ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 30

ರಾಹಾಬ ಗೂಢಚಾರರನ್ನು ಅಡಗಿಸಿಟ್ಟಳು

ರಾಹಾಬ ಗೂಢಚಾರರನ್ನು ಅಡಗಿಸಿಟ್ಟಳು

ಇಸ್ರಾಯೇಲ್ಯ ಗೂಢಚಾರರು ಯೆರಿಕೋ ಪಟ್ಟಣಕ್ಕೆ ಹೋದಾಗ ರಾಹಾಬ ಎಂಬ ಸ್ತ್ರೀಯ ಮನೆಯಲ್ಲಿ ಉಳಿದುಕೊಂಡರು. ಈ ವಿಷಯ ಯೆರಿಕೋವಿನ ರಾಜನಿಗೆ ಗೊತ್ತಾಯಿತು. ಆಗ ಅವನು ತನ್ನ ಸೈನಿಕರನ್ನು ರಾಹಾಬಳ ಮನೆಗೆ ಕಳುಹಿಸಿದ. ಆದರೆ ರಾಹಾಬಳು ಆ ಇಬ್ಬರು ಗೂಢಚಾರರನ್ನು ಮನೆಯ ಮಾಳಿಗೆಯ ಮೇಲೆ ಅಡಗಿಸಿಟ್ಟಳು. ಬಂದ ಸೈನಿಕರನ್ನು ಬೇರೆ ದಾರಿಯಲ್ಲಿ ಕಳುಹಿಸಿದಳು. ಅವರು ಹೋದ ಮೇಲೆ ಅವಳು ಗೂಢಚಾರರಿಗೆ ‘ನಾನು ನಿಮಗೆ ಸಹಾಯ ಮಾಡುತ್ತೇನೆ ಏಕೆಂದರೆ ಯೆಹೋವನು ನಿಮ್ಮ ಕಡೆ ಇದ್ದಾನೆ ಮತ್ತು ನೀವು ಈ ದೇಶವನ್ನು ವಶ ಮಾಡಿಕೊಳ್ಳುತ್ತೀರ ಎಂದು ನನಗೆ ಗೊತ್ತು. ದಯವಿಟ್ಟು ನನ್ನ ಕುಟುಂಬವನ್ನು ಕಾಪಾಡುತ್ತೀರೆಂದು ನನಗೆ ಮಾತು ಕೊಡಿ’ ಎಂದಳು.

ಆಗ ಆ ಗೂಢಚಾರರು ರಾಹಾಬಳಿಗೆ ‘ನಿನ್ನ ಮನೆಯ ಒಳಗಿರುವ ಯಾರಿಗೂ ಯಾವುದೇ ಹಾನಿ ಆಗುವುದಿಲ್ಲ ಎಂದು ನಾವು ಮಾತು ಕೊಡುತ್ತೇವೆ’ ಅಂದರು. ಅಲ್ಲದೇ, ‘ನಿನ್ನ ಮನೆಯ ಕಿಟಕಿಗೆ ಒಂದು ಕೆಂಪು ಹಗ್ಗವನ್ನು ಕಟ್ಟು. ಆಗ ನಿನ್ನ ಕುಟುಂಬವು ರಕ್ಷಿಸಲ್ಪಡುವುದು’ ಎಂದು ಹೇಳಿದರು.

ರಾಹಾಬಳು ಕಿಟಕಿಗೆ ಒಂದು ಹಗ್ಗ ಕಟ್ಟಿ ಆ ಗೂಢಚಾರರು ಕೆಳಗೆ ಇಳಿಯಲು ಸಹಾಯ ಮಾಡಿದಳು. ಅವರು ಮೂರು ದಿನ ಬೆಟ್ಟದಲ್ಲಿ ಅಡಗಿಕೊಂಡಿದ್ದು ನಂತರ ಯೆಹೋಶುವನ ಹತ್ತಿರ ಹೋದರು. ಇದಾದ ಮೇಲೆ ಇಸ್ರಾಯೇಲ್ಯರು ಯೊರ್ದನ್‌ ನದಿಯನ್ನು ದಾಟಿ ಯೆರಿಕೋ ಪಟ್ಟಣವನ್ನು ವಶಮಾಡಿಕೊಳ್ಳಲು ಸಿದ್ಧರಾದರು. ಇಸ್ರಾಯೇಲ್ಯರು ವಶಮಾಡಿಕೊಂಡ ಮೊದಲ ಪಟ್ಟಣ ಇದಾಗಿತ್ತು. ಯೆಹೋವನು ಇಸ್ರಾಯೇಲ್ಯರಿಗೆ ದಿನಕ್ಕೆ ಒಂದು ಸುತ್ತಿನಂತೆ ಆರು ದಿನ ಆ ಪಟ್ಟಣವನ್ನು ಸುತ್ತು ಹಾಕಲು ಹೇಳಿದನು. ಏಳನೇ ದಿನ ಅವರು ಆ ಪಟ್ಟಣವನ್ನು ಏಳು ಬಾರಿ ಸುತ್ತು ಹಾಕಿದರು. ನಂತರ ಯಾಜಕರು ಕೊಂಬುಗಳನ್ನು ಊದಿದರು. ಸೈನಿಕರು ತಮ್ಮಿಂದ ಎಷ್ಟು ಆಗುತ್ತೋ ಅಷ್ಟು ಜೋರಾಗಿ ಆರ್ಭಟಿಸಿದರು. ಆಗ ಆ ಪಟ್ಟಣದ ಗೋಡೆಗಳು ಕುಸಿದು ಬಿದ್ದು ನೆಲ ಸಮವಾದವು! ಆದರೆ ಗೋಡೆಯ ಮೇಲೆ ಇದ್ದ ರಾಹಾಬಳ ಮನೆಗೆ ಮಾತ್ರ ಏನೂ ಆಗಲಿಲ್ಲ. ಹೀಗೆ ರಾಹಾಬ ಮತ್ತು ಅವಳ ಕುಟುಂಬ ರಕ್ಷಿಸಲ್ಪಟ್ಟಿತು. ಇದಕ್ಕೆ ಕಾರಣ ಅವಳು ಯೆಹೋವನಲ್ಲಿ ಭರವಸೆಯಿಟ್ಟಿದ್ದಳು.

“ಅದೇ ರೀತಿಯಲ್ಲಿ ರಾಹಾಬಳು ಸಹ ಸಂದೇಶವಾಹಕರನ್ನು ಆದರಾತಿಥ್ಯದಿಂದ ಬರಮಾಡಿಕೊಂಡು ಅವರನ್ನು ಇನ್ನೊಂದು ಮಾರ್ಗವಾಗಿ ಕಳುಹಿಸಿಕೊಟ್ಟ ಬಳಿಕವೇ ಕ್ರಿಯೆಗಳ ಮೂಲಕ ನೀತಿವಂತಳೆಂದು ನಿರ್ಣಯಿಸಲ್ಪಟ್ಟಳಲ್ಲವೆ?”—ಯಾಕೋಬ 2:25