ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 18

ಯೇಸು ಮಾಡಿದ ಅದ್ಭುತಗಳು

ಯೇಸು ಮಾಡಿದ ಅದ್ಭುತಗಳು

ಯೇಸು ಅನೇಕಾನೇಕ ಅದ್ಭುತಗಳನ್ನು ಮಾಡುತ್ತಾನೆ. ತಾನು ಮುಂದೆ ರಾಜನಾದಾಗ ತನ್ನ ಅಧಿಕಾರವನ್ನು ಯಾವ ರೀತಿಯಲ್ಲಿ ಉಪಯೋಗಿಸುವನೆಂಬುದನ್ನು ಈ ಮೂಲಕ ತೋರಿಸಿಕೊಡುತ್ತಾನೆ

ಮನುಷ್ಯರಿಗೆ ಅಸಾಧ್ಯವಾದ ಅನೇಕ ಮಹತ್ಕಾರ್ಯಗಳನ್ನು ಮಾಡಲು ಯೇಸುವಿಗೆ ದೇವರು ಶಕ್ತಿಯನ್ನು ಕೊಟ್ಟನು. ಯೇಸು ಅನೇಕಾನೇಕ ಅದ್ಭುತಗಳನ್ನು ಜನರ ಕಣ್ಣ ಮುಂದೆಯೇ ಮಾಡಿ ತೋರಿಸಿದನು. ಮನುಷ್ಯರಿಂದ ಎಂದೂ ಜಯಿಸಲಾಗದ ವೈರಿಗಳನ್ನು ಹಾಗೂ ಸಂಪೂರ್ಣವಾಗಿ ಪರಿಹರಿಸಲಾಗದ ಸಮಸ್ಯೆಗಳನ್ನು ತೆಗೆದುಹಾಕಲು ಯೇಸುವಿಗಿರುವ ಸಾಮರ್ಥ್ಯವನ್ನು ಈ ಅದ್ಭುತಗಳು ತೋರಿಸಿದವು. ಕೆಲವು ಉದಾಹರಣೆಗಳನ್ನು ನೋಡಿರಿ.

ಯೇಸು ಹಸಿದವರಿಗೆ ಆಹಾರ ಒದಗಿಸಿದನು. ಎರಡು ಸಂದರ್ಭಗಳಲ್ಲಿ ಯೇಸು ಕೆಲವೇ ರೊಟ್ಟಿ ಮತ್ತು ಮೀನುಗಳಿಂದ ಸಾವಿರಾರು ಜನರಿಗೆ ಊಟವನ್ನು ಕೊಟ್ಟನು. ಹಸಿದಿದ್ದ ಆ ಜನರು ತೃಪ್ತಿಯಾಗುವಷ್ಟು ಊಟ ಮಾಡಿದ ಮೇಲೂ ಆಹಾರವು ಇನ್ನೂ ಉಳಿದಿತ್ತು.

ಯೇಸು ಜನರ ಕಾಯಿಲೆಗಳನ್ನು ಗುಣಪಡಿಸಿದನು. “ಜನರ ಎಲ್ಲ ರೀತಿಯ ರೋಗಗಳನ್ನೂ ದೇಹದೌರ್ಬಲ್ಯಗಳನ್ನೂ” ಯೇಸು ವಾಸಿಮಾಡಿದನು. (ಮತ್ತಾಯ 4:23) ಕುರುಡರನ್ನು, ಕಿವುಡರನ್ನು, ಕುಷ್ಠರೋಗಿಗಳನ್ನು ಮತ್ತು ಮೂರ್ಛೆ ರೋಗವಿದ್ದವರನ್ನು ಯೇಸು ಗುಣಪಡಿಸಿದನು. ಮಾತ್ರವಲ್ಲ, ಕುಂಟರನ್ನೂ, ಕೈಕಾಲಿಲ್ಲದವರನ್ನೂ ಯೇಸು ಸರಿಪಡಿಸಿದನು. ಅವನಿಂದ ಗುಣಪಡಿಸಲಾಗದ ಕಾಯಿಲೆ ಒಂದೂ ಇರಲಿಲ್ಲ.

