ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಯೆಹೋವನ ಮನಸ್ಸನ್ನು ಯಾರು ತಿಳಿದಿರುತ್ತಾನೆ?’

‘ಯೆಹೋವನ ಮನಸ್ಸನ್ನು ಯಾರು ತಿಳಿದಿರುತ್ತಾನೆ?’

‘ಯೆಹೋವನ ಮನಸ್ಸನ್ನು ಯಾರು ತಿಳಿದಿರುತ್ತಾನೆ?’

“‘ಯೆಹೋವನಿಗೆ ಉಪದೇಶಮಾಡುವಂತೆ ಆತನ ಮನಸ್ಸನ್ನು ಯಾರು ತಿಳಿದಿರುತ್ತಾನೆ?’ ನಾವಾದರೋ ಕ್ರಿಸ್ತನ ಮನಸ್ಸನ್ನು ಹೊಂದಿದ್ದೇವೆ.”—1 ಕೊರಿಂ. 2:16.

1, 2. (ಎ) ಯಾವ ಕಷ್ಟಕರ ಸನ್ನಿವೇಶವನ್ನು ಅನೇಕ ಜನರು ಎದುರಿಸುತ್ತಾರೆ? (ಬಿ) ನಮ್ಮ ಹಾಗೂ ಯೆಹೋವನ ಆಲೋಚನೆಗಳ ಕುರಿತು ನಾವೇನನ್ನು ನೆನಪಿನಲ್ಲಿಡಬೇಕು?

ನಿಮಗೆ ಇನ್ನೊಬ್ಬರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಎಂದಾದರೂ ಕಷ್ಟವಾಗಿದೆಯೇ? ನೀವು ನವದಂಪತಿಯಾಗಿರುವಲ್ಲಿ ನಿಮ್ಮ ಸಂಗಾತಿಯ ಮನಸ್ಸನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಕಷ್ಟಕರವೆಂದು ಕಂಡೀತು. ಹೌದು, ಸ್ತ್ರೀಪುರುಷರ ಯೋಚನಾಧಾಟಿ ಹಾಗೂ ಮಾತಾಡುವ ರೀತಿ ಕೂಡ ಭಿನ್ನ ಭಿನ್ನವಾಗಿರುತ್ತದೆ. ಎಷ್ಟೆಂದರೆ ಕೆಲವು ಸಂಸ್ಕೃತಿಗಳಲ್ಲಿ ಪುರುಷರು ಮತ್ತು ಸ್ತ್ರೀಯರು ಒಂದೇ ಭಾಷೆಯನ್ನು ಮಾತಾಡುತ್ತಾರೆ, ಆದರೆ ಬೇರೆ ಬೇರೆ ಭಾಷಾರೂಪಗಳಲ್ಲಿ! ಮಾತ್ರವಲ್ಲ ಸಂಸ್ಕೃತಿ, ಭಾಷಾ ಭಿನ್ನತೆಯಿಂದಾಗಿ ಯೋಚನಾರೀತಿ ಹಾಗೂ ನಡವಳಿಕೆಯಲ್ಲೂ ಭಿನ್ನತೆಯುಂಟಾಗುತ್ತದೆ. ಹಾಗಿದ್ದರೂ ನೀವು ಇತರರನ್ನು ಹೆಚ್ಚೆಚ್ಚಾಗಿ ತಿಳಿದುಕೊಂಡಂತೆ ಅವರ ಯೋಚನಾರೀತಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಹೆಚ್ಚು ಅವಕಾಶ ಸಿಗುತ್ತದೆ.

2 ಆದುದರಿಂದ ನಮ್ಮ ಆಲೋಚನೆಯು ಯೆಹೋವನ ಆಲೋಚನೆಗಿಂತ ಎಷ್ಟೋ ಭಿನ್ನವಾಗಿರುವುದು ನಮ್ಮನ್ನು ಆಶ್ಚರ್ಯಗೊಳಿಸಬಾರದು. ಯೆಹೋವನು ತನ್ನ ಪ್ರವಾದಿ ಯೆಶಾಯನ ಮೂಲಕ ಇಸ್ರಾಯೇಲ್ಯರಿಗೆ ಹೇಳಿದ್ದು: “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ.” ಈ ನಿಜತ್ವವನ್ನು ದೃಷ್ಟಾಂತಿಸುತ್ತಾ ಯೆಹೋವನು ಇನ್ನೂ ಹೇಳಿದ್ದು: “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ.”—ಯೆಶಾ. 55:8, 9.

3. ‘ಯೆಹೋವನನ್ನು ಆಪ್ತಮಿತ್ರನನ್ನಾಗಿ’ ಮಾಡಿಕೊಳ್ಳಲು ನಾವು ಯಾವ ಎರಡು ವಿಧಗಳಲ್ಲಿ ಪ್ರಯತ್ನಿಸಬಹುದು?

3 ಹಾಗಾದರೆ ಇದರರ್ಥ ಯೆಹೋವನ ಆಲೋಚನಾರೀತಿಯನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನ ಕೂಡ ಮಾಡಬಾರದೆಂದೊ? ಖಂಡಿತ ಇಲ್ಲ. ಯೆಹೋವನ ಎಲ್ಲ ಆಲೋಚನೆಗಳನ್ನು ನಾವೆಂದೂ ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವಾದರೂ ‘ಆತನನ್ನು ಆಪ್ತಮಿತ್ರನಾಗಿ’ ಮಾಡಿಕೊಳ್ಳುವಂತೆ ಬೈಬಲ್‌ ನಮ್ಮನ್ನು ಉತ್ತೇಜಿಸುತ್ತದೆ. (ಕೀರ್ತನೆ 25:14; ಜ್ಞಾನೋಕ್ತಿ 3:32 ಓದಿ.) ನಾವು ಯೆಹೋವನೊಂದಿಗೆ ಆಪ್ತತೆ ಬೆಳೆಸಿಕೊಳ್ಳುವ ಒಂದು ವಿಧವು ಆತನ ವಾಕ್ಯವಾದ ಬೈಬಲಿನಲ್ಲಿ ದಾಖಲಾಗಿರುವ ಆತನ ಕಾರ್ಯಗಳನ್ನು ವಿವೇಚಿಸಿ ತಿಳಿದುಕೊಂಡು ಅವುಗಳಿಗೆ ಲಕ್ಷ್ಯಕೊಡುವ ಮೂಲಕವೇ. (ಕೀರ್ತ. 28:5) ಇನ್ನೊಂದು ವಿಧವು ‘ಅದೃಶ್ಯನಾದ ದೇವರ ಪ್ರತಿರೂಪನಾಗಿರುವ’ “ಕ್ರಿಸ್ತನ ಮನಸ್ಸನ್ನು” ತಿಳಿದುಕೊಳ್ಳುವ ಮೂಲಕವೇ. (1 ಕೊರಿಂ. 2:16; ಕೊಲೊ. 1:15) ಬೈಬಲ್‌ ವೃತ್ತಾಂತಗಳನ್ನು ಅಧ್ಯಯನ ಮಾಡಲು ಮತ್ತು ಧ್ಯಾನಿಸಲು ಸಮಯ ತಕ್ಕೊಳ್ಳುವಾಗ ನಾವು ಯೆಹೋವನ ಗುಣಗಳನ್ನೂ ಆಲೋಚನಾರೀತಿಯನ್ನೂ ಸ್ವಲ್ಪ ಸ್ವಲ್ಪವಾಗಿ ಅರ್ಥಮಾಡಿಕೊಳ್ಳುತ್ತೇವೆ.

