ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿವೇಕಭರಿತ ಆಯ್ಕೆಗಳನ್ನು ಮಾಡಿ ನಿಮ್ಮ ಸ್ವಾಸ್ತ್ಯವನ್ನು ಕಾಪಾಡಿಕೊಳ್ಳಿ

ವಿವೇಕಭರಿತ ಆಯ್ಕೆಗಳನ್ನು ಮಾಡಿ ನಿಮ್ಮ ಸ್ವಾಸ್ತ್ಯವನ್ನು ಕಾಪಾಡಿಕೊಳ್ಳಿ

ವಿವೇಕಭರಿತ ಆಯ್ಕೆಗಳನ್ನು ಮಾಡಿ ನಿಮ್ಮ ಸ್ವಾಸ್ತ್ಯವನ್ನು ಕಾಪಾಡಿಕೊಳ್ಳಿ

“ಕೆಟ್ಟದ್ದನ್ನು ಹೇಸಿರಿ, ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ.”—ರೋಮ. 12:9.

ನಿಮ್ಮ ಪ್ರತಿಕ್ರಿಯೆ. . .

ಆಧ್ಯಾತ್ಮಿಕ ಸ್ವಾಸ್ತ್ಯ ಎಂದರೇನು?

ಏಸಾವನಿಂದ ನಾವು ಯಾವ ಎಚ್ಚರಿಕೆಯ ಪಾಠಗಳನ್ನು ಕಲಿಯಬಹುದು?

ನಮ್ಮ ಸ್ವಾಸ್ತ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?

1, 2. (1) ದೇವರನ್ನು ಆರಾಧಿಸುವ ಆಯ್ಕೆಯನ್ನು ಮಾಡಲು ನಿಮಗೆ ಯಾವುದು ಸಹಾಯ ಮಾಡಿತು? (2) ಆಧ್ಯಾತ್ಮಿಕ ಸ್ವಾಸ್ತ್ಯದ ಬಗ್ಗೆ ನಾವು ಯಾವ ಪ್ರಶ್ನೆಗಳಿಗೆ ಉತ್ತರವನ್ನು ಪರಿಗಣಿಸುತ್ತೇವೆ?

ಯೇಸು ಕ್ರಿಸ್ತನ ಮಾದರಿಯನ್ನು ಅನುಕರಿಸುತ್ತಾ ಲಕ್ಷಾಂತರ ಜನರು ಯೆಹೋವ ದೇವರನ್ನು ಆರಾಧಿಸುವ ಆಯ್ಕೆ ಮಾಡಿದ್ದಾರೆ. ಅವರಲ್ಲಿ ನಾವೂ ಒಬ್ಬರು. (ಮತ್ತಾ. 16:24; 1 ಪೇತ್ರ 2:21) ನಮ್ಮ ಸಮರ್ಪಣೆಯನ್ನು ನಾವು ಎಂದೂ ಹಗುರವಾಗಿ ಎಣಿಸಲ್ಲ. ಏಕೆಂದರೆ ಬೈಬಲ್‌ ಬಗ್ಗೆ ಅಲ್ಪ-ಸ್ವಲ್ಪ ತಿಳಿದುಕೊಂಡು ನಾವು ಈ ನಿರ್ಣಯಕ್ಕೆ ಬರಲಿಲ್ಲ. ದೇವರ ವಾಕ್ಯವನ್ನು ಚೆನ್ನಾಗಿ ಅಧ್ಯಯನ ಮಾಡಿದೆವು. ‘ಯೆಹೋವ ದೇವರ ಬಗ್ಗೆ ಮತ್ತು ಆತನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಬಗ್ಗೆ ಜ್ಞಾನ ಪಡೆದುಕೊಳ್ಳುವವರಿಗೆ’ ಸಿಗುವ ಸ್ವಾಸ್ತ್ಯದ ಮೇಲೆ ನಂಬಿಕೆಯನ್ನು ಕಟ್ಟಿದೆವು.—ಯೋಹಾ. 17:3; ರೋಮ. 12:2.

2 ಕ್ರೈಸ್ತರಾಗಿ ನಮ್ಮ ನಿಲುವನ್ನು ಕಾಪಾಡಿಕೊಳ್ಳಲು ನಾವು ದೇವರನ್ನು ಸಂತೋಷಪಡಿಸುವಂಥ ಆಯ್ಕೆಗಳನ್ನು ಮಾಡಬೇಕು. ಆದ್ದರಿಂದ ಈ ಲೇಖನದಲ್ಲಿ ಈ ಪ್ರಾಮುಖ್ಯ ಪ್ರಶ್ನೆಗಳನ್ನು ಪರಿಗಣಿಸೋಣ: ನಮಗಿರುವ ಸ್ವಾಸ್ತ್ಯ ಯಾವುದು? ನಾವದನ್ನು ಹೇಗೆ ವೀಕ್ಷಿಸಬೇಕು? ಆ ಸ್ವಾಸ್ತ್ಯವನ್ನು ಪಡೆದುಕೊಳ್ಳಬೇಕಾದರೆ ನಾವೇನು ಮಾಡಬೇಕು? ವಿವೇಕಯುತ ಆಯ್ಕೆಗಳನ್ನು ಮಾಡಲು ನಮಗೆ ಯಾವುದು ಸಹಾಯ ಮಾಡುತ್ತೆ?

ನಮಗಿರುವ ಸ್ವಾಸ್ತ್ಯ ಯಾವುದು?

3. ಅಭಿಷಿಕ್ತ ಕ್ರೈಸ್ತರಿಗೆ ಮತ್ತು ‘ಬೇರೆ ಕುರಿಗಳಿಗೆ’ ಯಾವ ಸ್ವಾಸ್ತ್ಯ ಕಾದಿದೆ?

