ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಈ ಸಂಗತಿಗಳು ಯಾವಾಗ ಸಂಭವಿಸುವವು?”

“ಈ ಸಂಗತಿಗಳು ಯಾವಾಗ ಸಂಭವಿಸುವವು?”

“ಈ ಸಂಗತಿಗಳು ಯಾವಾಗ ಸಂಭವಿಸುವವು?”

“ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನು?”​—ಮತ್ತಾ. 24:3.

ಉತ್ತರ ಕೊಡುವಿರಾ?

ಮಹಾ ಸಂಕಟದ ಕುರಿತು ಯೇಸು ಹೇಳಿದ ಪ್ರವಾದನೆಯ ಎರಡು ನೆರವೇರಿಕೆಗಳ ನಡುವೆ ಯಾವ ಹೋಲಿಕೆಗಳಿವೆ?

ಕುರಿಗಳು ಹಾಗೂ ಆಡುಗಳ ಕುರಿತಾದ ಸಾಮ್ಯದ ಕುರಿತು ಕಲಿತ ಮೇಲೆ ಸುವಾರ್ತೆ ಸಾರುವುದರ ಬಗ್ಗೆ ನಮಗೆ ಹೇಗನಿಸಬೇಕು?

ಯೇಸು ತಾನು ಬರುವುದರ ಕುರಿತು ಮತ್ತಾಯ 24 ಮತ್ತು 25ನೇ ಅಧ್ಯಾಯದಲ್ಲಿ ಹೇಳಿರುವುದು ಯಾವ ಸಮಯಾವಧಿಗೆ ಸೂಚಿಸುತ್ತದೆ?

1. ಅಪೊಸ್ತಲರಂತೆ ನಾವು ಸಹ ಏನನ್ನು ತಿಳಿದುಕೊಳ್ಳಲು ಆಸಕ್ತರಾಗಿದ್ದೇವೆ?

ಯೇಸುವಿನ ಭೂಜೀವಿತದ ಕೊನೆಯ ಹಂತ. ಶಿಷ್ಯರಿಗೆ ಭವಿಷ್ಯತ್ತಿನಲ್ಲಿ ನಡೆಯಲಿರುವ ಸಂಗತಿಗಳನ್ನು ತಿಳಿದುಕೊಳ್ಳುವ ಕಾತರ. ಹಾಗಾಗಿ ಯೇಸು ಸಾಯುವುದಕ್ಕೆ ಇನ್ನೇನು ಕೆಲವೇ ದಿನಗಳಿರುವಾಗ ನಾಲ್ವರು ಅಪೊಸ್ತಲರು ಆತನ ಬಳಿಬಂದು ಹೀಗೆ ಕೇಳಿದರು: “ಈ ಸಂಗತಿಗಳು ಯಾವಾಗ ಸಂಭವಿಸುವವು ಮತ್ತು ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನು?” (ಮತ್ತಾ. 24:3; ಮಾರ್ಕ 13:3) ಇದಕ್ಕೆ ಉತ್ತರವಾಗಿ ಯೇಸು ಅನೇಕ ಪ್ರಮುಖ ಘಟನೆಗಳಿದ್ದ ಒಂದು ವಿಸ್ತಾರವಾದ ಪ್ರವಾದನೆಯನ್ನು ಹೇಳಿದನು. ಇದು ಮತ್ತಾಯ 24 ಮತ್ತು 25ನೇ ಅಧ್ಯಾಯಗಳಲ್ಲಿ ದಾಖಲಾಗಿದೆ. ನಾವು ಸಹ ಭವಿಷ್ಯತ್ತಿನ ಕುರಿತು ಆಸಕ್ತರಾಗಿರುವುದರಿಂದ ಯೇಸುವಿನ ಆ ಮಾತುಗಳು ನಮಗೂ ಪ್ರಾಮುಖ್ಯ.

2. (1) ನಾವು ಯಾವ ವಿಷಯದ ಕುರಿತು ಸ್ಪಷ್ಟ ತಿಳಿವಳಿಕೆ ಪಡೆಯಲು ಪ್ರಯತ್ನಿಸಿದ್ದೇವೆ? (2) ಯಾವ ಮೂರು ಪ್ರಶ್ನೆಗಳನ್ನು ನಾವು ಪರಿಗಣಿಸಲಿದ್ದೇವೆ?

2 ಯೇಸು ಕಡೇ ದಿವಸಗಳ ಕುರಿತು ಹೇಳಿದ ಪ್ರವಾದನೆಯನ್ನು ಯೆಹೋವನ ಸೇವಕರು ವರ್ಷಗಳಿಂದ ಪ್ರಾರ್ಥನಾಪೂರ್ವಕವಾಗಿ ಅಧ್ಯಯನ ಮಾಡಿದ್ದಾರೆ. ಆ ವಿಷಯಗಳು ನೆರವೇರುವ ಸಮಯದ ಕುರಿತು ಸ್ಪಷ್ಟ ತಿಳಿವಳಿಕೆ ಪಡೆಯಲು ಪ್ರಯತ್ನಿಸಿದ್ದಾರೆ. ಈ ಕುರಿತ ತಿಳಿವಳಿಕೆ ಹೇಗೆ ಕ್ರಮೇಣ ಸ್ಪಷ್ಟವಾಗಿದೆ ಎಂದು ಅರ್ಥಮಾಡಿಕೊಳ್ಳಲು ಮೂರು ಪ್ರಶ್ನೆಗಳನ್ನು ಪರಿಗಣಿಸೋಣ: “ಮಹಾ ಸಂಕಟ” ಯಾವಾಗ ಆರಂಭವಾಗುತ್ತದೆ? ‘ಕುರಿಗಳು,’ ‘ಆಡುಗಳು’ ಯಾರೆಂದು ಯೇಸು ಯಾವಾಗ ನಿರ್ಧರಿಸುತ್ತಾನೆ? ಯೇಸು ‘ಬರುವುದು’ ಯಾವಾಗ?ಮತ್ತಾ. 24:21; 25:31-33.

ಮಹಾ ಸಂಕಟದ ಆರಂಭ ಯಾವಾಗ?

3. ಈ ಹಿಂದೆ ಮಹಾ ಸಂಕಟದ ಕುರಿತು ಯಾವ ತಿಳಿವಳಿಕೆಯಿತ್ತು?

