ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಜ್ಞಾನಕ್ಕೆ ಸ್ವನಿಯಂತ್ರಣವನ್ನು ಕೂಡಿಸಿರಿ

ನಿಮ್ಮ ಜ್ಞಾನಕ್ಕೆ ಸ್ವನಿಯಂತ್ರಣವನ್ನು ಕೂಡಿಸಿರಿ

ನಿಮ್ಮ ಜ್ಞಾನಕ್ಕೆ ಸ್ವನಿಯಂತ್ರಣವನ್ನು ಕೂಡಿಸಿರಿ

“ನಿಮ್ಮ ಜ್ಞಾನಕ್ಕೆ ಸ್ವನಿಯಂತ್ರಣವನ್ನು . . . ಕೂಡಿಸಿರಿ.”​—2 ಪೇತ್ರ 1:​5-8, NW.

1. ಮಾನವರ ಅನೇಕ ಸಮಸ್ಯೆಗಳು ಯಾವ ಅಸಾಮರ್ಥ್ಯದ ಫಲಿತಾಂಶವಾಗಿವೆ?

ಅಮಲೌಷಧದ ದುರುಪಯೋಗದ ವಿರುದ್ಧ ನಡೆಸಲ್ಪಟ್ಟ ಒಂದು ದೊಡ್ಡ ಕಾರ್ಯಾಚರಣೆಯ ಸಮಯದಲ್ಲಿ, ಅಮೆರಿಕದಲ್ಲಿನ ಯುವ ಜನರಿಗೆ ಈ ಬುದ್ಧಿವಾದವು ಕೊಡಲ್ಪಟ್ಟಿತು: “ಇಲ್ಲ ಎಂದು ಹೇಳಿಬಿಡಿ ಅಷ್ಟೇ.” ಅಮಲೌಷಧದ ದುರುಪಯೋಗಕ್ಕೆ ಮಾತ್ರವಲ್ಲ ಅತಿಯಾದ ಕುಡಿತ, ಕೆಟ್ಟ ಅಥವಾ ಅನೈತಿಕ ಜೀವನ ಶೈಲಿಗಳು, ಮೋಸಕರವಾದ ವ್ಯಾಪಾರ ವಹಿವಾಟುಗಳು ಮತ್ತು ‘ದೇಹದ ಆಶೆಗಳಿಗೆ’ ಪ್ರತಿಯೊಬ್ಬರೂ ಇಲ್ಲ ಎಂದು ಹೇಳುತ್ತಿದ್ದಲ್ಲಿ ಅಥವಾ ಅವುಗಳನ್ನು ಕಡಾಖಂಡಿತವಾಗಿ ನಿರಾಕರಿಸುತ್ತಿದ್ದಲ್ಲಿ, ಸನ್ನಿವೇಶವು ಎಷ್ಟು ಉತ್ತಮವಾಗಿರುತ್ತಿತ್ತು! (ರೋಮಾಪುರ 13:14) ಆದರೂ, ಕಡಾಖಂಡಿತವಾಗಿ ನಿರಾಕರಿಸುವುದು ಯಾವಾಗಲೂ ಸುಲಭವಾಗಿರುತ್ತದೆ ಎಂದು ಯಾರು ತಾನೇ ಹೇಳುವರು?

2. (ಎ) ಕಡಾಖಂಡಿತವಾಗಿ ನಿರಾಕರಿಸಲು ಕಷ್ಟವಾಗುವಂಥ ಸಂಗತಿಯು ಹೊಸದೇನಲ್ಲ ಎಂಬುದನ್ನು ಯಾವ ಬೈಬಲ್‌ ಉದಾಹರಣೆಗಳು ತೋರಿಸುತ್ತವೆ? (ಬಿ) ಈ ಉದಾಹರಣೆಗಳು ಏನು ಮಾಡುವಂತೆ ನಮ್ಮನ್ನು ಉತ್ತೇಜಿಸಬೇಕು?

2 ಎಲ್ಲಾ ಅಪರಿಪೂರ್ಣ ಮಾನವರಿಗೆ ಸ್ವನಿಯಂತ್ರಣವನ್ನು ತೋರಿಸುವುದು ಕಷ್ಟಕರವಾಗಿರುವುದರಿಂದ, ನಾವು ಎದುರಿಸುವಂಥ ಯಾವುದೇ ಕುಂದುಕೊರತೆಗಳನ್ನು ಹೇಗೆ ಸರಿಪಡಿಸುವುದು ಎಂಬುದನ್ನು ತಿಳಿದುಕೊಳ್ಳುವುದರಲ್ಲಿ ನಾವು ಆಸಕ್ತರಾಗಿರಬೇಕು. ಗತಕಾಲಗಳಲ್ಲಿ, ದೇವರ ಸೇವೆಮಾಡಲು ಬಹಳವಾಗಿ ಹೆಣಗಾಡಿದರೂ ಕೆಲವೊಮ್ಮೆ ಕೇವಲ ಕಡಾಖಂಡಿತವಾಗಿ ನಿರಾಕರಿಸುವ ವಿಷಯದಲ್ಲಿ ಸಮಸ್ಯೆಯನ್ನು ಎದುರಿಸಿದಂಥ ಜನರ ಕುರಿತು ಬೈಬಲು ನಮಗೆ ತಿಳಿಸುತ್ತದೆ. ದಾವೀದನನ್ನು ಮತ್ತು ಬತ್ಷೆಬೆಯೊಂದಿಗೆ ಅವನು ನಡೆಸಿದ ಹಾದರದ ಪಾಪವನ್ನು ಜ್ಞಾಪಕಕ್ಕೆ ತನ್ನಿರಿ. ಇದು, ಹಾದರದಿಂದ ಹುಟ್ಟಿದ ಅವರ ಮಗುವಿನ ಹಾಗೂ ಬೆತ್ಷೆಬೆಯ ಗಂಡನ ಮರಣಕ್ಕೆ ಕಾರಣವಾಯಿತು​—ವಾಸ್ತವದಲ್ಲಿ ಇವರಿಬ್ಬರೂ ನಿರ್ದೋಷಿಗಳಾಗಿದ್ದರು. (2 ಸಮುವೇಲ 11:1-27; 12:15-18) ಅಥವಾ, “ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ” ಎಂದು ಬಹಿರಂಗವಾಗಿ ಒಪ್ಪಿಕೊಂಡ ಅಪೊಸ್ತಲ ಪೌಲನ ಕುರಿತು ತುಸು ಆಲೋಚಿಸಿರಿ. (ರೋಮಾಪುರ 7:19) ಕೆಲವೊಮ್ಮೆ ನಿಮಗೂ ಇದೇ ರೀತಿಯ ಹತಾಶೆಯಾಗುತ್ತದೋ? ಪೌಲನು ಮುಂದುವರಿಸಿದ್ದು: “ಅಂತರಾತ್ಮದೊಳಗೆ ದೇವರ ನಿಯಮದಲ್ಲಿ ಆನಂದಪಡುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ನೋಡುತ್ತೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ. ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು?” (ರೋಮಾಪುರ 7:22-24) ಬೈಬಲಿನ ಉದಾಹರಣೆಗಳು, ಹೆಚ್ಚಿನ ಸ್ವನಿಯಂತ್ರಣವನ್ನು ಪಡೆದುಕೊಳ್ಳಲಿಕ್ಕಾಗಿರುವ ನಮ್ಮ ಹೋರಾಟವನ್ನು ನಾವು ಎಂದಿಗೂ ನಿಲ್ಲಿಸಬಾರದೆಂಬ ನಮ್ಮ ದೃಢನಿರ್ಧಾರವನ್ನು ಇನ್ನಷ್ಟು ಬಲಪಡಿಸಬೇಕು.

ಸ್ವನಿಯಂತ್ರಣ​—ಕಲಿಯಬೇಕಾದ ಒಂದು ಪಾಠ

3. ಸ್ವನಿಯಂತ್ರಣವನ್ನು ತೋರಿಸುವುದು ತುಂಬ ಸುಲಭವೆಂದು ನಾವು ಏಕೆ ನಿರೀಕ್ಷಿಸಸಾಧ್ಯವಿಲ್ಲ ಎಂಬುದನ್ನು ವಿವರಿಸಿರಿ.

