ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡು ಉಳಿಸಿಕೊಳ್ಳುವುದು ಹೇಗೆ?

ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡು ಉಳಿಸಿಕೊಳ್ಳುವುದು ಹೇಗೆ?

“ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ.”—ಕೊಲೊ. 3:10.

ಗೀತೆಗಳು: 43, 106

1, 2. (ಎ) ಹೊಸ ವ್ಯಕ್ತಿತ್ವವನ್ನು ನಾವು ಧರಿಸಿಕೊಳ್ಳಲು ಸಾಧ್ಯ ಎಂದು ಏಕೆ ಹೇಳಬಹುದು? (ಬಿ) ಕೊಲೊಸ್ಸೆ 3:10-14​ರಲ್ಲಿ ಹೊಸ ವ್ಯಕ್ತಿತ್ವದ ಯಾವ ಗುಣಗಳ ಬಗ್ಗೆ ತಿಳಿಸಲಾಗಿದೆ?

“ಹೊಸ ವ್ಯಕ್ತಿತ್ವ,” “ನೂತನ ವ್ಯಕ್ತಿತ್ವ” ಎಂಬ ಪದಗಳು ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದಲ್ಲಿವೆ. (ಎಫೆ. 4:24; ಕೊಲೊ. 3:10) ಈ ವ್ಯಕ್ತಿತ್ವ ‘ದೇವರ ಚಿತ್ತಕ್ಕನುಸಾರ ಸೃಷ್ಟಿಸಲ್ಪಟ್ಟಿದೆ.’ ನಾವು ಈ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ಸಾಧ್ಯನಾ? ಸಾಧ್ಯ. ಯಾಕೆಂದರೆ ಯೆಹೋವನು ಮಾನವರನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದ್ದಾನೆ. ಹಾಗಾಗಿ ನಾವು ಆತನಲ್ಲಿರುವ ಸೊಗಸಾದ ಗುಣಗಳನ್ನು ಅನುಕರಿಸಲು ಸಾಧ್ಯ.—ಆದಿ. 1:26, 27; ಎಫೆ. 5:1.

2 ಹುಟ್ಟಿನಿಂದಲೇ ಅಪರಿಪೂರ್ಣರಾಗಿರುವ ಕಾರಣ ನಮ್ಮೆಲ್ಲರಲ್ಲೂ ತಪ್ಪು ಆಸೆಗಳು ಬಂದೇ ಬರುತ್ತವೆ. ಅಲ್ಲದೆ, ನಮ್ಮ ಸುತ್ತಲಿನ ಜನರು, ಘಟನೆಗಳು, ಪರಿಸ್ಥಿತಿಗಳು ಸಹ ನಮ್ಮನ್ನು ಪ್ರಭಾವಿಸುತ್ತವೆ. ಹೀಗಿದ್ದರೂ ಯೆಹೋವನು ದಯೆಯಿಂದ ಕೊಡುವ ಸಹಾಯದಿಂದ ನಾವು ಆತನು ಇಷ್ಟಪಡುವಂಥ ವ್ಯಕ್ತಿಗಳಾಗಲು ಸಾಧ್ಯ. ಇಂಥ ವ್ಯಕ್ತಿಗಳಾಗಬೇಕೆಂಬ ನಮ್ಮ ದೃಢಸಂಕಲ್ಪವನ್ನು ಬಲಗೊಳಿಸಲು ಹೊಸ ವ್ಯಕ್ತಿತ್ವದಲ್ಲಿರುವ ಹಲವು ಗುಣಗಳ ಬಗ್ಗೆ ನಾವೀಗ ಚರ್ಚಿಸೋಣ. (ಕೊಲೊಸ್ಸೆ 3:10-14 ಓದಿ.) ನಂತರ, ಈ ಗುಣಗಳನ್ನು ನಮ್ಮ ಸೇವೆಯಲ್ಲಿ ಹೇಗೆ ತೋರಿಸಬಹುದೆಂದು ನೋಡೋಣ.

‘ನೀವೆಲ್ಲರೂ ಒಂದೇ ಆಗಿದ್ದೀರಿ’

3. ಹೊಸ ವ್ಯಕ್ತಿತ್ವದ ಒಂದು ಗುಣ ಯಾವುದು?

3 ನಿಷ್ಪಕ್ಷಪಾತ ಹೊಸ ವ್ಯಕ್ತಿತ್ವದ ಒಂದು ಪ್ರಮುಖ ಗುಣ ಎಂದು ಪೌಲನು ವಿವರಿಸಿದನು. ಅವನು ಹೇಳಿದ್ದು: “ಗ್ರೀಕನು ಯೆಹೂದ್ಯನು, ಸುನ್ನತಿಯಾದವನು ಸುನ್ನತಿಯಿಲ್ಲದವನು, ಪರದೇಶೀಯನು, ಅನಾಗರಿಕನು, ದಾಸನು, ಸ್ವತಂತ್ರನು ಎಂಬ ಭೇದವಿಲ್ಲ.” ಸಭೆಯಲ್ಲಿ ಯಾರೇ ಆಗಲಿ ತನ್ನ ಜನಾಂಗ, ರಾಷ್ಟ್ರೀಯತೆ, ಸಮಾಜದಲ್ಲಿನ ಸ್ಥಾನಮಾನದ ಕಾರಣ ಬೇರೆಯವರಿಗಿಂತ ಶ್ರೇಷ್ಠನೆಂದು ನೆನಸಬಾರದು. ಯಾಕೆ? ಯಾಕೆಂದರೆ ಕ್ರಿಸ್ತನ ಹಿಂಬಾಲಕರಾಗಿರುವ ‘ನಾವೆಲ್ಲರೂ ಒಂದೇ’ ಆಗಿದ್ದೇವೆ.—ಕೊಲೊ. 3:11; ಗಲಾ. 3:28.

