ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಮೂರು

“ನಂಬಿಕೆಯಿರುವ ಎಲ್ಲರಿಗೆ . . . ತಂದೆ”

“ನಂಬಿಕೆಯಿರುವ ಎಲ್ಲರಿಗೆ . . . ತಂದೆ”

1, 2. (1) ನೋಹನ ಸಮಯದಿಂದ ಅಬ್ರಾಮನ ಸಮಯದಷ್ಟಕ್ಕೆ ಲೋಕ ಹೇಗೆ ಬದಲಾಗಿತ್ತು? (2) ಅದರ ಬಗ್ಗೆ ಅಬ್ರಾಮನಿಗೆ ಹೇಗನಿಸಿತು?

ಅಬ್ರಾಮ ತಲೆಯೆತ್ತಿ ನೋಡಿದ. * ತನ್ನೂರಲ್ಲಿ ಎತ್ತರವಾದ ಹಂತಗೋಪುರ ದೇವಾಲಯದಿಂದ ಮೇಲೇರುತ್ತಿದ್ದ ದಟ್ಟ ಹೊಗೆಯತ್ತ ಅವನ ದೃಷ್ಟಿ ಹೋಯಿತು. ಚಂದ್ರ ದೇವನ ಅರ್ಚಕರು ಗೋಪುರದ ಮೇಲೆ ಯಜ್ಞಹೋಮಗಳನ್ನು ಅರ್ಪಿಸುತ್ತಿದ್ದರು. ಅಲ್ಲಿನ ಗೌಜುಗದ್ದಲ ದೂರದ ವರೆಗೂ ಕೇಳಿಬರುತ್ತಿತ್ತು. ಇದನ್ನೆಲ್ಲ ನೋಡಿ ಅಬ್ರಾಮ ತಲೆ ಕೆಳಗೆ ಹಾಕಿ ಬೇಸರದಿಂದ ಗೋಣು ಅಲ್ಲಾಡಿಸಿದ್ದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಅವನ ಹುಬ್ಬುಗಳು ಬೆಸೆದುಕೊಂಡು ಹಣೆಯಲ್ಲಿ ನೆರಿಗೆಗಳು ಮೂಡಿದವು. ಬೀದಿಗಳಲ್ಲಿದ್ದ ಜನಸಂದಣಿಯ ಮಧ್ಯದಿಂದ ತನ್ನ ಮನೆಯತ್ತ ಹೆಜ್ಜೆಹಾಕುತ್ತಿದ್ದಂತೆ ದಾರಿಯುದ್ದಕ್ಕೂ ಅವನು ನೋಹನ ಸಮಯದಿಂದ ತನ್ನ ದಿನದ ವರೆಗೆ ಲೋಕ ಎಷ್ಟು ಬದಲಾಗಿದೆಯೆಂದು ಯೋಚಿಸಿದ್ದಿರಬಹುದು. ವಿಗ್ರಹಾರಾಧನೆ ತನ್ನೂರಿನಲ್ಲಿ ಅಂದರೆ ಊರ್‌ ಪಟ್ಟಣದಲ್ಲಿ ಮಾತ್ರವಲ್ಲ ಲೋಕದಲ್ಲೆಡೆ ಹಬ್ಬಿಕೊಂಡಿರುವುದರ ಬಗ್ಗೆ ಅವನು ಚಿಂತಿಸಿರಬಹುದು.

2 ಅಬ್ರಾಮ ಹುಟ್ಟಿದ್ದು ನೋಹ ಸತ್ತು ಎರಡು ವರ್ಷಗಳಾದ ನಂತರ. ಜಲಪ್ರಳಯದ ನಂತರ ನೋಹ ತನ್ನ ಕುಟುಂಬದೊಂದಿಗೆ ನಾವೆಯಿಂದ ಹೊರಬಂದು ಯೆಹೋವ ದೇವರಿಗೆ ಯಜ್ಞ ಅರ್ಪಿಸಿದ್ದ. ಪ್ರತಿಯಾಗಿ ಯೆಹೋವನು ಬಾನಲ್ಲಿ ಮುಗಿಲುಬಿಲ್ಲನ್ನಿಟ್ಟಿದ್ದ. (ಆದಿ. 8:20; 9:12-14) ಆ ಸಮಯದಲ್ಲಿ ಸತ್ಯಾರಾಧನೆಯೊಂದೇ ಭೂಮಿಯ ಮೇಲಿತ್ತು. ಆದರೆ ನೋಹನ ಹತ್ತನೆಯ ತಲೆಮಾರಿನವರು ಭೂಲೋಕದಲ್ಲೆಲ್ಲ ಹಬ್ಬುತ್ತಿದ್ದ ಈ ಸಮಯದಷ್ಟಕ್ಕೆ ಅಂದರೆ ಅಬ್ರಾಮನ ಕಾಲಕ್ಕೆ ಶುದ್ಧಾರಾಧನೆ ಮೂಲೆಗುಂಪಾಗುತ್ತಾ ಇತ್ತು. ಎಲ್ಲೆಡೆ ಜನರು ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದರು. ಅಬ್ರಾಮನ ತಂದೆ ತೆರಹ ಕೂಡ ವಿಗ್ರಹಾರಾಧಕನಾಗಿದ್ದ. ಪ್ರಾಯಶಃ ಅವನು ವಿಗ್ರಹಗಳನ್ನು ತಯಾರಿಸುತ್ತಿದ್ದ.—ಯೆಹೋ. 24:2.

ನಂಬಿಕೆಯ ವಿಷಯದಲ್ಲಿ ಅಬ್ರಾಮ ಗಮನಾರ್ಹ ಮಾದರಿಯಾದದ್ದು ಹೇಗೆ?

3. (1) ಸಮಯ ಸಂದಂತೆ ಅಬ್ರಾಮನ ಜೀವನದಲ್ಲಿ ಯಾವ ಗುಣ ಎದ್ದುಕಾಣುತ್ತಿತ್ತು? (2) ಅದರಿಂದ ನಾವೇನು ಕಲಿಯುತ್ತೇವೆ?

3 ಅಬ್ರಾಮನಾದರೋ ಭಿನ್ನನಾಗಿದ್ದ. ಸತ್ಯ ದೇವರ ಆರಾಧಕನಾಗಿದ್ದ. ಸಮಯ ಸಂದಂತೆ ದೇವರಲ್ಲಿ ಅವನಿಗಿದ್ದ ನಂಬಿಕೆ ಕತ್ತಲಲ್ಲಿ ಹೊಳೆಯುವ ವಜ್ರದಂತೆ ಎದ್ದುಕಾಣುತ್ತಿತ್ತು. ಮುಂದೆ ಅಪೊಸ್ತಲ ಪೌಲ ಅಬ್ರಾಮನನ್ನು “ನಂಬಿಕೆಯಿರುವ ಎಲ್ಲರಿಗೆ . . . ತಂದೆ” ಎಂದು ಕರೆಯುವಂತೆ ಪ್ರೇರಿಸಲ್ಪಟ್ಟ. (ರೋಮನ್ನರಿಗೆ 4:11 ಓದಿ.) ಅಷ್ಟು ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳಲು ಅಬ್ರಾಮನಿಗೆ ಯಾವುದು ನೆರವಾಯಿತೆಂದು ನೋಡೋಣ. ಇದರಿಂದ ನಾವು ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುವುದು ಹೇಗೆಂದು ಕಲಿಯುವೆವು.

ಜಲಪ್ರಳಯಾನಂತರದ ಕಾಲದಲ್ಲಿ ಯೆಹೋವನ ಆರಾಧನೆ

4, 5. (1) ಅಬ್ರಾಮನು ಯೆಹೋವನ ಬಗ್ಗೆ ಯಾರಿಂದ ಕಲಿತಿರಬಹುದು? (2) ನಾವೇಕೆ ಹಾಗನ್ನಬಹುದು?

