ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಅಳುವವರೊಂದಿಗೆ ಅಳಿರಿ”

“ಅಳುವವರೊಂದಿಗೆ ಅಳಿರಿ”

“ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ ಪರಸ್ಪರ ಭಕ್ತಿವೃದ್ಧಿಮಾಡುತ್ತಾ ಇರಿ.”—1 ಥೆಸ. 5:11.

ಗೀತೆಗಳು: 121, 75

1, 2. ಆಪ್ತರನ್ನು ಕಳಕೊಂಡ ದುಃಖದಲ್ಲಿರುವವರಿಗೆ ಸಾಂತ್ವನ ಕೊಡುವುದರ ಬಗ್ಗೆ ನಾವು ಯಾಕೆ ಚರ್ಚಿಸಬೇಕು? (ಲೇಖನದ ಆರಂಭದ ಚಿತ್ರ ನೋಡಿ.)

“ನಮ್ಮ ಮಗ ತೀರಿಕೊಂಡು ಸುಮಾರು ಒಂದು ವರ್ಷದ ವರೆಗೆ ಹೃದಯಹಿಂಡುವ ನೋವು ಅನುಭವಿಸಿದೆವು” ಎನ್ನುತ್ತಾರೆ ಸೂಸೀ. ಒಬ್ಬ ಸಹೋದರನು ತನ್ನ ಪತ್ನಿ ದಿಢೀರೆಂದು ತೀರಿಕೊಂಡ ನಂತರ ತನಗೆ “ಮೈಯಲ್ಲಿ ನೋವಾಗುತ್ತಿತ್ತು, ಅದನ್ನು ವರ್ಣಿಸೋದು ಕಷ್ಟ” ಎಂದು ಹೇಳಿದನು. ಇಂಥ ಮಾನಸಿಕ ಮತ್ತು ದೈಹಿಕ ನೋವನ್ನು ಅನೇಕರು ಅನುಭವಿಸಿದ್ದಾರೆ. ಇಂದು ಕ್ರೈಸ್ತ ಸಭೆಯಲ್ಲಿರುವ ಅನೇಕ ಸಹೋದರ ಸಹೋದರಿಯರು ಅರ್ಮಗೆದೋನ್‌ ಬರುವ ಮುಂಚೆಯೇ ತಮ್ಮವರು ತೀರಿಹೋಗುತ್ತಾರೆ ಎಂದು ನೆನಸಿರಲೇ ಇಲ್ಲ. ಬಹುಶಃ ನಿಮ್ಮ ಪ್ರಿಯ ಜನರಲ್ಲಿ ಒಬ್ಬರು ತೀರಿಹೋಗಿರಬಹುದು ಅಥವಾ ತಮ್ಮವರನ್ನು ಕಳಕೊಂಡ ಜನರ ಪರಿಚಯ ನಿಮಗಿರಬಹುದು. ಹೀಗಿದ್ದರೆ, ‘ಆಪ್ತರ ಸಾವಿನ ದುಃಖದಲ್ಲಿರುವವರಿಗೆ ಹೇಗೆ ಸಾಂತ್ವನ ಸಿಗುತ್ತದೆ?’ ಅಂತ ನೀವು ಯೋಚಿಸುತ್ತಿರಬಹುದು.

2 ಸಮಯ ಹೋದಂತೆ ಎಲ್ಲ ನೋವು ಮರೆತುಹೋಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ತನ್ನಷ್ಟಕ್ಕೆ ತಾನೇ ಆಗುತ್ತದಾ? ಇಲ್ಲ. “ಆ ಸಮಯದಲ್ಲಿ ಒಬ್ಬ ವ್ಯಕ್ತಿ ಏನು ಮಾಡುತ್ತಾನೋ ಅದು ನೋವನ್ನು ಮರೆಯುವಂತೆ ಮಾಡುತ್ತದೆಂದು ನನ್ನ ಸ್ವಂತ ಅನುಭವದಿಂದ ತಿಳಿದುಕೊಂಡಿದ್ದೇನೆ” ಎಂದು ವಿಧವೆಯಾಗಿರುವ ಒಬ್ಬ ಸಹೋದರಿ ಹೇಳುತ್ತಾರೆ. ದೇಹದಲ್ಲಿ ಆಗಿರುವ ಗಾಯ ವಾಸಿಯಾಗಲು ಸಮಯ ಹಿಡಿಯುತ್ತದೆ, ಒಳ್ಳೇ ಆರೈಕೆ ಕೂಡ ಬೇಕು. ಅದೇ ರೀತಿ ಹೃದಯದಲ್ಲಿ ತುಂಬಿಕೊಂಡಿರುವ ನೋವು ಹೋಗಲು ಸಮಯ ಮತ್ತು ಪ್ರೀತಿತುಂಬಿದ ಕಾಳಜಿ ಬೇಕು. ಆಪ್ತರನ್ನು ಕಳಕೊಂಡ ದುಃಖದಲ್ಲಿರುವವರು ತಮ್ಮ ನೋವನ್ನು ಕಡಿಮೆ ಮಾಡಲು ಯಾವುದು ಸಹಾಯ ಮಾಡುತ್ತದೆ?

ಯೆಹೋವನು ‘ಸಕಲ ಸಾಂತ್ವನದ ದೇವರು’

3, 4. ನಮ್ಮ ನೋವನ್ನು ಯೆಹೋವನು ಖಂಡಿತ ಅರ್ಥಮಾಡಿಕೊಳ್ಳುತ್ತಾನೆ ಎಂದು ಹೇಗೆ ಹೇಳಬಹುದು?