3 ಕಡಾಖಂಡಿತವಾಗಿ ನಿರಾಕರಿಸುವಂಥ ಸಾಮರ್ಥ್ಯವನ್ನು ಒಳಗೂಡಿರುವ ಸ್ವನಿಯಂತ್ರಣವು, 2 ಪೇತ್ರ 1:​5-7ರಲ್ಲಿ ನಂಬಿಕೆ, ಸದ್ಗುಣ, ಜ್ಞಾನ, ತಾಳ್ಮೆ, ದೈವಿಕ ಭಕ್ತಿ, ಸಹೋದರ ವಾತ್ಸಲ್ಯ ಹಾಗೂ ಪ್ರೀತಿಯೊಂದಿಗೆ ಉಲ್ಲೇಖಿಸಲ್ಪಟ್ಟಿದೆ. ಈ ಅಪೇಕ್ಷಣೀಯ ಗುಣಗಳಲ್ಲಿ ಯಾವುದೂ ಸಂಪೂರ್ಣವಾಗಿ ಹುಟ್ಟಿನಿಂದಲೇ ಬಂದಿರುವುದಿಲ್ಲ. ಇವುಗಳನ್ನು ಬೆಳೆಸಿಕೊಳ್ಳಬೇಕಾಗಿದೆ. ಈ ಗುಣಗಳನ್ನು ಗಮನಾರ್ಹ ಮಟ್ಟದಲ್ಲಿ ತೋರಿಸಲಿಕ್ಕಾಗಿ ದೃಢನಿರ್ಧಾರ ಹಾಗೂ ಪ್ರಯತ್ನದ ಅಗತ್ಯವಿದೆ. ಹೀಗಿರುವಾಗ, ಈ ಗುಣಗಳಿಗಿಂತಲೂ ಸ್ವನಿಯಂತ್ರಣವನ್ನು ಬೆಳೆಸಿಕೊಳ್ಳುವುದು ತುಂಬ ಸುಲಭವೆಂದು ನಾವು ನಿರೀಕ್ಷಿಸಲಾದೀತೋ?

4. ಸ್ವನಿಯಂತ್ರಣದ ವಿಷಯದಲ್ಲಿ ತಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಅನೇಕರು ಏಕೆ ನೆನಸುತ್ತಾರೆ, ಆದರೆ ಇದು ಯಾವುದಕ್ಕೆ ಒಂದು ಸೂಚನೆಯಾಗಿದೆ?

4 ಸ್ವನಿಯಂತ್ರಣದ ವಿಷಯದಲ್ಲಿ ತಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಅನೇಕರು ನೆನಸಬಹುದು ನಿಜ. ಅವರು ತಮಗೆ ಇಷ್ಟಬಂದಂತೆ ಜೀವಿಸುತ್ತಾರೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ತಮ್ಮ ಅಪರಿಪೂರ್ಣ ಶರೀರದ ಆದೇಶಗಳಿಗೆ ಅನುಸಾರವಾಗಿ ತಮ್ಮನ್ನು ನಡೆಸಿಕೊಳ್ಳುತ್ತಾರೆ ಮತ್ತು ಇದು ಸ್ವತಃ ತಮ್ಮ ಮೇಲೆ ಹಾಗೂ ಇತರರ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದರ ಕುರಿತು ಸ್ವಲ್ಪವೂ ಯೋಚಿಸುವುದಿಲ್ಲ. (ಯೂದ 10) ಕಡಾಖಂಡಿತವಾಗಿ ನಿರಾಕರಿಸಲು ಬೇಕಾಗಿರುವ ಸಾಮರ್ಥ್ಯ ಹಾಗೂ ಸಿದ್ಧಮನಸ್ಸಿನ ಕೊರತೆಯು, ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಸುವ್ಯಕ್ತವಾಗುತ್ತಿದೆ. ಮತ್ತು ಇದು, ಪೌಲನು ‘ಕಡೇ ದಿವಸಗಳು’ ಎಂದು ಯಾವುದರ ಕುರಿತು ತಿಳಿಸಿದನೋ ಆ ಕಾಲಾವಧಿಯಲ್ಲಿ ನಾವು ಖಂಡಿತವಾಗಿಯೂ ಜೀವಿಸುತ್ತಿದ್ದೇವೆ ಎಂಬುದಕ್ಕೆ ಒಂದು ಸೂಚನೆಯಾಗಿದೆ. ಅವನು ಮುಂತಿಳಿಸಿದ್ದು: ‘ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವು. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ದಮೆ [“ಸ್ವನಿಯಂತ್ರಣ,” NW]ಯಿಲ್ಲದವರೂ ಆಗಿರುವರು.’​—2 ತಿಮೊಥೆಯ 3:1-3.

5. ಯೆಹೋವನ ಸಾಕ್ಷಿಗಳು ಸ್ವನಿಯಂತ್ರಣದ ವಿಷಯದಲ್ಲಿ ಏಕೆ ಆಸಕ್ತರಾಗಿದ್ದಾರೆ, ಮತ್ತು ಯಾವ ಬುದ್ಧಿವಾದವು ಈಗಲೂ ಸಮಂಜಸವಾಗಿದೆ?

5 ಸ್ವನಿಯಂತ್ರಣದ ಆವಶ್ಯಕತೆಯು ಯಾವ ಪಂಥಾಹ್ವಾನವನ್ನು ತಂದೊಡ್ಡುತ್ತದೆ ಎಂಬುದು ಯೆಹೋವನ ಸಾಕ್ಷಿಗಳಿಗೆ ಚೆನ್ನಾಗಿ ಗೊತ್ತಿದೆ. ಪೌಲನಂತೆ, ದೇವರ ಮಟ್ಟಗಳಿಗೆ ಅನುಸಾರವಾಗಿ ಜೀವಿಸುವ ಮೂಲಕ ಆತನನ್ನು ಸಂತೋಷಪಡಿಸುವ ಬಯಕೆ ಮತ್ತು ಅವರ ಅಪರಿಪೂರ್ಣ ಶರೀರವು ಅವರನ್ನು ಮುನ್ನಡಿಸಬಹುದಾದ ಮಾರ್ಗಕ್ರಮದ ನಡುವೆ ಹೋರಾಟವನ್ನು ನಡೆಸಬೇಕಾಗಿದೆ ಎಂಬ ಅರಿವು ಅವರಿಗಿದೆ. ಈ ಕಾರಣದಿಂದಲೇ ಅವರು ದೀರ್ಘಕಾಲದಿಂದಲೂ ಈ ಹೋರಾಟವನ್ನು ಹೇಗೆ ಜಯಿಸುವುದು ಎಂಬ ವಿಷಯದಲ್ಲಿ ಆಸಕ್ತರಾಗಿದ್ದಾರೆ. 1916ರಷ್ಟು ಹಿಂದೆ, ನೀವು ಓದುತ್ತಿರುವ ಈ ಪತ್ರಿಕೆಯ ಆರಂಭದ ಸಂಚಿಕೆಯು, “ನಮ್ಮ ಮೇಲೆ, ನಮ್ಮ ಆಲೋಚನೆಗಳ ಮೇಲೆ, ನಮ್ಮ ಮಾತುಗಳು ಹಾಗೂ ನಮ್ಮ ನಡತೆಯ ಮೇಲೆ ಹತೋಟಿಯನ್ನು ಪಡೆದುಕೊಳ್ಳುವಂಥ ಯೋಗ್ಯವಾದ ಮಾರ್ಗವನ್ನು ಅನುಸರಿಸುವುದರ” ಕುರಿತು ಮಾತಾಡಿತು. ಅದು ಫಿಲಿಪ್ಪಿ 4:8ನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ಸಲಹೆ ನೀಡಿತು. ಆ ವಚನದಲ್ಲಿರುವ ದೈವಿಕ ಬುದ್ಧಿವಾದವು ಮೂಲತಃ 2,000 ವರ್ಷಗಳಷ್ಟು ಹಿಂದೆ ನೀಡಲ್ಪಟ್ಟಿತಾದರೂ, ಅದು ಈಗಲೂ ಸಮಂಜಸವಾಗಿದೆ ಮತ್ತು 1916ರಷ್ಟು ಹಿಂದಿನ ಸಮಯಕ್ಕಿಂತಲೂ ಈಗ ಇದನ್ನು ಅನುಸರಿಸುವುದು ಹೆಚ್ಚು ಕಷ್ಟಕರವಾಗಿರಬಹುದು. ಆದರೂ, ಲೌಕಿಕ ಬಯಕೆಗಳನ್ನು ಕಡಾಖಂಡಿತವಾಗಿ ನಿರಾಕರಿಸಲು ಕ್ರೈಸ್ತರು ಬಹಳಷ್ಟು ಹೆಣಗಾಡುತ್ತಾರೆ. ಹೀಗೆ ನಿರಾಕರಿಸುವ ಮೂಲಕ ತಮ್ಮ ಸೃಷ್ಟಿಕರ್ತನ ಮಾತಿಗೆ ಅನುಸಾರವಾಗಿ ತಾವು ನಡೆಯುತ್ತಿದ್ದೇವೆ ಎಂಬುದು ಅವರಿಗೆ ಗೊತ್ತಿದೆ.

6. ಸ್ವನಿಯಂತ್ರಣವನ್ನು ಬೆಳೆಸಿಕೊಳ್ಳುತ್ತಿರುವಾಗ, ನಾವೇಕೆ ಹತಾಶರಾಗಬಾರದು?

