ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 46

ಕರ್ಮೆಲ್‌ಬೆಟ್ಟದಲ್ಲಿ ಒಂದು ಪರೀಕ್ಷೆ

ಕರ್ಮೆಲ್‌ಬೆಟ್ಟದಲ್ಲಿ ಒಂದು ಪರೀಕ್ಷೆ

ಇಸ್ರಾಯೇಲಿನ ಹತ್ತು ಕುಲಗಳನ್ನು ಆಳಿದ ಅನೇಕ ರಾಜರು ಕೆಟ್ಟವರಾಗಿದ್ದರು. ಅವರಲ್ಲಿ ತುಂಬ ಕೆಟ್ಟವನು ಅಹಾಬ. ಅವನು ಬಾಳನನ್ನು ಆರಾಧಿಸುವ ಒಬ್ಬ ದುಷ್ಟ ಹೆಂಗಸನ್ನು ಮದುವೆಯಾದ. ಅವಳೇ ಈಜೆಬೆಲ. ಅಹಾಬ ಮತ್ತು ಈಜೆಬೆಲಳು ದೇಶದಲ್ಲೆಲ್ಲಾ ಬಾಳನ ಆರಾಧನೆಯನ್ನು ಆರಂಭಿಸಿದರು ಮತ್ತು ಯೆಹೋವನ ಅನೇಕ ಪ್ರವಾದಿಗಳನ್ನು ಕೊಲ್ಲಿಸಿದರು. ಆಗ ಯೆಹೋವನು ಏನು ಮಾಡಿದ? ಒಂದು ಸಂದೇಶವನ್ನು ತಿಳಿಸಲು ಆತನು ಪ್ರವಾದಿಯಾದ ಎಲೀಯನನ್ನು ಅಹಾಬನ ಬಳಿ ಕಳುಹಿಸಿದ.

ಎಲೀಯನು ಅಹಾಬನಿಗೆ ‘ನೀನು ಕೆಟ್ಟ ಕೆಲಸಗಳನ್ನು ಮಾಡಿದ್ದರಿಂದ ಇಸ್ರಾಯೇಲಿನಲ್ಲಿ ಮಳೆಯಾಗುವುದಿಲ್ಲ’ ಅಂದನು. ಮುಂದಿನ ಮೂರು ವರ್ಷಕ್ಕಿಂತ ಹೆಚ್ಚು ಸಮಯ ಮಳೆ ಬೆಳೆ ಆಗಲಿಲ್ಲ. ಇದರಿಂದ ಜನರಿಗೆ ಹೊಟ್ಟೆಗಿಲ್ಲದಂತಾಯಿತು. ನಂತರ ಯೆಹೋವನು ಎಲೀಯನನ್ನು ಅಹಾಬನ ಹತ್ತಿರ ಕಳುಹಿಸಿದ. ಅಹಾಬ ಎಲೀಯನಿಗೆ ‘ಆಪತ್ತನ್ನು ಬರಮಾಡಿದವನೇ! ಇದಕ್ಕೆಲ್ಲಾ ನೀನೇ ಕಾರಣ’ ಅಂದನು. ಅದಕ್ಕೆ ಎಲೀಯ ‘ಬರಗಾಲಕ್ಕೆ ಕಾರಣ ನಾನಲ್ಲ, ಬಾಳನನ್ನು ಆರಾಧಿಸುತ್ತಿರುವ ನೀನೇ. ಸತ್ಯ ದೇವರು ಯಾರೆಂದು ತಿಳಿಯಲು ನಾವೊಂದು ಪರೀಕ್ಷೆ ಮಾಡೋಣ. ಜನರನ್ನು ಹಾಗೂ ಬಾಳನ ಪ್ರವಾದಿಗಳನ್ನೂ ಕರ್ಮೆಲ್‌ ಬೆಟ್ಟಕ್ಕೆ ಬರಲು ಹೇಳು’ ಅಂದನು.

ಜನರೆಲ್ಲರೂ ಬೆಟ್ಟಕ್ಕೆ ಬಂದರು. ಆಗ ಎಲೀಯ ‘ಮನಸ್ಸಿನಲ್ಲಿ ತೀರ್ಮಾನ ಮಾಡಿಕೊಳ್ಳಿ. ಯೆಹೋವನು ಸತ್ಯ ದೇವರಾಗಿದ್ದರೆ ಆತನನ್ನು ಹಿಂಬಾಲಿಸಿ. ಬಾಳನು ದೇವರಾಗಿದ್ದರೆ ಅವನನ್ನು ಹಿಂಬಾಲಿಸಿ. ನಾನೊಂದು ಸವಾಲನ್ನು ನಿಮ್ಮ ಮುಂದಿಡುತ್ತಿದ್ದೇನೆ. ಬಾಳನ 450 ಪ್ರವಾದಿಗಳು ಯಜ್ಞವನ್ನು ಸಿದ್ಧಮಾಡಿ ಬಾಳನಿಗೆ ಪ್ರಾರ್ಥನೆ ಮಾಡಲಿ. ನಾನೂ ಯಜ್ಞವನ್ನು ಸಿದ್ಧಪಡಿಸಿ ಯೆಹೋವನಿಗೆ ಪ್ರಾರ್ಥಿಸುತ್ತೇನೆ. ಯಾರು ಬೆಂಕಿಯ ಮೂಲಕ ಉತ್ತರ ಕೊಡುತ್ತಾರೋ ಅವರೇ ಸತ್ಯ ದೇವರು’ ಅಂದನು. ಇದಕ್ಕೆ ಜನ ಒಪ್ಪಿದರು.

