ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 3

‘ದೇವರು ತೋರಿಸಿದ ದರ್ಶನಗಳನ್ನ ನೋಡಿದೆ’

‘ದೇವರು ತೋರಿಸಿದ ದರ್ಶನಗಳನ್ನ ನೋಡಿದೆ’

ಯೆಹೆಜ್ಕೇಲ 1:1

ಮುಖ್ಯ ವಿಷಯ: ಸ್ವರ್ಗೀಯ ರಥದ ಬಗ್ಗೆ ಯೆಹೆಜ್ಕೇಲನು ನೋಡಿದ ದರ್ಶನದ ಕಿರುನೋಟ

1-3. (ಎ) ಯೆಹೆಜ್ಕೇಲ ಏನನ್ನ ನೋಡಿದ ಮತ್ತು ಕೇಳಿಸಿಕೊಂಡ? ವಿವರಿಸಿ. (ಆರಂಭದ ಚಿತ್ರ ನೋಡಿ.) (ಬಿ) ಯಾವ ಶಕ್ತಿಯ ಸಹಾಯದಿಂದ ಅವನು ಆ ದರ್ಶನ ನೋಡಿದನು? ಮತ್ತು ಅದ್ರಿಂದ ಅವನಿಗೆ ಏನಾಯ್ತು?

 ಯೆಹೆಜ್ಕೇಲ ವಿಶಾಲವಾದ ಮರಳುಗಾಡನ್ನ ನೋಡ್ತಾ ನಿಂತಿದ್ದಾನೆ. ಅವನಿಗೆ ಅಲ್ಲಿ ಏನೋ ಕಾಣಿಸ್ತಿದೆ, ಅದನ್ನೇ ಕಣ್ಣುಮಿಟುಕಿಸದೆ ನೋಡ್ತಿದ್ದಾನೆ. ಅವನಿಗೆ ತನ್ನ ಕಣ್ಣುಗಳನ್ನೇ ನಂಬಕ್ಕಾಗ್ತಿಲ್ಲ. ದೊಡ್ಡ ಬಿರುಗಾಳಿ ಅವನೆಡೆಗೆ ಧಾವಿಸಿ ಬರ್ತಾ ಇದೆ. ಗಾಳಿ ಅವ್ನ ಬಟ್ಟೆ, ಕೂದಲನ್ನ ಸವರಿ ಮುಂದೆ ಹೋಗ್ತಾ ಇದೆ. ಅದ್ರ ಜೊತೆಗೆ ದೊಡ್ಡ ಮೋಡ ಅವನ ಕಡೆಗೆ ಬರ್ತಾ ಇದೆ. ಅದರ ಒಳಗೆ ಧಗಧಗ ಅಂತ ಉರಿತಿರೋ ಬೆಂಕಿ ಕಾಣಿಸ್ತಿದೆ. ಅದು ಕುಲುಮೆಗೆ ಹಾಕಿದ ಚಿನ್ನದ ತರ ಹೊಳೀತಿದೆ. * ಆ ಮೋಡ ಅವ್ನ ಹತ್ರ ಹತ್ರ ಬರ್ತಿದ್ದಂತೆ ಅದ್ರ ಶಬ್ದ ಹೇಗೆ ಕೇಳಿಸ್ತು ಅಂದ್ರೆ ಒಂದು ದೊಡ್ಡ ಸೈನ್ಯ ಮಾರ್ಚ್‌ ಮಾಡಿ ಬರೋ ತರ ಇತ್ತು.—ಯೆಹೆ. 1:4, 24.

2 ಆಗ ಯೆಹೆಜ್ಕೇಲನಿಗೆ ಸುಮಾರು 30 ವರ್ಷ. ಅವನಿಗೆ ಸಿಕ್ಕಿದ ಅದ್ಭುತ ದರ್ಶನಗಳಲ್ಲಿ ಇದು ಮೊದಲನೇದು. “ಯೆಹೋವನ ಪವಿತ್ರ ಶಕ್ತಿ” ತನ್ನಲ್ಲಿ ಕೆಲ್ಸ ಮಾಡ್ತಿದೆ ಅಂತ ಅವನಿಗೆ ಗೊತ್ತಾಗ್ತಿದೆ. ಅವ್ನು ಅಲ್ಲಿ ನೋಡಿದ ವಿಸ್ಮಯಗೊಳಿಸುವ ದೃಶ್ಯವನ್ನ ಯಾವುದೇ ಚಲನಚಿತ್ರ ತಯಾರಕರಿಗೂ ಮಾಡಿತೋರಿಸೋಕೆ ಆಗಲ್ಲ. ಅದು ಅಷ್ಟು ಘನಗಾಂಭೀರ್ಯದ್ದಾಗಿತ್ತು. ಆ ದರ್ಶನವನ್ನ ನೋಡಿ ಅವನು ಭಯಭಕ್ತಿಯಿಂದ ಅಡ್ಡಬಿದ್ದ!—ಯೆಹೆ. 1:3, 28.

3 ಯೆಹೋವ ದೇವರು ಯಾಕೆ ಯೆಹೆಜ್ಕೇಲನಿಗೆ ಈ ದರ್ಶನವನ್ನ ತೋರಿಸಿದನು? ಅವನನ್ನ ಬರೀ ಭಯಚಕಿತಗೊಳಿಸೋಕಾ? ಅಲ್ಲ, ಯೆಹೆಜ್ಕೇಲನಿಗೆ ಸಿಕ್ಕಿದ ಬೇರೆ ದರ್ಶನಗಳ ತರನೇ ಈ ದರ್ಶನಕ್ಕೂ ಒಂದು ಅರ್ಥ ಇತ್ತು. ಅದ್ರಿಂದ ಅವನಿಗೆ ಮಾತ್ರ ಅಲ್ಲ, ಇಂದಿನ ಯೆಹೋವನ ಸೇವಕರಿಗೂ ಪ್ರಯೋಜನ ಇದೆ. ಹಾಗಾದ್ರೆ ಯೆಹೆಜ್ಕೇಲ ಅಲ್ಲಿ ಏನು ನೋಡಿದ ಮತ್ತು ಕೇಳಿಸಿಕೊಂಡ ಅಂತ ಈಗ ನೋಡೋಣ.

ಸನ್ನಿವೇಶ

4, 5. ಯೆಹೆಜ್ಕೇಲನಿಗೆ ದರ್ಶನ ಸಿಕ್ಕಾಗ ಸನ್ನಿವೇಶ ಹೇಗಿತ್ತು?

4 ಯೆಹೆಜ್ಕೇಲ 1:1-3 ಓದಿ. ಕ್ರಿ.ಪೂ. 613. ಹಿಂದಿನ ಅಧ್ಯಾಯದಲ್ಲಿ ನೋಡಿದಂತೆ, ಯೆಹೆಜ್ಕೇಲ ಬಾಬೆಲಿನಲ್ಲಿ ಇತರ ಕೈದಿಗಳ ಜೊತೆ ಇದ್ದನು. ಅವ್ರು ಕೆಬಾರ್‌ ನದಿಯ ಹತ್ರ ವಾಸವಾಗಿದ್ದರು. ಇದು ಮಾನವ ನಿರ್ಮಿತ ಕಾಲುವೆ ಆಗಿದ್ದಿರಬೇಕು. ಬಹುಶಃ ಇದನ್ನ ಪ್ರಯಾಣಕ್ಕಾಗಿಯೂ ಬಳಸ್ತಿದ್ದರು. ಈ ನದಿ ಯೂಫ್ರೆಟಿಸ್‌ ನದಿಯಿಂದ ಹೊರಟು ಮತ್ತೆ ಯೂಫ್ರೆಟಿಸ್‌ ನದಿಗೇ ಸೇರುತ್ತಿತ್ತು.

ಕೆಬಾರ್‌ ನದಿಯ ಹತ್ರ ಯೆಹೆಜ್ಕೇಲ ಬೇರೆ ಕೈದಿಗಳ ಜೊತೆ ಇದ್ದನು (ಪ್ಯಾರ 4 ನೋಡಿ)

5 ಯೆರೂಸಲೇಮ್‌ ಇಲ್ಲಿಂದ ಸುಮಾರು 800 ಕಿಲೋಮೀಟರ್‌ ದೂರದಲ್ಲಿತ್ತು. * ಒಂದು ಕಾಲದಲ್ಲಿ ಯೆಹೆಜ್ಕೇಲನ ತಂದೆ ಯೆರೂಸಲೇಮಿನ ದೇವಾಲಯದಲ್ಲಿ ಪುರೋಹಿತನಾಗಿ ಕೆಲ್ಸ ಮಾಡ್ತಿದ್ದ. ಆದ್ರೆ ಈಗ ಅಲ್ಲಿ ಸುಳ್ಳು ಆರಾಧನೆ ನಡೀತಿತ್ತು. ಒಂದು ಸಮಯದಲ್ಲಿ ರಾಜ ದಾವೀದ ಮತ್ತು ಸೊಲೊಮೋನ ಅಲ್ಲಿ ವಿಜ್ರಂಭಣೆಯಿಂದ ಆಳ್ವಿಕೆ ನಡೆಸ್ತಿದ್ರು. ಆದ್ರೆ ಈಗ ಆ ಪಟ್ಟಣ ನಾಚಿಕೆಗೆ ಈಡಾಗಿತ್ತು. ಅಲ್ಲಿ ಆಳ್ತಿದ್ದ ಕೆಟ್ಟ ರಾಜ ಯೆಹೋಯಾಖೀನ ಬಾಬೆಲಿನಲ್ಲಿ ಕೈದಿಯಾಗಿದ್ದನು. ಅವನ ಬದ್ಲು ಚಿದ್ಕೀಯ ರಾಜನಾಗಿದ್ದನು. ಅವನು ದುಷ್ಟ ಮತ್ತು ಬಾಬೆಲಿನವರ ಕೈಗೊಂಬೆಯಾಗಿದ್ದ.—2 ಅರ. 24:8-12, 17, 19.