4. (ಎ) ಯೆಹೋವನ ಸೇವಕರು ಬೇರೆ ಜನರೊಂದಿಗೆ ಹೇಗೆ ನಡಕೊಳ್ಳುತ್ತಾರೆ? (ಬಿ) ಯಾವ ಸನ್ನಿವೇಶ ಕ್ರೈಸ್ತ ಐಕ್ಯಕ್ಕೆ ಕುತ್ತು ತರಬಲ್ಲದು?

4 ನಾವು ಹೊಸ ವ್ಯಕ್ತಿತ್ವವನ್ನು ಧರಿಸಿರುವಾಗ ಎಲ್ಲರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತೇವೆ. ಅವರು ಯಾವುದೇ ಜನಾಂಗ, ಹಿನ್ನೆಲೆಯವರಾಗಿರಲಿ ಮರ್ಯಾದೆ ಕೊಡುತ್ತೇವೆ. (ರೋಮ. 2:11) ಲೋಕದ ಕೆಲವೊಂದು ಭಾಗಗಳಲ್ಲಿ ಇದನ್ನು ಮಾಡುವುದು ತುಂಬ ಕಷ್ಟ. ದಕ್ಷಿಣ ಆಫ್ರಿಕವನ್ನು ತೆಗೆದುಕೊಳ್ಳಿ. ಹಿಂದೆ ಆ ದೇಶದ ಸರ್ಕಾರವು ಬೇರೆಬೇರೆ ಜನಾಂಗದವರಿಗೆ ವಾಸಮಾಡಲಿಕ್ಕಾಗಿ ಪ್ರತ್ಯೇಕವಾದ ಪ್ರದೇಶಗಳನ್ನು ಮೀಸಲಾಗಿಟ್ಟಿತ್ತು. ಹಾಗಾಗಿ ಈಗಲೂ ಹೆಚ್ಚಿನ ಜನರು, ಸಾಕ್ಷಿಗಳು ಸಹ ಅಂಥ ಸ್ಥಳಗಳಲ್ಲಿ ವಾಸಮಾಡುತ್ತಾರೆ. ನಮ್ಮ ಸಹೋದರರು ತಮ್ಮ ‘ಹೃದಯವನ್ನು ವಿಶಾಲಗೊಳಿಸಲು’ ಅಂದರೆ ಬೇರೆ ಜನಾಂಗದವರೊಂದಿಗಿನ ಸಹವಾಸವನ್ನು ಹೆಚ್ಚಿಸಲು ಆಡಳಿತ ಮಂಡಲಿ ಪ್ರೋತ್ಸಾಹಿಸಿತು. ಇದಕ್ಕಾಗಿ 2013ರ ಅಕ್ಟೋಬರ್‌ನಲ್ಲಿ ಒಂದು ವಿಶೇಷ ಏರ್ಪಾಡಿಗೆ ಒಪ್ಪಿಗೆ ಕೊಟ್ಟಿತು. ಈ ಮೂಲಕ ಬೇರೆಬೇರೆ ಜನಾಂಗದ ಸಹೋದರರು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳಲು ಸಹಾಯವಾಯಿತು.—2 ಕೊರಿಂ. 6:13.

5, 6. (ಎ) ದೇವಜನರ ಐಕ್ಯವನ್ನು ಹೆಚ್ಚಿಸಲಿಕ್ಕಾಗಿ ಒಂದು ದೇಶದಲ್ಲಿ ಯಾವ ಏರ್ಪಾಡುಗಳನ್ನು ಮಾಡಲಾಯಿತು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಇದರಿಂದ ಯಾವ ಫಲಿತಾಂಶಗಳು ಸಿಕ್ಕಿವೆ?

5 ಕೆಲವೊಂದು ವಾರಾಂತ್ಯಗಳಲ್ಲಿ ಬೇರೆಬೇರೆ ಭಾಷೆ ಇಲ್ಲವೇ ಜನಾಂಗದ ಎರಡು ಸಭೆಗಳ ಸಾಕ್ಷಿಗಳು ಒಟ್ಟಿಗೆ ಸಮಯ ಕಳೆಯಲು ಏರ್ಪಾಡು ಮಾಡಲಾಯಿತು. ಹೀಗೆ ಎರಡೆರಡು ಸಭೆಗಳವರು ಸೇರಿ ಒಟ್ಟಿಗೆ ಸೇವೆಗೆ, ಕೂಟಗಳಿಗೆ ಹೋದರು. ಒಬ್ಬರಿನ್ನೊಬ್ಬರ ಮನೆಗಳಿಗೂ ಹೋಗಿ ಸಮಯ ಕಳೆದರು. ಈ ಏರ್ಪಾಡಿನಲ್ಲಿ ನೂರಾರು ಸಭೆಗಳು ಭಾಗವಹಿಸಿದವು. ಇದರ ಬಗ್ಗೆ ಅಲ್ಲಿನ ಶಾಖಾ ಕಚೇರಿಗೆ ಒಳ್ಳೊಳ್ಳೆ ವರದಿಗಳು ಬಂದವು. ಸಾಕ್ಷಿಗಳಲ್ಲದ ಜನರೂ ಇದೆಲ್ಲವನ್ನು ನೋಡಿ ಮೆಚ್ಚಿದರು. ಉದಾಹರಣೆಗೆ, ಒಬ್ಬ ಪಾದ್ರಿ ಹೇಳಿದ್ದು: “ನಾನೊಬ್ಬ ಸಾಕ್ಷಿಯಲ್ಲ. ಆದರೂ ನಿಮ್ಮ ಬಗ್ಗೆ ಒಂದು ಮಾತು ಹೇಳಲೇಬೇಕು. ನಿಮ್ಮ ಸಾರುವ ಕೆಲಸವನ್ನು ಸಂಘಟಿತ ರೀತಿಯಲ್ಲಿ ಮಾಡುತ್ತಿರುವುದು ನಿಜಕ್ಕೂ ಗಮನಾರ್ಹ. ನಿಮ್ಮ ಮಧ್ಯೆ ಜನಾಂಗೀಯ ಐಕ್ಯವೂ ಇದೆ.” ಈ ಏರ್ಪಾಡಿನ ಬಗ್ಗೆ ಅಲ್ಲಿನ ಸಹೋದರ ಸಹೋದರಿಯರಿಗೆ ಹೇಗನಿಸಿತು?

