ಪಾಠ 9
ಯೆರೆಮೀಯ ಯೆಹೋವನ ಬಗ್ಗೆ ಮಾತಾಡುವುದನ್ನು ನಿಲ್ಲಿಸಲಿಲ್ಲ
ಜನರು ಯೆರೆಮೀಯನ ಮೇಲೆ ಯಾಕಿಷ್ಟು ಕೋಪ ಮಾಡಿಕೊಂಡಿದ್ದಾರೆ?
ಯೆರೆಮೀಯನನ್ನು ಯೆಹೋವನು ಕಾಪಾಡಿದ
ನಾವು ಜನರೊಟ್ಟಿಗೆ ಯೆಹೋವನ ಬಗ್ಗೆ ಮಾತಾಡುವಾಗ ಕೆಲವೊಮ್ಮೆ ಅವರು ತಮಾಷೆ ಮಾಡಿ ನಗಾಡುತ್ತಾರೆ ಅಥವಾ ಕೋಪ ತೋರಿಸುತ್ತಾರೆ. ಆಗ ನಮಗೆ ದೇವರ ಬಗ್ಗೆ ಮಾತಾಡುವುದೇ ಬೇಡ ಅಂತ ಅನಿಸಬಹುದು. ನಿನಗೆ ಯಾವತ್ತಾದರೂ ಹಾಗೆ ಅನಿಸಿದೆಯಾ?— ಯೆಹೋವನ ಮೇಲೆ ತುಂಬ ಪ್ರೀತಿ ಇದ್ದ ಒಬ್ಬ ಯುವಕನ ಬಗ್ಗೆ ಬೈಬಲ್ ಹೇಳುತ್ತದೆ. ಅವನು ಸಹ ದೇವರ ಬಗ್ಗೆ ಮಾತಾಡುವುದನ್ನು ನಿಲ್ಲಿಸಬೇಕು ಅಂತ ಒಮ್ಮೆ ನೆನಸಿದ. ಅವನ ಹೆಸರು ಯೆರೆಮೀಯ. ಅವನ ಬಗ್ಗೆ ಹೆಚ್ಚನ್ನು ತಿಳಿಯೋಣ.
ಯೆರೆಮೀಯ ಯುವಕನಾಗಿದ್ದ. ಆಗ ಯೆಹೋವನು ಅವನಿಗೆ ಜನರ ಹತ್ತಿರ ಹೋಗಿ ‘ನೀವು ಕೆಟ್ಟ ಕೆಲಸ ಮಾಡುವುದನ್ನು ನಿಲ್ಲಿಸಬೇಕು’ ಎಂದು ಹೇಳುವ ಕೆಲಸ ಕೊಟ್ಟನು. ಇದನ್ನು ಮಾಡಲು ಯೆರೆಮೀಯನಿಗೆ ತುಂಬ ಕಷ್ಟವಾಯಿತು. ಹೆದರಿಕೆ ಆಯಿತು. ‘ನಾನು ಚಿಕ್ಕ ಹುಡುಗ. ಅವರಿಗೆ ಹೇಗೆ ಹೇಳಬೇಕಂತ ನನಗೆ ಗೊತ್ತಿಲ್ಲ’ ಅಂತ ಯೆರೆಮೀಯ ಯೆಹೋವನಿಗೆ ಹೇಳಿದ. ಆಗ ಯೆಹೋವನು ಅವನಿಗೆ ‘ಹೆದರಬೇಡ, ನಾನು ನಿನಗೆ ಸಹಾಯಮಾಡುತ್ತೇನೆ’ ಎಂದು ಹೇಳಿದ.