3 ಅನೇಕ ವರ್ಷಗಳ ವರೆಗೆ ಹೀಗೆ ತಿಳಿದುಕೊಳ್ಳಲಾಗಿತ್ತು: 1914ರಲ್ಲಿ ಒಂದನೇ ಲೋಕ ಯುದ್ಧ ಶುರುವಾದಾಗ ಮಹಾ ಸಂಕಟ ಆರಂಭವಾಯಿತು. ನಂತರ ಅಭಿಷಿಕ್ತರಲ್ಲಿ ಉಳಿದವರು ಎಲ್ಲಾ ಜನಾಂಗಗಳವರಿಗೆ ಸುವಾರ್ತೆ ಸಾರಲು ಸಾಧ್ಯವಾಗುವಂತೆ ಯೆಹೋವನು 1918ರಲ್ಲಿ ‘ಆ ದಿನಗಳನ್ನು ಕಡಿಮೆ ಮಾಡಿದನು.’ ಆ ವರ್ಷದಲ್ಲಿ ಯುದ್ಧವು ನಿಂತುಹೋಯಿತು. (ಮತ್ತಾ. 24:21, 22) ಸುವಾರ್ತೆ ಸಾರುವ ಕೆಲಸ ಪೂರ್ಣಗೊಂಡ ನಂತರ ಸೈತಾನನ ಸಾಮ್ರಾಜ್ಯವನ್ನು ನಾಶಮಾಡಲಾಗುವುದು. ಹೀಗೆ ಮಹಾ ಸಂಕಟದಲ್ಲಿ ಮೂರು ಘಟ್ಟಗಳಿರುವವು ಎಂದು ಎಣಿಸಲಾಗಿತ್ತು. ಯಾವುವೆಂದರೆ, ಆರಂಭ (1914-1918), ಸ್ವಲ್ಪ ಸಮಯದ ತಡೆ (1918ರಿಂದ ಮುಂದಕ್ಕೆ), ಅರ್ಮಗೆದೋನ್‌ನಲ್ಲಿ ಮುಕ್ತಾಯ.

4. ಯಾವ ಒಳನೋಟ ಕಡೇ ದಿವಸಗಳ ಕುರಿತು ಯೇಸು ಹೇಳಿದ ಪ್ರವಾದನೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡಿತು?

4 ಆದರೆ ಆ ಪ್ರವಾದನೆಯ ಹೆಚ್ಚಿನ ಅಧ್ಯಯನದಿಂದ ಒಂದು ಹೊಸ ವಿಷಯ ತಿಳಿಯಿತು. ಯೇಸು ಕಡೇ ದಿವಸಗಳ ಕುರಿತು ಹೇಳಿದ ಪ್ರವಾದನೆಯ ಒಂದು ಭಾಗಕ್ಕೆ ಎರಡು ನೆರವೇರಿಕೆಗಳಿವೆ ಎಂದು ಮನದಟ್ಟಾಯಿತು. (ಮತ್ತಾ. 24:4-22) ಮೊದಲ ನೆರವೇರಿಕೆ ಕ್ರಿ.ಶ. ಒಂದನೇ ಶತಮಾನದಲ್ಲಾದರೆ, ಇನ್ನೊಂದು ನಮ್ಮ ಸಮಯದಲ್ಲಿ ಭೂವ್ಯಾಪಕವಾಗಿ ಆಗಲಿದೆ. ಈ ಒಳನೋಟವು ಪ್ರವಾದನೆಯಲ್ಲಿನ ಅನೇಕ ವಿಷಯಗಳನ್ನು ಸ್ಪಷ್ಟಪಡಿಸಿತು. *

5. (1) ಯಾವ ಕಷ್ಟಕರ ಕಾಲ 1914ರಲ್ಲಿ ಆರಂಭವಾಯಿತು? (2) ಇದು ಕ್ರಿ.ಶ. ಒಂದನೇ ಶತಮಾನದ ಯಾವ ಸಮಯಾವಧಿಯನ್ನು ಹೋಲುತ್ತದೆ?

5 ಇನ್ನೊಂದು ವಿಷಯವೂ ತಿಳಿದುಬಂತು. ಅದು 1914ರಲ್ಲಿ ಮಹಾ ಸಂಕಟ ಆರಂಭವಾಗಲಿಲ್ಲ ಎಂದು. ಏಕೆಂದರೆ ಬೈಬಲ್‌ ಪ್ರವಾದನೆ ತೋರಿಸುವ ಪ್ರಕಾರ, ಮಹಾ ಸಂಕಟವು ರಾಷ್ಟ್ರಗಳ ನಡುವಣ ಯುದ್ಧಗಳಾದಾಗ ಆರಂಭವಾಗುವುದಿಲ್ಲ, ಸುಳ್ಳುಧರ್ಮದ ಮೇಲೆ ಆಕ್ರಮಣವಾದಾಗ ಆರಂಭಗೊಳ್ಳುತ್ತದೆ. ಹೀಗಾಗಿ 1914ರಲ್ಲಿ ಆರಂಭವಾದದ್ದು ಮಹಾ ಸಂಕಟವಲ್ಲ, ಅದು “ಸಂಕಟದ ಶೂಲೆಯ ಪ್ರಾರಂಭ.” (ಮತ್ತಾ. 24:8) ಈ “ಸಂಕಟದ ಶೂಲೆ” ಯೂದಾಯದಲ್ಲಿ ಕ್ರಿ.ಶ. 33ರಿಂದ ಕ್ರಿ.ಶ. 66ರಲ್ಲಾದ ಘಟನೆಗಳನ್ನು ಹೋಲುತ್ತದೆ.

6. ಯಾವ ಘಟನೆಯೊಂದಿಗೆ ಮಹಾ ಸಂಕಟ ಆರಂಭವಾಗುವುದು?

 6 ಯಾವ ಘಟನೆಯೊಂದಿಗೆ ಮಹಾ ಸಂಕಟ ಆರಂಭವಾಗುವುದು? ಯೇಸು ಹೀಗೆ ಮುಂತಿಳಿಸಿದನು: “ಪ್ರವಾದಿಯಾದ ದಾನಿಯೇಲನ ಮೂಲಕ ತಿಳಿಸಲ್ಪಟ್ಟಿರುವ ಹಾಳುಮಾಡುವ ಅಸಹ್ಯ ವಸ್ತುವು ಪವಿತ್ರ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಾಗ (ಇದನ್ನು ಓದುವವನು ವಿವೇಚನೆಯನ್ನು ಉಪಯೋಗಿಸಲಿ) ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗತೊಡಗಲಿ.” (ಮತ್ತಾ. 24:15, 16) ಮೊದಲನೇ ನೆರವೇರಿಕೆಯಲ್ಲಿ ‘ಪವಿತ್ರ ಸ್ಥಳದಲ್ಲಿ ನಿಲ್ಲುವ’ ವಿಷಯ ನಡೆದದ್ದು ಕ್ರಿ.ಶ. 66ರಲ್ಲಿ ರೋಮನ್‌ ಸೈನ್ಯ (“ಅಸಹ್ಯ ವಸ್ತು”) ಯೆರೂಸಲೇಮನ್ನೂ ಅಲ್ಲಿನ ದೇವಾಲಯವನ್ನೂ (ಯೆಹೂದ್ಯರ ದೃಷ್ಟಿಯಲ್ಲಿ ಪವಿತ್ರ ಸ್ಥಳ) ಆಕ್ರಮಣ ಮಾಡಿದಾಗ. ಇದರ ದೊಡ್ಡ ನೆರವೇರಿಕೆ, ವಿಶ್ವ ಸಂಸ್ಥೆ (ಆಧುನಿಕ ಕಾಲದ “ಅಸಹ್ಯ ವಸ್ತು”) ಕ್ರೈಸ್ತಪ್ರಪಂಚವನ್ನು (ನಾಮಮಾತ್ರದ ಕ್ರೈಸ್ತರ ದೃಷ್ಟಿಯಲ್ಲಿ ಪವಿತ್ರ) ಹಾಗೂ ಮಹಾ ಬಾಬೆಲಿನ ಉಳಿದ ಭಾಗಗಳನ್ನು ಆಕ್ರಮಣ ಮಾಡಿದಾಗ ಆಗಲಿದೆ. ಇದೇ ಘಟನೆಯನ್ನು ಪ್ರಕಟಣೆ 17:16-18ರಲ್ಲಿ ವರ್ಣಿಸಲಾಗಿದೆ. ಈ ಘಟನೆಯೇ ಮಹಾ ಸಂಕಟದ ಆರಂಭ.