6 ಕೋಸ ಭಾಷೆಯನ್ನಾಡುವ ಸಹೋದರಿ ನೋಮಾ ಎಂಬವಳಿಗೆ, ಇಂಗ್ಲಿಷ್‌ ಸಭೆಯ ಬಿಳೀ ಸಾಕ್ಷಿಗಳನ್ನು ತನ್ನ ಚಿಕ್ಕ ಮನೆಗೆ ಕರೆಯುವುದರ ಬಗ್ಗೆ ಮೊದಮೊದಲು ಅಂಜಿಕೆ ಇತ್ತು. ಆದರೆ ಅವರೊಂದಿಗೆ ಸೇವೆಗೆ ಹೋಗಿ, ಅವರ ಮನೆಗಳಿಗೆ ಹೋದ ನಂತರ ಅವಳಿಗೆ ಹೆದರಿಕೆ ಕಡಿಮೆಯಾಯಿತು. ಅವಳು ಹೇಳುವುದು: “ಅವರೂ ನಮ್ಮ ತರನೇ ಸಾಮಾನ್ಯ ಜನರು!” ಹಾಗಾಗಿ ಇಂಗ್ಲಿಷ್‌ ಸಭೆಯ ಸಹೋದರ ಸಹೋದರಿಯರು ಕೋಸ ಭಾಷೆಯ ಸಭೆಯವರೊಂದಿಗೆ ಸೇವೆ ಮಾಡಲು ಬಂದಾಗ ಅವರಲ್ಲಿ ಕೆಲವರನ್ನು ನೋಮಾ ತನ್ನ ಮನೆಗೆ ಊಟಕ್ಕೆ ಕರೆದಳು. ಹಾಗೆ ಬಂದ ಅತಿಥಿಗಳಲ್ಲಿ ಒಬ್ಬರು ಹಿರಿಯರಾಗಿದ್ದರು. ಬಿಳಿಯರಾಗಿದ್ದ ಅವರು ತಗ್ಗಾದ ಪ್ಲಾಸ್ಟಿಕ್‌ ಡಬ್ಬದ ಮೇಲೆ ಕೂತುಕೊಂಡದ್ದು ಅವಳ ಮನಮುಟ್ಟಿತು. ಆಡಳಿತ ಮಂಡಲಿ ಒಪ್ಪಿಗೆ ಕೊಟ್ಟ ಏರ್ಪಾಡು ಈಗಲೂ ಜಾರಿಯಲ್ಲಿದ್ದು ಅನೇಕ ಸಹೋದರ ಸಹೋದರಿಯರು ಹೊಸಹೊಸ ಸ್ನೇಹಿತರನ್ನು ಮಾಡಿಕೊಂಡಿದ್ದಾರೆ. ಜೊತೆಗೆ, ಬೇರೆಬೇರೆ ಹಿನ್ನೆಲೆಗಳವರ ಪರಿಚಯ ಮಾಡಿಕೊಳ್ಳುತ್ತಾ ಇದ್ದಾರೆ.

ಸಹಾನುಭೂತಿ ಮತ್ತು ದಯೆ ಧರಿಸಿಕೊಳ್ಳಿ

7. ನಮ್ಮಲ್ಲಿ ಯಾವಾಗಲೂ ಸಹಾನುಭೂತಿ ಇರಬೇಕು ಏಕೆ?

7 ಸೈತಾನನ ಲೋಕ ಅಂತ್ಯವಾಗುವ ವರೆಗೂ ಯೆಹೋವನ ಜನರಿಗೆ ಕಷ್ಟಗಳು ಇದ್ದೇ ಇರುತ್ತವೆ. ನಿರುದ್ಯೋಗ, ಗಂಭೀರ ಕಾಯಿಲೆಗಳು, ಹಿಂಸೆ, ನೈಸರ್ಗಿಕ ವಿಪತ್ತುಗಳು, ಅಪರಾಧಕೃತ್ಯಗಳಿಂದಾಗಿ ಸ್ವತ್ತುಗಳ ನಷ್ಟ ಅಥವಾ ಬೇರೆ ಕಷ್ಟಗಳು ನಮ್ಮೆಲ್ಲರನ್ನು ಬಾಧಿಸಬಹುದು. ಇಂಥ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕಾದರೆ ನಮ್ಮಲ್ಲಿ ನಿಜವಾದ ಸಹಾನುಭೂತಿ ಇರಬೇಕು. ಕೋಮಲ ಸಹಾನುಭೂತಿ ಇದ್ದರೆ ಇತರರೊಟ್ಟಿಗೆ ದಯೆಯಿಂದ ನಡಕೊಳ್ಳುತ್ತೇವೆ. (ಎಫೆ. 4:32) ಈ ಗುಣಗಳು ಹೊಸ ವ್ಯಕ್ತಿತ್ವದ ಭಾಗವಾಗಿವೆ. ಅವು ನಮ್ಮಲ್ಲಿದ್ದರೆ ದೇವರನ್ನು ಅನುಕರಿಸಲು ಸಾಧ್ಯವಾಗುತ್ತೆ ಮತ್ತು ಇತರರಿಗೆ ಸಾಂತ್ವನವನ್ನೂ ಕೊಡಲಿಕ್ಕಾಗುತ್ತದೆ.—2 ಕೊರಿಂ. 1:3, 4.

8. ಸಭೆಯಲ್ಲಿರುವ ಎಲ್ಲರಿಗೂ ನಾವು ಸಹಾನುಭೂತಿ, ದಯೆ ತೋರಿಸಿದರೆ ಫಲಿತಾಂಶ ಏನು? ಒಂದು ಉದಾಹರಣೆ ಕೊಡಿ.