ಯೇಸು ಭೀಕರ ಬಿರುಗಾಳಿಯನ್ನು ಸುಮ್ಮನಾಗಿಸಿದನು. ಒಮ್ಮೆ ಯೇಸು ಹಾಗೂ ಅವನ ಶಿಷ್ಯರು ಗಲಿಲಾಯ ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದಾಗ ಸಮುದ್ರದಲ್ಲಿ ಭೀಕರ ಬಿರುಗಾಳಿಯೆದ್ದಿತು. ಇದನ್ನು ನೋಡಿದ ಶಿಷ್ಯರು ಭಯದಿಂದ ನಡುಗಿದರು. ಆದರೆ ಯೇಸು ಎದ್ದು ಬಿರುಗಾಳಿಗೆ “ಷ್‌! ಸುಮ್ಮನಿರು!” ಎಂದು ಹೇಳಿದನು. ತಕ್ಷಣ ಬಿರುಗಾಳಿ ನಿಂತು ಸಮುದ್ರ ಶಾಂತವಾಯಿತು. (ಮಾರ್ಕ 4:37-39) ಇನ್ನೊಮ್ಮೆ ಬಿರುಗಾಳಿಯೆದ್ದಾಗ ಭಯಾನಕವಾಗಿ ಉಕ್ಕೇರುತ್ತಿದ್ದ ತೆರೆಗಳ ಮೇಲೆ ಯೇಸು ನಡೆದುಕೊಂಡು ಹೋದನು.—ಮತ್ತಾಯ 14:24-33.

ಯೇಸು ಜನರನ್ನು ದೆವ್ವಗಳ ಕಾಟದಿಂದ ಬಿಡಿಸಿದನು. ದೆವ್ವಗಳು ದೇವರ ಕಡುವೈರಿಗಳಾಗಿದ್ದು, ಮನುಷ್ಯರಿಗಿಂತ ಎಷ್ಟೋ ಹೆಚ್ಚು ಶಕ್ತಿ ಹೊಂದಿವೆ. ಅನೇಕ ಜನರು ಅವುಗಳ ಹಿಡಿತದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿ ಸೋತುಹೋಗಿದ್ದಾರೆ. ಆದರೆ ಯೇಸು ಜನರನ್ನು ಅವುಗಳ ಕಾಟದಿಂದ ಬಿಡಿಸಿದನು. ಮನುಷ್ಯರನ್ನು ಬಿಟ್ಟುಹೋಗುವಂತೆ ಅವನು ಎಷ್ಟೋ ಸಾರಿ ದೆವ್ವಗಳಿಗೆ ಕಟ್ಟಪ್ಪಣೆ ನೀಡಿದನು. ಅವುಗಳಿಗೆ ಅವನು ಕಿಂಚಿತ್ತೂ ಹೆದರಲಿಲ್ಲ. ಬದಲಾಗಿ ದೆವ್ವಗಳೇ ಯೇಸುವಿಗೆ ಹೆದರಿ ಗಡಗಡ ನಡುಗುತ್ತಿದ್ದವು. ಏಕೆಂದರೆ ಯೇಸುವಿಗೆ ದೆವ್ವಗಳ ಮೇಲೆ ಅಧಿಕಾರವಿತ್ತು.