ಹಾಗಾಗಿ ಯೆರೆಮೀಯ ಜನರಿಗೆ ಅವರು ಕೆಟ್ಟ ಕೆಲಸ ಮಾಡುವುದನ್ನು ನಿಲ್ಲಿಸದಿದ್ದರೆ ದೇವರು ಶಿಕ್ಷೆ ಕೊಡುವನೆಂದು ಹೇಳಲು ಶುರುಮಾಡಿದ. ಜನರು ಯೆರೆಮೀಯನ ಮಾತು ಕೇಳಿದರಾ?— ಇಲ್ಲ. ಅವನನ್ನು ಗೇಲಿ ಮಾಡಿದರು. ತುಂಬ ಕೋಪ ತೋರಿಸಿದರು. ಇನ್ನೂ ಕೆಲವರು ಅವನನ್ನು ಸಾಯಿಸುವುದಕ್ಕೆ ಪ್ರಯತ್ನಿಸಿದರು! ಯೆರೆಮೀಯನಿಗೆ ಆಗ ಹೇಗನಿಸಿತು?— ಅವನಿಗೆ ತುಂಬ ಹೆದರಿಕೆ ಆಯಿತು. ‘ನಾನು ಇನ್ನು ಮುಂದೆ ಯೆಹೋವನ ಬಗ್ಗೆ ಮಾತಾಡುವುದಿಲ್ಲ’ ಅಂತ ಹೇಳಿದ. ಯೆಹೋವನ ಬಗ್ಗೆ ಮಾತಾಡುವುದನ್ನು ನಿಜವಾಗಿ ನಿಲ್ಲಿಸಿದನಾ?— ಇಲ್ಲ. ಅವನಿಗೆ ಯೆಹೋವನ ಮೇಲೆ ಎಷ್ಟು ಪ್ರೀತಿ ಇತ್ತೆಂದರೆ ಯೆಹೋವನ ಬಗ್ಗೆ ಮಾತಾಡದೇ ಇರಲು ಆಗಲಿಲ್ಲ. ಹಾಗಾಗಿ ಅವನಿಗೆ ಯಾವ ತೊಂದರೆ ಆಗದಂತೆ ಯೆಹೋವನು ಕಾಪಾಡಿದ.
ಒಂದು ದಿನ ಕೆಲವು ಕೆಟ್ಟ ಜನರು ಯೆರೆಮೀಯನನ್ನು ಸಾಯಿಸಲು ದೊಡ್ಡ ಬಾವಿಯಲ್ಲಿ ಹಾಕಿದರು. ಅದರಲ್ಲಿ ಬರೀ ಕೆಸರು ತುಂಬಿಕೊಂಡಿತ್ತು. ಅವನಿಗೆ ಊಟ ಇರಲಿಲ್ಲ, ನೀರು ಇರಲಿಲ್ಲ. ಆದರೆ ಅಲ್ಲಿಂದ ಹೊರಗೆ ಬರಲು ಯೆಹೋವನು ಅವನಿಗೆ ಸಹಾಯಮಾಡಿದನು!
ಯೆರೆಮೀಯನ ಹಾಗೇ ನೀನೇನು ಮಾಡಬೇಕು?— ಯೆರೆಮೀಯನಿಗೆ ಕೆಲವು ಸಲ ಹೆದರಿಕೆ ಆಗುತ್ತಿದ್ದರೂ ಯೆಹೋವನ ಬಗ್ಗೆ ಮಾತಾಡುವುದನ್ನು ನಿಲ್ಲಿಸಲಿಲ್ಲ. ನೀನು ಸಹ ಯೆಹೋವನ ಬಗ್ಗೆ ಮಾತಾಡುವಾಗ ಜನರು ಗೇಲಿ ಮಾಡುತ್ತಾರೆ. ಕೋಪ ಮಾಡುತ್ತಾರೆ. ಆಗ ನಿನಗೆ ಎಲ್ಲರ ಮುಂದೆ ನಾಚಿಕೆ ಆಗಬಹುದು. ಹೆದರಿಕೆಯೂ ಆಗಬಹುದು. ಆದರೆ ಯೆಹೋವನ ಬಗ್ಗೆ ಮಾತಾಡುವುದನ್ನು ಯಾವತ್ತೂ ನಿಲ್ಲಿಸಬೇಡ. ಅವನು ಯೆರೆಮೀಯನಿಗೆ ಸಹಾಯಮಾಡಿದ ಹಾಗೆ ನಿನಗೆ ಸಹ ಯಾವಾಗಲೂ ಸಹಾಯಮಾಡುವನು.
ಬೈಬಲಲ್ಲೇ ಓದೋಣ