ಅಧ್ಯಾಯ 12
ಸುವಾರ್ತೆ ಸಾರುವ ಕೆಲಸವನ್ನು ಹೇಗೆ ಮಾಡುತ್ತೇವೆ?
ಯೇಸು ಸಾವನ್ನಪ್ಪುವ ಕೆಲವು ದಿನಗಳ ಮುಂಚೆ ಒಂದು ಭವಿಷ್ಯ ನುಡಿದನು. “[ದೇವರ ರಾಜ್ಯದ] ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು” ಎಂದು ತಿಳಿಸಿದನು. (ಮತ್ತಾಯ 24:14) ಯೇಸು ಭವಿಷ್ಯನುಡಿದಂತೆ ಇಂದು ಭೂಮಿಯಾದ್ಯಂತ ಇರುವ ಜನರಿಗೆ ಸುವಾರ್ತೆ ಸಾರಲಾಗುತ್ತಿದೆ. ಅಷ್ಟು ವ್ಯಾಪಕವಾಗಿ ಸುವಾರ್ತೆ ಸಾರಲು ಸಾಧ್ಯವಾಗಿರುವುದು ಹೇಗೆ? ಯೇಸು ಇಟ್ಟಿರುವ ನಮೂನೆಯನ್ನು ಅನುಕರಿಸುವುದರಿಂದ.—ಲೂಕ 8:1.
ಮನೆಮನೆಗೆ ಹೋಗಿ ಸುವಾರ್ತೆ ಸಾರುತ್ತೇವೆ. ಮನೆಮನೆಗೆ ಹೋಗಿ ಸುವಾರ್ತೆ ಸಾರುವಂತೆ ಯೇಸು ಶಿಷ್ಯರಿಗೆ ತರಬೇತಿ ನೀಡಿದನು. (ಮತ್ತಾಯ 10:11-13; ಅಪೊಸ್ತಲರ ಕಾರ್ಯಗಳು 5:42; 20:20) ಸುವಾರ್ತೆ ಸಾರಲು ಆ ಶಿಷ್ಯರಿಗೆ ನಿರ್ದಿಷ್ಟ ಪ್ರದೇಶಗಳನ್ನು ನಿಯೋಜಿಸಲಾಗಿತ್ತು. (ಮತ್ತಾಯ 10:5, 6; 2 ಕೊರಿಂಥ 10:13) ತದ್ರೀತಿಯಲ್ಲಿ ಇಂದು ಸಹ ಸುವಾರ್ತೆ ಸಾರುವ ಕೆಲಸವನ್ನು ಕ್ರಮಬದ್ಧವಾಗಿ ಏರ್ಪಡಿಸಲಾಗಿದೆ. ಸುವಾರ್ತೆ ಸಾರುವುದಕ್ಕಾಗಿ ಒಂದೊಂದು ಸಭೆಗೂ ಇಂತಿಷ್ಟು ಪ್ರದೇಶಗಳೆಂದು ನಿಯೋಜಿಸಲಾಗಿದೆ. ಯೇಸು ನೀಡಿದ ಆಜ್ಞೆಯಂತೆ ಜನರಿಗೆ ಕೂಲಂಕಷ ಸಾಕ್ಷಿ ನೀಡಲು ಇದರಿಂದ ಸಾಧ್ಯವಾಗುತ್ತಿದೆ.—ಅಪೊಸ್ತಲರ ಕಾರ್ಯಗಳು 10:42.
ಸುವಾರ್ತೆ ಸಾರಲು ಬೇರೆ ಸಂದರ್ಭಗಳನ್ನೂ ಹುಡುಕುತ್ತೇವೆ. ಯೇಸು ಸಮುದ್ರ ತೀರದಲ್ಲಿ, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸುವಾರ್ತೆ ಸಾರಿದನು. (ಮಾರ್ಕ 4:1; ಯೋಹಾನ 4:5-15) ನಾವು ಸಹ ಆತನ ಮಾದರಿಯನ್ನು ಅನುಸರಿಸುತ್ತಿದ್ದೇವೆ. ಮಾರ್ಕೆಟ್ ಮುಂತಾದ ವಾಣಿಜ್ಯ ಪ್ರದೇಶಗಳಲ್ಲಿ, ಜನನಿಬಿಡ ರಸ್ತೆಗಳಲ್ಲಿ, ಪಾರ್ಕ್ಗಳಲ್ಲಿ, ಟೆಲಿಫೋನ್ ಮುಖಾಂತರ ಹೀಗೆ ಎಲ್ಲಾ ಜನರಿಗೆ ಸುವಾರ್ತೆ ತಿಳಿಸಲು ಪ್ರಯತ್ನಿಸುತ್ತೇವೆ. ನೆರೆಹೊರೆಯವರಿಗೆ, ಸಹಪಾಠಿಗಳಿಗೆ, ಸಹಕಾರ್ಮಿಕರಿಗೆ, ಬಂಧುಮಿತ್ರರಿಗೆ ದೇವರ ರಾಜ್ಯದ ಕುರಿತು ಸುವಾರ್ತೆ ತಿಳಿಸುತ್ತೇವೆ. ನಮ್ಮ ಈ ಎಲ್ಲಾ ಪ್ರಯತ್ನಗಳಿಂದ ಭೂವ್ಯಾಪಕವಾಗಿ ಲಕ್ಷಗಟ್ಟಲೆ ಜನರಿಗೆ “ರಕ್ಷಣೆಯ” ಸಂದೇಶ ತಲುಪುತ್ತಿದೆ.—ಕೀರ್ತನೆ 96:2.
ಮಾನವರಿಗೆ ಭವ್ಯ ಭವಿಷ್ಯ ಕಲ್ಪಿಸಿಕೊಡುವ ದೇವರ ರಾಜ್ಯದ ಕುರಿತ ಶುಭ ವಾರ್ತೆ ಇಂದು ಎಲ್ಲರಿಗೂ ತಲುಪುವುದು ಜರೂರಿ. ಜೀವರಕ್ಷಕ ಸಂದೇಶವನ್ನು ಬೇರೆಯವರಿಗೆ ತಿಳಿಸುವುದು ನಮ್ಮ ಹೊಣೆ. ನೀವು ಯಾರಿಗೆ ತಿಳಿಸಲು ಕಾತುರರಾಗಿದ್ದೀರಿ?
-
ಇಂದು ಮಾನವರಿಗೆ ಯಾವುದರ ಕುರಿತ “ಸುವಾರ್ತೆ” ಜರೂರಿಯಾಗಿದೆ?
-
ಯೇಸುವಿನ ಮಾದರಿಯನ್ನು ಇಂದು ಯೆಹೋವನ ಸಾಕ್ಷಿಗಳು ಹೇಗೆ ಅನುಕರಿಸುತ್ತಿದ್ದಾರೆ?