4 ಯೆಹೋವ ದೇವರ ಬಗ್ಗೆ ಅಬ್ರಾಮನಿಗೆ ಗೊತ್ತಾದದ್ದು ಹೇಗೆ? ಅವನ ಸಮಯದಲ್ಲಿ ಯೆಹೋವನ ನಂಬಿಗಸ್ತ ಸೇವಕರು ಭೂಮಿಯ ಮೇಲೆ ಇನ್ನೂ ಇದ್ದರು. ಶೇಮನು ಅವರಲ್ಲೊಬ್ಬ. ಇವನು ನೋಹನ ಹಿರಿಮಗನಲ್ಲ. ಆದರೂ ಬೈಬಲಿನಲ್ಲಿ ನೋಹನ ಮೂವರು ಪುತ್ರರ ಹೆಸರುಗಳನ್ನು ತಿಳಿಸುವಾಗಲೆಲ್ಲ ಮೊದಲಿಗೆ ಶೇಮನ ಹೆಸರಿದೆ. ಬಹುಶಃ ಇದಕ್ಕೆ ಕಾರಣ ಅವನಲ್ಲಿದ್ದ ಗಾಢ ನಂಬಿಕೆ. * ಜಲಪ್ರಳಯವಾಗಿ ಸ್ವಲ್ಪ ಸಮಯದ ನಂತರ ನೋಹನು ಯೆಹೋವನನ್ನು ‘ಶೇಮನ ದೇವರು’ ಎಂದು ಕರೆದನು. (ಆದಿ. 9:26) ಶೇಮ್‌ ಯೆಹೋವನನ್ನು ಗೌರವಿಸಿದನು, ಶುದ್ಧಾರಾಧನೆಯನ್ನು ಮಾನ್ಯಮಾಡಿದನು.

5 ಅಬ್ರಾಮನಿಗೆ ಶೇಮನ ಪರಿಚಯವಿತ್ತೇ? ಇರುವ ಸಾಧ್ಯತೆಯಿದೆ. ಅಬ್ರಾಮನ ಬಾಲ್ಯವನ್ನು ಊಹಿಸಿ. 400ಕ್ಕಿಂತ ಹೆಚ್ಚು ವರ್ಷಗಳ ಮಾನವ ಇತಿಹಾಸವನ್ನು ಕಣ್ಣಾರೆ ನೋಡಿದ್ದ ಪೂರ್ವಜನೊಬ್ಬ ತನಗಿದ್ದಾನೆಂದು ಕೇಳಿದಾಗ ಆ ಪುಟ್ಟ ಪೋರ ಪುಳಕಿತನಾಗಿರಬೇಕು. ಈ ಪೂರ್ವಜನಾದ ಶೇಮನು ಜಲಪ್ರಳಯಕ್ಕೆ ಮುಂಚೆ ಇದ್ದ ದುಷ್ಟತನ, ಭೂಮಿಯನ್ನು ಶುದ್ಧಮಾಡಿದ ಜಲಪ್ರಳಯ, ನಂತರ ಭೂಮಿಯ ಮೇಲೆ ಜನರು ಹೆಚ್ಚುತ್ತಾ ಹೆಚ್ಚುತ್ತಾ ಜನಾಂಗಗಳು ಹುಟ್ಟಿಕೊಂಡದ್ದು, ಬಾಬೆಲಿನ ಗೋಪುರ ಕಟ್ಟಿ ನಿಮ್ರೋದ ದಂಗೆಯೆದ್ದ ಕರಾಳ ದಿನಗಳು ಇವೆಲ್ಲವನ್ನೂ ನೋಡಿದ್ದನು. ನಂಬಿಗಸ್ತನಾಗಿದ್ದ ಶೇಮನು ಆ ದಂಗೆಯಲ್ಲಿ ಒಳಗೂಡಿರಲಿಲ್ಲ. ಆದಕಾರಣ ಯೆಹೋವನು ಆ ಗೋಪುರ ಕಟ್ಟುತ್ತಿದ್ದವರ ಭಾಷೆಯನ್ನು ತಾರುಮಾರು ಮಾಡಿದಾಗ ಶೇಮ್‌ ಮತ್ತವನ ಕುಟುಂಬದ ಭಾಷೆ ಬದಲಾಗಿರಲಿಲ್ಲ. ಅವರೆಲ್ಲರೂ ನೋಹ ಮಾತಾಡುತ್ತಿದ್ದ ಭಾಷೆಯನ್ನು ಅಂದರೆ ಆರಂಭದಲ್ಲಿದ್ದ ಭಾಷೆಯನ್ನೇ ಆಡುತ್ತಿದ್ದರು. ಶೇಮನ ಮನೆತನದಲ್ಲೇ ಅಬ್ರಾಮ ಹುಟ್ಟಿದ್ದ. ದೊಡ್ಡವನಾಗುತ್ತಾ ಹೋದಂತೆ ಅಬ್ರಾಮನಿಗೆ ಶೇಮನ ಮೇಲೆ ಗೌರವ ಬೆಳೆಯಿತು. ಇನ್ನೊಂದು ಸಂಗತಿಯೇನೆಂದರೆ ಅಬ್ರಾಮನ ಜೀವನದ ಬಹುಪಾಲು ವರ್ಷ ಶೇಮ್‌ ಬದುಕಿದ್ದ. ಹಾಗಾಗಿ ಯೆಹೋವನ ಬಗ್ಗೆ ಅಬ್ರಾಮ ಶೇಮನಿಂದ ಕಲಿತಿರಬಹುದು.

ಇಡೀ ಊರ್‌ ಪಟ್ಟಣದಲ್ಲಿ ವಿಗ್ರಹಾರಾಧನೆ ನಡೆಯುತ್ತಿದ್ದರೂ ಅಬ್ರಾಮ ಯಾವತ್ತೂ ಅದನ್ನು ಮಾಡಲಿಲ್ಲ

6. (1) ಜಲಪ್ರಳಯದಿಂದ ಕಲಿತ ಪಾಠವನ್ನು ಅಬ್ರಾಮ ಮನಸ್ಸಿಗೆ ತೆಗೆದುಕೊಂಡಿದ್ದನೆಂದು ನಮಗೆ ಹೇಗೆ ಗೊತ್ತು? (2) ಅಬ್ರಾಮ ಮತ್ತು ಸಾರಯಳ ಬದುಕು ಹೇಗಿತ್ತು?

6 ಒಟ್ಟಿನಲ್ಲಿ ಅಬ್ರಾಮ ಜಲಪ್ರಳಯದಿಂದ ಕಲಿತ ಪಾಠವನ್ನು ನಿಶ್ಚಯವಾಗಿ ಮನಸ್ಸಿಗೆ ತೆಗೆದುಕೊಂಡಿದ್ದ. ಆದ್ದರಿಂದಲೇ ನೋಹನಂತೆ ಯೆಹೋವನೊಂದಿಗೆ ಅನ್ಯೋನ್ಯವಾಗಿ ನಡೆಯಲು ಪ್ರಯತ್ನಿಸಿದ. ಅವನು ವಿಗ್ರಹಗಳನ್ನು ಆರಾಧಿಸದೆ ಊರ್‌ ಪಟ್ಟಣದಲ್ಲಿ ಮಾತ್ರವಲ್ಲ ಅವನ ಸ್ವಂತ ಕುಟುಂಬದಲ್ಲೂ ಭಿನ್ನನಾಗಿ ಎದ್ದುಕಾಣುತ್ತಿದ್ದ. ಅವನಿಗೆ ಸಿಕ್ಕಿದ ಬಾಳಸಂಗಾತಿ ಸಾರಯಳು ಕೂಡ ಒಳ್ಳೆಯವಳಾಗಿದ್ದಳು. ಅವಳು ಸೌಂದರ್ಯದ ಖನಿ ಅಷ್ಟೇ ಅಲ್ಲ ಯೆಹೋವನಲ್ಲಿ ಗಾಢ ನಂಬಿಕೆಯಿದ್ದ ಸ್ತ್ರೀಯೂ ಹೌದು. * ಈ ದಂಪತಿಗೆ ಮಕ್ಕಳಿರಲಿಲ್ಲ. ಆದರೂ ಜೊತೆಜೊತೆಯಾಗಿ ಯೆಹೋವನನ್ನು ಆರಾಧಿಸುವುದರಲ್ಲಿ ನಿಸ್ಸಂಶಯವಾಗಿ ಸಂತೋಷವನ್ನು ಕಂಡುಕೊಂಡರು. ಅವರು ಅಬ್ರಾಮನ ಸಹೋದರನ ಮಗನಾದ ಲೋಟನನ್ನು ದತ್ತುತೆಗೆದುಕೊಂಡು ಸಾಕಿದರು. ಏಕೆಂದರೆ ಅವನು ಅನಾಥನಾಗಿದ್ದನು.