7. (1) ಒಂದನೇ ಶತಮಾನದಲ್ಲಿ ದೇವಜನರು ಹೇಗೆ ಬದುಕಿ ‘ಉಳಿದರು’? (2) ಭವಿಷ್ಯತ್ತಿನಲ್ಲಿ ಏನಾಗಲಿದೆ?

 7 “ಆ ದಿನಗಳು ಕಡಮೆಮಾಡಲ್ಪಡುವವು” ಎಂದು ಸಹ ಯೇಸು ಮುಂತಿಳಿಸಿದನು. ಇದರ ಮೊದಲ ನೆರವೇರಿಕೆ ಕ್ರಿ.ಶ. 66ರಲ್ಲಿ ರೋಮನ್‌ ಸೈನ್ಯ ತನ್ನ ಆಕ್ರಮಣವನ್ನು ಹಿಂದೆಗೆದಾಗ ನೆರವೇರಿತು. ಆಗ ಯೆರೂಸಲೇಮ್‌ ಹಾಗೂ ಯೂದಾಯದಲ್ಲಿದ್ದ ಅಭಿಷಿಕ್ತ ಕ್ರೈಸ್ತರು ಓಡಿಹೋಗಿ ಜೀವ ‘ಉಳಿಸಿಕೊಂಡರು.’ (ಮತ್ತಾಯ 24:22 ಓದಿ; ಮಲಾ. 3:17) ಮುಂದೆ ಬರಲಿರುವ ಮಹಾ ಸಂಕಟದಲ್ಲಿ ಇದು ಹೇಗೆ ನೆರವೇರಲಿದೆ? ದೇವರು ‘ಆ ದಿನಗಳನ್ನು ಕಡಮೆಮಾಡುವನು’ ಅಂದರೆ ಸುಳ್ಳು ಧರ್ಮಗಳ ಮೇಲಿನ ಆಕ್ರಮಣವನ್ನು ವಿಶ್ವಸಂಸ್ಥೆ ಮುಂದುವರಿಸಿ ಸತ್ಯಧರ್ಮವನ್ನು ಸಹ ನಾಶಮಾಡದಂತೆ ತಡೆಯುವನು. ಇದು, ದೇವರು ತನ್ನ ಜನರನ್ನು ರಕ್ಷಿಸುವನು ಎಂಬ ಖಾತ್ರಿ ಕೊಡುತ್ತದೆ.

8. (1) ಮಹಾ ಸಂಕಟದ ಆರಂಭದ ಘಟನೆ ನಡೆದ ನಂತರ ಏನೆಲ್ಲ ಸಂಭವಿಸುವುದು? (2) ಅಭಿಷಿಕ್ತರಲ್ಲಿ ಕೊನೆಯವರು ಸ್ವರ್ಗೀಯ ಬಹುಮಾನವನ್ನು ಯಾವ ಸಮಯದಲ್ಲಿ ಪಡೆಯಬಹುದು? (ಟಿಪ್ಪಣಿ ನೋಡಿ.)

  8 ಮಹಾ ಸಂಕಟದ ಆರಂಭದ ಘಟನೆಯ ನಂತರ ಏನಾಗುವುದು? ಅಲ್ಲಿಂದ ಅರ್ಮಗೆದೋನ್‌ ವರೆಗೆ ಒಂದು ಅಂತರವಿರುವುದು. ಆ ಅವಧಿಯಲ್ಲಿ ಏನೆಲ್ಲ ನಡೆಯಲಿದೆ? ಅದನ್ನು ಯೆಹೆಜ್ಕೇಲ 38:14-16 ಮತ್ತು ಮತ್ತಾಯ 24:29-31ರಲ್ಲಿ (ಓದಿ) ಹೇಳಲಾಗಿದೆ. * ಅದರ ನಂತರ ಮಹಾ ಸಂಕಟದ ಪರಾಕಾಷ್ಠೆಯಾದ ಅರ್ಮಗೆದೋನ್‌ ಯುದ್ಧವನ್ನು ನಾವು ನೋಡುವೆವು. ಇದು ಕ್ರಿ.ಶ. 70ರಲ್ಲಾದ ಯೆರೂಸಲೇಮಿನ ನಾಶನಕ್ಕೆ ಸದೃಶವಾಗಿರುವುದು. (ಮಲಾ. 4:1) ಆದರೆ ಅರ್ಮಗೆದೋನ್‌ ಯುದ್ಧವು ಮಹಾಸಂಕಟಕ್ಕೆ ಅಸಾಮಾನ್ಯ ರೂಪ ಕೊಡುವುದು. ಹಾಗಾಗಿ ಮಹಾಸಂಕಟ ‘ಲೋಕದ ಆರಂಭದಿಂದ ಇಂದಿನ ವರೆಗೆ ಸಂಭವಿಸಿರದ’ ಘಟನೆ ಆಗಿರುವುದು. (ಮತ್ತಾ. 24:21) ಇದಾದ ನಂತರ ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆಯ ಆರಂಭ.

9. ಮಹಾ ಸಂಕಟದ ಕುರಿತಾದ ಬೈಬಲ್‌ ಪ್ರವಾದನೆ ದೇವಜನರ ಮೇಲೆ ಯಾವ ಪ್ರಭಾವ ಬೀರುವುದು?