3 ನಮಗೆ ಬೇಕಾದ ಸಾಂತ್ವನ ಮುಖ್ಯವಾಗಿ ನಮ್ಮ ಕರುಣಾಮಯಿ ತಂದೆಯಾದ ಯೆಹೋವನಿಂದ ಸಿಗುತ್ತದೆ. (2 ಕೊರಿಂಥ 1:3, 4 ಓದಿ.) ಪರಾನುಭೂತಿ ತೋರಿಸುವುದರಲ್ಲಿ ಅಂದರೆ ಇತರರ ನೋವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಯೆಹೋವನಿಗೆ ಸಮಾನರು ಯಾರೂ ಇಲ್ಲ. ಆತನು ‘ನಾನೇ, ನಾನೇ ನಿನ್ನನ್ನು ಸಂತೈಸುತ್ತೇನೆ’ ಎಂದು ತನ್ನ ಜನರಿಗೆ ಮಾತುಕೊಟ್ಟಿದ್ದಾನೆ.—ಯೆಶಾ. 51:12; ಕೀರ್ತ. 119:50, 52, 76.

4 ನಮ್ಮ ಪ್ರೀತಿಯ ತಂದೆಯಾದ ಯೆಹೋವನು ಕೂಡ ತನ್ನ ಆಪ್ತರನ್ನು ಮರಣದಲ್ಲಿ ಕಳಕೊಂಡಿದ್ದಾನೆ. ಉದಾಹರಣೆಗೆ, ತನ್ನ ಸೇವಕರಾದ ಅಬ್ರಹಾಮ, ಇಸಾಕ, ಯಾಕೋಬ, ಮೋಶೆ, ರಾಜ ದಾವೀದರನ್ನು ಕಳಕೊಂಡಿದ್ದಾನೆ. (ಅರ. 12:6-8; ಮತ್ತಾ. 22:31, 32; ಅ. ಕಾ. 13:22) ಆ ನಂಬಿಗಸ್ತ ಪುರುಷರನ್ನು ಪುನರುತ್ಥಾನ ಮಾಡಲು ಯೆಹೋವನು ಕಾಯುತ್ತಾ ಇದ್ದಾನೆ ಎಂದು ಬೈಬಲ್‌ ಹೇಳುತ್ತದೆ. (ಯೋಬ 14:14, 15) ಅವರು ಪುನರುತ್ಥಾನವಾಗಿ ಬಂದಾಗ ಪರಿಪೂರ್ಣ ಆರೋಗ್ಯದಿಂದ ಸಂತೋಷವಾಗಿ ಇರುತ್ತಾರೆ. ತನ್ನ ಜ್ಯೇಷ್ಠಪುತ್ರನಾದ ಯೇಸುವಿನ ಸಾವಿನ ದುಃಖವನ್ನು ಕೂಡ ಯೆಹೋವನು ಅನುಭವಿಸಿದ್ದಾನೆ. ಈ ಮಗನು ಆತನಿಗೆ ತುಂಬ ಪ್ರಿಯನಾಗಿದ್ದನು ಎಂದು ಬೈಬಲ್‌ ಹೇಳುತ್ತದೆ. (ಮತ್ತಾ. 3:17) ಈತನು ನರಳಿ ಸಾಯುವುದನ್ನು ನೋಡಿದಾಗ ಯೆಹೋವನಿಗೆ ಎಷ್ಟು ನೋವಾಗಿರಬಹುದು ಎಂದು ನಮ್ಮಿಂದ ಊಹಿಸಲೂ ಸಾಧ್ಯವಿಲ್ಲ.—ಯೋಹಾ. 5:20; 10:17.

5, 6. ಯೆಹೋವನು ನಮ್ಮನ್ನು ಹೇಗೆ ಸಂತೈಸುತ್ತಾನೆ?

5 ಯೆಹೋವನು ನಮಗೆ ಖಂಡಿತ ಸಹಾಯ ಮಾಡುತ್ತಾನೆಂದು ನಾವು ಭರವಸೆ ಇಡಬಹುದು. ಆದ್ದರಿಂದ ಆತನಿಗೆ ಯಾವುದೇ ಸಮಯದಲ್ಲಿ ನಾವು ಪ್ರಾರ್ಥನೆ ಮಾಡಲು ಹಿಂಜರಿಯಬಾರದು. ನಮ್ಮ ಮನದಾಳದ ದುಃಖದುಮ್ಮಾನವನ್ನು ಹೇಳಿಕೊಳ್ಳಬೇಕು. ಯೆಹೋವನು ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾನೆ, ನಮಗೆ ಬೇಕಾದ ಸಾಂತ್ವನ ಕೊಡುತ್ತಾನೆ ಎಂದು ತಿಳಿದುಕೊಳ್ಳುವಾಗ ನೆಮ್ಮದಿಯಾಗುತ್ತದೆ. ಆದರೆ ಆತನು ನಮಗೆ ಹೇಗೆ ಸಾಂತ್ವನ ಕೊಡುತ್ತಾನೆ?

6 ಯೆಹೋವನು ಸಾಂತ್ವನ ನೀಡುವ ಒಂದು ವಿಧ ಪವಿತ್ರಾತ್ಮದ ಮೂಲಕ. (ಅ. ಕಾ. 9:31) ತನ್ನ ತಂದೆಯ ಹತ್ತಿರ ಕೇಳುವವರಿಗೆಲ್ಲ ಶಕ್ತಿಯುತವಾದ ಪವಿತ್ರಾತ್ಮ ಸಿಗುತ್ತದೆ ಎಂದು ಯೇಸು ಹೇಳಿದ್ದಾನೆ. (ಲೂಕ 11:13) ಈ ಮುಂಚೆ ತಿಳಿಸಲಾದ ಸೂಸೀ ಹೇಳುವುದು: “ಎಷ್ಟೋ ಸಾರಿ ನಮ್ಮಿಂದ ಸಹಿಸಿಕೊಳ್ಳಲು ಆಗಲ್ಲ ಎಂಬ ಸ್ಥಿತಿಯಲ್ಲಿದ್ದಾಗ ನಾವು ಯೆಹೋವನಿಗೆ ನಮ್ಮನ್ನು ಸಂತೈಸು ಅಂತ ಮೊಣಕಾಲೂರಿ ಬೇಡಿಕೊಂಡದ್ದಿದೆ. ಹೀಗೆ ಮಾಡಿದಾಗೆಲ್ಲಾ ದೇವಶಾಂತಿ ನಮ್ಮ ಹೃದಯ ಮತ್ತು ಮನಸ್ಸನ್ನು ಕಾಯುವುದನ್ನು ನೋಡಿದ್ದೇವೆ.”—ಫಿಲಿಪ್ಪಿ 4:6, 7 ಓದಿ.