6, 7. ಯೆಹೆಜ್ಕೇಲನಿಗೆ ಯಾಕೆ ದುಃಖ, ನಿರಾಶೆ ಆಗಿರಬಹುದು?

6 ಇದನ್ನೆಲ್ಲಾ ನೋಡ್ತಿದ್ದ ಯೆಹೆಜ್ಕೇಲನಿಗೆ ಮತ್ತು ಅವನಂಥ ನಂಬಿಗಸ್ತ ದೇವಸೇವಕರಿಗೆ ತುಂಬ ದುಃಖ, ನಿರಾಶೆ ಆಗಿರಬೇಕು. ಅವ್ರು ಹೀಗೆ ಅಂದ್ಕೊಂಡಿರಬಹುದು: ‘ಯೆಹೋವ ದೇವರು ನಮ್ಮ ಕೈಬಿಟ್ಟುಬಿಟ್ಟನಾ? ಬಾಬೆಲ್‌ ಮತ್ತು ಅದರ ಅಸಂಖ್ಯಾತ ಸುಳ್ಳು ದೇವತೆಗಳಿಂದಾಗಿ ಯೆಹೋವನ ಶುದ್ಧ ಆರಾಧನೆ ಅಳಿದು ಹೋಗುತ್ತಾ? ಇಡೀ ಭೂಮಿಯಿಂದನೇ ಯೆಹೋವನ ಆಳ್ವಿಕೆ ನಿರ್ಮೂಲ ಆಗುತ್ತಾ?’

7 ಈ ಹಿನ್ನೆಲೆಯನ್ನ ಮನಸ್ಸಲ್ಲಿ ಇಟ್ಟುಕೊಂಡ್ರೆ ವೈಯಕ್ತಿಕ ಅಧ್ಯಯನ ಮಾಡೋಕೆ ಸಹಾಯ ಆಗುತ್ತೆ. ಯೆಹೆಜ್ಕೇಲ ನೋಡಿದ ಮೊದಲ ದರ್ಶನವನ್ನ ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ಆಗುತ್ತೆ. (ಯೆಹೆ. 1:4-28) ಈ ಅಧ್ಯಾಯವನ್ನ ಓದುವಾಗ ನೀವೇ ಯೆಹೆಜ್ಕೇಲ ಅಂತ ನೆನಸಿ. ಅವನ ಜಾಗದಲ್ಲಿ ನಿಂತು ನೀವೇ ಅದನ್ನ ನೋಡ್ತಿದ್ದೀರ, ಕೇಳಿಸಿಕೊಳ್ತಿದ್ದೀರ ಅಂತ ಕಲ್ಪಿಸಿಕೊಳ್ಳಿ.

ಕರ್ಕೆಮೀಷಿನ ಹತ್ತಿರವಿರೋ ಯೂಫ್ರೆಟಿಸ್‌ ನದಿ (ಪ್ಯಾರ 5-7 ನೋಡಿ)

ಸರಿಸಾಟಿಯಿಲ್ಲದ ರಥ

8. ಯೆಹೆಜ್ಕೇಲ ದರ್ಶನದಲ್ಲಿ ಏನನ್ನ ನೋಡಿದ? ಅದು ಏನನ್ನ ಸೂಚಿಸ್ತಿತ್ತು?

8 ಯೆಹೆಜ್ಕೇಲ ಆ ದರ್ಶನದಲ್ಲಿ ಏನನ್ನ ನೋಡಿದ? ಒಂದು ದೊಡ್ಡ ಭಯಚಕಿತಗೊಳಿಸುವ ರಥವನ್ನ ನೋಡಿದ. ಅದಕ್ಕೆ ನಾಲ್ಕು ದೊಡ್ಡ ಚಕ್ರಗಳಿದ್ವು. ಅವುಗಳ ಜೊತೆ ನಾಲ್ಕು ಕೆರೂಬಿಗಳೂ ಇದ್ವು. (ಯೆಹೆ. 10:1) ಅವುಗಳ ಮೇಲೆ ವಿಶಾಲವಾದ ಕಲ್ಲಿನ ನೆಲವಿತ್ತು, ಅದು ನೋಡೋಕೆ ಐಸಿನ ತರ ಅರೆಪಾರದರ್ಶಕವಾಗಿ ಇತ್ತು. ಅದರ ಮೇಲಿರೋ ಸಿಂಹಾಸನದಲ್ಲಿ ಯೆಹೋವ ದೇವರು ಕೂತಿದ್ದನು! ಈ ರಥ ಏನನ್ನ ಸೂಚಿಸ್ತಿತ್ತು? ಯೆಹೋವನ ಮಹಿಮಾಭರಿತ ವಿಶ್ವವ್ಯಾಪಿ ಸಂಘಟನೆಯ ಸ್ವರ್ಗೀಯ ಭಾಗವನ್ನ ಸೂಚಿಸ್ತಿತ್ತು. ಅದನ್ನ ಹೇಗೆ ಹೇಳಬಹುದು? ಅದಕ್ಕಿರೋ ಮೂರು ಕಾರಣಗಳನ್ನ ನಾವೀಗ ನೋಡೋಣ.

9. ಯೆಹೋವ ದೇವರಿಗೆ ಸ್ವರ್ಗೀಯ ಜೀವಿಗಳ ಮೇಲಿರೋ ಅಧಿಕಾರವನ್ನ ಆ ರಥ ಹೇಗೆ ತೋರಿಸಿಕೊಡ್ತಿತ್ತು?

9 ಸ್ವರ್ಗೀಯ ಜೀವಿಗಳ ಮೇಲೆ ಯೆಹೋವನಿಗೆ ಇರೋ ಅಧಿಕಾರ. ಆ ದರ್ಶನದಲ್ಲಿ ನಾವು ಕೆರೂಬಿಗಳ ಮೇಲೆ ಯೆಹೋವ ದೇವರ ಸ್ವರ್ಗೀಯ ಸಿಂಹಾಸನ ಇರೋದನ್ನ ನೋಡಿದ್ವಿ. ಯೆಹೋವ ಕೆರೂಬಿಗಳ ಮೇಲೆ ಅಥವಾ ಕೆರೂಬಿಗಳ ಮಧ್ಯದಲ್ಲಿ ಕೂತಿರೋದ್ರ ಬಗ್ಗೆ ಬೈಬಲಿನ ಬೇರೆ ವಚನಗಳಲ್ಲೂ ತಿಳಿಸಲಾಗಿದೆ. (2 ಅರಸು 19:15 ಓದಿ; ವಿಮೋ. 25:22; ಕೀರ್ತ. 80:1) ಅದರ ಅರ್ಥ ಯೆಹೋವ ದೇವರು ನಿಜವಾಗ್ಲೂ ಕೆರೂಬಿಗಳ ಮೇಲೆ ಕೂತಿದ್ದಾನೆ ಅಂತ ಅಲ್ಲ. ಯಾಕಂದ್ರೆ ಯೆಹೋವನಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗೋಕೆ ಯಾವುದೇ ಸ್ವರ್ಗೀಯ ಜೀವಿಗಳ ಅಗತ್ಯನೂ ಇಲ್ಲ, ರಥದ ಅಗತ್ಯನೂ ಇಲ್ಲ. ಕೆರೂಬಿಯರು ಯೆಹೋವ ದೇವರ ಅಧಿಕಾರವನ್ನ ಬೆಂಬಲಿಸ್ತಾರೆ. ಇಡೀ ವಿಶ್ವದಲ್ಲಿ ತನ್ನ ಕೆಲ್ಸವನ್ನ ನಡಿಸೋಕೆ ದೇವರು ಅವರನ್ನ ಬೇರೆ ಬೇರೆ ಕಡೆಗೆ ಕಳಿಸ್ತಾನೆ. ಅವರು ಬೇರೆ ದೇವದೂತರ ತರ ಯೆಹೋವನ ಇಷ್ಟವನ್ನ ಮಾಡುತ್ತಿರೋ ಸೇವಕರಾಗಿದ್ದಾರೆ. (ಕೀರ್ತ. 104:4) ಒಂದು ರಥವನ್ನ ನಿಯಂತ್ರಿಸೋ ಹಾಗೆ ಯೆಹೋವ ಈ ಸ್ವರ್ಗೀಯ ಜೀವಿಗಳನ್ನ ನಿಯಂತ್ರಿಸ್ತಿದ್ದಾನೆ. ತನ್ನ ಇಷ್ಟವನ್ನ ನೆರವೇರಿಸಲು ಅವ್ರಿಗೆ ಆಜ್ಞೆ, ನಿರ್ದೇಶನಗಳನ್ನ ಕೊಡ್ತಿದ್ದಾನೆ. ಈ ಅರ್ಥದಲ್ಲಿ ಯೆಹೋವ ಅವರ ಮೇಲೆ “ಸವಾರಿ” ಮಾಡ್ತಿದ್ದಾನೆ ಅಂತ ಹೇಳಬಹುದು.

