೂ, ರಕ್ತದ ಯಾವ ಉಪಯೋಗವನ್ನು ದೇವರು ನಿಷೇಧಿಸಿದ್ದಾನೆ?

11 ರಕ್ತವನ್ನು ಸೇವಿಸದಿರುವ ಮೂಲಕ ನಾವು ಅದಕ್ಕೆ ಗೌರವವನ್ನು ತೋರಿಸುತ್ತೇವೆ. ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ ಯೆಹೋವನು ಆಜ್ಞಾಪಿಸಿದ್ದು: ‘ಯಾವನಾದರೂ ಬೇಟೆಯಾಡಿ ತಿನ್ನತಕ್ಕ ಮೃಗವನ್ನು ಇಲ್ಲವೆ ಪಕ್ಷಿಯನ್ನು ಹಿಡಿದರೆ ಅವನು ಅದರ ರಕ್ತವನ್ನು ಸುರಿಸಿ ಮಣ್ಣಿನಿಂದ ಮುಚ್ಚಿಬಿಡಬೇಕು. ನಾನು ಇಸ್ರಾಯೇಲ್ಯರಿಗೆ, ನೀವು ಯಾವ ವಿಧವಾದ ಪ್ರಾಣಿಯ ರಕ್ತವನ್ನೂ ಉಣ್ಣಬಾರದು ಎಂದು ಹೇಳಿದ್ದೇನೆ.’ (ಯಾಜಕಕಾಂಡ 17:13, 14) ಹೀಗೆ, ಸುಮಾರು 800 ವರುಷಗಳಿಗೆ ಮೊದಲು ಪ್ರಥಮವಾಗಿ ನೋಹನಿಗೆ ಕೊಡಲ್ಪಟ್ಟ ದೇವರಾಜ್ಞೆಯು ಇನ್ನೂ ಜಾರಿಯಲ್ಲಿತ್ತು. ಯೆಹೋವನ ನೋಟವು ಸ್ಪಷ್ಟವಾಗಿತ್ತು. ಅದೇನೆಂದರೆ ತನ್ನ ಸೇವಕರು ಪ್ರಾಣಿಗಳ ಮಾಂಸವನ್ನು ತಿನ್ನಸಾಧ್ಯವಿತ್ತಾದರೂ ರಕ್ತವನ್ನು ಸೇವಿಸಬಾರದಾಗಿತ್ತು. ಅವರು ರಕ್ತವನ್ನು ನೆಲದ ಮೇಲೆ ಹೊಯ್ಯಬೇಕಾಗಿತ್ತು, ಅಂದರೆ ಆ ಜೀವಿಯ ಜೀವವನ್ನು ದೇವರಿಗೆ ಹಿಂದಿರುಗಿಸಬೇಕಾಗಿತ್ತು.

12. ರಕ್ತದ ಕುರಿತು ಈಗಲೂ ಅನ್ವಯವಾಗುವ ಯಾವ ಆಜ್ಞೆಯನ್ನು ಒಂದನೆಯ ಶತಮಾನದಲ್ಲಿ ಪವಿತ್ರಾತ್ಮದ ಮೂಲಕ ಕೊಡಲಾಯಿತು?

