ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 58

ಯೆರೂಸಲೇಮ್‌ನಾಶವಾಯಿತು

ಯೆರೂಸಲೇಮ್‌ನಾಶವಾಯಿತು

ಯೆಹೂದದ ಜನರು ಪದೇ ಪದೇ ಯೆಹೋವನನ್ನು ಬಿಟ್ಟು ಸುಳ್ಳು ದೇವರುಗಳನ್ನು ಆರಾಧಿಸಿದರು. ಅನೇಕ ವರ್ಷಗಳವರೆಗೆ ಯೆಹೋವನು ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದನು. ಆತನು ತನ್ನ ಪ್ರವಾದಿಗಳನ್ನು ಕಳುಹಿಸಿ ಅವರನ್ನು ಎಚ್ಚರಿಸಿದನು. ಆದರೆ ಜನರದನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಅವರು ಪ್ರವಾದಿಗಳನ್ನು ಗೇಲಿಮಾಡಿದರು. ಇವರ ವಿಗ್ರಹಾರಾಧನೆಯನ್ನು ಯೆಹೋವನು ಹೇಗೆ ನಿಲ್ಲಿಸಿದನು?

ಬಾಬೆಲಿನ ರಾಜನಾದ ನೆಬೂಕದ್ನೆಚ್ಚರ ಒಂದರ ನಂತರ ಒಂದು ಪಟ್ಟಣವನ್ನು ವಶಪಡಿಸಿಕೊಳ್ಳುತ್ತಿದ್ದ. ಮೊದಲನೇ ಬಾರಿ ಅವನು ಯೆರೂಸಲೇಮನ್ನು ಸೋಲಿಸಿದಾಗ ಅದರ ರಾಜನಾದ ಯೆಹೋಯಾಖೀನನನ್ನು ಸೆರೆಹಿಡಿದು, ದೇಶದಲ್ಲಿದ್ದ ಪ್ರಧಾನ ಪುರುಷರು, ಸೈನಿಕರು ಹಾಗೂ ಕುಶಲಕರ್ಮಿಗಳೆಲ್ಲರನ್ನು ಬಾಬೆಲಿಗೆ ಕರೆದುಕೊಂಡು ಹೋದ. ಅಲ್ಲದೇ, ಯೆಹೋವನ ಆಲಯದಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನೂ ತೆಗೆದುಕೊಂಡ. ನಂತರ ನೆಬೂಕದ್ನೆಚ್ಚರ ಚಿದ್ಕೀಯನನ್ನು ಯೆಹೂದದ ರಾಜನಾಗಿ ಮಾಡಿದ.

ಮೊದಮೊದಲು ಚಿದ್ಕೀಯ ನೆಬೂಕದ್ನೆಚ್ಚರನ ಮಾತನ್ನು ಕೇಳುತ್ತಿದ್ದ. ಆದರೆ ಸುತ್ತಮುತ್ತ ಇದ್ದ ದೇಶದವರು ಹಾಗೂ ಸುಳ್ಳು ಪ್ರವಾದಿಗಳು ಬಾಬೆಲಿನ ವಿರುದ್ಧ ತಿರುಗಿಬೀಳಲು ಚಿದ್ಕೀಯನಿಗೆ ಕುಮ್ಮಕ್ಕು ಕೊಟ್ಟರು. ಯೆರೆಮೀಯ ಅವನಿಗೆ ‘ನೀನು ಬಾಬೆಲಿನ ವಿರುದ್ಧ ತಿರುಗಿಬಿದ್ದರೆ ಯೆಹೂದದಲ್ಲಿ ರಕ್ತದ ಹೊಳೆಯೇ ಹರಿಯುತ್ತೆ, ಬರಗಾಲ ಹಾಗೂ ಕಾಯಿಲೆಗಳು ಬರುತ್ತೆ’ ಎಂದು ಎಚ್ಚರಿಸಿದ.