10. ಸ್ವರ್ಗೀಯ ರಥದಲ್ಲಿ ಇರೋದು ಬರೀ ನಾಲ್ಕು ಕೆರೂಬಿಗಳಲ್ಲ ಅಂತ ಹೇಗೆ ಹೇಳಬಹುದು?

10 ರಥದಲ್ಲಿ ಅಂದ್ರೆ ಯೆಹೋವನ ಸಂಘಟನೆಯಲ್ಲಿ ಇರೋದು ಬರೀ ನಾಲ್ಕು ಕೆರೂಬಿಗಳಲ್ಲ. ಯೆಹೆಜ್ಕೇಲ ಬರೀ ನಾಲ್ಕು ಕೆರೂಬಿಯರನ್ನ ನೋಡಿದ. ಹಾಗಾದ್ರೆ ಯೆಹೋವನ ಸಂಘಟನೆಯಲ್ಲಿ ಇರೋದು ನಾಲ್ಕು ಕೆರೂಬಿಗಳು ಮಾತ್ರನಾ? ಅಲ್ಲ. ಬೈಬಲಿನಲ್ಲಿ ನಾಲ್ಕು ಅನ್ನೋದು ಪೂರ್ಣತೆಯನ್ನ ಸೂಚಿಸುತ್ತೆ. ಎಲ್ಲ ಒಗ್ಗಟ್ಟಿನಿಂದ ಕೆಲ್ಸ ಮಾಡೋದನ್ನ ಸೂಚಿಸುತ್ತೆ. ಹಾಗಾಗಿ ಆ ನಾಲ್ಕು ಕೆರೂಬಿಗಳು ಯೆಹೋವನಿಗೆ ನಿಷ್ಠರಾಗಿರೋ ಎಲ್ಲ ಸ್ವರ್ಗೀಯ ಜೀವಿಗಳನ್ನೂ ಸೂಚಿಸುತ್ತವೆ. ಇನ್ನೊಂದು ವಿಷಯವನ್ನ ಗಮನಿಸಿ. ಆ ರಥದ ಚಕ್ರಗಳ ಮತ್ತು ಕೆರೂಬಿಯರ ಮೇಲೆಲ್ಲಾ ಕಣ್ಣುಗಳಿದ್ವು. ಇದರ ಅರ್ಥವೇನು? ಕಣ್ಣುಗಳು ಜಾಗ್ರತೆಯನ್ನ, ಎಚ್ಚರಿಕೆಯಿಂದ ಗಮನಿಸೋದನ್ನ ಸೂಚಿಸುತ್ತವೆ. ಹಾಗಾಗಿ ಬರೀ ನಾಲ್ಕು ಕೆರೂಬಿಗಳು ಮಾತ್ರವಲ್ಲ ಉಳಿದ ಎಲ್ಲಾ ಸ್ವರ್ಗೀಯ ಜೀವಿಗಳು ಎಚ್ಚರಿಕೆಯಿಂದ ಎಲ್ಲವನ್ನ ನೋಡ್ತಾ ಇವೆ ಅನ್ನೋದನ್ನ ಆ ಕಣ್ಣುಗಳು ಸೂಚಿಸುತ್ತವೆ. ಅಷ್ಟೇ ಅಲ್ಲ, ಯೆಹೆಜ್ಕೇಲ ನೋಡಿದ ಆ ರಥ ಎಷ್ಟು ದೊಡ್ಡದಾಗಿತ್ತು ಅಂದ್ರೆ ಅದ್ರ ಜೊತೆಗಿದ್ದ ಆ ನಾಲ್ಕು ಕೆರೂಬಿಗಳು ಪುಟ್ಟಪುಟ್ಟದ್ದಾಗಿ ಕಾಣಿಸ್ತಿದ್ದವು. (ಯೆಹೆ. 1:18, 22; 10:12) ಹೌದು, ಯೆಹೋವನ ಸ್ವರ್ಗೀಯ ಸಂಘಟನೆಯಲ್ಲಿರೋದು ಬರೀ ನಾಲ್ಕು ಕೆರೂಬಿಯರಲ್ಲ. ಆ ಸಂಘಟನೆ ತುಂಬ ವಿಶಾಲ ಮತ್ತು ಬೃಹತ್ತಾಗಿದೆ.

ಯೆಹೋವನ ಸ್ವರ್ಗೀಯ ರಥದ ದರ್ಶನವನ್ನ ನೋಡಿ ಯೆಹೆಜ್ಕೇಲ ಮೂಕವಿಸ್ಮಿತನಾದ (ಪ್ಯಾರ 8-10 ನೋಡಿ)

11. ದಾನಿಯೇಲನು ಸಹ ಯಾವ ದರ್ಶನವನ್ನ ನೋಡಿದನು? ಇದ್ರಿಂದ ನಮಗೇನು ಗೊತ್ತಾಗುತ್ತೆ?

11 ದಾನಿಯೇಲ ಕೂಡ ಇಂಥ ಒಂದು ದರ್ಶನವನ್ನ ನೋಡಿದ. ದಾನಿಯೇಲ ತುಂಬ ವರ್ಷ ಬಾಬೆಲಿನಲ್ಲಿ ಕೈದಿಯಾಗಿದ್ದ. ಅವನೂ ಸ್ವರ್ಗದ ಬಗ್ಗೆ ಒಂದು ದರ್ಶನವನ್ನ ನೋಡ್ದ. ಅದ್ರಲ್ಲಿ ಸಹ ಯೆಹೋವ ದೇವರ ಸಿಂಹಾಸನಕ್ಕೆ ಚಕ್ರಗಳಿದ್ದವು. ಆದ್ರೆ ಆ ದರ್ಶನದಲ್ಲಿ ಒಂದು ವ್ಯತ್ಯಾಸ ಇತ್ತು. ಅದೇನಂದ್ರೆ ಅವನು ಅಲ್ಲಿ, ‘ಲಕ್ಷ ಲಕ್ಷ, ಕೋಟಿ ಕೋಟಿ’ ದೇವದೂತರನ್ನ ನೋಡಿದ. ಅವರೆಲ್ಲರೂ ಯೆಹೋವನ ಮುಂದೆ ನಿಂತಿದ್ರು. ಬಹುಶಃ ತಮಗೆ ನೇಮಿಸಲಾದ ಸ್ಥಳದಲ್ಲಿ ನ್ಯಾಯ ಸಭೆಗಾಗಿ ಸೇರಿ ಬಂದಿದ್ರು. (ದಾನಿ. 7:9, 10, 13-18) ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಯೆಹೆಜ್ಕೇಲ ದರ್ಶನದಲ್ಲಿ ನೋಡಿದ ನಾಲ್ಕು ಕೆರೂಬಿಯರು ಲಕ್ಷಾಂತರ, ಕೋಟ್ಯಾಂತರ ದೇವದೂತರನ್ನ ಸೂಚಿಸ್ತಿದ್ವು ಅಂತ ಗೊತ್ತಾಗುತ್ತೆ.

12. ಸ್ವರ್ಗೀಯ ವಿಷಯಗಳ ಬಗ್ಗೆ ಧ್ಯಾನಿಸೋದ್ರಿಂದ ನಮಗೆ ಯಾವ ಪ್ರಯೋಜನ ಇದೆ?

12 ಮನುಷ್ಯರು ಸ್ವರ್ಗೀಯ ವಿಷಯಗಳ ಕಡೆ ಗಮನ ಕೊಡೋದಾದ್ರೆ ಅದು ಅವ್ರಿಗೆ ಸಂರಕ್ಷಣೆ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ಈ ಸ್ವರ್ಗೀಯ ವಿಷಯಗಳನ್ನೇ ಅಪೊಸ್ತಲ ಪೌಲನು ‘ಕಣ್ಣಿಗೆ ಕಾಣದೆ ಇರೋ ವಿಷ್ಯಗಳು’ ಅಂತ ಕರೆದನು. ಈ ವಿಷಯಗಳಿಗೆ ಗಮನ ಕೊಡೋದು ಸಂರಕ್ಷಣೆ ಆಗಿದೆ ಅಂತ ಹೇಗೆ ಹೇಳಬಹುದು? ಸಾಮಾನ್ಯವಾಗಿ ನಾವು “ಕಣ್ಣಿಗೆ ಕಾಣೋ” ಲೋಕದ ವಿಷಯಗಳ ಕಡೆ ಗಮನ ಕೊಡ್ತೀವಿ ಆದ್ರೆ ಅದು ಸ್ವಲ್ಪ ದಿನ ಮಾತ್ರ ಇರುತ್ತೆ. (2 ಕೊರಿಂಥ 4:18 ಓದಿ.) ನಮಗೆ ಈ ಬಲಹೀನತೆ ಇದೆ ಅಂತ ಸೈತಾನನಿಗೆ ಚೆನ್ನಾಗಿ ಗೊತ್ತು. ಅದಕ್ಕೇ ಲೋಕದ ಕಡೆ ನಮ್ಮ ಗಮನ ಸೆಳೀತಾ ಇರ್ತಾನೆ. ಆದ್ರೆ, ನಾವು ಕಾಣದೇ ಇರೋ ವಿಷಯಗಳ ಕಡೆಗೆ ಗಮನ ಕೊಡೋದಾದ್ರೆ ನಮ್ಮ ಗಮನ ಬೇರೆ ಕಡೆಗೆ ಹೋಗಲ್ಲ. ಅದಕ್ಕೇ ಯೆಹೋವನು ನಮಗೆ ಸಹಾಯ ಮಾಡಬೇಕು ಅಂತ ಸ್ವರ್ಗೀಯ ವಿಷಯಗಳ ಬಗ್ಗೆ ತಿಳಿಸಿದ್ದಾನೆ. ಅವುಗಳಲ್ಲಿ ಒಂದು ಯೆಹೆಜ್ಕೇಲನ ಮೂಲಕ ಕೊಡಲಾದ ದರ್ಶನ. ಯೆಹೋವನ ಕುಟುಂಬ ಎಷ್ಟು ಮಹಾನ್‌ ಅಂತ ಈ ದರ್ಶನದಿಂದ ಗೊತ್ತಾಗುತ್ತೆ.