ಬಾಳನ ಪ್ರವಾದಿಗಳು ಯಜ್ಞವನ್ನು ಸಿದ್ಧಮಾಡಿದರು. ನಂತರ ‘ಬಾಳನೇ, ನಮಗೆ ಉತ್ತರ ಕೊಡು!’ ಎಂದು ಇಡೀ ದಿನ ಕೂಗಿದರು. ಆದರೆ ಅವರ ಪ್ರಾರ್ಥನೆಗೆ ಬಾಳ ಉತ್ತರ ಕೊಡಲಿಲ್ಲ. ಆಗ ಎಲೀಯ ಅವರನ್ನು ಅಪಹಾಸ್ಯ ಮಾಡುತ್ತಾ ‘ಇನ್ನೂ ಗಟ್ಟಿಯಾಗಿ ಕೂಗಿ. ಅವನು ನಿದ್ದೆ ಮಾಡುತ್ತಿರಬೇಕು. ಅವನನ್ನು ಯಾರಾದರೂ ಎಬ್ಬಿಸಬೇಕೇನೋ’ ಅಂದ. ಸಂಜೆ ಆಯಿತು. ಬಾಳನ ಪ್ರವಾದಿಗಳು ಇನ್ನೂ ಪ್ರಾರ್ಥಿಸುತ್ತಲೇ ಇದ್ದರು. ಆದರೆ ಬಾಳನಿಂದ ಯಾವುದೇ ಉತ್ತರ ಬರಲಿಲ್ಲ.

ಎಲೀಯ ತನ್ನ ಯಜ್ಞವನ್ನು ವೇದಿಯ ಮೇಲಿಟ್ಟು ಅದರ ಸುತ್ತಲು ನೀರನ್ನು ಸುರಿದನು. ನಂತರ ‘ಯೆಹೋವನೇ, ನೀನೇ ಸತ್ಯ ದೇವರು ಎನ್ನುವುದನ್ನು ಈ ಜನರು ತಿಳಿಯುವ ಹಾಗೆ ಮಾಡು’ ಎಂದು ಪ್ರಾರ್ಥಿಸಿದನು. ತಕ್ಷಣ ಯೆಹೋವನು ಬೆಂಕಿಯನ್ನು ಕಳುಹಿಸಿ ಯಜ್ಞವನ್ನು ದಹಿಸುವಂತೆ ಮಾಡಿದನು. ಆಗ ಜನರೆಲ್ಲರು ‘ಯೆಹೋವನೇ ಸತ್ಯ ದೇವರು!’ ಎಂದು ಕೂಗಿದರು. ನಂತರ ಎಲೀಯ ‘ಬಾಳನ ಪ್ರವಾದಿಗಳನ್ನು ಹಿಡಿಯಿರಿ. ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳಬಾರದು’ ಅಂದನು. ಆ ದಿನ ಬಾಳನ 450 ಮಂದಿ ಪ್ರವಾದಿಗಳನ್ನು ಕೊಲ್ಲಲಾಯಿತು.

ನಂತರ ಸಮುದ್ರದ ಕಡೆಯಿಂದ ಚಿಕ್ಕ ಮೋಡವೊಂದು ಬರುತ್ತಿರುವುದನ್ನು ನೋಡಿದಾಗ ಎಲೀಯನು ಅಹಾಬನಿಗೆ ‘ತುಂಬ ಮಳೆ ಬರಲಿದೆ. ರಥವನ್ನು ಹತ್ತಿ ಮನೆಗೆ ಹೋಗು’ ಅಂದನು. ಸ್ವಲ್ಪ ಸಮಯದಲ್ಲೇ ಆಕಾಶವು ಕಪ್ಪು ಮೋಡಗಳಿಂದ ತುಂಬಿತು. ಜೋರಾಗಿ ಗಾಳಿ ಬೀಸಿ ಭಯಂಕರ ಮಳೆ ಶುರು ಆಯಿತು. ಕೊನೆಗೂ ಬರಗಾಲಕ್ಕೆ ಪರದೆ ಬಿತ್ತು. ಅಹಾಬ ರಥವನ್ನು ವೇಗವಾಗಿ ಓಡಿಸುತ್ತಿದ್ದ. ಆದರೆ ಎಲೀಯ ಯೆಹೋವನ ಸಹಾಯದಿಂದ ರಥಕ್ಕಿಂತಲೂ ವೇಗವಾಗಿ ಓಡುತ್ತಿದ್ದ! ಎಲೀಯನ ಸಮಸ್ಯೆ ಇಲ್ಲಿಗೆ ಮುಗೀತಾ? ನೋಡೋಣ.

“ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.”—ಕೀರ್ತನೆ 83:18