ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಿಗೆ ವಿಧೇಯರಾಗಿ ಆತನ ವಾಗ್ದಾನಗಳಿಂದ ಪ್ರಯೋಜನಹೊಂದಿ

ದೇವರಿಗೆ ವಿಧೇಯರಾಗಿ ಆತನ ವಾಗ್ದಾನಗಳಿಂದ ಪ್ರಯೋಜನಹೊಂದಿ

ದೇವರಿಗೆ ವಿಧೇಯರಾಗಿ ಆತನ ವಾಗ್ದಾನಗಳಿಂದ ಪ್ರಯೋಜನಹೊಂದಿ

‘ದೇವರು ತನಗಿಂತ ಹೆಚ್ಚಿನವನ ಮೇಲೆ ಆಣೆಯಿಡುವುದಕ್ಕಾಗದೆ ಇದ್ದುದರಿಂದ ತನ್ನ ಮೇಲೆಯೇ ಆಣೆಯಿಟ್ಟುಕೊಂಡನು.’ ​—⁠ಇಬ್ರಿ. 6:⁠13.

ಉತ್ತರ ಹುಡುಕಿ. . .

ದೇವರ ಉದ್ದೇಶಗಳು ಎಂದಿಗೂ ವಿಫಲವಾಗುವುದಿಲ್ಲ ಎಂಬ ಖಾತ್ರಿ ನಮಗೇಕೆ ಇರಬಲ್ಲದು?

ಆದಾಮಹವ್ವ ಪಾಪ ಮಾಡಿದ ಬಳಿಕ ದೇವರು ಯಾವ ವಾಗ್ದಾನ ಮಾಡಿದನು?

ದೇವರು ಆಣೆಯಿಟ್ಟು ಅಬ್ರಹಾಮನಿಗೆ ನುಡಿದ ವಾಗ್ದಾನದಿಂದ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆ?

1. ಪಾಪಿಗಳಾದ ಮಾನವರ ಮಾತಿಗಿಂತ ಯೆಹೋವನ ಮಾತು ಹೇಗೆ ತುಂಬ ಬೆಲೆಯುಳ್ಳದ್ದಾಗಿದೆ?

ಯೆಹೋವನು ‘ಸತ್ಯವಂತನು.’ (ರೋಮ. 3:⁠4) ಪಾಪಿಗಳಾದ ಮಾನವರ ಮಾತಿನಲ್ಲಿ ಯಾವಾಗಲೂ ಭರವಸೆಯಿಡಲು ಆಗುವುದಿಲ್ಲ. ಯೆಹೋವನಾದರೋ ಯಾವತ್ತೂ ‘ಸುಳ್ಳಾಡಲಾರನು.’ (ಇಬ್ರಿ. 6:18; ಅರಣ್ಯಕಾಂಡ 23:19 ಓದಿ.) ಮಾನವಕುಲದ ಒಳಿತಿಗಾಗಿ ಆತನು ಉದ್ದೇಶಿಸುವುದೆಲ್ಲವೂ ಸದಾ ಸತ್ಯವಾಗುತ್ತದೆ. ಉದಾಹರಣೆಗೆ, ದೇವರು ಪ್ರತಿಯೊಂದು ಸೃಷ್ಟಿ ದಿನದ ಆರಂಭದಲ್ಲೇ ಏನೆಲ್ಲ ಮಾಡುತ್ತಾನೆಂದು ಹೇಳಿದನೋ ಅದೆಲ್ಲವೂ “ಹಾಗೆಯೇ ಆಯಿತು.” ಆರನೇ ಸೃಷ್ಟಿ ದಿನದ ಕೊನೆಯಲ್ಲಿ “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.”​—⁠ಆದಿ. 1:​6, 7, 30, 31.

2. (1) ದೇವರ ವಿಶ್ರಾಂತಿ ದಿನ ಅಂದರೇನು? (2) ಆ ದಿನವನ್ನು ದೇವರು ಪರಿಶುದ್ಧವಾಗಿ ಮಾಡಿದ್ದೇಕೆ?

2 ಯೆಹೋವ ದೇವರು ತನ್ನೆಲ್ಲಾ ಸೃಷ್ಟಿಕಾರ್ಯಗಳನ್ನು ಗಮನಿಸಿದ ಬಳಿಕ ಏಳನೇ ದಿನದ ಆರಂಭವನ್ನು ಪ್ರಕಟಿಸಿದನು. ಇದು 24 ತಾಸುಗಳ ದಿನವಲ್ಲ. ದೇವರು ತನ್ನ ಸೃಷ್ಟಿಕಾರ್ಯವನ್ನು ನಿಲ್ಲಿಸಿಬಿಟ್ಟು ವಿಶ್ರಮಿಸಿಕೊಂಡ ದೀರ್ಘ ಸಮಯವಾಗಿದೆ. (ಆದಿ. 2:⁠2) ದೇವರ ಆ ವಿಶ್ರಾಂತಿಯ ದಿನ ಇನ್ನೂ ಮುಗಿದಿಲ್ಲ. (ಇಬ್ರಿ. 4:​9, 10) ಅದು ಯಾವಾಗ ಆರಂಭವಾಯಿತೆಂದು ಬೈಬಲ್‌ ನಿರ್ದಿಷ್ಟವಾಗಿ ಹೇಳುವುದಿಲ್ಲ. ಆದಾಮನ ಪತ್ನಿ ಹವ್ವಳ ಸೃಷ್ಟಿಯಾಗಿ ಸ್ವಲ್ಪ ಸಮಯದ ಬಳಿಕ ಅಂದರೆ ಸುಮಾರು 6,000 ವರ್ಷಗಳ ಹಿಂದೆ ಅದು ಆರಂಭಗೊಂಡಿರಬೇಕು. ಅತಿ ಬೇಗನೆ ಯೇಸು ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆ ಆರಂಭಗೊಳ್ಳಲಿದೆ. ಆಗ ಭೂಮಿಗಾಗಿರುವ ದೇವರ ಉದ್ದೇಶ ನೆರವೇರುವುದು. ಇಡೀ ಭೂಮಿ ಪರದೈಸವಾಗಿ ಪರಿಪೂರ್ಣ ಮಾನವರು ನಿತ್ಯನಿರಂತರಕ್ಕೂ ಅದರಲ್ಲಿ ಜೀವಿಸುವರು. (ಆದಿ. 1:​27, 28; ಪ್ರಕ. 20:⁠6) ಭೂಮಿಯ ಮೇಲೆ ಸಂತೋಷ ತುಂಬಿರುವ ಆ ಭವಿಷ್ಯ ಬಂದೇ ಬರುತ್ತದಾ? ಖಂಡಿತ! ಏಕೆಂದರೆ ದೇವರು “ಆ ಏಳನೆಯ . . . ದಿನವನ್ನು ಪರಿಶುದ್ಧದಿನವಾಗಿರಲಿ ಎಂದು ಆಶೀರ್ವದಿಸಿದನು.” ಈ ಮಾತುಗಳು, ದೇವರ ವಿಶ್ರಾಂತಿ ದಿನದಲ್ಲಿ ಏನೇ ಅನಿರೀಕ್ಷಿತ ತೊಡಕುಗಳು ಬಂದರೂ ಆ ದಿನ ಕೊನೆಗೊಳ್ಳುವಷ್ಟರಲ್ಲಿ ಭೂಮಿಗಾಗಿರುವ ದೇವರ ಉದ್ದೇಶ ಖಂಡಿತ ನೆರವೇರಿಯೇ ತೀರುವುದು ಎಂಬ ಖಾತ್ರಿ ಕೊಡುತ್ತವೆ.​—⁠ಆದಿ. 2:⁠3.