“ಚಕ್ರಗಳೇ!”

13, 14. (ಎ) ಯೆಹೆಜ್ಕೇಲ ಚಕ್ರಗಳನ್ನ ಹೇಗೆ ವಿವರಿಸಿದ? (ಬಿ) ಯೆಹೋವನ ಸಿಂಹಾಸನಕ್ಕೆ ಚಕ್ರಗಳಿರೋದು ಯಾಕೆ ಸೂಕ್ತವಾಗಿದೆ?

13 ದರ್ಶನದಲ್ಲಿ ಯೆಹೆಜ್ಕೇಲನ ಗಮನ ಮೊದ್ಲು ನಾಲ್ಕು ಕೆರೂಬಿಯರ ಕಡೆಗೆ ಹೋಯ್ತು. ಈ ಕೆರೂಬಿಯರಿಂದ ಮತ್ತು ಅವ್ರ ರಚನೆಯಿಂದ ಯೆಹೋವ ದೇವರ ಬಗ್ಗೆ ಏನು ಗೊತ್ತಾಗುತ್ತೆ ಅನ್ನೋದನ್ನ 4 ನೇ ಅಧ್ಯಾಯದಲ್ಲಿ ನೋಡಲಿದ್ದೇವೆ. ಯೆಹೆಜ್ಕೇಲ ಕೆರೂಬಿಯರ ಜೊತೆಗೆ ನಾಲ್ಕು ದಿಕ್ಕಲ್ಲಿ ನಾಲ್ಕು ಚಕ್ರಗಳನ್ನೂ ನೋಡಿದ. ಇವೆಲ್ಲಾ ಒಂದು ದೊಡ್ಡ ಚೌಕದ ನಾಲ್ಕು ಮೂಲೆಯಲ್ಲಿ ನಿಂತ ಹಾಗಿದ್ದವು. (ಯೆಹೆಜ್ಕೇಲ 1:16-18 ಓದಿ.) ಆ ಚಕ್ರಗಳು ಕ್ರಿಸಲೈಟ್‌ ರತ್ನಗಳ ಹಾಗೆ ಪಳಪಳ ಅಂತ ಹೊಳೀತಿದ್ವು. ಈ ರತ್ನ ಹಳದಿ ಅಥವಾ ಹಳದಿ-ಹಸಿರು ಬಣ್ಣದ್ದಾಗಿದ್ದವು. ಬಹುಶಃ ಈ ರತ್ನಗಳು ಪಾರದರ್ಶಕವಾಗಿದ್ವು.

14 ಯೆಹೆಜ್ಕೇಲ ನೋಡಿದ ದರ್ಶನದಲ್ಲಿದ್ದ ಸಿಂಹಾಸನಕ್ಕೆ ಚಕ್ರಗಳಿದ್ವು. ಚಕ್ರಗಳಿರೋ ಸಿಂಹಾಸನನಾ? ಇದು ವಿಚಿತ್ರ ಅಂತ ಅನಿಸುತ್ತೆ ಅಲ್ವಾ? ನಮಗೆ ಗೊತ್ತಿರೋ ಹಾಗೆ ಸಿಂಹಾಸನಗಳು ಯಾವಾಗಲೂ ಒಂದೇ ಕಡೆ ಇರುತ್ತವೆ. ಮಾನವ ರಾಜರಿಗೆ ಇರೋದು ಇಂಥ ಸಿಂಹಾಸನಗಳೇ. ಯಾಕೆಂದ್ರೆ ಅವ್ರಿಗೆ ಎಲ್ಲಾ ಕಡೆ ಆಳ್ವಿಕೆ ಮಾಡೋಕೆ ಆಗಲ್ಲ. ಆದ್ರೆ ಯೆಹೋವ ದೇವರ ಅಧಿಕಾರ ವಿಶ್ವವ್ಯಾಪಿಯಾಗಿದೆ, ಅದಕ್ಕೆ ಯಾವುದೇ ಮಿತಿಯಿಲ್ಲ. (ನೆಹೆ. 9:6) ಒಟ್ಟಿನಲ್ಲಿ ಹೇಳೋದಾದ್ರೆ ವಿಶ್ವದ ರಾಜನಾಗಿರೋ ಯೆಹೋವನು ಎಲ್ಲಿ ಬೇಕಾದ್ರೂ ಅಧಿಕಾರ ಚಲಾಯಿಸಬಹುದು.

15. ಚಕ್ರಗಳ ಗಾತ್ರದ ಬಗ್ಗೆ ಯೆಹೆಜ್ಕೇಲ ಏನು ಹೇಳಿದ ಮತ್ತು ಅದು ಹೇಗಿತ್ತು?

15 ಯೆಹೆಜ್ಕೇಲ ಆ ಚಕ್ರಗಳ ಗಾತ್ರವನ್ನ ನೋಡಿ ಮೂಕವಿಸ್ಮಿತನಾದ. ಅವು ಅಷ್ಟು ದೊಡ್ಡದಾಗಿದ್ವು! “ಆ ಚಕ್ರಗಳು ಎಷ್ಟು ಎತ್ತರವಾಗಿದ್ವು ಅಂದ್ರೆ ಅದನ್ನ ನೋಡಿದ್ರೆ ಭಯ, ಆಶ್ಚರ್ಯ ಆಗ್ತಿತ್ತು” ಅಂತ ಹೇಳಿದ. ಆಕಾಶವನ್ನ ಮುಟ್ಟುತ್ತಿರೋ ಆ ಚಕ್ರಗಳನ್ನ ಅವನು ತಲೆಯೆತ್ತಿ ನೋಡ್ತಿರೋದನ್ನ ಸ್ವಲ್ಪ ಊಹಿಸಿ. “ಆ ನಾಲ್ಕೂ ಚಕ್ರಗಳ ಸುತ್ತ ತುಂಬ ಕಣ್ಣುಗಳಿದ್ವು.” ಇದೆಲ್ಲಕ್ಕಿಂತ ಮುಖ್ಯವಾಗಿ ಆ ಚಕ್ರಗಳಿಗೆ ಇನ್ನೊಂದು ವಿಶೇಷತೆ ಇತ್ತು. “ಪ್ರತಿಯೊಂದು ಚಕ್ರದೊಳಗೆ ಇನ್ನೊಂದು ಚಕ್ರ ಇರೋ ಹಾಗೆ ಕಾಣ್ತಿತ್ತು.” ಅದರರ್ಥ ಏನು?

16, 17. (ಎ) ಒಂದು ಚಕ್ರದ ಒಳಗೆ ಇನ್ನೊಂದು ಚಕ್ರ ಹೇಗೆ ಇತ್ತು? (ಬಿ) ಯಾವ ಕಡೆಗೆ ಬೇಕಾದ್ರೂ ತಿರುಗೋ ಚಕ್ರಗಳಿಂದ ಯೆಹೋವನ ರಥದ ಬಗ್ಗೆ ಏನು ಕಲಿಬಹುದು?

16 ಅವನು ನೋಡಿದ ಪ್ರತಿಯೊಂದು ಚಕ್ರ ಎರಡು ಚಕ್ರಗಳ ಜೋಡಣೆಯಾಗಿತ್ತು. ಅವು ಚಿತ್ರದಲ್ಲಿರೋ ತರ ಒಂದರ ಒಳಗೆ ಇನ್ನೊಂದು ಚಕ್ರವನ್ನ (ಒಂದು ನೇರ, ಇನ್ನೊಂದು ಅಡ್ಡ) ಇಟ್ಟ ಹಾಗಿದ್ದವು. ಹಾಗಾಗಿ “ಅವು ಹೋಗುವಾಗ ನಾಲ್ಕು ದಿಕ್ಕಲ್ಲಿ ಯಾವ ದಿಕ್ಕಿಗೆ ಬೇಕಾದ್ರೂ ಹೋಗೋಕೆ ಆಗ್ತಿತ್ತು, ತಿರುಗೋದೇ ಬೇಕಾಗಿರಲಿಲ್ಲ.” ಈ ಚಕ್ರದ ರಚನೆಯಿಂದ ಸ್ವರ್ಗೀಯ ರಥದ ಬಗ್ಗೆ ನಾವೇನು ಕಲಿಯಬಹುದು?

