ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 59

ಯೆಹೋವನಿಗೆ ವಿಧೇಯರಾದ ನಾಲ್ಕು ಹುಡುಗರು

ಯೆಹೋವನಿಗೆ ವಿಧೇಯರಾದ ನಾಲ್ಕು ಹುಡುಗರು

ಯೆಹೂದದ ರಾಜವಂಶೀಯರನ್ನು ನೆಬೂಕದ್ನೆಚ್ಚರನು ಬಾಬೆಲಿಗೆ ಸೆರೆ ಹಿಡಿದುಕೊಂಡು ಹೋದನು. ಅವರನ್ನು ನೋಡಿಕೊಳ್ಳಲು ಆಸ್ಥಾನ ಅಧಿಕಾರಿಯಾದ ಅಶ್ಪೆನಜನನ್ನು ನೇಮಿಸಿದನು. ಸೆರೆಹಿಡಿದುಕೊಂಡು ಬಂದವರಲ್ಲಿ ತುಂಬಾ ಆರೋಗ್ಯವಂತರಾಗಿರುವ ಮತ್ತು ಚುರುಕಾಗಿರುವ ಹುಡುಗರನ್ನು ಆರಿಸುವಂತೆ ನೆಬೂಕದ್ನೆಚ್ಚರನು ಅಶ್ಪೆನಜನಿಗೆ ಹೇಳಿದನು. ಈ ಹುಡುಗರಿಗೆ ಮೂರು ವರ್ಷಗಳ ಕಾಲ ತರಬೇತಿ ನೀಡಲಾಗುತ್ತಿತ್ತು. ಈ ತರಬೇತಿಯಿಂದ ಅವರು ಬಾಬೆಲಿನ ಆಸ್ಥಾನದ ಮುಖ್ಯ ಅಧಿಕಾರಿಗಳಾಗುವ ಅವಕಾಶವಿತ್ತು. ಇವರನ್ನು ನೋಡಿಕೊಳ್ಳಲು ರಾಜ ನೆಬೂಕದ್ನೆಚ್ಚರ ಅಶ್ಪೆನಜನನ್ನು ನೇಮಿಸಿದನು. ಈ ಹುಡುಗರು ಬಾಬೆಲಿನ ಆಕಾಡ್‌ ಭಾಷೆಯಲ್ಲಿ ಓದಲು, ಬರೆಯಲು ಮತ್ತು ಮಾತಾಡಲು ಕಲಿಯಬೇಕಿತ್ತು. ಅಷ್ಟೇ ಅಲ್ಲ, ರಾಜ ಮತ್ತು ಅವನ ಅರಮನೆಯಲ್ಲಿರುವವರು ತಿನ್ನುವ ಆಹಾರವನ್ನೇ ತಿನ್ನಬೇಕಿತ್ತು. ಈ ತರಬೇತಿಗೆ ದಾನಿಯೇಲ, ಹನನ್ಯ, ಮಿಶಾಯೇಲ ಮತ್ತು ಅಜರ್ಯನನ್ನು ಕೂಡ ಆರಿಸಲಾಯಿತು. ಅಶ್ಪೆನಜ ಇವರ ಹೆಸರುಗಳನ್ನು ಬದಲಿಸಿ ಬೇಲ್ತೆಶಚ್ಚರ್‌, ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಎಂಬ ಬಾಬಿಲೋನ್ಯ ಹೆಸರುಗಳನ್ನಿಟ್ಟನು. ತಮಗೆ ಸಿಕ್ಕಿದ ವಿದ್ಯಾಭ್ಯಾಸದಿಂದ ಅವರು ಯೆಹೋವನನ್ನು ಆರಾಧಿಸುವುದನ್ನು ನಿಲ್ಲಿಸಿಬಿಟ್ಟರಾ?

ಈ ನಾಲ್ಕು ಜನ ಹುಡುಗರು ಯೆಹೋವನ ಮಾತನ್ನು ಕೇಳಬೇಕೆಂದು ದೃಢತೀರ್ಮಾನ ಮಾಡಿದ್ದರು. ರಾಜನು ಹೇಳಿದ ಆಹಾರದಲ್ಲಿ ಯೆಹೋವನು ಧರ್ಮಶಾಸ್ತ್ರದಲ್ಲಿ ತಿನ್ನಬಾರದೆಂದು ಹೇಳಿದ ಕೆಲವು ಆಹಾರ ಪದಾರ್ಥಗಳಿದ್ದವು. ಆದ್ದರಿಂದ ಅವರು ಅಶ್ಪೆನಜನಿಗೆ ‘ರಾಜನು ಹೇಳಿದ ಆಹಾರವನ್ನು ದಯವಿಟ್ಟು ನಮಗೆ ಕೊಡಬೇಡ’ ಅಂದರು. ಅದಕ್ಕೆ ಅಶ್ಪೆನಜ, ‘ನೀವು ತಿನ್ನದೆ ಸೊರಗಿ ಹೋಗಿರುವುದನ್ನು ರಾಜ ಕಂಡರೆ ನನ್ನನ್ನು ಕೊಂದೇಬಿಡುತ್ತಾನೆ!’ ಅಂದನು.