3. (1) ದೇವರ ವಿಶ್ರಾಂತಿ ದಿನ ಆರಂಭಗೊಂಡ ಬಳಿಕ ಏನು ಸಂಭವಿಸಿತು? (2) ದಂಗೆಯನ್ನು ಹೇಗೆ ಅಡಗಿಸುವೆನೆಂದು ಯೆಹೋವನು ಹೇಳಿದನು?

3 ದೇವರ ವಿಶ್ರಾಂತಿ ದಿನ ಆರಂಭಗೊಂಡ ಬಳಿಕ ದೇವರ ದೂತಪುತ್ರನಾಗಿದ್ದ ಸೈತಾನ ದಂಗೆ ಎದ್ದನು. ದೇವರಿಗೆ ಪ್ರತಿಸ್ಪರ್ಧಿಯಾಗಿ ಎಲ್ಲ ಆರಾಧನೆ ತನಗೇ ಸಲ್ಲಬೇಕೆಂದು ಆಶಿಸಿದನು. ಮೊಟ್ಟಮೊದಲ ಸುಳ್ಳನ್ನು ಹವ್ವಳಿಗೆ ಹೇಳಿ ವಂಚಿಸಿ ಯೆಹೋವನ ಮಾತಿಗೆ ಅವಿಧೇಯಳಾಗುವಂತೆ ಮಾಡಿದನು. (1 ತಿಮೊ. 2:14) ಬಳಿಕ ಹವ್ವಳು ತನ್ನ ಗಂಡ ಸಹ ಅವಿಧೇಯತೆಯ ಮಾರ್ಗ ತುಳಿಯುವಂತೆ ಪ್ರೇರಿಸಿದಳು. (ಆದಿ. 3:​1-6) ಸುಳ್ಳು ಹೇಳುತ್ತಿದ್ದಾನೆಂಬ ಆರೋಪ ಯೆಹೋವನ ಮೇಲೆ ಬಂತು. ವಿಶ್ವದ ಇತಿಹಾಸದಲ್ಲೇ ಅತಿ ಕರಾಳ ದಿನ ಅದಾಗಿತ್ತಾದರೂ ಭೂಮಿ ಕಡೆಗಿನ ತನ್ನ ಉದ್ದೇಶ ಸತ್ಯವಾಗಿಯೂ ನೆರವೇರುತ್ತದೆ ಎಂಬುದನ್ನು ದೃಢೀಕರಿಸಲು ಆತನು ಆಣೆಯಿಡಲಿಲ್ಲ. ಬದಲಾಗಿ ಆ ದಂಗೆಯನ್ನು ಹೇಗೆ ಅಡಗಿಸುವೆನೆಂದು ತಿಳಿಸಿದನಷ್ಟೆ. ದೇವರು ತಿಳಿಸಿದ ಆ ಮಾತುಗಳು ಆತನ ನೇಮಿತ ಸಮಯದಲ್ಲಿ ಅರ್ಥವಾಗಲಿದ್ದವು. “ನಿನಗೂ [ಸೈತಾನನಿಗೂ] ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು [ವಾಗ್ದತ್ತ ಸಂತತಿ] ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.”​—⁠ಆದಿ. 3:15; ಪ್ರಕ. 12:⁠9.

ಆಣೆ ಪ್ರಮಾಣ​—⁠ಕಾನೂನುಬದ್ಧ ದೃಢೀಕರಣ

4, 5. ಅಬ್ರಹಾಮನು ಕೆಲವೊಮ್ಮೆ ಯಾವ ಕಾನೂನುಬದ್ಧ ವಿಧಾನವನ್ನು ಸದುಪಯೋಗಿಸಿಕೊಂಡನು?

4 ಮಾನವ ಇತಿಹಾಸದ ಆರಂಭ ಘಟ್ಟದಲ್ಲಿ ಏನನ್ನಾದರೂ ಸತ್ಯವೆಂದು ದೃಢಪಡಿಸಲು ಆಣೆಯಿಡುವ ಅಗತ್ಯ ಇದ್ದಿರಲಿಕ್ಕಿಲ್ಲ. ಏಕೆಂದರೆ ದೇವರನ್ನು ಪ್ರೀತಿಸಿ ಅನುಕರಿಸುವ ಪರಿಪೂರ್ಣ ಜೀವಿಗಳು ಯಾವಾಗಲೂ ಸತ್ಯವನ್ನೇ ನುಡಿಯುವುದರಿಂದ ಪರಸ್ಪರರ ಮೇಲೆ ಸಂಪೂರ್ಣ ಭರವಸೆಯಿರುತ್ತದೆ. ಆದರೆ ಪ್ರಥಮ ದಂಪತಿ ಪಾಪಮಾಡಿ ಅಪರಿಪೂರ್ಣರಾದ ಬಳಿಕ ಸನ್ನಿವೇಶ ಬದಲಾಯಿತು. ಸುಳ್ಳು, ವಂಚನೆ ಕ್ರಮೇಣ ಮಾನವರಲ್ಲಿ ಸರ್ವೇಸಾಮಾನ್ಯವಾಯಿತು. ಆಣೆಯಿಡುವ ಅಗತ್ಯ ಉಂಟಾದದ್ದು ಆಗಲೇ.