ಯೇಸು ಕೂಡ ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾನೆ

7, 8. ಯೇಸು ನಮಗೆ ಖಂಡಿತ ಸಾಂತ್ವನ ಕೊಡುತ್ತಾನೆ ಎಂದು ಹೇಗೆ ಹೇಳಬಹುದು?

7 ಯೇಸು ಭೂಮಿಯ ಮೇಲಿದ್ದಾಗ ಹೇಳಿದ ಮತ್ತು ಮಾಡಿದ ಪ್ರತಿಯೊಂದು ವಿಷಯದಲ್ಲಿ ತನ್ನ ತಂದೆಯ ಉತ್ತಮ ಗುಣಗಳನ್ನು ಪೂರ್ಣವಾಗಿ ಅನುಕರಿಸಿದನು. (ಯೋಹಾ. 5:19) “ಮನಮುರಿದವರನ್ನು” ಮತ್ತು “ದುಃಖಿತರೆಲ್ಲರನ್ನು” ಸಂತೈಸಲು ಯೆಹೋವನು ಯೇಸುವನ್ನು ಭೂಮಿಗೆ ಕಳುಹಿಸಿದನು. (ಯೆಶಾ. 61:1, 2; ಲೂಕ 4:17-21) ಯೇಸುವಿಗೆ ಜನರ ಕಷ್ಟನೋವು ಅರ್ಥವಾಗುತ್ತಿತ್ತು ಮತ್ತು ಅವರಿಗೆ ಸಹಾಯ ಮಾಡಲು ಆತನಿಗೆ ನಿಜವಾಗಲೂ ಮನಸ್ಸಿತ್ತು.—ಇಬ್ರಿ. 2:17.

8 ಯೇಸು ಎಳೆಪ್ರಾಯದಲ್ಲಿ ತನ್ನ ಆಪ್ತ ಸ್ನೇಹಿತರ, ಸ್ವಂತ ಕುಟುಂಬದವರ ಸಾವನ್ನು ನೋಡಿರಬಹುದು. ಉದಾಹರಣೆಗೆ, ಅವನು ಹದಿಪ್ರಾಯದಲ್ಲಿದ್ದಾಗ ಅಥವಾ 20 ದಾಟಿದ ಮೇಲೆ ಅವನ ಸಾಕುತಂದೆ ಯೋಸೇಫ ತೀರಿಹೋಗಿರಬೇಕು. * ಇತರರ ಬಗ್ಗೆ ತುಂಬ ಕಾಳಜಿ ವಹಿಸುತ್ತಿದ್ದ ಯೇಸುವಿಗೆ ತನ್ನ ದುಃಖವನ್ನು ಸಹಿಸಿಕೊಳ್ಳಲು, ಅಷ್ಟೇ ಅಲ್ಲ ತನ್ನ ತಾಯಿ, ತಮ್ಮಂದಿರು, ತಂಗಿಯರು ದುಃಖಿಸುತ್ತಿರುವುದನ್ನು ನೋಡುವುದು ಎಷ್ಟು ಕಷ್ಟವಾಗಿರಬೇಕೆಂದು ಸ್ವಲ್ಪ ಊಹಿಸಿ.

9. ಲಾಜರ ತೀರಿಕೊಂಡಾಗ ಯೇಸು ಹೇಗೆ ಪರಾನುಭೂತಿ ತೋರಿಸಿದನು?

9 ಯೇಸು ಸುವಾರ್ತೆ ಸಾರುತ್ತಿದ್ದ ಸಮಯದಲ್ಲಿ ಜನರ ಭಾವನೆಗಳನ್ನು ಅರ್ಥಮಾಡಿಕೊಂಡನು, ಪರಾನುಭೂತಿ ತೋರಿಸಿದನು. ಉದಾಹರಣೆಗೆ, ತನ್ನ ಆಪ್ತ ಗೆಳೆಯನಾದ ಲಾಜರ ತೀರಿಹೋದಾಗ ಮರಿಯ ಮತ್ತು ಮಾರ್ಥಳಿಗೆ ಪರಾನುಭೂತಿ ತೋರಿಸಿದನು. ಅವರ ಹೃದಯಹಿಂಡುತ್ತಿದ್ದ ನೋವನ್ನು ಅವನು ಎಷ್ಟು ಅರ್ಥಮಾಡಿಕೊಂಡನೆಂದರೆ ಅವನೂ ಅವರ ಜೊತೆ ಅತ್ತುಬಿಟ್ಟನು. ಲಾಜರನನ್ನು ಪುನರುತ್ಥಾನ ಮಾಡಲಿದ್ದೇನೆ ಎಂದು ಗೊತ್ತಿದ್ದರೂ ಅತ್ತನು.—ಯೋಹಾ. 11:33-36.

10. ಇಂದು ನಾವು ಅನುಭವಿಸುವ ನೋವನ್ನು ಯೇಸು ಅರ್ಥಮಾಡಿಕೊಳ್ಳುತ್ತಾನೆ ಎಂದು ಹೇಗೆ ಹೇಳಬಹುದು?