9 ಮಹಾ ಸಂಕಟದ ಕುರಿತಾದ ಪ್ರವಾದನೆ ನಮ್ಮ ನಂಬಿಕೆಯನ್ನು ಬಲಗೊಳಿಸುತ್ತದೆ. ಹೇಗೆ? ಮಹಾ ಸಂಕಟದಲ್ಲಿ ಯಾವುದೇ ಸಂಕಷ್ಟವನ್ನು ಎದುರಿಸಿದರೂ ಯೆಹೋವನ ಜನರು ಒಂದು ಗುಂಪಾಗಿ ಪಾರಾಗುವರು ಎಂಬ ಆಶ್ವಾಸನೆಯನ್ನು ಇದು ಕೊಡುತ್ತದೆ. (ಪ್ರಕ. 7:9, 14) ಇದಕ್ಕಿಂತ ಹೆಚ್ಚು ಸಂತೋಷತರುವ ಇನ್ನೊಂದು ವಿಷಯವಿದೆ. ಅರ್ಮಗೆದೋನ್‌ನಲ್ಲಿ ಯೆಹೋವನು ತನ್ನ ಪರಮಾಧಿಕಾರವನ್ನು ನಿರ್ದೋಷೀಕರಿಸಿ, ತನ್ನ ಪರಿಶುದ್ಧ ನಾಮವನ್ನು ಪವಿತ್ರೀಕರಿಸುವನು!—ಕೀರ್ತ. 83:18; ಯೆಹೆ. 38:23.

‘ಕುರಿಗಳು’ ‘ಆಡುಗಳು’ ಯಾರೆಂದು ಯೇಸು ನಿರ್ಧರಿಸುವುದು ಯಾವಾಗ?

10. ಕುರಿ ಹಾಗೂ ಆಡುಗಳಾಗಿ ತೀರ್ಪುಮಾಡುವ ಸಮಯದ ಕುರಿತು ಮೊದಲು ನಮಗೆ ಯಾವ ತಿಳಿವಳಿಕೆಯಿತ್ತು?

10 ಯೇಸುವಿನ ಪ್ರವಾದನೆಯ ಇನ್ನೊಂದು ಭಾಗ ನೆರವೇರುವ ಸಮಯದ ಕುರಿತು ನಾವೀಗ ನೋಡೋಣ. ಅದು ಕುರಿ ಹಾಗೂ ಆಡುಗಳಾಗಿ ತೀರ್ಪುಮಾಡುವುದರ ಕುರಿತಾಗಿ ಹೇಳಿದ ದೃಷ್ಟಾಂತ. (ಮತ್ತಾ. 25:31-46) ನಾವು ಮೊದಲು ನೆನಸಿದ್ದೇನೆಂದರೆ, ಕಡೇ ದಿವಸಗಳ ಸಮಯಾವಧಿಯಾದ್ಯಂತ ಅಂದರೆ 1914ರಿಂದಲೂ ಹಿಡಿದು ಜನರನ್ನು ಕುರಿ ಹಾಗೂ ಆಡುಗಳಾಗಿ ತೀರ್ಪುಮಾಡುವ ಕೆಲಸ ನಡೆಯುತ್ತದೆ ಎಂದು. ಯಾರು ರಾಜ್ಯದ ಸಂದೇಶವನ್ನು ಕೇಳದೆ ಮಹಾ ಸಂಕಟದ ಮುಂಚೆ ಸಾಯುತ್ತಾರೋ ಅವರನ್ನು ಆಡುಗಳಾಗಿ ತೀರ್ಪುಮಾಡಲಾಗುತ್ತದೆ. ಅವರಿಗೆ ಪುನರುತ್ಥಾನವಿಲ್ಲ ಎಂಬ ಸಮಾಪ್ತಿಗೆ ಬಂದಿದ್ದೆವು.

11. ಜನರನ್ನು ಕುರಿ ಅಥವಾ ಆಡುಗಳಾಗಿ ನಿರ್ಧರಿಸುವ ಕೆಲಸವನ್ನು ಯೇಸು 1914ರಲ್ಲಿ ಆರಂಭಿಸಿಲ್ಲ ಎಂದು ಹೇಗೆ ಹೇಳಬಹುದು?

11 ಮತ್ತಾಯ 25:31ನ್ನು 1990ರ ದಶಕದ ಮಧ್ಯಭಾಗದಲ್ಲಿ ಮರುಪರಿಶೀಲಿಸಲಾಯಿತು. ಅಲ್ಲಿ “ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲ ದೂತರೊಡನೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವನು” ಎಂದು ಹೇಳಲಾಗಿದೆ. 1914ರಲ್ಲಿ ಯೇಸು ದೇವರ ರಾಜ್ಯದ ರಾಜನಾದನು. ಆದರೂ ಅವನು ಆಗ “ಎಲ್ಲ ಜನಾಂಗಗಳ” ನ್ಯಾಯಾಧಿಪತಿಯಾಗಿ ‘ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳಲಿಲ್ಲ.’ (ಮತ್ತಾ. 25:32; ದಾನಿಯೇಲ 7:13 ಹೋಲಿಸಿ.) ಆದರೆ ಕುರಿಗಳ ಹಾಗೂ ಆಡುಗಳ ದೃಷ್ಟಾಂತದಲ್ಲಿ ಯೇಸುವನ್ನು ಮುಖ್ಯವಾಗಿ ನ್ಯಾಯಾಧಿಪತಿಯಾಗಿ ಚಿತ್ರಿಸಲಾಗಿದೆ. (ಮತ್ತಾಯ 25:31-34, 41, 46 ಓದಿ.) 1914ರಲ್ಲಿ ಯೇಸು ಎಲ್ಲ ಜನಾಂಗಗಳ ನ್ಯಾಯಾಧಿಪತಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲವಾದ್ದರಿಂದ ಕುರಿಗಳು ಅಥವಾ ಆಡುಗಳು ಯಾರೆಂದು ನಿರ್ಧರಿಸುವ ಕೆಲಸವನ್ನು ಅವನು 1914ರಲ್ಲಿ ಆರಂಭಿಸಿರಲು ಸಾಧ್ಯವಿಲ್ಲ. * ಹಾಗಾದರೆ ಇನ್ಯಾವಾಗ?

12. (1) ಯೇಸು ಎಲ್ಲ ಜನಾಂಗಗಳ ನ್ಯಾಯಾಧಿಪತಿಯಾಗಿ ಮೊಟ್ಟಮೊದಲ ಬಾರಿ ಯಾವಾಗ ಕ್ರಿಯೆಗೈಯುವನು? (2) ಮತ್ತಾಯ 24:30, 31 ಮತ್ತು ಮತ್ತಾಯ 25:31-33, 46ರಲ್ಲಿ ಯಾವ ಘಟನೆಗಳು ಸಂಭವಿಸುವವೆಂದು ಹೇಳಲಾಗಿದೆ?