12 ತದ್ರೀತಿಯ ಆಜ್ಞೆಯು ಕ್ರೈಸ್ತರಿಗೂ ಇದೆ. ಒಂದನೆಯ ಶತಮಾನದಲ್ಲಿ, ಯೇಸುವಿನ ಹಿಂಬಾಲಕರ ಮಧ್ಯೆ ಮುಂದಾಳುತ್ವ ವಹಿಸುತ್ತಿದ್ದ ಅಪೊಸ್ತಲರು ಮತ್ತು ಇತರ ಪುರುಷರು ಕ್ರೈಸ್ತ ಸಭೆಯಲ್ಲಿರುವ ಎಲ್ಲರೂ ಯಾವ ಆಜ್ಞೆಗಳಿಗೆ ವಿಧೇಯರಾಗಬೇಕು ಎಂಬುದನ್ನು ನಿರ್ಣಯಿಸಲಿಕ್ಕಾಗಿ ಕೂಡಿಬಂದರು. ಅವರು ಈ ತೀರ್ಮಾನಕ್ಕೆ ಬಂದರು: “ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆಹಿಸುಕಿ ಕೊಂದದ್ದನ್ನೂ [ಮಾಂಸದಲ್ಲಿ ರಕ್ತವಿರುವಂತೆ ಬಿಡುವುದು] ಹಾದರವನ್ನೂ ವಿಸರ್ಜಿಸುವದು ಅವಶ್ಯವಾಗಿದೆ. ಇದಕ್ಕೆ ಹೆಚ್ಚಿನ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಪವಿತ್ರಾತ್ಮನಿಗೂ ನಮಗೂ ವಿಹಿತವಾಗಿ ತೋರಿತು.” (ಅ. ಕೃತ್ಯಗಳು 15:28, 29; 21:25) ಆದುದರಿಂದ ನಾವು ‘ರಕ್ತವನ್ನು ವಿಸರ್ಜಿಸುತ್ತ’ ಮುಂದುವರಿಯತಕ್ಕದ್ದು. ನಾವು ಹೀಗೆ ಮಾಡುವುದು ದೇವರ ದೃಷ್ಟಿಯಲ್ಲಿ, ವಿಗ್ರಹಾರಾಧನೆ ಮತ್ತು ಲೈಂಗಿಕ ಅನೈತಿಕತೆಯಿಂದ ದೂರವಿರುವಷ್ಟೇ ಪ್ರಾಮುಖ್ಯವಾಗಿದೆ.

ಮದ್ಯಪಾನವನ್ನು ವಿಸರ್ಜಿಸಿರಿ ಎಂದು ನಿಮ್ಮ ಡಾಕ್ಟರ್‌ ಹೇಳುವಲ್ಲಿ, ಅದನ್ನು ಇಂಜೆಕ್ಷನ್‌ ಮೂಲಕ ನಿಮ್ಮ ರಕ್ತನಾಳಗಳೊಳಗೆ ಸೇರಿಸುವಿರೊ?

13. ರಕ್ತವನ್ನು ವಿಸರ್ಜಿಸುವುದರ ಕುರಿತ ಆಜ್ಞೆಯಲ್ಲಿ ರಕ್ತಪೂರಣಗಳು ಸಹ ಏಕೆ ಸೇರಿವೆ ಎಂಬುದಕ್ಕೆ ದೃಷ್ಟಾಂತ ಕೊಡಿರಿ.

13 ರಕ್ತವನ್ನು ವಿಸರ್ಜಿಸಬೇಕೆಂಬ ಆಜ್ಞೆಯಲ್ಲಿ ರಕ್ತಪೂರಣಗಳು ಸಹ ಸೇರಿವೆಯೆ? ಹೌದು. ದೃಷ್ಟಾಂತಕ್ಕೆ: ನೀವು ಮದ್ಯಪಾನೀಯಗಳಿಂದ ದೂರವಿರುವಂತೆ ಒಬ್ಬ ಡಾಕ್ಟರ್‌ ಹೇಳುತ್ತಾರೆಂದು ಭಾವಿಸಿ. ಅದರ ಅರ್ಥವು ನೀವು ಮದ್ಯಪಾನ ಮಾಡಬಾರದು ಆದರೆ ಅದನ್ನು ಇಂಜೆಕ್ಷನ್‌ ಮೂಲಕ ರಕ್ತನಾಳದೊಳಕ್ಕೆ ಸೇರಿಸಬಹುದೆಂದಾಗಿದೆಯೊ? ನಿಶ್ಚಯವಾಗಿ ಇಲ್ಲ! ತದ್ರೀತಿ, ರಕ್ತವನ್ನು ವಿಸರ್ಜಿಸುವುದೆಂದರೆ ಅದನ್ನು ಯಾವ ವಿಧದಲ್ಲಿಯೂ ನಮ್ಮ ದೇಹದೊಳಕ್ಕೆ ಸೇರಿಸಬಾರದೆಂದರ್ಥ. ಹೀಗೆ ರಕ್ತವನ್ನು ವಿಸರ್ಜಿಸುವುದರ ಕುರಿತಾದ ಆಜ್ಞೆಯ ಅರ್ಥವು ಯಾವನೂ ನಮ್ಮ ರಕ್ತನಾಳಗಳೊಳಗೆ ರಕ್ತಪೂರಣವನ್ನು ಮಾಡುವಂತೆ ನಾವು ಅನುಮತಿಸೆವು ಎಂದಾಗಿದೆ.

