ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 43

ರಾಜ ದಾವೀದ ಮಾಡಿದ ದೊಡ್ಡ ಪಾಪ

ರಾಜ ದಾವೀದ ಮಾಡಿದ ದೊಡ್ಡ ಪಾಪ

ಸೌಲ ಸತ್ತ ನಂತರ ದಾವೀದ ರಾಜನಾದ. ಆಗ ಅವನಿಗೆ 30 ವರ್ಷ. ಕೆಲವು ವರ್ಷಗಳ ನಂತರ ಅವನು ಒಂದು ದೊಡ್ಡ ತಪ್ಪು ಮಾಡಿದ. ಒಂದಿನ ರಾತ್ರಿ ದಾವೀದ ತನ್ನ ಅರಮನೆಯ ಮಾಳಿಗೆಯ ಮೇಲಿಂದ ಸುಂದರ ಹೆಂಗಸನ್ನು ನೋಡಿದ. ಅವಳ ಹೆಸರು ಬತ್ಷೆಬೆ, ಅವಳು ಸೈನಿಕನಾದ ಊರೀಯನ ಹೆಂಡತಿ ಎಂದು ದಾವೀದನಿಗೆ ಗೊತ್ತಾಯಿತು. ದಾವೀದ ಬತ್ಷೆಬೆಯನ್ನು ತನ್ನ ಅರಮನೆಗೆ ಕರೆಸಿ ಅವಳೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಂಡ. ಅವಳು ಗರ್ಭಿಣಿಯಾದಳು. ಈ ತಪ್ಪನ್ನು ಮುಚ್ಚಿಹಾಕಲು ದಾವೀದ ಪ್ರಯತ್ನಿಸಿದ. ಅವನು ತನ್ನ ಸೇನಾಧಿಪತಿಗೆ ‘ಯುದ್ಧದಲ್ಲಿ ಊರೀಯನನ್ನು ಮುಂದಿನ ಸಾಲಿನಲ್ಲಿ ನಿಲ್ಲಿಸಿ ನೀವೆಲ್ಲರೂ ಹಿಂದಕ್ಕೆ ಸರಿಯಿರಿ’ ಅಂದನು. ಹೀಗೆ ಯುದ್ಧದಲ್ಲಿ ಊರೀಯನನ್ನು ಕೊಲ್ಲಲಾಯಿತು. ನಂತರ ದಾವೀದ ಬತ್ಷೆಬೆಯನ್ನು ಮದುವೆಯಾದ.

ಆದರೆ ದಾವೀದ ಮಾಡಿದ ಕೆಟ್ಟ ಕೆಲಸಗಳನ್ನು ಯೆಹೋವನು ನೋಡುತ್ತಿದ್ದ. ಆತ ಏನು ಮಾಡಿದ ಗೊತ್ತಾ? ಪ್ರವಾದಿ ನಾತಾನನನ್ನು ದಾವೀದನ ಹತ್ತಿರ ಕಳುಹಿಸಿದ. ನಾತಾನ ದಾವೀದನಿಗೆ ‘ಒಬ್ಬ ಶ್ರೀಮಂತನ ಹತ್ತಿರ ಅನೇಕ ಕುರಿಗಳಿದ್ದವು. ಬಡವನ ಹತ್ತಿರ ಒಂದೇ ಒಂದು ಕುರಿಮರಿ ಇತ್ತು. ಅವನು ಅದನ್ನು ತುಂಬಾ ಪ್ರೀತಿಸುತ್ತಿದ್ದ. ಆದರೆ ಒಂದಿನ ಶ್ರೀಮಂತ ಆ ಬಡವನ ಹತ್ತಿರ ಇದ್ದ ಒಂದೇ ಒಂದು ಕುರಿಮರಿಯನ್ನು ತೆಗೆದುಕೊಂಡುಬಿಟ್ಟ’ ಎಂದ. ಇದನ್ನು ಕೇಳಿದಾಗ ದಾವೀದ ಕೋಪಗೊಂಡು ‘ಆ ಶ್ರೀಮಂತ ಸಾಯಲೇಬೇಕು!’ ಅಂದ. ಆಗ ನಾತಾನ ‘ಆ ಶ್ರೀಮಂತ ನೀನೇ!’ ಅಂದಾಗ ದಾವೀದನಿಗೆ ತನ್ನ ತಪ್ಪಿನ ಅರಿವಾಯಿತು. ‘ನಾನು ಯೆಹೋವನ ವಿರುದ್ಧ ತಪ್ಪು ಮಾಡಿದ್ದೇನೆ’ ಎಂದು ಪಶ್ಚಾತ್ತಾಪ ಪಟ್ಟ. ದಾವೀದ ಮಾಡಿದ ತಪ್ಪಿನಿಂದ ಅವನು ಮತ್ತೆ ಅವನ ಕುಟುಂಬ ತುಂಬಾ ತೊಂದರೆಗಳನ್ನು ಅನುಭವಿಸಿದರು. ಆದರೆ ಅವನು ಪ್ರಾಮಾಣಿಕ ಮತ್ತು ದೀನನಾಗಿದ್ದರಿಂದ ಯೆಹೋವನು ಅವನನ್ನು ಸಾಯಿಸಲಿಲ್ಲ.