3 ಕೆಲವೇ ಮಂದಿಯಿರುವ ಅಭಿಷಿಕ್ತ ಕ್ರೈಸ್ತರು “ನಿರ್ಲಯವಾದ, ಕಳಂಕರಹಿತವಾದ ಮತ್ತು ಬಾಡಿಹೋಗದ ಬಾಧ್ಯತೆ”ಯನ್ನು ಎದುರು ನೋಡುತ್ತಿದ್ದಾರೆ. ಅವರು ಯೇಸು ಕ್ರಿಸ್ತನ ಜತೆ ಸೇರಿ ಸ್ವರ್ಗದಲ್ಲಿ ಆಳುತ್ತಾರೆ. (1 ಪೇತ್ರ 1:3, 4) ಆ ಸ್ವಾಸ್ತ್ಯವನ್ನು ಪಡೆಯಲು ಅವರು ‘ಪುನಃ ಹುಟ್ಟಬೇಕು.’ (ಯೋಹಾ. 3:1-3) ದೇವರ ರಾಜ್ಯದ ಬಗ್ಗೆ ಸುವಾರ್ತೆ ಸಾರುವುದರಲ್ಲಿ ಅಭಿಷಿಕ್ತ ಕ್ರೈಸ್ತರ ಜತೆ ಕೆಲಸ ಮಾಡುತ್ತಿರುವ ಲಕ್ಷಾಂತರ ‘ಬೇರೆ ಕುರಿಗಳ’ ಬಗ್ಗೆ ಏನು? (ಯೋಹಾ. 10:16) ಅವರು ಆದಾಮ ಹವ್ವ ಕಳೆದುಕೊಂಡ ಸ್ವಾಸ್ತ್ಯವನ್ನು ಅನುಭವಿಸುತ್ತಾರೆ. ಮರಣ ದುಃಖ ಗೋಳಾಟ ಇಲ್ಲದಿರುವ ಅನಂತಜೀವನವನ್ನು ಪಡೆಯುತ್ತಾರೆ. (ಪ್ರಕ. 21:1-4) ಹಾಗಾಗಿ ತನ್ನ ಪಕ್ಕದಲ್ಲಿದ್ದ ದುಷ್ಕರ್ಮಿಗೆ ಯೇಸು ಕ್ರಿಸ್ತನು ಈ ಮಾತನ್ನು ನುಡಿದನು: “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ ಎಂದು ಈಹೊತ್ತೇ ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ.”—ಲೂಕ 23:43.

4. ನಾವು ಈಗಾಗಲೇ ಯಾವ ಆಶೀರ್ವಾದಗಳಲ್ಲಿ ಆನಂದಿಸುತ್ತಿದ್ದೇವೆ?

4 ನಮ್ಮ ಸ್ವಾಸ್ತ್ಯದ ಕೆಲವು ಆಶೀರ್ವಾದಗಳನ್ನು ನಾವು ಈಗಲೂ ಅನುಭವಿಸುತ್ತಿದ್ದೇವೆ. “ಯೇಸು ನೀಡಿದ ವಿಮೋಚನಾ ಮೌಲ್ಯ”ದಲ್ಲಿ ನಂಬಿಕೆ ಇರುವುದರಿಂದ ನಮಗೆ ಮನಶ್ಶಾಂತಿ ಮತ್ತು ದೇವರೊಂದಿಗೆ ಹತ್ತಿರದ ಸಂಬಂಧ ಇದೆ. (ರೋಮ. 3:23-25) ದೇವರ ವಾಕ್ಯದಲ್ಲಿರುವ ಬೆಲೆಬಾಳುವ ವಾಗ್ದಾನಗಳ ಬಗ್ಗೆ ನಮಗೆ ಒಳ್ಳೆ ತಿಳಿವಳಿಕೆ ಇದೆ. ಪ್ರೀತಿಭರಿತ ಅಂತಾರಾಷ್ಟ್ರೀಯ ಸಹೋದರತ್ವದ ಭಾಗವಾಗಿರುವುದು ಸಹ ನಮ್ಮ ಆನಂದವನ್ನು ಇಮ್ಮಡಿಗೊಳಿಸುತ್ತೆ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿರುವುದೇ ಎಂಥ ಸುಯೋಗ ಅಲ್ಲವೇ. ನಮಗಿರುವ ಸ್ವಾಸ್ತ್ಯಕ್ಕಾಗಿ ನಾವು ಚಿರಋಣಿಗಳು!

5. (1) ದೇವಜನರ ವಿರುದ್ಧ ಸೈತಾನ ಯಾವ ತಂತ್ರವನ್ನು ಬಳಸಿದ್ದಾನೆ? (2) ಇಂದು ನಾವು ಅವನ ತಂತ್ರಗಳ ವಿರುದ್ಧ ದೃಢರಾಗಿರಲು ಯಾವುದು ಸಹಾಯ ಮಾಡುತ್ತೆ?

5 ನಮಗಿರುವ ಸ್ವಾಸ್ತ್ಯವನ್ನು ನಾವು ಕಳೆದುಕೊಳ್ಳಬಾರದಾದರೆ ಸೈತಾನನ ತಂತ್ರಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಸೈತಾನನು ಈಗಾಗಲೇ ತನ್ನ ಕೈಚಳಕ ತೋರಿಸಿದ್ದಾನೆ. ದೇವಜನರು ಸ್ವಾಸ್ತ್ಯವನ್ನು ಕಳೆದುಕೊಳ್ಳುವಂಥ ಆಯ್ಕೆಗಳನ್ನು ಮಾಡುವಂತೆ ಪ್ರೇರಿಸಿದ್ದಾನೆ. (ಅರ. 25:1-3, 9) ತನ್ನ ಅಂತ್ಯ ಹತ್ತಿರವಿದೆ ಅಂತ ಗೊತ್ತಿರುವುದರಿಂದ ಅವನು ನಮ್ಮನ್ನು ಸುಮ್ಮನೆ ಬಿಡಲ್ಲ. ಮುಂಚೆಗಿಂತಲೂ ಹೆಚ್ಚು ಕುತಂತ್ರ ನಡೆಸುತ್ತಾನೆ. (ಪ್ರಕಟನೆ 12:12, 17 ಓದಿ.) “ಪಿಶಾಚನ ತಂತ್ರೋಪಾಯಗಳ ವಿರುದ್ಧ ದೃಢ”ರಾಗಿರಬೇಕಾದರೆ ನಮ್ಮ ಸ್ವಾಸ್ತ್ಯವನ್ನು ನಾವೆಂದೂ ಕಡೆಗಣಿಸಬಾರದು. (ಎಫೆ. 6:11) ಈ ವಿಷಯದಲ್ಲಿ ದೇವಭಕ್ತ ಇಸಾಕನ ದೊಡ್ಡ ಮಗನ ಎಚ್ಚರಿಕೆಯ ಪಾಠ ನಮಗಿದೆ.