5 ಆ ದಿನಗಳಲ್ಲಿ ಆಣೆಯಿಡುವುದು ಕಾನೂನುಬದ್ಧ ವಿಧಾನವಾಗಿತ್ತು. ಪೂರ್ವಜನಾದ ಅಬ್ರಹಾಮ ಕಡಿಮೆಪಕ್ಷ ಮೂರು ಸಂದರ್ಭಗಳಲ್ಲಿ ಅದನ್ನು ಸದುಪಯೋಗಿಸಿಕೊಂಡನು. (ಆದಿ. 21:​22-24; 24:​2-4, 9) ಉದಾಹರಣೆಗೆ, ಏಲಾಮಿನ ಅರಸನನ್ನೂ ಅವನೊಂದಿಗಿದ್ದ ರಾಜರನ್ನೂ ಸೋಲಿಸಿ ಅಬ್ರಹಾಮ ಹಿಂತಿರುಗುತ್ತಿದ್ದಾಗ ಸಾಲೇಮ್‌ ಮತ್ತು ಸೊದೋಮ್‌ನ ಅರಸರು ಅವನನ್ನು ಕಾಣಲು ಬರುತ್ತಾರೆ. ಸಾಲೇಮಿನ ಅರಸ ಮೆಲ್ಕಿಚೆದೇಕನು ‘ಪರಾತ್ಪರನಾದ ದೇವರ ಯಾಜಕನೂ’ ಆಗಿದ್ದನು. ಆತ ಅಬ್ರಹಾಮನನ್ನು ಹರಸುತ್ತಾನೆ ಮತ್ತು ವೈರಿಗಳನ್ನು ಅವನ ಕೈಗೊಪ್ಪಿಸಿದ್ದಕ್ಕಾಗಿ ದೇವರನ್ನು ಕೊಂಡಾಡುತ್ತಾನೆ. (ಆದಿ. 14:​17-20) ತನ್ನ ಜನರನ್ನು ಅಬ್ರಹಾಮ ಕಾಪಾಡಿದ್ದಕ್ಕಾಗಿ ಸೊದೋಮಿನ ಅರಸ ಅವನಿಗೆ ಉಡುಗೊರೆಗಳನ್ನು ನೀಡಲು ಬಯಸುತ್ತಾನೆ. ಆಗ ಅಬ್ರಹಾಮ “ಒಂದು ದಾರವನ್ನಾಗಲಿ ಕೆರದ ಬಾರನ್ನಾಗಲಿ ನಿನ್ನದರಲ್ಲಿ ಯಾವದನ್ನೂ ತೆಗೆದುಕೊಳ್ಳುವದಿಲ್ಲವೆಂದು ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ ಪರಾತ್ಪರದೇವರಾಗಿರುವ ಯೆಹೋವನ ಕಡೆಗೆ ಕೈಯೆತ್ತಿ ಪ್ರಮಾಣಮಾಡುತ್ತೇನೆ. ಅಬ್ರಾಮನು ನನ್ನ ಸೊತ್ತಿನಿಂದಲೇ ಐಶ್ವರ್ಯವಂತನಾದನೆಂದು ಹೇಳಿಕೊಳ್ಳುವದಕ್ಕೆ ನಿನಗೆ ಆಸ್ಪದವಾಗಬಾರದು, ನನಗೆ ಏನೂ ಬೇಡ” ಎಂದು ಆಣೆಯಿಟ್ಟು ನುಡಿಯುತ್ತಾನೆ.​—⁠ಆದಿ. 14:​21-23.

ಯೆಹೋವನು ಆಣೆಯಿಟ್ಟು ಅಬ್ರಹಾಮನಿಗೆ ಮಾಡಿದ ವಾಗ್ದಾನ

6. (1) ಅಬ್ರಹಾಮ ನಮಗೆ ಯಾವ ಮಾದರಿ ಇಟ್ಟಿದ್ದಾನೆ? (2) ಅಬ್ರಹಾಮನ ವಿಧೇಯತೆಯಿಂದ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆ?

6 ಪಾಪಿಗಳಾದ ಮಾನವರು ತನ್ನ ವಾಗ್ದಾನಗಳಲ್ಲಿ ಭರವಸೆಯಿಡುವಂತೆ ಯೆಹೋವ ದೇವರು ಕೂಡ ಆಣೆಯಿಟ್ಟನು. ಉದಾಹರಣೆಗೆ, “ಕರ್ತನಾದ ಯೆಹೋವನು ಇಂತೆನ್ನುತ್ತಾನೆ​—⁠ನನ್ನ ಜೀವದಾಣೆ” ಎಂಬ ಅಭಿವ್ಯಕ್ತಿಗಳನ್ನು ಆತನು ಉಪಯೋಗಿಸಿದನು. (ಯೆಹೆ. 17:16) ಹೀಗೆ 40ಕ್ಕಿಂತಲೂ ಹೆಚ್ಚು ಸಂದರ್ಭಗಳಲ್ಲಿ ಆತನು ಆಣೆಯಿಟ್ಟು ಪ್ರಮಾಣ ಮಾಡಿರುವ ಕುರಿತು ಬೈಬಲಿನಲ್ಲಿ ತಿಳಿಸಲಾಗಿದೆ. ಇವುಗಳಲ್ಲಿ ಚಿರಪರಿಚಿತವಾದದ್ದು ದೇವರು ಆಣೆಯಿಟ್ಟು ಅಬ್ರಹಾಮನಿಗೆ ನುಡಿದ ಮಾತುಗಳಾಗಿವೆ. ಅಬ್ರಹಾಮನ ಜೀವಮಾನದ ಸಮಯದಲ್ಲಿ ಯೆಹೋವನು ಅವನೊಂದಿಗೆ ಅನೇಕ ವಾಗ್ದಾನಗಳನ್ನು ಮಾಡಿದನು. ಇವುಗಳ ಮೂಲಕ ವಾಗ್ದತ್ತ ಸಂತತಿಯು ತನ್ನ ವಂಶದಲ್ಲಿ ಮಗ ಇಸಾಕನ ಮೂಲಕ ಬರುವುದೆಂದು ಅಬ್ರಹಾಮ ತಿಳಿದುಕೊಂಡನು. (ಆದಿ. 12:​1-3, 7; 13:​14-17; 15:​5, 18; 21:12) ಬಳಿಕ ಅಬ್ರಹಾಮನು ತನ್ನ ಮುದ್ದು ಮಗನನ್ನು ಯಜ್ಞವಾಗಿ ಅರ್ಪಿಸುವಂತೆ ಯೆಹೋವನು ಆಜ್ಞಾಪಿಸಿದನು. ಅದು ಅಬ್ರಹಾಮನಿಗೆ ಅತಿ ಕಷ್ಟದ ಪರೀಕ್ಷೆಯಾಗಿತ್ತು. ಆದರೂ ಅವನು ತಡಮಾಡದೆ ವಿಧೇಯನಾಗಲು ಮುಂದಾದ. ಇನ್ನೇನು ಮಗನನ್ನು ಅರ್ಪಿಸಲಿಕ್ಕಿದ್ದಾಗ ದೇವದೂತನು ತಡೆದನು. ಆಗ ದೇವರು ಅಬ್ರಹಾಮನಿಗೆ ಈ ಪ್ರಮಾಣ ಮಾಡಿದನು: “ನೀನು ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವದಕ್ಕೆ ಹಿಂದೆಗೆಯದೆ ಹೋದದ್ದರಿಂದ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಹೆಚ್ಚಿಸೇ ಹೆಚ್ಚಿಸುವೆನು; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ ಅಸಂಖ್ಯವಾಗಿ ಮಾಡುವೆನು; ಅವರು ಶತ್ರುಗಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳುವರು. ನೀನು ನನ್ನ ಮಾತನ್ನು ಕೇಳಿದ್ದರಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು ಎಂಬದಾಗಿ ಯೆಹೋವನು ತನ್ನಾಣೆಯಿಟ್ಟು ಹೇಳಿದ್ದಾನೆ.”​—⁠ಆದಿ. 22:​1-3, 9-12, 15-18.