10 ಅಂದು ಯೇಸು ಹೇಳಿದ ಸಾಂತ್ವನದ ಮಾತುಗಳಿಂದ ಇಂದು ನಮಗೆ ಹೇಗೆ ಸಹಾಯವಾಗುತ್ತದೆ? ಇಂದಿಗೂ ಯೇಸು ಬದಲಾಗಿಲ್ಲ. “ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಇಂದೂ ಇದ್ದಾನೆ ಮತ್ತು ಸದಾಕಾಲಕ್ಕೂ ಹಾಗೆಯೇ ಇರುವನು” ಎಂದು ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ. (ಇಬ್ರಿ. 13:8) ಅವನನ್ನು “ಜೀವದ ಮುಖ್ಯ ನಿಯೋಗಿ” ಎನ್ನಲಾಗಿದೆ. ಯಾಕೆಂದರೆ ನಾವು ಮುಂದೆ ಸದಾಕಾಲ ಜೀವಿಸುವಂತೆ ಅವನು ಸಾಧ್ಯಮಾಡಿದ್ದಾನೆ. ಆಪ್ತರ ಸಾವಿನ ದುಃಖ ಅವನಿಗೆ ಅರ್ಥವಾಗುತ್ತದೆ ಮತ್ತು “ಪರೀಕ್ಷಿಸಲ್ಪಡುವವರಿಗೆ ಸಹಾಯಮಾಡಲು ಅವನು ಶಕ್ತನಾಗಿದ್ದಾನೆ.” (ಅ. ಕಾ. 3:15; ಇಬ್ರಿ. 2:10, 18) ಆದ್ದರಿಂದ ಬೇರೆಯವರು ನೋವು ಅನುಭವಿಸುವಾಗ ಯೇಸುವಿಗೂ ನೋವಾಗುತ್ತದೆಂದು ಖಂಡಿತವಾಗಿ ಹೇಳಬಹುದು. ಅವರ ನೋವನ್ನು ಅರ್ಥಮಾಡಿಕೊಳ್ಳುತ್ತಾನೆ ಮಾತ್ರವಲ್ಲ “ಸಮಯೋಚಿತ” ಅಂದರೆ ಸಮಯಕ್ಕೆ ಸರಿಯಾಗಿ ಸಾಂತ್ವನವನ್ನೂ ಕೊಡುತ್ತಾನೆ.—ಇಬ್ರಿಯ 4:15, 16 ಓದಿ.

“ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನ”

11. ನಿಮಗೆ ನಿರ್ದಿಷ್ಟವಾಗಿ ಯಾವ ವಚನಗಳು ಸಾಂತ್ವನ ನೀಡುತ್ತವೆ?

11 ಲಾಜರ ತೀರಿಕೊಂಡಾಗ ಯೇಸುವಿಗೆ ತುಂಬ ನೋವಾಯಿತು ಎನ್ನುವ ವೃತ್ತಾಂತ ಬೈಬಲಿನಲ್ಲಿರುವ ಸಾಂತ್ವನದಾಯಕ ವಚನಗಳಿಗೆ ಒಂದು ಉದಾಹರಣೆ. ಇಂಥ ಅನೇಕ ವಚನಗಳಿವೆ. ಇದೇನು ಆಶ್ಚರ್ಯ ಹುಟ್ಟಿಸುವ ವಿಷಯವಲ್ಲ. ಯಾಕೆಂದರೆ “ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳು ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟವು; ನಮ್ಮ ತಾಳ್ಮೆಯಿಂದಲೂ ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನದಿಂದಲೂ ನಾವು ನಿರೀಕ್ಷೆಯುಳ್ಳವರಾಗುವಂತೆ ಅವು ಬರೆಯಲ್ಪಟ್ಟವು.” (ರೋಮ. 15:4) ಆಪ್ತರ ಮರಣದ ದುಃಖ ನಿಮಗಿರುವುದಾದರೆ ಈ ಮುಂದಿನ ವಚನಗಳು ನಿಮ್ಮ ಮನಸ್ಸಿಗೆ ಸಾಂತ್ವನ ಕೊಡುತ್ತವೆ:

  • “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.”—ಕೀರ್ತ. 34:18, 19.

  • “ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ [ಯೆಹೋವನ] ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.”—ಕೀರ್ತ. 94:19.

  • ‘ನಮ್ಮ ಕರ್ತನಾದ ಯೇಸು ಕ್ರಿಸ್ತನು ಮತ್ತು ನಮ್ಮನ್ನು ಪ್ರೀತಿಸಿ ನಿತ್ಯವಾದ ಸಾಂತ್ವನ, ಒಳ್ಳೇ ನಿರೀಕ್ಷೆ, ಅಪಾತ್ರ ದಯೆ ನೀಡಿದಂಥ ತಂದೆಯಾದ ದೇವರು ನಿಮ್ಮ ಹೃದಯಗಳನ್ನು ಸಾಂತ್ವನಗೊಳಿಸಿ ನಿಮ್ಮನ್ನು ದೃಢಪಡಿಸಲಿ.’—2 ಥೆಸ. 2:16, 17. *

ಸಭೆಯಿಂದ ಸಿಗುವ ಅಪಾರ ಸಾಂತ್ವನ

12. ನಾವು ಬೇರೆಯವರಿಗೆ ಹೇಗೆ ಸಾಂತ್ವನ ಕೊಡಬಹುದು?

12 ಆಪ್ತರನ್ನು ಕಳಕೊಂಡಿರುವವರು ಸಭೆಯಿಂದಲೂ ಸಾಂತ್ವನ ಪಡೆಯಬಹುದು. (1 ಥೆಸಲೊನೀಕ 5:11 ಓದಿ.) ‘ಕುಗ್ಗಿದ ಮನದವರಿಗೆ’ ನೀವು ಹೇಗೆ ಧೈರ್ಯ ತುಂಬಿ ಸಾಂತ್ವನ ಕೊಡಬಹುದು? (ಜ್ಞಾನೋ. 17:22) “ಸುಮ್ಮನಿರುವ ಸಮಯ, ಮಾತಾಡುವ ಸಮಯ” ಇದೆ ಎನ್ನುವುದನ್ನು ನೆನಪಿಡಿ. (ಪ್ರಸಂ. 3:7) ಆಪ್ತರ ಮರಣದ ನೋವನ್ನು ಅನುಭವಿಸುತ್ತಿರುವವರು ತಮ್ಮನ್ನು ಕಾಡುವ ಯೋಚನೆಗಳನ್ನು ಭಾವನೆಗಳನ್ನು ಹೇಳಿಕೊಳ್ಳಬೇಕು ಎಂದು ವಿಧವೆಯಾಗಿರುವ ಡಲೀನ್‌ ಎಂಬ ಸಹೋದರಿ ಹೇಳುತ್ತಾರೆ. ಆದ್ದರಿಂದ ದುಃಖದಲ್ಲಿರುವವರು ಮಾತಾಡುವಾಗ ಮಧ್ಯೆ ಬಾಯಿಹಾಕದೆ ಕೇಳಿಸಿಕೊಳ್ಳುವುದು ತುಂಬ ಪ್ರಾಮುಖ್ಯ. ಯೂನಿಯಾ ಎಂಬ ಸಹೋದರಿಯ ಅಣ್ಣ ಆತ್ಮಹತ್ಯೆ ಮಾಡಿಕೊಂಡ. ಅವಳು ಹೇಳುವುದು: “ಇನ್ನೊಬ್ಬರ ದುಃಖ ಪೂರ್ತಿ ಅರ್ಥವಾಗದಿದ್ದರೂ ಅವರ ದುಃಖವನ್ನು ಅರ್ಥಮಾಡಿಕೊಳ್ಳುವ ಮನಸ್ಸಿರಬೇಕು. ಅದೇ ಮುಖ್ಯ.”