  12 ಕಡೇ ದಿವಸಗಳ ಕುರಿತು ಯೇಸು ಹೇಳಿದ ಪ್ರವಾದನೆ ತೋರಿಸುವ ಪ್ರಕಾರ, ಸುಳ್ಳುಧರ್ಮಗಳ ನಾಶನದ ನಂತರ ಯೇಸು ಮೊಟ್ಟಮೊದಲ ಬಾರಿ ಎಲ್ಲ ಜನಾಂಗಗಳ ನ್ಯಾಯಾಧಿಪತಿಯಾಗಿ ಕೆಲಸ ಮಾಡುವನು.  ಎಂಟನೇ ಪ್ಯಾರದಲ್ಲಿ ಹೇಳಿರುವಂತೆ, ಆ ಸಮಯದಲ್ಲಿ ಸಂಭವಿಸಲಿರುವ ಕೆಲವು ಘಟನೆಗಳನ್ನು ಮತ್ತಾಯ 24:30, 31ರಲ್ಲಿ ಹೇಳಲಾಗಿದೆ. ಈ ವಚನಗಳನ್ನು ಗಮನಿಸಿದರೆ, ಅಲ್ಲಿ ಯೇಸು ಮುಂತಿಳಿಸಿದ ಘಟನೆಗಳು ಕುರಿ ಮತ್ತು ಆಡುಗಳ ಸಾಮ್ಯದಲ್ಲಿ ಹೇಳಲಾದ ಘಟನೆಗಳಿಗೆ ಹೋಲುತ್ತವೆ. ಉದಾಹರಣೆಗೆ: ಮನುಷ್ಯಕುಮಾರನು ಮಹಿಮೆಯಲ್ಲಿ ದೂತರೊಡನೆ ಬರುತ್ತಾನೆ. ಎಲ್ಲ ಕುಲ, ಜನಾಂಗಗಳವರು ಒಟ್ಟುಗೂಡಿಸಲ್ಪಡುವರು. ಕುರಿಗಳೆಂದು ತೀರ್ಪಾದವರು ‘ತಮ್ಮ ತಲೆಯನ್ನು ಮೇಲಕ್ಕೆತ್ತುವರು’ ಏಕೆಂದರೆ ಅವರು “ನಿತ್ಯಜೀವ” ಪಡೆಯುವರು. * ಆಡುಗಳಾಗಿ ತೀರ್ಪುಹೊಂದಿದವರು “ಗೋಳಾಡುತ್ತಾ ಎದೆಬಡಿದುಕೊಳ್ಳುವರು” ಏಕೆಂದರೆ ಅವರು “ನಿತ್ಯಛೇದನಕ್ಕೆ” ಹೋಗುವರು.—ಮತ್ತಾ. 25:31-33, 46.

13. (1) ಜನರು ಕುರಿಗಳೋ ಆಡುಗಳೋ ಎಂದು ಯೇಸು ಯಾವಾಗ ತೀರ್ಪುಮಾಡುವನು? (2) ಈ ವಿಷಯವನ್ನು ತಿಳಿದಿರುವುದರಿಂದ ಸುವಾರ್ತೆ ಸಾರುವುದರ ಕುರಿತು ನಮಗೆ ಹೇಗನಿಸಬೇಕು?

 13 ನಮಗೆ ಇದರಿಂದ ಏನು ತಿಳಿಯುತ್ತದೆ? ಯೇಸು ಮಹಾ ಸಂಕಟದ ಸಮಯದಲ್ಲಿ ಎಲ್ಲ ಜನಾಂಗಗಳ ನ್ಯಾಯಾಧಿಪತಿಯಾಗಿ ಅವರನ್ನು ಕುರಿಗಳು ಅಥವಾ ಆಡುಗಳೆಂದು ತೀರ್ಪುಮಾಡುತ್ತಾನೆ. ಮತ್ತು ಮಹಾ ಸಂಕಟದ ಪರಾಕಾಷ್ಠೆಯಾದ ಅರ್ಮಗೆದೋನಿನಲ್ಲಿ ಆಡುಗಳಂತಿರುವವರು ನಾಶವಾಗುತ್ತಾರೆ. ಮುಂದೆಂದೂ ಅವರು ಇರಲ್ಲ. ಇದನ್ನು ತಿಳಿದ ಮೇಲೆ ಸುವಾರ್ತೆ ಸಾರುವುದರ ಕುರಿತು ನಮಗೆ ಹೇಗನಿಸಬೇಕು? ಸುವಾರ್ತೆ ಸಾರುವ ಕೆಲಸ ಎಷ್ಟು ಪ್ರಾಮುಖ್ಯ ಎನ್ನುವುದನ್ನು ಇದು ನಮಗೆ ಮನಗಾಣಿಸಬೇಕು. ಮಹಾ ಸಂಕಟ ಆರಂಭವಾಗುವ ವರೆಗೂ ಜನರಿಗೆ ತಮ್ಮ ಮನಸ್ಸು ಬದಲಾಯಿಸಿ “ಜೀವಕ್ಕೆ ನಡಿಸುವ” ಇಕ್ಕಟ್ಟಾದ ದಾರಿಯಲ್ಲಿ ನಡೆಯುವ ಅವಕಾಶವಿದೆ. (ಮತ್ತಾ. 7:13, 14) ಜನರು ಈಗ ಕುರಿಗಳಂಥ ಅಥವಾ ಆಡುಗಳಂಥ ಮನೋಭಾವ ತೋರಿಸಬಹುದು. ಆದರೆ ಅವರು ಯಾವ ಗುಂಪಿಗೆ ಸೇರಿದವರು ಎಂಬ ಅಂತಿಮ ನಿರ್ಧಾರ ಆಗುವುದು ಮಹಾ ಸಂಕಟದ ಸಮಯದಲ್ಲಿ. ಹಾಗಾಗಿ ನಾವು ನಮ್ಮಿಂದಾದಷ್ಟು ಹೆಚ್ಚು ಜನರಿಗೆ ರಾಜ್ಯ ಸಂದೇಶವನ್ನು ಮುಟ್ಟಿಸಬೇಕು. ಹೀಗೆ ಸುವಾರ್ತೆಗೆ ಕಿವಿಗೊಟ್ಟು ಅದರಂತೆ ನಡೆಯುವ ಅವಕಾಶವನ್ನು ಕೊಡುತ್ತಲೇ ಇರಬೇಕು.

ಯೇಸು ‘ಬರುವುದು’ ಯಾವಾಗ?

14, 15. ಯಾವ ನಾಲ್ಕು ವಚನಗಳು ಕ್ರಿಸ್ತನು ಭವಿಷ್ಯತ್ತಿನಲ್ಲಿ ನ್ಯಾಯಾಧಿಪತಿಯಾಗಿ ಬರುವುದಕ್ಕೆ ಸೂಚಿಸುತ್ತವೆ?

14 ಯೇಸು ಹೇಳಿದ ಪ್ರವಾದನೆಯನ್ನು ಇನ್ನೂ ಪರಿಶೀಲಿಸುವುದಾದರೆ, ಅಲ್ಲಿ ಹೇಳಲಾದ ಇತರ ಪ್ರಮುಖ ಘಟನೆಗಳು ನೆರವೇರುವ ಸಮಯದ ಕುರಿತು ನಮಗಿರುವ ತಿಳಿವಳಿಕೆಯಲ್ಲಿ ಏನಾದರೂ ಹೊಂದಾಣಿಕೆ ಮಾಡಿಕೊಳ್ಳಬೇಕಾಗಬಹುದೇ? ಆ ಪ್ರವಾದನೆಯೇ ಇದಕ್ಕೆ ಉತ್ತರ ಕೊಡುತ್ತೆ. ಹೇಗೆಂದು ನೋಡೋಣ.