14, 15. ಒಬ್ಬ ಕ್ರೈಸ್ತನಿಗೆ ರಕ್ತಪೂರಣ ಕೊಡಲೇಬೇಕೆಂದು ಡಾಕ್ಟರರು ಹೇಳುವಲ್ಲಿ ಅವನು ಹೇಗೆ ಪ್ರತಿಕ್ರಿಯೆ ತೋರಿಸುವನು, ಮತ್ತು ಏಕೆ?

14 ಒಬ್ಬ ಕ್ರೈಸ್ತನಿಗೆ ಗಂಭೀರವಾದ ಗಾಯವಾಗಿರುವಲ್ಲಿ ಅಥವಾ ದೊಡ್ಡ ಶಸ್ತ್ರಚಿಕಿತ್ಸೆಯ ಅಗತ್ಯವಿರುವಲ್ಲಿ ಆಗೇನು? ಅವನಿಗೆ ರಕ್ತಪೂರಣ ಕೊಡಿಸಲೇಬೇಕು, ಇಲ್ಲದಿದ್ದಲ್ಲಿ ಅವನು ಸಾಯುವನು ಎಂದು ಡಾಕ್ಟರರು ಹೇಳುತ್ತಾರೆಂದು ನೆನಸೋಣ. ಆ ಕ್ರೈಸ್ತನು ಸಾಯಬಯಸುವುದಿಲ್ಲವೆಂಬುದು ಖಂಡಿತ. ದೇವರು ಕೊಟ್ಟಿರುವ ಜೀವವೆಂಬ ಅಮೂಲ್ಯ ವರದಾನವನ್ನು ಕಾಪಾಡುವ ಪ್ರಯತ್ನದಲ್ಲಿ, ಅವನು ರಕ್ತದ ಅಪಪ್ರಯೋಗವು ಸೇರಿರದ ಅನ್ಯರೀತಿಯ ಬದಲಿ ಚಿಕಿತ್ಸೆಗಳನ್ನು ಪಡೆಯುವನು. ಈ ಕಾರಣದಿಂದ, ಅವನು ಲಭ್ಯವಿರುವ ಈ ರೀತಿಯ ವೈದ್ಯಕೀಯ ಚಿಕಿತ್ಸೆಗಾಗಿ ಪ್ರಯತ್ನಿಸುತ್ತಾ, ರಕ್ತಕ್ಕೆ ಬದಲಾಗಿ ವಿವಿಧ ಬದಲಿ ಚಿಕಿತ್ಸೆಗಳನ್ನು ಸ್ವೀಕರಿಸುವನು.

15 ಈ ವ್ಯವಸ್ಥೆಯಲ್ಲಿ ಕೇವಲ ತುಸು ಹೆಚ್ಚುಕಾಲ ಬದುಕಿ ಉಳಿಯಲಿಕ್ಕಾಗಿ ಒಬ್ಬ ಕ್ರೈಸ್ತನು ದೇವರ ನಿಯಮವನ್ನು ಉಲ್ಲಂಘಿಸುವನೊ? ಯೇಸು ಹೇಳಿದ್ದು: “ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಕಂಡುಕೊಳ್ಳುವನು.” (ಮತ್ತಾಯ 16:25) ನಾವು ಸಾಯಬಯಸುವುದಿಲ್ಲ. ಆದರೆ ನಮ್ಮ ಸದ್ಯದ ಜೀವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತ ನಾವು ದೇವರ ನಿಯಮವನ್ನು ಮುರಿಯುವಲ್ಲಿ, ನಿತ್ಯಜೀವವನ್ನು ಕಳೆದುಕೊಳ್ಳುವ ಅಪಾಯದಲ್ಲಿರುವೆವು. ಆದುದರಿಂದ ನಾವು ಯಾವುದೇ ಕಾರಣದಿಂದ ಸಾಯಲಿ, ನಮ್ಮ ಜೀವದಾತನು ಪುನರುತ್ಥಾನದ ಸಮಯದಲ್ಲಿ ನಮ್ಮನ್ನು ನೆನಸಿಕೊಂಡು ಅಮೂಲ್ಯವಾದ ಜೀವವೆಂಬ ವರದಾನವನ್ನು ಪುನಃ ಕೊಡುವನೆಂಬ ಪೂರ್ಣ ಭರವಸೆಯೊಂದಿಗೆ, ದೇವರ ನಿಯಮದ ಯುಕ್ತತೆಯ ಮೇಲೆ ನಂಬಿಕೆಯನ್ನಿಡುವುದು ವಿವೇಕಪ್ರದ.—ಯೋಹಾನ 5:28, 29; ಇಬ್ರಿಯ 11:6.