ಯೇಸು ಸತ್ತವರನ್ನು ಬದುಕಿಸಿದನು. ಮರಣವನ್ನು “ಕೊನೆಯ ಶತ್ರು” ಎಂದು ಬೈಬಲ್‌ ಹೇಳಿರುವುದು ಸರಿಯಾಗಿದೆ. ಏಕೆಂದರೆ ಯಾವನೇ ಮನುಷ್ಯನು ಅದರ ಕ್ರೂರ ಬಾಹುವಿನಿಂದ ತಪ್ಪಿಸಿಕೊಳ್ಳಲಾರನು. (1 ಕೊರಿಂಥ 15:26) ಆದರೆ ಯೇಸು ಸತ್ತವರನ್ನು ಪುನರುತ್ಥಾನಗೊಳಿಸಿದನು. ಒಬ್ಬ ವಿಧವೆಯ ಮಗನು ಸತ್ತಾಗ ಅವನನ್ನು ಪುನಃ ಬದುಕಿಸಿದನು. ಅದೇ ರೀತಿ ತಮ್ಮ ಮಗಳ ಮರಣದ ದುಃಖವನ್ನು ತಾಳಲಾರದೆ ಗೋಳಾಡುತ್ತಿದ್ದ ಹೆತ್ತವರಿಗೆ ಅವರ ಮಗಳನ್ನು ಬದುಕಿಸಿ ಕೊಟ್ಟನು. ಇನ್ನೊಂದು ಗಮನಸೆಳೆಯುವ ಘಟನೆಯು ಯೇಸು ತನ್ನ ಆಪ್ತ ಮಿತ್ರನಾಗಿದ್ದ ಲಾಜರನನ್ನು ಜೀವಂತಗೊಳಿಸಿದ್ದಾಗಿದೆ. ಲಾಜರನು ಸತ್ತು ನಾಲ್ಕು ದಿನಗಳಾಗಿದ್ದವು! ಆದರೂ ಯೇಸು ಲಾಜರನನ್ನು ಶೋಕತಪ್ತರಾದ ಅನೇಕ ಜನರ ಮುಂದೆಯೇ ಪುನರುತ್ಥಾನಗೊಳಿಸಿದನು. ಯೇಸುವನ್ನು ವಿರೋಧಿಸುತ್ತಿದ್ದವರು ಸಹ ಅವನು ಮಾಡಿದ ಈ ಅದ್ಭುತವನ್ನು ಒಪ್ಪಿಕೊಂಡರು.—ಯೋಹಾನ 11:38-48; 12:9-11.

ಯೇಸು ಜೀವಂತಗೊಳಿಸಿದ ಜನರೆಲ್ಲರೂ ಶಾಶ್ವತವಾಗಿ ಜೀವಿಸದೆ ಪುನಃ ಸಾವನ್ನಪ್ಪಿದರು. ಹಾಗಾದರೆ ಯೇಸು ಮಾಡಿದ ಎಲ್ಲಾ ಅದ್ಭುತಗಳಿಂದ ಯಾವುದೇ ಪ್ರಯೋಜನವಿಲ್ಲವೋ? ಖಂಡಿತ ಇದೆ. ಏನೆಂದರೆ ಮೆಸ್ಸೀಯನ ರಾಜ್ಯಾಡಳಿತದ ಕುರಿತ ಮೈನವಿರೇಳಿಸುವ ಪ್ರವಾದನೆಗಳು ಖಂಡಿತ ನೆರವೇರುವವು ಎಂಬುದನ್ನು ಈ ಅದ್ಭುತಗಳು ತೋರಿಸಿಕೊಟ್ಟವು. ದೇವರಿಂದ ನೇಮಕಗೊಂಡಿರುವ ಈ ರಾಜನು ಭವಿಷ್ಯತ್ತಿನಲ್ಲಿ ಆಹಾರದ ಅಭಾವ, ಕಾಯಿಲೆ, ಬಿರುಗಾಳಿಯಂಥ ಪ್ರಕೃತಿ ವಿಕೋಪ, ದೆವ್ವಗಳ ಕಾಟ, ಅಷ್ಟೇಕೆ, ಮರಣವನ್ನು ಸಹ ಬೇರು ಸಹಿತ ಕಿತ್ತು ಹಾಕುವನು ಎಂಬ ವಿಷಯದಲ್ಲಿ ಯಾವುದೇ ಸಂದೇಹ ಬೇಡ. ಏಕೆಂದರೆ ಇದನ್ನೆಲ್ಲಾ ಮಾಡಲು ದೇವರು ತನಗೆ ಶಕ್ತಿ ಸಾಮರ್ಥ್ಯಗಳನ್ನು ನೀಡಿದ್ದಾನೆಂದು ಅವನು ಈಗಾಗಲೇ ತೋರಿಸಿಕೊಟ್ಟಿದ್ದಾನೆ.

ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನ ಪುಸ್ತಕಗಳ ಮೇಲೆ ಆಧಾರಿತವಾಗಿದೆ.