6 ಗಲಾತ್ಯ 5:​22, 23ರಲ್ಲಿ (NW) ಸ್ವನಿಯಂತ್ರಣವು ‘ದೇವರಾತ್ಮದಿಂದ ಉಂಟಾಗುವ ಫಲಗಳ’ ಒಂದು ಭಾಗವಾಗಿ ಉಲ್ಲೇಖಿಸಲ್ಪಟ್ಟಿದೆ. “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ”ದೊಂದಿಗೆ ನಾವು ಈ ಗುಣವನ್ನು ತೋರಿಸುವಲ್ಲಿ, ನಾವು ಮಹತ್ತರವಾದ ಪ್ರಯೋಜನಗಳನ್ನು ಪಡೆದುಕೊಳ್ಳುವೆವು. ಪೇತ್ರನು ವಿವರಿಸಿದಂತೆ, ಈ ಗುಣಗಳನ್ನು ತೋರಿಸುವುದು, ದೇವರಿಗೆ ನಾವು ಸಲ್ಲಿಸುವ ಸೇವೆಯಲ್ಲಿ “ನಿಷ್ಕ್ರಿಯರೂ ನಿಷ್ಫಲರೂ” ಆಗದಂತೆ ನಮ್ಮನ್ನು ತಡೆಯುವುದು. (2 ಪೇತ್ರ 1:​8, NW) ಆದರೆ ನಾವು ಬಯಸುವಷ್ಟು ತ್ವರಿತಗತಿಯಲ್ಲಿ ಹಾಗೂ ಸಂಪೂರ್ಣವಾಗಿ ಈ ಗುಣಗಳನ್ನು ತೋರಿಸಲು ಒಂದುವೇಳೆ ನಾವು ತಪ್ಪಿಹೋಗುವುದಾದರೆ, ನಾವು ಹತಾಶರಾಗಬಾರದು ಅಥವಾ ಸ್ವತಃ ನಮ್ಮನ್ನು ಖಂಡಿಸಿಕೊಳ್ಳಬಾರದು. ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಇನ್ನೊಬ್ಬ ವಿದ್ಯಾರ್ಥಿಗಿಂತ ಹೆಚ್ಚು ಬೇಗನೆ ಪಾಠವು ತಲೆಗೆ ಹತ್ತುತ್ತದೆ ಎಂಬುದನ್ನು ನೀವು ಗಮನಿಸಿರಬಹುದು. ಅಥವಾ ಉದ್ಯೋಗದ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ತನ್ನ ಜೊತೆ ಕೆಲಸಗಾರರಿಗಿಂತ ಹೆಚ್ಚು ಬೇಗನೆ ಒಂದು ಹೊಸ ಕೆಲಸವನ್ನು ಕಲಿಯುತ್ತಾನೆ. ಅದೇ ರೀತಿಯಲ್ಲಿ, ಕೆಲವರು ಇತರರಿಗಿಂತ ಹೆಚ್ಚು ಬೇಗನೆ ಕ್ರೈಸ್ತ ಗುಣಗಳನ್ನು ತೋರಿಸಲು ಕಲಿಯುತ್ತಾರೆ. ಇಲ್ಲಿ ಪ್ರಾಮುಖ್ಯವಾದ ಅಂಶವೇನೆಂದರೆ, ನಮ್ಮಿಂದ ಸಾಧ್ಯವಾದಷ್ಟು ಅತ್ಯುತ್ತಮ ವಿಧದಲ್ಲಿ ದೈವಿಕ ಗುಣಗಳನ್ನು ಬೆಳೆಸಿಕೊಳ್ಳುತ್ತಾ ಇರುವುದೇ. ತನ್ನ ವಾಕ್ಯ ಹಾಗೂ ಸಭೆಯ ಮೂಲಕ ಯೆಹೋವನು ಒದಗಿಸುವ ಸಹಾಯವನ್ನು ಪೂರ್ಣ ರೀತಿಯಲ್ಲಿ ಸದ್ವಿನಿಯೋಗಿಸಿಕೊಳ್ಳುವ ಮೂಲಕ ನಾವಿದನ್ನು ಮಾಡಸಾಧ್ಯವಿದೆ. ನಮ್ಮ ಗುರಿಯನ್ನು ವೇಗದಿಂದ ಸಾಧಿಸುವುದು ಪ್ರಾಮುಖ್ಯವಲ್ಲ, ಬದಲಾಗಿ ಪ್ರಗತಿಯನ್ನು ಮಾಡುತ್ತಾ ಸಾಗಲು ದೃಢಸಂಕಲ್ಪದ ಪ್ರಯತ್ನಗಳನ್ನು ಮಾಡುವುದೇ ಹೆಚ್ಚು ಪ್ರಾಮುಖ್ಯವಾಗಿದೆ.

7. ಸ್ವನಿಯಂತ್ರಣವು ಪ್ರಾಮುಖ್ಯವಾಗಿದೆ ಎಂಬುದನ್ನು ಯಾವುದು ತೋರಿಸುತ್ತದೆ?

7 ದೇವರಾತ್ಮವು ಉತ್ಪಾದಿಸುವ ಗುಣಗಳಲ್ಲಿ ಸ್ವನಿಯಂತ್ರಣವು ಕೊನೆಯಲ್ಲಿ ಪಟ್ಟಿಮಾಡಲ್ಪಟ್ಟಿರುವುದಾದರೂ, ಇತರ ಗುಣಗಳಿಗೆ ಹೋಲಿಸುವಾಗ ಇದೇನೂ ಕಡಿಮೆ ಮಹತ್ವವುಳ್ಳ ಗುಣವೇನಲ್ಲ. ವಾಸ್ತವದಲ್ಲಿ ಸಂಗತಿಯು ಇದಕ್ಕೆ ವ್ಯತಿರಿಕ್ತವಾಗಿದೆ. ಇದನ್ನು ಮನಸ್ಸಿನಲ್ಲಿಡೋಣ ಏನೆಂದರೆ, ಒಂದುವೇಳೆ ನಮ್ಮಲ್ಲಿ ಪರಿಪೂರ್ಣ ಮಟ್ಟದ ಸ್ವನಿಯಂತ್ರಣವಿರುತ್ತಿದ್ದರೆ, ‘ಶರೀರಭಾವದ ಎಲ್ಲಾ ಕರ್ಮಗಳಿಂದ’ ನಾವು ದೂರವಿರಸಾಧ್ಯವಿತ್ತು. ಆದರೂ, ಅಪರಿಪೂರ್ಣ ಮಾನವರು ಒಂದಲ್ಲ ಒಂದು ರೀತಿಯಲ್ಲಿ ‘ಶರೀರಭಾವದ ಕರ್ಮಗಳನ್ನು, ಅಂದರೆ ಜಾರತ್ವ ಬಂಡುತನ ನಾಚಿಕೆಗೇಡಿತನ ವಿಗ್ರಹಾರಾಧನೆ ಮಾಟ ಹಗೆತನ ಜಗಳ ಹೊಟ್ಟೆಕಿಚ್ಚು ಸಿಟ್ಟು ಕಕ್ಷಭೇದ ಭಿನ್ನಮತ ಮತ್ಸರ ಕುಡಿಕತನ ದುಂದೌತನಕ್ಕೆ’ ಒಳಗಾಗುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. (ಗಲಾತ್ಯ 5:​19, 20) ಆದುದರಿಂದಲೇ, ನಮ್ಮ ಹೃದಮನಗಳಿಂದ ಹಾನಿಕರವಾದ ಪ್ರವೃತ್ತಿಗಳನ್ನು ಬೇರುಸಮೇತ ಕಿತ್ತುಹಾಕುವ ದೃಢನಿರ್ಧಾರವುಳ್ಳವರಾಗಿ, ನಾವು ಸತತ ಹೋರಾಟವನ್ನು ನಡಿಸುತ್ತಾ ಇರಬೇಕಾಗಿದೆ.

ಕೆಲವರಿಗೆ ಅತ್ಯಧಿಕ ಹೋರಾಟವನ್ನು ನಡಿಸಲಿಕ್ಕಿರುತ್ತದೆ

8. ಯಾವ ಅಂಶಗಳು ಕೆಲವರು ಸ್ವನಿಯಂತ್ರಣವನ್ನು ತೋರಿಸುವುದನ್ನು ವಿಶೇಷವಾಗಿ ಕಷ್ಟಕರವಾದದ್ದಾಗಿ ಮಾಡುತ್ತವೆ?