8 ಬೇರೆ ದೇಶದಿಂದ ಬಂದು ನೆಲೆಸಿದವರು ಇಲ್ಲವೇ ಅಷ್ಟೇನೂ ಅನುಕೂಲವಿಲ್ಲದವರು ನಮ್ಮ ಸಭೆಯಲ್ಲಿದ್ದರೆ ಅವರಿಗೆ ಹೇಗೆ ಹೆಚ್ಚು ದಯೆ ತೋರಿಸಬಹುದು? ಅಂಥವರ ಸ್ನೇಹ ಬೆಳೆಸಬೇಕು ಮತ್ತು ಸಭೆಯಲ್ಲಿ ನಮಗೆ ಅವರ ಅಗತ್ಯವಿದೆ ಅನ್ನುವ ಭಾವನೆ ಮೂಡಿಸಬೇಕು. (1 ಕೊರಿಂ. 12:22, 25) ಡ್ಯಾನೀಕಾರ್ಲ್‌ ಎಂಬವರು ಫಿಲಿಪ್ಪೀನ್ಸ್‌ನಿಂದ ಜಪಾನ್‌ಗೆ ಬಂದರು. ಅವರು ಬೇರೆ ದೇಶದವರು ಎಂಬ ಕಾರಣಕ್ಕೆ ಕೆಲಸದ ಸ್ಥಳದಲ್ಲಿ ಅವರಿಗೆ ಭೇದಭಾವ ತೋರಿಸಲಾಗುತ್ತಿತ್ತು. ನಂತರ ಅವರು ಅಲ್ಲಿದ್ದ ಯೆಹೋವನ ಸಾಕ್ಷಿಗಳ ಕೂಟಕ್ಕೆ ಹೋದರು. ಅವರು ಹೇಳಿದ್ದು: “ಅಲ್ಲಿ ಹೆಚ್ಚಿನಂಶ ಜಪಾನೀ ಜನರೇ ಇದ್ದರೂ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದರು. ನಾನೇನೊ ಅವರಿಗೆ ತುಂಬ ವರ್ಷಗಳಿಂದ ಪರಿಚಿತನೊ ಎಂಬಂತೆ ನಡಕೊಂಡರು.” ಸಹೋದರರು ತೋರಿಸಿದ ದಯೆಯಿಂದಾಗಿ ಅವರು ಯೆಹೋವನಿಗೆ ಇನ್ನಷ್ಟು ಹತ್ತಿರವಾಗಲು ಸಹಾಯವಾಯಿತು. ಸಮಯಾನಂತರ ಡ್ಯಾನೀಕಾರ್ಲ್‌ ದೀಕ್ಷಾಸ್ನಾನ ಪಡೆದರು. ಈಗ ಹಿರಿಯರಾಗಿದ್ದಾರೆ. ಅವರ ಜೊತೆ ಹಿರಿಯರು ಡ್ಯಾನೀಕಾರ್ಲ್‌ ಮತ್ತು ಅವರ ಹೆಂಡತಿ ಜೆನಿಫರ್‌ ತಮ್ಮ ಸಭೆಯ ಭಾಗವಾಗಿರುವ ಕಾರಣಕ್ಕೆ ತುಂಬ ಸಂತೋಷಪಡುತ್ತಾರೆ. ಅವರು ಹೇಳುವುದು: “ಪಯನೀಯರರಾಗಿ ಅವರು ತುಂಬ ಸರಳ ಜೀವನ ನಡೆಸುತ್ತಾರೆ. ರಾಜ್ಯಕ್ಕೆ ಪ್ರಥಮ ಸ್ಥಾನ ಕೊಡುವ ವಿಷಯದಲ್ಲಿ ಒಳ್ಳೇ ಮಾದರಿ ಆಗಿದ್ದಾರೆ.”—ಲೂಕ 12:31.

9, 10. ಸೇವೆಯಲ್ಲಿ ನಾವು ಸಹಾನುಭೂತಿ ತೋರಿಸುವಾಗ ಸಿಗುವ ಒಳ್ಳೇ ಫಲಿತಾಂಶಗಳ ಉದಾಹರಣೆಗಳನ್ನು ಕೊಡಿ.

