ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 19

ಮೊದಲ ಮೂರು ಬಾಧೆಗಳು

ಮೊದಲ ಮೂರು ಬಾಧೆಗಳು

ಇಸ್ರಾಯೇಲ್ಯರು ದಾಸರಾಗಿ ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದರು. ಯೆಹೋವನು ಮೋಶೆ ಆರೋನನನ್ನು ಫರೋಹನ ಹತ್ತಿರ ಕಳುಹಿಸಿ ‘ಅರಣ್ಯದಲ್ಲಿ ನನ್ನನ್ನು ಆರಾಧಿಸಲು ನನ್ನ ಜನರನ್ನು ಹೋಗಲು ಬಿಡು ಎಂದು ಯೆಹೋವನು ಹೇಳಿದ್ದಾನೆ ಅನ್ನಿರಿ’ ಎಂದನು. ಆಗ ಫರೋಹನು ಅಹಂಕಾರದಿಂದ ‘ನಾನು ಯೆಹೋವನು ಹೇಳಿದ್ದನ್ನು ಕೇಳುವುದಿಲ್ಲ, ಅವರನ್ನು ಕಳುಹಿಸುವುದಿಲ್ಲ’ ಅಂದನು. ಆಮೇಲೆ ಇಸ್ರಾಯೇಲ್ಯರಿಗೆ ಇನ್ನೂ ಜಾಸ್ತಿ ಕಷ್ಟ ಕೊಡಲು ಶುರು ಮಾಡಿದ. ಆಗ ಯೆಹೋವನು ಫರೋಹನಿಗೆ ಪಾಠ ಕಲಿಸಿದನು. ಹೇಗೆ ಗೊತ್ತಾ? ಈಜಿಪ್ಟಿನ ಮೇಲೆ ಹತ್ತು ಬಾಧೆಗಳನ್ನು ತರುವ ಮೂಲಕ. ಯೆಹೋವನು ಮೋಶೆಗೆ ‘ಫರೋಹ ನನ್ನ ಮಾತನ್ನು ಕೇಳುತ್ತಿಲ್ಲ. ನಾಳೆ ಬೆಳಿಗ್ಗೆ ಅವನು ನೈಲ್‌ ನದಿಯ ಹತ್ತಿರ ಬರುತ್ತಾನೆ. ನೀನು ಅಲ್ಲಿಗೆ ಹೋಗಿ, ಇಸ್ರಾಯೇಲ್ಯರನ್ನು ಹೋಗಲು ಬಿಡದೇ ಇದ್ದದ್ದರಿಂದ ನೈಲ್‌ ನದಿಯ ನೀರೆಲ್ಲಾ ರಕ್ತವಾಗುವುದು ಎಂದು ಹೇಳು’ ಅಂದನು. ಮೋಶೆ ಯೆಹೋವನ ಮಾತಿಗೆ ವಿಧೇಯನಾಗಿ ಫರೋಹನ ಹತ್ತಿರ ಹೋದನು. ಫರೋಹ ನೋಡ ನೋಡುತ್ತಿದ್ದಂತೆ ಆರೋನ ತನ್ನ ಕೋಲಿಂದ ನೀರನ್ನು ಹೊಡೆದನು. ಆಗ ನೀರೆಲ್ಲಾ ರಕ್ತವಾಯಿತು. ಅದರಲ್ಲಿರುವ ಮೀನುಗಳೆಲ್ಲಾ ಸತ್ತು, ದುರ್ವಾಸನೆ ಬರಲು ಶುರುವಾಯಿತು. ನೈಲ್‌ ನದಿಯಲ್ಲಿ ಕುಡಿಯಲು ಯೋಗ್ಯವಾದ ನೀರು ಸ್ವಲ್ಪವೂ ಉಳಿಯಲಿಲ್ಲ. ಇಷ್ಟಾದರೂ ಫರೋಹ ಬುದ್ಧಿ ಕಲಿಯಲಿಲ್ಲ. ಅವನು ಇಸ್ರಾಯೇಲ್ಯರನ್ನು ಹೋಗಲು ಬಿಡಲಿಲ್ಲ.