7. ಯೇಸುವಿನ ಹಿಂಬಾಲಕರು ಅಬ್ರಾಮನ ಮಾದರಿಯನ್ನು ಹೇಗೆ ಅನುಕರಿಸಬೇಕು?

7 ಇಡೀ ಊರ್‌ ಪಟ್ಟಣವೇ ವಿಗ್ರಹಾರಾಧನೆಯಲ್ಲಿ ಮುಳುಗಿದ್ದರೂ ಅಬ್ರಾಮ ಮಾತ್ರ ಯೆಹೋವನನ್ನು ಎಂದೂ ತಳ್ಳಿಬಿಡಲಿಲ್ಲ. ಅವನು ಮತ್ತು ಸಾರಯಳು ಆ ಸಮುದಾಯದವರಿಗಿಂತ ಭಿನ್ನರಾಗಿರಲು ಸಿದ್ಧರಿದ್ದರು. ಅಪ್ಪಟ ನಂಬಿಕೆಯನ್ನು ಬೆಳೆಸಿಕೊಳ್ಳಲು ನಮ್ಮಲ್ಲೂ ಅಬ್ರಾಮ ಸಾರಯಳಲ್ಲಿ ಇದ್ದಂಥ ಮನೋಭಾವ ಇರಬೇಕು ಅಂದರೆ ಲೋಕದ ಜನರಿಗಿಂತ ಭಿನ್ನರಾಗಿರಲು ಸಿದ್ಧರಿರಬೇಕು. ತನ್ನ ಹಿಂಬಾಲಕರು ‘ಲೋಕದ ಭಾಗವಾಗಿರುವುದಿಲ್ಲ,’ ಅದಕ್ಕಾಗಿ ಲೋಕದಿಂದ ದ್ವೇಷವಿರೋಧವನ್ನೂ ಎದುರಿಸುವರೆಂದು ಯೇಸು ಹೇಳಿದನು. (ಯೋಹಾನ 15:19 ಓದಿ.) ನೀವು ಯೆಹೋವನನ್ನು ಆರಾಧಿಸಲು ದೃಢನಿರ್ಣಯ ಮಾಡಿದ್ದಕ್ಕಾಗಿ ಕುಟುಂಬದವರು, ಸಮುದಾಯದವರು ನಿಮ್ಮನ್ನು ದೂರಮಾಡಿದ್ದಾರೆಯೇ? ಇದರಿಂದ ನಿಮ್ಮ ಮನಸ್ಸಿಗೆ ತುಂಬ ನೋವಾಗಿದೆಯೇ? ಹಾಗಿದ್ದರೆ ನೆನಪಿಡಿ, ನೀವು ಒಂಟಿಯಲ್ಲ. ದೇವರ ಜೊತೆ ನಡೆಯುತ್ತಿದ್ದೀರಿ. ಅಬ್ರಾಮ ಸಾರಯಳು ಮಾಡಿದಂತೆಯೇ ಮಾಡುತ್ತಿದ್ದೀರಿ.

‘ನಿನ್ನ ಸ್ವದೇಶವನ್ನು ಬಿಟ್ಟು ಹೋಗು’

8, 9. (1) ಅಬ್ರಾಮನ ಜೀವನದಲ್ಲಿ ಮರೆಯಲಾಗದ ಯಾವ ಘಟನೆ ನಡೆಯಿತು? (2) ಯೆಹೋವನು ಅಬ್ರಾಮನಿಗೆ ಏನು ಹೇಳಿದನು?

8 ಒಂದು ದಿನ ಅಬ್ರಾಮನ ಜೀವನದಲ್ಲಿ ಮರೆಯಲಾಗದ ಘಟನೆ ನಡೆಯಿತು. ಯೆಹೋವ ದೇವರಿಂದ ಅವನಿಗೊಂದು ಸಂದೇಶ ಸಿಕ್ಕಿತು. ಹೇಗೆ ಸಿಕ್ಕಿತೆಂದು ಬೈಬಲ್‌ ವಿವರ ಕೊಡದಿದ್ದರೂ “ಮಹಿಮಾಯುತನಾದ ದೇವರು” ಆ ನಂಬಿಗಸ್ತ ಸೇವಕನಿಗೆ ಕಾಣಿಸಿಕೊಂಡನು ಎಂದು ಹೇಳುತ್ತದೆ. (ಅಪೊಸ್ತಲರ ಕಾರ್ಯಗಳು 7:2, 3 ಓದಿ.) ಒಬ್ಬ ದೇವದೂತನ ಮೂಲಕ ಅಬ್ರಾಮನು ವಿಶ್ವ ಪರಮಾಧಿಕಾರಿಯಾದ ಯೆಹೋವನ ಅಪಾರ ಮಹಿಮೆಯ ನಸುನೋಟವನ್ನು ನೋಡಿರಬಹುದು. ಹೀಗೆ ಜೀವವುಳ್ಳ ದೇವರಿಗೂ ಸುತ್ತಲಿನ ಜನರು ಆರಾಧಿಸುತ್ತಿದ್ದ ನಿರ್ಜೀವ ವಿಗ್ರಹಗಳಿಗೂ ಇರುವ ವ್ಯತ್ಯಾಸವನ್ನು ಕಂಡು ಅಬ್ರಾಮ ರೋಮಾಂಚನಗೊಂಡಿರಬೇಕು.

9 ಯೆಹೋವನು ಅಬ್ರಾಮನಿಗೆ ಏನು ಹೇಳಿದನು? “ನಿನ್ನ ಸ್ವದೇಶವನ್ನೂ ಬಂಧುಬಳಗವನ್ನೂ ಬಿಟ್ಟು ನಾನು ನಿನಗೆ ತೋರಿಸುವ ದೇಶಕ್ಕೆ ಹೋಗು” ಎಂದು ಹೇಳಿದನು. ಗಮನಿಸಿ, ಯೆಹೋವನು ತನ್ನ ಮನಸ್ಸಿನಲ್ಲಿದ್ದ ದೇಶ ಯಾವುದು ಎಂದು ಅಬ್ರಾಮನಿಗೆ ಹೇಳಲಿಲ್ಲ, ನಂತರ ಅದನ್ನು ತೋರಿಸುವೆನೆಂದು ಹೇಳಿದನು. ಆದರೆ ಮೊದಲು ಅಬ್ರಾಮ ತನ್ನ ಸ್ವಂತ ಊರನ್ನೂ ಸಂಬಂಧಿಕರನ್ನೂ ಬಿಟ್ಟು ಹೊರಡಬೇಕಿತ್ತು. ಪ್ರಾಚೀನ ಮಧ್ಯಪೂರ್ವದ ಸಂಸ್ಕೃತಿಗಳಲ್ಲಿ ಕುಟುಂಬವೇ ಸರ್ವಸ್ವವೆಂದು ಎಣಿಸಲಾಗುತ್ತಿತ್ತು. ಹಾಗಾಗಿ ಪುರುಷನೊಬ್ಬನು ಬಂಧುಬಳಗವನ್ನು ಬಿಟ್ಟು ದೂರದ ಸ್ಥಳಕ್ಕೆ ಹೋಗುವುದನ್ನು ‘ಯಾರಿಗೂ ಬರಬಾರದ ದುಸ್ಥಿತಿ’ ಎಂದು ಪರಿಗಣಿಸಲಾಗುತ್ತಿತ್ತು. ಕೆಲವರಂತೂ ಅದನ್ನು ಸಾವಿಗಿಂತ ಕಡೆ ಎಂದು ನೆನಸುತ್ತಿದ್ದರು!

