ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 88

ಯೇಸುವನ್ನು ಬಂಧಿಸಲಾಯಿತು

ಯೇಸುವನ್ನು ಬಂಧಿಸಲಾಯಿತು

ಯೇಸು ಮತ್ತವನ ಅಪೊಸ್ತಲರು ಕಿದ್ರೋನ್‌ ಕಣಿವೆಯ ಮೂಲಕ ಆಲೀವ್‌ ಮರಗಳ ಗುಡ್ಡಕ್ಕೆ ಹೋದರು. ಈಗಾಗಲೇ ಮಧ್ಯ ರಾತ್ರಿಯಾಗಿತ್ತು. ಆಕಾಶದಲ್ಲಿ ಪೂರ್ಣ ಚಂದಿರನಿದ್ದ. ಅವರು ಗೆತ್ಸೇಮನೆ ತೋಟಕ್ಕೆ ಬಂದರು. ಆಗ ಯೇಸು ಅವರಿಗೆ ‘ಇಲ್ಲೇ ಇದ್ದು ಎಚ್ಚರವಾಗಿರಿ’ ಎಂದು ಹೇಳಿದನು. ನಂತರ ಯೇಸು ಸ್ವಲ್ಪ ದೂರ ಹೋಗಿ ಮೊಣಕಾಲೂರಿ ದುಃಖದಿಂದ ಯೆಹೋವನಿಗೆ ಪ್ರಾರ್ಥಿಸಿದನು. ‘ನಿನ್ನ ಚಿತ್ತದಂತೆಯೇ ಆಗಲಿ’ ಅಂದನು. ಆಗ ಯೆಹೋವನು ಒಬ್ಬ ದೇವದೂತನನ್ನು ಕಳುಹಿಸಿ ಅವನನ್ನು ಬಲಪಡಿಸಿದನು. ಯೇಸು ಹಿಂತಿರುಗಿ ಬಂದಾಗ ತನ್ನ ಅಪೊಸ್ತಲರು ನಿದ್ದೆ ಮಾಡುತ್ತಿದ್ದರು. ಆಗ ಯೇಸು ಅವರಿಗೆ ‘ಎದ್ದೇಳಿ! ಇದು ನಿದ್ದೆ ಮಾಡುವ ಸಮಯವಲ್ಲ! ವೈರಿಗಳು ನನ್ನನ್ನು ಹಿಡಿದುಕೊಂಡು ಹೋಗುವ ಸಮಯ ಬಂದಿದೆ’ ಅಂದನು.

ಸ್ವಲ್ಪ ಸಮಯದಲ್ಲೇ ಇಸ್ಕರಿಯೋತ ಯೂದ ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡ ಒಂದು ದೊಡ್ಡ ಗುಂಪಿನೊಂದಿಗೆ ಅಲ್ಲಿಗೆ ಬಂದನು. ಯೂದನಿಗೆ ಯೇಸು ಎಲ್ಲಿರುವನು ಎಂದು ಗೊತ್ತಿತ್ತು. ಏಕೆಂದರೆ ಅವನು ಈ ತೋಟಕ್ಕೆ ಅನೇಕ ಸಲ ಯೇಸುವಿನೊಂದಿಗೆ ಬಂದಿದ್ದನು. ‘ಯೇಸು ಯಾರು ಅಂತ ನಾನು ತೋರಿಸಿಕೊಡುತ್ತೇನೆ’ ಎಂದು ಯೂದ ಮೊದಲೇ ಸೈನಿಕರಿಗೆ ಹೇಳಿದ್ದನು. ಅವನು ನೇರವಾಗಿ ಯೇಸುವಿನ ಹತ್ತಿರ ಹೋಗಿ ‘ಬೋಧಕನೇ, ವಂದನೆಗಳು’ ಎಂದು ಮುದ್ದಿಟ್ಟನು. ಆಗ ಯೇಸು ‘ಯೂದನೇ, ಮುದ್ದಿಟ್ಟು ನನಗೆ ದ್ರೋಹ ಬಗೆಯುತ್ತಿದ್ದೀಯಾ?’ ಅಂದನು.

