ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಕೀರ್ತನೆ 37:25ರಲ್ಲಿ ದಾವೀದನು ಹೇಳಿದ ಹಾಗೂ ಮತ್ತಾಯ 6:33ರಲ್ಲಿ ಯೇಸು ಹೇಳಿದ ಮಾತುಗಳ ಅರ್ಥ ಕ್ರೈಸ್ತನೊಬ್ಬನಿಗೆ ಆಹಾರದ ಕೊರತೆಯಾಗುವಂತೆ ಯೆಹೋವನೆಂದೂ ಬಿಡುವುದಿಲ್ಲ ಎಂದಾ?

“ನಾನು . . . ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ” ಎಂದು ದಾವೀದನು ಬರೆದನು. ಇದು ಅವನ ಸ್ವಂತ ಅನುಭವದ ಮಾತಾಗಿತ್ತು. ದೇವರು ತನ್ನ ಜನರ ಬಗ್ಗೆ ಯಾವಾಗಲೂ ಕಾಳಜಿ ವಹಿಸುತ್ತಾನೆಂದು ದಾವೀದನಿಗೆ ಚೆನ್ನಾಗಿ ಗೊತ್ತಿತ್ತು. (ಕೀರ್ತ. 37:25) ಆದರೆ ಯೆಹೋವನ ಯಾವ ಆರಾಧಕನಿಗೂ ಮೂಲಭೂತ ಅಗತ್ಯಗಳ ಕೊರತೆ ಯಾವತ್ತೂ ಬೀಳಲಿಲ್ಲ ಮುಂದೆಯೂ ಬೀಳುವುದಿಲ್ಲ ಎಂಬುದು ದಾವೀದನ ಮಾತಿನ ಅರ್ಥವಾಗಿರಲಿಲ್ಲ.

ಸ್ವತಃ ದಾವೀದನಿಗೆ ಜೀವನದಲ್ಲಿ ಕಷ್ಟಕರ ಸನ್ನಿವೇಶಗಳು ಬಂದವು. ಒಂದು ಸಂದರ್ಭದಲ್ಲಿ ಅವನು ಸೌಲನಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದನು. ಆ ಸನ್ನಿವೇಶದಲ್ಲಿ ಅವನ ಬಳಿ ಆಹಾರ ಇರಲಿಲ್ಲ. ಅದಕ್ಕವನು ತನಗಾಗಿ ಹಾಗೂ ತನ್ನೊಟ್ಟಿಗಿದ್ದವರಿಗಾಗಿ ಬೇರೆಯವರಿಂದ ರೊಟ್ಟಿ ಕೇಳಬೇಕಾಯಿತು. (1 ಸಮು. 21:1-6) ಇಲ್ಲಿ ದಾವೀದನಿಗೆ ಆಹಾರದ ಕೊರತೆ ಬಂತು. ಆದರೂ ಈ ಕಷ್ಟದ ಪರಿಸ್ಥಿತಿಯಲ್ಲಿ ಯೆಹೋವನು ಅವನ ಕೈಬಿಟ್ಟಿಲ್ಲ ಎಂದು ಅವನ ಅರಿವಿಗೆ ಬಂತು. ದಾವೀದನು ಊಟಕ್ಕಾಗಿ ಭಿಕ್ಷುಕನಂತೆ ಬೇಡುವ ಸ್ಥಿತಿ ಬಂತೆಂದು ಬೈಬಲಲ್ಲಿ ಎಲ್ಲೂ ಇಲ್ಲ.

ರಾಜ್ಯಕ್ಕೆ ಸಂಬಂಧಪಟ್ಟ ಕೆಲಸಗಳಿಗೆ ಆದ್ಯತೆ ಕೊಡುವ ನಂಬಿಗಸ್ತ ಸೇವಕರ ಅಗತ್ಯಗಳನ್ನು ದೇವರು ಪೂರೈಸುತ್ತಾನೆ ಎಂಬ ಆಶ್ವಾಸನೆಯನ್ನು ಯೇಸು ಕೊಟ್ಟಿದ್ದಾನೆ. ಆತನು ಮತ್ತಾಯ 6:33ರಲ್ಲಿ ಹೇಳಿದ್ದು: “ಮೊದಲು ರಾಜ್ಯವನ್ನೂ [ಯೆಹೋವನ] ನೀತಿಯನ್ನೂ ಹುಡುಕುತ್ತಾ ಇರಿ; ಆಗ ಈ ಎಲ್ಲಾ ಇತರ ವಸ್ತುಗಳು [ಆಹಾರ, ಪಾನೀಯ, ಬಟ್ಟೆ ಇತ್ಯಾದಿ] ನಿಮಗೆ ಕೂಡಿಸಲ್ಪಡುವವು.” ಆದರೆ ಹಿಂಸೆಯ ನಿಮಿತ್ತ ತನ್ನ ‘ಸಹೋದರರು’ ಆಹಾರವಿಲ್ಲದೆ ಇರಬೇಕಾದ ಸನ್ನಿವೇಶ ಬರಬಹುದು ಎಂದು ಕೂಡ ಯೇಸು ಸೂಚಿಸಿದನು. (ಮತ್ತಾ. 25:35, 37, 40) ಇಂಥ ಪರಿಸ್ಥಿತಿ ಅಪೊಸ್ತಲ ಪೌಲನಿಗೂ ಬಂದಿತ್ತು. ಅವನು ಕೆಲವು ಸಂದರ್ಭಗಳಲ್ಲಿ ಹಸಿವೆ ಬಾಯಾರಿಕೆಗೆ ಒಳಗಾದನು.—2 ಕೊರಿಂ. 11:27.