9 ನಾವು ರಾಜ್ಯದ ಸುವಾರ್ತೆ ಸಾರುವಾಗ ‘ಎಲ್ಲರಿಗೂ ಒಳ್ಳೇದನ್ನು ಮಾಡಲು’ ಅವಕಾಶ ಸಿಗುತ್ತದೆ. (ಗಲಾ. 6:10) ಅನೇಕ ಸಾಕ್ಷಿಗಳಿಗೆ ಬೇರೆ ದೇಶಗಳಿಂದ ವಲಸೆ ಬಂದಿರುವವರ ಕಡೆಗೆ ಸಹಾನುಭೂತಿ ಇರುವುದರಿಂದ ಅವರ ಭಾಷೆ ಕಲಿಯುವ ಪ್ರಯತ್ನ ಮಾಡುತ್ತಾರೆ. (1 ಕೊರಿಂ. 9:23) ಅವರ ಪ್ರಯತ್ನಗಳಿಗೆ ಒಳ್ಳೇ ಫಲಿತಾಂಶಗಳು ಸಿಕ್ಕಿವೆ. ಉದಾಹರಣೆಗೆ, ಆಸ್ಟ್ರೇಲಿಯದಲ್ಲಿರುವ ಒಬ್ಬ ಪಯನೀಯರ್‌ ಸಹೋದರಿ ಟಿಫನೀ ಬಗ್ಗೆ ನೋಡೋಣ. ಬ್ರಿಸ್ಬೇನ್‌ ನಗರದ ಸ್ವಾಹೀಲಿ ಸಭೆಗೆ ಸಹಾಯ ಮಾಡಲೆಂದು ಅವಳು ಸ್ವಾಹೀಲಿ ಭಾಷೆ ಕಲಿತಳು. ಆ ಭಾಷೆ ಕಲಿಯಲು ಅವಳು ತುಂಬ ಕಷ್ಟಪಡಬೇಕಾಗಿದ್ದರೂ ಅವಳ ಜೀವನ ಈಗ ಹೆಚ್ಚು ಅರ್ಥಪೂರ್ಣ ಆಗಿದೆ. ಅವಳನ್ನುವುದು: “ನಿಮಗೆ ಸೇವೆಯಲ್ಲಿ ರೋಮಾಂಚಕಾರಿ ಅನುಭವಗಳು ಬೇಕಿದ್ದರೆ, ಪರಭಾಷೆ ಸಭೆಯಲ್ಲಿ ಸೇವೆಮಾಡಿ. ನಿಮ್ಮ ನಗರದಿಂದ ಹೊರಗೆ ಕಾಲಿಡದೆಯೇ ಇನ್ನೊಂದು ದೇಶಕ್ಕೆ ಪ್ರಯಾಣಿಸಿದ ಅನುಭವ ನಿಮಗಾಗುತ್ತದೆ. ನಮ್ಮ ಲೋಕವ್ಯಾಪಕ ಸಹೋದರತ್ವ ಹೇಗಿದೆಯೆಂದು ಅನುಭವಿಸಲು, ಅದರಲ್ಲಿನ ಅದ್ಭುತಕರ ಐಕ್ಯವನ್ನು ಕಣ್ಣಾರೆ ನೋಡಲು ಸಾಧ್ಯವಾಗುತ್ತದೆ.”

ಕ್ರೈಸ್ತ ಪ್ರಚಾರಕರು ವಲಸೆಬಂದವರಿಗೆ ಸಹಾಯಮಾಡುವಂತೆ ಯಾವುದು ಪ್ರೇರಿಸುತ್ತದೆ? (ಪ್ಯಾರ 10 ನೋಡಿ)

10 ಜಪಾನಿನಲ್ಲಿರುವ ಒಂದು ಕುಟುಂಬ ಏನು ಮಾಡಿತೆಂದು ನೋಡೋಣ. ಮಗಳು ಸಾಕೀಕೊ ಹೇಳುವುದು: “ಸೇವೆಗೆ ಹೋದಾಗ ನಮಗೆ ಎಷ್ಟೋ ಸಲ ಬ್ರಸಿಲ್‌ ದೇಶದಿಂದ ವಲಸೆಬಂದವರು ಸಿಗುತ್ತಿದ್ದರು. ಅವರ ಹತ್ತಿರವಿದ್ದ ಪೋರ್ಚುಗೀಸ್‌ ಬೈಬಲಿನಿಂದ ಪ್ರಕಟನೆ 21:3, 4 ಅಥವಾ ಕೀರ್ತನೆ 37:10, 11, 29​ರಂಥ ವಚನಗಳನ್ನು ತೋರಿಸಿದಾಗ ಅವರು ಗಮನಕೊಟ್ಟು ಕೇಳುತ್ತಿದ್ದರು, ಒಮ್ಮೊಮ್ಮೆ ಕಣ್ಣೀರೂ ಸುರಿಸುತ್ತಿದ್ದರು.” ವಲಸೆಬಂದ ಆ ಜನರ ಬಗ್ಗೆ ಈ ಕುಟುಂಬಕ್ಕೆ ಸಹಾನುಭೂತಿ ಮೂಡಿತು. ಹಾಗಾಗಿ ಅವರಿಗೆ ಸತ್ಯ ಕಲಿಸಲು ಮನಸ್ಸುಮಾಡಿತು. ಕುಟುಂಬವಾಗಿ ಪೋರ್ಚುಗೀಸ್‌ ಭಾಷೆ ಕಲಿಯಿತು. ತದನಂತರ, ಆ ಕುಟುಂಬ ಒಂದು ಪೋರ್ಚುಗೀಸ್‌ ಭಾಷೆಯ ಸಭೆಯನ್ನು ಸ್ಥಾಪಿಸಲು ಸಹಾಯಮಾಡಿತು. ಇಷ್ಟೆಲ್ಲ ವರ್ಷಗಳಲ್ಲಿ ಆ ಕುಟುಂಬವು ವಲಸೆಬಂದಿರುವ ಅನೇಕರಿಗೆ ಯೆಹೋವನ ಸೇವಕರಾಗಲು ನೆರವು ನೀಡಿದೆ. ಸಾಕೀಕೊ ಹೇಳುವುದು: “ಪೋರ್ಚುಗೀಸ್‌ ಭಾಷೆ ಕಲಿಯಲು ತುಂಬ ಶ್ರಮ ಪಡಬೇಕಾಯಿತು. ಆದರೆ ನಾವು ಮಾಡಿದ ಪ್ರಯತ್ನಗಳಿಗಿಂತ ಸಿಕ್ಕಿರುವ ಆಶೀರ್ವಾದಗಳೇ ಜಾಸ್ತಿ. ನಾವು ಯೆಹೋವನಿಗೆ ತುಂಬ, ತುಂಬ ಕೃತಜ್ಞರಾಗಿದ್ದೇವೆ.”—ಅ. ಕಾರ್ಯಗಳು 10:34, 35 ಓದಿ.

ದೀನತೆಯನ್ನು ಧರಿಸಿಕೊಳ್ಳಿ

11, 12. (ಎ) ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುವ ನಮ್ಮ ಉದ್ದೇಶ ಸರಿಯಾಗಿರಬೇಕು ಯಾಕೆ? (ಬಿ) ನಾವು ದೀನರಾಗಿರಲು ಯಾವುದು ಸಹಾಯಮಾಡುತ್ತದೆ?