13. ನಾವು ದುಃಖದ ಬಗ್ಗೆ ಯಾವ ವಿಷಯಗಳನ್ನು ಮನಸ್ಸಲ್ಲಿಡಬೇಕು?

13 ಆಪ್ತರ ಸಾವಿನಿಂದಾಗುವ ದುಃಖ ಎಲ್ಲರಿಗೂ ಒಂದೇ ತರ ಇರುವುದಿಲ್ಲ. ಆ ದುಃಖವನ್ನು ಎಲ್ಲರೂ ವ್ಯಕ್ತಪಡಿಸುವ ವಿಧವೂ ಬೇರೆಬೇರೆ ಇರುತ್ತದೆಂದೂ ನಾವು ಮನಸ್ಸಲ್ಲಿಡಬೇಕು. ತಮಗೆಷ್ಟು ದುಃಖ ಆಗುತ್ತಿದೆ ಎನ್ನುವುದು ಅವರವರಿಗೆ ಮಾತ್ರ ಗೊತ್ತಿರುತ್ತದೆ, ಕೆಲವೊಮ್ಮೆ ಅದನ್ನು ಮಾತಿನಲ್ಲಿ ವಿವರಿಸಲು ಆಗಲಿಕ್ಕಿಲ್ಲ. ಆದ್ದರಿಂದಲೇ ದೇವರ ವಾಕ್ಯವು, “ಪ್ರತಿಯೊಬ್ಬನು ತನ್ನ ಹೃದಯದ ವ್ಯಾಕುಲವನ್ನು ತಾನು ಗ್ರಹಿಸಿಕೊಳ್ಳುವನು; ಅವನ ಆನಂದದಲ್ಲಿಯೂ ಯಾರೂ ಪಾಲುಗಾರರಾಗುವದಿಲ್ಲ” ಎಂದು ಹೇಳುತ್ತದೆ. (ಜ್ಞಾನೋ. 14:10) ಕೆಲವರು ತಮ್ಮ ನೋವನ್ನು ವ್ಯಕ್ತಪಡಿಸುತ್ತಾರಾದರೂ ಅವರು ಹೇಳಿದ್ದನ್ನು ಅರ್ಥಮಾಡಿಕೊಳ್ಳಲು ಬೇರೆಯವರಿಗೆ ಸ್ವಲ್ಪ ಕಷ್ಟವಾಗಬಹುದು.

14. ತಮ್ಮವರನ್ನು ಕಳಕೊಂಡ ದುಃಖದಲ್ಲಿರುವವರಿಗೆ ನಾವು ಹೇಗೆ ಸಾಂತ್ವನ ಹೇಳಬಹುದು?

14 ತಮ್ಮವರನ್ನು ಕಳಕೊಂಡ ಶೋಕದಲ್ಲಿರುವವರಿಗೆ ಏನು ಹೇಳಬೇಕೆಂದೇ ನಮಗೆ ಕೆಲವೊಮ್ಮೆ ಗೊತ್ತಾಗಲ್ಲ. ಆದರೆ “ಮತಿವಂತರ ಮಾತೇ ಮದ್ದು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 12:18) ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ * ಎಂಬ ಕಿರುಹೊತ್ತಗೆಯಲ್ಲಿರುವ ಮಾತುಗಳನ್ನು ಉಪಯೋಗಿಸಿ ಕೆಲವರು ಸಂತೈಸಿದ್ದಾರೆ. ನಾವು ‘ಅಳುವವರೊಂದಿಗೆ ಅಳುವ’ ಮೂಲಕವೂ ದುಃಖದಲ್ಲಿರುವವರಿಗೆ ತುಂಬ ಸಹಾಯ ಮಾಡುತ್ತೇವೆ. (ರೋಮ. 12:15) ಪತಿಯನ್ನು ಕಳಕೊಂಡ ಗ್ಯಾಬಿ ಎಂಬವರು ಅಳುವುದರ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸುತ್ತಾರೆ. ಅವರು ಹೇಳುವುದು: “ನನ್ನ ಮಿತ್ರರು ನನ್ನ ಜೊತೆ ಸೇರಿ ಅಳುವಾಗ ಸ್ವಲ್ಪ ಸಾಂತ್ವನ ಸಿಗುತ್ತದೆ. ಆಗ ನಾನೊಬ್ಬಳೇ ಅಲ್ಲ, ನನ್ನ ನೋವನ್ನು ಹಂಚಿಕೊಳ್ಳಲು ಬೇರೆಯವರೂ ಇದ್ದಾರೆನ್ನುವ ಭಾವನೆ ಬರುತ್ತದೆ.”

15. ನೇರವಾಗಿ ಸಾಂತ್ವನದ ಮಾತುಗಳನ್ನು ಹೇಳಲು ಆಗದಿದ್ದರೆ ನಾವೇನು ಮಾಡಬಹುದು? (“ ಮನಸ್ಸಿಗೆ ಮುದ ನೀಡುವ ಸಾಂತ್ವನದ ಮಾತುಗಳು” ಎಂಬ ಚೌಕವನ್ನೂ ನೋಡಿ.)