17 ಆ ದೊಡ್ಡ ಚಕ್ರಗಳು ಒಂದು ಸಲ ತಿರುಗಿದರೆನೇ ತುಂಬ ದೂರ ಸಾಗ್ತಿದ್ವು. ಅವು ಮಿಂಚಿನ ವೇಗದಲ್ಲಿ ಸಾಗ್ತಿದ್ವು! (ಯೆಹೆ. 1:14) ಯಾವ ಎಂಜಿನೀಯರಿಗೂ ಕನಸುಮನಸ್ಸಲ್ಲೂ ಮಾಡೋಕೆ ಆಗದ ರೀತಿಲಿ ಈ ಚಕ್ರಗಳು ನಾಲ್ಕೂ ದಿಕ್ಕಲ್ಲೂ ತಿರುಗ್ತಿದ್ದವು. ಚಕ್ರಗಳನ್ನ ತಿರುಗಿಸದೆ ಅಥವಾ ನಿಧಾನಿಸದೆ ಯಾವ ದಿಕ್ಕಿಗೆ ಬೇಕಾದ್ರೂ ಚಲಿಸಬಹುದಿತ್ತು! ಹಾಗಂತ ಆ ಚಕ್ರಗಳು ಹಿಂದೆಮುಂದೆ ನೋಡದೆ ಹೋಗ್ತಿರಲಿಲ್ಲ. ಚಕ್ರಗಳ ಸುತ್ತ ತುಂಬ ಕಣ್ಣುಗಳಿದ್ವು. ಇದು, ರಥವು ತನ್ನ ಸುತ್ತಮುತ್ತ ಇರೋ ಎಲ್ಲವನ್ನ ಸೂಕ್ಷ್ಮವಾಗಿ ಗಮನಿಸ್ತಿತ್ತು ಅನ್ನೋದನ್ನ ಸೂಚಿಸ್ತಿತ್ತು.

ಚಕ್ರಗಳು ತುಂಬ ದೊಡ್ಡದಾಗಿದ್ದವು, ಮಿಂಚಿನ ವೇಗದಲ್ಲಿ ಚಲಿಸುತ್ತಿದ್ದವು (ಪ್ಯಾರ 17 ನೋಡಿ)

18. ಚಕ್ರದ ಗಾತ್ರ ಮತ್ತು ಅದರಲ್ಲಿರೋ ಕಣ್ಣುಗಳಿಂದ ನಾವೇನು ಕಲಿಯಬಹುದು?

18 ಈ ದರ್ಶನದಿಂದ ಯೆಹೋವ ದೇವರು ಯೆಹೆಜ್ಕೇಲನಿಗೆ ಮತ್ತು ಎಲ್ಲಾ ನಂಬಿಗಸ್ತ ಸೇವಕರಿಗೆ ತನ್ನ ಸಂಘಟನೆಯ ಸ್ವರ್ಗೀಯ ಭಾಗದ ಬಗ್ಗೆ ಏನನ್ನ ಕಲಿಸ್ತಿದ್ದಾನೆ? ಆ ರಥದ ಹೊಳೀತಿದ್ದ ಚಕ್ರಗಳು ಮತ್ತು ಅದ್ರ ಗಾತ್ರ ಸ್ವರ್ಗೀಯ ಸಂಘಟನೆಯ ಮಹಿಮೆಯನ್ನ, ಘನಗಾಂಭೀರ್ಯತೆಯನ್ನ ಸೂಚಿಸುತ್ತೆ. ಆ ಚಕ್ರಗಳ ಸುತ್ತ ಇರೋ ಕಣ್ಣುಗಳು, ಸ್ವರ್ಗೀಯ ಸಂಘಟನೆ ಎಲ್ಲವನ್ನ ಗಮನಿಸ್ತಾ ಇದೆ ಅಂತ ಸೂಚಿಸುತ್ತವೆ. ಹೌದು, ಯೆಹೋವನ ಕಣ್ಣುಗಳು ಪ್ರತಿಯೊಂದನ್ನ ನೋಡ್ತವೆ. (ಜ್ಞಾನೋ. 15:3; ಯೆರೆ. 23:24) ಯೆಹೋವ ದೇವರ ಹತ್ರ ಕೋಟ್ಯಾಂತರ ದೇವದೂತರಿದ್ದಾರೆ. ದೇವರು ಇವರನ್ನ ವಿಶ್ವದ ಯಾವ ಮೂಲೆಗೆ ಬೇಕಾದ್ರೂ ಕಳಿಸಬಹುದು. ಅವ್ರು ಸಹ ವಿಷಯಗಳನ್ನ ಸೂಕ್ಷ್ಮವಾಗಿ ಗಮನಿಸಿ ಯೆಹೋವ ದೇವರಿಗೆ ವರದಿ ಮಾಡ್ತಾರೆ.—ಇಬ್ರಿಯ 1:13, 14 ಓದಿ.

ಚಕ್ರಗಳು ಯಾವ ದಿಕ್ಕಿಗೆ ಬೇಕಾದ್ರೂ ಚಲಿಸೋ ತರ ಇದ್ವು (ಪ್ಯಾರ 17, 19 ನೋಡಿ)

19. ಯೆಹೋವನ ರಥದ ವೇಗ ಮತ್ತು ಯಾವ ಕಡೆ ಬೇಕಾದ್ರೂ ತಿರುಗೋ ಸಾಮರ್ಥ್ಯದಿಂದ ಯೆಹೋವನ ಮತ್ತು ಆತನ ಸ್ವರ್ಗೀಯ ಸಂಘಟನೆಯ ಬಗ್ಗೆ ನಾವೇನು ಕಲಿಬಹುದು?

19 ಯೆಹೋವನ ರಥ ಮಿಂಚಿನ ವೇಗದಲ್ಲಿ ಸಾಗುತ್ತೆ ಮತ್ತು ಯಾವ ದಿಕ್ಕಿಗೆ ಬೇಕಾದ್ರೂ ತಿರುಗುತ್ತೆ ಅಂತ ನೋಡಿದ್ವಿ. ಮಾನವ ಸಂಸ್ಥೆ, ಸಂಘಟನೆ ಮತ್ತು ಸರ್ಕಾರಗಳಿಗೂ ಯೆಹೋವ ದೇವರ ಸ್ವರ್ಗೀಯ ಸಂಘಟನೆಗೂ ಎಷ್ಟು ವ್ಯತ್ಯಾಸ ಅಲ್ವಾ! ಮಾನವ ಸಂಘಟನೆಗಳಿಗೆ ಅಥವಾ ಸರ್ಕಾರಗಳಿಗೆ ಲೋಕದಲ್ಲಿರೋ ಸಮಸ್ಯೆಗಳನ್ನ ಪರಿಹರಿಸೋದು ಹೇಗೆ ಅಂತ ಗೊತ್ತಿಲ್ಲ. ಸನ್ನಿವೇಶಗಳು ಬದಲಾದರೂ ಅದಕ್ಕೆ ತಕ್ಕಂತೆ ಹೊಂದಿಸಿಕೊಳ್ಳೋಕೆ ಆಗಲ್ಲ. ಅದಕ್ಕೇ ಅವು ಬೇಗ ಅಳಿದು ಹೋಗ್ತವೆ. ಆದ್ರೆ ಯೆಹೋವ ದೇವರ ಸಂಘಟನೆ ಆತನಂತೆಯೇ ಯಾವ ಸನ್ನಿವೇಶಕ್ಕೆ ಬೇಕಾದ್ರೂ ಹೊಂದಿಕೊಳ್ಳುತ್ತೆ. ಯೆಹೋವನ ಹೆಸರಿನ ಅರ್ಥ ತಿಳಿಸೋ ಹಾಗೆ ತನ್ನ ಉದ್ದೇಶವನ್ನ ಪೂರೈಸೋಕೆ ಆತನು ಏನು ಬೇಕಾದ್ರೂ ಆಗ್ತಾನೆ. (ವಿಮೋ. 3:13, 14) ಉದಾಹರಣೆಗೆ, ಯೆಹೋವ ದೇವರು ಒಂದು ಕ್ಷಣದಲ್ಲಿ ತನ್ನ ಜನರನ್ನ ರಕ್ಷಿಸಲಿಕ್ಕಾಗಿ ಯುದ್ಧವೀರ ಆಗ್ತಾನೆ, ಮರುಕ್ಷಣದಲ್ಲೇ ಪಶ್ಚಾತ್ತಾಪಪಟ್ಟ ಪಾಪಿಗಳನ್ನ ಕ್ಷಮಿಸುವ ಕರುಣಾಮಯಿ ತಂದೆಯೂ ಆಗ್ತಾನೆ. ಯಾರು ಜೀವನದಲ್ಲಿ ಕುಗ್ಗಿ ಹೋಗಿದ್ದಾರೋ ಅವ್ರಿಗೆ ಆತನು ತಾಯಿಯಂತೆ ಸಾಂತ್ವನ ಕೊಡ್ತಾನೆ.—ಕೀರ್ತ. 30:5; ಯೆಶಾ. 66:13.

20. ಯೆಹೋವನ ರಥದ ಕಡೆಗೆ ನಮಗೆ ಯಾಕೆ ಭಯಭಕ್ತಿ ಇರಬೇಕು?