ಏಸಾವನಂತೆ ಆಗಬೇಡಿ

6, 7. (1) ಏಸಾವ ಯಾರು? (2) ಅವನಿಗೆ ಯಾವ ಆಶೀರ್ವಾದ ಕಾದಿತ್ತು?

6 ಸುಮಾರು 4,000 ವರ್ಷಗಳ ಹಿಂದೆ ಇಸಾಕ ಮತ್ತು ರೆಬೆಕ್ಕರಿಗೆ ಅವಳಿ ಮಕ್ಕಳು ಹುಟ್ಟಿದರು. ಅವರ ಹೆಸರು ಏಸಾವ ಮತ್ತು ಯಾಕೋಬ. ಈ ಅವಳಿಗಳು ಬೆಳೆಯುತ್ತಾ ಹೋದಂತೆ ಅವರ ಅಭಿರುಚಿಗಳು ಭಿನ್ನಭಿನ್ನವಾದವು. “ಏಸಾವನೆಂಬವನು ಬೇಟೆಯಾಡುವದರಲ್ಲಿ ಜಾಣನಾದನು; ಅವನು ಅರಣ್ಯವಾಸಿ. ಯಾಕೋಬನು ಸಾಧುಮನುಷ್ಯನಾಗಿ ಗುಡಾರಗಳಲ್ಲೇ ವಾಸಿಸಿದನು.” (ಆದಿ. 25:27) “ಸಾಧುಮನುಷ್ಯ” ಪದಕ್ಕೆ ಇಬ್ರಿಯ ಭಾಷೆಯಲ್ಲಿ, “ಸಮಗ್ರತಾಪಾಲಕ ಅಥವಾ ಮುಗ್ಧ ವ್ಯಕ್ತಿ” ಎಂಬ ಅರ್ಥ ಇದೆ ಎಂದು ಬೈಬಲ್‌ ಅನುವಾದಕರಾದ ರಾಬರ್ಟ್‌ ಆಲ್ಟರ್‌ ಹೇಳಿದ್ದಾರೆ.

7 ಏಸಾವ ಮತ್ತು ಯಾಕೋಬನಿಗೆ 15 ವರ್ಷವಾದಾಗ ಅವರ ಅಜ್ಜ ಅಬ್ರಹಾಮ ತೀರಿಕೊಂಡನು. ಆದರೆ ಅಬ್ರಹಾಮನೊಂದಿಗೆ ಯೆಹೋವ ದೇವರು ಮಾಡಿದ ಒಡಂಬಡಿಕೆ ಮಾತ್ರ ಹುಸಿಯಾಗಲಿಲ್ಲ. ಕೆಲವು ಸಮಯದ ನಂತರ ಅದೇ ಒಡಂಬಡಿಕೆಯನ್ನು ಯೆಹೋವ ದೇವರು ಇಸಾಕನ ಜತೆ ಮಾಡಿದನು. ಭೂಮಿಯ ಎಲ್ಲಾ ಜನಾಂಗಗಳಿಗೆ ಅಬ್ರಹಾಮನ ಸಂತತಿಯಿಂದ ಆಶೀರ್ವಾದ ಸಿಗುವುದೆಂದು ಹೇಳಿದನು. (ಆದಿಕಾಂಡ 26: 3-5 ಓದಿ.) ಆದಿಕಾಂಡ 3:15ರಲ್ಲಿ ತಿಳಿಸಿರುವ “ಸಂತಾನ” ಅಥವಾ ಮೆಸ್ಸೀಯ ಅಬ್ರಹಾಮನ ವಂಶದಿಂದ ಬರುವನು ಎಂದು ಈ ವಾಗ್ದಾನ ಮುಂತಿಳಿಸಿತು. ಏಸಾವನು ಇಸಾಕನ ದೊಡ್ಡ ಮಗನಾಗಿದ್ದರಿಂದ ಆ ಸಂತತಿ ಅವನ ವಂಶದಿಂದ ಬರುವ ಸುಯೋಗ ಇತ್ತು. ಅವನಿಗಾಗಿ ಎಂಥ ಸ್ವಾಸ್ತ್ಯ ಕಾದಿತ್ತಲ್ಲವೇ! ಏಸಾವನು ಇದನ್ನು ಹೇಗೆ ವೀಕ್ಷಿಸಿದನು?

8, 9. (1) ಏಸಾವ ತನ್ನ ಸ್ವಾಸ್ತ್ಯದ ಬಗ್ಗೆ ಯಾವ ಆಯ್ಕೆ ಮಾಡಿದನು? (2) ವರ್ಷಗಳು ಉರುಳಿದ ನಂತರ ಏಸಾವನಿಗೆ ತನ್ನ ಆಯ್ಕೆಯ ಬಗ್ಗೆ ಏನನಿಸಿತು? (3) ಅವನು ಹೇಗೆ ಪ್ರತಿಕ್ರಿಯಿಸಿದನು?

