ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 57

ಯೆಹೋವನು ಯೆರೆಮೀಯನನ್ನು ಸಾರಲು ಕಳುಹಿಸಿದ

ಯೆಹೋವನು ಯೆರೆಮೀಯನನ್ನು ಸಾರಲು ಕಳುಹಿಸಿದ

ಯೆಹೋವನು ಯೆರೆಮೀಯನನ್ನು ಪ್ರವಾದಿಯಾಗಿ ಆರಿಸಿದನು. ಆತನು ಅವನಿಗೆ ಯೆಹೂದದ ಜನರಿಗೆ ಸಾರಲು ಮತ್ತು ಅವರು ಮಾಡುತ್ತಿದ್ದ ಕೆಟ್ಟ ಕೆಲಸಗಳನ್ನು ನಿಲ್ಲಿಸುವಂತೆ ಎಚ್ಚರಿಸಲು ಹೇಳಿದನು. ಆಗ ಯೆರೆಮೀಯನು ‘ಯೆಹೋವನೇ, ನಾನು ಇನ್ನೂ ಚಿಕ್ಕ ಹುಡುಗ. ಜನರ ಹತ್ತಿರ ಹೇಗೆ ಮಾತಾಡಬೇಕು ಅಂತ ನನಗೆ ಗೊತ್ತಿಲ್ಲ’ ಅಂದನು. ಯೆಹೋವನು ಅವನಿಗೆ ‘ಭಯಪಡಬೇಡ. ಏನು ಹೇಳಬೇಕು ಅಂತ ನಾನು ನಿನಗೆ ಹೇಳ್ತೀನಿ, ನಾನು ನಿನಗೆ ಸಹಾಯ ಮಾಡ್ತೀನಿ’ ಅಂದನು.

ಯೆಹೋವನು ಯೆರೆಮೀಯನಿಗೆ ಹಿರೀಪುರುಷರನ್ನು ಸೇರಿ ಬರಲು ಹೇಳಿದನು. ಅವರ ಮುಂದೆ ಮಣ್ಣಿನ ಮಡಕೆಯನ್ನು ಒಡೆದು ‘ಈ ಮಡಕೆಯಂತೆಯೇ ಯೆರೂಸಲೇಮ್‌ ನಾಶವಾಗುವುದು ಎಂದು ಹೇಳು’ ಅಂದನು. ಯೆಹೋವನು ಹೇಳಿದಂತೆ ಯೆರೆಮೀಯ ಮಾಡಿದಾಗ ಅಲ್ಲಿನ ಹಿರಿಯರಿಗೆ ತುಂಬ ಸಿಟ್ಟು ಬಂತು. ಪಷ್ಹೂರನೆಂಬ ಯಾಜಕ ಯೆರೆಮೀಯನನ್ನು ಹೊಡೆದು ಮರದ ಬೇಡಿಗಳಿಂದ ಅವನ ಕೈಕಾಲುಗಳನ್ನು ಬಂಧಿಸಿದ. ಇಡೀ ರಾತ್ರಿ ಯೆರೆಮೀಯನಿಗೆ ಅಲುಗಾಡಲೂ ಆಗಲಿಲ್ಲ. ಮಾರನೇ ದಿನ ಬೆಳಗ್ಗೆ ಪಷ್ಹೂರನು ಯೆರೆಮೀಯನನ್ನು ಬಿಡುಗಡೆ ಮಾಡಿದ. ಆಗ ಯೆರೆಮೀಯ ‘ನನಗೆ ಸಾಕಾಯಿತು. ನಾನು ಇನ್ನು ಮುಂದೆ ಸಾರೋದಿಲ್ಲ’ ಅಂದನು. ಆದರೆ ಯೆರೆಮೀಯ ಸಾರೋದನ್ನ ನಿಜವಾಗಿಯೂ ನಿಲ್ಲಿಸಿಬಿಟ್ಟನಾ? ಇಲ್ಲ. ಈ ವಿಚಾರದ ಬಗ್ಗೆ ಅವನು ಸ್ವಲ್ಪ ಯೋಚಿಸಿದ. ಆಮೇಲೆ ಅವನು ‘ಯೆಹೋವನ ಸಂದೇಶ ಬೆಂಕಿಯಂತೆ ನನ್ನ ಎಲುಬುಗಳಲ್ಲಿ ಉರಿಯುತ್ತಿದೆ. ನಾನು ಸಾರುವುದನ್ನು ನಿಲ್ಲಿಸಲು ಆಗಲ್ಲ’ ಅಂದನು. ಅವನು ಜನರನ್ನು ಎಚ್ಚರಿಸುವುದನ್ನು ಮುಂದುವರೆಸಿದ.