10. ಅಬ್ರಾಮ ಮತ್ತು ಸಾರಯಳು ಊರ್‌ ಪಟ್ಟಣದಲ್ಲಿದ್ದ ತಮ್ಮ ಮನೆಯನ್ನು ಬಿಟ್ಟು ಹೊರಡುವುದು ನಿಜಕ್ಕೂ ಒಂದು ತ್ಯಾಗವಾಗಿದ್ದಿರಬಹುದು ಏಕೆ?

10 ಅಬ್ರಾಮನಿಗೆ ತಾನು ಬಾಳಿಬದುಕಿದ ಊರನ್ನು ಬಿಟ್ಟು ಹೋಗುವುದು ಅಷ್ಟು ಸುಲಭವಾಗಿರಲಿಲ್ಲ. ಅದೊಂದು ತ್ಯಾಗವಾಗಿತ್ತು. ಪುರಾವೆಗಳಿಗನುಸಾರ ಪ್ರಾಚೀನ ಊರ್‌ ಒಂದು ಶ್ರೀಮಂತ ಪಟ್ಟಣ. ಸದಾ ಚಟುವಟಿಕೆಯಿಂದ ಕೂಡಿದ ಸ್ಥಳವಾಗಿತ್ತು. (“ ಅಬ್ರಾಮ ಮತ್ತು ಸಾರಯ ಬಿಟ್ಟುಬಂದ ಪಟ್ಟಣ” ಚೌಕ ನೋಡಿ.) ಭೂಶೋಧನೆಗಳು ತೋರಿಸುವಂತೆ ಅಲ್ಲಿ ದೊಡ್ಡ ದೊಡ್ಡ ಮನೆಗಳಿರುತ್ತಿದ್ದವು. ಕುಟುಂಬ-ಆಳುಕಾಳು ಹೀಗೆ ಎಲ್ಲರಿಗೆಂದು ಕೆಲವು ಮನೆಗಳಲ್ಲಿ ಹನ್ನೆರಡು ಇಲ್ಲವೆ ಇನ್ನೂ ಹೆಚ್ಚು ಕೋಣೆಗಳಿದ್ದವು. ಮನೆಯ ಮಧ್ಯೆ ಕಲ್ಲುಹಾಸಿನ ವಿಶಾಲವಾದ ಅಂಗಳ ಇದ್ದು ಕೋಣೆಗಳು ಸುತ್ತಲೂ ಇರುತ್ತಿದ್ದವು. ನೀರಿನ ವ್ಯವಸ್ಥೆ, ಚರಂಡಿ ವ್ಯವಸ್ಥೆ, ಶೌಚಾಲಯ ಇತ್ಯಾದಿ ಸೌಕರ್ಯಗಳು ಅಲ್ಲಿನ ಮನೆಗಳಲ್ಲಿ ಇರುತ್ತಿದ್ದವು. ಇಂಥ ಒಂದು ಊರನ್ನು ಅಬ್ರಾಮ-ಸಾರಯ ಬಿಟ್ಟುಬರಬೇಕಿತ್ತು. ಜೊತೆಗೆ ಅವರಿಬ್ಬರೇನು ಯೌವನಸ್ಥರಾಗಿರಲಿಲ್ಲ, ಬಾಳ ಮುಸ್ಸಂಜೆಯಲ್ಲಿದ್ದರು. ಪ್ರಾಯಶಃ ಅಬ್ರಾಮನಿಗೆ 70 ದಾಟಿತ್ತು. ಸಾರಯಳಿಗೆ 60 ದಾಟಿತ್ತು. ಒಳ್ಳೇ ಗಂಡನಾಗಿ ಅವನು ತನ್ನ ಹೆಂಡತಿ ತಕ್ಕಮಟ್ಟಿಗೆ ಸುಖವಾಗಿ, ಆರಾಮವಾಗಿರುವಂತೆ ಬಯಸಿದ. ಸ್ವದೇಶ ಬಿಟ್ಟು ಹೋಗುವಂತೆ ದೇವರು ಕೊಟ್ಟ ನೇಮಕದ ಬಗ್ಗೆ ಆ ಪತಿಪತ್ನಿಯ ಮಧ್ಯೆ ನಡೆದ ಸಂಭಾಷಣೆಯ ಕುರಿತು ಸ್ವಲ್ಪ ಯೋಚಿಸಿ. ನೇಮಕಕ್ಕೆ ಸಂಬಂಧಿಸಿದಂತೆ ಹೇಗೆ, ಏನು, ಎತ್ತ ಎಂಬ ಪ್ರಶ್ನೆಗಳು ಎದ್ದಿರಬಹುದು, ಅವರು ಕೂತು ಅವುಗಳ ಬಗ್ಗೆ ಮಾತಾಡಿರಬಹುದು. ತನ್ನಾಕೆ ಹಿಂಜರಿಯದೆ ಈ ಸವಾಲನ್ನು ಸ್ವೀಕರಿಸಲು ಮುಂದಾದಾಗ ಅಬ್ರಾಮನಿಗೆ ಎಷ್ಟೊಂದು ಖುಷಿಯಾಗಿರಬೇಕು. ಸುಖಸೌಕರ್ಯವಿರುವ ಮನೆವಾಸವನ್ನು ಬಿಟ್ಟು ಹೊರಡಲು ಅವನಂತೆ ಅವಳು ಸಹ ಸಿದ್ಧಳಿದ್ದಳು.

11, 12. (1) ಅಬ್ರಾಮ ಮತ್ತು ಸಾರಯಳು ಊರ್‌ ಪಟ್ಟಣ ಬಿಡುವ ಮುಂಚೆ ಯಾವ ಸಿದ್ಧತೆಗಳನ್ನೂ ನಿರ್ಣಯಗಳನ್ನೂ ಮಾಡಬೇಕಿತ್ತು? (2) ಹೊರಡುವ ದಿನದ ದೃಶ್ಯವನ್ನು ವರ್ಣಿಸಿ.