8 ಕೆಲವು ಮಂದಿ ಕ್ರೈಸ್ತರಿಗೆ ಸ್ವನಿಯಂತ್ರಣವನ್ನು ತೋರಿಸುವುದು ಇತರರಿಗಿಂತಲೂ ತುಂಬ ಕಷ್ಟಕರವಾಗಿರುತ್ತದೆ. ಏಕೆ? ಹೆತ್ತವರ ತರಬೇತಿ ಅಥವಾ ಗತ ಅನುಭವಗಳು ಈ ಸನ್ನಿವೇಶಕ್ಕೆ ಕಾರಣವಾಗಿರಬಹುದು. ಸ್ವನಿಯಂತ್ರಣವನ್ನು ಬೆಳೆಸಿಕೊಳ್ಳುವುದರಲ್ಲಿ ಮತ್ತು ಅದನ್ನು ತೋರಿಸುವುದರಲ್ಲಿ ನಮಗೆ ಯಾವುದೇ ಸಮಸ್ಯೆಯು ಇಲ್ಲದಿರುವುದಾದರೆ ಅದು ಸಂತೋಷಕ್ಕೆ ಕಾರಣವಾಗಿರುತ್ತದೆ. ಆದರೆ ಈ ಗುಣವನ್ನು ತೋರಿಸಲು ತುಂಬ ಕಷ್ಟಪಡುತ್ತಿರುವವರೊಂದಿಗೆ ವ್ಯವಹರಿಸುವಾಗ, ಅವರ ಸ್ವನಿಯಂತ್ರಣದ ಕೊರತೆಯು ನಮಗೆ ಯಾವುದಾದರೊಂದು ರೀತಿಯ ವೈಯಕ್ತಿಕ ಸಮಸ್ಯೆಯನ್ನು ಉಂಟುಮಾಡುವುದಾದರು ಸಹ, ನಾವು ಸಹಾನುಭೂತಿಯುಳ್ಳವರೂ ಅವರನ್ನು ಅರ್ಥಮಾಡಿಕೊಳ್ಳುವವರೂ ಆಗಿರಬೇಕು ಎಂಬುದಂತೂ ನಿಶ್ಚಯ. ನಮ್ಮ ಸ್ವಂತ ಅಪರಿಪೂರ್ಣತೆಯನ್ನು ಪರಿಗಣಿಸುವಾಗ, ಸ್ವನೀತಿವಂತ ಮನೋಭಾವವನ್ನು ತೋರಿಸಲು ನಮ್ಮಲ್ಲಿ ಯಾರಿಗಾದರೂ ಸಕಾರಣವಿದೆಯೋ?​—ರೋಮಾಪುರ 3:23; ಎಫೆಸ 4:2.

9. ಕೆಲವರಲ್ಲಿ ಯಾವ ದೌರ್ಬಲ್ಯಗಳಿವೆ ಮತ್ತು ಈ ದೌರ್ಬಲ್ಯಗಳು ಯಾವಾಗ ಸಂಪೂರ್ಣವಾಗಿ ಜಯಿಸಲ್ಪಡುವವು?

9 ದೃಷ್ಟಾಂತಕ್ಕಾಗಿ: ತಂಬಾಕು ಸೇವನೆ ಅಥವಾ “ಮನಃಸ್ಥಿತಿಯನ್ನು ಬದಲಾಯಿಸುವಂಥ” ಅಮಲೌಷಧಗಳ ಉಪಯೋಗವನ್ನು ನಿಲ್ಲಿಸಿರುವಂಥ ಕೆಲವು ಜೊತೆ ಕ್ರೈಸ್ತರಲ್ಲಿ, ಕೆಲವೊಮ್ಮೆ ಈಗಲೂ ಅವುಗಳಿಗಾಗಿ ತೀವ್ರವಾದ ಹಂಬಲವಿರುವುದು ನಮಗೆ ಗೊತ್ತಿರಬಹುದು. ಅಥವಾ ಆಹಾರವನ್ನು ಅಥವಾ ಮದ್ಯಪಾನೀಯಗಳನ್ನು ಮಿತವಾದ ಪ್ರಮಾಣದಲ್ಲಿ ಸೇವಿಸುವುದು ಕೆಲವರಿಗೆ ಕಷ್ಟಕರವಾಗಿರಬಹುದು. ಇನ್ನಿತರರಿಗೆ ತಮ್ಮ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವ ಸಮಸ್ಯೆಯಿದೆ, ಆದುದರಿಂದಲೇ ಅವರು ಅನೇಕವೇಳೆ ಮಾತಿನಲ್ಲಿ ತಪ್ಪುತ್ತಾರೆ. ಇಂಥ ಕುಂದುಕೊರತೆಗಳೊಂದಿಗೆ ವ್ಯವಹರಿಸಲಿಕ್ಕಾಗಿ, ಸ್ವನಿಯಂತ್ರಣವನ್ನು ಬೆಳೆಸಿಕೊಳ್ಳುವುದರಲ್ಲಿ ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಮಾಡುವ ಆಗತ್ಯವಿದೆ. ಏಕೆ? ಯಾಕೋಬ 3:2 ವಾಸ್ತವಿಕವಾಗಿ ಹೀಗೆ ಒಪ್ಪಿಕೊಳ್ಳುತ್ತದೆ: “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.” ಇನ್ನೂ ಅನೇಕರಿಗೆ ಜೂಜಾಟವಾಡುವ ಕಟ್ಟಾಸೆಯಿರುತ್ತದೆ. ಅಥವಾ ಅವರಿಗೆ ತಮ್ಮ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ತುಂಬ ಕಷ್ಟಕರವಾದ ಸಂಗತಿಯಾಗಿರಬಹುದು. ಈ ದೌರ್ಬಲ್ಯಗಳು ಇಲ್ಲವೆ ತದ್ರೀತಿಯ ಇತರ ದೌರ್ಬಲ್ಯಗಳನ್ನು ಯಶಸ್ವಿಕರವಾಗಿ ನಿಭಾಯಿಸಿಕೊಂಡು ಹೋಗುವುದನ್ನು ಕಲಿಯಲು ತುಂಬ ಸಮಯ ಹಿಡಿಯಬಹುದು. ಈಗ ನಾವು ಗಮನಾರ್ಹ ರೀತಿಯ ಪ್ರಗತಿಯನ್ನು ಮಾಡಸಾಧ್ಯವಿರುವುದಾದರೂ, ನಾವು ಪರಿಪೂರ್ಣತೆಯನ್ನು ತಲಪಿದಾಗ ಮಾತ್ರ ಕೆಟ್ಟ ಬಯಕೆಗಳು ಶಾಶ್ವತವಾಗಿ ಇಲ್ಲವಾಗಿಸಲ್ಪಡುವವು. ಅಷ್ಟರ ತನಕ ನಾವು ಸ್ವನಿಯಂತ್ರಣವನ್ನು ತೋರಿಸಲು ಹೆಣಗಾಡುವಲ್ಲಿ, ಅದು ಪಾಪಪೂರ್ಣ ಜೀವನ ಶೈಲಿಗೆ ಹಿಂದಿರುಗುವುದರಿಂದ ದೂರವಿರುವಂತೆ ನಮಗೆ ಸಹಾಯಮಾಡುವುದು. ಈ ಹೋರಾಟವು ಮುಂದುವರಿಯುತ್ತಿರುವಾಗ, ಎಂದಿಗೂ ಪ್ರಯತ್ನವನ್ನು ಬಿಟ್ಟುಬಿಡದಿರಲು ನಾವು ಪರಸ್ಪರ ನೆರವು ನೀಡುತ್ತಾ ಇರೋಣ.​—ಅ. ಕೃತ್ಯಗಳು 14:21, 22.

10. (ಎ) ಲೈಂಗಿಕ ವಿಷಯಗಳಲ್ಲಿ ಸ್ವನಿಯಂತ್ರಣವನ್ನು ತೋರಿಸುವುದು ಕೆಲವರಿಗೆ ವಿಶೇಷವಾಗಿ ಪಂಥಾಹ್ವಾನದಾಯಕವಾಗಿದೆ ಏಕೆ? (ಬಿ) ಒಬ್ಬ ಸಹೋದರನು ಯಾವ ದೊಡ್ಡ ಬದಲಾವಣೆಯನ್ನು ಮಾಡಿದನು? (16ನೆಯ ಪುಟದಲ್ಲಿರುವ ಚೌಕವನ್ನು ನೋಡಿ.)

