ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 98

ಕ್ರೈಸ್ತ ಧರ್ಮ ಅನೇಕ ದೇಶಗಳಿಗೆ ಹಬ್ಬಿತು

ಕ್ರೈಸ್ತ ಧರ್ಮ ಅನೇಕ ದೇಶಗಳಿಗೆ ಹಬ್ಬಿತು

ಇಡೀ ಭೂಮಿಯಲ್ಲಿ ಸುವಾರ್ತೆಯನ್ನು ಸಾರಬೇಕೆಂಬ ಯೇಸುವಿನ ಆಜ್ಞೆಯನ್ನು ಅಪೊಸ್ತಲರು ಪಾಲಿಸಿದರು. ಕ್ರಿ.ಶ. 47​ರಲ್ಲಿ ಅಂತಿಯೋಕ್ಯದಲ್ಲಿದ್ದ ಸಹೋದರರು ಪೌಲ ಮತ್ತು ಬಾರ್ನಬರನ್ನು ಅನೇಕ ಊರುಗಳಿಗೆ ಸಾರಲು ಕಳುಹಿಸಿದರು. ಇವರಿಬ್ಬರೂ ಏಷ್ಯಾ ಮೈನರ್‌ನ ದೆರ್ಬೆ, ಲುಸ್ತ್ರ, ಇಕೋನ್ಯ ಮುಂತಾದ ಸ್ಥಳಗಳಿಗೆ ಹೋಗಿ ಹುರುಪಿನಿಂದ ಸಾರಿದರು.

ಪೌಲ ಮತ್ತು ಬಾರ್ನಬರು ಶ್ರೀಮಂತರು-ಬಡವರು, ಚಿಕ್ಕವರು-ದೊಡ್ಡವರು ಎಂಬ ಭೇದವಿಲ್ಲದೆ ಎಲ್ಲರಿಗೂ ಸಾರಿದರು. ಅನೇಕರು ಯೇಸುವಿನ ಬಗ್ಗೆ ಸತ್ಯವನ್ನು ಸ್ವೀಕರಿಸಿದರು. ಪೌಲ ಮತ್ತು ಬಾರ್ನಬರು ಸೆರ್ಗ್ಯ ಪೌಲನೆಂಬ ಸೈಪ್ರಸ್‌ನ ಪ್ರಾಂತಾಧಿಕಾರಿಗೆ ಸಾರಿದಾಗ ಒಬ್ಬ ಮಂತ್ರವಾದಿ ಅವರನ್ನು ತಡೆಯಲು ಪ್ರಯತ್ನಿಸಿದನು. ಆಗ ಪೌಲನು ಆ ಮಂತ್ರವಾದಿಗೆ, ‘ಯೆಹೋವನು ನಿನ್ನ ವಿರುದ್ಧ ಕೈ ಎತ್ತಿದ್ದಾನೆ’ ಎಂದನು. ತಕ್ಷಣ, ಆ ಮಂತ್ರವಾದಿ ಕುರುಡನಾದನು. ಇದನ್ನು ನೋಡಿದ ಪ್ರಾಂತಾಧಿಕಾರಿ ಸೆರ್ಗ್ಯ ಪೌಲನು ಕ್ರೈಸ್ತನಾದನು.

ಪೌಲ ಮತ್ತು ಬಾರ್ನಬರು ಮನೆಯಿಂದ ಮನೆಗೆ, ಮಾರುಕಟ್ಟೆಗಳಲ್ಲಿ, ಬೀದಿಗಳಲ್ಲಿ ಮತ್ತು ಸಭಾಮಂದಿರಗಳಲ್ಲಿ, ಹೀಗೆ ಎಲ್ಲಾ ಕಡೆಗಳಲ್ಲಿ ಸಾರಿದರು. ಅವರು ಲುಸ್ತ್ರದಲ್ಲಿ ಒಬ್ಬ ಕುಂಟನನ್ನು ಗುಣಮಾಡಿದಾಗ ಅದನ್ನು ನೋಡಿದವರು ಪೌಲ ಮತ್ತು ಬಾರ್ನಬರನ್ನು ದೇವರು ಎಂದು ಭಾವಿಸಿ ಆರಾಧಿಸಲು ಆರಂಭಿಸಿದರು. ಆದರೆ ಪೌಲ-ಬಾರ್ನಬರು, ‘ದೇವರನ್ನು ಮಾತ್ರ ಆರಾಧಿಸಿ, ನಾವು ಸಾಮಾನ್ಯ ಮನುಷ್ಯರು’ ಎಂದು ಹೇಳಿ ಆ ಜನರನ್ನು ತಡೆದರು. ನಂತರ, ಕೆಲವು ಯೆಹೂದಿಗಳು ಬಂದು ಜನರನ್ನು ಪೌಲನ ವಿರುದ್ಧ ಎತ್ತಿಕಟ್ಟಿದರು. ಆಗ ಜನರು ಪೌಲನ ಮೇಲೆ ಕಲ್ಲೆಸೆದರು. ಅವನನ್ನು ಪಟ್ಟಣದಿಂದ ಹೊರಕ್ಕೆ ಎಳೆದುಕೊಂಡು ಹೋಗಿ ಅವನು ಸತ್ತನೆಂದು ಭಾವಿಸಿ ಅಲ್ಲೇ ಬಿಟ್ಟು ಹೋದರು. ಆದರೆ, ಪೌಲನು ಇನ್ನೂ ಬದುಕಿದ್ದನು. ತಕ್ಷಣ, ಸಹೋದರರು ಅವನ ರಕ್ಷಣೆಗೆ ಬಂದರು. ಆಮೇಲೆ ಅವನನ್ನು ಪಟ್ಟಣದೊಳಕ್ಕೆ ಕರೆದುಕೊಂಡು ಹೋದರು. ನಂತರ, ಪೌಲನು ಅಂತಿಯೋಕ್ಯಕ್ಕೆ ಹಿಂದಿರುಗಿದನು.