7, 8. (1) ದೇವರು ಆಣೆಯಿಟ್ಟು ಅಬ್ರಹಾಮನಿಗೆ ಪ್ರಮಾಣ ಮಾಡಿದ್ದೇಕೆ? (2) ದೇವರು ಆಣೆಯಿಟ್ಟು ಮಾಡಿದ ಆ ವಾಗ್ದಾನದಿಂದ ಯೇಸುವಿನ ‘ಬೇರೆ ಕುರಿಗಳು’ ಹೇಗೆ ಪ್ರಯೋಜನ ಹೊಂದುವರು?

7 ತನ್ನೆಲ್ಲ ವಾಗ್ದಾನಗಳು ಸತ್ಯವಾಗುವವು ಎಂದು ದೇವರು ಆಣೆಯಿಟ್ಟು ಅಬ್ರಹಾಮನಿಗೆ ಹೇಳಿದ್ದೇಕೆ? ವಾಗ್ದತ್ತ “ಸಂತತಿಯ” ದ್ವಿತೀಯ ಭಾಗವಾಗಿ ಕ್ರಿಸ್ತನೊಂದಿಗೆ ಜೊತೆ ಬಾಧ್ಯರಾಗುವವರಲ್ಲಿ ಭರವಸೆ ತುಂಬಲಿಕ್ಕಾಗಿ ಮತ್ತು ಅವರ ನಂಬಿಕೆಯನ್ನು ಬಲಗೊಳಿಸಲಿಕ್ಕಾಗಿಯೇ. (ಇಬ್ರಿಯ 6:​13-18 ಓದಿ; ಗಲಾ. 3:29) ಅಪೊಸ್ತಲ ಪೌಲ ಆ ವಿಷಯವನ್ನು ಚೆನ್ನಾಗಿ ವಿವರಿಸಿದ್ದಾನೆ. ಯೆಹೋವನು “ಆಣೆಯಿಂದ ತನ್ನ ಮಾತನ್ನು ದೃಢೀಕರಿಸಿದನು. ಹೀಗೆ . . . ನಾವು, ಆತನು ಯಾವುದರ ಕುರಿತು ಸುಳ್ಳಾಡಲಾರನೋ ಆ ಬದಲಾಗದ ಎರಡು ಸಂಗತಿಗಳ [ಅಂದರೆ ತನ್ನ ವಾಗ್ದಾನ ಮತ್ತು ಆಣೆಯ] ಮೂಲಕ ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ದೃಢವಾಗಿ ಹಿಡಿದುಕೊಳ್ಳಲು ಬಲವಾದ ಉತ್ತೇಜನವನ್ನು ಹೊಂದಸಾಧ್ಯವಾಯಿತು.”

8 ದೇವರು ಆಣೆಯಿಟ್ಟು ಅಬ್ರಹಾಮನಿಗೆ ಮಾಡಿದ ಪ್ರಮಾಣದಿಂದ ಪ್ರಯೋಜನ ಹೊಂದುವವರು ಅಭಿಷಿಕ್ತ ಕ್ರೈಸ್ತರು ಮಾತ್ರವೇ ಅಲ್ಲ. ಅಬ್ರಹಾಮನ “ಸಂತತಿಯ” ಮೂಲಕ “ಎಲ್ಲಾ ಜನಾಂಗಗಳಿಗೂ . . . ಆಶೀರ್ವಾದವುಂಟಾಗುವದು” ಎಂದು ಯೆಹೋವನು ಆಣೆಯಿಟ್ಟು ನುಡಿದನು. (ಆದಿ. 22:18) ‘ಎಲ್ಲಾ ಜನಾಂಗಗಳು’ ಅನ್ನುವಾಗ ಅದರಲ್ಲಿ ಕ್ರಿಸ್ತನಿಗೆ ವಿಧೇಯತೆ ತೋರಿಸುವ “ಬೇರೆ ಕುರಿಗಳೂ” ಸೇರಿದ್ದಾರೆ. ಇವರಿಗೆ ಪರದೈಸ್‌ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವ ನಿರೀಕ್ಷೆಯಿದೆ. (ಯೋಹಾ. 10:16) ನೀವು ಅಭಿಷಿಕ್ತರಲ್ಲಿ ಒಬ್ಬರಾಗಿರಲಿ, ಬೇರೆ ಕುರಿಗಳಲ್ಲಿ ಒಬ್ಬರಾಗಿರಲಿ ಎಲ್ಲ ವಿಷಯಗಳಲ್ಲಿ ದೇವರಿಗೆ ವಿಧೇಯರಾಗುತ್ತ ಇರುವ ಮೂಲಕ ನಿಮಗಿರುವ ನಿರೀಕ್ಷೆಯನ್ನು ‘ದೃಢವಾಗಿ ಹಿಡಿದುಕೊಳ್ಳಿರಿ.’​ಇಬ್ರಿಯ 6:​11, 12 ಓದಿ.