16. ರಕ್ತದ ಸಂಬಂಧದಲ್ಲಿ ದೇವರ ಸೇವಕರು ಯಾವ ದೃಢಸಂಕಲ್ಪವನ್ನು ಮಾಡಿದ್ದಾರೆ?

16 ಇಂದು ದೇವರ ನಂಬಿಗಸ್ತ ಸೇವಕರು ರಕ್ತದ ವಿಷಯದಲ್ಲಿ ಆತನ ನಿರ್ದೇಶನವನ್ನು ಪಾಲಿಸಲು ದೃಢಸಂಕಲ್ಪವನ್ನು ಮಾಡಿರುತ್ತಾರೆ. ಅವರು ರಕ್ತವನ್ನು ಯಾವುದೇ ರೂಪದಲ್ಲಿ ಸೇವಿಸುವುದಿಲ್ಲ, ಮತ್ತು ವೈದ್ಯಕೀಯ ಕಾರಣಗಳಿಗಾಗಿ ಸಹ ರಕ್ತವನ್ನು ತೆಗೆದುಕೊಳ್ಳುವುದಿಲ್ಲ. * ರಕ್ತದ ಸೃಷ್ಟಿಕರ್ತನು ತಮಗೆ ಯಾವುದು ಅತ್ಯುತ್ತಮವಾಗಿದೆ ಎಂಬುದನ್ನು ಬಲ್ಲನೆಂಬ ಖಾತ್ರಿ ಅವರಿಗಿದೆ. ಹಾಗೆಂದು ನೀವೂ ನಂಬುತ್ತೀರೊ?

ರಕ್ತದ ಏಕಮಾತ್ರ ಸರಿಯಾದ ಉಪಯೋಗ

17. ಪುರಾತನದ ಇಸ್ರಾಯೇಲಿನಲ್ಲಿ ಯೆಹೋವನಿಗೆ ಸ್ವೀಕಾರಯೋಗ್ಯವಾದ ರಕ್ತದ ಏಕಮಾತ್ರ ಉಪಯೋಗವು ಯಾವುದಾಗಿತ್ತು?

17 ಮೋಶೆಯ ಧರ್ಮಶಾಸ್ತ್ರವು ರಕ್ತದ ಒಂದೇ ಸರಿಯಾದ ಉಪಯೋಗವನ್ನು ಒತ್ತಿಹೇಳಿತು. ಪುರಾತನದ ಇಸ್ರಾಯೇಲ್ಯರಿಂದ ಕೇಳಿಕೊಳ್ಳಲ್ಪಟ್ಟ ಆರಾಧನೆಯ ಕುರಿತಾಗಿ ಯೆಹೋವನು ಆಜ್ಞಾಪಿಸಿದ್ದು: “ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮಗೋಸ್ಕರ ದೋಷಪರಿಹಾರಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷಪರಿಹಾರವಾಗುತ್ತದಷ್ಟೆ.” (ಯಾಜಕಕಾಂಡ 17:11) ಇಸ್ರಾಯೇಲ್ಯರು ಪಾಪಮಾಡಿದಾಗ, ಒಂದು ಪ್ರಾಣಿಯನ್ನು ಅರ್ಪಿಸುವ ಮೂಲಕ ಮತ್ತು ಅದರ ರಕ್ತದಲ್ಲಿ ಸ್ವಲ್ಪವನ್ನು ದೇವದರ್ಶನ ಗುಡಾರದ ಯಜ್ಞವೇದಿ ಅಥವಾ ತದನಂತರ ಕಟ್ಟಲ್ಪಟ್ಟಿದ್ದ ದೇವಾಲಯದ ಯಜ್ಞವೇದಿಯ ಮೇಲೆ ಹಾಕುವ ಮೂಲಕ ಕ್ಷಮಾಪಣೆಯನ್ನು ಪಡೆಯಸಾಧ್ಯವಿತ್ತು. ರಕ್ತದ ಏಕಮಾತ್ರ ಸರಿಯಾದ ಉಪಯೋಗವು ಇಂತಹ ಯಜ್ಞಗಳಲ್ಲಾಗಿತ್ತು.