10 ಸ್ವನಿಯಂತ್ರಣವನ್ನು ತೋರಿಸುವುದು ಕೆಲವರಿಗೆ ಕಷ್ಟಕರವಾಗಿರುವ ಇನ್ನೊಂದು ಕ್ಷೇತ್ರವು, ಲೈಂಗಿಕತೆಯ ವಿಷಯದಲ್ಲೇ ಆಗಿದೆ. ಮಾನವ ಲೈಂಗಿಕತೆಯು ಯೆಹೋವ ದೇವರ ಸೃಷ್ಟಿಯ ಒಂದು ಭಾಗವಾಗಿದೆ. ಆದರೂ, ದೇವರ ಮಟ್ಟಗಳಿಗೆ ಅನುಸಾರವಾಗಿ ಲೈಂಗಿಕತೆಯನ್ನು ಅದರ ತಕ್ಕ ಸ್ಥಾನದಲ್ಲಿಡುವ ವಿಷಯವು ಕೆಲವರಿಗೆ ವಿಶೇಷವಾಗಿ ತುಂಬ ಕಷ್ಟಕರವಾಗಿರುತ್ತದೆ. ಅದರಲ್ಲೂ ಅಸಾಮಾನ್ಯವಾದ ಮಟ್ಟದಲ್ಲಿ ಲೈಂಗಿಕ ಬಯಕೆಯು ಅವರಲ್ಲಿರುವುದರಿಂದ, ಅವರ ಕಷ್ಟವು ಇನ್ನಷ್ಟು ಜಟಿಲಗೊಳ್ಳಬಹುದು. ನಾವು ಲೈಂಗಿಕತೆಯ ಹುಚ್ಚು ಹಿಡಿದಿರುವ ಲೋಕವೊಂದರಲ್ಲಿ ಜೀವಿಸುತ್ತಿದ್ದೇವೆ ಮತ್ತು ಅದು ಅನೇಕ ವಿಧಗಳಲ್ಲಿ ಕಾಮೋದ್ರೇಕದ ಜ್ವಾಲೆಗೆ ಗಾಳಿಹಾಕಲು ಪ್ರಯತ್ನಿಸುತ್ತದೆ. ವಿವಾಹದ ಅಪಕರ್ಷಗಳಿಲ್ಲದೆ ದೇವರ ಸೇವೆಯನ್ನು ಮಾಡಲಿಕ್ಕಾಗಿ ಸ್ವಲ್ಪ ಕಾಲಾವಧಿಯ ವರೆಗಾದರೂ ಅವಿವಾಹಿತರಾಗಿ ಉಳಿಯಲು ಬಯಸುವಂಥ ಕ್ರೈಸ್ತರಿಗೆ ಇದು ಒಂದು ದೊಡ್ಡ ಸಮಸ್ಯೆಯನ್ನು ಉಂಟುಮಾಡಬಲ್ಲದು. (1 ಕೊರಿಂಥ 7:32, 33, 37, 38) ಆದರೆ “ಕಾಮತಾಪಪಡುವದಕ್ಕಿಂತ ಮದುವೆಮಾಡಿಕೊಳ್ಳುವದು ಉತ್ತಮವಷ್ಟೆ” ಎಂಬ ಶಾಸ್ತ್ರೀಯ ಆದೇಶಕ್ಕೆ ಹೊಂದಿಕೆಯಲ್ಲಿ ಅವರು ಮದುವೆಮಾಡಿಕೊಳ್ಳಲು ನಿರ್ಧರಿಸಬಹುದು​—ಇದು ನಿಶ್ಚಯವಾಗಿಯೂ ಗೌರವಾರ್ಹವಾದದ್ದಾಗಿದೆ. ಅದೇ ಸಮಯದಲ್ಲಿ ಅವರು ಶಾಸ್ತ್ರವಚನಗಳ ಸಲಹೆಯ ಮೇರೆಗೆ “ಕರ್ತನಲ್ಲಿ ಮಾತ್ರವೇ” ವಿವಾಹವಾಗಲು ದೃಢನಿರ್ಧಾರವನ್ನು ಮಾಡಿರುತ್ತಾರೆ. (1 ಕೊರಿಂಥ 7:​9, 39, NW) ತನ್ನ ನೀತಿಯ ಮೂಲತತ್ತ್ವಗಳನ್ನು ಎತ್ತಿಹಿಡಿಯುವುದರಲ್ಲಿ ಅವರು ತೋರಿಸುವ ಆಸಕ್ತಿಯನ್ನು ನೋಡಿ ಯೆಹೋವನು ಸಂತೋಷಿಸುತ್ತಾನೆ ಎಂಬ ಖಾತ್ರಿ ನಮಗಿರಸಾಧ್ಯವಿದೆ. ಇಂಥ ಉಚ್ಚ ನೈತಿಕ ಮಟ್ಟಗಳನ್ನು ಹಾಗೂ ಸಮಗ್ರತೆಯನ್ನು ಹೊಂದಿರುವಂಥ ಸತ್ಯಾರಾಧಕರೊಂದಿಗೆ ಸಹವಾಸಮಾಡುವುದು ಅವರ ಜೊತೆ ಕ್ರೈಸ್ತರಿಗೂ ಸಂತೋಷಕರ ಸಂಗತಿಯಾಗಿದೆ.

11. ಮದುವೆಮಾಡಿಕೊಳ್ಳುವುದರಲ್ಲಿ ಆಸಕ್ತರಾಗಿರುವುದಾದರೂ ಹಾಗೆ ಮಾಡಲು ಅಸಮರ್ಥರಾಗಿರುವಂಥ ಒಬ್ಬ ಸಹೋದರನಿಗೆ ಅಥವಾ ಸಹೋದರಿಗೆ ನಾವು ಹೇಗೆ ಸಹಾಯಮಾಡಸಾಧ್ಯವಿದೆ?

11 ಯೋಗ್ಯವಾದ ಸಂಗಾತಿಯು ಸಿಗದಿರುವಲ್ಲಿ ಆಗೇನು? ಮದುವೆಯಾಗುವ ಬಯಕೆಯು ತೀವ್ರವಾಗಿರುವುದಾದರೂ, ಹಾಗೆ ಮಾಡಲು ಅಶಕ್ತನಾಗಿರುವಂಥ ಒಬ್ಬ ವ್ಯಕ್ತಿಯು ಅನುಭವಿಸಸಾಧ್ಯವಿರುವ ಆಶಾಭಂಗವನ್ನು ತುಸು ಊಹಿಸಿಕೊಳ್ಳಿರಿ! ಅವನು ಯೋಗ್ಯವಾದ ಸಂಗಾತಿಗಾಗಿ ಇನ್ನೂ ಹುಡುಕುತ್ತಿರುವಾಗ, ತನ್ನ ಸ್ನೇಹಿತರು ಮದುವೆಯಾಗಿ ಸುಖವಾಗಿರುವುದನ್ನು ಅವನು ನೋಡಬಹುದು. ಈ ಸನ್ನಿವೇಶದಲ್ಲಿರುವ ಕೆಲವರಿಗೆ, ಹಸ್ತಮೈಥುನದ ದುರಭ್ಯಾಸವು ಸತತವಾಗಿ ಕಾಡುತ್ತಿರುವ ಸಮಸ್ಯೆಯಾಗಿ ಪರಿಣಮಿಸಬಹುದು. ಏನೇ ಆದರೂ, ಪರಿಶುದ್ಧರಾಗಿ ಉಳಿಯಲು ಹೆಣಗಾಡುತ್ತಿರುವ ಇನ್ನೊಬ್ಬ ವ್ಯಕ್ತಿಯನ್ನು ಯಾವ ಕ್ರೈಸ್ತನೂ ಅಜಾಗರೂಕತೆಯಿಂದಾಗಿ ಮನಗುಂದಿಸಬಾರದು. “ನಿನಗಿನ್ನೂ ಮದುವೆಯಾಗಿಲ್ಲವಾ?” ಎಂಬ ಗಣನೆರಹಿತ ಹೇಳಿಕೆಗಳನ್ನು ನಾವು ಮಾಡುವಲ್ಲಿ, ಉದ್ದೇಶಪೂರ್ವಕವಲ್ಲದಂಥ ರೀತಿಯಲ್ಲಿ ನಾವು ನಿರುತ್ತೇಜನವನ್ನು ಉಂಟುಮಾಡಸಾಧ್ಯವಿದೆ. ಯಾವುದೇ ದುರುದ್ದೇಶವಿಲ್ಲದೆ ಅದನ್ನು ಹೇಳಿರಬಹುದಾದರೂ, ನಮ್ಮ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವ ಅರ್ಥದಲ್ಲಿ ಸ್ವನಿಯಂತ್ರಣವನ್ನು ತೋರಿಸುವುದು ಎಷ್ಟು ಉಪಯುಕ್ತಕರವಾಗಿರುವುದು! (ಕೀರ್ತನೆ 39:1) ನಮ್ಮಲ್ಲಿ ಯಾರು ಅವಿವಾಹಿತರಾಗಿರುವಾಗ ಪರಿಶುದ್ಧರಾಗಿ ಉಳಿಯುತ್ತಾರೊ ಅವರು, ನಮ್ಮ ಹೃತ್ಪೂರ್ವಕವಾದ ಪ್ರಶಂಸೆಗೆ ಅರ್ಹರಾಗಿದ್ದಾರೆ. ಅವರಿಗೆ ನಿರುತ್ತೇಜನವನ್ನು ಉಂಟುಮಾಡುವಂಥ ರೀತಿಯಲ್ಲಿ ಏನನ್ನಾದರೂ ಹೇಳುವುದಕ್ಕೆ ಬದಲಾಗಿ, ನಾವು ಅವರನ್ನು ಉತ್ತೇಜಿಸುವವರಾಗಿಲು ಶ್ರಮಿಸಸಾಧ್ಯವಿದೆ. ದೃಷ್ಟಾಂತಕ್ಕಾಗಿ, ಪ್ರೌಢ ಕ್ರೈಸ್ತರ ಒಂದು ಚಿಕ್ಕ ಗುಂಪು ಒಂದು ಊಟಕ್ಕಾಗಿಯೋ ಅಥವಾ ಹಿತಕರವಾದ ಕ್ರೈಸ್ತ ಸಹವಾಸಕ್ಕಾಗಿಯೋ ಕೂಡಿಬರುವಾಗ, ಅವಿವಾಹಿತ ವ್ಯಕ್ತಿಗಳನ್ನೂ ಅದರಲ್ಲಿ ಒಳಗೂಡಿಸಲು ನಾವು ಪ್ರಯತ್ನವನ್ನು ಮಾಡಸಾಧ್ಯವಿದೆ.