11 ಆ ದಂಪತಿ ಸ್ವದೇಶವನ್ನು ಬಿಟ್ಟು ಹೋಗುವ ನಿರ್ಣಯ ಮಾಡಿದರು. ಮುಂದೆ ಅವರಿಗೆ ಬಹಳಷ್ಟು ಕೆಲಸಗಳಿದ್ದವು. ಸಾಮಾನುಗಳನ್ನು ಗಂಟುಕಟ್ಟಬೇಕಿತ್ತು, ಎಲ್ಲವನ್ನೂ ಸಂಘಟಿಸಬೇಕಿತ್ತು. ಗೊತ್ತಿಲ್ಲದ ಸ್ಥಳಕ್ಕೆ ಹೋಗುತ್ತಿರುವುದರಿಂದ ಏನೇನು ತೆಗೆದುಕೊಳ್ಳಬೇಕು, ಏನೇನು ಬಿಟ್ಟು ಹೋಗಬೇಕೆಂದು ನಿರ್ಣಯಿಸಬೇಕಿತ್ತು. ಕುಟುಂಬದವರಲ್ಲಿ, ಸೇವಕಸೇವಕಿಯರಲ್ಲಿ ಯಾರ್ಯಾರನ್ನು ಕರೆದುಕೊಂಡು ಹೋಗುವುದೆಂದೂ ನಿರ್ಧರಿಸಬೇಕಿತ್ತು. ಅವರ ಮುಖ್ಯ ಚಿಂತೆ ವೃದ್ಧನಾಗಿದ್ದ ತೆರಹನದ್ದು. ಅವನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿ ಕೊನೆ ವರೆಗೂ ನೋಡಿಕೊಳ್ಳಲು ನಿರ್ಣಯಿಸಿದರು. ಇದಕ್ಕೆ ತೆರಹ ಸಂತೋಷದಿಂದ ಒಪ್ಪಿರಬೇಕು. ತೆರಹ ಕುಟುಂಬದ ಮುಖ್ಯಸ್ಥನಾಗಿದ್ದ ಕಾರಣ ಪರಿವಾರ ಸಮೇತ ಊರ್‌ ಪಟ್ಟಣವನ್ನು ಬಿಟ್ಟದ್ದು ತೆರಹನೆಂದು ವೃತ್ತಾಂತ ಹೇಳುತ್ತದೆ. ಅವನು ವಿಗ್ರಹಾರಾಧನೆಯನ್ನು ತೊರೆದಿದ್ದನೆಂದು ತೋರುತ್ತದೆ. ಲೋಟನು ಸಹ ಅವರ ಜೊತೆ ಹೋಗಲಿದ್ದನು.—ಆದಿ. 11:31.

12 ಕೊನೆಗೂ ಹೊರಡುವ ದಿನ ಬಂದೇ ಬಿಟ್ಟಿತು. ಪ್ರಯಾಣಿಸುವವರೆಲ್ಲ ಬೆಳಗ್ಗೆ ಊರ್‌ ಪಟ್ಟಣದ ಗೋಡೆಯಾಚೆಗಿನ ನೀರಿನ ಕಂದಕವನ್ನು ದಾಟಿ ಸೇರಿಬರುವುದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಒಂಟೆಗಳು, ಕತ್ತೆಗಳು ಸಾಮಾನು ಸರಂಜಾಮುಗಳನ್ನು ಹೊತ್ತು ನಿಂತಿದ್ದವು. * ಕುರಿಗಳು ಒಂದೆಡೆ ಇದ್ದವು. ಮನೆಯವರು, ಸೇವಕರು ಎಲ್ಲ ತಮ್ಮತಮ್ಮ ಸ್ಥಳದಲ್ಲಿ ಸಿದ್ಧರಾಗಿದ್ದರು. ಎಲ್ಲರಲ್ಲೂ ಹೊರಡುವ ತವಕ. ಬಹುಶಃ ಎಲ್ಲರ ದೃಷ್ಟಿ ಅಬ್ರಾಮನ ಮೇಲಿತ್ತು. ಅವನ ಸನ್ನೆಗಾಗಿ ಕಾಯುತ್ತಿದ್ದರು. ಅಬ್ರಾಮ ಸನ್ನೆ ಮಾಡಿದ್ದೇ ತಡ ಎಲ್ಲರೂ ಮುಂದೆ ಅಡಿಯಿಟ್ಟರು. ಮತ್ತೆ ಯಾವತ್ತಿಗೂ ಊರ್‌ ಪಟ್ಟಣಕ್ಕೆ ಅವರು ಕಾಲಿಡಲಿಲ್ಲ.

13. ಇಂದು ಯೆಹೋವನ ಸೇವಕರಲ್ಲಿ ಅನೇಕರು ಅಬ್ರಾಮ ಮತ್ತು ಸಾರಯಳಂಥ ಮನೋಭಾವ ತೋರಿಸುತ್ತಿರುವುದು ಹೇಗೆ?

13 ಇಂದು ಯೆಹೋವನ ಸೇವಕರಲ್ಲಿ ಅನೇಕರು ಹೆಚ್ಚು ರಾಜ್ಯ ಪ್ರಚಾರಕರ ಅಗತ್ಯವಿರುವ ಕ್ಷೇತ್ರಗಳಿಗೆ ಸ್ಥಳಾಂತರಿಸಿ ಅಲ್ಲಿದ್ದು ಸೇವೆ ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ಸೇವೆಯನ್ನು ಹೆಚ್ಚಿಸಲಿಕ್ಕಾಗಿ ಬೇರೊಂದು ಭಾಷೆಯನ್ನು ಕಲಿಯುತ್ತಾರೆ. ಮತ್ತಿತರರು ಈ ಹಿಂದೆ ಅವರು ಪ್ರಯತ್ನಿಸಿರದ ಇಲ್ಲವೆ ತಮಗೆ ಕಷ್ಟಕರವೆಂದು ಅನಿಸಿದ ಸಾರುವ ವಿಧಾನಗಳನ್ನು ಬಳಸಲು ಮುಂದಾಗುತ್ತಾರೆ. ಇದರಲ್ಲೂ ತ್ಯಾಗ ಒಳಗೂಡಿದೆ. ಏಕೆಂದರೆ ಅನನುಕೂಲಗಳನ್ನು ಸಹಿಸಿಕೊಳ್ಳಲು ಅವರು ಸಿದ್ಧರಿರುತ್ತಾರೆ. ಇಂಥ ಮನೋಭಾವವುಳ್ಳವರು ಪ್ರಶಂಸಾರ್ಹರು. ಅವರು ಅಬ್ರಾಮ ಮತ್ತು ಸಾರಯಳ ಮಾದರಿಯನ್ನು ಅನುಕರಿಸುತ್ತಿದ್ದಾರೆ. ಅಂಥ ನಂಬಿಕೆಯನ್ನು ತೋರಿಸುತ್ತಾ ನಾವು ಯೆಹೋವನಿಗೆ ಏನನ್ನೇ ಕೊಡಲಿ ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಆಶೀರ್ವಾದಗಳನ್ನು ಆತನು ನಮಗೆ ಕೊಟ್ಟೇ ಕೊಡುವನು. ನಂಬಿಕೆಗೆ ಪ್ರತಿಫಲ ಕೊಡಲು ಆತನೆಂದೂ ತಪ್ಪುವುದಿಲ್ಲ. (ಇಬ್ರಿ. 6:10; 11:6) ಅಬ್ರಾಮನಿಗೆ ಯೆಹೋವನು ಪ್ರತಿಫಲ ಕೊಟ್ಟನೇ?

ಯೂಫ್ರೇಟೀಸ್‌ ನದಿಯನ್ನು ದಾಟಿದರು

14, 15. (1) ಊರ್‌ನಿಂದ ಖಾರಾನ್‌ ವರೆಗೆ ಮಾಡಿದ ಪ್ರಯಾಣ ಹೇಗಿದ್ದಿರಬಹುದು? (2) ಅಬ್ರಾಮ ಸ್ವಲ್ಪ ಸಮಯ ಖಾರಾನ್‌ನಲ್ಲಿ ನೆಲೆಸಿದ್ದೇಕೆ?