15 ನೇರವಾಗಿ ಸಾಂತ್ವನದ ಮಾತುಗಳನ್ನು ಹೇಳಲು ನಿಮಗೆ ಕಷ್ಟವಾಗಬಹುದು. ಆಗ ಏನು ಮಾಡಬಹುದು? ಕಾರ್ಡ್‌, ಪತ್ರ, ಇ-ಮೇಲ್‌, ಮೊಬೈಲ್‌ ಮೆಸೆಜ್‌ ಇವುಗಳ ಮೂಲಕ ಸಾಂತ್ವನದ ಮಾತುಗಳನ್ನು ಬರೆದು ತಿಳಿಸಬಹುದು. ಸಾಂತ್ವನ ಕೊಡುವ ವಚನವನ್ನು, ತೀರಿಹೋದ ವ್ಯಕ್ತಿಯಲ್ಲಿ ನೀವು ಇಷ್ಟಪಟ್ಟಿದ್ದ ಒಂದು ಒಳ್ಳೇ ಗುಣದ ಬಗ್ಗೆ ಅಥವಾ ಅವರ ಬಗ್ಗೆ ನಿಮಗೆ ನೆನಪಾಗುವ ಒಂದು ಸಂತೋಷದ ವಿಷಯವನ್ನೊ ಘಟನೆಯನ್ನೊ ಬರೆಯಬಹುದು. “ಸಹೋದರ ಸಹೋದರಿಯರು ನಂಗೆ ಉತ್ತೇಜನ ಕೊಡುವ ಒಂದು ಚಿಕ್ಕ ಮೆಸೆಜ್‌ ಕಳುಹಿಸಿದಾಗ ಅಥವಾ ಅವರ ಜೊತೆ ಸ್ವಲ್ಪ ಸಮಯ ಕಳೆಯಲು ಕರೆದಾಗ ನನಗೆ ತುಂಬ ಸಹಾಯ ಆಗುತ್ತದೆ” ಎಂದು ಯೂನಿಯಾ ಹೇಳುತ್ತಾರೆ. ಅವರು ಇನ್ನೂ ಹೇಳುವುದು: “ಇದೆಲ್ಲ ಬೇರೆಯವರು ನನ್ನನ್ನು ಪ್ರೀತಿಸುತ್ತಾರೆ ಮತ್ತು ನನ್ನ ಕಾಳಜಿ ವಹಿಸುತ್ತಾರೆ ಎನ್ನುವ ಭರವಸೆ ಕೊಡುತ್ತದೆ.”

16. ಸಾಂತ್ವನ ಕೊಡುವ ತುಂಬ ಪರಿಣಾಮಕಾರಿ ವಿಧ ಯಾವುದು?

16 ದುಃಖಿಸುತ್ತಿರುವ ಸಹೋದರ ಸಹೋದರಿಯರಿಗೆ ನಮ್ಮ ಪ್ರಾರ್ಥನೆಗಳು ಸಹಾಯ ಮಾಡುತ್ತವೆ. ನಮ್ಮ ಪ್ರಾರ್ಥನೆಗಳಲ್ಲಿ ಅವರನ್ನು ನೆನಪಿಸಿಕೊಳ್ಳಬಹುದು ಮಾತ್ರವಲ್ಲ ಅವರ ಜೊತೆ ಸಹ ಪ್ರಾರ್ಥಿಸಬಹುದು. ಪ್ರಾರ್ಥನೆ ಮಾಡುವಾಗ ನಾವು ಅತ್ತುಬಿಡಬಹುದು ಎಂಬ ಕಾರಣಕ್ಕೆ ಹಿಂಜರಿಯಬಾರದು. ನಾವು ಮನದಾಳದಿಂದ ಮಾಡುವ ಅಂಥ ಪ್ರಾರ್ಥನೆ ತುಂಬ ಸಾಂತ್ವನ ನೀಡುತ್ತದೆ. “ಸಹೋದರಿಯರು ನನ್ನನ್ನು ಸಂತೈಸಲು ಬಂದಾಗ ಒಂದು ಪ್ರಾರ್ಥನೆ ಮಾಡುತ್ತೀರಾ ಅಂತ ಕೆಲವೊಮ್ಮೆ ಕೇಳುತ್ತೇನೆ. ಅವರು ಪ್ರಾರ್ಥಿಸಲು ಶುರುಮಾಡಿದಾಗ ಒತ್ತಿಒತ್ತಿ ಬರುವ ದುಃಖದಿಂದಾಗಿ ನಿಂತುನಿಂತು ಒಂದೊಂದೇ ಮಾತು ಹೇಳುತ್ತಾರೆ. ಆದರೆ ಕೆಲವು ವಾಕ್ಯ ಹೇಳುವಷ್ಟರಲ್ಲಿ ತಮ್ಮ ಸ್ವರ ಸುಧಾರಿಸಿಕೊಂಡು ಮನದಾಳದ ಪ್ರಾರ್ಥನೆ ಮಾಡುತ್ತಾರೆ. ಅವರ ಆ ಬಲವಾದ ನಂಬಿಕೆ, ಪ್ರೀತಿ, ಕಾಳಜಿ ನನ್ನ ನಂಬಿಕೆಯನ್ನು ತುಂಬ ಬಲಪಡಿಸಿದೆ” ಎನ್ನುತ್ತಾರೆ ಡಲೀನ್‌.

ಸಾಂತ್ವನ ಕೊಡುತ್ತಾ ಇರಿ

17-19. ನಾವು ಸಾಂತ್ವನ ಕೊಡುತ್ತಾ ಇರಬೇಕು ಯಾಕೆ?