ವರ್ಷಗಳು ಕಳೆದಂತೆ ಯೆಹೂದವನ್ನು ಒಬ್ಬ ಹೊಸ ಅರಸ ಆಳಲು ಶುರು ಮಾಡಿದ. ಯೆರೆಮೀಯ ಹೇಳುತ್ತಿದ್ದ ಸಂದೇಶ ಯಾಜಕರಿಗೆ ಮತ್ತು ಸುಳ್ಳು ಪ್ರವಾದಿಗಳಿಗೆ ಇಷ್ಟ ಆಗುತ್ತಿರಲಿಲ್ಲ. ಅವರು ಸರದಾರರಿಗೆ ‘ಇವನಿಗೆ ಮರಣದಂಡನೆ ಆಗಬೇಕು’ ಅಂದರು. ಅದಕ್ಕೆ ಯೆರೆಮೀಯ ‘ನೀವು ನನ್ನನ್ನು ಕೊಂದರೆ ಒಬ್ಬ ಅಮಾಯಕನನ್ನು ಕೊಂದಂತೆ. ನಾನು ಹೇಳುತ್ತಿರುವುದು ನನ್ನ ಸ್ವಂತ ಮಾತುಗಳಲ್ಲ, ಯೆಹೋವನ ಮಾತುಗಳು’ ಅಂದನು. ಆಗ ಸರದಾರರು ‘ಇವನಿಗೆ ಮರಣದಂಡನೆ ಕೊಡುವುದು ಬೇಡ’ ಅಂದರು.

ಯೆರೆಮೀಯ ಸಾರುವುದನ್ನು ಮುಂದುವರೆಸಿದ. ಇದರಿಂದ ಸರದಾರರಿಗೆ ತುಂಬ ಕೋಪ ಬಂತು. ಅವರು ಅವನಿಗೆ ಮರಣದಂಡನೆ ವಿಧಿಸುವಂತೆ ರಾಜನನ್ನು ಕೇಳಿಕೊಂಡರು. ಆಗ ರಾಜ ‘ಯೆರೆಮೀಯನಿಗೆ ಏನು ಬೇಕಾದರೂ ಮಾಡಿ’ ಅಂದ. ಅವರು ಯೆರೆಮೀಯನನ್ನು ಆಳವಾದ ಕೆಸರಿನ ಬಾವಿಗೆ ಹಾಕಿದರು. ಅವನು ಅಲ್ಲೇ ಸಾಯಿಲಿ ಅಂತ ಅಂದುಕೊಂಡರು. ಆ ಕೆಸರಿನಲ್ಲಿ ಯೆರೆಮೀಯ ಸ್ವಲ್ಪಸ್ವಲ್ಪನೇ ಹೂತುಹೋಗುತ್ತಿದ್ದ.

ಆಸ್ಥಾನದ ಅಧಿಕಾರಿಯಾದ ಎಬೆದ್ಮೆಲೆಕ ರಾಜನಿಗೆ ‘ಸರದಾರರು ಯೆರೆಮೀಯನನ್ನು ಬಾವಿಗೆ ಹಾಕಿದ್ದಾರೆ! ಅವನನ್ನು ಹಾಗೇ ಬಿಟ್ಟರೆ ಸತ್ತು ಹೋಗುತ್ತಾನೆ’ ಅಂದನು. ಆಗ ರಾಜ ಅವನಿಗೆ ‘ಜನರನ್ನು ಕರೆದುಕೊಂಡು ಹೋಗಿ ಯೆರೆಮೀಯನನ್ನು ಬಾವಿಯಿಂದ ಹೊರಗೆ ಎತ್ತು’ ಎಂದು ಅಪ್ಪಣೆಕೊಟ್ಟನು. ಯೆರೆಮೀಯನಿಗೆ ಎಷ್ಟೇ ಕಷ್ಟ ಬಂದರೂ ಅವನು ಸಾರೋದನ್ನ ಮಾತ್ರ ನಿಲ್ಲಿಸಲಿಲ್ಲ. ನಾವು ಅವನಂತೆ ಇರಬೇಕಲ್ವಾ?

“ನನ್ನ ಹೆಸರಿನ ನಿಮಿತ್ತ ನೀವು ಎಲ್ಲ ಜನರ ದ್ವೇಷಕ್ಕೆ ಗುರಿಯಾಗುವಿರಿ; ಆದರೆ ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು.”—ಮತ್ತಾಯ 10:22