8 ಒಂದು ದಿನ ಏಸಾವ ಹೊಲದಿಂದ ಸುಸ್ತಾಗಿ ಬಂದ. ಆಗ ಅವನು, ಯಾಕೋಬ ‘ಅಡಿಗೆ ಮಾಡುತ್ತಿರುವದನ್ನು’ ನೋಡಿ, “ನಾನು ಬಹು ದಣಿದು ಬಂದಿದ್ದೇನೆ; ಆ ಕೆಂಪಾದ ರುಚಿ ಪದಾರ್ಥವನ್ನು ಈಗಲೇ ತಿನ್ನುವದಕ್ಕೆ” ಕೊಡು ಎಂದು ಕೇಳಿದ. ಯಾಕೋಬನು ಅವನಿಗೆ “ನೀನು ಮೊದಲು ನಿನ್ನ ಚೊಚ್ಚಲತನದ ಹಕ್ಕನ್ನು ನನಗೆ ಮಾರಿಬಿಡು” ಅಂದ. ಆಗ ಏಸಾವನು ‘ಆಗಲಿ, ಚೊಚ್ಚಲತನದಿಂದ ಪ್ರಯೋಜನವೇನು’ ಎಂದು ಹೇಳಿ ತನ್ನ ಚೊಚ್ಚಲತನದ ಹಕ್ಕಿಗಿಂತ ಒಂದು ಹೊತ್ತಿನ ಊಟಕ್ಕೆ ಪ್ರಾಮುಖ್ಯತೆ ಕೊಟ್ಟ. ನಂತರ ಯಾಕೋಬನು ಅದನ್ನು ದೃಢೀಕರಿಸಲು “ಮೊದಲು ಪ್ರಮಾಣಮಾಡು” ಅಂದಾಗ ಏಸಾವನು ಏನನ್ನೂ ಲೆಕ್ಕಿಸದೆ ಪ್ರಮಾಣಮಾಡಿ ಅವನಿಗೆ ತನ್ನ ಚೊಚ್ಚಲತನದ ಹಕ್ಕನ್ನು ಮಾರಿಬಿಟ್ಟ. “ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿಗುಗ್ಗರಿಯನ್ನೂ ಕೊಟ್ಟನು. ಏಸಾವನು ತಿಂದು ಕುಡಿದು ಎದ್ದುಹೋದನು. ಹೀಗೆ ಅವನು ತನ್ನ ಚೊಚ್ಚಲತನದ ಹಕ್ಕನ್ನು ತಾತ್ಸಾರ ಮಾಡಿದನು.”—ಆದಿ. 25:29-34.

9 ಕೆಲವು ವರ್ಷಗಳಾದ ನಂತರ ಇಸಾಕ ವಯಸ್ಸಾಗಿ ಸಾಯುವ ಹಂತಕ್ಕೆ ತಲುಪಿದನು. ಆಗ ರೆಬೆಕ್ಕ, ಏಸಾವನು ಬಿಟ್ಟುಕೊಟ್ಟ ಚೊಚ್ಚಲತನದ ಹಕ್ಕಿನಿಂದ ಸಿಗಬೇಕಾದ ಆಶೀರ್ವಾದ ಯಾಕೋಬನಿಗೆ ಸಿಗುವಂತೆ ಏರ್ಪಾಡು ಮಾಡಿದನು. ತನ್ನ ಮೂರ್ಖ ಕೆಲಸದ ಬಗ್ಗೆ ಕಾಲಾನಂತರ ಯೋಚಿಸಿ ಪರಿತಪಿಸುತ್ತಾ ಏಸಾವನು ತನ್ನ ತಂದೆಗೆ: “ಅಪ್ಪಾ, ತಂದೆಯೇ, ನಿನ್ನಲ್ಲಿ ಆ ಒಂದೇ ಆಶೀರ್ವಾದವಿತ್ತೋ? ಅಪ್ಪಾ, ನನ್ನನ್ನು, ನನ್ನನ್ನೂ ಆಶೀರ್ವದಿಸಬೇಕು” ಎಂದು ಅಂಗಲಾಚಿದನು. ಆಗ ಇಸಾಕ, ಈಗಾಗಲೇ ಆಶೀರ್ವಾದ ನುಡಿದಿರುವುದರಿಂದ ಅದನ್ನು ಹಿಂಪಡೆಯಲಾಗದು ಎಂದು ಹೇಳಿದಾಗ ಏಸಾವ ‘ಗೋಳಾಡುತ್ತಾ ಅತ್ತನು.’—ಆದಿ. 27:30-38.

10. (1) ಯೆಹೋವ ದೇವರು ಏಸಾವ ಮತ್ತು ಯಾಕೋಬನನ್ನು ಹೇಗೆ ವೀಕ್ಷಿಸಿದನು? (2) ಏಕೆ?

10 ಏಸಾವನ ಯಾವ ನಿಲುವನ್ನು ಬೈಬಲ್‌ ತಿಳಿಸಿದೆ? ಭವಿಷ್ಯದಲ್ಲಿ ತನಗಾಗಿ ಕಾದಿದ್ದ ಸ್ವಾಸ್ತ್ಯಕ್ಕಿಂತ ಶಾರೀರಿಕ ಬಯಕೆಗಳನ್ನು ತೃಪ್ತಿಗೊಳಿಸುವದೇ ಅವನಿಗೆ ಮುಖ್ಯವಾಗಿತ್ತು. ತನ್ನ ಚೊಚ್ಚಲುತನದ ಹಕ್ಕನ್ನು ಅವನು ಕಡೆಗಣಿಸಿದನು ಮತ್ತು ಅವನಿಗೆ ದೇವರ ಮೇಲೆ ಕಿಂಚಿತ್ತೂ ಪ್ರೀತಿಯಿರಲಿಲ್ಲ. ತನ್ನ ವಂಶದವರಿಗೂ ತಾನು ಮಾಡಿದ ಮೂರ್ಖ ನಿರ್ಣಯ ಬಾಧಿಸುತ್ತೆ ಎಂದು ಅವನು ಯೋಚಿಸಲಿಲ್ಲ. ಇವನಿಗೆ ವಿರುದ್ಧವಾಗಿ ಯಾಕೋಬನು ತನ್ನ ಸ್ವಾಸ್ತ್ಯವನ್ನು ತುಂಬ ಗಣ್ಯಮಾಡಿದನು. ಉದಾಹರಣೆಗೆ, ತನ್ನ ಜೀವನ ಸಂಗಾತಿಯ ಆಯ್ಕೆಯ ವಿಷಯದಲ್ಲಿ ಅವನ ಹೆತ್ತವರು ಹೇಳಿದಂತೆಯೇ ಮಾಡಿದನು. (ಆದಿ. 27:46–28:3) ತಾಳ್ಮೆ ಮತ್ತು ತ್ಯಾಗ ಕೂಡಿದ್ದ ಈ ಆಯ್ಕೆಯನ್ನು ಮಾಡಿದ್ದರ ಫಲವಾಗಿ ಅವನು ಮೆಸ್ಸೀಯನ ಪೂರ್ವಜನಾದನು. ದೇವರು ಏಸಾವನನ್ನು ಮತ್ತು ಯಾಕೋಬನನ್ನು ಹೇಗೆ ವೀಕ್ಷಿಸಿದನು? ಪ್ರವಾದಿ ಮಲಾಕಿಯನ ಮುಖಾಂತರ ಯೆಹೋವ ದೇವರು ಹೇಳಿದ ಮಾತಿದು: ‘ನಾನು ಯಾಕೋಬನನ್ನು ಪ್ರೀತಿಸಿ ಏಸಾವನನ್ನು ದ್ವೇಷಿಸಿದ್ದೇನೆ.’—ಮಲಾ. 1:2, 3.