15 ಮತ್ತಾಯ 24:29–25:46ರಲ್ಲಿ ದಾಖಲಾಗಿರುವ ಯೇಸು ಹೇಳಿದ ಪ್ರವಾದನೆಯ ಒಂದು ಭಾಗ, ಕಡೇ ದಿವಸಗಳಲ್ಲಿ ಹಾಗೂ ಮಹಾ ಸಂಕಟದ ಸಮಯದಲ್ಲಿ ಏನಾಗಲಿದೆ ಎನ್ನುವುದನ್ನು ತಿಳಿಸುತ್ತದೆ. ಅದರಲ್ಲಿ ಯೇಸು ತಾನು ‘ಬರುವುದರ’ ಕುರಿತು ಎಂಟು ಬಾರಿ ಹೇಳಿದ್ದಾನೆ. ಮಹಾ ಸಂಕಟದ ಬಗ್ಗೆ ತಿಳಿಸುವಾಗ ಹೀಗೆ ಹೇಳಿದ್ದಾನೆ: ‘ಮನುಷ್ಯಕುಮಾರನು ಮೇಘಗಳ ಮೇಲೆ ಬರುವುದನ್ನು ಅವರು ಕಾಣುವರು.’ “ನಿಮ್ಮ ಕರ್ತನು ಯಾವ ದಿನದಲ್ಲಿ ಬರುತ್ತಾನೆಂಬುದು ನಿಮಗೆ ತಿಳಿದಿಲ್ಲ.” “ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” ಕುರಿಗಳ ಹಾಗೂ ಆಡುಗಳ ಸಾಮ್ಯದಲ್ಲಿ ಆತನು ಹೀಗೆ ಹೇಳಿದ್ದಾನೆ: ‘ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಬರುವನು.’ (ಮತ್ತಾ. 24:30, 42, 44; 25:31) ಈ ನಾಲ್ಕೂ ಸಂದರ್ಭಗಳು ಕ್ರಿಸ್ತನು ನ್ಯಾಯಾಧಿಪತಿಯಾಗಿ ಬರುವುದಕ್ಕೆ ಸೂಚಿಸುತ್ತವೆ. ಆ ಪ್ರವಾದನೆಯಲ್ಲಿ, ಯೇಸು ಬರುವುದರ ಕುರಿತು ಹೇಳಿರುವ ಇನ್ನುಳಿದ ನಾಲ್ಕು ಸಂದರ್ಭಗಳು ಯಾವುವು?

16. ಯೇಸು ಬರುವುದರ ಕುರಿತು ಇನ್ಯಾವ ವಚನಗಳಲ್ಲಿ ಹೇಳಲಾಗಿದೆ?

16 ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ ಬಗ್ಗೆ ಯೇಸು ಹೀಗಂದನು: “ಯಜಮಾನನು ಬಂದಾಗ ಯಾವ ಆಳು ಹೀಗೆ ಮಾಡುತ್ತಿರುವುದನ್ನು ಕಾಣುವನೋ ಆ ಆಳು ಸಂತೋಷಿತನು!” ಕನ್ಯೆಯರ ಸಾಮ್ಯದಲ್ಲಿ: “ಅವರು ಕೊಂಡುಕೊಳ್ಳಲು ಹೋಗುತ್ತಿರುವಾಗ ಮದುಮಗನು ಬಂದನು.” ತಲಾಂತುಗಳ ಸಾಮ್ಯದಲ್ಲಿ: ‘ಬಹುಕಾಲದ ಬಳಿಕ ಆ ಆಳುಗಳ ಯಜಮಾನನು ಬಂದನು.’ ಅದೇ ಸಾಮ್ಯದಲ್ಲಿ ‘ನಾನು ಬಂದಾಗ ನನ್ನ ಹಣವನ್ನು ಪಡೆದುಕೊಳ್ಳುತ್ತಿದ್ದೆ’ ಎಂದು ಯಜಮಾನನು ಹೇಳಿದನು. (ಮತ್ತಾ. 24:46; 25:10, 19, 27) ಯೇಸು ಬರುವುದರ ಕುರಿತು ಹೇಳಲಾಗಿರುವ ಈ ನಾಲ್ಕು ಸಂದರ್ಭಗಳು ಯಾವುದಕ್ಕೆ ಸೂಚಿಸುತ್ತವೆ?

17. ಮತ್ತಾಯ 24:46ರಲ್ಲಿ ಹೇಳಿರುವ ‘ಬರುವಿಕೆಯ’ ಕುರಿತು ಏನಂತ ಹೇಳಲಾಗಿತ್ತು?

17 ಈ ನಾಲ್ಕು ವಚನಗಳು 1918ರಲ್ಲಿ ಯೇಸು ಬರುವುದನ್ನು ಸೂಚಿಸುತ್ತವೆ ಎಂದು ನಾವು ಪ್ರಕಾಶನಗಳಲ್ಲಿ ಈ ಮೊದಲು ಹೇಳಿದ್ದೆವು. ಉದಾಹರಣೆಗೆ, ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಕುರಿತು ಯೇಸು ಹೇಳಿದ ವಿಷಯ. (ಮತ್ತಾಯ 24:45-47 ಓದಿ.) 46ನೇ ವಚನದಲ್ಲಿ ಹೇಳಲಾದ ‘ಬರುವಿಕೆ’ 1918ರಲ್ಲಿ ಯೇಸು ಅಭಿಷಿಕ್ತ ಕ್ರೈಸ್ತರ ಆಧ್ಯಾತ್ಮಿಕ ಸ್ಥಿತಿಯನ್ನು ಪರೀಕ್ಷಿಸಲು ಬಂದ ಸಮಯಕ್ಕೆ ಸಂಬಂಧಿಸಿದೆ ಮತ್ತು 1919ರಲ್ಲಿ ಯಜಮಾನನು ತನ್ನ ಆಸ್ತಿಯ ಮೇಲೆ ಆಳನ್ನು ನೇಮಿಸಿದನೆಂದು ಹೇಳಲಾಗಿತ್ತು. (ಮಲಾ. 3:1) ಆದರೆ ಯೇಸು ಹೇಳಿದ ಪ್ರವಾದನೆಯನ್ನು ಇನ್ನೂ ಹೆಚ್ಚು ಪರಿಶೀಲಿಸಿದಾಗ, ಆ ಪ್ರವಾದನೆಯ ಕೆಲವು ಅಂಶಗಳು ನೆರವೇರುವ ಸಮಯದ ಕುರಿತ ತಿಳಿವಳಿಕೆಯಲ್ಲಿ ಹೊಂದಾಣಿಕೆ ಮಾಡಬೇಕೆಂದು ಗೊತ್ತಾಯಿತು. ಆದರೆ ಏಕೆ?

18. ಯೇಸು ಹೇಳಿದ ಪ್ರವಾದನೆಯ ಸಂಪೂರ್ಣ ಪರಿಶೀಲನೆ, ಆತನು ‘ಬರುವುದರ’ ಕುರಿತು ಯಾವ ನಿರ್ಣಯಕ್ಕೆ ಬರಲು ನೆರವಾಗುತ್ತದೆ?