20 ಯೆಹೆಜ್ಕೇಲನ ದರ್ಶನದಿಂದ ಕಲಿತ ವಿಷಯಗಳನ್ನ ಮನಸ್ಸಿನಲ್ಲಿಟ್ಟು ನಾವು ಈ ಪ್ರಶ್ನೆಯನ್ನ ಕೇಳಿಕೊಳ್ಳೋಣ: ‘ಯೆಹೋವನ ರಥದ ಬಗ್ಗೆ ನಂಗೆ ತುಂಬ ಗಣ್ಯತೆ, ಗೌರವ ಇದೆಯಾ?’ ಆ ರಥ ಈಗ್ಲೂ ಚಲಿಸುತ್ತಾ ಇದೆ ಅನ್ನೋದನ್ನ ನಾವು ಮರೀಬಾರದು. ನಮಗೆ ಬರೋ ಕಷ್ಟ-ಸಮಸ್ಯೆಗಳು ಯೆಹೋವನಿಗೆ, ಯೇಸುಗೆ ಮತ್ತು ದೇವದೂತರಿಗೆ ಕಾಣಿಸ್ತಾ ಇಲ್ಲ ಅಂತ ಯಾವತ್ತೂ ಅಂದ್ಕೊಳ್ಳಬಾರದು. ನಮ್ಮ ಅಗತ್ಯಗಳನ್ನ ಪೂರೈಸೋಕೆ ಯೆಹೋವ ತಡಮಾಡ್ತಿದ್ದಾನೆ ಅಥವಾ ಈ ಲೋಕದ ಬದಲಾಗ್ತಿರೋ ಸನ್ನಿವೇಶಕ್ಕೆ ತಕ್ಕಂತೆ ನಮ್ಮ ಸಂಘಟನೆ ಹೊಂದಿಕೊಳ್ತಿಲ್ಲ ಅಂತ ಯಾವತ್ತೂ ಯೋಚಿಸಬಾರದು. ಯೆಹೋವ ದೇವರ ಸಂಘಟನೆ ತುಂಬ ಚುರುಕಿನಿಂದ ಕೆಲಸ ಮಾಡ್ತಾ ಇದೆ ಮತ್ತು ವೇಗವಾಗಿ ಮುಂದೆ ಹೋಗ್ತಾ ಇದೆ ಅನ್ನೋದನ್ನ ಮರೀಬಾರದು. ದರ್ಶನದಲ್ಲಿ, “ಚಕ್ರಗಳೇ” ಅಂತ ಸ್ವರ್ಗದಿಂದ ಕರೆಯೋದನ್ನ ಯೆಹೆಜ್ಕೇಲ ಕೇಳಿಸಿಕೊಂಡ. (ಯೆಹೆ. 10:13) ಬಹುಶಃ ಇದು, ಚಕ್ರಗಳಿಗೆ ಮುಂದೆ ಹೋಗ್ತಾ ಇರೋಕೆ ಕೊಟ್ಟ ಆಜ್ಞೆ ಆಗಿರಬೇಕು. ಯೆಹೋವ ದೇವರು ತನ್ನ ಸಂಘಟನೆಯನ್ನ ಹೇಗೆ ನಡೆಸ್ತಿದ್ದಾನೆ ಅಂತ ಯೋಚಿಸುವಾಗ ನಮ್ಮ ಮನಸ್ಸಲ್ಲಿ ಭಯಭಕ್ತಿ ಹುಟ್ಟುತ್ತಲ್ವಾ! ಹಾಗಾದ್ರೆ ಅದನ್ನ ನಡೆಸ್ತಾ ಇರೋ ಯೆಹೋವನ ಮೇಲೆ ಇನ್ನೆಷ್ಟು ಭಯಭಕ್ತಿ ಹುಟ್ಟಬೇಕಲ್ವಾ!!

ಸಂಘಟನೆಯನ್ನ ನಡೆಸ್ತಿರೋ ಯೆಹೋವ

21, 22. ರಥದ ಪ್ರತಿಯೊಂದು ಭಾಗಕ್ಕೆ ಒಂದಕ್ಕೊಂದು ಆಧಾರ ಇಲ್ಲದಿದ್ದರೂ ಹೇಗೆ ಒಟ್ಟಿಗೆ ಚಲಿಸುತ್ತಿದ್ದವು?

21 ಈಗ ಯೆಹೆಜ್ಕೇಲನ ಗಮನ ಚಕ್ರಗಳ ಮೇಲಿರೋ ಕಲ್ಲಿನ ನೆಲದ ಮೇಲೆ ಹೋಯ್ತು. “ಅದು ಮಂಜುಗಡ್ಡೆ ತರ ಪಳಪಳ ಅಂತ ಹೊಳೀತಿತ್ತು, ರಮಣೀಯವಾಗಿತ್ತು.” (ಯೆಹೆ. 1:22) ಅದು ಕೆರೂಬಿಯರ ತಲೆ ಮೇಲೆ, ಎತ್ತರದಲ್ಲಿತ್ತು. ಅರೆಪಾರದರ್ಶಕವಾಗಿದ್ದ ಈ ನೆಲ ಥಳಥಳ ಅಂತ ಹೊಳೀತಿತ್ತು. ಇದನ್ನೆಲ್ಲಾ ಓದುವಾಗ ಕೆಲವ್ರ ಮನಸ್ಸಲ್ಲಿ ಈ ಪ್ರಶ್ನೆಗಳು ಬರಬಹುದು: ‘ಚಕ್ರಗಳ ಮೇಲೆ ಯಾವ ಆಧಾರ ಇಲ್ಲದೇ ಕಲ್ಲಿನ ನೆಲ ಹೇಗೆ ನಿಂತಿದೆ? ಒಂದಕ್ಕೊಂದು ಯಾವುದೇ ಜೋಡಣೆ ಇಲ್ಲದೆ ನಾಲ್ಕು ಚಕ್ರಗಳು ಹೇಗೆ ಒಟ್ಟಿಗೆ ಚಲಿಸುತ್ತವೆ?’ ಆದ್ರೆ ನೆನಪಿಡಿ, ಇದು ನಿಜವಾಗ್ಲೂ ಇರೋ ರಥ ಅಲ್ಲ. ನಮ್ಮ ಸಂಘಟನೆಯಲ್ಲಿರೋ ಸ್ವರ್ಗೀಯ ಭಾಗವನ್ನ ಸೂಚಿಸೋ ಸಾಂಕೇತಿಕ ರಥ. “ಜೀವಿಗಳನ್ನ ಪ್ರೇರಿಸ್ತಿದ್ದ ಪವಿತ್ರಶಕ್ತಿನೇ ಚಕ್ರಗಳಲ್ಲೂ ಇತ್ತು” ಅನ್ನೋದನ್ನ ಗಮನಿಸಿ. (ಯೆಹೆ. 1:20, 21) ನೋಡಿದ್ರಾ, ಯೆಹೋವ ದೇವರ ಪವಿತ್ರ ಶಕ್ತಿ ಕೆರೂಬಿಯರ ಮತ್ತು ಚಕ್ರಗಳ ಮೇಲೆ ಕೆಲ್ಸ ಮಾಡ್ತಿತ್ತು.

22 ಪ್ರಪಂಚದಲ್ಲೇ ಅತಿ ಬಲಾಢ್ಯ ಶಕ್ತಿ ಯೆಹೋವನ ಪವಿತ್ರ ಶಕ್ತಿ. ರಥದ ಪ್ರತಿಯೊಂದು ಭಾಗ ಜೊತೆಯಾಗಿರೋಕೆ ಮತ್ತು ಒಟ್ಟಿಗೆ ಚಲಿಸೋಕೆ ಈ ಶಕ್ತಿನೇ ಕಾರಣ. ನಾವೀಗ ಯೆಹೆಜ್ಕೇಲ ನೋಡಿದ ಮುಂದಿನ ವಿಷಯದ ಬಗ್ಗೆ ನೋಡೋಣ. ಅವನ ಗಮನ ರಥವನ್ನ ಚಲಿಸುತ್ತಿದ್ದವನ ಮೇಲೆ ಹೋಯ್ತು.

ದರ್ಶನವನ್ನ ವರ್ಣಿಸೋಕೆ ಯೆಹೆಜ್ಕೇಲನಿಗೆ ಪದಗಳೇ ಸಿಗಲಿಲ್ಲ

23. ದರ್ಶನವನ್ನ ವಿವರಿಸುವಾಗೆಲ್ಲಾ ಯೆಹೆಜ್ಕೇಲ ಯಾವ ಪದಗಳನ್ನ ಉಪಯೋಗಿಸಿದ್ದಾನೆ? ಮತ್ತು ಯಾಕೆ?

23 ಯೆಹೆಜ್ಕೇಲ 1:26-28 ಓದಿ. ಯೆಹೆಜ್ಕೇಲನು ನೋಡಿದ ದರ್ಶನದ ಬಗ್ಗೆ ವಿವರಿಸುವಾಗೆಲ್ಲಾ ತುಂಬ ಹೋಲಿಕೆಗಳನ್ನ ಉಪಯೋಗಿಸೋದನ್ನ ನೋಡಬಹುದು. ಉದಾಹರಣೆಗೆ, “ಕಾಣ್ತಿತ್ತು,” “ತರ ಇತ್ತು,” “ಹಾಗೆ ಇತ್ತು,” ‘ತರ ಏನೋ ಇತ್ತು’ ಅಂತೆಲ್ಲಾ ಹೇಳಿದ್ದಾನೆ. ಆದ್ರೆ ಇಂಥ ಪದಗಳನ್ನ ಯೆಹೆಜ್ಕೇಲ 1:26-28 ರಲ್ಲಿ ಜಾಸ್ತಿ ಬಳಸಲಾಗಿದೆ. ಈ ಅದ್ಭುತ ದರ್ಶನವನ್ನ ವಿವರಿಸೋಕೆ ಯೆಹೆಜ್ಕೇಲನಿಗೆ ಪದಗಳೇ ಸಿಗ್ಲಿಲ್ಲ ಅಂತ ಕಾಣುತ್ತೆ. ಅವನಿಗೆ “ನೀಲಮಣಿಯಿಂದ ಮಾಡಿದ ಏನೋ ಒಂದು ಕಾಣ್ತಿತ್ತು. ಅದು ಸಿಂಹಾಸನದ ತರ ಕಾಣ್ತಿತ್ತು.” ಕಡು ನೀಲಿ ಬಣ್ಣದ ಒಂದು ದೊಡ್ಡ ರತ್ನವನ್ನ ಕೆತ್ತಿ ಮಾಡಿದ ಸಿಂಹಾಸನವನ್ನ ನೀವು ಚಿತ್ರಿಸಿಕೊಳ್ಳೋಕೆ ಆಗುತ್ತಾ? ಆ ಸಿಂಹಾಸನದ ಮೇಲೆ ಕೂತಿರೋ ವ್ಯಕ್ತಿ “ನೋಡೋಕೆ ಮನುಷ್ಯನ ತರ ಇದ್ದನು.”