11 ನಾವು ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುವ ಉದ್ದೇಶ ಯೆಹೋವನಿಗೆ ಮಹಿಮೆ ತರುವುದೇ ಆಗಿರಬೇಕು, ಬೇರೆಯವರಿಂದ ಹೊಗಳಿಕೆ ಪಡೆಯುವುದಲ್ಲ. ನೆನಪಿಡಿ, ಒಬ್ಬ ಪರಿಪೂರ್ಣ ದೇವದೂತನೇ ಅಹಂಕಾರಿಯಾಗಿ ಪಾಪಮಾಡಿದನು. (ಯೆಹೆಜ್ಕೇಲ 28:17 ಹೋಲಿಸಿ.) ಹೀಗಿರುವಾಗ ಅಪರಿಪೂರ್ಣರಾದ ನಮಗಂತೂ ಅಹಂಕಾರವನ್ನು ದೂರವಿಡುವುದು ಇನ್ನೂ ಕಷ್ಟ. ಆದರೂ ನಾವು ದೀನತೆ ಎಂಬ ಗುಣವನ್ನು ಧರಿಸಿಕೊಳ್ಳಲು ಸಾಧ್ಯವಿದೆ. ಇದನ್ನು ಮಾಡಲು ನಮಗೆ ಯಾವುದು ಸಹಾಯಮಾಡುತ್ತದೆ?

12 ದೀನರಾಗಿರಲು ನಮಗೆ ಸಹಾಯಮಾಡುವ ಒಂದು ವಿಷಯವೇನೆಂದರೆ, ಪ್ರತಿ ದಿನ ದೇವರ ವಾಕ್ಯವನ್ನು ಓದಿ, ಓದಿದ್ದನ್ನು ಧ್ಯಾನಿಸುವುದೇ. (ಧರ್ಮೋ. 17:18-20) ಯೇಸು ನಮಗೇನು ಕಲಿಸಿದನೊ ಅದರ ಬಗ್ಗೆ ಮತ್ತು ದೀನತೆ ತೋರಿಸುವುದರಲ್ಲಿ ಆತನ ಮಾದರಿಯ ಬಗ್ಗೆ ನಾವು ವಿಶೇಷವಾಗಿ ಧ್ಯಾನಿಸಬೇಕು. (ಮತ್ತಾ. 20:28) ಯೇಸು ಎಷ್ಟು ದೀನನಾಗಿದ್ದನೆಂದರೆ ತನ್ನ ಅಪೊಸ್ತಲರ ಕಾಲು ತೊಳೆದನು. (ಯೋಹಾ. 13:12-17) ನಾವು ಮಾಡಬೇಕಾದ ಇನ್ನೊಂದು ವಿಷಯ, ಯೆಹೋವನ ಹತ್ತಿರ ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳುವುದೇ. ನಾವು ಇತರರಿಗಿಂತಲೂ ಶ್ರೇಷ್ಠರು ಎಂಬ ನಮ್ಮೊಳಗಿನ ಯಾವುದೇ ಅನಿಸಿಕೆಯ ವಿರುದ್ಧ ಹೋರಾಡಲು ಪವಿತ್ರಾತ್ಮ ಸಹಾಯಮಾಡುತ್ತದೆ.—ಗಲಾ. 6:3, 4; ಫಿಲಿ. 2:3.

13. ದೀನರಾಗಿರುವುದರಿಂದ ಸಿಗುವ ಪ್ರತಿಫಲಗಳೇನು?

13 ಜ್ಞಾನೋಕ್ತಿ 22:4 ಓದಿ. ನಾವು ದೀನರಾಗಿರಬೇಕೆಂದು ಯೆಹೋವನು ಹೇಳುತ್ತಾನೆ. ದೀನತೆಯಿಂದ ತುಂಬ ಪ್ರತಿಫಲಗಳು ಸಿಗುತ್ತವೆ. ನಾವು ದೀನರಾಗಿರುವಾಗ ಸಭೆಯಲ್ಲಿ ಹೆಚ್ಚು ಶಾಂತಿ, ಐಕ್ಯ ಇರುತ್ತದೆ. ಅಲ್ಲದೆ, ಯೆಹೋವನು ನಮಗೆ ಅಪಾತ್ರ ದಯೆ ತೋರಿಸುವನು. ಅಪೊಸ್ತಲ ಪೇತ್ರನು ಹೇಳಿದ್ದು: “ನೀವೆಲ್ಲರೂ ಒಬ್ಬರ ಕಡೆಗೊಬ್ಬರು ದೀನ ಮನಸ್ಸಿನಿಂದ ನಡುಕಟ್ಟಲ್ಪಟ್ಟವರಾಗಿರಿ, ಏಕೆಂದರೆ ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ಆದರೆ ದೀನರಿಗೆ ಅಪಾತ್ರ ದಯೆಯನ್ನು ಅನುಗ್ರಹಿಸುತ್ತಾನೆ.”—1 ಪೇತ್ರ 5:5.

ಸೌಮ್ಯಭಾವ ಮತ್ತು ತಾಳ್ಮೆ ಧರಿಸಿಕೊಳ್ಳಿ

14. ಸೌಮ್ಯಭಾವ ಮತ್ತು ತಾಳ್ಮೆ ತೋರಿಸುವ ವಿಷಯದಲ್ಲಿ ಯಾರು ಅತ್ಯುತ್ತಮ ಮಾದರಿ?

