ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 47

ಯೆಹೋವನು ಎಲೀಯನನ್ನು ಬಲಪಡಿಸಿದ

ಯೆಹೋವನು ಎಲೀಯನನ್ನು ಬಲಪಡಿಸಿದ

ಬಾಳನ ಪ್ರವಾದಿಗಳೆಲ್ಲರೂ ಕೊಲ್ಲಲ್ಪಟ್ಟರು ಎನ್ನುವ ಸುದ್ದಿ ಈಜೆಬೆಲಳಿಗೆ ಗೊತ್ತಾದಾಗ ಅವಳಿಗೆ ತುಂಬಾ ಕೋಪ ಬಂತು. ಅವಳು ಎಲೀಯನಿಗೆ ‘ಬಾಳನ ಪ್ರವಾದಿಗಳಿಗೆ ಆದ ಗತಿ ನಾಳೆ ನಿನಗೂ ಆಗುವುದು’ ಎಂಬ ಸಂದೇಶ ಕಳುಹಿಸಿದಳು. ಈ ವಿಷಯ ಕೇಳಿ ಎಲೀಯನಿಗೆ ತುಂಬಾ ಭಯವಾಯಿತು. ಅವನು ಕಾಡಿಗೆ ಓಡಿ ಹೋದ. ನಂತರ ‘ಯೆಹೋವನೇ, ನನಗೆ ಸಾಕಾಯಿತು. ನನ್ನ ಪ್ರಾಣವನ್ನು ತೆಗೆದುಬಿಡು’ ಎಂದು ಬೇಡಿದ. ಎಲೀಯನಿಗೆ ಸುಸ್ತಾಗಿದ್ದರಿಂದ ಒಂದು ಮರದ ಕೆಳಗೆ ನಿದ್ರೆಗೆ ಜಾರಿದ.

ಆಗ ದೇವದೂತನೊಬ್ಬ ಅವನನ್ನು ಎಬ್ಬಿಸಿ ‘ಎದ್ದು ಊಟ ಮಾಡು’ ಅಂದ. ಎಲೀಯ ಎದ್ದು ನೋಡಿದಾಗ ಕೆಂಡದ ಮೇಲೆ ಸುಟ್ಟ ರೊಟ್ಟಿ ಮತ್ತು ಒಂದು ತಂಬಿಗೆ ನೀರಿತ್ತು. ಅವನು ಊಟ ಮಾಡಿ ಮತ್ತೆ ನಿದ್ರೆಗೆ ಜಾರಿದ. ದೇವದೂತ ಮತ್ತೆ ಅವನನ್ನು ಎಬ್ಬಿಸಿ ‘ಊಟ ಮಾಡು, ನೀನು ತುಂಬಾ ಪ್ರಯಾಣ ಮಾಡಬೇಕಿದೆ’ ಅಂದ. ಎಲೀಯ ಎದ್ದು ಊಟ ಮಾಡಿದ. ಆಮೇಲೆ ಅವನು 40 ದಿನ ಹಗಲು ರಾತ್ರಿ ಹೋರೇಬ್‌ ಬೆಟ್ಟ ಮುಟ್ಟುವವರೆಗೆ ಪ್ರಯಾಣ ಮಾಡಿದ. ಅಲ್ಲಿಗೆ ತಲುಪಿದ ಮೇಲೆ ನಿದ್ರೆ ಮಾಡಲು ಒಂದು ಗುಹೆಯೊಳಗೆ ಹೋದ. ಆಗ ಯೆಹೋವನು ಅವನಿಗೆ ‘ಎಲೀಯ, ಇಲ್ಲೇನು ಮಾಡುತ್ತಿದ್ದೀಯಾ?’ ಎಂದು ಕೇಳಿದನು. ಆಗ ಎಲೀಯ ‘ಇಸ್ರಾಯೇಲ್ಯರು ನಿನಗೆ ಕೊಟ್ಟ ಮಾತನ್ನು ಮುರಿದಿದ್ದಾರೆ. ಯಜ್ಞವೇದಿಯನ್ನು ಹಾಳುಮಾಡಿ ಪ್ರವಾದಿಗಳನ್ನು ಕೊಂದಿದ್ದಾರೆ. ಈಗ ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ’ ಅಂದ.

ಆಗ ಯೆಹೋವನು ಅವನಿಗೆ ‘ಹೋಗಿ ಹೊರಗೆ ನಿಲ್ಲು’ ಅಂದನು. ಮೊದಲು ಬಲವಾದ ಬಿರುಗಾಳಿ ಅವನಿದ್ದ ಗುಹೆಯನ್ನು ಹಾದು ಹೋಯಿತು. ಆಮೇಲೆ ಭೂಕಂಪವಾಯಿತು. ತರುವಾಯ ಸಿಡಿಲುಂಟಾಯಿತು. ಕೊನೆಗೆ ಮೃದುವಾದ ಶಬ್ದವೊಂದನ್ನು ಎಲೀಯ ಕೇಳಿಸಿಕೊಂಡ. ಅವನು ಮೇಲಂಗಿಯಿಂದ ತನ್ನ ಮುಖವನ್ನು ಮುಚ್ಚಿಕೊಂಡು ಗುಹೆಯ ಹೊರಗೆ ನಿಂತ. ಯೆಹೋವನು ಮತ್ತೊಮ್ಮೆ ಅವನನ್ನು ‘ನೀನು ಯಾಕೆ ಓಡಿ ಬಂದಿದ್ದೀಯಾ?’ ಎಂದು ಕೇಳಿದ. ಆಗ ಎಲೀಯ ‘ನಾನೊಬ್ಬನೇ ಉಳಿದಿದ್ದೇನೆ’ ಅಂದ. ಆಗ ಯೆಹೋವನು ‘ನೀನೊಬ್ಬನೇ ಅಲ್ಲ, ನನ್ನನ್ನು ಆರಾಧಿಸುವ ಇನ್ನೂ 7,000 ಮಂದಿ ಇಸ್ರಾಯೇಲಿನಲ್ಲಿ ಇದ್ದಾರೆ. ನೀನು ಎದ್ದು ಪಟ್ಟಣಕ್ಕೆ ಹೋಗಿ ಎಲೀಷನನ್ನು ಪ್ರವಾದಿಯಾಗಿ ನೇಮಿಸು’ ಅಂದನು. ತಕ್ಷಣ ಎಲೀಯ ಯೆಹೋವನು ಹೇಳಿದಂತೆ ಮಾಡಲು ಹೋದನು. ಯೆಹೋವನ ಮಾತು ಕೇಳಿದರೆ ಆತನು ನಿಮಗೂ ಸಹಾಯ ಮಾಡುತ್ತಾನಾ? ಖಂಡಿತ ಮಾಡುತ್ತಾನೆ. ಬರಗಾಲದ ಸಮಯದಲ್ಲಿ ನಡೆದ ಮತ್ತೊಂದು ಘಟನೆಯನ್ನು ಈಗ ನೋಡೋಣ.

“ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ.”—ಫಿಲಿಪ್ಪಿ 4:6