 18 ಮತ್ತಾಯ 24:46ರ ಹಿಂದಿನ ವಚನಗಳಲ್ಲಿ ಹೇಳಲಾಗಿರುವ ‘ಬರುವಿಕೆಯು’ ಮಹಾ ಸಂಕಟದ ಸಮಯದಲ್ಲಿ ಯೇಸು ನ್ಯಾಯತೀರ್ಪನ್ನು ವಿಧಿಸಲು ಮತ್ತು ಜಾರಿಗೊಳಿಸಲು ಬರುವ ಸಮಯಕ್ಕೆ ಸೂಚಿಸುತ್ತದೆ. (ಮತ್ತಾ. 24:30, 42, 44) ನಾವು  12ನೇ ಪ್ಯಾರದಲ್ಲಿ ನೋಡಿದಂತೆ ಮತ್ತಾಯ 25:31ರಲ್ಲಿ ಹೇಳಲಾದ ಯೇಸುವಿನ ‘ಬರುವಿಕೆ’ ಭವಿಷ್ಯತ್ತಿನ ಅದೇ ನ್ಯಾಯತೀರ್ಪನ್ನು ಸೂಚಿಸುತ್ತದೆ. ಹಾಗಾದರೆ ಮತ್ತಾಯ 24:46, 47ರಲ್ಲಿ ಹೇಳಿರುವ, ಯೇಸು ತನ್ನ ಆಸ್ತಿಯ ಮೇಲೆ ನಂಬಿಗಸ್ತ ಆಳನ್ನು ನೇಮಿಸಲು ಬರುವ ಘಟನೆ ಸಹ ಭವಿಷ್ಯತ್ತಿನಲ್ಲಿ ಅಂದರೆ ಮಹಾ ಸಂಕಟದ ಸಮಯದಲ್ಲಿ ನೆರವೇರುವುದು ಎಂದು ನಾವು ಅರ್ಥಮಾಡಿಕೊಳ್ಳಬಹುದು. ಅಂದಮೇಲೆ ಯೇಸು ಬರುವುದರ ಬಗ್ಗೆ ಇರುವ ಎಲ್ಲಾ ಎಂಟು ಉಲ್ಲೇಖಗಳು ಮಹಾ ಸಂಕಟದ ಸಮಯದಲ್ಲಾಗುವ ನ್ಯಾಯತೀರ್ಪಿಗೆ ಸೂಚಿಸುತ್ತವೆ ಎನ್ನುವುದು ಆ ಪ್ರವಾದನೆಯನ್ನು ಸಂಪೂರ್ಣವಾಗಿ ಪರಿಶೀಲಿಸುವುದರಿಂದ ಸುವ್ಯಕ್ತ.

19. (1) ತಿಳಿವಳಿಕೆಯಲ್ಲಾದ ಯಾವ ಹೊಂದಾಣಿಕೆಗಳನ್ನು ನಾವು ಪರಿಗಣಿಸಿದೆವು? (2) ಮುಂದಿನ ಲೇಖನಗಳಲ್ಲಿ ನಾವು ಏನನ್ನು ಪರಿಗಣಿಸುವೆವು?

19 ಇಲ್ಲಿವರೆಗೆ ನಾವೇನು ಕಲಿತೆವು? ಲೇಖನದ ಆರಂಭದಲ್ಲಿ ಕೊಡಲಾದ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡೆವು. ಮೊದಲನೇದಾಗಿ ಮಹಾ ಸಂಕಟ 1914ರಲ್ಲಿ ಆರಂಭವಾಗಲಿಲ್ಲ. ಅದು ವಿಶ್ವಸಂಸ್ಥೆ ಮಹಾ ಬಾಬೆಲಿನ ಮೇಲೆ ಆಕ್ರಮಣ ಮಾಡುವಾಗ ಆರಂಭವಾಗುವುದು ಎಂದು ಕಲಿತೆವು. ಎರಡನೇದಾಗಿ, 1914ರಿಂದ ಯೇಸು ಜನರನ್ನು ಕುರಿಗಳು ಅಥವಾ ಆಡುಗಳೆಂದು ತೀರ್ಪುಮಾಡುತ್ತಿಲ್ಲ. ಬದಲಿಗೆ ಅದನ್ನು ಮಹಾ ಸಂಕಟದ ಸಮಯದಲ್ಲಿ ಮಾಡುವನು ಎಂದು. ಮೂರನೇದಾಗಿ, ಯೇಸು ನಂಬಿಗಸ್ತ ಆಳನ್ನು ತನ್ನ ಆಸ್ತಿಯ ಮೇಲೆ ನೇಮಿಸಲು ಬರುವುದು 1919ರಲ್ಲಿ ಅಲ್ಲ, ಬದಲಾಗಿ ಮಹಾ ಸಂಕಟದ ಸಮಯದಲ್ಲಿ ಎಂದು ತಿಳಿದೆವು. ಹೀಗೆ ಮೂರೂ ಪ್ರಶ್ನೆಗಳ ಉತ್ತರವು ಭವಿಷ್ಯತ್ತಿನಲ್ಲಿ ಆಗಲಿರುವ ಮಹಾ ಸಂಕಟದ ಅವಧಿಗೆ ಸೂಚಿಸುತ್ತದೆ. ಇದು, ನಂಬಿಗಸ್ತ ಆಳಿನ ಕುರಿತ ದೃಷ್ಟಾಂತದ ತಿಳಿವಳಿಕೆಯ ಮೇಲೆ ಇನ್ನೂ ಯಾವ ಪ್ರಭಾವ ಬೀರುತ್ತದೆ? ಮಾತ್ರವಲ್ಲ, ಕಡೇ ದಿವಸಗಳಲ್ಲಿ ನೆರವೇರುತ್ತಿರುವ ಯೇಸು ಹೇಳಿದ ಸಾಮ್ಯಗಳು ಹಾಗೂ ದೃಷ್ಟಾಂತಗಳ ಕುರಿತ ತಿಳಿವಳಿಕೆಯನ್ನು ಹೇಗೆ ಪ್ರಭಾವಿಸುತ್ತದೆ? ಇದನ್ನು ಮುಂದಿನ ಲೇಖನಗಳಲ್ಲಿ ಪರಿಗಣಿಸುವೆವು.

ಟಿಪ್ಪಣಿ: (ಆಯಾ ಪ್ಯಾರಗಳೊಂದಿಗೆ ಪಾದಟಿಪ್ಪಣಿಯಾಗಿ ಓದಬೇಕು.)

ಪಾದಟಿಪ್ಪಣಿಗಳು

^ ಪ್ಯಾರ. 4 ಪ್ಯಾರ 4: ಹೆಚ್ಚಿನ ಮಾಹಿತಿಗಾಗಿ ಕಾವಲಿನಬುರುಜು, 1994, ಫೆಬ್ರವರಿ 15, ಪುಟ 8-21, 1999, ಮೇ 1, ಪುಟ 8-20 ನೋಡಿ.

