ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 61

ಅವರು ಅಡ್ಡಬೀಳಲಿಲ್ಲ

ಅವರು ಅಡ್ಡಬೀಳಲಿಲ್ಲ

ನೆಬೂಕದ್ನೆಚ್ಚರನಿಗೆ ಪ್ರತಿಮೆಯ ಕನಸು ಬಿದ್ದು ಸ್ವಲ್ಪ ಸಮಯದ ನಂತರ ಅವನು ಒಂದು ದೊಡ್ಡ ಬಂಗಾರದ ಮೂರ್ತಿಯನ್ನು ಮಾಡಿದನು. ಅದನ್ನು ದೂರಾ ಎಂಬ ಬೈಲಿನಲ್ಲಿ ನಿಲ್ಲಿಸಿ ತನ್ನ ರಾಜ್ಯದಲ್ಲಿರುವ ಪ್ರಮುಖ ಅಧಿಕಾರಿಗಳನ್ನು ಅದರ ಮುಂದೆ ಕೂಡಿ ಬರುವಂತೆ ಹೇಳಿದನು. ಅವರಲ್ಲಿ ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋ ಸಹ ಇದ್ದರು. ‘ನೀವು ತುತೂರಿ, ಕಿನ್ನರಿ ಮತ್ತು ವಾಲಗದ ಧ್ವನಿ ಕೇಳಿದ ಕೂಡಲೇ ಈ ಮೂರ್ತಿಗೆ ಅಡ್ಡಬೀಳಬೇಕು. ಯಾರು ಅದಕ್ಕೆ ಅಡ್ಡಬೀಳುವುದಿಲ್ಲವೋ ಅವರನ್ನು ಧಗಧಗನೆ ಉರಿಯುವ ಬೆಂಕಿಯಲ್ಲಿ ಹಾಕಲಾಗುವುದು’ ಎಂದು ರಾಜ ಆಜ್ಞಾಪಿಸಿದನು. ಆ ಮೂವರು ಇಬ್ರಿಯರು ಮೂರ್ತಿಗೆ ಅಡ್ಡಬಿದ್ದರಾ ಅಥವಾ ಯೆಹೋವನನ್ನು ಮಾತ್ರ ಆರಾಧಿಸಿದರಾ? ನೋಡೋಣ.

ನಂತರ, ಸಂಗೀತವನ್ನು ನುಡಿಸುವಂತೆ ರಾಜ ಆಜ್ಞಾಪಿಸಿದನು. ಆಗ ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋರನ್ನು ಬಿಟ್ಟು ಬೇರೆಲ್ಲರೂ ಅಡ್ಡಬಿದ್ದು ಆ ಮೂರ್ತಿಯನ್ನು ಪೂಜಿಸಿದರು. ಇದನ್ನು ನೋಡಿದ ಕೆಲವರು ರಾಜನ ಹತ್ತಿರ ಹೋಗಿ, ‘ಆ ಇಬ್ರಿಯರು ನೀನು ಮಾಡಿದ ಮೂರ್ತಿಗೆ ಅಡ್ಡಬೀಳಲು ನಿರಾಕರಿಸಿದರು’ ಎಂದು ದೂರಿದರು. ಆಗ ನೆಬೂಕದ್ನೆಚ್ಚರನು ಅವರನ್ನು ಕರೆಸಿ, ‘ಆ ಮೂರ್ತಿಯನ್ನು ಪೂಜಿಸಲು ನಾನು ನಿಮಗೆ ಇನ್ನೊಂದು ಅವಕಾಶ ಕೊಡುತ್ತೇನೆ. ಆಗಲೂ ನೀವು ಪೂಜಿಸದಿದ್ದರೆ ಧಗಧಗನೆ ಉರಿಯುವ ಬೆಂಕಿಯಲ್ಲಿ ಹಾಕುತ್ತೇನೆ. ನನ್ನ ಕೈಯಿಂದ ನಿಮ್ಮನ್ನು ಕಾಪಾಡಲು ಯಾವ ದೇವರಿಂದಲೂ ಸಾಧ್ಯ ಇಲ್ಲ’ ಅಂದನು. ಅದಕ್ಕವರು, ‘ನಮಗೆ ಇನ್ನೊಂದು ಅವಕಾಶ ಬೇಡ. ನಮ್ಮ ದೇವರಿಗೆ ನಮ್ಮನ್ನು ಕಾಪಾಡಲು ಆಗುತ್ತದೆ. ಒಂದುವೇಳೆ ಕಾಪಾಡದೇ ಇದ್ದರೂ ನಾವಂತೂ ಮೂರ್ತಿಯನ್ನು ಪೂಜಿಸುವುದಿಲ್ಲ’ ಅಂದರು.