ವಿವಾಹದಲ್ಲಿ ಸ್ವನಿಯಂತ್ರಣ

12. ಯಾರು ವಿವಾಹಿತರಾಗಿದ್ದಾರೋ ಅವರು ಸಹ ಒಂದಷ್ಟು ಸ್ವನಿಯಂತ್ರಣವನ್ನು ತೋರಿಸುವ ಅಗತ್ಯವಿದೆ ಏಕೆ?

12 ವಿವಾಹಿತರಾಗಿರುವುದು ತಾನೇ ಲೈಂಗಿಕ ವಿಷಯದಲ್ಲಿ ಸ್ವನಿಯಂತ್ರಣವನ್ನು ತೋರಿಸುವ ಅಗತ್ಯವನ್ನು ಯಾವ ರೀತಿಯಲ್ಲಿಯೂ ತಗ್ಗಿಸುವುದಿಲ್ಲ. ಉದಾಹರಣೆಗೆ, ಗಂಡನ ಹಾಗೂ ಹೆಂಡತಿಯ ಲೈಂಗಿಕ ಆವಶ್ಯಕತೆಗಳು ಅಜಗಜಾಂತರವಾಗಿರಬಹುದು. ಅಥವಾ ಒಬ್ಬ ಸಂಗಾತಿಯ ಶಾರೀರಿಕ ಸ್ಥಿತಿಗತಿಯು ಕೆಲವೊಮ್ಮೆ ಸಾಮಾನ್ಯವಾದ ಲೈಂಗಿಕ ಸಂಬಂಧಗಳನ್ನು ಹೆಚ್ಚು ಕಷ್ಟಕರವಾದದ್ದಾಗಿ ಮಾಡಬಹುದು ಅಥವಾ ಕೆಲವೊಮ್ಮೆ ಅಂಥ ಸಂಬಂಧಗಳನ್ನು ಅಸಾಧ್ಯಗೊಳಿಸಲೂಬಹುದು. ಪ್ರಾಯಶಃ ಹಿಂದಿನ ಅನುಭವಗಳ ಕಾರಣ, “ಗಂಡನು ಹೆಂಡತಿಗೆ ಸಲ್ಲತಕ್ಕದ್ದನ್ನು ಸಲ್ಲಿಸಲಿ, ಹಾಗೆಯೇ ಹೆಂಡತಿಯು ಗಂಡನಿಗೆ ಸಲ್ಲಿಸಲಿ” ಎಂಬ ಶಾಸ್ತ್ರೀಯ ಆದೇಶಕ್ಕೆ ವಿಧೇಯತೆ ತೋರಿಸುವುದು ಒಬ್ಬ ಸಂಗಾತಿಗೆ ಪಂಥಾಹ್ವಾನದಾಯಕವಾಗಿರಬಹುದು. ಇಂಥ ಸನ್ನಿವೇಶದಲ್ಲಿ, ಇನ್ನೊಬ್ಬ ಸಂಗಾತಿಯು ಹೆಚ್ಚಿನ ಸ್ವನಿಯಂತ್ರಣವನ್ನು ತೋರಿಸುವ ಅಗತ್ಯವಿರಬಹುದು. ವಿವಾಹಿತ ಕ್ರೈಸ್ತರಿಗೆ ಪೌಲನು ಕೊಟ್ಟ ಪ್ರೀತಿಭರಿತ ಸಲಹೆಯನ್ನು ಅವರಿಬ್ಬರೂ ಮನಸ್ಸಿನಲ್ಲಿಟ್ಟುಕೊಳ್ಳಸಾಧ್ಯವಿದೆ: “ಪ್ರಾರ್ಥನೆಗೆ ಮನಸ್ಸು ಕೊಡುವದಕ್ಕಾಗಿ ನೀವು ಪರಸ್ಪರ ಸಮ್ಮತಿಯಿಂದ ಸ್ವಲ್ಪಕಾಲ ದಂಪತಿಧರ್ಮವನ್ನು ಬಿಟ್ಟು ಅಗಲಿರಬಹುದೇ ಹೊರತು ಅನ್ಯಥಾ ಹಾಗೆ ಮಾಡಬಾರದು; ಆ ಮೇಲೆ ಸೈತಾನನು ನಿಮಗೆ ದಮೆಯಿಲ್ಲದಿರುವದನ್ನು ನೋಡಿ ನಿಮಗೆ ದುಷ್ಪ್ರೇರಣೆಮಾಡದಂತೆ ತಿರಿಗಿ ಕೂಡಿಕೊಳ್ಳಿರಿ.”​—1 ಕೊರಿಂಥ 7:3, 5.

13. ಸ್ವನಿಯಂತ್ರಣವನ್ನು ತೋರಿಸಲು ಹೆಣಗಾಡುತ್ತಿರುವವರ ಪರವಾಗಿ ನಾವೇನು ಮಾಡಸಾಧ್ಯವಿದೆ?

13 ವಿವಾಹಿತ ದಂಪತಿಗಳಿಬ್ಬರೂ ಅತ್ಯಂತ ಆಪ್ತವಾದ ಈ ಸಂಬಂಧದಲ್ಲಿ ಯೋಗ್ಯವಾದ ಸ್ವನಿಯಂತ್ರಣವನ್ನು ತೋರಿಸಲು ಕಲಿತಿರುವಲ್ಲಿ, ಅವರೆಷ್ಟು ಕೃತಜ್ಞರಾಗಿರಸಾಧ್ಯವಿದೆ! ಅದೇ ಸಮಯದಲ್ಲಿ, ಈ ಕ್ಷೇತ್ರದಲ್ಲಿ ಸ್ವನಿಯಂತ್ರಣವನ್ನು ತೋರಿಸಲು ಹೆಣಗಾಡುತ್ತಿರುವ ಜೊತೆ ಆರಾಧಕರ ಕಡೆಗೆ ಅವರು ಪರಿಗಣನೆಯನ್ನೂ ತೋರಿಸಬೇಕಾಗಿದೆ. ಸ್ವನಿಯಂತ್ರಣವನ್ನು ತೋರಿಸಲಿಕ್ಕಾಗಿ ತಮ್ಮ ಹೋರಾಟವನ್ನು ಮುಂದುವರಿಸಲು ಹಾಗೂ ಅಯೋಗ್ಯ ಬಯಕೆಗಳನ್ನು ಜಯಿಸಲಿಕ್ಕಾಗಿರುವ ಹೆಜ್ಜೆಗಳನ್ನು ತೆಗೆದುಕೊಳ್ಳಲು ನಮ್ಮ ಆತ್ಮಿಕ ಸಹೋದರರಿಗೆ ಒಳನೋಟ, ಧೈರ್ಯ ಹಾಗೂ ದೃಢಸಂಕಲ್ಪವನ್ನು ಕೊಡುವಂತೆ ಯೆಹೋವನ ಬಳಿ ಪ್ರಾರ್ಥಿಸಲು ನಾವೆಂದಿಗೂ ಮರೆಯಬಾರದು.​—ಫಿಲಿಪ್ಪಿ 4:​6, 7.

ಪರಸ್ಪರ ಸಹಾಯಮಾಡುವುದನ್ನು ಮುಂದುವರಿಸಿ

14. ನಾವು ಜೊತೆ ಕ್ರೈಸ್ತರೊಂದಿಗೆ ಸಹಾನುಭೂತಿಯಿಂದ ಹಾಗೂ ಪರಿಗಣನೆಯಿಂದ ವ್ಯವಹರಿಸಬೇಕು ಏಕೆ?

