ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 91

ಯೇಸುವಿನ ಪುನರುತ್ಥಾನ

ಯೇಸುವಿನ ಪುನರುತ್ಥಾನ

ಯೇಸು ಸತ್ತ ನಂತರ, ಯೋಸೇಫನೆಂಬ ಶ್ರೀಮಂತ ವ್ಯಕ್ತಿ ಯೇಸುವಿನ ದೇಹವನ್ನು ಕಂಬದಿಂದ ಇಳಿಸಲು ಪಿಲಾತನಿಂದ ಅನುಮತಿ ಪಡೆದುಕೊಂಡನು. ಯೋಸೇಫನು ಯೇಸುವಿನ ದೇಹವನ್ನು ಶುದ್ಧವಾದ ನಾರುಮಡಿಯಿಂದ ಸುತ್ತಿ ಸುಗಂಧದ್ರವ್ಯಗಳೊಂದಿಗೆ ಹೊಸ ಸಮಾಧಿಯಲ್ಲಿ ಇಟ್ಟನು. ಸಮಾಧಿಯನ್ನು ದೊಡ್ಡ ಕಲ್ಲಿನಿಂದ ಮುಚ್ಚಿದರು. ಆಗ ಮುಖ್ಯ ಯಾಜಕರು ಪಿಲಾತನಿಗೆ, ‘ಯೇಸುವಿನ ಶಿಷ್ಯರು ಅವನ ದೇಹವನ್ನು ಕದ್ದುಕೊಂಡು ಹೋಗಿ, ಸತ್ತವನು ಬದುಕಿ ಬಂದಿದ್ದಾನೆಂದು ಹೇಳುತ್ತಾರೇನೋ ಅಂತ ನಮಗೆ ಭಯ ಆಗುತ್ತಿದೆ’ ಅಂದರು. ಆಗ ಪಿಲಾತನು ಅವರಿಗೆ, ‘ಹೋಗಿ ಕಲ್ಲಿಗೆ ಮುದ್ರೆಹಾಕಿ ಕಾವಲಿಡಿ’ ಎಂದನು.

ಮೂರು ದಿನಗಳ ನಂತರ, ಮುಂಜಾನೆ ಕೆಲವು ಸ್ತ್ರೀಯರು ಸಮಾಧಿಯ ಹತ್ತಿರ ಹೋದರು. ಆಗ ಯಾರೋ ಕಲ್ಲನ್ನು ಉರುಳಿಸಿರುವುದನ್ನು ಅವರು ನೋಡಿದರು. ಆ ಸ್ತ್ರೀಯರಿಗೆ ಸಮಾಧಿ ಒಳಗಿನಿಂದ ಒಬ್ಬ ದೇವದೂತನು, ‘ಹೆದರಬೇಡಿ. ಯೇಸು ಎಬ್ಬಿಸಲ್ಪಟ್ಟಿದ್ದಾನೆ. ಬೇಗ ಹೋಗಿ ಯೇಸುವನ್ನು ಗಲಿಲಾಯದಲ್ಲಿ ಭೇಟಿಯಾಗುವಂತೆ ಅವನ ಶಿಷ್ಯರಿಗೆ ಹೇಳಿ’ ಎಂದನು.

ತಕ್ಷಣ ಮಗ್ದಲದ ಮರಿಯಳು ಪೇತ್ರ ಮತ್ತು ಯೋಹಾನನಿಗೆ ಈ ವಿಷಯ ತಿಳಿಸಲು ಓಡಿದಳು. ಅವಳು ಅವರಿಗೆ, ‘ಯಾರೋ ಯೇಸುವಿನ ದೇಹವನ್ನು ಎತ್ತಿಕೊಂಡು ಹೋಗಿದ್ದಾರೆ!’ ಎಂದಳು. ಪೇತ್ರ ಮತ್ತು ಯೋಹಾನ ಸಮಾಧಿಯ ಹತ್ತಿರ ಓಡಿಹೋದರು. ಸಮಾಧಿ ಖಾಲಿಯಾಗಿರುವುದನ್ನು ನೋಡಿ ಅವರು ಮನೆಗೆ ಹಿಂತಿರುಗಿ ಹೋದರು.