14 ಈ ತಂಡ ನಿಧಾನವಾಗಿ ಪ್ರಯಾಣಕ್ಕೆ ಒಗ್ಗಿಕೊಂಡಿತು. ಅಬ್ರಾಮ ಮತ್ತು ಸಾರಯ ಸ್ವಲ್ಪ ಹೊತ್ತು ನಡೆದು ಇನ್ನೂ ಸ್ವಲ್ಪ ಹೊತ್ತು ಪ್ರಾಣಿಯ ಮೇಲೆ ಸವಾರಿ ಮಾಡುತ್ತಾ, ಮಾತಾಡುತ್ತಾ ಮುಂದೆ ಮುಂದೆ ಸಾಗಿದ್ದನ್ನು ಚಿತ್ರಿಸಿಕೊಳ್ಳಿ. ಪ್ರಾಣಿಗಳಿಗೆ ಕಟ್ಟಲಾಗಿದ್ದ ತೊಗಲ ಪಟ್ಟಿಯಲ್ಲಿನ ಗಂಟೆಗಳ ನಿನಾದವು ಅವರ ಸಂಭಾಷಣೆಯೊಂದಿಗೆ ಮಿಳಿತಗೊಂಡಿತ್ತು. ಗುಡಾರಗಳನ್ನು ಹಾಕುವುದರಲ್ಲಿ, ಬಿಚ್ಚುವುದರಲ್ಲಿ ಏನೇನೂ ಅನುಭವ ಇಲ್ಲದ ಈ ಪ್ರಯಾಣಿಕರು ಕ್ರಮೇಣ ಅದರಲ್ಲೂ ಪ್ರವೀಣರಾದರು. ವೃದ್ಧ ತೆರಹನನ್ನು ಒಂಟೆ ಇಲ್ಲವೆ ಕತ್ತೆಯ ಮೇಲೆ ಹತ್ತಿಸಿ ಆರಾಮವಾಗಿ ಕೂರಿಸಲು, ಇಳಿಸಲು ಸಹಾಯ ಮಾಡುವುದರಲ್ಲೂ ನಿಪುಣರಾದರು. ಅವರ ಪ್ರಯಾಣ ಯೂಫ್ರೇಟೀಸ್‌ ಮಹಾ ನದಿಯ ಅಂಚಿನಿಂದ ವಾಯುವ್ಯ ದಿಕ್ಕಿನ ಕಡೆಗೆ ಸಾಗಿತು. ದಿನದಿಂದ ದಿನಕ್ಕೆ ವಾರದಿಂದ ವಾರಕ್ಕೆ ಅವರ ಪ್ರಯಾಣ ಮುಂದುವರಿಯಿತು.

15 ಅವರು 960 ಕಿ.ಮೀ. ದೂರ ಕ್ರಮಿಸಿದ ಬಳಿಕ ಜೇನುಗೂಡು ಆಕಾರದ ಬಿಡಾರಗಳಿದ್ದ ಖಾರಾನ್‌ಗೆ ತಲುಪಿದರು. ಇದೊಂದು ಅಭಿವೃದ್ಧಿಶೀಲ ಪಟ್ಟಣವಾಗಿತ್ತು. ಪೂರ್ವದಿಂದ ಪಶ್ಚಿಮಕ್ಕೆ ಹೋಗುವ ವಾಣಿಜ್ಯ ಮಾರ್ಗಗಳು ಸಂಧಿಸುವ ಸ್ಥಳದಲ್ಲಿ ಆ ಪಟ್ಟಣವಿತ್ತು. ಅಲ್ಲಿ ಅವರು ಸ್ವಲ್ಪ ಕಾಲ ನೆಲೆಸಿದರು. ಬಹುಶಃ ತೆರಹನಿಗೆ ಮುಂದೆ ಪ್ರಯಾಣ ಬೆಳೆಸುವಷ್ಟು ತ್ರಾಣವಿರಲಿಲ್ಲ.

16, 17. (1) ಯಾವ ಒಡಂಬಡಿಕೆಯಿಂದ ಅಬ್ರಾಮನಿಗೆ ಪ್ರೋತ್ಸಾಹ ಸಿಕ್ಕಿತು? (2) ಖಾರಾನಿನಲ್ಲಿ ಯೆಹೋವನು ಅಬ್ರಾಮನನ್ನು ಯಾವ ವಿಧದಲ್ಲಿ ಆಶೀರ್ವದಿಸಿದನು?

16 ಸ್ವಲ್ಪದರಲ್ಲೇ ತೆರಹ ತೀರಿಹೋದ. ಅವನಿಗೆ ಆಗ 205 ವರ್ಷ. (ಆದಿ. 11:32) ತಂದೆಯನ್ನು ಕಳಕೊಂಡ ದುಃಖದಲ್ಲಿದ್ದ ಅಬ್ರಾಮನೊಂದಿಗೆ ಯೆಹೋವನು ಮಾತಾಡಿದನು. ಇದು ಅವನಿಗೆ ತುಂಬ ಸಾಂತ್ವನ ತಂದಿತು. ಊರ್‌ ಪಟ್ಟಣದಲ್ಲಿ ಕೊಟ್ಟ ನಿರ್ದೇಶನವನ್ನು ಯೆಹೋವನು ಪುನಃ ಹೇಳಿದನು. ಮಾತ್ರವಲ್ಲ ತಾನು ಮಾಡಿರುವ ವಾಗ್ದಾನಗಳಿಗೆ ಇನ್ನಷ್ಟು ವಿವರವನ್ನು ಕೂಡಿಸಿದನು. ಯೆಹೋವನು ಅಬ್ರಾಮನನ್ನು “ದೊಡ್ಡ ಜನಾಂಗವಾಗುವಂತೆ” ಮಾಡುವೆನೆಂದೂ ಭೂಮಿಯಲ್ಲಿರುವ ಎಲ್ಲ ಜನಾಂಗಗಳಿಗೆ ಅವನಿಂದ ಆಶೀರ್ವಾದಗಳು ಲಭ್ಯವಿರುವವೆಂದೂ ಹೇಳಿದನು. (ಆದಿಕಾಂಡ 12:2, 3 ಓದಿ.) ಅಬ್ರಾಮನೊಂದಿಗೆ ಮಾಡಿದ ಒಡಂಬಡಿಕೆಯನ್ನು ದೇವರು ಖಾರಾನ್‌ನಲ್ಲಿ ಪುನಃ ದೃಢೀಕರಿಸಿದ್ದರಿಂದ ಅಲ್ಲಿಂದ ಮುಂದಕ್ಕೆ ಸಾಗುವ ಸ್ಫೂರ್ತಿ ಅವನಿಗೆ ಸಿಕ್ಕಿತು.

17 ಖಾರಾನ್‌ನಿಂದ ಹೊರಡುವಾಗ ಅಬ್ರಾಮನ ಬಳಿ ಹೆಚ್ಚು ಸ್ವತ್ತುಗಳಿದ್ದವು. ಏಕೆಂದರೆ ಅಲ್ಲಿದ್ದಾಗ ಅಬ್ರಾಮನು ಯೆಹೋವನ ಆಶೀರ್ವಾದದಿಂದ ಏಳಿಗೆ ಹೊಂದಿದ್ದನು. ಅಬ್ರಾಮ “ಖಾರಾನಿನಲ್ಲಿ ಸಂಪಾದಿಸಿದ್ದ ಎಲ್ಲಾ ಸೊತ್ತನ್ನೂ ದಾಸದಾಸಿಯರನ್ನೂ ತೆಗೆದುಕೊಂಡು” ಹೋದನೆಂದು ವೃತ್ತಾಂತ ಹೇಳುತ್ತದೆ. (ಆದಿ. 12:5) ಅಬ್ರಾಮನ ಮೂಲಕ ದೊಡ್ಡ ಜನಾಂಗ ಆಗಲಿಕ್ಕಿದ್ದದರಿಂದ ಅವನಿಗೆ ಈ ಎಲ್ಲ ಸ್ವತ್ತು, ಸೇವಕಸೇವಕಿಯರು ಅಂದರೆ ಒಂದು ದೊಡ್ಡ ಮನೆವಾರ್ತೆ ಅಗತ್ಯವಿತ್ತು. ಯೆಹೋವನು ತನ್ನೆಲ್ಲ ಸೇವಕರನ್ನು ಸಿರಿವಂತರನ್ನಾಗಿ ಮಾಡುವುದಿಲ್ಲ. ಆದರೆ ತನ್ನ ಉದ್ದೇಶವನ್ನು ಪೂರೈಸುವ ಸಲುವಾಗಿ ತನ್ನ ಸೇವಕರಿಗೆ ಏನು ಅಗತ್ಯವೋ ಅದನ್ನಂತೂ ಕೊಟ್ಟೇ ಕೊಡುತ್ತಾನೆ. ಈ ರೀತಿಯಲ್ಲಿ ಯೆಹೋವನಿಂದ ಸಹಾಯ ಪಡೆದ ಅಬ್ರಾಮ ತನ್ನವರೆಲ್ಲರನ್ನು ಅಪರಿಚಿತ ನಾಡಿಗೆ ನಡೆಸಿದನು.