11. (1) ಏಸಾವನ ಉದಾಹರಣೆಯಿಂದ ಇಂದು ನಮಗೆ ಯಾವ ಪಾಠ ಇದೆ? (2) ಏಸಾವನ ಬಗ್ಗೆ ಹೇಳುವಾಗ ಪೌಲ ಜಾರತ್ವದ ಬಗ್ಗೆ ಹೇಳಿದ್ದು ಏಕೆ?

11 ಏಸಾವನಿಂದ ಇಂದು ನಮಗೆ ಯಾವುದಾದರೂ ಪಾಠ ಇದೆಯಾ? ಖಂಡಿತ ಇದೆ. ಅಪೊಸ್ತಲ ಪೌಲ ತನ್ನ ಜತೆ ಕ್ರೈಸ್ತರಿಗೆ ಎಚ್ಚರಿಸಿದ್ದು: “ಯಾವ ಜಾರನಾಗಲಿ, ಒಂದು ಊಟಕ್ಕೋಸ್ಕರ ತನ್ನ ಚೊಚ್ಚಲತನದ ಹಕ್ಕನ್ನೇ ಕೊಟ್ಟುಬಿಟ್ಟ ಏಸಾವನಂತೆ ಪವಿತ್ರ ವಿಷಯಗಳನ್ನು ಗಣ್ಯಮಾಡದವನಾಗಲಿ ನಿಮ್ಮಲ್ಲಿ ಇರದಂತೆ ಜಾಗ್ರತೆಯಿಂದ ನೋಡಿಕೊಳ್ಳಿರಿ.” (ಇಬ್ರಿ. 12:16) ಇದು ನಮಗೂ ಅನ್ವಯಿಸುತ್ತೆ. ಶಾರೀರಿಕ ಬಯಕೆಗಳು ನಮ್ಮ ಆಧ್ಯಾತ್ಮಿಕ ಸ್ವಾಸ್ತ್ಯವನ್ನು ನುಂಗಿಹಾಕದಂತೆ ನಾವು ಎಚ್ಚರವಹಿಸಬೇಕು. ಆದರೆ ಏಸಾವನ ಬಗ್ಗೆ ಹೇಳುವಾಗ ಪೌಲ ಜಾರತ್ವದ ಬಗ್ಗೆ ಹೇಳಿದ್ದು ಏಕೆ? ಏಕೆಂದರೆ ನಾವು ಏಸಾವನಂತೆ ವರ್ತಿಸಿ ಶಾರೀರಿಕ ಬಯಕೆಗಳು ನಮ್ಮನ್ನು ನಿಯಂತ್ರಿಸುವಂತೆ ಬಿಟ್ಟುಕೊಡುವಲ್ಲಿ, ಪವಿತ್ರ ವಿಷಯಗಳನ್ನು ಕಡೆಗಣಿಸಿ ಜಾರತ್ವದಂಥ ನೀಚ ಬಯಕೆಗಳ ಹಿಂದೆ ಹೋಗುತ್ತೇವೆ.

ನಿಮ್ಮ ಹೃದಯವನ್ನು ಈಗಲೇ ಸಿದ್ಧಪಡಿಸಿ

12. (1) ಸೈತಾನನು ಹೇಗೆ ನಮಗೆ ಪ್ರಲೋಭನೆಯನ್ನು ಒಡ್ಡುತ್ತಾನೆ? (2) ಕಷ್ಟಕರ ಆಯ್ಕೆಮಾಡುವ ಪರಿಸ್ಥಿತಿಯಲ್ಲಿದ್ದಾಗ ನಮಗೆ ಸಹಾಯ ಮಾಡುವ ಬೈಬಲ್‌ ಉದಾಹರಣೆಗಳನ್ನು ಕೊಡಿ.

12 ಯೆಹೋವ ದೇವರ ಆರಾಧಕರಾಗಿರುವ ನಾವು ಲೈಂಗಿಕ ಅನೈತಿಕತೆಗೆ ನಡೆಸುವಂಥ ಸನ್ನಿವೇಶವನ್ನು ಹುಡುಕಿಕೊಂಡು ಹೋಗಬಾರದು. ಅಂಥ ಪ್ರಲೋಭನೆ ಎದುರಾದಾಗ ಅದನ್ನು ನಿಗ್ರಹಿಸಲು ಸಹಾಯಕ್ಕಾಗಿ ಯೆಹೋವ ದೇವರಲ್ಲಿ ಬೇಡಬೇಕು. (ಮತ್ತಾ. 6:13) ಈ ದುಷ್ಟ ಲೋಕದಲ್ಲಿ ನಾವು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನ ಮಾಡುತ್ತಿರುವಾಗ ಅದನ್ನು ಮುರಿಯಲು ಸೈತಾನ ನಿರಂತರವಾಗಿ ಪ್ರಯತ್ನಿಸುತ್ತಿದ್ದಾನೆ. (ಎಫೆ. 6:12) ಈ ಲೋಕದ ದೇವರಾಗಿರುವ ಅವನಿಗೆ ಪ್ರಲೋಭನೆಯನ್ನು ಹೇಗೆ ಒಡ್ಡಬೇಕೆಂದು ಗೊತ್ತಿದೆ. ನಮ್ಮ ಅಪರಿಪೂರ್ಣ ಬಯಕೆಯನ್ನು ಅವನು ಚೆನ್ನಾಗಿ ಬಲ್ಲ. ಮತ್ತು ಅದಕ್ಕೆ ತಕ್ಕ ಪ್ರಲೋಭನೆಯನ್ನೇ ಅವನು ಒಡ್ಡುತ್ತಾನೆ. (1 ಕೊರಿಂ. 10:8, 13) ಕೆಟ್ಟ ರೀತಿಯಲ್ಲಿ ನಮ್ಮ ಆಶೆಯನ್ನು ತಣಿಸುವಂಥ ಸಂದರ್ಭ ನಮಗೆ ಎದುರಾದಲ್ಲಿ ಏನು ಮಾಡಬೇಕು? ನೀವು ಯಾವ ಆಯ್ಕೆ ಮಾಡ್ತೀರಾ? ಏಸಾವನಂತೆ ಪ್ರಲೋಭನೆ ನಿಮ್ಮನ್ನು ಜಯಿಸುವಂತೆ ಬಿಟ್ಟುಕೊಡುತ್ತೀರಾ? ಅಥವಾ ಪೋಟೀಫರನ ಹೆಂಡತಿಯಿಂದ ಬಂದ ಪ್ರಲೋಭನೆಯನ್ನು ತಡೆದು ಅಲ್ಲಿಂದ ಓಡಿ ಹೋದ ಯೋಸೇಫನಂತಿರುತ್ತೀರಾ?ಆದಿಕಾಂಡ 39:10-12 ಓದಿ.