ನಮಗೆ ಬೇರೆಬೇರೆ ರೀತಿಯಲ್ಲಿ ಹಿಂಸೆ ಬರುತ್ತದೆಂದು ಯೆಹೋವನು ಹೇಳಿದ್ದಾನೆ. ಕೆಲವೊಮ್ಮೆ ನಾವು ಅಗತ್ಯ ವಸ್ತುಗಳ ಅಭಾವ ಅನುಭವಿಸುವಂತೆ ಯೆಹೋವನು ಅನುಮತಿಸಬಹುದು. ಏಕೆಂದರೆ ಸೈತಾನನ ಆರೋಪಗಳಿಗೆ ಉತ್ತರಿಸಲು ಆತನಿಗೆ ಇದು ನೆರವಾಗುತ್ತದೆ. (ಯೋಬ 2:3-5) ನಮ್ಮ ಜೊತೆ ಕ್ರೈಸ್ತರಲ್ಲಿ ಕೆಲವರು, ಉದಾಹರಣೆಗೆ ನಾಜಿ ಸೆರೆಶಿಬಿರಗಳಲ್ಲಿದ್ದವರು ನಾನಾ ತರದ ಹಿಂಸೆಗಳನ್ನು ಎದುರಿಸಬೇಕಾಯಿತು. ಅಲ್ಲಿ ಸಾಕ್ಷಿಗಳ ಸಮಗ್ರತೆಯನ್ನು ಮುರಿಯಲಿಕ್ಕಾಗಿ ಬಳಸಲಾದ ಅತೀ ಕ್ರೂರ ವಿಧಗಳಲ್ಲಿ ಒಂದು ವಿಧ ಅವರಿಗೆ ಊಟ ಕೊಡದೆ ಉಪವಾಸ ಹಾಕಿದ್ದು. ಆದರೆ ಆ ನಂಬಿಗಸ್ತ ಸಾಕ್ಷಿಗಳು ಯೆಹೋವನಿಗೆ ವಿಧೇಯರಾಗಿ ಉಳಿದರು ಮತ್ತು ಯೆಹೋವನು ಅವರ ಕೈಬಿಡಲಿಲ್ಲ. ಎಲ್ಲಾ ಕ್ರೈಸ್ತರಿಗೆ ಬೇರೆಬೇರೆ ರೀತಿಯ ಕಷ್ಟಗಳು ಬರುವಂತೆ ಆತನು ಹೇಗೆ ಅನುಮತಿಸುತ್ತಾನೊ ಹಾಗೇ ಇವರಿಗೂ ಈ ಕಷ್ಟ ಬರುವಂತೆ ಯೆಹೋವನು ಅನುಮತಿಸಿದನು. ಆದರೆ ತನ್ನ ಹೆಸರಿನ ನಿಮಿತ್ತ ಕಷ್ಟಗಳನ್ನು ತಾಳಿಕೊಳ್ಳುವ ಎಲ್ಲರಿಗೆ ಅವನು ಸಹಾಯ ಮಾಡುತ್ತಾನೆ ಎನ್ನುವುದರಲ್ಲಿ ಸಂಶಯ ಇಲ್ಲ. (1 ಕೊರಿಂ. 10:13) ಫಿಲಿಪ್ಪಿ 1:29ರಲ್ಲಿರುವ ಈ ಮಾತನ್ನು ಯಾವಾಗಲೂ ನೆನಪಿನಲ್ಲಿಡೋಣ: “ಕ್ರಿಸ್ತನಲ್ಲಿ ನಂಬಿಕೆಯನ್ನಿಡುವುದು ಮಾತ್ರವಲ್ಲ, ಅವನಿಗಾಗಿ ಬಾಧೆಯನ್ನೂ ಅನುಭವಿಸುವ ಸದವಕಾಶವು ನಿಮಗೆ ಕೊಡಲ್ಪಟ್ಟಿತು.”

ಯೆಹೋವನು ತನ್ನ ಸೇವಕರೊಂದಿಗೆ ಯಾವಾಗಲೂ ಇರುವುದಾಗಿ ಮಾತುಕೊಟ್ಟಿದ್ದಾನೆ. ಉದಾಹರಣೆಗೆ ಯೆಶಾಯ 54:17 ಹೇಳುತ್ತದೆ: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು.” ಇದು ಮತ್ತು ಯೆಹೋವನ ಇತರ ವಾಗ್ದಾನಗಳು ಆತನು ತನ್ನ ಜನರನ್ನು ಒಂದು ಗುಂಪಾಗಿ ಸಂರಕ್ಷಿಸುತ್ತಾನೆ ಎನ್ನುವುದಕ್ಕೆ ಖಾತ್ರಿಯನ್ನು ಕೊಡುತ್ತದೆ. ಆದರೆ ವೈಯಕ್ತಿಕವಾಗಿ ಒಬ್ಬ ಕ್ರೈಸ್ತನು ನಂಬಿಕೆಯ ಪರೀಕ್ಷೆಗಳನ್ನು ತಾಳಿಕೊಳ್ಳಬೇಕಾಗಿ ಬರಬಹುದು. ಬಹುಶಃ ಸಾವೂ ಬರಬಹುದು.