14 ಇಂದಿನ ಲೋಕದಲ್ಲಿ ಒಬ್ಬ ವ್ಯಕ್ತಿ ಸೌಮ್ಯಭಾವ, ತಾಳ್ಮೆ ತೋರಿಸಿದರೆ ಅವನು ಬಲಹೀನ, ಹೇಡಿ ಎಂದು ಹೆಚ್ಚಿನವರು ನೆನಸುತ್ತಾರೆ. ಆದರೆ ಆ ಅಭಿಪ್ರಾಯ ಸರಿಯಲ್ಲ. ಯಾಕೆಂದರೆ ಆ ಸೊಗಸಾದ ಗುಣಗಳ ಉಗಮನು ಯೆಹೋವನು. ಇಡೀ ವಿಶ್ವದಲ್ಲಿ ಆತನೇ ಅತ್ಯಂತ ಬಲಿಷ್ಠ, ಶಕ್ತಿಶಾಲಿ. ಸೌಮ್ಯಭಾವ ಮತ್ತು ತಾಳ್ಮೆ ತೋರಿಸುವುದರಲ್ಲಿ ಆತನಿಗಿಂತ ಉತ್ತಮ ಮಾದರಿ ಬೇರಾರೂ ಇಲ್ಲ. (2 ಪೇತ್ರ 3:9) ಯೆಹೋವನು ಅಬ್ರಹಾಮನಿಗೆ ಮತ್ತು ಲೋಟನಿಗೆ ದೇವದೂತರ ಮೂಲಕ ತಾಳ್ಮೆ ತೋರಿಸಿದ ಸಂದರ್ಭಗಳ ಕುರಿತು ಸ್ವಲ್ಪ ಯೋಚಿಸಿ! (ಆದಿ. 18:22-33; 19:18-21) ಅವಿಧೇಯರಾದ ಇಸ್ರಾಯೇಲ್‌ ಜನಾಂಗಕ್ಕೆ ಆತನು 1,500ಕ್ಕೂ ಹೆಚ್ಚು ವರ್ಷಗಳ ವರೆಗೆ ತೋರಿಸಿದ ತಾಳ್ಮೆ ಬಗ್ಗೆಯೂ ಯೋಚಿಸಿ ನೋಡಿ!—ಯೆಹೆ. 33:11.

15. ಸೌಮ್ಯಭಾವ ಮತ್ತು ತಾಳ್ಮೆ ತೋರಿಸುವುದರಲ್ಲಿ ಯೇಸು ಯಾವ ಮಾದರಿ ಇಟ್ಟನು?

15 ಯೇಸು ‘ಸೌಮ್ಯಭಾವದವನು’ ಆಗಿದ್ದನು. (ಮತ್ತಾ. 11:29) ತನ್ನ ಶಿಷ್ಯರಿಗಿದ್ದ ಬಲಹೀನತೆಗಳ ವಿಷಯದಲ್ಲಿ ತುಂಬ ತಾಳ್ಮೆ ತೋರಿಸಿದನು. ಭೂಮಿಯಲ್ಲಿ ಸೇವೆ ಮಾಡುತ್ತಿದ್ದ ಸಮಯದಲ್ಲಿ ಎಷ್ಟೋ ಸಲ ಅವನನ್ನು ಅನ್ಯಾಯವಾಗಿ ಟೀಕಿಸಲಾಯಿತು, ಸುಳ್ಳಾರೋಪ ಹಾಕಲಾಯಿತು. ಹೀಗಿದ್ದರೂ ಅವನು ಸಾಯುವ ವರೆಗೂ ಸೌಮ್ಯಭಾವ, ತಾಳ್ಮೆ ತೋರಿಸಿದನು. ಯಾತನಾ ಕಂಬದ ಮೇಲೆ ಅತೀವ ನೋವಿನಿಂದ ನರಳುತ್ತಿದ್ದ ಸಮಯದಲ್ಲೂ ತನ್ನನ್ನು ಕಂಬಕ್ಕೇರಿಸಿದವರನ್ನು ಕ್ಷಮಿಸುವಂತೆ ತನ್ನ ತಂದೆ ಹತ್ತಿರ ಬೇಡಿಕೊಂಡನು. “ತಾವು ಏನು ಮಾಡುತ್ತಿದ್ದೇವೆ ಎಂಬುದು ಅವರಿಗೆ ತಿಳಿದಿಲ್ಲ” ಎಂದು ಹೇಳಿದನು. (ಲೂಕ 23:34) ತುಂಬ ಒತ್ತಡ, ನೋವಿನ ಸಮಯದಲ್ಲೂ ಸೌಮ್ಯಭಾವ ಮತ್ತು ತಾಳ್ಮೆ ತೋರಿಸುವ ವಿಷಯದಲ್ಲಿ ಯೇಸು ಎದ್ದುಕಾಣುವ ಮಾದರಿ ಆಗಿದ್ದಾನೆ!—1 ಪೇತ್ರ 2:21-23 ಓದಿ.

16. ನಾವು ಸೌಮ್ಯಭಾವ ಮತ್ತು ತಾಳ್ಮೆಯನ್ನು ಹೇಗೆ ತೋರಿಸಬಹುದು?

16 ನಾವು ಸೌಮ್ಯಭಾವ ಮತ್ತು ತಾಳ್ಮೆ ತೋರಿಸಬಹುದಾದ ಒಂದು ವಿಧದ ಬಗ್ಗೆ ಅಪೊಸ್ತಲ ಪೌಲನು ಹೀಗೆ ಬರೆದನು: “ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ. ಯೆಹೋವನು ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.” (ಕೊಲೊ. 3:13) ಬೇರೆಯವರನ್ನು ಕ್ಷಮಿಸಬೇಕಾದರೆ ನಮ್ಮಲ್ಲಿ ಸೌಮ್ಯಭಾವ, ತಾಳ್ಮೆ ಇರಬೇಕು. ಇದು ಸಭೆಯಲ್ಲಿನ ಐಕ್ಯವನ್ನು ಹೆಚ್ಚಿಸಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

17. ಸೌಮ್ಯಭಾವ ಮತ್ತು ತಾಳ್ಮೆ ಯಾಕೆ ಪ್ರಾಮುಖ್ಯ?