24, 25. (ಎ) ಯೆಹೋವ ದೇವರ ಸಿಂಹಾಸನದ ಸುತ್ತಲೂ ಇರೋ ಮಳೆಬಿಲ್ಲು ಏನನ್ನ ಸೂಚಿಸುತ್ತೆ? (ಬಿ) ಇಂಥ ದರ್ಶನಗಳನ್ನ ನೋಡಿದ ನಂಬಿಗಸ್ತರಿಗೆ ಏನಾಯ್ತು?

24 ಸಿಂಹಾಸನದ ಮೇಲಿದ್ದ ಮಹಿಮಾಭರಿತ ವ್ಯಕ್ತಿ ಸ್ಪಷ್ಟವಾಗಿ ಕಾಣಿಸ್ತಿರಲಿಲ್ಲ. ಯಾಕಂದರೆ ಅವನ ಸುತ್ತಲೂ ಬೆಂಕಿಯ ಜ್ವಾಲೆ ಬರ್ತಿರೋ ತರ ಇತ್ತು. ಯೆಹೋವನ ಪ್ರಭೆಯನ್ನ ನೋಡೋಕಾಗದೆ ಯೆಹೆಜ್ಕೇಲ ಕೈಯನ್ನ ಅಡ್ಡ ಹಿಡಿದು, ಕಣ್ಣು ಕಿರಿದು ಮಾಡಿ ನೋಡ್ತಿರೋದನ್ನ ನೀವು ಸ್ವಲ್ಪ ಕಲ್ಪಿಸಿಕೊಳ್ತೀರಾ? ಆಗ ಅವನು ಭವ್ಯವಾದ ಇನ್ನೊಂದು ಮುಖ್ಯ ವಿಷಯವನ್ನ ನೋಡಿದನು. “ಆತನ ಸುತ್ತ ತೇಜಸ್ಸು ಪ್ರಕಾಶಿಸ್ತಿತ್ತು, ಆ ಬೆಳಕು ಹೇಗಿತ್ತಂದ್ರೆ ಮಳೆ ಸುರಿದಾಗ ಮೋಡಗಳ ಮಧ್ಯ ಕಾಣಿಸೋ ಮಳೆಬಿಲ್ಲಿನ ತರ ಇತ್ತು.” ಮಳೆಬಿಲ್ಲು ನೋಡಿದಾಗ ನಿಮಗೆ ಹೇಗನಿಸುತ್ತೆ, ತುಂಬ ಖುಷಿಯಾಗುತ್ತೆ ಅಲ್ವಾ? ಇದು ನಮ್ಮ ಸೃಷ್ಟಿಕರ್ತನ ಮಹಿಮೆಯನ್ನ ಸಾರಿಹೇಳುತ್ತೆ! ಜೊತೆಗೆ, ಈ ಬಣ್ಣಬಣ್ಣದ ಮಳೆಬಿಲ್ಲು ಜಲಪ್ರಳಯದ ನಂತ್ರ ಯೆಹೋವನು ಮಾಡಿದ ಒಪ್ಪಂದವನ್ನೂ ನೆನಪಿಸುತ್ತೆ. (ಆದಿ. 9:11-16) ಯೆಹೋವ ಸರ್ವಶಕ್ತನಾಗಿದ್ದರೂ ಶಾಂತಿಯ ದೇವರು. (ಇಬ್ರಿ. 13:20) ಶಾಂತಿ ಅನ್ನೋ ಗುಣ ಯೆಹೋವನಿಂದ ಹುಟ್ಟಿ ಆತನ ನಂಬಿಗಸ್ತ ಸೇವಕರಲ್ಲಿ ಹರಿಯುತ್ತೆ.

ಯೆಹೋವನ ಸಿಂಹಾಸನದ ಸುತ್ತಲೂ ಇರೋ ಮಳೆಬಿಲ್ಲು ನಾವು ಆರಾಧಿಸೋ ಯೆಹೋವ ಶಾಂತಿಯ ದೇವರಾಗಿದ್ದಾನೆ ಅಂತ ಸೂಚಿಸುತ್ತೆ (ಪ್ಯಾರ 24 ನೋಡಿ)

25 ಈ ದರ್ಶನವನ್ನ ನೋಡಿದಾಗ ಯೆಹೆಜ್ಕೇಲನಿಗೆ ಏನಾಯ್ತು? “ಅದನ್ನ ನೋಡ್ದಾಗ ನಾನು ಅಡ್ಡಬಿದ್ದೆ” ಅಂತ ಅವನು ಹೇಳಿದ. ಹೌದು, ದೇವಭಯದಿಂದಲೂ ಆಶ್ಚರ್ಯದಿಂದಲೂ ಅವನು ಅಡ್ಡಬಿದ್ದ. ಯೆಹೋವ ದೇವರ ದರ್ಶನಗಳನ್ನ ನೋಡಿದ ಬೇರೆ ಪ್ರವಾದಿಗಳು ಕೂಡ ಇದೇ ರೀತಿ ಮಾಡಿದ್ರು. ದರ್ಶನಗಳನ್ನ ನೋಡ್ದಾಗ ಅವ್ರಿಗೆ ‘ನಾವೇನೂ ಅಲ್ಲ’ ಅಂತ ಅನಿಸಿರುತ್ತೆ, ಭಯ ಆಗಿರುತ್ತೆ. (ಯೆಶಾ. 6:1-5; ದಾನಿ. 10:8, 9; ಪ್ರಕ. 1:12-17) ಆದ್ರೆ ಆಮೇಲೆ ಅವರಿಗೆ ಆ ದರ್ಶನಗಳಿಂದ ಬಲ ಸಿಕ್ಕಿರುತ್ತೆ. ಯೆಹೆಜ್ಕೇಲನಿಗೂ ಈ ದರ್ಶನದಿಂದ ಬಲ ಸಿಕ್ಕಿರುತ್ತೆ ಅನ್ನೋದ್ರಲ್ಲಿ ಸಂಶಯನೇ ಇಲ್ಲ. ಬೈಬಲಿನಲ್ಲಿರೋ ಇಂಥ ವೃತ್ತಾಂತಗಳನ್ನ ಓದುವಾಗ ನಮಗೂ ಬಲ ಸಿಗುತ್ತೆ.

26. ಈ ದರ್ಶನದಿಂದ ಯೆಹೆಜ್ಕೇಲ ಹೇಗೆ ಸಾಂತ್ವನ ಪಡ್ಕೊಂಡ?

26 ಯೆಹೆಜ್ಕೇಲನಿಗೆ ಬಾಬೆಲಿನಲ್ಲಿದ್ದ ದೇವಜನರ ಕಷ್ಟವನ್ನ ನೋಡಿ ದುಃಖ ಆಗಿರಬಹುದು. ಆದ್ರೆ ಈ ದರ್ಶನದಿಂದ ಅವನಿಗೆ ಖಂಡಿತ ಸಾಂತ್ವನ ಸಿಕ್ಕಿರುತ್ತೆ. ದೇವರ ಸೇವಕರು ಯೆರೂಸಲೇಮಿನಲ್ಲಿರಲಿ ಅಥವಾ ದೂರದ ಬಾಬೆಲಿನಲ್ಲಿರಲಿ ಯೆಹೋವನ ಕಣ್ಗಾವಲಿನಲ್ಲಿದ್ದಾರೆ. ಅವ್ರು ಯೆಹೋವನು ಸಹಾಯ ಮಾಡೋಕೆ ಆಗದಷ್ಟು ದೂರದಲ್ಲಿಲ್ಲ. ಸ್ವರ್ಗೀಯ ರಥ ಅಥವಾ ಸಂಘಟನೆಯನ್ನ ನಡೆಸ್ತಿರೋ ಯೆಹೋವನ ವಿರುದ್ಧ ನಿಲ್ಲೋ ತಾಕತ್ತು ಸೈತಾನನಿಗೆ ಇಲ್ಲವೇ ಇಲ್ಲ! (ಕೀರ್ತನೆ 118:6 ಓದಿ.) ಯೆಹೆಜ್ಕೇಲ ನೋಡಿದ ದರ್ಶನದಲ್ಲಿ ಆ ಚಕ್ರಗಳು ಭೂಮಿಯನ್ನ ಮುಟ್ಟುತ್ತಿದ್ವು. ಅಂದ್ರೆ ಆ ರಥ ಮನುಷ್ಯರಿಂದ ದೂರ ಇರಲಿಲ್ಲ. (ಯೆಹೆ. 1:19) ಕೈದಿಗಳಾಗಿದ್ದ ನಂಬಿಗಸ್ತ ಜನರ ಬಗ್ಗೆ ದೇವರಿಗೆ ಕನಿಕರ, ಕಾಳಜಿ ಇತ್ತು ಮತ್ತು ಅವ್ರು ಎಲ್ಲೇ ಇದ್ರೂ ಯೆಹೋವ ದೇವರ ಪ್ರೀತಿಯ ಆರೈಕೆಯಲ್ಲಿದ್ರು ಅಂತ ಇದ್ರಿಂದ ಸ್ಪಷ್ಟವಾಗಿ ಗೊತ್ತಾಗುತ್ತೆ.