14 ಕೆಲವೊಮ್ಮೆ, ನಮಗೆ ಯಾವುದೇ ರೀತಿಯಲ್ಲಿ ತೊಂದರೆಯಿರದಂಥ ವಿಚಾರದಲ್ಲಿ ಸ್ವನಿಯಂತ್ರಣವನ್ನು ತೋರಿಸಲು ಹೆಣಗಾಡುತ್ತಿರುವ ಜೊತೆ ಕ್ರೈಸ್ತರ ಕಡೆಗೆ ಪರಿಗಣನೆಯನ್ನು ತೋರಿಸುವುದು ನಮಗೆ ಕಷ್ಟಕರವಾಗಿರಬಹುದು. ಆದರೆ ಜನರ ಸ್ವಭಾವ ಭಿನ್ನವಾಗಿರುತ್ತದೆ. ಕೆಲವರು ಸುಲಭವಾಗಿ ಭಾವನೆಗಳ ಕೈವಶವಾಗುತ್ತಾರೆ; ಇತರರಿಗೆ ಆ ಸಮಸ್ಯೆಯಿರುವುದಿಲ್ಲ. ಕೆಲವರಿಗೆ ಸ್ವತಃ ತಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ತುಲನಾತ್ಮಕವಾಗಿ ಸುಲಭವಾದದ್ದಾಗಿರುತ್ತದೆ, ಅವರಿಗೆ ಸ್ವನಿಯಂತ್ರಣದ ವಿಷಯದಲ್ಲಿ ದೊಡ್ಡ ಸಮಸ್ಯೆಯೇನಿರುವುದಿಲ್ಲ. ಇತರರಿಗೆ ಇದು ತುಂಬ ಕಷ್ಟಕರವಾಗಿರುತ್ತದೆ. ಆದರೂ, ಈ ಗುಣವನ್ನು ತೋರಿಸಲು ಹೆಣಗಾಡುತ್ತಿರುವ ವ್ಯಕ್ತಿಯು ಒಬ್ಬ ದುಷ್ಟ ವ್ಯಕ್ತಿಯಾಗಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಅಂಥ ಜೊತೆ ಕ್ರೈಸ್ತರಿಗೆ ನಮ್ಮ ಪರಿಗಣನೆ ಹಾಗೂ ಸಹಾನುಭೂತಿಯ ಆವಶ್ಯಕತೆಯಿದೆ. ಸ್ವನಿಯಂತ್ರಣವನ್ನು ಇನ್ನೂ ಹೆಚ್ಚು ಪ್ರಮಾಣದಲ್ಲಿ ತೋರಿಸಲು ಶ್ರಮಿಸುತ್ತಿರುವವರ ಕಡೆಗೆ ಕರುಣೆಯನ್ನು ತೋರಿಸುತ್ತಾ ಹೋಗುವಾಗ, ನಮ್ಮ ಸ್ವಂತ ಸಂತೋಷವು ಸಹ ಇದರಲ್ಲಿ ಒಳಗೂಡಿರುತ್ತದೆ. ಮತ್ತಾಯ 5:7ರಲ್ಲಿ (NW) ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳಿಂದ ಇದನ್ನು ನಾವು ಮನಗಾಣಸಾಧ್ಯವಿದೆ.

15. ಕೀರ್ತನೆ 130:3ರಲ್ಲಿರುವ ಮಾತುಗಳು ಸ್ವನಿಯಂತ್ರಣದ ವಿಷಯದಲ್ಲಿ ಏಕೆ ಸಾಂತ್ವನದಾಯಕವಾಗಿವೆ?

15 ಕೆಲವು ಸಂದರ್ಭಗಳಲ್ಲಿ ಕ್ರೈಸ್ತ ವ್ಯಕ್ತಿತ್ವವನ್ನು ತೋರಿಸಲು ವಿಫಲನಾಗಬಹುದಾದಂಥ ಒಬ್ಬ ಜೊತೆ ಕ್ರೈಸ್ತನ ವಿಷಯದಲ್ಲಿ ನಾವೆಂದೂ ತಪ್ಪು ತೀರ್ಮಾನಕ್ಕೆ ಬರಬಾರದು. ಸ್ವನಿಯಂತ್ರಣ ತೋರಿಸುವುದರಲ್ಲಿ ನಾವು ನೂರು ಸಲ ತಪ್ಪಿಬಿದ್ದಿರುವುದನ್ನು ಯೆಹೋವನು ನೋಡಿದರೂ, ಒಂದೇ ಒಂದು ಸಲ ನಾವು ಆ ಗುಣವನ್ನು ತೋರಿಸುವಾಗ​—ಒಂದುವೇಳೆ ಇದು ಜೊತೆ ಕ್ರೈಸ್ತರ ಗಮನಕ್ಕೆ ಬಾರದಿರಬಹುದಾದರೂ​—ಆತನು ಅದಕ್ಕೆ ಹೆಚ್ಚು ಗಮನಕೊಡುತ್ತಾನೆ ಎಂಬುದನ್ನು ತಿಳಿಯುವುದು ಎಷ್ಟು ಉತ್ತೇಜನದಾಯಕವಾದದ್ದಾಗಿದೆ! “ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” ಎಂಬ ಕೀರ್ತನೆ 130:3ರಲ್ಲಿರುವ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಅತ್ಯಂತ ಸಾಂತ್ವನದಾಯಕವಾದದ್ದಾಗಿದೆ.

16, 17. (ಎ) ಸ್ವನಿಯಂತ್ರಣದ ವಿಷಯದಲ್ಲಿ ಗಲಾತ್ಯ 6:​2, 5ನ್ನು ನಾವು ಹೇಗೆ ಅನ್ವಯಿಸಸಾಧ್ಯವಿದೆ? (ಬಿ) ಸ್ವನಿಯಂತ್ರಣದ ಬಗ್ಗೆ ಮುಂದಿನ ಲೇಖನದಲ್ಲಿ ನಾವೇನನ್ನು ಪರಿಗಣಿಸುವೆವು?

16 ನಾವು ಯೆಹೋವನನ್ನು ಸಂತೋಷಪಡಿಸಬೇಕಾದರೆ, ನಮ್ಮಲ್ಲಿ ಪ್ರತಿಯೊಬ್ಬರೂ ಸ್ವನಿಯಂತ್ರಣವನ್ನು ಬೆಳೆಸಿಕೊಳ್ಳಬೇಕಾಗಿದೆ, ಆದರೆ ಅದೇ ಸಮಯದಲ್ಲಿ ನಮ್ಮ ಕ್ರೈಸ್ತ ಸಹೋದರರ ಸಹಾಯದ ಆಶ್ವಾಸನೆ ನಮಗಿರಸಾಧ್ಯವಿದೆ. ನಮ್ಮಲ್ಲಿ ಪ್ರತಿಯೊಬ್ಬರೂ ತಮ್ಮ ಸ್ವಂತ ಜವಾಬ್ದಾರಿಯ ಭಾರವನ್ನು ಹೊತ್ತುಕೊಳ್ಳಬೇಕಾಗಿರುವುದಾದರೂ, ದೌರ್ಬಲ್ಯಗಳನ್ನು ನಿಭಾಯಿಸುವುದರಲ್ಲಿ ಪರಸ್ಪರ ಸಹಾಯಮಾಡುವಂತೆ ನಮ್ಮನ್ನು ಉತ್ತೇಜಿಸಲಾಗಿದೆ. (ಗಲಾತ್ಯ 6:​2, 5) ನಾವು ಹೋಗಬಾರದಂಥ ಸ್ಥಳಗಳಿಗೆ ಹೋಗುವುದರಿಂದ, ನಾವು ನೋಡಬಾರದಂಥ ವಿಷಯಗಳನ್ನು ನೋಡುವುದರಿಂದ ಅಥವಾ ನಾವು ಮಾಡಬಾರದಾದಂಥ ವಿಷಯಗಳನ್ನು ಮಾಡುವುದರಿಂದ ನಮ್ಮನ್ನು ತಡೆಯುವಂಥ ಒಬ್ಬ ಹೆತ್ತವರನ್ನು, ಸಂಗಾತಿಯನ್ನು ಅಥವಾ ಸ್ನೇಹಿತರನ್ನು ನಾವು ಅಮೂಲ್ಯರೆಂದು ಪರಿಗಣಿಸಸಾಧ್ಯವಿದೆ. ಅವರು ಸ್ವನಿಯಂತ್ರಣವನ್ನು ತೋರಿಸಲು ಅಂದರೆ ಕಡಾಖಂಡಿತವಾಗಿ ನಿರಾಕರಿಸಲು ಹಾಗೂ ಅದರಂತೆ ನಡೆಯಲು ನಮಗೆ ಸಹಾಯಮಾಡುತ್ತಿದ್ದಾರೆ!