17 ಆಪ್ತರನ್ನು ಕಳಕೊಂಡ ದುಃಖ ಪ್ರತಿಯೊಬ್ಬರನ್ನು ಎಷ್ಟು ಸಮಯದ ವರೆಗೆ ಕಾಡುತ್ತದೆಂದು ಹೇಳಲು ಸಾಧ್ಯವಿಲ್ಲ. ಕೆಲವು ದಿನಗಳ ಮಟ್ಟಿಗೆ ಬಂಧುಮಿತ್ರರು ಜೊತೆಯಲ್ಲಿದ್ದು ಅಥವಾ ಆಗಾಗ ಬಂದು ಭೇಟಿಮಾಡಿ ದುಃಖಿತರನ್ನು ಸಂತೈಸುತ್ತಾರೆ. ಅವರೆಲ್ಲರೂ ಆಮೇಲೆ ತಮ್ಮತಮ್ಮ ಕೆಲಸಕಾರ್ಯಗಳಲ್ಲಿ ಮುಳುಗಿಹೋಗುತ್ತಾರೆ. ಆದರೆ ಆಪ್ತರನ್ನು ಕಳಕೊಂಡವರು ತಮ್ಮ ದುಃಖದಿಂದ ಇನ್ನೂ ಚೇತರಿಸಿಕೊಂಡಿರುವುದಿಲ್ಲ. ಅವರಿಗೆ ಸಾಂತ್ವನ ಇನ್ನೂ ಬೇಕಿರುತ್ತದೆ. ಹಾಗಾಗಿ ಅವರಿಗೆ ಸಹಾಯ ಕೊಡಲು ಮುಂದೆ ಬನ್ನಿ. “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.” (ಜ್ಞಾನೋ. 17:17) ಅವರಿಗೆ ನಮ್ಮ ಬೆಂಬಲ ಬೇಕಾಗಿರುವಷ್ಟು ಕಾಲ ಜೊತೆ ಕ್ರೈಸ್ತರಾದ ನಾವು ಸಾಂತ್ವನ ಕೊಡುತ್ತಾ ಇರಬೇಕು.—1 ಥೆಸಲೊನೀಕ 3:7 ಓದಿ.

18 ಆಪ್ತರ ಸಾವಿನಿಂದಾಗಿ ಶೋಕಿಸುತ್ತಿರುವವರ ದುಃಖ ತಟ್ಟನೇ ಏನೋ ಕಾರಣಕ್ಕೆ ಹೊರಗೆ ಬರಬಹುದು ಎನ್ನುವುದನ್ನೂ ನಾವು ಮನಸ್ಸಿನಲ್ಲಿಡಬೇಕು. ವಾರ್ಷಿಕೋತ್ಸವ, ಫೋಟೋಗಳು, ಚಟುವಟಿಕೆಗಳು, ಒಂದು ವಿಧದ ಸಂಗೀತ, ವಾಸನೆ, ಶಬ್ದ, ವರ್ಷದ ಒಂದು ಋತು ತೀರಿಹೋದ ವ್ಯಕ್ತಿಯನ್ನು ನೆನಪಿಗೆ ತರಬಹುದು. ತಮ್ಮ ಸಂಗಾತಿ ಇಲ್ಲದೆ ಒಬ್ಬರೇ ಮೊದಲನೇ ಸಲ ಏನಾದರೂ ಮಾಡಬೇಕಾಗಿ ಬಂದಾಗ ಅಂದರೆ ಸಮ್ಮೇಳನವನ್ನೋ ಯೇಸುವಿನ ಮರಣದ ಸ್ಮರಣೆಯನ್ನೋ ಹಾಜರಾಗುವಾಗ ತುಂಬ ದುಃಖವಾಗುತ್ತದೆ. “ಹೆಂಡತಿ ತೀರಿಹೋದ ನಂತರ ಮದುವೆ ದಿನ ಬಂದಾಗ ನನಗೆ ತುಂಬ ಕಷ್ಟವಾಗುತ್ತದೆ ಅಂತ ನನಗೆ ಗೊತ್ತಿತ್ತು” ಎಂದು ಒಬ್ಬ ಸಹೋದರ ಹೇಳುತ್ತಾರೆ. “ಆ ದಿನ ಬಂದಾಗ ನಿಜವಾಗಲೂ ನನಗೆ ಸ್ವಲ್ಪ ಕಷ್ಟವಾಯಿತು. ಆದರೆ ಆ ದಿನ ನಾನು ಒಬ್ಬನೇ ಇರಬಾರದು ಅಂತ ಕೆಲವು ಸಹೋದರ ಸಹೋದರಿಯರು ನನ್ನ ಕೆಲವು ಆಪ್ತ ಗೆಳೆಯರನ್ನು ಸೇರಿಸಿ ನನ್ನ ಜೊತೆ ಸಮಯ ಕಳೆಯುವಂತೆ ಏರ್ಪಡಿಸಿದರು” ಎನ್ನುತ್ತಾರೆ ಆ ಸಹೋದರ.