^ ಪ್ಯಾರ. 8 ಪ್ಯಾರ 8: ಈ ವಚನಗಳಲ್ಲಿ ಹೇಳಲಾದ ವಿಷಯಗಳಲ್ಲಿ ‘ಆಯ್ದುಕೊಂಡವರನ್ನು ಒಟ್ಟುಗೂಡಿಸುವುದು’ ಸಹ ಒಂದು. (ಮತ್ತಾ. 24:31) ಹಾಗಾಗಿ ಮಹಾ ಸಂಕಟದ ಆರಂಭ ಘಟ್ಟ ಮುಗಿದ ಬಳಿಕ ಭೂಮಿಯಲ್ಲಿರುವ ಅಭಿಷಿಕ್ತರು, ಅರ್ಮಗೆದೋನ್‌ ಯುದ್ಧ ಆರಂಭವಾಗುವ ಮುಂಚೆ ಸ್ವರ್ಗಕ್ಕೆ ಹೋಗುತ್ತಾರೆ ಎಂದು ತೋರುತ್ತದೆ. ಇದು 1990, ಆಗಸ್ಟ್‌ 15ರ ಕಾವಲಿನಬುರುಜು (ಇಂಗ್ಲಿಷ್‌) ಪುಟ 30ರಲ್ಲಿರುವ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನದಲ್ಲಿ ಚರ್ಚಿಸಲಾದ ಮಾಹಿತಿಯನ್ನು ಪರಿಷ್ಕರಿಸುತ್ತದೆ.

^ ಪ್ಯಾರ. 11 ಪ್ಯಾರ 11: 1995, ಅಕ್ಟೋಬರ್‌ 15ರ ಕಾವಲಿನಬುರುಜು, ಪುಟ 18-28 ನೋಡಿ.

^ ಪ್ಯಾರ. 12 ಪ್ಯಾರ 12: ಇದೇ ವೃತ್ತಾಂತವನ್ನು ಲೂಕ 21:28ರಲ್ಲಿ ನೋಡಿ.

[ಅಧ್ಯಯನ ಪ್ರಶ್ನೆಗಳು]

[ಪುಟ 3ರಲ್ಲಿರುವ ಚಿತ್ರ]

[ಪುಟ 4, 5ರಲ್ಲಿರುವ ಚಾರ್ಟು]

ಮಹಾ ಸಂಕಟ ಹಾಗೂ ನಂತರ

ಆಧುನಿಕ ನೆರವೇರಿಕೆ

ಕಡೇ ದಿವಸಗಳು

ಒಂದನೇ ಶತಮಾನದಲ್ಲಾದ ನೆರವೇರಿಕೆ

ವಿಶ್ವ ಸಂಸ್ಥೆ (“ಅಸಹ್ಯ ವಸ್ತು”) ಕ್ರೈಸ್ತಪ್ರಪಂಚವನ್ನು (“ಪವಿತ್ರ ಸ್ಥಳ”) ಹಾಗೂ ಮಹಾ ಬಾಬೆಲಿನ ಉಳಿದ ಭಾಗಗಳನ್ನು ಆಕ್ರಮಣ ಮಾಡುತ್ತದೆ (ಪ್ರಕ. 17:16-18)

ಸುಳ್ಳು ಧರ್ಮದ ನಾಶನ

ರೋಮನ್‌ ಸೈನ್ಯ (“ಅಸಹ್ಯ ವಸ್ತು”) ಯೆರೂಸಲೇಮನ್ನೂ ಅಲ್ಲಿನ ದೇವಾಲಯವನ್ನೂ (“ಪವಿತ್ರ ಸ್ಥಳ”) ಆಕ್ರಮಣ ಮಾಡಿತು

‘ಅಸಹ್ಯ ವಸ್ತುವು ಪವಿತ್ರ ಸ್ಥಳದಲ್ಲಿ ನಿಂತಿರುವುದು’ (ಮತ್ತಾ. 24:15, 16)

( ಪ್ಯಾರ 6)

ಸುಳ್ಳು ಧರ್ಮಗಳ ಮೇಲಿನ ಆಕ್ರಮಣವನ್ನು ಯೆಹೋವನು ‘ಕಡಮೆಮಾಡುವನು’

ಯೆಹೋವನ ಜನರು ರಕ್ಷಿಸಲ್ಪಡುವರು

ರೋಮನ್‌ ಸೈನ್ಯ ತನ್ನ ಆಕ್ರಮಣವನ್ನು ‘ಕಡಮೆಮಾಡಿತು’; ಯೆರೂಸಲೇಮ್‌ ಹಾಗೂ ಯೂದಾಯದಲ್ಲಿದ್ದ ಕ್ರೈಸ್ತರು ಓಡಿಹೋದರು

“ಆಯ್ದುಕೊಳ್ಳಲ್ಪಟ್ಟವರ ನಿಮಿತ್ತವಾಗಿ ಆ ದಿನಗಳು ಕಡಮೆಮಾಡಲ್ಪಡುವವು” (ಮತ್ತಾ. 24:22)

( ಪ್ಯಾರ 7)

ಸಮಯಾವಧಿ ತಿಳಿದಿಲ್ಲ

ಎಲ್ಲ ಜನಾಂಗಗಳ ಜನರನ್ನು ಕುರಿಗಳು ಅಥವಾ ಆಡುಗಳೆಂದು ಯೇಸು ತೀರ್ಪುಮಾಡುವನು (ಮತ್ತಾ. 25:31-46)

( ಪ್ಯಾರ 12, 13)

ಅಂತರ

“ಆ ದಿನಗಳ ಸಂಕಟವು ತೀರಿದ ಕೂಡಲೆ . . . ” (ಮತ್ತಾ. 24:29-31)

( ಪ್ಯಾರ 8)

ಯೇಸು “ತನ್ನ ಎಲ್ಲ ಆಸ್ತಿಯ” ಮೇಲೆ ನಂಬಿಗಸ್ತ ಆಳನ್ನು ನೇಮಿಸುವನು (ಮತ್ತಾ. 24:46, 47)

( ಪ್ಯಾರ 18)

ಜನಾಂಗಗಳ ನಾಶನ (ಪ್ರಕ. 16:16)

ಅರ್ಮಗೆದೋನ್‌

ಯೆರೂಸಲೇಮಿನ ನಾಶನ

ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆ ಆರಂಭ

[ಚಿತ್ರ]

[ಚಿತ್ರ]

[ಚಿತ್ರ]

[ಪುಟ 7ರಲ್ಲಿರುವ ಚಿತ್ರ]

ಮಹಾ ಸಂಕಟ ಆರಂಭವಾಗುವ ವರೆಗೂ ಜನರಿಗೆ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವ ಅವಕಾಶವಿದೆ ( ಪ್ಯಾರ 13)