17 ಅನೇಕ ಕ್ರೈಸ್ತರು ನಾವು ಇಷ್ಟರ ತನಕ ಏನನ್ನು ಪರಿಗಣಿಸಿದ್ದೇವೋ ಆ ವಿಷಯಕ್ಕೆ ಅನುಸಾರವಾಗಿ ನಡೆಯುತ್ತಿರಬಹುದು, ಆದರೆ ಈ ವಿಷಯದಲ್ಲಿ ವೈಯಕ್ತಿಕವಾಗಿ ತಾವು ಇನ್ನೂ ಹೆಚ್ಚು ಪ್ರಗತಿಯನ್ನು ಮಾಡುವ ಆವಶ್ಯಕತೆಯಿದೆ ಎಂದು ಅವರು ನೆನಸಬಹುದು. ಅವರು ಸ್ವನಿಯಂತ್ರಣವನ್ನು ಇನ್ನೂ ಹೆಚ್ಚಿನ ಮಟ್ಟಿಗೆ, ಅಂದರೆ ಅಪರಿಪೂರ್ಣ ಮಾನವರಿಂದ ಸಮಂಜಸವಾಗಿ ನಿರೀಕ್ಷಿಸಸಾಧ್ಯವಿರುವಷ್ಟರ ಮಟ್ಟಿಗೆ ತೋರಿಸಲು ಬಯಸುತ್ತಾರೆ. ನಿಮಗೂ ಹೀಗೆಯೇ ಅನಿಸುತ್ತದೋ? ಹಾಗಾದರೆ, ದೇವರಾತ್ಮದ ಈ ಫಲವನ್ನು ಬೆಳೆಸಿಕೊಳ್ಳಲಿಕ್ಕಾಗಿ ನೀವೇನು ಮಾಡಸಾಧ್ಯವಿದೆ? ಮತ್ತು ನೀವು ಹೀಗೆ ಮಾಡುವುದು, ಕ್ರೈಸ್ತರೋಪಾದಿ ನಿಮ್ಮ ದೀರ್ಘಕಾಲಿಕ ಗುರಿಗಳನ್ನು ಸಾಧಿಸಲು ನಿಮಗೆ ಹೇಗೆ ಸಹಾಯಮಾಡಸಾಧ್ಯವಿದೆ? ಇದನ್ನು ಮುಂದಿನ ಲೇಖನದಲ್ಲಿ ನೋಡೋಣ.

ನೀವು ಜ್ಞಾಪಿಸಿಕೊಳ್ಳುವಿರೋ?

ಸ್ವನಿಯಂತ್ರಣವನ್ನು . . .

• ಕ್ರೈಸ್ತರು ಬೆಳೆಸಿಕೊಳ್ಳುವುದು ಪ್ರಾಮುಖ್ಯವಾಗಿದೆ ಏಕೆ?

• ಬೆಳೆಸಿಕೊಳ್ಳುವುದು ಕೆಲವರಿಗೆ ವಿಶೇಷವಾಗಿ ಪಂಥಾಹ್ವಾನದಾಯಕವಾಗಿದೆ ಏಕೆ?

• ಇದು ವಿವಾಹದಲ್ಲಿ ಅಗತ್ಯವಾಗಿದೆ ಏಕೆ?

• ಇದು ನಾವು ಪರಸ್ಪರ ಬೆಳೆಸಿಕೊಳ್ಳಲು ಸಹಾಯಮಾಡಸಾಧ್ಯವಿರುವಂಥ ಒಂದು ಗುಣವಾಗಿದೆ ಏಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 16ರಲ್ಲಿರುವ ಚೌಕ/ಚಿತ್ರ]

ಅವನು ಕಡಾಖಂಡಿತವಾಗಿ ನಿರಾಕರಿಸಲು ಕಲಿತನು

ಜರ್ಮನಿಯಲ್ಲಿ ವಾಸಿಸುತ್ತಿರುವ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು ತಾಂತ್ರಿಕ ಸಂವಾದ ಮಾಧ್ಯಮದ ಗುಮಾಸ್ತನಾಗಿ ಕೆಲಸಮಾಡುತ್ತಿದ್ದನು. 30 ಬೇರೆ ಬೇರೆ ಟೆಲಿವಿಷನ್‌ ಹಾಗೂ ರೇಡಿಯೋ ಕಾರ್ಯಕ್ರಮಗಳನ್ನು ನೋಡಿಕೊಳ್ಳುವುದು ಸಹ ಅವನ ಕೆಲಸದಲ್ಲಿ ಒಳಗೂಡಿತ್ತು. ಕಾರ್ಯಕ್ರಮದಲ್ಲಿ ಅಡ್ಡಿತಡೆಗಳು ಉಂಟಾದಾಗ, ಸಮಸ್ಯೆಯೇನೆಂಬುದನ್ನು ನಿಷ್ಕೃಷ್ಟವಾಗಿ ಕಂಡುಕೊಳ್ಳಲಿಕ್ಕಾಗಿ ಅವನು ಆ ಕಾರ್ಯಕ್ರಮಕ್ಕೆ ನಿಕಟವಾಗಿ ಗಮನಕೊಡಬೇಕಾಗುತ್ತಿತ್ತು. ಅವನು ಹೇಳುವುದು: “ಸಾಮಾನ್ಯವಾಗಿ ಯಾವಾಗಲೂ ತಪ್ಪಾದ ಸಮಯದಲ್ಲೇ ಅಂದರೆ ಹಿಂಸಾಚಾರದ ದೃಶ್ಯಗಳು ಅಥವಾ ಲೈಂಗಿಕ ದೃಶ್ಯಗಳು ತೋರಿಸಲ್ಪಡುತ್ತಿರುವಾಗಲೇ ಸ್ವಲ್ಪ ಅಡ್ಡಿತಡೆಯು ಉಂಟಾಗುತ್ತಿತ್ತು. ಆ ಕೆಟ್ಟ ದೃಶ್ಯಗಳು ನನ್ನ ಮನಃಪಟಲದಲ್ಲೇ ಅನೇಕ ದಿನಗಳ ವರೆಗೆ ಅಥವಾ ವಾರಗಳ ವರೆಗೆ ಉಳಿಯುತ್ತಿದ್ದವು. ಅವು ನನ್ನ ಮಿದುಳಿನ ಮೇಲೆ ಅಚ್ಚೊತ್ತಲ್ಪಟ್ಟಿವೆಯೋ ಎಂಬಂತೆ ನನಗನಿಸುತ್ತಿತ್ತು.” ಇದು ತನ್ನ ಆತ್ಮಿಕತೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಿತು ಎಂದು ಅವನು ಒಪ್ಪಿಕೊಳ್ಳುತ್ತಾನೆ: “ನಾನು ತುಂಬ ಮುಂಗೋಪಿ; ಆದುದರಿಂದ ಆ ಹಿಂಸಾಚಾರದ ದೃಶ್ಯಗಳು ನಾನು ಸ್ವನಿಯಂತ್ರಣ ತೋರಿಸುವುದನ್ನು ತುಂಬ ಕಷ್ಟಕರವನ್ನಾಗಿ ಮಾಡಿದವು. ಲೈಂಗಿಕ ದೃಶ್ಯಗಳು ನನ್ನ ಹಾಗೂ ನನ್ನ ಪತ್ನಿಯ ನಡುವೆ ಉದ್ವೇಗವನ್ನು ಉಂಟುಮಾಡಿದವು. ಈ ಪ್ರಭಾವಗಳ ವಿರುದ್ಧ ನಾನು ಪ್ರತಿ ದಿನ ಹೋರಾಡಬೇಕಾಗಿತ್ತು. ಈ ಹೋರಾಟದಲ್ಲಿ ಸೋಲನ್ನು ಅನುಭವಿಸಬಾರದೆಂಬ ಕಾರಣಕ್ಕಾಗಿ, ಕಡಿಮೆ ಆದಾಯವಾದರೂ ಸರಿ, ಒಂದು ಹೊಸ ಕೆಲಸವನ್ನು ಹುಡುಕಲು ನಿರ್ಧರಿಸಿದೆ. ಸ್ವಲ್ಪ ಸಮಯದ ನಂತರ ನನಗೆ ಇನ್ನೊಂದು ಉದ್ಯೋಗವು ಸಿಕ್ಕಿತು. ನನ್ನ ಆಸೆಯು ಈಡೇರಿತು.”

[ಪುಟ 15ರಲ್ಲಿರುವ ಚಿತ್ರಗಳು]

ಬೈಬಲ್‌ ಅಧ್ಯಯನದಿಂದ ಪಡೆದುಕೊಳ್ಳುವ ಜ್ಞಾನವು ಸ್ವನಿಯಂತ್ರಣವನ್ನು ತೋರಿಸಲು ನಮಗೆ ಸಹಾಯಮಾಡುತ್ತದೆ