ಎಂಟು ವರ್ಷಗಳ ಆಳ್ವಿಕೆಯ ನಂತರ ಚಿದ್ಕೀಯ ಬಾಬೆಲಿನ ವಿರುದ್ಧ ತಿರುಗಿಬಿದ್ದ. ಈಜಿಪ್ಟಿನ ಸೈನ್ಯದ ಸಹಾಯ ಕೇಳಿದ. ನಂತರ ನೆಬೂಕದ್ನೆಚ್ಚರ ತನ್ನ ಸೈನ್ಯವನ್ನು ಕಳುಹಿಸಿ ಯೆರೂಸಲೇಮನ್ನು ಮುತ್ತಿಗೆ ಹಾಕಿಸಿದ. ಆಗ ಯೆರೆಮೀಯ ಚಿದ್ಕೀಯನಿಗೆ ‘ಬಾಬೆಲಿನವರಿಗೆ ನೀನು ಶರಣಾದರೆ ನಿನ್ನ ಜೀವ ಹಾಗೂ ಈ ಪಟ್ಟಣ ಉಳಿಯುತ್ತದೆ. ಆದರೆ ನೀನು ಶರಣಾಗದೇ ಇದ್ದರೆ ಬಾಬೆಲಿನವರು ಯೆರೂಸಲೇಮನ್ನು ಸುಟ್ಟು, ನಿನ್ನನ್ನು ಹಿಡಿದುಕೊಂಡು ಹೋಗುತ್ತಾರೆ ಎಂದು ಯೆಹೋವನು ಹೇಳಿದ್ದಾನೆ’ ಅಂದ. ಅದಕ್ಕೆ ಚಿದ್ಕೀಯ ‘ನಾನು ಶರಣಾಗಲ್ಲ!’ ಅಂದ.

ಒಂದೂವರೆ ವರ್ಷಗಳ ನಂತರ ಬಾಬೆಲಿನ ಸೈನ್ಯ ಯೆರೂಸಲೇಮಿನ ಗೋಡೆಯನ್ನು ಒಡೆದುಹಾಕಿ ಪಟ್ಟಣಕ್ಕೆ ಬೆಂಕಿ ಹಚ್ಚಿದರು. ಅವರು ದೇವಾಲಯವನ್ನು ಸುಟ್ಟು, ಅನೇಕರನ್ನು ಕೊಂದು, ಸಾವಿರಾರು ಜನರನ್ನು ಸೆರೆಹಿಡಿದುಕೊಂಡು ಹೋದರು.

ಚಿದ್ಕೀಯ ಯೆರೂಸಲೇಮಿನಿಂದ ತಪ್ಪಿಸಿಕೊಂಡು ಓಡಿಹೋದ. ಆದರೆ ಬಾಬೆಲಿನವರು ಅವನನ್ನು ಯೆರಿಕೋವಿನ ಹತ್ತಿರ ಹಿಡಿದು ನೆಬೂಕದ್ನೆಚ್ಚರನ ಹತ್ತಿರ ತಂದರು. ನೆಬೂಕದ್ನೆಚ್ಚರನು ಚಿದ್ಕೀಯನ ಕಣ್ಣೆದುರೇ ಅವನ ಗಂಡು ಮಕ್ಕಳನ್ನು ಕೊಂದು ಅವನ ಕಣ್ಣುಗಳನ್ನು ಕಿತ್ತುಹಾಕಿದನು. ನಂತರ ಅವನನ್ನು ಸೆರೆಮನೆಗೆ ಹಾಕಿದನು. ಕೊನೆಗೆ ಚಿದ್ಕೀಯನು ಸೆರೆಮನೆಯಲ್ಲೇ ಸತ್ತನು. ಆದರೆ ಯೆಹೋವನು ಯೆಹೂದದ ಜನರಿಗೆ, ‘70 ವರ್ಷಗಳ ನಂತರ ನಾನು ನಿಮ್ಮನ್ನು ನಿಮ್ಮ ಸ್ವಂತ ಊರಾದ ಯೆರೂಸಲೇಮಿಗೆ ವಾಪಸ್ಸು ಕರೆದುಕೊಂಡು ಬರುವೆನು’ ಎಂದು ಮಾತುಕೊಟ್ಟನು.

ಸೆರೆಯಾಳುಗಳಾಗಿ ಬಾಬೆಲಿಗೆ ಹೋದ ಮಕ್ಕಳಿಗೆ ಏನಾಗಿರಬಹುದು? ಅವರು ಯೆಹೋವನಿಗೆ ನಿಷ್ಠರಾಗಿ ಉಳಿದರಾ?

“ಯೆಹೋವ ದೇವರೇ, ಸರ್ವಶಕ್ತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ ನೀತಿಯವುಗಳೂ ಆಗಿವೆ.”—ಪ್ರಕಟನೆ 16:7