ಯೆಹೋವನ ಆರಾಧನೆಗಾಗಿ ಒಂದು ದೇವಾಲಯವನ್ನು ಕಟ್ಟಬೇಕೆನ್ನುವುದು ದಾವೀದನ ಮಹಾದಾಸೆಯಾಗಿತ್ತು. ಆದರೆ ಆಲಯವನ್ನು ಕಟ್ಟಲು ಯೆಹೋವನು ದಾವೀದನ ಮಗನಾದ ಸೊಲೊಮೋನನನ್ನು ಆರಿಸಿದ. ಹಾಗಂತ ದಾವೀದ ಸುಮ್ಮನೆ ಕೈಕಟ್ಟಿ ಕೂರಲಿಲ್ಲ. ಬದಲಿಗೆ ದೇವಾಲಯ ಕಟ್ಟಲು ಬೇಕಾದ ವಸ್ತುಗಳನ್ನು ಕೂಡಿಸಿದ. ದಾವೀದ ಸೊಲೊಮೋನನಿಗೆ ‘ಯೆಹೋವನ ದೇವಾಲಯ ಭವ್ಯವಾಗಿರಬೇಕು. ನೀನಿನ್ನೂ ಚಿಕ್ಕವನು. ದೇವಾಲಯಕ್ಕೆ ಬೇಕಾದ ವಸ್ತುಗಳನ್ನು ನಾನು ನಿನಗೆ ಸಿದ್ಧ ಮಾಡಿಕೊಡುತ್ತೇನೆ’ ಅಂದ. ದಾವೀದ ದೇವಾಲಯ ಕಟ್ಟಲು ತನ್ನ ಸ್ವಂತ ಬೊಕ್ಕಸದಿಂದ ಹೇರಳವಾಗಿ ಹಣ ನೀಡಿದ. ನಿಪುಣ ಕೆಲಸಗಾರರನ್ನು ನೇಮಿಸಿದ. ಚಿನ್ನ, ಬೆಳ್ಳಿ, ತೂರ್‌ ಮತ್ತು ಚೀದೋನಿನಿಂದ ದೇವದಾರು ಮರಗಳನ್ನು ಸಂಗ್ರಹಿಸಿದ. ದಾವೀದ ಸಾಯುವುದಕ್ಕಿಂತ ಮುಂಚೆ ದೇವಾಲಯದ ನೀಲಿನಕ್ಷೆಯನ್ನು ಸೊಲೊಮೋನನಿಗೆ ನೀಡಿ ‘ಇವುಗಳನ್ನು ಬರೆಯಲು ಯೆಹೋವನೇ ನನಗೆ ತಿಳಿಸಿದ. ಯೆಹೋವನು ನಿನಗೆ ಸಹಾಯ ಮಾಡುತ್ತಾನೆ. ಭಯಪಡಬೇಡ, ಧೈರ್ಯದಿಂದ ಕೆಲಸವನ್ನು ಆರಂಭಿಸು’ ಎಂದ.

“ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು.”—ಜ್ಞಾನೋಕ್ತಿ 28:13