ತಪ್ಪು ತೀರ್ಮಾನ ಮಾಡದಿರಿ

4, 5. (ಎ) ನಾವು ಯಾವ ತಪ್ಪು ತೀರ್ಮಾನ ಮಾಡಬಾರದು? ವಿವರಿಸಿರಿ. (ಬಿ) ಇಸ್ರಾಯೇಲ್ಯರು ಯಾವ ತಪ್ಪಾದ ಆಲೋಚನೆಗೆ ಬಲಿಬಿದ್ದರು?

4 ನಾವು ಯೆಹೋವನ ಕಾರ್ಯಗಳನ್ನು ಧ್ಯಾನಿಸುವಾಗ ಆತನನ್ನು ಮಾನವ ಮಟ್ಟಗಳಿಗನುಸಾರ ತೀರ್ಮಾನಿಸುವ ತಪ್ಪನ್ನು ಮಾಡಬಾರದು. ಈ ಪ್ರವೃತ್ತಿಯನ್ನು ಕೀರ್ತನೆ 50:21ರಲ್ಲಿರುವ ಯೆಹೋವನ ಮಾತುಗಳು ಸೂಚಿಸುತ್ತವೆ. “ನೀವು . . . ದೇವರೂ ನಮ್ಮಂಥವನೇ ಎಂದು ನೆನಸಿಕೊಂಡಿರಿ” ಎಂದು ಅಲ್ಲಿ ಹೇಳಲಾಗಿದೆ. ಇದು 175ಕ್ಕೂ ಹೆಚ್ಚು ವರ್ಷಗಳ ಹಿಂದೆ ಒಬ್ಬ ಬೈಬಲ್‌ ವಿದ್ವಾಂಸನು ಹೇಳಿದ ಮಾತುಗಳಂತೆಯೇ ಇದೆ. ಅವನು ಹೇಳಿದ್ದು: “ಮನುಷ್ಯರಿಗೆ ದೇವರನ್ನು ತಮ್ಮ ಮಟ್ಟಗಳಿಗನುಸಾರ ತೀರ್ಪುಮಾಡುವ ಪ್ರವೃತ್ತಿಯಿದೆ. ಮನುಷ್ಯರು ಅನುಸರಿಸುವಂಥ ನಿಯಮಗಳನ್ನೇ ದೇವರು ಸಹ ಬಳಸಬೇಕೆಂದು ಅವರು ನೆನಸುತ್ತಾರೆ.”

5 ನಾವು ಯೆಹೋವನನ್ನು ನಮ್ಮ ಸ್ವಂತ ಮಟ್ಟಗಳು ಹಾಗೂ ಇಷ್ಟಗಳಿಗೆ ಸರಿಯಾಗಿ ಕಲ್ಪಿಸದಿರುವಂತೆ ಜಾಗ್ರತೆವಹಿಸಬೇಕು. ಅದೇಕೆ ಪ್ರಾಮುಖ್ಯ? ಏಕೆಂದರೆ ನಾವು ಬೈಬಲನ್ನು ಅಧ್ಯಯನ ಮಾಡುವಾಗ, ಯೆಹೋವನ ಕೆಲವೊಂದು ಕ್ರಿಯೆಗಳು ಅಷ್ಟು ಸರಿಯಲ್ಲವೆಂದು ನಮ್ಮ ಸೀಮಿತ ಹಾಗೂ ಅಪರಿಪೂರ್ಣ ದೃಷ್ಟಿಕೋನದಿಂದ ತೀರ್ಮಾನಿಸೇವು. ಪ್ರಾಚೀನ ಇಸ್ರಾಯೇಲ್ಯರು ಇದೇ ರೀತಿಯ ಯೋಚನೆಗೆ ಬಲಿಬಿದ್ದು ಯೆಹೋವನು ಅವರೊಂದಿಗೆ ವ್ಯವಹರಿಸಿದ ರೀತಿಯ ಕುರಿತು ತಪ್ಪಾದ ತೀರ್ಮಾನಕ್ಕೆ ಬಂದರು. ಯೆಹೋವನು ಅವರಿಗೆ ಏನು ಹೇಳಿದನೆಂದು ಪರಿಗಣಿಸಿ: “ನೀವು—[ಯೆಹೋವನ] ಕ್ರಮವು ಸಮವಲ್ಲ ಎಂದು ಹೇಳುತ್ತಿದ್ದೀರಿ; ಇಸ್ರಾಯೇಲ್‌ ವಂಶದವರೇ, ನನ್ನ ಕ್ರಮವು ಸಮವಲ್ಲವೋ? ನಿಮ್ಮ ಕ್ರಮವೇ ಸಮವಲ್ಲವಷ್ಟೆ.”—ಯೆಹೆ. 18:25.

6. ಯೋಬನು ಯಾವ ಪಾಠ ಕಲಿತನು? ಅವನ ಅನುಭವದಿಂದ ನಾವು ಹೇಗೆ ಪ್ರಯೋಜನ ಹೊಂದುತ್ತೇವೆ?

6 ಯೆಹೋವನನ್ನು ನಮ್ಮ ಸ್ವಂತ ಮಟ್ಟಗಳಿಗನುಸಾರ ತೀರ್ಪುಮಾಡುವ ಪಾಶಕ್ಕೆ ಬೀಳದಂತೆ ಯಾವುದು ಸಹಾಯಮಾಡುತ್ತದೆ? ನಮ್ಮ ದೃಷ್ಟಿಕೋನ ಇತಿಮಿತಿಯುಳ್ಳದ್ದಾಗಿದೆ ಹಾಗೂ ಕೆಲವೊಮ್ಮೆ ಗಂಭೀರವಾಗಿ ತಪ್ಪಾಗಿದೆ ಎಂದು ಮನಗಾಣುವುದೇ. ಈ ಪಾಠವನ್ನು ಯೋಬನು ಕಲಿಯಬೇಕಾಯಿತು. ಅವನು ಸಂಕಷ್ಟಗಳಿಂದ ನರಳುತ್ತಿದ್ದಾಗ ಹತಾಶೆಗೊಂಡು ಸ್ವಾರ್ಥಪರತೆಯಿಂದ ತನ್ನ ಕುರಿತೇ ಚಿಂತಿಸಿದನು. ಅವನು ಹೆಚ್ಚು ಮಹತ್ವದ ವಿಷಯಗಳನ್ನು ಮರೆತುಬಿಟ್ಟನು. ಆದರೆ ಅವನ ಸಂಕುಚಿತ ದೃಷ್ಟಿಕೋನವನ್ನು ವಿಶಾಲಗೊಳಿಸಲು ಯೆಹೋವನು ಪ್ರೀತಿಯಿಂದ ಸಹಾಯ ನೀಡಿದನು. ಅವನಿಗೆ 70ಕ್ಕಿಂತಲೂ ಹೆಚ್ಚು ಪ್ರಶ್ನೆಗಳನ್ನು ಕೇಳುವ ಮೂಲಕ ಅವನ ತಿಳಿವಳಿಕೆಗಿರುವ ಇತಿಮಿತಿಯನ್ನು ಒತ್ತಿಹೇಳಿದನು. ಯಾಕೆಂದರೆ ಆ ಪ್ರಶ್ನೆಗಳಲ್ಲಿ ಒಂದನ್ನೂ ಅವನು ಉತ್ತರಿಸಶಕ್ತನಾಗಲಿಲ್ಲ. ಆಗ ಯೋಬನು ದೀನತೆಯಿಂದ ಪ್ರತಿಕ್ರಿಯಿಸಿ ತನ್ನ ದೃಷ್ಟಿಕೋನವನ್ನು ಸರಿಪಡಿಸಿಕೊಂಡನು.—ಯೋಬ 42:1-6 ಓದಿ.

