ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 39

ಇಸ್ರಾಯೇಲ್ಯರ ಮೊದಲ ರಾಜ

ಇಸ್ರಾಯೇಲ್ಯರ ಮೊದಲ ರಾಜ

ಯೆಹೋವನು ಇಸ್ರಾಯೇಲ್ಯರನ್ನು ಮಾರ್ಗದರ್ಶಿಸಲು ನ್ಯಾಯಸ್ಥಾಪಕರನ್ನು ನೇಮಿಸಿದ್ದನು. ಆದರೆ ಇಸ್ರಾಯೇಲ್ಯರಿಗೆ ಒಬ್ಬ ರಾಜ ಬೇಕಿದ್ದ. ಅವರು ಸಮುವೇಲನಿಗೆ ‘ಎಲ್ಲಾ ಜನಾಂಗಗಳಿಗೆ ರಾಜರಿದ್ದಾರೆ. ನಮಗೂ ಒಬ್ಬ ರಾಜ ಬೇಕು’ ಅಂದರು. ಇದು ತಪ್ಪು ಎಂದು ಸಮುವೇಲನಿಗೆ ಗೊತ್ತಿತ್ತು. ಹಾಗಾಗಿ ಅವನು ಈ ವಿಷಯದ ಬಗ್ಗೆ ಯೆಹೋವನಿಗೆ ಪ್ರಾರ್ಥಿಸಿದ. ಆಗ ಯೆಹೋವನು ಅವನಿಗೆ ‘ಈ ಜನ ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸುತ್ತಿದ್ದಾರೆ. ನಿಮಗೆ ಒಬ್ಬ ರಾಜನನ್ನು ನೇಮಿಸುತ್ತೇನೆ. ಆದರೆ ರಾಜನಿಂದ ನೀವು ತುಂಬ ಕಷ್ಟ ಅನುಭವಿಸುತ್ತೀರ ಎಂದು ಜನರಿಗೆ ಹೇಳು’ ಅಂದನು. ಇದನ್ನು ಸಮುವೇಲ ತಿಳಿಸಿದರೂ ಜನರು ‘ಪರವಾಗಿಲ್ಲ. ನಮಗೊಬ್ಬ ರಾಜ ಬೇಕೇ ಬೇಕು’ ಅಂದರು.

ಯೆಹೋವನು ಸಮುವೇಲನಿಗೆ ‘ಇಸ್ರಾಯೇಲ್ಯರ ರಾಜನಾಗಲು ನಾನು ಸೌಲನನ್ನು ಆರಿಸಿದ್ದೇನೆ’ ಎಂದನು. ಸೌಲ ರಾಮದಲ್ಲಿದ್ದ ಸಮುವೇಲನನ್ನು ಭೇಟಿಯಾಗಲು ಹೋದಾಗ ಸಮುವೇಲ ಅವನ ತಲೆಯ ಮೇಲೆ ಎಣ್ಣೆ ಸುರಿದು ಅವನನ್ನು ರಾಜನಾಗಿ ಅಭಿಷೇಕಿಸಿದ.

ನಂತರ ಹೊಸ ರಾಜನನ್ನು ತೋರಿಸಲು ಸಮುವೇಲ ಇಸ್ರಾಯೇಲ್ಯರೆಲ್ಲರನ್ನು ಕೂಡಿಸಿದ. ಆದರೆ ಸೌಲ ಅಲ್ಲಿರಲಿಲ್ಲ. ಯಾಕೆ ಗೊತ್ತಾ? ಯಾಕೆಂದರೆ ಅವನು ಸಾಮಾನುಗಳ ಮಧ್ಯೆ ಬಚ್ಚಿಟ್ಟುಕೊಂಡಿದ್ದ. ಕೊನೆಗೆ ಜನರು ಅವನನ್ನು ಹುಡುಕಿ ಎಲ್ಲರ ಮಧ್ಯೆ ಕರೆತಂದು ನಿಲ್ಲಿಸಿದರು. ಸೌಲ ಬೇರೆಯವರಿಗಿಂತ ತುಂಬ ಎತ್ತರವಾಗಿದ್ದು ಅತಿ ಸುಂದರನಾಗಿದ್ದ. ಸಮುವೇಲ ಜನರಿಗೆ ‘ಯೆಹೋವನು ಆರಿಸಿದ ವ್ಯಕ್ತಿ ಇವನೇ’ ಎಂದನು. ಆಗ ಜನರು ‘ಅರಸನು ಚಿರಂಜೀವಿಯಾಗಿರಲಿ!’ ಎಂದು ಆರ್ಭಟಿಸಿದರು.