ಇದನ್ನು ಕೇಳಿ ನೆಬೂಕದ್ನೆಚ್ಚರನಿಗೆ ತುಂಬ ಕೋಪ ಬಂತು. ಅವನು ತನ್ನ ಸೇವಕರಿಗೆ, ‘ಯಾವಾಗಲೂ ಇರುವುದಕ್ಕಿಂತ ಏಳು ಪಟ್ಟು ಜಾಸ್ತಿ ಬೆಂಕಿಯನ್ನು ಉರಿಸಿ’ ಅಂದನು. ನಂತರ ತನ್ನ ಸೈನಿಕರಿಗೆ, ‘ಇವರನ್ನು ಕಟ್ಟಿ ಅದರಲ್ಲಿ ಹಾಕಿ’ ಅಂತ ಆಜ್ಞಾಪಿಸಿದನು. ಸೈನಿಕರು ಆ ಮೂವರನ್ನು ಬೆಂಕಿಯಲ್ಲಿ ಹಾಕಿದರು. ಆ ಬೆಂಕಿಯ ಬಿಸಿ ಎಷ್ಟಿತ್ತೆಂದರೆ ಆ ಸೈನಿಕರು ಅಲ್ಲೇ ಸತ್ತುಹೋದರು. ನೆಬೂಕದ್ನೆಚ್ಚರನು ಅವರನ್ನು ನೋಡಲು ಬಗ್ಗಿದಾಗ ಅಲ್ಲಿ ಮೂವರಲ್ಲ, ನಾಲ್ಕು ಜನ ನಡೆದಾಡುತ್ತಾ ಇರುವುದನ್ನು ನೋಡಿದನು. ಅದನ್ನು ನೋಡಿ ಅವನು ಹೆದರಿ ಹೋದನು. ತನ್ನ ಅಧಿಕಾರಿಗಳಿಗೆ ಅವನು, ‘ನಾವು ಬೆಂಕಿಗೆ ಹಾಕಿದ್ದು ಮೂವರನ್ನು ಅಲ್ವಾ? ಆದರೆ ನನಗೆ ನಾಲ್ಕು ಜನ ಕಾಣಿಸುತ್ತಿದ್ದಾರೆ. ಒಬ್ಬನು ದೇವದೂತನ ಥರ ಇದ್ದಾನೆ!’ ಅಂತ ಹೇಳುತ್ತಾನೆ.

ನೆಬೂಕದ್ನೆಚ್ಚರ ಬೆಂಕಿಯ ಆವಿಗೆಯ ಹತ್ತಿರ ಹೋಗಿ, ‘ಮಹೋನ್ನತ ದೇವರ ಸೇವಕರೇ ಹೊರಗೆ ಬನ್ನಿ!’ ಅಂತ ಕರೆಯುತ್ತಾನೆ. ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋ ಹೊರಗೆ ಬಂದಾಗ ಅವರಿಗೆ ಏನೂ ಆಗದೇ ಇರುವುದನ್ನು ನೋಡಿ ಎಲ್ಲರಿಗೂ ಆಶ್ಚರ್ಯ ಆಗುತ್ತೆ. ಅವರ ಚರ್ಮ, ಕೂದಲು, ಬಟ್ಟೆ ಸಹ ಸುಟ್ಟಿರಲಿಲ್ಲ. ಬೆಂಕಿಯ ವಾಸನೆ ಸಹ ಅವರಿಂದ ಬರುತ್ತಿರಲಿಲ್ಲ.

ಆಗ ನೆಬೂಕದ್ನೆಚ್ಚರ, ‘ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಎಂಬವರ ದೇವರು ಬೇರೆಲ್ಲಾ ದೇವರಿಗಿಂತ ಉನ್ನತನು. ಆತನು ತನ್ನ ದೂತನನ್ನು ಕಳುಹಿಸಿ ಇವರನ್ನು ರಕ್ಷಿಸಿದ್ದಾನೆ. ಆತನಂಥ ದೇವರು ಬೇರೆ ಯಾರೂ ಇಲ್ಲ’ ಅಂದನು.

ಈ ಮೂವರು ಇಬ್ರಿಯರಂತೆ, ಏನೇ ಆದರೂ ಯೆಹೋವನಿಗೆ ನಿಷ್ಠೆಯಿಂದ ಇರಬೇಕೆಂದು ನೀನು ದೃಢ ತೀರ್ಮಾನ ಮಾಡಿದ್ದೀಯಾ?

“ನಿನ್ನ ದೇವರಾಗಿರುವ ಯೆಹೋವನನ್ನೇ ನೀನು ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆಯನ್ನು ಸಲ್ಲಿಸಬೇಕು.”—ಮತ್ತಾಯ 4:10