ಆಮೇಲೆ ಯೇಸು ಮುಂದೆ ಬಂದು ಆ ಗುಂಪಿಗೆ ‘ನೀವು ಯಾರನ್ನು ಹುಡುಕುತ್ತಿದ್ದೀರಿ?’ ಅಂದನು ಅದಕ್ಕೆ ಅವರು ‘ನಜರೇತಿನ ಯೇಸುವನ್ನು’ ಅಂದರು. ಅದಕ್ಕೆ ಯೇಸು ‘ನಾನೇ ಅವನು’ ಅಂದನು. ಆಗ ಅವರು ಹಿಂದೆ ಸರಿದು ನೆಲಕ್ಕೆ ಬಿದ್ದರು. ಮತ್ತೆ ಯೇಸು ಆ ಗುಂಪಿಗೆ ‘ನೀವು ಯಾರನ್ನು ಹುಡುಕುತ್ತಿದ್ದೀರಿ?’ ಅಂದನು. ಆಗ ಅವರು ಮತ್ತೆ ‘ನಜರೇತಿನ ಯೇಸುವನ್ನು’ ಅಂದರು. ಆಗ ಯೇಸು ‘ನಾನೇ ಎಂದು ನಿಮಗೆ ಹೇಳಿದೆನಲ್ಲಾ? ಇವರನ್ನು ಹೋಗಲು ಬಿಡಿ’ ಅಂದನು.

ಇದನ್ನು ಗಮನಿಸುತ್ತಿದ್ದ ಪೇತ್ರನು ತನ್ನ ಕತ್ತಿಯನ್ನು ತೆಗೆದು ಮಹಾಯಾಜಕನ ಸೇವಕನಾದ ಮಲ್ಕನ ಕಿವಿಯನ್ನು ಕತ್ತರಿಸಿದನು. ಆದರೆ ಯೇಸು ಅವನ ಕಿವಿಯನ್ನು ಮುಟ್ಟಿ ವಾಸಿ ಮಾಡಿದನು. ನಂತರ ಯೇಸು ಪೇತ್ರನಿಗೆ ‘ನಿನ್ನ ಕತ್ತಿಯನ್ನು ಹಿಂದೆ ತಗೋ. ಕತ್ತಿ ಹಿಡಿದವನು ಕತ್ತಿಯಿಂದಲೇ ಸಾಯುವನು’ ಅಂದನು. ಆಗ ಸೈನಿಕರು ಯೇಸುವಿನ ಕೈಗಳನ್ನು ಕಟ್ಟಿ ಅವನನ್ನು ಬಂಧಿಸಿದರು. ಇದನ್ನು ನೋಡಿದ ಅಪೊಸ್ತಲರು ಓಡಿ ಹೋದರು. ಆಮೇಲೆ ಆ ಜನರು ಯೇಸುವನ್ನು ಮುಖ್ಯಯಾಜಕ ಅನ್ನನ ಹತ್ತಿರ ಕರೆದುಕೊಂಡು ಹೋದರು. ಅನ್ನನು ಯೇಸುವನ್ನು ವಿಚಾರಿಸಿ ಮಹಾಯಾಜಕ ಕಾಯಫನ ಹತ್ತಿರ ಕಳುಹಿಸಿದನು. ಆದರೆ ಓಡಿ ಹೋದ ಅಪೊಸ್ತಲರಿಗೆ ಏನಾಯಿತು ಗೊತ್ತಾ?

“ಲೋಕದಲ್ಲಿ ನಿಮಗೆ ಸಂಕಟವಿರುವುದು, ಆದರೆ ಧೈರ್ಯವಾಗಿರಿ! ನಾನು ಲೋಕವನ್ನು ಜಯಿಸಿದ್ದೇನೆ.”—ಯೋಹಾನ 16:33