“ಕ್ರಿಸ್ತನ ಮನಸ್ಸನ್ನು” ಪಡೆದುಕೊಳ್ಳಿ

7. ಯೇಸುವಿನ ಚಟುವಟಿಕೆಗಳನ್ನು ಪರಿಶೀಲಿಸುವ ಮೂಲಕ ನಮಗೆ ಯೆಹೋವನ ಆಲೋಚನೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಸಿಗುತ್ತದೆ ಏಕೆ?

7 ಯೇಸು ತಾನು ಹೇಳಿದ ಮತ್ತು ಮಾಡಿದ ಪ್ರತಿಯೊಂದು ವಿಷಯದಲ್ಲಿ ತನ್ನ ತಂದೆಯನ್ನು ಪೂರ್ಣವಾಗಿ ಅನುಕರಿಸಿದನು. (ಯೋಹಾ. 14:9) ಆದುದರಿಂದ ಯೇಸುವಿನ ಚಟುವಟಿಕೆಗಳನ್ನು ಪರಿಶೀಲಿಸುವ ಮೂಲಕ ನಮಗೆ ಯೆಹೋವನ ಆಲೋಚನಾರೀತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಸಿಗುತ್ತದೆ. (ರೋಮ. 15:5; ಫಿಲಿ. 2:5) ಹೀಗಿರಲಾಗಿ ಸುವಾರ್ತಾ ವೃತ್ತಾಂತದಲ್ಲಿರುವ ಎರಡು ಘಟನೆಗಳನ್ನು ನಾವೀಗ ಪರೀಕ್ಷಿಸೋಣ.

8, 9. ಯೋಹಾನ 6:1-5ಕ್ಕನುಸಾರ ಯೇಸು ಫಿಲಿಪ್ಪನಿಗೆ ಒಂದು ಪ್ರಶ್ನೆಯನ್ನು ಕೇಳುವಂತೆ ಮಾಡಿದ ಸನ್ನಿವೇಶ ಯಾವುದು? ಯೇಸು ಆ ಪ್ರಶ್ನೆಯನ್ನು ಕೇಳಿದ್ದೇಕೆ?

8 ಈ ದೃಶ್ಯವನ್ನು ಚಿತ್ರಿಸಿಕೊಳ್ಳಿ. ಅದು ಕ್ರಿ.ಶ. 32ರ ಪಸ್ಕಕ್ಕೆ ಸ್ವಲ್ಪ ಮುಂಚಿನ ಸಮಯ. ಯೇಸುವಿನ ಅಪೊಸ್ತಲರು ಗಲಿಲಾಯದಲ್ಲೆಲ್ಲ ಗಮನಾರ್ಹ ಸುವಾರ್ತಾ ಸೇವೆ ಮಾಡಿ ಆಗಷ್ಟೇ ಹಿಂದಿರುಗಿದ್ದರು. ಅವರು ತುಂಬ ದಣಿದಿದ್ದರಿಂದ ಯೇಸು ಅವರನ್ನು ಗಲಿಲಾಯ ಸಮುದ್ರದ ಈಶಾನ್ಯ ತೀರದ ಒಂದು ಏಕಾಂತ ಸ್ಥಳಕ್ಕೆ ಕರಕೊಂಡು ಹೋದನು. ಆದರೆ ಸಾವಿರಾರು ಜನರು ಅವರನ್ನು ಹಿಂಬಾಲಿಸುತ್ತಾ ಅಲ್ಲಿಗೂ ಬಂದರು. ಯೇಸು ಆ ಜನಸಮೂಹವನ್ನು ಗುಣಪಡಿಸಿ ಅವರಿಗೆ ಅನೇಕ ವಿಷಯಗಳನ್ನು ಬೋಧಿಸಿದನು. ಹೊತ್ತು ಮುಳುಗಲಾಗಿ, ಅಷ್ಟೊಂದು ಜನರಿಗೆ ಆ ಸ್ಥಳದಲ್ಲಿ ಊಟವನ್ನು ಎಲ್ಲಿಂದ ತರುವುದೆಂಬ ಸಮಸ್ಯೆ ಎದುರಾಯಿತು. ಇದನ್ನು ಅರಿತ ಯೇಸು ಅದೇ ಸ್ಥಳದವನಾಗಿದ್ದ ಫಿಲಿಪ್ಪನಿಗೆ, “ಈ ಜನರು ಊಟಮಾಡುವಂತೆ ನಾವು ಎಲ್ಲಿಂದ ರೊಟ್ಟಿಗಳನ್ನು ಕೊಂಡುಕೊಳ್ಳೋಣ?” ಎಂದು ಕೇಳಿದನು.—ಯೋಹಾ. 6:1-5.

