ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 93

ಯೇಸು ಸ್ವರ್ಗಕ್ಕೆ ಹೋದನು

ಯೇಸು ಸ್ವರ್ಗಕ್ಕೆ ಹೋದನು

ಗಲಿಲಾಯದಲ್ಲಿ ಯೇಸು ತನ್ನ ಹಿಂಬಾಲಕರನ್ನು ಭೇಟಿ ಮಾಡಿದನು. ಅವನು ಅವರಿಗೆ ‘ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ನಾನು ನಿಮಗೆ ಕಲಿಸಿದ ಎಲ್ಲಾ ವಿಷಯಗಳನ್ನು ಅವರಿಗೂ ಕಲಿಸಿ, ದೀಕ್ಷಾಸ್ನಾನ ಮಾಡಿಸಿ’ ಎಂಬ ಪ್ರಾಮುಖ್ಯ ಆಜ್ಞೆಯನ್ನು ಕೊಟ್ಟನು. ಯೇಸು ಪುನಃ ಅವರಿಗೆ, ‘ನೆನಪಿಡಿ, ನಾನು ಯಾವಾಗಲೂ ನಿಮ್ಮ ಜೊತೆ ಇರುತ್ತೇನೆ’ ಎಂದು ಮಾತು ಕೊಟ್ಟನು.

ಯೇಸು ಪುನರುತ್ಥಾನವಾಗಿ 40 ದಿನಗಳಲ್ಲಿ ತನ್ನ ನೂರಾರು ಶಿಷ್ಯರಿಗೆ ಗಲಿಲಾಯ ಮತ್ತು ಯೆರೂಸಲೇಮಿನಲ್ಲಿ ಕಾಣಿಸಿಕೊಂಡನು. ಅವನು ಅವರಿಗೆ ತುಂಬಾ ಮುಖ್ಯ ಪಾಠಗಳನ್ನು ಕಲಿಸಿದನು ಮತ್ತು ಅನೇಕ ಅದ್ಭುತಗಳನ್ನು ಮಾಡಿದನು. ಆಮೇಲೆ ಯೇಸು ಕೊನೆ ಬಾರಿ ತನ್ನ ಶಿಷ್ಯರನ್ನು ಆಲೀವ್‌ ಮರಗಳ ಗುಡ್ಡದಲ್ಲಿ ಭೇಟಿಯಾದನು. ಅವನು ಅವರಿಗೆ ‘ಯೆರೂಸಲೇಮನ್ನು ಬಿಟ್ಟು ಹೋಗಬೇಡಿ. ತಂದೆಯು ನಿಮಗೆ ಏನನ್ನು ವಾಗ್ದಾನಿಸಿದ್ದಾನೋ ಅದಕ್ಕಾಗಿ ಕಾದುಕೊಂಡಿರಿ’ ಅಂದನು.

ಈ ಮಾತಿನ ಅರ್ಥ ಏನೆಂದು ಅಪೊಸ್ತಲರಿಗೆ ಗೊತ್ತಾಗಲಿಲ್ಲ. ಅವರು ಯೇಸುವಿನ ಹತ್ತಿರ ‘ನೀನು ಈಗಲೇ ಇಸ್ರಾಯೇಲಿನ ರಾಜನಾಗುವೆಯಾ?’ ಎಂದು ಕೇಳಿದರು. ಅದಕ್ಕೆ ಯೇಸು ‘ನಾನು ರಾಜನಾಗಲು ಯೆಹೋವನು ನೇಮಿಸಿದ ಸಮಯ ಇನ್ನೂ ಬಂದಿಲ್ಲ. ಬೇಗನೆ ನಿಮ್ಮ ಮೇಲೆ ಪವಿತ್ರಾತ್ಮ ಸುರಿಸಲ್ಪಡುವುದು. ಇದರಿಂದ ನೀವು ಬಲಹೊಂದುವಿರಿ. ನೀವು ನನಗೆ ಸಾಕ್ಷಿಗಳಾಗುವಿರಿ. ಹೋಗಿ ಯೆರೂಸಲೇಮ್‌, ಯೂದಾಯ, ಸಮಾರ್ಯ ಮತ್ತು ಭೂಮಿಯ ಕಟ್ಟಕಡೆಯವರೆಗೂ ಸಾರಿರಿ’ ಅಂದನು.

ಆಮೇಲೆ ಯೇಸು ಮೇಲಕ್ಕೆ ಹೋದನು. ಮೋಡಗಳಲ್ಲಿ ಮರೆಯಾದನು. ಅವನ ಶಿಷ್ಯರು ಆಕಾಶದ ಕಡೆಗೆ ನೋಡುತ್ತಲೇ ಇರುವಾಗ ಯೇಸು ಸ್ವರ್ಗಕ್ಕೆ ಹೋದನು.

ಆತನ ಶಿಷ್ಯರು ಆಲೀವ್‌ ಮರಗಳ ಗುಡ್ಡದಿಂದ ಯೆರೂಸಲೇಮಿಗೆ ಹೋದರು. ಅವರು ಕ್ರಮವಾಗಿ ಮೇಲಂತಸ್ತಿನ ಕೋಣೆಯಲ್ಲಿ ಕೂಡಿ ಬಂದು ಪ್ರಾರ್ಥಿಸುತ್ತಿದ್ದರು. ಹೀಗೆ ಯೇಸುವಿನಿಂದ ಇನ್ನಿತರ ಮಾರ್ಗದರ್ಶನ ಪಡೆಯಲು ಅವರು ಕಾಯುತ್ತಿದ್ದರು.

“ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.”—ಮತ್ತಾಯ 24:14