ಆಗ ದಾನಿಯೇಲನಿಗೆ ಒಂದು ಉಪಾಯ ಹೊಳೆಯಿತು. ಅವನು ಆ ಅಧಿಕಾರಿಗೆ ‘ದಯವಿಟ್ಟು ನಮಗೆ ಹತ್ತು ದಿನಗಳವರೆಗೆ ತರಕಾರಿ ಮತ್ತು ನೀರನ್ನು ಕೊಡು. ಆಮೇಲೆ ನಮ್ಮನ್ನು ರಾಜನು ಹೇಳಿದ ಆಹಾರ ತಿಂದ ಹುಡುಗರಿಗೆ ಹೋಲಿಸಿ ನೋಡು’ ಅಂದನು. ಅದಕ್ಕೆ ಆ ಅಧಿಕಾರಿ ಒಪ್ಪಿಕೊಂಡನು.

ಹತ್ತು ದಿನಗಳಾದ ನಂತರ, ದಾನಿಯೇಲ ಮತ್ತವನ ಗೆಳೆಯರು ಬೇರೆ ಎಲ್ಲಾ ಹುಡುಗರಿಗಿಂತ ಆರೋಗ್ಯವಂತರಾಗಿ ಕಂಡರು. ಅವರು ತನ್ನ ಮಾತನ್ನು ಕೇಳಿದ್ದರಿಂದ ಯೆಹೋವನಿಗೆ ತುಂಬಾ ಸಂತೋಷವಾಯಿತು. ದೇವರು ದಾನಿಯೇಲನಿಗೆ ಅಪಾರ ವಿವೇಕ ಕೊಟ್ಟು, ದರ್ಶನ ಮತ್ತು ಕನಸಿನ ಅರ್ಥಗಳನ್ನು ತಿಳಿದುಕೊಳ್ಳುವ ಶಕ್ತಿಯನ್ನೂ ನೀಡಿದನು.

ತರಬೇತಿಯು ಮುಗಿದ ನಂತರ, ಅಶ್ಪೆನಜ ಎಲ್ಲಾ ಹುಡುಗರನ್ನು ರಾಜ ನೆಬೂಕದ್ನೆಚ್ಚರನ ಮುಂದೆ ಕರೆದುಕೊಂಡು ಬಂದನು. ರಾಜನು ಅವರೊಟ್ಟಿಗೆ ಮಾತಾಡಿದನು. ಬೇರೆಲ್ಲರಿಗಿಂತ ದಾನಿಯೇಲ, ಹನನ್ಯ, ಮಿಶಾಯೇಲ, ಅಜರ್ಯ ತುಂಬಾ ಬುದ್ಧಿವಂತರು ಮತ್ತು ಚುರುಕಾಗಿದ್ದರು ಎಂದು ರಾಜನು ಗಮನಿಸಿದನು. ರಾಜ ಈ ನಾಲ್ವರನ್ನು ತನ್ನ ಆಸ್ಥಾನದಲ್ಲಿ ಸೇವೆ ಮಾಡಲು ಆರಿಸಿದನು. ರಾಜನು ತುಂಬಾ ಪ್ರಾಮುಖ್ಯವಾದ ವಿಚಾರಗಳ ಬಗ್ಗೆ ಇವರ ಬಳಿ ಆಗಾಗ್ಗೆ ಸಲಹೆಗಳನ್ನು ಕೇಳುತ್ತಿದ್ದನು. ಯೆಹೋವನು ಈ ಯುವಕರನ್ನು ರಾಜನ ಆಸ್ಥಾನದಲ್ಲಿದ್ದ ಎಲ್ಲಾ ಜೋಯಿಸರು ಮತ್ತು ಬುದ್ಧಿವಂತರಿಗಿಂತ ಹೆಚ್ಚು ಬುದ್ಧಿವಂತರನ್ನಾಗಿ ಮಾಡಿದನು.

ದಾನಿಯೇಲ, ಹನನ್ಯ, ಮೀಶಾಯೇಲ ಮತ್ತು ಅಜರ್ಯ ದೂರದ ಊರಲ್ಲಿದ್ದರೂ ತಾವು ಯೆಹೋವನ ಜನರು ಎನ್ನುವುದನ್ನು ಮರೆಯಲಿಲ್ಲ. ಮಕ್ಕಳೇ, ನೀವು ಕೂಡ ಅವರಂತೆ ನಿಮ್ಮ ಅಪ್ಪ-ಅಮ್ಮ ನಿಮ್ಮ ಜೊತೆ ಇಲ್ಲದೇ ಇರುವಾಗಲೂ ಯೆಹೋವನಿಗೆ ವಿಧೇಯತೆ ತೋರಿಸುವುದನ್ನು ಮರೆಯಲ್ಲ ತಾನೇ?

“ನಿನ್ನ ಯೌವನವನ್ನು ಯಾವನೂ ಎಂದಿಗೂ ಕಡೆಗಣಿಸದಿರಲಿ. ಬದಲಾಗಿ ಮಾತಿನಲ್ಲಿಯೂ ನಡತೆಯಲ್ಲಿಯೂ ಪ್ರಿತಿಯಲ್ಲಿಯೂ ನಂಬಿಕೆಯಲ್ಲಿಯೂ ನೈತಿಕ ಶುದ್ಧತೆಯಲ್ಲಿಯೂ ನಂಬಿಗಸ್ತರಿಗೆ ಮಾದರಿಯಾಗಿರು.”—1 ತಿಮೊಥೆಯ 4:12