ಮೊದಮೊದಲು ರಾಜ ಸೌಲ ಸಮುವೇಲನ ಮಾತನ್ನು ಕೇಳುತ್ತಿದ್ದ ಹಾಗೂ ಯೆಹೋವನಿಗೆ ವಿಧೇಯನಾಗಿದ್ದ. ಆದರೆ ನಂತರ ಅವನು ಬದಲಾದ. ಉದಾಹರಣೆಗೆ, ರಾಜರು ಯಜ್ಞಗಳನ್ನು ಅರ್ಪಿಸುವಂತಿರಲಿಲ್ಲ. ಒಮ್ಮೆ ಸಮುವೇಲ ತಾನು ಬರುವ ತನಕ ಕಾಯಲು ಸೌಲನಿಗೆ ಹೇಳಿದನು. ಆದರೆ ಸಮುವೇಲ ಬರುವುದು ಸ್ವಲ್ಪ ತಡವಾಯಿತು. ಆದ್ದರಿಂದ ಸೌಲನೇ ಯಜ್ಞವನ್ನು ಅರ್ಪಿಸಿದ. ಆಗ ಸಮುವೇಲನಿಗೆ ಹೇಗನಿಸಿರಬೇಕು? ಅವನು ಸೌಲನಿಗೆ ‘ನೀನು ಯೆಹೋವನಿಗೆ ಅವಿಧೇಯನಾಗಬಾರದಿತ್ತು’ ಅಂದನು. ಸೌಲ ಈ ತಪ್ಪಿನಿಂದ ಪಾಠ ಕಲಿತನಾ?

ನಂತರ ಸೌಲ ಅಮಾಲೇಕ್ಯರ ವಿರುದ್ಧ ಯುದ್ಧಕ್ಕೆ ಹೊರಟಾಗ ‘ಅವರಲ್ಲಿ ಯಾರನ್ನು ಉಳಿಸಬೇಡ’ ಎಂದು ಸಮುವೇಲ ತಿಳಿಸಿದ್ದ. ಆದರೆ ಸೌಲ ಅಮಾಲೇಕ್ಯರ ಅರಸನಾದ ಆಗಾಗನನ್ನು ಕೊಲ್ಲಲಿಲ್ಲ. ಆದ್ದರಿಂದ ಯೆಹೋವನು ಸಮುವೇಲನಿಗೆ ‘ಸೌಲನು ನನ್ನನ್ನು ಬಿಟ್ಟುಬಿಟ್ಟಿದ್ದಾನೆ. ನನ್ನ ಮಾತನ್ನು ಕೇಳುತ್ತಿಲ್ಲ’ ಅಂದನು. ಸಮುವೇಲನಿಗೆ ತುಂಬ ದುಃಖ ಆಯಿತು. ಅವನು ಸೌಲನಿಗೆ ‘ನೀನು ಯೆಹೋವನಿಗೆ ವಿಧೇಯನಾಗದೇ ಹೋದ್ದರಿಂದ ಆತನು ಬೇರೊಬ್ಬನನ್ನು ರಾಜನಾಗಲು ಆರಿಸುತ್ತಾನೆ’ ಎಂದ. ಸಮುವೇಲ ಅಲ್ಲಿಂದ ಹೋಗಲು ಹಿಂದೆ ತಿರುಗಿದಾಗ ಸೌಲ ಅವನ ಮೇಲಂಗಿಯನ್ನು ಹಿಡಿದು ಎಳೆದ. ಅಂಗಿ ಹರಿದು ಹೋಯಿತು. ಆಗ ಸಮುವೇಲ ಸೌಲನಿಗೆ ‘ಯೆಹೋವನು ರಾಜ್ಯವನ್ನು ನಿನ್ನಿಂದ ತೆಗೆದುಬಿಡುವನು’ ಅಂದ. ಯೆಹೋವನು ತನ್ನನ್ನು ಪ್ರೀತಿಸಿ, ವಿಧೇಯತೆ ತೋರಿಸುವ ವ್ಯಕ್ತಿಗೆ ರಾಜ್ಯವನ್ನು ಕೊಡಲಿದ್ದನು.

“ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮ.”—1 ಸಮುವೇಲ 15:22