ಆ ವಾಗ್ದಾನಕ್ಕೆ ಸಂಬಂಧಿಸಿ ದೇವರು ಮಾಡಿದ ಇತರ ಪ್ರಮಾಣಗಳು

9. ಅಬ್ರಹಾಮನ ವಂಶಜರು ಈಜಿಪ್ಟ್‌ನಲ್ಲಿ ದಾಸತ್ವದಲ್ಲಿದ್ದಾಗ ದೇವರು ಏನೆಂದು ಆಣೆಯಿಟ್ಟನು?

9 ಅಬ್ರಹಾಮನಿಗೆ ಮಾಡಿದ ವಾಗ್ದಾನ ನೆರವೇರಿಯೇ ತೀರುವುದೆಂದು ಖಚಿತಪಡಿಸಲು ದೇವರು ನೂರಾರು ವರ್ಷಗಳ ನಂತರ ಪುನಃ ಆಣೆಯಿಟ್ಟು ನುಡಿದನು. ಈಜಿಪ್ಟ್‌ನಲ್ಲಿ ದಾಸತ್ವದಲ್ಲಿದ್ದ ಅಬ್ರಹಾಮನ ಸಂತಾನದವರಾದ ಇಸ್ರಾಯೇಲ್ಯರ ಬಳಿ ದೇವರು ಮೋಶೆಯನ್ನು ಕಳುಹಿಸಿ ತಾನು ಅವರ ಮೂಲಪಿತೃವಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನೆಂದು ಹೇಳಿದನು. (ವಿಮೋ. 6:​6-8) ಈ ಸಂದರ್ಭದಲ್ಲಿ ತಾನು ಮಾಡಿದ್ದು ಪ್ರಮಾಣವಾಗಿತ್ತೆಂದು ದೇವರು ಸಮಯಾನಂತರ ಸ್ಪಷ್ಟಪಡಿಸಿದನು. ಆತನು ಅಂದದ್ದು: “ನಾನು ಇಸ್ರಾಯೇಲನ್ನು ಆರಿಸಿಕೊಂಡ . . . ಆ ದಿವಸದಲ್ಲಿ ನಾನು ಅವರಿಗೆ​—⁠ಸಕಲದೇಶ ಶಿರೋಮಣಿಯಾದ ದೇಶವನ್ನು ನಿಮಗಾಗಿ ನೋಡಿದ್ದೇನೆ; ನಾನು ನಿಮ್ಮನ್ನು ಐಗುಪ್ತದೇಶದೊಳಗಿಂದ ಉದ್ಧರಿಸಿ ಹಾಲೂ ಜೇನೂ ಹರಿಯುವ ಆ ದೇಶಕ್ಕೆ ಸೇರಿಸುವೆನು ಎಂದು ಪ್ರಮಾಣಮಾಡಿ”ದೆನು.​—⁠ಯೆಹೆ. 20:​5, 6.

10. ಇಸ್ರಾಯೇಲ್ಯರನ್ನು ಈಜಿಪ್ಟ್‌ನಿಂದ ಬಿಡುಗಡೆ ಮಾಡಿದ ನಂತರ ದೇವರು ಯಾವ ವಾಗ್ದಾನ ಮಾಡಿದನು?

10 ಇಸ್ರಾಯೇಲ್ಯರು ಈಜಿಪ್ಟ್‌ನಿಂದ ಬಿಡುಗಡೆಯಾದ ನಂತರ ಯೆಹೋವನು ಇನ್ನೊಂದು ವಾಗ್ದಾನ ಮಾಡಿದನು: “ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ; ಸಮಸ್ತ ಭೂಮಿಯೂ ನನ್ನದಷ್ಟೆ. ನೀವು ನನಗೆ ಯಾಜಕರಾಜ್ಯವೂ ಪರಿಶುದ್ಧಜನವೂ ಆಗಿರುವಿರಿ.” (ವಿಮೋ. 19:​5, 6) ಇಸ್ರಾಯೇಲ್ಯರಿಗೆ ದೇವರು ಬಹು ವಿಶೇಷ ಅವಕಾಶ ಕೊಟ್ಟನು. ಅವರು ವಿಧೇಯರಾಗಿದ್ದರೆ ದೇವರು ಅವರನ್ನು ಯಾಜಕರಾಜ್ಯವಾಗಿ ಮಾಡಿ ಅವರ ಮೂಲಕ ಇಡೀ ಮಾನವಕುಲ ಆಶೀರ್ವಾದಗಳನ್ನು ಪಡೆಯುವಂತೆ ಮಾಡಲಿದ್ದನು. ಈ ವಾಗ್ದಾನ ಮಾಡಿದ ಸಂದರ್ಭದ ಕುರಿತು ಯೆಹೋವನು ತದನಂತರ ಹೀಗಂದನು: “ನಾನು . . . ನಿನಗೆ ಮಾತುಕೊಟ್ಟು ಒಡಂಬಡಿಕೆಮಾಡಿಕೊಂಡದರಿಂದ ನೀನು ನನ್ನವಳಾದಿ.”​—⁠ಯೆಹೆ. 16:⁠8.

11. ತನ್ನ ಸ್ವಕೀಯ ಜನರಾಗಿ ಒಡಂಬಡಿಕೆಯ ಸಂಬಂಧದೊಳಗೆ ಬರುವಂತೆ ದೇವರು ಆಮಂತ್ರಿಸಿದಾಗ ಇಸ್ರಾಯೇಲ್ಯರು ಹೇಗೆ ಪ್ರತಿಕ್ರಿಯಿಸಿದರು?