18. ಯೇಸುವಿನ ರಕ್ತವು ಸುರಿಸಲ್ಪಟ್ಟದ್ದರಿಂದ ನಾವು ಯಾವ ಪ್ರಯೋಜನಗಳನ್ನು ಮತ್ತು ಆಶೀರ್ವಾದಗಳನ್ನು ಪಡೆಯಬಲ್ಲೆವು?

18 ಸತ್ಯ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಲ್ಲದ ಕಾರಣ ಪ್ರಾಣಿಯಜ್ಞಗಳನ್ನು ಅರ್ಪಿಸುವುದಿಲ್ಲ ಮತ್ತು ಯಜ್ಞವೇದಿಯ ಮೇಲೆ ಪ್ರಾಣಿಗಳ ರಕ್ತವನ್ನು ಹಾಕುವುದಿಲ್ಲ. (ಇಬ್ರಿಯ 10:1) ಆದರೂ, ಪುರಾತನ ಕಾಲದ ಇಸ್ರಾಯೇಲಿನ ದಿನಗಳಲ್ಲಿ ಯಜ್ಞವೇದಿಯ ಮೇಲೆ ರಕ್ತದ ಉಪಯೋಗವು, ದೇವಪುತ್ರನಾದ ಯೇಸು ಕ್ರಿಸ್ತನ ಅಮೂಲ್ಯವಾದ ಯಜ್ಞವನ್ನು ಮುನ್ಸೂಚಿಸಿತು. ಈ ಪುಸ್ತಕದ 5ನೆಯ ಅಧ್ಯಾಯದಲ್ಲಿ ನಾವು ಕಲಿತಂತೆ, ತನ್ನ ರಕ್ತವು ಯಜ್ಞವಾಗಿ ಸುರಿಸಲ್ಪಡುವಂತೆ ಬಿಡುವ ಮೂಲಕ ಯೇಸು ನಮಗಾಗಿ ತನ್ನ ಮಾನವ ಜೀವವನ್ನು ಕೊಟ್ಟನು. ಬಳಿಕ ಅವನು ಸ್ವರ್ಗಕ್ಕೇರಿ ಹೋಗಿ, ತನ್ನ ಸುರಿಸಲ್ಪಟ್ಟ ರಕ್ತದ ಮೌಲ್ಯವನ್ನು ಎಲ್ಲ ಸಮಯಕ್ಕಾಗಿ ಒಂದೇ ಬಾರಿ ಅರ್ಪಿಸಿದನು. (ಇಬ್ರಿಯ 9:11, 12) ಅದು ನಮ್ಮ ಪಾಪಗಳ ಕ್ಷಮಾಪಣೆಗೆ ಸಾಧಾರವನ್ನು ಕೊಟ್ಟು, ನಾವು ನಿತ್ಯಜೀವವನ್ನು ಪಡೆಯುವಂತೆ ದಾರಿಯನ್ನು ತೆರೆಯಿತು. (ಮತ್ತಾಯ 20:28; ಯೋಹಾನ 3:16) ರಕ್ತದ ಆ ಉಪಯೋಗವು ಎಷ್ಟು ಪ್ರಾಮುಖ್ಯವಾಗಿ ಪರಿಣಮಿಸಿದೆ! (1 ಪೇತ್ರ 1:18, 19) ಯೇಸುವಿನ ಸುರಿಸಲ್ಪಟ್ಟ ರಕ್ತದ ಮೌಲ್ಯದಲ್ಲಿನ ನಂಬಿಕೆಯಿಂದ ಮಾತ್ರ ನಾವು ರಕ್ಷಣೆಯನ್ನು ಪಡೆಯಬಲ್ಲೆವು.