9 ಯೇಸು ಫಿಲಿಪ್ಪನಿಗೆ ಆ ಪ್ರಶ್ನೆಯನ್ನು ಕೇಳಿದ್ದೇಕೆ? ಏನು ಮಾಡಬೇಕೆಂದು ತೋಚದೆ ಅವನು ಚಿಂತೆಗೀಡಾಗಿದ್ದನೊ? ನಿಶ್ಚಯವಾಗಿ ಇಲ್ಲ. ಹಾಗಾದರೆ ಅವನ ಮನಸ್ಸಿನಲ್ಲೇನಿತ್ತು? ಆ ಸಂದರ್ಭದಲ್ಲಿ ಉಪಸ್ಥಿತನಿದ್ದ ಅಪೊಸ್ತಲ ಯೋಹಾನನು ಅದನ್ನು ವಿವರಿಸುತ್ತಾ, “ಫಿಲಿಪ್ಪನನ್ನು ಪರೀಕ್ಷಿಸಲಿಕ್ಕಾಗಿಯೇ ಅವನು ಇದನ್ನು ಕೇಳಿದ್ದನು, ಏಕೆಂದರೆ ತಾನೇನು ಮಾಡಲಿದ್ದೇನೆ ಎಂಬುದು ಯೇಸುವಿಗೆ ತಿಳಿದಿತ್ತು” ಎಂದು ಹೇಳಿದನು. (ಯೋಹಾ. 6:6) ಇಲ್ಲಿ ಯೇಸು ತನ್ನ ಶಿಷ್ಯರು ಆಧ್ಯಾತ್ಮಿಕವಾಗಿ ಎಷ್ಟು ಪ್ರಗತಿಮಾಡಿದ್ದಾರೆಂದು ಪರೀಕ್ಷಿಸಿದನು. ಪ್ರಶ್ನೆಯನ್ನು ಕೇಳುವ ಮೂಲಕ ಅವರು ಆ ಸಮಸ್ಯೆಯ ಕುರಿತು ಯೋಚಿಸುವಂತೆ ಮಾಡಿದನು ಹಾಗೂ ತಾನು ಮಾಡಶಕ್ತನಿದ್ದ ವಿಷಯದಲ್ಲಿ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಲು ಅವರಿಗೆ ಅವಕಾಶ ಕೊಟ್ಟನು. ಆದರೆ ಶಿಷ್ಯರು ಆ ಅವಕಾಶವನ್ನು ಬಳಸಲಿಲ್ಲ. ತಮ್ಮ ದೃಷ್ಟಿಕೋನ ಎಷ್ಟು ಸೀಮಿತವಾಗಿತ್ತೆಂದು ಅವರು ತೋರಿಸಿಕೊಟ್ಟರು. (ಯೋಹಾನ 6:7-9 ಓದಿ.) ಅವರು ಯೋಚಿಸಿಯೂ ಇದ್ದಿರದ ವಿಷಯವನ್ನು ತಾನು ಮಾಡಶಕ್ತನೆಂದು ಯೇಸು ತದನಂತರ ತೋರಿಸಿದನು. ಹೇಗೆಂದರೆ ಹಸಿದಿದ್ದ ಆ ಸಾವಿರಾರು ಜನರಿಗೆ ಅವನು ಅದ್ಭುತಕರವಾಗಿ ಊಟ ಕೊಟ್ಟನು.—ಯೋಹಾ. 6:10-13.

10-12. (ಎ) ಆ ಗ್ರೀಕ್‌ ಸ್ತ್ರೀಯ ಬೇಡಿಕೆಯನ್ನು ಯೇಸು ಕೂಡಲೆ ಪೂರೈಸಲಿಲ್ಲವೇಕೆ? ವಿವರಿಸಿರಿ. (ಬಿ) ನಾವೀಗ ಏನನ್ನು ಪರಿಗಣಿಸುವೆವು?

10 ಈ ವೃತ್ತಾಂತವು, ಇನ್ನೊಂದು ಸಂದರ್ಭದಲ್ಲಿ ಯೇಸುವಿನ ಆಲೋಚನೆ ಏನಾಗಿತ್ತೆಂದು ತಿಳಿದುಕೊಳ್ಳಲು ಸಹ ನಮಗೆ ನೆರವಾಗಬಹುದು. ಜನರ ಆ ದೊಡ್ಡ ಗುಂಪಿಗೆ ಊಟ ಕೊಟ್ಟ ಸ್ವಲ್ಪ ಸಮಯದಲ್ಲೇ ಯೇಸು ಮತ್ತು ಅಪೊಸ್ತಲರು ಇಸ್ರಾಯೇಲಿನ ಗಡಿಗಳನ್ನು ದಾಟಿ ಉತ್ತರ ದಿಕ್ಕಿಗೆ ತೂರ್‌ ಮತ್ತು ಸೀದೋನ್‌ ಪ್ರಾಂತಗಳಿಗೆ ಪ್ರಯಾಣಿಸಿದರು. ಅಲ್ಲಿ ಒಬ್ಬಾಕೆ ಗ್ರೀಕ್‌ ಸ್ತ್ರೀ ಅವರ ಬಳಿಗೆ ಬಂದು ತನ್ನ ಮಗಳನ್ನು ಗುಣಪಡಿಸುವಂತೆ ಯೇಸುವನ್ನು ಬೇಡಿಕೊಂಡಳು. ಮೊದಮೊದಲು ಆ ಸ್ತ್ರೀಯ ಬೇಡಿಕೆಯನ್ನು ಯೇಸು ನಿರ್ಲಕ್ಷಿಸಿದನು. ಆದರೆ ಆಕೆ ಪಟ್ಟುಹಿಡಿದು ಬೇಡುತ್ತಿದ್ದದರಿಂದ ಯೇಸು ಅವಳಿಗೆ, “ಮೊದಲು ಮಕ್ಕಳಿಗೆ ತೃಪ್ತಿಯಾಗಲಿ; ಮಕ್ಕಳಿಗೆ ಕೊಡುವ ರೊಟ್ಟಿಯನ್ನು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ” ಎಂದು ಹೇಳಿದನು.—ಮಾರ್ಕ 7:24-27; ಮತ್ತಾ. 15:21-26.

11 ಯೇಸು ಆ ಸ್ತ್ರೀಗೆ ಸಹಾಯಮಾಡಲು ಮೊದಲು ಏಕೆ ನಿರಾಕರಿಸಿದನು? ಫಿಲಿಪ್ಪನನ್ನು ಪರೀಕ್ಷಿಸಿದಂತೆಯೇ ಈ ಸ್ತ್ರೀಯು ಸಹ ಹೇಗೆ ಪ್ರತಿಕ್ರಿಯಿಸುತ್ತಾಳೆಂದು ಯೇಸು ಪರೀಕ್ಷಿಸುತ್ತಿದ್ದನೊ? ನಂಬಿಕೆಯನ್ನು ವ್ಯಕ್ತಪಡಿಸಲು ಆಕೆಗೆ ಅವಕಾಶ ಕೊಡುತ್ತಿದ್ದನೊ? ಅವನ ಧ್ವನಿ ಹೇಗಿತ್ತೆಂದು ಬೈಬಲ್‌ ತಿಳಿಸುವುದಿಲ್ಲವಾದರೂ ಆ ಮಾತುಗಳನ್ನು ನುಡಿದ ರೀತಿಯು ಸ್ತ್ರೀಯನ್ನು ನಿರಾಶೆಗೊಳಿಸಲಿಲ್ಲ. ಅವನು ‘ನಾಯಿಗಳು’ ಎನ್ನದೆ ‘ನಾಯಿಮರಿಗಳು’ ಎಂಬ ಪದರೂಪವನ್ನು ಬಳಸಿದ್ದು ಅವನು ಮಾಡಿದ ಹೋಲಿಕೆಯನ್ನು ತುಂಬ ಮೃದುಗೊಳಿಸಿತು. ಉದಾಹರಣೆಗೆ ಕೆಲವೊಮ್ಮೆ ಮಗು ಕೇಳಿದ್ದನ್ನು ಕೊಡಲು ಹೆತ್ತವರು ಮನಸ್ಸುಮಾಡಿದರೂ ಮುಖದಲ್ಲಿ ಅದನ್ನು ತೋರಿಸುವುದಿಲ್ಲ. ಬದಲಾಗಿ ತಾನು ಕೇಳಿದ್ದನ್ನು ಪಡೆಯಲು ಮಗುವಿಗಿರುವ ದೃಢಮನಸ್ಸನ್ನು ಪರೀಕ್ಷಿಸುತ್ತಾರೆ. ಯೇಸು ಕೂಡ ಆ ಸ್ತ್ರೀಗೆ ಹೀಗೆಯೇ ಮಾಡಿದ್ದಿರಬೇಕು. ವಿಷಯವು ಹೇಗಿದ್ದರೂ, ಆಕೆ ತನ್ನ ನಂಬಿಕೆಯನ್ನು ದೃಢವಾಗಿ ವ್ಯಕ್ತಪಡಿಸಿದಾಗ ಯೇಸು ಸಿದ್ಧಮನಸ್ಸಿನಿಂದ ಆಕೆಯ ಬೇಡಿಕೆಯನ್ನು ಪೂರೈಸಿದನು.—ಮಾರ್ಕ 7:28-30 ಓದಿ.