11 ಇಸ್ರಾಯೇಲ್ಯರು ವಿಧೇಯರಾಗಿರುತ್ತೇವೆಂದು ಆ ಸಂದರ್ಭದಲ್ಲಿ ಆಣೆಯಿಟ್ಟು ಹೇಳುವಂತೆ ಯೆಹೋವನು ಅವರನ್ನು ಒತ್ತಾಯಿಸಲಿಲ್ಲ ಇಲ್ಲವೆ ತನ್ನೊಂದಿಗೆ ವಿಶೇಷ ಸಂಬಂಧಕ್ಕೆ ಬರಲೇ ಬೇಕೆಂದು ಬಲವಂತಪಡಿಸಲಿಲ್ಲ. ಇಸ್ರಾಯೇಲ್ಯರೇ ಸ್ವಇಷ್ಟದಿಂದ “ಯೆಹೋವನು ಹೇಳಿದಂತೆಯೇ ಮಾಡುವೆವು” ಎಂದರು. (ವಿಮೋ. 19:⁠8) ಅವರು ತನ್ನ ಸ್ವಕೀಯ ಜನರಾಗಿರಬೇಕಾದರೆ ಏನು ಮಾಡಬೇಕೆಂದು ದೇವರು ಮೂರು ದಿನಗಳ ನಂತರ ತಿಳಿಸಿದನು. ಮೊದಲು ದಶಾಜ್ಞೆಗಳನ್ನು ಕೊಟ್ಟನು. ಬಳಿಕ ವಿಮೋಚನಕಾಂಡ 20:22ರಿಂದ 23:33ರಲ್ಲಿರುವ ಇತರ ಆಜ್ಞೆಗಳನ್ನು ಮೋಶೆಯ ಮೂಲಕ ನೀಡಿದನು. ಆಗ ಇಸ್ರಾಯೇಲ್ಯರು ಹೇಗೆ ಪ್ರತಿಕ್ರಿಯಿಸಿದರು? “ಜನರೆಲ್ಲರು​—⁠ಯೆಹೋವನ ಮಾತುಗಳನ್ನೆಲ್ಲಾ ಅನುಸರಿಸಿ ನಡೆಯುವೆವು ಎಂದು ಒಕ್ಕಟ್ಟಾಗಿ ಉತ್ತರಕೊಟ್ಟರು.” (ವಿಮೋ. 24:⁠3) ಅನಂತರ ಮೋಶೆ ‘ನಿಬಂಧನ ಗ್ರಂಥದಲ್ಲಿ’ ಆ ಎಲ್ಲ ಆಜ್ಞೆಗಳನ್ನು ಬರೆದು ಪುನಃ ಎಲ್ಲರಿಗೆ ಕೇಳಿಸುವಂತೆ ಗಟ್ಟಿಯಾಗಿ ಓದಿ ಹೇಳಿದನು. ಜನರೆಲ್ಲರು ಮೂರನೇ ಬಾರಿ “ಯೆಹೋವನ ಆಜ್ಞೆಗಳನ್ನೆಲ್ಲಾ ನಾವು ಅನುಸರಿಸಿ ವಿಧೇಯರಾಗಿರುವೆವು” ಎಂದು ಪ್ರತಿಜ್ಞೆ ಮಾಡಿದರು.​—⁠ವಿಮೋ. 24:​4, 7, 8.

12. (1) ತನ್ನ ಮತ್ತು ತನ್ನ ಜನರ ನಡುವಿನ ಒಡಂಬಡಿಕೆಗೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? (2) ಆತನ ಸ್ವಕೀಯ ಜನರು ಹೇಗೆ ಪ್ರತಿಕ್ರಿಯಿಸಿದರು?

12 ಇಸ್ರಾಯೇಲ್ಯರೊಂದಿಗೆ ಮಾಡಿಕೊಂಡ ಧರ್ಮಶಾಸ್ತ್ರದ ಒಡಂಬಡಿಕೆಯಲ್ಲಿ ತನ್ನ ಪಾತ್ರವನ್ನು ನಿರ್ವಹಿಸಲು ಯೆಹೋವನು ಕೂಡಲೆ ಹೆಜ್ಜೆ ತಕ್ಕೊಂಡನು. ಆರಾಧನೆಗಾಗಿ ಗುಡಾರವನ್ನು ಏರ್ಪಡಿಸಿ ಅದರಲ್ಲಿ ಸೇವೆ ಮಾಡಲು ಯಾಜಕ ವರ್ಗವನ್ನು ಆರಿಸಿಕೊಂಡನು. ಈ ಏರ್ಪಾಡು ಪಾಪಿಗಳಾದ ಮಾನವರು ದೇವರೊಂದಿಗೆ ಸುಸಂಬಂಧವನ್ನು ಇಟ್ಟುಕೊಳ್ಳುವಂತೆ ಸಾಧ್ಯಮಾಡಿತು. ಆದರೆ ಇಸ್ರಾಯೇಲ್ಯರು ತಾವು ಮಾಡಿದ ಸಮರ್ಪಣೆಯನ್ನು ಬೇಗನೆ ಮರೆತುಬಿಟ್ಟರು. “ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಕರಕರೆಗೊಳಿಸಿದರು.” (ಕೀರ್ತ. 78:41) ಉದಾಹರಣೆಗೆ, ದೇವರಿಂದ ಹೆಚ್ಚು ನಿರ್ದೇಶನಗಳನ್ನು ಪಡೆಯಲು ಮೋಶೆ ಸೀನಾಯಿಬೆಟ್ಟದ ಮೇಲೆ ಹೋಗಿದ್ದಾಗ ಇಸ್ರಾಯೇಲ್ಯರು ಹೇಗೆ ಪ್ರತಿಕ್ರಿಯಿಸಿದರೆಂದು ಗಮನಿಸಿ. ಮೋಶೆ ಏನಾದನೋ ಗೊತ್ತಿಲ್ಲ, ನಡುದಾರಿಯಲ್ಲಿ ಕೈಬಿಟ್ಟಿದ್ದಾನೆ ಎಂದುಕೊಂಡು ತಾಳ್ಮೆಗೆಟ್ಟು ದೇವರಲ್ಲಿ ನಂಬಿಕೆ ಕಳಕೊಂಡರು. ಚಿನ್ನದ ಬಸವನ ವಿಗ್ರಹ ಮಾಡಿ “ಇಸ್ರಾಯೇಲ್ಯರೇ, ನೋಡಿರಿ; ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರಕೊಂಡುಬಂದ ದೇವರು” ಎಂದು ಹೇಳಿದರು. (ವಿಮೋ. 32:​1, 4) “ಯೆಹೋವನಿಗೆ ಉತ್ಸವವಾಗಬೇಕು” ಎಂದು ಹೇಳಿ ಕೈಯಿಂದ ಮಾಡಿದ ಆ ವಿಗ್ರಹದ ಮುಂದೆ ಅಡ್ಡಬಿದ್ದು ಯಜ್ಞಗಳನ್ನು ಅರ್ಪಿಸಿದರು. ಅದನ್ನು ನೋಡಿ ಯೆಹೋವನು ಮೋಶೆಗೆ ‘ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಅವರು ಬೇಗನೆ ಬಿಟ್ಟುಹೋಗಿದ್ದಾರೆ’ ಎಂದು ಹೇಳಿದನು. (ವಿಮೋ. 32:​5, 6, 8) ದೇವರಿಗೆ ಪ್ರತಿಜ್ಞೆಯನ್ನು ಮಾಡುತ್ತಾ ಅದನ್ನು ಮುರಿಯುವುದು ಇಸ್ರಾಯೇಲ್ಯರ ಚಾಳಿಯಾಯಿತು.​—⁠ಅರ. 30:⁠2.