ಊರ್‌ ಪಟ್ಟಣದಲ್ಲಿನ ಆರಾಮದಾಯಕ ಜೀವನವನ್ನು ಬಿಟ್ಟುಬಂದ ಅಬ್ರಾಮ ಮತ್ತು ಸಾರಯಳಿಗೆ ಅನೇಕ ಸವಾಲುಗಳು ಎದುರಾದವು

18. (1) ದೇವರು ತನ್ನ ಜನರೊಂದಿಗೆ ವ್ಯವಹರಿಸಿದ ಇತಿಹಾಸದಲ್ಲಿ ಯಾವುದು ಮೈಲಿಗಲ್ಲಾಗಿತ್ತು? (2) ತದನಂತರದ ವರ್ಷಗಳಲ್ಲಿ ನೈಸಾನ್‌ 14ರಂದು ಯಾವ ಪ್ರಮುಖ ಘಟನೆಗಳು ನಡೆದವು? (“ ಬೈಬಲ್‌ ಇತಿಹಾಸದಲ್ಲಿ ಮಹತ್ವಪೂರ್ಣ ತಾರೀಕು” ಚೌಕ ನೋಡಿ.)

18 ಖಾರಾನ್‌ನಿಂದ ಹೊರಟು ಹಲವು ದಿನ ಪ್ರಯಾಣಮಾಡಿದ ಬಳಿಕ ಅವರು ಕರ್ಕೆಮೀಷ್‌ಗೆ ಬಂದು ಮುಟ್ಟಿದರು. ಇಲ್ಲಿಂದ ಸಾಮಾನ್ಯವಾಗಿ ಪ್ರಯಾಣಿಕರ ತಂಡಗಳು ಯೂಫ್ರೇಟೀಸ್‌ ನದಿಯನ್ನು ದಾಟುತ್ತಿದ್ದವು, ಅದನ್ನೇ ಅಬ್ರಾಮನ ತಂಡವೂ ಮಾಡಿತು. ಅಬ್ರಾಮನು ಯೂಫ್ರೇಟೀಸ್‌ ನದಿಯನ್ನು ದಾಟಿದ್ದು ಕ್ರಿ.ಪೂ. 1943ರ ನೈಸಾನ್‌ (ತದನಂತರ ಬಂದ ಹೆಸರು) ತಿಂಗಳ 14ರಂದು ಎಂಬುದು ವ್ಯಕ್ತ. ಅಬ್ರಾಮ ಯೂಫ್ರೇಟೀಸ್‌ ನದಿಯನ್ನು ದಾಟಿದ ಆ ದಿನ ದೇವರು ತನ್ನ ಜನರೊಂದಿಗೆ ವ್ಯವಹರಿಸಿದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿತ್ತು. (ವಿಮೋ. 12:40-43) ಯೆಹೋವನು ಅಬ್ರಾಮನಿಗೆ ತೋರಿಸುವೆನೆಂದು ಹೇಳಿದ ದೇಶ ಯೂಫ್ರೇಟೀಸ್‌ ನದಿಯ ದಕ್ಷಿಣದಿಕ್ಕಿನಲ್ಲಿತ್ತು. ದೇವರು ಅಬ್ರಾಮನೊಂದಿಗೆ ಮಾಡಿದ ಒಡಂಬಡಿಕೆ ಆ ದಿನದಂದು ಜಾರಿಗೆ ಬಂತು.

19. (1) ಯೆಹೋವನು ಅಬ್ರಾಮನಿಗೆ ಮಾಡಿದ ವಾಗ್ದಾನದಲ್ಲಿ ಏನೆಂದು ತಿಳಿಸಿದನು? (2) ಅದರಿಂದ ಅಬ್ರಾಮನಿಗೆ ಏನು ನೆನಪಾಗಿರಬಹುದು?

19 ಅಬ್ರಾಮ ತನ್ನ ಪರಿವಾರ ಸಮೇತ ದಕ್ಷಿಣದತ್ತ ಪ್ರಯಾಣಿಸುವಾಗ ಶೆಕೆಮ್‌ ಬಳಿಯಿದ್ದ ಮೋರೆ ಎಂಬ ವೃಕ್ಷದ ಹತ್ತಿರ ಬಂದು ಬಿಡಾರ ಹಾಕಿದ. ಅಲ್ಲಿ ಯೆಹೋವನು ಪುನಃ ಅವನೊಂದಿಗೆ ಮಾತಾಡಿದನು. ಈ ಬಾರಿ ಯೆಹೋವನು ತನ್ನ ವಾಗ್ದಾನದಲ್ಲಿ ಆ ದೇಶವನ್ನು ಅಬ್ರಾಮನ ಸಂತತಿ ಸ್ವಾಧೀನಪಡಿಸಿಕೊಳ್ಳುವುದು ಎಂಬ ಮಾತನ್ನು ಹೇಳಿದನು. ಆಗ ಅಬ್ರಾಮನಿಗೆ ಮುಂದೊಂದು ದಿನ ಮಾನವಕುಲವನ್ನು ರಕ್ಷಿಸಲಿರುವ ಸಂತಾನದ ಕುರಿತು ಯೆಹೋವನು ಏದೆನ್‌ ತೋಟದಲ್ಲಿ ಮಾಡಿದ ವಾಗ್ದಾನ ನೆನಪಿಗೆ ಬಂದಿತ್ತೇ? (ಆದಿ. 3:15; 12:7) ಬಂದಿರಬಹುದು. ಯೆಹೋವನ ಮಹಾ ಉದ್ದೇಶದಲ್ಲಿ ತಾನು ಒಳಗೂಡಿದ್ದೇನೆಂದು ಆಗ ಅಬ್ರಾಮನಿಗೆ ಸ್ವಲ್ಪಸ್ವಲ್ಪ ಅರ್ಥವಾಗಿರಬಹುದು.

20. ಯೆಹೋವನು ಕೊಟ್ಟ ಸುಯೋಗಕ್ಕಾಗಿ ಅಬ್ರಾಮ ಹೇಗೆ ಕೃತಜ್ಞತೆ ತೋರಿಸಿದನು?