ಕ್ರಿ.ಶ. 49​ರಲ್ಲಿ ಪೌಲನು ಇನ್ನೊಂದು ಪ್ರಯಾಣ ಮಾಡಿದನು. ಏಷ್ಯಾ ಮೈನರ್‌ನಲ್ಲಿರುವ ಸಹೋದರರನ್ನು ನೋಡಲು ಹೋದನು. ನಂತರ, ಯೂರೋಪಿನಷ್ಟು ದೂರದೂರಿಗೆ ಸುವಾರ್ತೆ ಸಾರಿದನು. ಅವನು ಅಥೆನ್ಸ್‌, ಎಫೆಸ, ಫಿಲಿಪ್ಪಿ, ಥೆಸಲೋನಿಕ ಮತ್ತು ಇತರ ಅನೇಕ ಊರುಗಳಿಗೆ ಹೋದನು. ಸೀಲ, ಲೂಕ ಮತ್ತು ಯುವ ತಿಮೊಥೆಯ ಸಹ ಪೌಲನ ಜೊತೆಯಲ್ಲಿ ಹೋದರು. ಅವರೆಲ್ಲರೂ ಸೇರಿ ಅನೇಕ ಸಭೆಗಳನ್ನು ಸ್ಥಾಪಿಸಿದರು ಮತ್ತು ಸಹೋದರರನ್ನು ಬಲಪಡಿಸಿದರು. ಪೌಲನು ಒಂದುವರೆ ವರ್ಷ ಕೊರಿಂಥದಲ್ಲೇ ಉಳಿದು ಅಲ್ಲಿನ ಸಹೋದರರನ್ನು ಬಲಪಡಿಸಿದನು. ಅವನು ಸಾರುತ್ತಾ, ಕಲಿಸುತ್ತಾ ಅನೇಕ ಸಭೆಗಳಿಗೆ ಪತ್ರಗಳನ್ನು ಬರೆದನು. ಅವನು ಗುಡಾರ ಹೊಲಿಯುವ ಕೆಲಸ ಸಹ ಮಾಡಿದನು. ಸಮಯಾನಂತರ, ಪೌಲನು ಅಂತಿಯೋಕ್ಯಕ್ಕೆ ಹಿಂದಿರುಗಿದನು.

ಕ್ರಿ.ಶ. 52​ರಲ್ಲಿ ಪೌಲನು ಮೂರನೇ ಪ್ರಯಾಣ ಮಾಡಿದನು. ಏಷ್ಯಾ ಮೈನರ್‌ನಿಂದ ಆರಂಭಿಸಿ ಉತ್ತರದ ಫಿಲಿಪ್ಪಿಗೆ ಮತ್ತು ನಂತರ ಕೊರಿಂಥಕ್ಕೆ ಹೋದನು. ಪೌಲನು ಎಫೆಸದಲ್ಲಿ ಕಲಿಸುತ್ತಾ, ಗುಣಪಡಿಸುತ್ತಾ, ಸಭೆಗೆ ಸಹಾಯ ಮಾಡುತ್ತಾ ಅನೇಕ ವರ್ಷ ಅಲ್ಲೇ ಕಳೆದನು. ಅವನು ಶಾಲೆಯ ಸಭಾಂಗಣದಲ್ಲಿ ಪ್ರತಿದಿನ ಭಾಷಣ ನೀಡಿದನು. ಅನೇಕರು ಅದನ್ನು ಕೇಳಿ ತಮ್ಮ ಜೀವನ ರೀತಿಯನ್ನು ಬದಲಾಯಿಸಿಕೊಂಡರು. ಹೀಗೆ ಅನೇಕ ಊರುಗಳಲ್ಲಿ ಸಾರಿದ ನಂತರ ಪೌಲನು ಯೆರೂಸಲೇಮಿಗೆ ಹಿಂದಿರುಗಿದನು.

“ಆದುದರಿಂದ ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ.”—ಮತ್ತಾಯ 28:19