12 ಈ ಎರಡೂ ಸುವಾರ್ತಾ ವೃತ್ತಾಂತಗಳು ‘ಕ್ರಿಸ್ತನ ಮನಸ್ಸಿನ’ ಅಮೂಲ್ಯ ಒಳನೋಟವನ್ನು ನಮಗೆ ಕೊಡುತ್ತವೆ. ಅವು ಯೆಹೋವನ ಮನಸ್ಸನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಮಗೆ ಹೇಗೆ ಸಹಾಯಮಾಡುತ್ತವೆಂದು ನಾವೀಗ ನೋಡೋಣ.

ಯೆಹೋವನು ಮೋಶೆಯೊಂದಿಗೆ ವ್ಯವಹರಿಸಿದ ವಿಧ

13. ಯೇಸುವಿನ ಆಲೋಚನೆಯ ಒಳನೋಟ ಪಡೆದುಕೊಳ್ಳುವುದು ನಮಗೆ ಹೇಗೆ ಸಹಾಯಕಾರಿ?

13 ಯೇಸುವಿನ ಆಲೋಚನೆಗಳ ಒಳನೋಟವನ್ನು ಪಡೆದುಕೊಳ್ಳುವ ಮೂಲಕ ಕಷ್ಟಕರ ಬೈಬಲ್‌ ಭಾಗಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಸಿಗುವುದು. ಉದಾಹರಣೆಗೆ, ಇಸ್ರಾಯೇಲ್ಯರು ಆರಾಧನೆಗಾಗಿ ಚಿನ್ನದ ಬಸವನನ್ನು ಮಾಡಿದ ನಂತರ ಯೆಹೋವನು ಮೋಶೆಗೆ ಹೇಳಿದ ಮಾತುಗಳನ್ನು ಗಮನಿಸಿರಿ. ಆತನಂದದ್ದು: “ಈ ಜನರ ಸ್ವಭಾವವನ್ನು ನಾನು ನೋಡಿದ್ದೇನೆ; ಇವರು ನನ್ನ ಆಜ್ಞೆಗೆ ಬೊಗ್ಗದವರಾಗಿದ್ದಾರೆ; ಆದಕಾರಣ ನೀನು ನನ್ನನ್ನು ತಡೆಯಬೇಡ; ನನ್ನ ಕೋಪಾಗ್ನಿ ಉರಿಯಲಿ, ಅವರನ್ನು ಭಸ್ಮಮಾಡುವೆನು. ತರುವಾಯ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗವುಂಟಾಗುವಂತೆ ಮಾಡುವೆನು.”—ವಿಮೋ. 32:9, 10.

14. ಯೆಹೋವನ ಮಾತುಗಳಿಗೆ ಮೋಶೆ ಹೇಗೆ ಪ್ರತಿಕ್ರಿಯಿಸಿದನು?

14 ಅದೇ ವೃತ್ತಾಂತವು ಮುಂದುವರಿಸುತ್ತಾ ಹೇಳುವುದು: “ಆಗ ಮೋಶೆ ತನ್ನ ದೇವರಾದ ಯೆಹೋವನನ್ನು ಬೇಡಿಕೊಂಡು—ಯೆಹೋವನೇ, ನೀನು ಮಹಾಶಕ್ತಿಯಿಂದಲೂ ಭುಜಬಲದಿಂದಲೂ ಐಗುಪ್ತದೇಶದಿಂದ ಬಿಡಿಸಿದ ನಿನ್ನ ಪ್ರಜೆಗಳ ಮೇಲೆ ಕೋಪದಿಂದುರಿಯುವದೇಕೆ? ಐಗುಪ್ತ್ಯರು ನಿನ್ನ ವಿಷಯದಲ್ಲಿ—ಯೆಹೋವನು ಕೇಡುಮಾಡಬೇಕೆಂಬ ಅಭಿಪ್ರಾಯದಿಂದಲೇ ಇಸ್ರಾಯೇಲ್ಯರನ್ನು ಇಲ್ಲಿಂದ ಕರಕೊಂಡು ಹೋದನಲ್ಲಾ; ಅವರನ್ನು ಬೆಟ್ಟಗಳಲ್ಲಿ ಸಾಯಿಸಿ ಭೂಮಿಯಲ್ಲಿ ಉಳಿಯದಂತೆ ನಿರ್ಮೂಲ ಮಾಡುವದಕ್ಕೇನೇ ಅವರನ್ನು ಕರಕೊಂಡು ಹೋದನೆಂದು ಹೇಳುವದಕ್ಕೆ ಆಸ್ಪದವಾಗಬೇಕೇ? ನೀನು ರೋಷಾಗ್ನಿಯನ್ನು ಬಿಟ್ಟು ನಿನ್ನ ಪ್ರಜೆಗಳಿಗೆ ಕೆಡುಕನ್ನು ಮಾಡದೆ ಮನಸ್ಸನ್ನು ಬೇರೆ ಮಾಡಿಕೋ. ನಿನ್ನ ಸೇವಕರಾದ ಅಬ್ರಹಾಮ್‌ ಇಸಾಕ್‌ ಯಾಕೋಬರನ್ನು ನೆನಪಿಗೆ ತಂದುಕೋ. ನೀನು ನಿನ್ನ ಜೀವದಾಣೆ ಪ್ರಮಾಣಮಾಡಿ ಅವರಿಗೆ—ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಮಾಡುವೆನೆಂದೂ ನಾನು ಸೂಚಿಸಿರುವ ಈ ಪ್ರದೇಶಗಳನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನೆಂದೂ ಅವರು ಈ ದೇಶವನ್ನು ಶಾಶ್ವತವಾಗಿ ಸ್ವಾಧೀನದಲ್ಲಿಟ್ಟುಕೊಳ್ಳುವರೆಂದೂ ಮಾತುಕೊಡಲಿಲ್ಲವೇ ಅಂದನು. ಆಗ ಯೆಹೋವನು ತನ್ನ ಪ್ರಜೆಗಳಿಗೆ ಮಾಡುವೆನೆಂದು ತಾನು ಹೇಳಿದ ಕೇಡಿನ ವಿಷಯದಲ್ಲಿ ಮನಸ್ಸನ್ನು ಬೇರೆ ಮಾಡಿಕೊಂಡನು.”—ವಿಮೋ. 32:11-14. *

15, 16. (ಎ) ಯೆಹೋವನು ಹೇಳಿದ ಮಾತುಗಳಿಂದಾಗಿ ಮೋಶೆಗೆ ಯಾವ ಅವಕಾಶ ದೊರಕಿತು? (ಬಿ) ಯೆಹೋವನು ಯಾವ ಅರ್ಥದಲ್ಲಿ “ಮನಸ್ಸನ್ನು ಬೇರೆ ಮಾಡಿಕೊಂಡನು”?