13. (1) ಇಂದು ಅನೇಕರು ಹೇಗೆ ಯೋಸೇಫನಂತೆ ಮತ್ತು ಕೆಲವರು ಹೇಗೆ ಏಸಾವನಂತೆ ವರ್ತಿಸಿದ್ದಾರೆ? (2) ಏಸಾವನಂತೆ ಆಗಬಾರದಾದರೆ ನಾವು ಏನು ಮಾಡಬೇಕು?

13 ಏಸಾವನಂತೆ ಅಥವಾ ಯೋಸೇಫನಂತೆ ವರ್ತಿಸುವ ಆಯ್ಕೆಯನ್ನು ಮಾಡುವಂಥ ಸನ್ನಿವೇಶ ನಮ್ಮ ಅನೇಕ ಸಹೋದರ ಸಹೋದರಿಯರಿಗೆ ಎದುರಾಗಿದೆ. ಅವರಲ್ಲಿ ಹೆಚ್ಚಿನವರು ಸರಿಯಾದ ಆಯ್ಕೆಯನ್ನು ಮಾಡಿ ಯೆಹೋವ ದೇವರ ಹೃದಯವನ್ನು ಹರ್ಷಗೊಳಿಸಿದ್ದಾರೆ. (ಜ್ಞಾನೋ. 27:11) ಆದರೆ ಕೆಲವು ಜೊತೆವಿಶ್ವಾಸಿಗಳು ಏಸಾವನ ದಾರಿಹಿಡಿದು ತಮ್ಮ ಆಧ್ಯಾತ್ಮಿಕ ಸ್ವಾಸ್ತ್ಯವನ್ನು ಅಪಾಯಕ್ಕೆ ಒಡ್ಡಿದ್ದಾರೆ. ಪ್ರತಿ ವರ್ಷ ಅನೇಕ ವಿಶ್ವಾಸಿಗಳು ಬಹಿಷ್ಕೃತರಾಗಿರೋದು ಮತ್ತು ಶಿಸ್ತಿಗೊಳಗಾಗಿರೋದು ಲೈಂಗಿಕ ಅನೈತಿಕತೆಯಿಂದಾಗಿಯೇ. ಹಾಗಾಗಿ ನಮ್ಮ ಸಮಗ್ರತೆಗೆ ಸವಾಲೊಡ್ಡುವ ಸನ್ನಿವೇಶಗಳಿಗಾಗಿ ಹೃದಯವನ್ನು ಈಗಲೇ ಸಿದ್ಧಪಡಿಸುವುದು ಎಷ್ಟು ಸೂಕ್ತವಲ್ಲವೇ! (ಕೀರ್ತ. 78:7) ವಿವೇಕಭರಿತ ನಿರ್ಣಯಗಳನ್ನು ಮಾಡಲು ನೆರವಾಗುವ ಮತ್ತು ತಡೆಗೋಡೆಯಂತಿದ್ದು ಪ್ರಲೋಭನೆಗಳನ್ನು ನಿಗ್ರಹಿಸಲು ನೆರವಾಗುವ ಎರಡು ವಿಷಯಗಳನ್ನು ನಾವೀಗ ನೋಡೋಣ.

ಯೋಚಿಸಿ ಕ್ರಿಯೆಗೈಯಿರಿ

14. ಯಾವ ಪ್ರಶ್ನೆಗಳನ್ನು ಪರಿಗಣಿಸುವುದು ‘ಕೆಟ್ಟತನವನ್ನು ಹೇಸಿ ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಲು’ ಸಹಾಯ ಮಾಡುತ್ತೆ?