ಸ್ವರ್ಗೀಯ ರಥದ ಬಗ್ಗೆ ತಿಳಿದುಕೊಳ್ಳೋದ್ರಿಂದ ನಮಗೇನು ಪ್ರಯೋಜನ?

27. ಈ ದರ್ಶನದ ಬಗ್ಗೆ ತಿಳಿದುಕೊಳ್ಳೋದ್ರಿಂದ ನಮಗೇನು ಪ್ರಯೋಜನ?

27 ಈ ದರ್ಶನದ ಬಗ್ಗೆ ತಿಳಿದುಕೊಳ್ಳೋದ್ರಿಂದ ನಮಗೇನಾದ್ರೂ ಪ್ರಯೋಜನ ಇದೆಯಾ? ಖಂಡಿತ. ಸೈತಾನ ಶುದ್ಧ ಆರಾಧನೆಯ ಮೇಲೆ ಹಿಂದೆಂದಿಗಿಂತಲೂ ಈಗ ಹೆಚ್ಚು ಆಕ್ರಮಣ ಮಾಡ್ತಿದ್ದಾನೆ. ನಾವು ಒಂಟಿಯಾಗಿದ್ದೀವಿ, ನಮಗ್ಯಾರ ಸಹಾಯನೂ ಇಲ್ಲ ಅಂತ ಯೋಚಿಸಬೇಕು ಅನ್ನೋದು ಅವನ ಆಸೆ. ಯೆಹೋವ ಮತ್ತು ಆತನ ಸಂಘಟನೆ ನಮಗೆ ಸಹಾಯ ಮಾಡೋಕೆ ಆಗದಷ್ಟು ದೂರದಲ್ಲಿ ನಾವಿದ್ದೀವಿ ಅಂತ ನಾವು ನೆನಸಬೇಕು ಅನ್ನೋದೇ ಅವನ ಆಸೆ. ಆದ್ರೆ ಇಂಥ ಸುಳ್ಳನ್ನ ಯಾವತ್ತೂ ನಂಬಬೇಡಿ. (ಕೀರ್ತ. 139:7-12) ಈ ದರ್ಶನದ ಬಗ್ಗೆ ತಿಳುಕೊಳ್ಳುವಾಗ ನಮಗೂ ಆಶ್ಚರ್ಯ ಅನಿಸುತ್ತೆ. ನಾವು ಯೆಹೆಜ್ಕೇಲನ ತರ ಭಯದಿಂದ ಅಡ್ಡಬೀಳದೆ ಇರಬಹುದು. ಆದ್ರೆ ಯೆಹೋವನ ಸ್ವರ್ಗೀಯ ಸಂಘಟನೆಗಿರೋ ಶಕ್ತಿ, ವೇಗ, ಯಾವ ಕಡೆಗೆ ಬೇಕಾದ್ರೂ ತಿರುಗೋ, ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಳ್ಳೋ ಸಾಮರ್ಥ್ಯದ ಬಗ್ಗೆ ಹಾಗೂ ಅದಕ್ಕಿರೋ ಮಹಿಮೆಯ ಬಗ್ಗೆ ಕಲಿಯುವಾಗ ಮೂಕವಿಸ್ಮಿತರಾಗ್ತೇವೆ. ನಮಗೂ ಬಲ, ಸಾಂತ್ವನ ಸಿಗುತ್ತೆ.

28, 29. ಕಳೆದ ನೂರು ವರ್ಷಗಳಲ್ಲಿ ಯೆಹೋವನ ರಥ ವೇಗವಾಗಿ ಚಲಿಸಿದೆ ಅಂತ ಹೇಗೆ ಗೊತ್ತಾಗುತ್ತೆ?

28 ಯೆಹೋವ ದೇವರ ಸಂಘಟನೆಯ ಒಂದು ಭಾಗ ಭೂಮಿಯಲ್ಲೂ ಇದೆ ಅನ್ನೋದನ್ನ ಮರೀಬೇಡಿ. ಸಂಘಟನೆಯ ಈ ಭಾಗದಲ್ಲಿರೋರು ಅಪರಿಪೂರ್ಣ ಮಾನವರಾಗಿದ್ದಾರೆ. ಆದ್ರೂ ಯೆಹೋವ ಅವರನ್ನ ಬಳಸಿ ಭೂಮಿಯಲ್ಲಿ ಏನೆಲ್ಲಾ ಸಾಧಿಸಿದ್ದಾನೆ ಅಂತ ನೋಡಿ! ಮನುಷ್ಯರ ಕೈಯಿಂದ ಮಾಡೋಕೆ ಸಾಧ್ಯವಾಗದ ವಿಷಯಗಳನ್ನ ಆತನು ಅವ್ರಿಂದ ಮಾಡಿಸಿದ್ದಾನೆ. (ಯೋಹಾ. 14:12) ಗಾಡ್ಸ್‌ ಕಿಂಗ್‌ಡಮ್‌ ರೂಲ್ಸ್‌! ಅನ್ನೋ ಪುಸ್ತಕದಲ್ಲಿ ನೋಡಿದ್ರೆ ಕಳೆದ 100 ವರ್ಷಗಳಲ್ಲಿ ನಾವು ಸಾರೋ ಕೆಲಸವನ್ನ ಬೃಹತ್‌ ಪ್ರಮಾಣದಲ್ಲಿ ಮಾಡಿದ್ದೇವೆ ಅಂತ ಗೊತ್ತಾಗುತ್ತೆ. ಅಷ್ಟೇ ಅಲ್ಲ ಯೆಹೋವನ ಸಂಘಟನೆ ನಿಜ ಕ್ರೈಸ್ತರಿಗೆ ಅನೇಕ ರೀತಿಯ ತರಬೇತಿಯನ್ನ ಕೊಟ್ಟಿದೆ, ಅನೇಕ ಕೇಸುಗಳನ್ನ ಗೆದ್ದಿದೆ ಮತ್ತು ದೇವರ ಇಷ್ಟವನ್ನ ಮಾಡಲಿಕ್ಕಾಗಿ ಹೊಸ ಹೊಸ ತಂತ್ರಜ್ಞಾನಗಳನ್ನ ಬಳಸ್ತಿದೆ.

29 ಯೆಹೋವನ ಸ್ವರ್ಗೀಯ ರಥ ವೇಗವಾಗಿ ಚಲಿಸ್ತಾ ಇದೆ. ಈ ಕೆಟ್ಟ ಲೋಕದಲ್ಲಿ ಶುದ್ಧ ಆರಾಧನೆಯನ್ನ ಪುನಃಸ್ಥಾಪಿಸಲಿಕ್ಕಾಗಿ ಏನೆಲ್ಲಾ ಮಾಡಲಾಗಿದೆ ಅನ್ನೋದನ್ನ ನೋಡುವಾಗ ಅದು ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತೆ. ಇಂಥ ಸಂಘಟನೆಯಲ್ಲಿ ಒಬ್ಬರಾಗಿ ಯೆಹೋವನನ್ನ ಆರಾಧಿಸೋದು ತುಂಬ ಅಮೂಲ್ಯ ಅವಕಾಶ ಅಲ್ವಾ!—ಕೀರ್ತ. 84:10.

ಯೆಹೋವನ ಸಂಘಟನೆಯ ಭೂಭಾಗ ವೇಗವಾಗಿ ಚಲಿಸುತ್ತಾ ಇದೆ (ಪ್ಯಾರ 28, 29 ನೋಡಿ)

30. ಮುಂದಿನ ಅಧ್ಯಾಯದಲ್ಲಿ ನಾವೇನು ಕಲಿತೇವೆ?

30 ಯೆಹೆಜ್ಕೇಲ ಪುಸ್ತಕದಿಂದ ಕಲಿಯೋಕೆ ತುಂಬ ವಿಷಯಗಳಿವೆ. ಮುಂದಿನ ಅಧ್ಯಾಯದಲ್ಲಿ ಆ ನಾಲ್ಕು “ಜೀವಿಗಳ” ಬಗ್ಗೆ ಕಲಿತೇವೆ. ಇವ್ರಿಂದ ನಾವು ವಿಶ್ವದ ರಾಜ ಯೆಹೋವನ ಬಗ್ಗೆ ಏನನ್ನ ಕಲಿಬಹುದು? ನೋಡೋಣ.

^ ಪ್ಯಾರ. 1 ಇದು ಚಿನ್ನ ಮತ್ತು ಬೆಳ್ಳಿ ಮಿಶ್ರಿತ ಲೋಹ ಅಂತ ಯೆಹೆಜ್ಕೇಲ ಹೇಳಿದ.

^ ಪ್ಯಾರ. 5 ಇದು ಯೆರೂಸಲೇಮಿಂದ ಬಾಬೆಲಿಗಿರೋ ನೇರ ದೂರ. ಆದ್ರೆ ಕೈದಿಗಳನ್ನ ಬಾಬೆಲಿಗೆ ಕರ್ಕೊಂಡು ಹೋಗಿದ್ದ ದಾರಿ ಇದರ ಎರಡು ಪಟ್ಟು ಇದ್ದಿರಬೇಕು.