ಮತ್ತೆರಡು ಪ್ರಮಾಣಗಳು

13. (1) ದೇವರು ರಾಜ ದಾವೀದನಿಗೆ ಯಾವ ಪ್ರಮಾಣ ಮಾಡಿದನು? (2) ಅದು ಹೇಗೆ ವಾಗ್ದತ್ತ ಸಂತತಿಗೆ ಸಂಬಂಧಿಸಿದೆ?

13 ರಾಜ ದಾವೀದನ ಆಳ್ವಿಕೆಯ ಸಮಯದಲ್ಲಿ ಯೆಹೋವನು ತನಗೆ ವಿಧೇಯರಾಗುವವರ ಪ್ರಯೋಜನಕ್ಕಾಗಿ ಮತ್ತೆರಡು ಪ್ರಮಾಣಗಳನ್ನು ಮಾಡಿದನು. ಮೊದಲಾಗಿ ದಾವೀದನ ಸಿಂಹಾಸನ ಅಂದರೆ ಆಳ್ವಿಕೆ ಶಾಶ್ವತವಾಗಿ ಇರುವುದೆಂದು ಅವನಿಗೆ ಆಣೆಯಿಟ್ಟು ಹೇಳಿದನು. (ಕೀರ್ತ. 89:​35, 36; 132:​11, 12) ಅದರರ್ಥ ವಾಗ್ದತ್ತ ಸಂತತಿ ಅಂದರೆ ಕ್ರಿಸ್ತನು ದಾವೀದನ ವಂಶದಲ್ಲಿ ಬರಲಿದ್ದನು. ಹಾಗಾಗಿ “ದಾವೀದನ ಕುಮಾರ” ಎಂದು ಕರೆಯಲ್ಪಡಲಿದ್ದನು. (ಮತ್ತಾ. 1:1; 21:⁠9) ಆದರೂ ದಾವೀದನು ದೈನ್ಯದಿಂದ ತನ್ನ ಆ ವಂಶಜನನ್ನು “ನನ್ನ ಕರ್ತ” ಎಂದು ಹೇಳಿದನು. ಏಕೆಂದರೆ ಕ್ರಿಸ್ತನು ಅವನಿಗಿಂತ ಉನ್ನತ ಸ್ಥಾನಕ್ಕೇರಲಿದ್ದನು.​—⁠ಮತ್ತಾ. 22:​42-44.

14. (1) ವಾಗ್ದತ್ತ ಸಂತತಿಯ ಕುರಿತು ಯೆಹೋವನು ಯಾವ ಪ್ರಮಾಣ ಮಾಡಿದನು? (2) ಅದರಿಂದ ನಮಗೆ ಯಾವ ಪ್ರಯೋಜನವಿದೆ?

14 ಎರಡನೇದಾಗಿ, ಈ ವಾಗ್ದತ್ತ ಸಂತತಿ ರಾಜನಾಗಿ ಮಾತ್ರವಲ್ಲ ಮಾನವಕುಲದ ಮಹಾ ಯಾಜಕನಾಗಿಯೂ ಕಾರ್ಯನಿರ್ವಹಿಸುವನು ಎಂದು ಮುನ್ನುಡಿಯುವಂತೆ ಯೆಹೋವನು ದಾವೀದನನ್ನು ಪ್ರೇರಿಸಿದನು. ಇದು ವಿಶೇಷವಾಗಿತ್ತು. ಏಕೆಂದರೆ ಇಸ್ರಾಯೇಲ್‌ನಲ್ಲಿ ಯಾರೂ ಕೂಡ ರಾಜರಾಗಿ ಅದೇ ಸಮಯದಲ್ಲಿ ಯಾಜಕರಾಗಿ ಸೇವೆಸಲ್ಲಿಸಿರಲಿಲ್ಲ. ಯಾಜಕರಾಗಿ ಸೇವೆ ಸಲ್ಲಿಸುತ್ತಿದ್ದವರು ಲೇವಿ ಕುಲದವರು ಮಾತ್ರ. ರಾಜರಾಗಿ ಆಳ್ವಿಕೆ ನಡೆಸುತ್ತಿದ್ದವರು ಯೆಹೂದ ಕುಲದವರು ಮಾತ್ರ. ಆದರೆ ಮುಂಬರಲಿದ್ದ ಅರಸನ ಕುರಿತು ದಾವೀದನು ಹೀಗೆ ಮುಂತಿಳಿಸಿದನು: “ಯೆಹೋವನು ನನ್ನ ಒಡೆಯನಿಗೆ​—⁠ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ನುಡಿದನು. . . . ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಯಾಜಕನು ಎಂದು ಯೆಹೋವನು ಆಣೆಯಿಟ್ಟು ನುಡಿದಿದ್ದಾನೆ; ಪಶ್ಚಾತ್ತಾಪಪಡುವದಿಲ್ಲ.” (ಕೀರ್ತ. 110:​1, 4) ಈ ಪ್ರವಾದನೆಗೆ ಹೊಂದಿಕೆಯಲ್ಲಿ ವಾಗ್ದತ್ತ ಸಂತತಿಯಾದ ಯೇಸು ಕ್ರಿಸ್ತನು ಸ್ವರ್ಗದಲ್ಲಿ ರಾಜನಾಗಿ ಆಳ್ವಿಕೆ ನಡೆಸುತ್ತಿದ್ದಾನೆ. ಮಾತ್ರವಲ್ಲ ಪಶ್ಚಾತ್ತಾಪಪಡುವ ಜನರು ದೇವರೊಂದಿಗೆ ಸುಸಂಬಂಧಕ್ಕೆ ಬರುವಂತೆ ಮಾನವಕುಲದ ಮಹಾ ಯಾಜಕನಾಗಿಯೂ ಸೇವೆಸಲ್ಲಿಸುತ್ತಿದ್ದಾನೆ.​—⁠ಇಬ್ರಿಯ 7:​21, 25, 26 ಓದಿ.

ದೇವರ ಹೊಸ ಇಸ್ರಾಯೇಲ್‌

15, 16. (1) ಯಾವ ಎರಡು ಇಸ್ರಾಯೇಲ್‌ನ ಕುರಿತು ಬೈಬಲ್‌ ತಿಳಿಸುತ್ತದೆ? (2) ದೇವರ ಆಶೀರ್ವಾದ ಇಂದು ಯಾವ ಇಸ್ರಾಯೇಲಿನ ಮೇಲಿದೆ? (3) ಆಣೆಯಿಡುವ ವಿಷಯದಲ್ಲಿ ಯೇಸು ತನ್ನ ಹಿಂಬಾಲಕರಿಗೆ ಏನೆಂದು ಆಜ್ಞಾಪಿಸಿದನು?