ಜೀವಕ್ಕೆ ಮತ್ತು ರಕ್ತಕ್ಕೆ ನೀವು ಹೇಗೆ ಆದರಾಭಿಮಾನವನ್ನು ತೋರಿಸಬಲ್ಲಿರಿ?

19. ‘ಎಲ್ಲಾ ಮನುಷ್ಯರ ರಕ್ತದ ಹೊಣೆಯಿಂದ ವಿಮುಕ್ತರಾಗಲು’ ನಾವೇನು ಮಾಡತಕ್ಕದ್ದು?

19 ಜೀವದ ಪ್ರೀತಿಪೂರ್ವಕವಾದ ಈ ವರದಾನಕ್ಕಾಗಿ ನಾವು ಯೆಹೋವ ದೇವರಿಗೆ ಎಷ್ಟು ಆಭಾರಿಗಳಾಗಿರಬಲ್ಲೆವು! ಮತ್ತು ಅದು ನಮ್ಮನ್ನು, ಯೇಸುವಿನ ಯಜ್ಞದಲ್ಲಿನ ನಂಬಿಕೆಯ ಆಧಾರದ ಮೇರೆಗೆ ನಿತ್ಯಜೀವವನ್ನು ಪಡೆಯುವ ಅವಕಾಶದ ಕುರಿತು ಇತರರಿಗೆ ಹೇಳುವಂತೆ ಪ್ರಚೋದಿಸಬಾರದೊ? ಜೊತೆಮಾನವರ ಜೀವಗಳ ವಿಷಯದಲ್ಲಿ ದೇವರಿಗಿರುವಂಥ ರೀತಿಯ ಚಿಂತೆಯು ನಮಗಿರುವಲ್ಲಿ, ನಾವಿದನ್ನು ತವಕದಿಂದ ಮತ್ತು ಹುರುಪಿನಿಂದ ಮಾಡುವಂತೆ ಅದು ನಮ್ಮನ್ನು ಪ್ರಚೋದಿಸುವುದು. (ಯೆಹೆಜ್ಕೇಲ 3:17-21) ನಾವು ಈ ಜವಾಬ್ದಾರಿಯನ್ನು ಶ್ರದ್ಧಾಪೂರ್ವಕವಾಗಿ ನೆರವೇರಿಸುವಲ್ಲಿ ಅಪೊಸ್ತಲ ಪೌಲನು ಹೇಳಿದಂತೆ, “ನಾನು ಎಲ್ಲಾ ಮನುಷ್ಯರ ರಕ್ತದ ಹೊಣೆಯಿಂದ ವಿಮುಕ್ತನಾಗಿದ್ದೇನೆ . . . ಏಕೆಂದರೆ ದೇವರ ಸಂಕಲ್ಪವನ್ನೆಲ್ಲಾ ನಿಮಗೆ ಬೋಧಿಸುವುದರಲ್ಲಿ ನಾನು ಹಿಂಜರಿಯಲಿಲ್ಲ” ಎಂದು ನಾವೂ ಹೇಳಶಕ್ತರಾಗುವೆವು. (ಅ. ಕೃತ್ಯಗಳು 20:26, 27, NIBV) ದೇವರ ಮತ್ತು ಆತನ ಉದ್ದೇಶಗಳ ಕುರಿತು ಜನರಿಗೆ ತಿಳಿಯಪಡಿಸುವುದು, ಜೀವದ ಮತ್ತು ರಕ್ತದ ವಿಷಯದಲ್ಲಿ ನಮಗೆ ಅತ್ಯುನ್ನತವಾದ ಆದರಾಭಿಮಾನವಿದೆ ಎಂದು ತೋರಿಸುವ ಒಂದು ಉತ್ತಮ ಮಾರ್ಗವಾಗಿದೆ.

^ ಪ್ಯಾರ. 16 ರಕ್ತಪೂರಣದ ಬದಲಿ ಚಿಕಿತ್ಸೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟ ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? ಎಂಬ ಬ್ರೋಷರಿನ 13-17ನೇ ಪುಟಗಳನ್ನು ನೋಡಿ.