15 ಮೋಶೆಯು ಯೆಹೋವನ ಆಲೋಚನೆಯನ್ನು ನಿಜವಾಗಿ ತಿದ್ದುವ ಅಗತ್ಯವಿತ್ತೊ? ಇಲ್ಲವೇ ಇಲ್ಲ! ಯೆಹೋವನು ತಾನು ಮಾಡಲು ಯೋಚಿಸಿದ್ದನ್ನು ಹೇಳಿದನಾದರೂ ಅದೇ ಆತನ ಅಂತಿಮ ತೀರ್ಮಾನವಾಗಿರಲಿಲ್ಲ. ವಾಸ್ತವದಲ್ಲಿ ಇಲ್ಲಿ ಯೆಹೋವನು ಮೋಶೆಯನ್ನು ಪರೀಕ್ಷಿಸುತ್ತಿದ್ದನು. ಸಮಯಾನಂತರ ಯೇಸು ಫಿಲಿಪ್ಪನನ್ನು ಹಾಗೂ ಗ್ರೀಕ್‌ ಸ್ತ್ರೀಯನ್ನು ಹೇಗೆ ಪರೀಕ್ಷಿಸಿದನೋ ಹಾಗೆಯೇ. ಮೋಶೆಗೆ ತನ್ನ ದೃಷ್ಟಿಕೋನವನ್ನು ವ್ಯಕ್ತಪಡಿಸಲು ಯೆಹೋವನು ಅವಕಾಶಕೊಟ್ಟನು. * ಆತನು ಅವನನ್ನು ತನಗೂ ಇಸ್ರಾಯೇಲ್ಯರಿಗೂ ಮಧ್ಯಸ್ಥನನ್ನಾಗಿ ನೇಮಿಸಿದ್ದರಿಂದ ಆ ನೇಮಕವನ್ನು ಆತನು ಗೌರವಿಸಿದನು. ಅದಲ್ಲದೆ ಯೆಹೋವನು ಇದನ್ನು ಕೂಡ ತಿಳಿಯಲು ಬಯಸಿದನು ಏನೆಂದರೆ, ಈಗ ಮೋಶೆಯು ನಿರಾಶೆಗೊಂಡು ಈ ಸಂದರ್ಭವನ್ನು ತನ್ನ ಸ್ವಾರ್ಥಕ್ಕಾಗಿ ಬಳಸುತ್ತಾನೊ, ಇಸ್ರಾಯೇಲ್ಯರನ್ನು ಮರೆತು ತನ್ನ ವಂಶಜರಿಂದಲೇ ದೊಡ್ಡ ಜನಾಂಗವನ್ನು ಉಂಟುಮಾಡುವಂತೆ ಪ್ರೇರೇಪಿಸುವನೋ ಎಂಬುದಾಗಿ.

16 ಮೋಶೆಯ ಪ್ರತಿಕ್ರಿಯೆಯು ಅವನಿಗೆ ಯೆಹೋವನ ನ್ಯಾಯದಲ್ಲಿದ್ದ ನಂಬಿಕೆ ಹಾಗೂ ಭರವಸೆಯನ್ನು ತೋರಿಸಿಕೊಟ್ಟಿತು. ಅವನು ಸ್ವಾರ್ಥಪರನಾಗಿರಲಿಲ್ಲ, ಬದಲಿಗೆ ಯೆಹೋವನ ನಾಮದ ಬಗ್ಗೆ ಚಿಂತಿತನಾಗಿದ್ದನು ಎಂದೂ ತೋರಿಸಿತು. ಆ ನಾಮವು ಅಪಖ್ಯಾತಿಗೆ ಗುರಿಯಾಗುವುದು ಅವನಿಗೆ ಬೇಡವಾಗಿತ್ತು. ಹೀಗೆ ಮೋಶೆಯು ‘ಯೆಹೋವನ ಮನಸ್ಸನ್ನು’ ಅರ್ಥಮಾಡಿಕೊಂಡನೆಂದು ತೋರಿಸಿದನು. (1 ಕೊರಿಂ. 2:16) ಫಲಿತಾಂಶವೇನು? ಆ ವಿಷಯದಲ್ಲಿ ಯೆಹೋವನು ಯಾವುದೇ ದೃಢತೀರ್ಮಾನ ಮಾಡಿರದಿದ್ದ ಕಾರಣ ಆತನೀಗ “ಮನಸ್ಸನ್ನು ಬೇರೆ ಮಾಡಿಕೊಂಡನು” ಎಂದು ಪ್ರೇರಿತ ದಾಖಲೆ ಹೇಳುತ್ತದೆ. ಹೀಬ್ರುವಿನಲ್ಲಿ ಈ ಅಭಿವ್ಯಕ್ತಿಯ ಅರ್ಥವು, ಯೆಹೋವನು ಇಡೀ ಜನಾಂಗದ ಮೇಲೆ ತರುತ್ತೇನೆಂದು ಯೋಚಿಸಿದ್ದ ನಾಶನವನ್ನು ತರಲಿಲ್ಲ ಎಂದಾಗಿದೆ.

ಯೆಹೋವನು ಅಬ್ರಹಾಮನೊಂದಿಗೆ ವ್ಯವಹರಿಸಿದ ವಿಧ

17. ಅಬ್ರಹಾಮನು ತನ್ನ ಚಿಂತೆಯನ್ನು ವ್ಯಕ್ತಪಡಿಸಿದಾಗ ಯೆಹೋವನು ಹೇಗೆ ತುಂಬ ತಾಳ್ಮೆಯನ್ನು ತೋರಿಸಿದನು?