15 ಇಸ್ರಾಯೇಲ್‌ ಜನಾಂಗ ಯೇಸು ಕ್ರಿಸ್ತನನ್ನು ತಿರಸ್ಕರಿಸಿದ್ದರಿಂದ ದೇವರು ಆ ಜನಾಂಗವನ್ನು ತ್ಯಜಿಸಿಬಿಟ್ಟನು. ಹೀಗೆ ಅವರು “ಯಾಜಕರಾಜ್ಯ”ವಾಗುವ ಸದವಕಾಶವನ್ನು ಕಳಕೊಂಡರು. ಈ ಬಗ್ಗೆ ಯೇಸು ಯೆಹೂದಿ ಮುಖಂಡರಿಗೆ ಅಂದದ್ದು: “ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲ್ಪಡುವುದು.” (ಮತ್ತಾ. 21:43) ಆ ಹೊಸ ಜನಾಂಗ ಹುಟ್ಟಿದ್ದು ಕ್ರಿ.ಶ. 33ರ ಪಂಚಾಶತ್ತಮದಲ್ಲಿ. ಯೇಸುವಿನ ಸುಮಾರು 120 ಶಿಷ್ಯರು ಯೆರೂಸಲೇಮಿನಲ್ಲಿ ಕೂಡಿಬಂದಿದ್ದಾಗ ಅವರ ಮೇಲೆ ಪವಿತ್ರಾತ್ಮ ಸುರಿಸಲ್ಪಟ್ಟಿತು. ಇವರನ್ನು “ದೇವರ ಇಸ್ರಾಯೇಲ್‌” ಎಂದು ಕರೆಯಲಾಯಿತು. ಸ್ವಲ್ಪದರಲ್ಲೇ ಬೇರೆ ಬೇರೆ ಜನಾಂಗಗಳಿಂದ ಬಂದ ಸಾವಿರಾರು ಜನರು ದೇವರ ಇಸ್ರಾಯೇಲ್‌ನ ಭಾಗವಾದರು.​—⁠ಗಲಾ. 6:⁠16.

16 ದೇವರ ಹೊಸ ಆಧ್ಯಾತ್ಮಿಕ ಇಸ್ರಾಯೇಲ್‌ ಮಾಂಸಿಕ ಇಸ್ರಾಯೇಲಿನಂತಿರದೆ ದೇವರಿಗೆ ವಿಧೇಯತೆ ತೋರಿಸುತ್ತ ಒಳ್ಳೇ ಫಲಗಳನ್ನು ಕೊಟ್ಟಿತು. ದೇವರ ಈ ಇಸ್ರಾಯೇಲ್ಯರು ಪಡೆದುಕೊಂಡ ಆಜ್ಞೆಗಳಲ್ಲಿ ಆಣೆಯಿಡುವುದರ ಕುರಿತ ಆಜ್ಞೆಯೂ ಒಂದಾಗಿತ್ತು. ಯೇಸು ಭೂಮಿಯಲ್ಲಿದ್ದ ಸಮಯದಲ್ಲಿ ಜನರು ಆಣೆಯಿಡುವುದನ್ನು ದುರುಪಯೋಗಿಸುತ್ತಿದ್ದರು. ಸುಳ್ಳಾಣೆಯಿಡುತ್ತಿದ್ದರು ಇಲ್ಲವೆ ಚಿಕ್ಕಪುಟ್ಟ ವಿಷಯಗಳಿಗೆಲ್ಲ ಆಣೆಯಿಡುತ್ತಿದ್ದರು. (ಮತ್ತಾ. 23:​16-22) ಆದರೆ ಯೇಸು ತನ್ನ ಶಿಷ್ಯರಿಗೆ, “ಆಣೆಯಿಡಲೇ ಬೇಡಿ; . . . ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಿರಲಿ; ಏಕೆಂದರೆ ಇವುಗಳಿಗಿಂತ ಹೆಚ್ಚಿನದ್ದು ಕೆಡುಕನಿಂದ ಬಂದದ್ದಾಗಿದೆ” ಎಂದು ಹೇಳಿದನು.​—⁠ಮತ್ತಾ. 5:​34, 37.

17. ಮುಂದಿನ ಅಧ್ಯಯನ ಲೇಖನದಲ್ಲಿ ನಾವು ಯಾವ ವಿಷಯಗಳನ್ನು ಪರಿಗಣಿಸುವೆವು?

17 ಹಾಗಾದರೆ ಆಣೆಯಿಡಲೇಬಾರದಾ? ಅದಕ್ಕಿಂತ ಮುಖ್ಯವಾಗಿ ನಿಮ್ಮ ಮಾತು ಹೌದಾದರೆ ಹೌದು ಆಗಿರುವುದರ ಅರ್ಥವೇನು? ಉತ್ತರವನ್ನು ಮುಂದಿನ ಲೇಖನದಲ್ಲಿ ತಿಳಿಯೋಣ. ದೇವರ ವಾಕ್ಯವನ್ನು ಸದಾ ಧ್ಯಾನಿಸುವುದು ಯೆಹೋವನಿಗೆ ಸದಾ ವಿಧೇಯರಾಗಿರಲು ನಮಗೆ ಸ್ಫೂರ್ತಿ ನೀಡುತ್ತದೆ. ಹೀಗೆ ನಾವು ವಿಧೇಯರಾದರೆ ಆತನು ತಾನಿಟ್ಟ ಆಣೆಗನುಸಾರ ನಮ್ಮ ಮೇಲೆ ನಿತ್ಯನಿರಂತರಕ್ಕೂ ಆಶೀರ್ವಾದದ ಸುರಿಮಳೆಗೈಯುವನು.

[ಅಧ್ಯಯನ ಪ್ರಶ್ನೆಗಳು]

[ಪುಟ 26ರಲ್ಲಿರುವ ಸಕ್ಷಿಪ ವಿವರಣೆ]

ಯೆಹೋವನ ವಾಗ್ದಾನಗಳು ಎಂದಿಗೂ ಸುಳ್ಳಾಗುವುದಿಲ್ಲ

[ಪುಟ 24ರಲ್ಲಿರುವ ಚಿತ್ರ]

ಯೆಹೋವನ ವಾಗ್ದಾನಗಳು ಸತ್ಯವಾಗುವುದನ್ನು ಅಬ್ರಹಾಮ ಬಲು ಬೇಗನೆ ಕಣ್ಣಾರೆ ಕಾಣುವನು