20 ಯೆಹೋವನು ಕೊಟ್ಟ ಸುಯೋಗಕ್ಕಾಗಿ ಅಬ್ರಾಮನಲ್ಲಿ ಗಾಢವಾದ ಕೃತಜ್ಞತೆಯಿತ್ತು. ಕಾನಾನ್ಯರು ಇನ್ನೂ ನೆಲೆಸಿದ್ದ ಆ ವಾಗ್ದತ್ತ ದೇಶದಲ್ಲಿ ಅಬ್ರಾಮ ನಿಸ್ಸಂಶಯವಾಗಿ ಎಚ್ಚರಿಕೆಯಿಂದ ಸಂಚರಿಸುತ್ತಾ ಹೋದನು. ಹೀಗೆ ಹೋದಲ್ಲೆಲ್ಲ ಯೆಹೋವನಿಗಾಗಿ ಯಜ್ಞವೇದಿಗಳನ್ನು ಕಟ್ಟಿದನು. ಮೊದಲು ಮೋರೆ ಎಂಬ ವೃಕ್ಷದ ಬಳಿ, ಬಳಿಕ ಬೆತೆಲ್‌ನಲ್ಲಿ ಕಟ್ಟಿದ. ಯೆಹೋವನ ಹೆಸರನ್ನು ಹೇಳಿಕೊಂಡು ಆರಾಧಿಸಿದ ಅಂದರೆ ಬಹುಶಃ ತನ್ನ ಮುಂದಿನ ಸಂತತಿಯ ಭವಿಷ್ಯದ ಕುರಿತು ಯೋಚಿಸಿ ಮನಃಪೂರ್ವಕವಾಗಿ ಕೃತಜ್ಞತೆ ಸಲ್ಲಿಸಿದ. ತನ್ನ ದೇವರ ಬಗ್ಗೆ ಸುತ್ತಲಿನ ಕಾನಾನ್ಯ ಜನರಿಗೆ ಅವನು ಸಾರಿರಲೂಬಹುದು. (ಆದಿಕಾಂಡ 12:7, 8 ಓದಿ.) ಅಬ್ರಾಮನ ಬಾಳಪಯಣದಲ್ಲಿ ನಿಜಕ್ಕೂ ದೊಡ್ಡ ಸವಾಲುಗಳು ಎದುರಾದದ್ದು ಮುಂದಕ್ಕೆ. ಆದರೂ ಅವನು ಊರ್‌ ಪಟ್ಟಣದಲ್ಲಿ ತನಗಿದ್ದ ಮನೆ, ಸುಖಸೌಕರ್ಯಗಳಿಗಾಗಿ ಹಪಹಪಿಸಿ ಹಿಂದೆ ನೋಡಲಿಲ್ಲ. ಬದಲಿಗೆ ಭವಿಷ್ಯದ ಮೇಲೆ ಗಮನ ನೆಟ್ಟನು. ಅವನ ಕುರಿತು ಇಬ್ರಿಯ 11:10 ಹೀಗನ್ನುತ್ತದೆ: “ಅವನು ನಿಜವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಕಟ್ಟಿದ ಮತ್ತು ಸೃಷ್ಟಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು.”

21. (1) ಅಬ್ರಾಮನಿಗೆ ಹೋಲಿಸಿದರೆ ದೇವರ ರಾಜ್ಯದ ಕುರಿತು ನಮಗೆ ಏನೇನು ತಿಳಿದಿದೆ? (2) ಇದರಿಂದ ಏನು ಮಾಡಬೇಕೆಂಬ ಪ್ರಚೋದನೆ ನಿಮಗೆ ಸಿಕ್ಕಿದೆ?

21 ಆ ಸಾಂಕೇತಿಕ ಪಟ್ಟಣ ಅಂದರೆ ದೇವರ ರಾಜ್ಯದ ಕುರಿತು ಅಬ್ರಾಮನಿಗಿಂತ ಇಂದು ನಮ್ಮ ಬಳಿ ಹೆಚ್ಚು ಮಾಹಿತಿಯಿದೆ. ಆ ರಾಜ್ಯವು ಸ್ವರ್ಗದಲ್ಲಿ ಆಳ್ವಿಕೆ ನಡೆಸುತ್ತಿದೆ, ಶೀಘ್ರದಲ್ಲಿ ಈ ಲೋಕ ವ್ಯವಸ್ಥೆಯನ್ನು ನಾಶಮಾಡಲಿದೆ ಮಾತ್ರವಲ್ಲ ಅಬ್ರಾಮನಿಗೆ ವಾಗ್ದಾನ ಮಾಡಲಾಗಿದ್ದ ಸಂತಾನ ಅಂದರೆ ಯೇಸು ಕ್ರಿಸ್ತನು ಆ ರಾಜ್ಯದ ರಾಜನಾಗಿ ಈಗ ಆಳುತ್ತಿದ್ದಾನೆಂದೂ ನಮಗೆ ಗೊತ್ತಿದೆ. ಅಬ್ರಹಾಮನು ಪುನರುತ್ಥಾನ ಹೊಂದಿ ಬರುವಾಗ ಅವನನ್ನು ನೋಡಲು ನಮಗಿರುವ ಸುಯೋಗ ಅನುಪಮ. ಆಗ ಅವನಿಗೆ ಯೆಹೋವನ ಉದ್ದೇಶದ ನೆರವೇರಿಕೆ ಪೂರ್ತಿಯಾಗಿ ಅರ್ಥವಾಗುವುದು. ಯೆಹೋವನು ತನ್ನ ಪ್ರತಿಯೊಂದು ವಾಗ್ದಾನವನ್ನು ನೆರವೇರಿಸುವುದನ್ನು ನೋಡಲು ನಿಮಗೆ ಇಷ್ಟವಿದೆಯೇ? ಹಾಗಿದ್ದಲ್ಲಿ ಅಬ್ರಾಮನಂತೆ ಸ್ವತ್ಯಾಗದ ಮನೋಭಾವ, ವಿಧೇಯತೆ, ದೇವರು ನಿಮಗೆ ಕೊಟ್ಟ ಸುಯೋಗಗಳಿಗಾಗಿ ಕೃತಜ್ಞತೆ ತೋರಿಸುತ್ತಾ ಇರಿ. ನೀವು ಅಬ್ರಾಮನ ನಂಬಿಕೆಯನ್ನು ಅನುಕರಿಸುತ್ತಾ ಇರುವಾಗ “ನಂಬಿಕೆಯಿರುವ ಎಲ್ಲರಿಗೆ . . . ತಂದೆ” ಆಗಿರುವ ಅವನು ಒಂದರ್ಥದಲ್ಲಿ ನಿಮಗೂ ತಂದೆಯಾಗುವನು!

^ ಪ್ಯಾರ. 1 ಅನೇಕ ವರ್ಷಗಳ ಬಳಿಕ ದೇವರು ಅಬ್ರಾಮನ ಹೆಸರನ್ನು “ಅಬ್ರಹಾಮ” ಎಂದು ಬದಲಾಯಿಸಿದನು. ಅಬ್ರಹಾಮ ಅಂದರೆ ‘ಸಮೂಹದ ತಂದೆ.’—ಆದಿ. 17:5, ಸತ್ಯವೇದವು ಪಾದಟಿಪ್ಪಣಿ.

^ ಪ್ಯಾರ. 4 ಅದೇ ರೀತಿ ಅಬ್ರಾಮ ತೆರಹನ ಜ್ಯೇಷ್ಠಪುತ್ರನಲ್ಲ. ಆದರೂ ಬೈಬಲಿನಲ್ಲಿ ತೆರಹನ ಮಕ್ಕಳ ಹೆಸರುಗಳಲ್ಲಿ ಅಬ್ರಾಮನ ಹೆಸರು ಮೊದಲಿದೆ.

^ ಪ್ಯಾರ. 6 ಸಮಯಾನಂತರ ದೇವರು ಸಾರಯಳ ಹೆಸರನ್ನು ಸಾರ ಎಂದು ಬದಲಾಯಿಸಿದನು. ಸಾರ ಅಂದರೆ “ರಾಣಿ, ರಾಜಸ್ತ್ರೀ.”—ಆದಿ. 17:15, ಸತ್ಯವೇದವು ಪಾದಟಿಪ್ಪಣಿ.

^ ಪ್ಯಾರ. 12 ಅನೇಕ ವಿದ್ವಾಂಸರು ಅಬ್ರಾಮನ ಸಮಯದಲ್ಲಿ ಒಂಟೆ ಸಾಕುಪ್ರಾಣಿಯಾಗಿತ್ತೇ ಎಂದು ಪ್ರಶ್ನಿಸುತ್ತಾರೆ. ಆದರೆ ಈ ಆಕ್ಷೇಪವನ್ನು ನಿರೂಪಿಸಲು ಅವರ ಬಳಿ ಆಧಾರಗಳಿಲ್ಲ. ಅಬ್ರಾಮನ ಬಳಿ ಒಂಟೆಗಳಿದ್ದವೆಂದು ಬೈಬಲ್‌ ಅನೇಕ ಸಲ ಹೇಳುತ್ತದೆ.—ಆದಿ. 12:16; 24:35.