ಮರಿಯಳು ಪುನಃ ಸಮಾಧಿಯ ಹತ್ತಿರ ಹೋದಾಗ ಸಮಾಧಿಯೊಳಗೆ ಇಬ್ಬರು ದೇವದೂತರನ್ನು ನೋಡಿದಳು. ಅವಳು ಅವರಿಗೆ, ‘ನನ್ನ ಕರ್ತನನ್ನು ಎಲ್ಲಿ ತೆಗೆದುಕೊಂಡು ಹೋಗಿದ್ದಾರೋ ನನಗೆ ಗೊತ್ತಿಲ್ಲ’ ಎಂದಳು. ಮರಿಯಳು ಅಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ನೋಡಿದಾಗ ಅವನನ್ನು ತೋಟಗಾರನೆಂದು ನೆನಸಿದಳು. ಅವನಿಗೆ, ‘ಸ್ವಾಮಿ, ನೀನು ಅವನನ್ನು ಎಲ್ಲಿಟ್ಟಿದ್ದೀ ಎಂದು ನನಗೆ ಹೇಳು’ ಎಂದಳು. ಆ ವ್ಯಕ್ತಿ, ‘ಮರಿಯಳೇ!’ ಎಂದಾಗ ಅವನು ಯೇಸು ಎಂದು ಅವಳಿಗೆ ಗೊತ್ತಾಯಿತು. ಅವಳು ‘ಬೋಧಕನೇ!’ ಎಂದು ಕೂಗುತ್ತಾ ಅವನನ್ನು ಅಪ್ಪಿಕೊಂಡಳು. ಯೇಸು ಮರಿಯಳಿಗೆ, ‘ನೀನು ನನ್ನ ಸಹೋದರರ ಬಳಿ ಹೋಗಿ ನನ್ನನ್ನು ನೋಡಿದೆ ಎಂದು ಹೇಳು’ ಅಂದನು. ತಕ್ಷಣ ಮರಿಯಳು ಶಿಷ್ಯರ ಹತ್ತಿರ ಓಡಿಹೋಗಿ ‘ನಾನು ಯೇಸುವನ್ನು ನೋಡಿದೆ’ ಎಂದಳು.

ಅದೇ ದಿನ ಶಿಷ್ಯರಲ್ಲಿ ಇಬ್ಬರು ಯೆರೂಸಲೇಮಿನಿಂದ ಎಮ್ಮಾಹುವಿಗೆ ನಡೆದುಕೊಂಡು ಹೋಗುತ್ತಿದ್ದರು. ದಾರಿಯಲ್ಲಿ ಒಬ್ಬ ವ್ಯಕ್ತಿ ಅವರೊಂದಿಗೆ ಜೊತೆಗೂಡಿ ಅವರು ಯಾವ ವಿಷಯದ ಬಗ್ಗೆ ಮಾತಾಡುತ್ತಿದ್ದಾರೆಂದು ಕೇಳಿದನು. ಅವರು, ‘ನಿನಗೆ ಗೊತ್ತಿಲ್ವಾ? ಮೂರು ದಿನಗಳ ಮುಂಚೆ ಮುಖ್ಯ ಯಾಜಕರು ಯೇಸುವನ್ನು ಕೊಲ್ಲಿಸಿದರು. ಆದರೆ ಈಗ ಕೆಲವು ಸ್ತ್ರೀಯರು ಯೇಸು ಜೀವದಿಂದ ಇದ್ದಾನೆ ಅಂತ ಹೇಳುತ್ತಿದ್ದಾರೆ’ ಅಂದರು. ಆಗ ಆ ವ್ಯಕ್ತಿ, ‘ನೀವು ಪ್ರವಾದಿಗಳನ್ನು ನಂಬುವುದಿಲ್ಲವೋ? ಕ್ರಿಸ್ತನು ಸತ್ತು ಪುನಃ ಎಬ್ಬಿಸಲ್ಪಡುವನು ಎಂದವರು ಹೇಳಿದ್ದಾರಲ್ಲಾ?’ ಎಂದನು. ಅಲ್ಲದೇ ಅವನು ಅವರಿಗೆ ಶಾಸ್ತ್ರವಚನಗಳನ್ನು ವಿವರಿಸಿದನು. ಶಿಷ್ಯರು ಎಮ್ಮಾಹುವಿಗೆ ತಲುಪಿದಾಗ ತಮ್ಮ ಜೊತೆ ಬರುವಂತೆ ಆ ವ್ಯಕ್ತಿಗೆ ಹೇಳಿದರು. ಊಟದ ಸಮಯದಲ್ಲಿ ಆ ವ್ಯಕ್ತಿ ಪ್ರಾರ್ಥಿಸಿದಾಗ ಅದು ಯೇಸುವೇ ಎಂದು ಶಿಷ್ಯರಿಗೆ ಗೊತ್ತಾಯಿತು. ಬಳಿಕ ಯೇಸು ಅವರಿಂದ ಮರೆಯಾದನು.

ತಕ್ಷಣ ಆ ಇಬ್ಬರು ಶಿಷ್ಯರು ಯೆರೂಸಲೇಮಿಗೆ ಹೋದರು. ಅಪೊಸ್ತಲರಿದ್ದ ಮನೆಗೆ ಹೋಗಿ ನಡೆದ ಸಂಗತಿಯನ್ನು ಹೇಳಿದರು. ಅವರು ಮನೆಯೊಳಗೆ ಇದ್ದಾಗ ಅಲ್ಲಿದ್ದ ಎಲ್ಲರಿಗೂ ಯೇಸು ಕಾಣಿಸಿಕೊಂಡನು. ಆರಂಭದಲ್ಲಿ ಅವರು ಅದು ಯೇಸು ಎಂದು ನಂಬಲಿಲ್ಲ. ಆಗ ಯೇಸು ಅವರಿಗೆ ‘ನನ್ನ ಕೈಗಳನ್ನು ನೋಡಿರಿ, ನನ್ನನ್ನು ಮುಟ್ಟಿ. ಕ್ರಿಸ್ತನು ಸತ್ತು ಎದ್ದು ಬರುವನು ಎಂದು ಬರೆದಿದೆಯಲ್ಲಾ’ ಎಂದನು.

“ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ.”—ಯೋಹಾನ 14:6