19 ಆಪ್ತರ ಸಾವಿನ ದುಃಖದಲ್ಲಿರುವವರಿಗೆ ಕೆಲವು ವಿಶೇಷವಾದ ದಿನಗಳಂದು ಮಾತ್ರ ಉತ್ತೇಜನ ಕೊಟ್ಟರೆ ಸಾಕಾಗುವುದಿಲ್ಲ ಎನ್ನುವುದನ್ನೂ ಮನಸ್ಸಿನಲ್ಲಿಡಿ. “ವಿಶೇಷವಲ್ಲದ ದಿನಗಳಂದು ಕೂಡ ಬೇರೆಯವರು ನನಗೆ ಎಷ್ಟೋ ಸಲ ಸಹಾಯ ಕೊಟ್ಟದ್ದರಿಂದ, ನನ್ನ ಜೊತೆ ಸಮಯ ಕಳೆದದ್ದರಿಂದ ತುಂಬ ಪ್ರಯೋಜನವಾಗಿದೆ” ಎಂದು ಯೂನಿಯಾ ಹೇಳುತ್ತಾರೆ. “ಹೀಗೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲದಿದ್ದರೂ ನನ್ನ ಜೊತೆ ಕಳೆದ ಆ ಸಮಯ ತುಂಬ ಸಾಂತ್ವನ ಕೊಟ್ಟಿದೆ ಮತ್ತು ನನಗೆ ತುಂಬ ಅಮೂಲ್ಯವಾಗಿದೆ” ಎಂದೂ ಅವರು ಹೇಳುತ್ತಾರೆ. ಶೋಕಿಸುತ್ತಿರುವವರನ್ನು ಕಾಡುವ ದುಃಖ, ಒಂಟಿಭಾವನೆಯನ್ನು ನಾವು ಪೂರ್ತಿಯಾಗಿ ತೆಗೆದುಹಾಕಲು ಆಗಲ್ಲ. ಆದರೆ ಅವರಿಗೆ ಸಾಂತ್ವನ ಕೊಡಲು ನಮ್ಮಿಂದಾದ ಸಹಾಯ ಮಾಡಬಹುದು. (1 ಯೋಹಾ. 3:18) ಗ್ಯಾಬಿ ಹೇಳುವುದು: “ನಾನು ನಡೆಯುತ್ತಿದ್ದ ದುಃಖದ ಹಾದಿಯಲ್ಲಿ ಹಿರಿಯರು ಪ್ರೀತಿಯಿಂದ ನನ್ನ ಪಕ್ಕದಲ್ಲೇ ಹೆಜ್ಜೆಯಿಟ್ಟು ನಡೆದದ್ದಕ್ಕಾಗಿ ಯೆಹೋವನಿಗೆ ಋಣಿಯಾಗಿದ್ದೇನೆ. ಇದರಿಂದಾಗಿ ಯೆಹೋವನು ಪ್ರೀತಿಯಿಂದ ನನ್ನನ್ನು ತಬ್ಬಿಕೊಂಡಿರುವಂತೆ ನನಗೆ ಅನಿಸಿದೆ.”

20. ಯೆಹೋವನ ವಾಗ್ದಾನಗಳು ನಮಗೆ ಯಾಕೆ ತುಂಬ ಸಾಂತ್ವನ ಕೊಡುತ್ತವೆ?

20 ಸಾಂತ್ವನ ನೀಡುವ ದೇವರಾದ ಯೆಹೋವನು ಸತ್ತವರನ್ನು ಪುನರುತ್ಥಾನ ಮಾಡಿ ಎಲ್ಲ ದುಃಖವನ್ನು ಪೂರ್ತಿಯಾಗಿ ತೆಗೆದುಹಾಕುತ್ತಾನೆ ಎನ್ನುವುದು ನೆಮ್ಮದಿ ಕೊಡುವ ವಿಷಯ ಅಲ್ಲವೆ? (ಯೋಹಾ. 5:28, 29) ಯೆಹೋವನು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು” ಎಂದು ಬೈಬಲ್‌ ಮಾತು ಕೊಡುತ್ತದೆ. (ಯೆಶಾ. 25:8) ಆ ದಿನದಲ್ಲಿ ಭೂಮಿಯಲ್ಲಿರುವ ಯಾರಿಗೂ ‘ಅಳುವವರೊಂದಿಗೆ ಅಳುವ’ ಪರಿಸ್ಥಿತಿ ಬರುವುದಿಲ್ಲ. ಅದರ ಬದಲಿಗೆ ಎಲ್ಲರೂ ‘ಆನಂದಿಸುವವರೊಂದಿಗೆ ಆನಂದಿಸುವರು.’—ರೋಮ. 12:15.

^ ಪ್ಯಾರ. 8 ಯೇಸು 12 ವರ್ಷದವನಿದ್ದಾಗ ಯೋಸೇಫ ಬದುಕಿದ್ದನೆಂದು ನಮಗೆ ಬೈಬಲಿನಿಂದ ಗೊತ್ತಾಗುತ್ತದೆ. ಆದರೆ ಅವನು ನೀರನ್ನು ದ್ರಾಕ್ಷಾಮದ್ಯವಾಗಿ ಮಾಡಿದ ಮೊದಲ ಅದ್ಭುತದ ಸಂದರ್ಭದಲ್ಲಾಗಲಿ ನಂತರವಾಗಲಿ ಯೋಸೇಫನು ಇದ್ದದರ ಬಗ್ಗೆ ಬೈಬಲ್‌ ಏನೂ ಹೇಳುವುದಿಲ್ಲ. ಇದರರ್ಥ ಯೇಸು ಮೊದಲ ಅದ್ಭುತ ಮಾಡುವ ಸಮಯಕ್ಕೆ ಮುಂಚೆಯೇ ಯೋಸೇಫ ತೀರಿಹೋಗಿರಬೇಕು. ಯಾತನಾ ಕಂಬದಲ್ಲಿದ್ದಾಗ ಯೇಸು ತನ್ನ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅಪೊಸ್ತಲ ಯೋಹಾನನಿಗೆ ವಹಿಸಿದನು. ಒಂದುವೇಳೆ ಯೋಸೇಫ ಬದುಕಿದ್ದಿದ್ದರೆ ಅವನು ಹೀಗೆ ಮಾಡುತ್ತಿರಲಿಲ್ಲ.—ಯೋಹಾ. 19:26, 27.

^ ಪ್ಯಾರ. 11 ಅನೇಕರಿಗೆ ಸಾಂತ್ವನ ಕೊಟ್ಟಿರುವ ಬೇರೆ ಕೆಲವು ವಚನಗಳು: ಕೀರ್ತನೆ 20:1, 2; 31:7; 38:8, 9, 15; 55:22; 121:1, 2; ಯೆಶಾಯ 57:15; 66:13; ಫಿಲಿಪ್ಪಿ 4:13; 1 ಪೇತ್ರ 5:7.

^ ಪ್ಯಾರ. 14 ಕಾವಲಿನಬುರುಜು 2016, ನಂ. 3ರಲ್ಲಿ ಮೂಡಿಬಂದ “ದುಃಖದಲ್ಲಿ ಇರುವವರಿಗೆ ಸಹಾಯ ಮಾಡಿ” ಎಂಬ ಲೇಖನವನ್ನು ಸಹ ನೋಡಿ.