17 ಯೆಹೋವನು ತನ್ನ ಸೇವಕರಿಗೆ ತಮ್ಮ ನಂಬಿಕೆ ಹಾಗೂ ಭರವಸೆಯನ್ನು ವ್ಯಕ್ತಪಡಿಸಲು ಹೇಗೆ ಅವಕಾಶ ಕೊಡುತ್ತಾನೆಂಬುದಕ್ಕೆ ಇನ್ನೊಂದು ಉದಾಹರಣೆ ಸೋದೋಮ್‌ನ ಕುರಿತು ಅಬ್ರಹಾಮನು ಮಾಡಿದ ವಿನಂತಿಯೇ. ಆ ಸಂದರ್ಭದಲ್ಲಿ ಯೆಹೋವನು ಅಬ್ರಹಾಮನಿಗೆ ಒಂದರ ನಂತರ ಒಂದರಂತೆ ಎಂಟು ಪ್ರಶ್ನೆಗಳನ್ನು ಕೇಳಲು ಅನುಮತಿಸುವ ಮೂಲಕ ತುಂಬ ತಾಳ್ಮೆಯಿಂದ ವ್ಯವಹರಿಸಿದನು. ಒಂದು ಹಂತದಲ್ಲಿ ಅಬ್ರಹಾಮನು ಈ ಭಾವಪೂರ್ಣ ವಿನಂತಿಯನ್ನು ಮಾಡಿದನು: “ದುಷ್ಟರಿಗೂ ಶಿಷ್ಟರಿಗೂ ಭೇದಮಾಡದೆ ದುಷ್ಟರ ಸಂಗಡ ನೀತಿವಂತರನ್ನೂ ಸಂಹರಿಸುವದು ನಿನ್ನಿಂದ ಎಂದಿಗೂ ಆಗಬಾರದು; ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ?”—ಆದಿ. 18:22-33.

18. ಯೆಹೋವನು ಅಬ್ರಹಾಮನೊಂದಿಗೆ ವ್ಯವಹರಿಸಿದ ರೀತಿಯಿಂದ ನಾವೇನನ್ನು ಕಲಿಯುತ್ತೇವೆ?

18 ಈ ವೃತ್ತಾಂತದಿಂದ ನಾವು ಯೆಹೋವನ ಆಲೋಚನೆಗಳ ಕುರಿತು ಏನನ್ನು ಕಲಿಯುತ್ತೇವೆ? ಸರಿಯಾದ ನಿರ್ಣಯ ಮಾಡಲು ಯೆಹೋವನಿಗೆ ಅಬ್ರಹಾಮನೊಂದಿಗೆ ಚರ್ಚಿಸುವ ಅಗತ್ಯವಿತ್ತೊ? ಖಂಡಿತ ಇಲ್ಲ. ಆರಂಭದಲ್ಲೇ ಯೆಹೋವನು ತನ್ನ ನಿರ್ಣಯದ ಹಿಂದಿರುವ ಕಾರಣಗಳನ್ನು ಹೇಳಿಬಿಡಬಹುದಿತ್ತು. ಆದರೆ ಯೆಹೋವನು ಅಬ್ರಹಾಮನಿಗೆ ಪ್ರಶ್ನೆಗಳನ್ನು ಕೇಳುವಂತೆ ಬಿಡುವ ಮೂಲಕ ತನ್ನ ನಿರ್ಣಯವನ್ನು ಅವನು ಒಪ್ಪುವಂತೆ ಮತ್ತು ತನ್ನ ಆಲೋಚನೆಯನ್ನು ಅವನು ಅರ್ಥಮಾಡಿಕೊಳ್ಳುವಂತೆ ಸಮಯಕೊಟ್ಟನು. ಮಾತ್ರವಲ್ಲ ಯೆಹೋವನ ಅಪಾರ ಕರುಣೆ ಮತ್ತು ನ್ಯಾಯವನ್ನು ಗ್ರಹಿಸಿಕೊಳ್ಳಲೂ ಇದು ಅಬ್ರಹಾಮನಿಗೆ ಸಹಾಯಮಾಡಿತು. ಹೌದು, ಯೆಹೋವನು ಅಬ್ರಹಾಮನೊಂದಿಗೆ ಸ್ನೇಹಿತನಂತೆ ನಡಕೊಂಡನು.—ಯೆಶಾ. 41:8; ಯಾಕೋ. 2:23.

ನಮಗಿರುವ ಪಾಠಗಳು

19. ನಾವು ಯೋಬನನ್ನು ಹೇಗೆ ಅನುಕರಿಸಬಲ್ಲೆವು?

19 ನಾವು ‘ಯೆಹೋವನ ಮನಸ್ಸಿನ’ ಬಗ್ಗೆ ಏನನ್ನು ಕಲಿತೆವು? ಯೆಹೋವನ ಮನಸ್ಸಿನ ಕುರಿತ ನಮ್ಮ ತಿಳಿವಳಿಕೆಯನ್ನು ದೇವರ ವಾಕ್ಯವು ರೂಪಿಸುವಂತೆ ನಾವು ಬಿಟ್ಟುಕೊಡಬೇಕು. ನಮಗಿರುವ ಇತಿಮಿತಿಗಳಿಂದ ಯೆಹೋವನನ್ನು ಅಳೆಯುತ್ತಾ ನಮ್ಮ ಮಟ್ಟಗಳು ಹಾಗೂ ಆಲೋಚನೆಗನುಸಾರ ಆತನ ಬಗ್ಗೆ ತೀರ್ಪುಮಾಡಬಾರದು. ಯೋಬನು ಹೇಳಿದ್ದು: “[ದೇವರು] ನನ್ನಂಥವನಲ್ಲ, ಮನುಷ್ಯನಲ್ಲ, ನಾನು ಆತನೊಂದಿಗೆ ವಾದಿಸುವದು ಹೇಗೆ? ನಾವಿಬ್ಬರೂ ನ್ಯಾಯಾಸನದ ಮುಂದೆ ಕೂಡುವದು ಹೇಗೆ?” (ಯೋಬ 9:32) ಯೋಬನಂತೆ ನಾವು ಸಹ ಯೆಹೋವನ ಮನಸ್ಸನ್ನು ಸ್ವಲ್ಪ ಸ್ವಲ್ಪವಾಗಿ ಅರ್ಥಮಾಡಿಕೊಳ್ಳುವಾಗ, “ಆಹಾ, ಈ ಅದ್ಭುತಗಳು ಆತನ ಮಾರ್ಗಗಳ ಕಟ್ಟಕಡೆಯಾಗಿವೆ. ಆತನ ವಿಷಯವಾಗಿ ಸೂಕ್ಷ್ಮಶಬ್ದವನ್ನು ಮಾತ್ರ ಕೇಳಿದ್ದೇವೆ, ಆತನ ಪ್ರಾಬಲ್ಯದ ಘನಗರ್ಜನೆಯನ್ನು ಯಾರು ಗ್ರಹಿಸಬಲ್ಲರು?” ಎಂದು ಉದ್ಗರಿಸದಿರಲಾರೆವು.—ಯೋಬ 26:14.

20. ಅರ್ಥಮಾಡಿಕೊಳ್ಳಲು ಕಷ್ಟವಾಗುವ ವಚನಭಾಗವು ಸಿಗುವಾಗ ನಾವೇನು ಮಾಡಬೇಕು?