14 ಮೊದಲ ಹೆಜ್ಜೆ ಯಾವುದೆಂದರೆ ಕ್ರಿಯೆಯ ಫಲಿತಾಂಶದ ಬಗ್ಗೆ ಯೋಚಿಸಿ. ಯೆಹೋವ ದೇವರ ಮೇಲೆ ನಮಗೆ ಗಾಢ ಪ್ರೀತಿ ಇದ್ದರೆ ಅವರು ಕೊಟ್ಟಿರುವ ಸ್ವಾಸ್ತ್ಯಕ್ಕಾಗಿ ಗಣ್ಯತೆ ತೋರಿಸುತ್ತೇವೆ. ನಾವು ಯಾರನ್ನು ಪ್ರೀತಿಸುತ್ತೇವೋ ಅವರಿಗೆ ನೋವು ಮಾಡಲು ಬಯಸುವುದಿಲ್ಲ ಅಲ್ವ. ನಾವು ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತೇವೆ. ಆದ್ದರಿಂದ ಪ್ರಲೋಭನೆ ಎದುರಾದಾಗ ನಾವದಕ್ಕೆ ಮಣಿಯುವುದಾದರೆ ಅದರಿಂದ ನಮಗೆಷ್ಟು ನಷ್ಟ ಮತ್ತು ಇತರರನ್ನು ನಾವೆಷ್ಟು ನೋಯಿಸುತ್ತೇವೆ ಎಂದು ಮುಂಚೆಯೇ ಯೋಚಿಸಬೇಕು. ನಮ್ಮನ್ನೇ ಹೀಗೆ ಕೇಳಿಕೊಳ್ಳೋಣ: ‘ನನ್ನ ಸ್ವಾರ್ಥ ಕ್ರಿಯೆಗಳು ಯೆಹೋವ ದೇವರೊಟ್ಟಿಗಿನ ನನ್ನ ಸಂಬಂಧವನ್ನು ಹೇಗೆ ಹಾನಿಗೊಳಿಸಬಹುದು? ನಾನು ಮಾಡುವ ತಪ್ಪು ಕೆಲಸ ನನ್ನ ಕುಟುಂಬದ ಮೇಲೆ ಯಾವ ಪರಿಣಾಮ ಬೀರಬಲ್ಲದು? ಸಭೆಯಲ್ಲಿನ ಸಹೋದರ ಸಹೋದರಿಯರ ಬಗ್ಗೆ ಏನು? ನಾನು ಇತರರನ್ನು ಎಡವಿಸುತ್ತೇನಾ?’ (ಫಿಲಿ. 1:10) ‘ತಪ್ಪು ಆಶೆಗಳನ್ನು ತಣಿಸಿ ಅದರಿಂದ ಸಿಗುವ ಕ್ಷಣಿಕ ಸಂತೋಷಕ್ಕಾಗಿ, ಅನಂತರದ ನೋವನ್ನು ನಾವಾಗಿಯೇ ಆಮಂತ್ರಿಸುವುದು ಸರಿನಾ? ಏಸಾವನಂತೆ ವಿಷಯ ಕೈ ಮೀರಿಹೋದ ನಂತರ ಅದಕ್ಕಾಗಿ ಪರಿತಪಿಸಿ ಕಣ್ಣೀರು ಸುರಿಸುವುದು ನನಗೆ ಬೇಕಾ?’ (ಇಬ್ರಿ. 12:17) ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳುವುದು, ‘ಕೆಟ್ಟತನವನ್ನು ಹೇಸಿ ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಲು’ ಸಹಾಯ ಮಾಡುತ್ತೆ. (ರೋಮ. 12:9) ನಮ್ಮ ಸ್ವಾಸ್ತ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳಲು ಮುಖ್ಯವಾಗಿ ಯೆಹೋವ ದೇವರ ಮೇಲಿನ ಪ್ರೀತಿ ನಮ್ಮನ್ನು ಪ್ರೋತ್ಸಾಹಿಸುತ್ತೆ.—ಕೀರ್ತ. 73:28.

15. ಪ್ರಲೋಭನೆಯನ್ನು ಎದುರಿಸಲು ನಮ್ಮನ್ನು ಸಿದ್ಧಗೊಳಿಸುವುದು ಹೇಗೆ?

15 ಎರಡನೇ ಹೆಜ್ಜೆ ಪ್ರಲೋಭನೆಯನ್ನು ನಿಗ್ರಹಿಸಲು ಮುನ್‌ತಯಾರಿ. ನಮ್ಮ ಆಧ್ಯಾತ್ಮಿಕತೆಗೆ ಅಪಾಯ ತರುವ ವಿಷಯಗಳ ವಿರುದ್ಧ ಹೋರಾಡಲು ಯೆಹೋವ ದೇವರು ಅನೇಕ ಸಹಾಯಕಗಳನ್ನು ಕೊಟ್ಟಿದ್ದಾನೆ. ಅವುಗಳಲ್ಲಿ ಬೈಬಲ್‌ ಅಧ್ಯಯನ, ಕ್ರೈಸ್ತ ಕೂಟಗಳು, ಕ್ಷೇತ್ರ ಸೇವೆ ಮತ್ತು ಪ್ರಾರ್ಥನೆ ಕೂಡ ಸೇರಿವೆ. (1 ಕೊರಿಂ. 15:58) ಯೆಹೋವ ದೇವರೊಂದಿಗೆ ಪ್ರಾರ್ಥನೆಯಲ್ಲಿ ಹೃದಯ ಬಿಚ್ಚಿ ಮಾತಾಡಿದಾಗೆಲ್ಲ, ಕ್ಷೇತ್ರ ಸೇವೆಯಲ್ಲಿ ಮನಃಪೂರ್ವಕವಾಗಿ ಭಾಗವಹಿಸಿದಾಗೆಲ್ಲ ಪ್ರಲೋಭನೆಯನ್ನು ಎದುರಿಸಲು ನಾವು ಹೆಚ್ಚೆಚ್ಚು ಸಿದ್ಧರಾಗುತ್ತೇವೆ. (1 ತಿಮೊಥೆಯ 6:12, 19 ಓದಿ.) ಒಂದು ಮಟ್ಟಿಗೆ ಪ್ರಲೋಭನೆಯಿಂದ ರಕ್ಷಣೆ ಪಡೆಯುವುದು ನಮ್ಮ ಸ್ವಂತ ಪ್ರಯತ್ನದ ಮೇಲೆ ಹೊಂದಿಕೊಂಡಿದೆ. (ಗಲಾ. 6:7) ಇದನ್ನು ಜ್ಞಾನೋಕ್ತಿ ಪುಸ್ತಕದ 2ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ.

‘ಅದನ್ನು ಹುಡುಕುತ್ತಿರು’

16, 17. ವಿವೇಕಭರಿತ ಆಯ್ಕೆಗಳನ್ನು ಮಾಡುವ ಸಾಮರ್ಥ್ಯ ಗಳಿಸುವುದು ಹೇಗೆ?

