ಪಾಠ 28
ಬಿಳಾಮನ ಕತ್ತೆ ಮಾತಾಡಿತು
ಇಸ್ರಾಯೇಲ್ಯರು ಅರಣ್ಯ ಪ್ರದೇಶದಲ್ಲಿದ್ದು ಸುಮಾರು ನಲ್ವತ್ತು ವರುಷಗಳಾಗಿವೆ. ಅವರು ಅನೇಕ ಬಲವಾದ ಪಟ್ಟಣಗಳನ್ನು ಜಯಿಸಿದ್ದರು. ಈಗ ಅವರಿಗೆ ವಾಗ್ದಾತ್ತ ದೇಶವನ್ನು ಪ್ರವೇಶಿಸುವ ಸಮಯ ಬಂದಿತ್ತು. ಆದ್ದರಿಂದ ಯೊರ್ದನ್ ನದಿಯ ಪೂರ್ವದಲ್ಲಿರುವ ಮೋವಾಬಿನ ಬಯಲು ಪ್ರದೇಶದಲ್ಲಿ ತಂಗಿದ್ದರು. ಅವರನ್ನು ಕಂಡು ಮೋವಾಬಿನ ಅರಸ ಬಾಲಾಕನಿಗೆ ಭಯವಾಯಿತು. ತನ್ನ ದೇಶವು ಅವರ ಪಾಲಾಗುತ್ತೋ ಅಂತ ಹೆದರಿದ. ಆದ್ದರಿಂದ ಅವನು ಬಿಳಾಮ ಎಂಬವನನ್ನು ಇಸ್ರಾಯೇಲ್ಯರನ್ನು ಶಪಿಸಲು ಮೋವಾಬಿಗೆ ಕರೆದನು.
ಆದರೆ ಯೆಹೋವನು ಬಿಳಾಮನಿಗೆ, ‘ನೀನು ಇಸ್ರಾಯೇಲ್ಯರನ್ನು ಶಪಿಸಲೇಬಾರದು’ ಅಂದನು. ಹಾಗಾಗಿ ಬಿಳಾಮನು ಮೋವಾಬಿಗೆ ಹೋಗಲು ನಿರಾಕರಿಸಿದ. ಆಗ ಅರಸನು ಬಿಳಾಮನನ್ನು ಎರಡನೇ ಸಾರಿ ಕರೆದು ‘ನಿನಗೆ ಬೇಕಾದದೆಲ್ಲವನ್ನು ಕೊಡುತ್ತೇನೆ’ ಎಂದು ಮಾತುಕೊಟ್ಟ. ಆದರೂ ಬಿಳಾಮನು ಒಪ್ಪಿಕೊಳ್ಳಲಿಲ್ಲ. ಬಳಿಕ ದೇವರು ಹೇಳಿದ್ದು: ‘ನೀನು ಹೋಗಬಹುದು. ಆದರೆ ನಾನು ನಿನಗೆ ಹೇಳುವುದನ್ನು ಮಾತ್ರ ನೀನು ಹೇಳಬೇಕು.’
ಬಿಳಾಮನು ತನ್ನ ಕತ್ತೆಯನ್ನೇರಿ ಮೋವಾಬಿಗೆ ಹೋದನು. ಇಸ್ರಾಯೇಲ್ಯರನ್ನು ಶಪಿಸಬಾರದೆಂದು ಯೆಹೋವನು ಹೇಳಿದ್ದರೂ ಅವನು ಅವರನ್ನು ಶಪಿಸಬೇಕೆಂದುಕೊಂಡನು. ದಾರಿಯಲ್ಲಿ ಯೆಹೋವನ ದೂತನು ಮೂರು ಬಾರಿ ಕಾಣಿಸಿಕೊಂಡನು. ಬಿಳಾಮನಿಗೆ ದೇವದೂತನು ಕಾಣಿಸಲಿಲ್ಲ. ಆದರೆ ಅವನ ಕತ್ತೆಗೆ ಕಾಣಿಸಿದನು. ಮೊದಲಸಲ ಕಾಣಿಸಿದಾಗ ಅದು ದಾರಿಯನ್ನು ಬಿಟ್ಟು ಹೊಲದ ಕಡೆಗೆ ಹೋಯಿತು. ಎರಡನೇ ಸಲ ಕಲ್ಲಿನ ಗೋಡೆಯ ಹತ್ತಿರಕ್ಕೆ ಹೋಗಿ ಬಿಳಾಮನ ಕಾಲನ್ನು ಅದುಮಿಹಾಕಿತು. ಕೊನೆಗೆ ಆ ಕತ್ತೆ ದಾರಿಯ ಮಧ್ಯೆ ಮಲಗಿಬಿಟ್ಟಿತು. ಪ್ರತಿಬಾರಿಯೂ ಬಿಳಾಮನು ಕತ್ತೆಯನ್ನು ಕೋಲಿನಿಂದ ಹೊಡೆದನು.