ಏಳು ದಿನದ ನಂತರ ಯೆಹೋವನು ಮೋಶೆಗೆ ‘ನೀನು ನನ್ನ ಜನರನ್ನು ಬಿಡದಿದ್ದರೆ ಇಡೀ ದೇಶ ಕಪ್ಪೆಗಳಿಂದ ತುಂಬುತ್ತದೆ ಎಂದು ಫರೋಹನಿಗೆ ಹೇಳು’ ಅಂದನು. ಆರೋನನು ತನ್ನ ಕೋಲನ್ನು ಚಾಚಲು ಇಡೀ ದೇಶ ಕಪ್ಪೆಗಳಿಂದ ತುಂಬಿತು. ಮನೆ, ಹಾಸಿಗೆ, ಪಾತ್ರೆ ಎಲ್ಲೆಲ್ಲೂ ಬರೀ ಕಪ್ಪೆಗಳೇ! ಆಗ ಫರೋಹ ಮೋಶೆಗೆ ‘ಬಾಧೆಯನ್ನು ನಿಲ್ಲಿಸುವಂತೆ ಯೆಹೋವನಿಗೆ ಬೇಡಿಕೊ. ಆಗ ನಾನು ಇಸ್ರಾಯೇಲ್ಯರನ್ನು ಬಿಡುತ್ತೇನೆ’ ಅಂತ ಮಾತು ಕೊಟ್ಟ. ಆಗ ಯೆಹೋವನು ಬಾಧೆಯನ್ನು ನಿಲ್ಲಿಸಿದನು. ಆಮೇಲೆ ಈಜಿಪ್ಟಿನವರು ಸತ್ತ ಕಪ್ಪೆಗಳನ್ನು ರಾಶಿ ರಾಶಿಯಾಗಿ ಕೂಡಿಸಿದರು. ಇಡೀ ದೇಶ ದುರ್ವಾಸನೆಯಿಂದ ತುಂಬಿತು. ಆದರೆ ಈಗಲೂ ಫರೋಹ ಇಸ್ರಾಯೇಲ್ಯರನ್ನು ಹೋಗಲು ಬಿಡಲಿಲ್ಲ.

ಇದಾದ ಮೇಲೆ ಯೆಹೋವನು ಮೋಶೆಗೆ ‘ಆರೋನನು ಕೋಲಿನಿಂದ ಭೂಮಿಯನ್ನು ಹೊಡೆಯಲಿ. ಆಗ ಅದರ ಧೂಳು ಹೇನು ಅಥವಾ ಕಚ್ಚುವ ಚಿಕ್ಕ ಕೀಟಗಳಾಗುವವು’ ಎಂದನು. ಆರೋನ ಕೋಲನ್ನು ಚಾಚಲು ತಕ್ಷಣ ಎಲ್ಲಾ ಕಡೆ ಹೇನುಗಳು ತುಂಬಿ ಹೋದವು. ಆಗ ಫರೋಹನ ಸ್ವಂತ ಜನರೇ ‘ಈ ಬಾಧೆ ದೇವರಿಂದಲೇ ಬಂದಿದೆ’ ಅಂತ ಹೇಳಿದರು. ಆದರೆ ಫರೋಹ ಮಾತ್ರ ಇಸ್ರಾಯೇಲ್ಯರನ್ನು ಕಳುಹಿಸಲೇ ಇಲ್ಲ.

‘ನನ್ನ ಭುಜಬಲವನ್ನೂ ಪರಾಕ್ರಮವನ್ನೂ ಅವರಿಗೆ ತಿಳಿಯಪಡಿಸುವೆನು. ಆಗ ನನ್ನ ಹೆಸರು ಯೆಹೋವ ಎಂದು ಅವರಿಗೆ ಗೊತ್ತಾಗುವದು.’—ಯೆರೆಮೀಯ 16:21