16 ಜ್ಞಾನೋಕ್ತಿ 2ನೇ ಅಧ್ಯಾಯ ನಮಗೆ ವಿವೇಕವನ್ನು ಪಡೆಯುವಂತೆ ಮತ್ತು ಆಲೋಚನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತೆ. ಈ ಸಾಮರ್ಥ್ಯವು ಸರಿ ಯಾವುದು ತಪ್ಪು ಯಾವುದು ಎಂದು ತಿಳಿಯಲು, ನಮ್ಮ ಬಯಕೆಗಳನ್ನು ನಿಯಂತ್ರಿಸಲು ಮತ್ತು ಅವನ್ನು ತಪ್ಪಾದ ರೀತಿಯಲ್ಲಿ ತೃಪ್ತಿಪಡಿಸದಿರಲು ಸಹಾಯ ಮಾಡುತ್ತೆ. ಇದರಲ್ಲಿ ನಾವು ಎಷ್ಟರ ಮಟ್ಟಿಗೆ ಸಫಲರಾಗುತ್ತೇವೆ ಎನ್ನುವುದು ನಮ್ಮ ಪರಿಶ್ರಮದ ಮೇಲೆ ಹೊಂದಿಕೊಂಡಿದೆ. ಇದನ್ನು ಪುಷ್ಟೀಕರಿಸುತ್ತಾ ಬೈಬಲ್‌ ವಿವರಿಸುವುದು: “ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ, ನಿನ್ನ ಕಿವಿಯನ್ನು ಜ್ಞಾನದ ಕಡೆಗೂ ಹೃದಯವನ್ನು ವಿವೇಕದ ಕಡೆಗೂ ತಿರುಗಿಸು; ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ. ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.”—ಜ್ಞಾನೋ. 2:1-6.

17 ಈ ವಚನಗಳಲ್ಲಿ ತಿಳಿಸಿರುವಂತೆ ಮಾಡಿದರೆ ನಾವು ವಿವೇಕಭರಿತ ಆಯ್ಕೆಗಳನ್ನು ಮಾಡಲು ಸಾಧ್ಯವಾಗುತ್ತೆ. ನಮ್ಮ ಆಂತರಿಕ ವ್ಯಕ್ತಿಯನ್ನು ಯೆಹೋವ ದೇವರ ಮಾತುಗಳು ರೂಪಿಸುವಂತೆ ಬಿಟ್ಟುಕೊಡುವುದಾದರೆ, ದೇವರ ಮಾರ್ಗದರ್ಶನೆಗಾಗಿ ಪಟ್ಟುಹಿಡಿದು ಯಾಚಿಸುವುದಾದರೆ, ಅಮೂಲ್ಯ ರತ್ನಗಳನ್ನು ಹುಡುಕುವಂತೆ ದೇವರ ಜ್ಞಾನಕ್ಕಾಗಿ ಹುಡುಕುತ್ತಿರುವುದಾದರೆ ಪ್ರಲೋಭನೆಗಳ ವಿರುದ್ಧ ಜಯ ಸಾಧಿಸಲಾಗುತ್ತೆ.

18. (1) ಯಾವುದನ್ನು ಮಾಡುತ್ತಿರಲು ನೀವು ದೃಢ ನಿರ್ಧಾರ ಮಾಡಿದ್ದೀರಿ? (2) ಏಕೆ?

18 ಯಾರು ಜ್ಞಾನ, ತಿಳಿವಳಿಕೆ, ವಿವೇಚನೆ ಮತ್ತು ವಿವೇಕವನ್ನು ಪಡೆಯಲು ಶ್ರಮ ಹಾಕುತ್ತಾರೋ ಅವರಿಗೆ ಯೆಹೋವ ದೇವರು ಅವುಗಳನ್ನು ದಯಪಾಲಿಸುತ್ತಾನೆ. ಏಕೆಂದರೆ ಅವುಗಳ ಮೂಲ ಆತನೇ. ಎಷ್ಟು ಹೆಚ್ಚು ನಾವದನ್ನು ಹುಡುಕಿ ನಮ್ಮ ಜೀವನದಲ್ಲಿ ಅಳವಡಿಸುತ್ತೇವೊ ಅಷ್ಟೇ ಹೆಚ್ಚು ಯೆಹೋವ ದೇವರಿಗೆ ಹತ್ತಿರವಾಗುತ್ತೇವೆ. ಇದರ ಪರಿಣಾಮವಾಗಿ ನಮಗೆ ಪ್ರಲೋಭನೆ ಎದುರಾದಾಗ ನಮ್ಮ ಮತ್ತು ಯೆಹೋವ ದೇವರ ಗಾಢ ಸಂಬಂಧ ಆ ಪ್ರಲೋಭನೆಯನ್ನು ನಿಗ್ರಹಿಸಲು ಸಹಾಯ ಮಾಡುತ್ತೆ. ದೇವರ ಸಮೀಪಕ್ಕೆ ಬರುವುದು ಮತ್ತು ದೇವಭಯ ನಮ್ಮನ್ನು ತಪ್ಪು ಮಾಡದಂತೆ ತಡೆಯುತ್ತೆ. (ಕೀರ್ತ. 25:14; ಯಾಕೋ. 4:8) ಯೆಹೋವ ದೇವರನ್ನು ಸಂತೋಷಪಡಿಸುವ ಆಯ್ಕೆಗಳನ್ನು ಮಾಡುತ್ತಿರಲು ಮತ್ತು ನಮ್ಮ ಸ್ವಾಸ್ತ್ಯವನ್ನು ಕಾಪಾಡಿಕೊಳ್ಳಲು ಯೆಹೋವ ದೇವರೊಂದಿಗಿನ ನಮ್ಮ ಸ್ನೇಹ ಸಂಬಂಧ ಮತ್ತು ಅವರು ದಯಪಾಲಿಸುವ ವಿವೇಕ ನಿಮಗೆ ನೆರವಾಗಲಿ.

[ಅಧ್ಯಯನ ಪ್ರಶ್ನೆಗಳು]

[ಪುಟ 26ರಲ್ಲಿರುವ ಚಿತ್ರ]

[ಪುಟ 28ರಲ್ಲಿರುವ ಚಿತ್ರ]

ನಿಮ್ಮ ಆಧ್ಯಾತ್ಮಿಕ ಸ್ವಾಸ್ತ್ಯವನ್ನು ಅಪಾಯಕ್ಕೆ ತಳ್ಳಬೇಡಿ

[ಪುಟ 30ರಲ್ಲಿರುವ ಚಿತ್ರ]

ಯೆಹೋವ ದೇವರು ಕೊಡುವ ವಿವೇಕಕ್ಕಾಗಿ ಹುಡುಕುವಾಗ ಪ್ರಲೋಭನೆಯನ್ನು ನಿಗ್ರಹಿಸಲು ಸಾಧ್ಯ