20 ಬೈಬಲನ್ನು ಓದುವಾಗ ಅದರ ಒಂದು ಭಾಗವನ್ನು ಅದರಲ್ಲೂ ಮುಖ್ಯವಾಗಿ ಯೆಹೋವನ ಆಲೋಚನೆಯ ಕುರಿತಾದ ಭಾಗವನ್ನು ಅರ್ಥಮಾಡಿಕೊಳ್ಳಲು ಕಷ್ಟವಾದರೆ ನಾವೇನು ಮಾಡಬೇಕು? ಅದರ ಕುರಿತು ಸಂಶೋಧನೆ ಮಾಡಿದ ನಂತರ ಇನ್ನೂ ಸ್ಪಷ್ಟ ಉತ್ತರ ಸಿಗಲಿಲ್ಲವಾದರೆ ಅದು ಯೆಹೋವನ ಮೇಲಿರುವ ನಮ್ಮ ಭರವಸೆಯ ಪರೀಕ್ಷೆಯೆಂದು ನೆನಸಬೇಕು. ಕೆಲವೊಮ್ಮೆ ಬೈಬಲಿನಲ್ಲಿರುವ ನಿರ್ದಿಷ್ಟ ಹೇಳಿಕೆಗಳು ಯೆಹೋವನ ಗುಣಗಳಲ್ಲಿರುವ ನಮ್ಮ ನಂಬಿಕೆಯನ್ನು ವ್ಯಕ್ತಪಡಿಸಲು ಅವಕಾಶ ಕೊಡುತ್ತವೆ ಎಂಬುದನ್ನು ಮರೆಯದಿರಿ. ಆದುದರಿಂದ ಆತನು ಮಾಡುವ ಸಕಲವನ್ನೂ ನಾವು ಅರಿಯೆವು, ಅರ್ಥಮಾಡಿಕೊಳ್ಳಲಾರೆವು ಎಂಬುದನ್ನು ದೀನತೆಯಿಂದ ಒಪ್ಪಿಕೊಳ್ಳೋಣ. (ಪ್ರಸಂ. 11:5) ಹೀಗೆ ಅಪೊಸ್ತಲ ಪೌಲನ ಈ ಮಾತುಗಳೊಂದಿಗೆ ನಾವು ಸಮ್ಮತಿಸುವಂತೆ ಪ್ರಚೋದಿಸಲ್ಪಡುವೆವು: “ಆಹಾ! ದೇವರ ಐಶ್ವರ್ಯವೂ ವಿವೇಕವೂ ಜ್ಞಾನವೂ ಎಷ್ಟೋ ಅಗಾಧ! ಆತನ ನ್ಯಾಯತೀರ್ಪುಗಳು ಎಷ್ಟೋ ಅಗಮ್ಯ ಮತ್ತು ಆತನ ಮಾರ್ಗಗಳನ್ನು ಕಂಡುಹಿಡಿಯುವುದು ಎಷ್ಟೋ ಅಸಾಧ್ಯ! ‘ಯೆಹೋವನ ಮನಸ್ಸನ್ನು ತಿಳಿದಿರುವವರು ಯಾರು ಅಥವಾ ಆತನಿಗೆ ಸಲಹೆಗಾರನಾಗಿರುವವನು ಯಾರು?’ ಇಲ್ಲವೆ ‘ತನಗೆ ಹಿಂದೆ ಸಲ್ಲಿಸಬೇಕಾಗುವಂತೆ ಆತನಿಗೆ ಮೊದಲಾಗಿ ಕೊಟ್ಟಿರುವವನು ಯಾರು?’ ಏಕೆಂದರೆ ಸಮಸ್ತವೂ ಆತನಿಂದಲೇ, ಆತನ ಮೂಲಕವಾಗಿಯೇ ಮತ್ತು ಆತನಿಗಾಗಿಯೇ ಇವೆ. ಆತನಿಗೆ ನಿತ್ಯಕ್ಕೂ ಮಹಿಮೆಯು ಸಲ್ಲಿಸಲ್ಪಡಲಿ. ಆಮೆನ್‌.”—ರೋಮ. 11:33-36.

[ಪಾದಟಿಪ್ಪಣಿಗಳು]

^ ಪ್ಯಾರ. 14 ಅರಣ್ಯಕಾಂಡ 14:11-20ರಲ್ಲಿಯೂ ಇಂಥ ಇನ್ನೊಂದು ವೃತ್ತಾಂತವಿದೆ.

^ ಪ್ಯಾರ. 15 ಕೆಲವು ವಿದ್ವಾಂಸರಿಗನುಸಾರ ವಿಮೋಚನಕಾಂಡ 32:10ರಲ್ಲಿರುವ “ನನ್ನನ್ನು ತಡೆಯಬೇಡ” [“ನನ್ನನ್ನು ಬಿಡು,” NIBV] ಎಂಬ ಹೀಬ್ರು ಪದರೂಪವನ್ನು, ಯೆಹೋವನು ಮೋಶೆಗೆ ತನ್ನ ಮತ್ತು ಇಸ್ರಾಯೇಲ್‌ ಜನಾಂಗದ ಮಧ್ಯೆ ಬರುವಂತೆ ಅಥವಾ ನಡುವೆ ‘ನಿಲ್ಲುವಂತೆ’ ನೀಡಿದ ಒಂದು ಕರೆಯಾಗಿ ಅಥವಾ ಸಲಹೆಯಾಗಿ ಅರ್ಥಮಾಡಸಾಧ್ಯವಿದೆ. (ಕೀರ್ತ. 106:23; ಯೆಹೆ. 22:30) ವಿಷಯವೇನೇ ಆಗಿರಲಿ, ಮೋಶೆ ಯೆಹೋವನಿಗೆ ತನ್ನ ಅಭಿಪ್ರಾಯವನ್ನು ಬಿಚ್ಚುಮನಸ್ಸಿನಿಂದ ತಿಳಿಸಿದನು.

ನಿಮಗೆ ನೆನಪಿದೆಯೇ?

• ನಮ್ಮ ಸ್ವಂತ ಮಟ್ಟಗಳಿಗನುಸಾರ ಯೆಹೋವನ ಬಗ್ಗೆ ತೀರ್ಪುಮಾಡದಂತೆ ಯಾವುದು ನಮಗೆ ಸಹಾಯಮಾಡುವುದು?

• ಯೇಸುವಿನ ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳುವುದು ‘ಯೆಹೋವನನ್ನು ಆಪ್ತಮಿತ್ರನಾಗಿ’ ಮಾಡಿಕೊಳ್ಳಲು ಹೇಗೆ ನೆರವಾಗುತ್ತದೆ?

• ಮೋಶೆ ಹಾಗೂ ಅಬ್ರಹಾಮನೊಂದಿಗೆ ಯೆಹೋವನು ಮಾಡಿದ ಸಂಭಾಷಣೆಯಿಂದ ನೀವು ಯಾವ ಪಾಠಗಳನ್ನು ಕಲಿತಿರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 5ರಲ್ಲಿರುವ ಚಿತ್ರಗಳು]

ಯೆಹೋವನು ಮೋಶೆ ಮತ್ತು ಅಬ್ರಹಾಮನೊಂದಿಗೆ ವ್ಯವಹರಿಸಿದ ರೀತಿಯಿಂದ ಆತನ ಆಲೋಚನೆಯ ಬಗ್ಗೆ ನಾವೇನು ಕಲಿಯುತ್ತೇವೆ?