ನಂತರ, ಯೆಹೋವನು ಕತ್ತೆ ಮಾತಾಡುವಂತೆ ಮಾಡಿದನು. ಕತ್ತೆ ಬಿಳಾಮನಿಗೆ, ‘ನೀನು ಯಾಕೆ ನನ್ನನ್ನು ಹೊಡಿತಿದ್ದೀಯಾ? ನಾನೇನು ಮಾಡಿದೆ?’ ಎಂದು ಕೇಳಿತು. ಆಗ ಬಿಳಾಮನು ‘ನಾನು ಮೂರ್ಖನಾಗಿ ತೋರುವಂತೆ ಮಾಡಿದ್ದೀ. ನನ್ನ ಬಳಿ ಕತ್ತಿಯಿದ್ದಿದ್ದರೆ ನಿನ್ನನ್ನು ಕೊಂದೇಬಿಡುತ್ತಿದ್ದೆ’ ಎಂದ. ಆಗ ಕತ್ತೆ, ‘ಇಷ್ಟು ವರ್ಷಗಳಿಂದ ನಿನ್ನ ಸೇವೆ ಮಾಡುತ್ತಿದ್ದೀನಲ್ಲಾ, ಯಾವತ್ತಾದರೂ ಹೀಗೆ ಮಾಡಿದ್ದೀನಾ?’ ಎಂದು ಕೇಳಿತು.
ಆಗ ಯೆಹೋವನು ಬಿಳಾಮನಿಗೆ ದೇವದೂತನು ಕಾಣಿಸುವಂತೆ ಮಾಡಿದನು. ‘ಇಸ್ರಾಯೇಲ್ಯರನ್ನು ಶಪಿಸದಿರುವಂತೆ ಯೆಹೋವನು ನಿನ್ನನ್ನು ಎಚ್ಚರಿಸಿದನಲ್ಲಾ’ ಎಂದು ದೂತನು ಬಿಳಾಮನನ್ನು ಕೇಳಿದಾಗ ಅವನು, ‘ನನ್ನಿಂದ ತಪ್ಪಾಯಿತು. ಈಗ ಮನೆಗೆ ಹಿಂದಿರುಗುವೆ’ ಎಂದ. ಆಗ
ದೇವದೂತನು, ‘ನೀನು ಮೋವಾಬಿಗೆ ಹೋಗಬಹುದು. ಆದರೆ ನೀನು ಯೆಹೋವನು ಹೇಳುವುದನ್ನೇ ಹೇಳಬೇಕು’ ಎಂದು ಹೇಳಿದನು.ಬಿಳಾಮನು ಇದರಿಂದ ಪಾಠ ಕಲಿತನಾ? ಇಲ್ಲ. ಇದಾದ ಮೇಲೆ ಬಿಳಾಮ ಇಸ್ರಾಯೇಲ್ಯರನ್ನು ಮೂರು ಬಾರಿ ಶಪಿಸಲು ಪ್ರಯತ್ನಿಸಿದ. ಆದರೆ ಮೂರು ಬಾರಿಯೂ ಅವನು ಇಸ್ರಾಯೇಲ್ಯರನ್ನು ಆಶೀರ್ವದಿಸುವಂತೆ ಯೆಹೋವನು ಮಾಡಿದನು. ಕೊನೆಗೆ ಇಸ್ರಾಯೇಲ್ಯರು ಮೋವಾಬನ್ನು ಆಕ್ರಮಿಸಿದರು ಮತ್ತು ಬಿಳಾಮ ಕೊಲ್ಲಲ್ಪಟ್ಟನು. ಮೊದಲನೇ ಸಲವೇ ಬಿಳಾಮ ಯೆಹೋವನ ಮಾತು ಕೇಳಿದ್ದರೆ ಎಷ್ಟು ಒಳ್ಳೇದಿತ್ತಲ್ಲಾ?
“ಪ್ರತಿಯೊಂದು ರೀತಿಯ ದುರಾಶೆಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ. ಏಕೆಂದರೆ ಒಬ್ಬನಿಗೆ ಹೇರಳವಾಗಿ ಆಸ್ತಿಯಿರುವುದಾದರೂ ಅವನು ಹೊಂದಿರುವ ಆಸ್ತಿಯಿಂದ ಅವನಿಗೆ ಜೀವವು ದೊರಕಲಾರದು.”—ಲೂಕ 12:15