17 ಬೇರೆಯವರೊಂದಿಗೆ ನಾವು ಸೌಮ್ಯಭಾವದಿಂದ ನಡಕೊಳ್ಳಬೇಕು ಮತ್ತು ತಾಳ್ಮೆ ತೋರಿಸಬೇಕೆಂದು ಯೆಹೋವನು ಹೇಳುತ್ತಾನೆ. ಆತನು ತರಲಿರುವ ಹೊಸ ಲೋಕದಲ್ಲಿ ನಾವು ಜೀವಿಸಬೇಕಾದರೆ ಈ ಗುಣಗಳು ಅತ್ಯಾವಶ್ಯಕ. (ಮತ್ತಾ. 5:5; ಯಾಕೋ. 1:21) ನಾವು ಈ ಗುಣಗಳನ್ನು ತೋರಿಸುವಾಗ ಯೆಹೋವನಿಗೆ ಗೌರವ ತರುತ್ತೇವೆ ಮತ್ತು ಬೈಬಲಿನ ಸಲಹೆಯನ್ನು ಪಾಲಿಸಲು ಬೇರೆಯವರಿಗೆ ಸಹಾಯ ಮಾಡುತ್ತೇವೆ.—ಗಲಾ. 6:1; 2 ತಿಮೊ. 2:24, 25.

ಪ್ರೀತಿಯನ್ನು ಧರಿಸಿಕೊಳ್ಳಿರಿ

18. ಪ್ರೀತಿ ಮತ್ತು ನಿಷ್ಪಕ್ಷಪಾತ ಹೇಗೆ ಒಂದಕ್ಕೊಂದು ಸಂಬಂಧಿಸಿದೆ?

18 ಇಲ್ಲಿ ವರೆಗೂ ನಾವು ಚರ್ಚಿಸಿರುವ ಎಲ್ಲ ಗುಣಗಳಿಗೂ ಪ್ರೀತಿಗೂ ಸಂಬಂಧವಿದೆ. ಇದಕ್ಕೊಂದು ಉದಾಹರಣೆ ಶಿಷ್ಯ ಯಾಕೋಬನು ಸಹೋದರರಿಗೆ ಕೊಟ್ಟ ಬುದ್ಧಿವಾದದಲ್ಲಿ ಸಿಗುತ್ತದೆ. ಆ ಸಹೋದರರು ಬಡವರಿಗಿಂತ ಶ್ರೀಮಂತರಿಗೆ ಹೆಚ್ಚು ಮಾನಮರ್ಯಾದೆ ಕೊಡುತ್ತಿದ್ದರು. ಅವರ ಈ ವರ್ತನೆ “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ದೇವರ ಆಜ್ಞೆಗೆ ವಿರುದ್ಧವಾಗಿದೆಯೆಂದು ಹೇಳಿದನು. ನಂತರ ಅವನು ಹೇಳಿದ್ದು: ‘ನೀವು ಪಕ್ಷಪಾತ ತೋರಿಸುತ್ತಾ ಮುಂದುವರಿಯುವುದಾದರೆ, ಪಾಪಮಾಡುವವರಾಗಿದ್ದೀರಿ.’ (ಯಾಕೋ. 2:8, 9) ನಮಗೆ ಜನರ ಮೇಲೆ ಪ್ರೀತಿಯಿದ್ದರೆ ಅವರ ವಿದ್ಯಾಭ್ಯಾಸ, ಜನಾಂಗ, ಸಮಾಜದಲ್ಲಿ ಅವರಿಗಿರುವ ಸ್ಥಾನಮಾನ ನೋಡಿ ಭೇದಭಾವ ಮಾಡುವುದಿಲ್ಲ. ನಾವು ನಿಷ್ಪಕ್ಷಪಾತದ ಸೋಗು ಹಾಕಿಕೊಳ್ಳಲು ಸಾಧ್ಯವಿಲ್ಲ. ಅದು ನಮ್ಮ ವ್ಯಕ್ತಿತ್ವದ ಭಾಗವಾಗಿರಬೇಕು, ಮನದಾಳದಿಂದ ತೋರಿಸುವ ಗುಣ ಆಗಿರಬೇಕು.

19. ನಾವು ಪ್ರೀತಿಯನ್ನು ಧರಿಸಿಕೊಳ್ಳುವುದು ಯಾಕೆ ಪ್ರಾಮುಖ್ಯ?

19 ಪ್ರೀತಿಯು “ತಾಳ್ಮೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ.” ಅದು “ಉಬ್ಬಿಕೊಳ್ಳುವುದಿಲ್ಲ.” (1 ಕೊರಿಂ. 13:4, ನೂತನ ಲೋಕ ಭಾಷಾಂತರ ಪರಿಷ್ಕೃತ ಆವೃತ್ತಿ) ಜನರಿಗೆ ನಾವು ಸುವಾರ್ತೆ ಸಾರುವುದನ್ನು ಮುಂದುವರಿಸಬೇಕಾದರೆ ನಮ್ಮಲ್ಲಿ ತಾಳ್ಮೆ, ದಯೆ, ದೀನತೆ ಇರಬೇಕು. (ಮತ್ತಾ. 28:19) ಈ ಗುಣಗಳಿದ್ದರೆ ಸಭೆಯಲ್ಲಿರುವ ನಮ್ಮ ಎಲ್ಲ ಸಹೋದರ ಸಹೋದರಿಯರ ಜೊತೆ ಹೊಂದಿಕೊಂಡು ಹೋಗಲೂ ಸುಲಭವಾಗುತ್ತದೆ. ನಾವೆಲ್ಲರೂ ಇಂಥ ಪ್ರೀತಿ ತೋರಿಸುವಾಗ ನಮ್ಮ ಸಭೆಗಳಲ್ಲಿ ಐಕ್ಯವಿರುತ್ತದೆ. ಇದು ಯೆಹೋವನಿಗೆ ಮಹಿಮೆ ತರುತ್ತದೆ. ಬೇರೆಯವರು ನಮ್ಮ ಈ ಐಕ್ಯವನ್ನು ನೋಡಿ ಸತ್ಯದ ಕಡೆಗೆ ಆಕರ್ಷಿತರಾಗುತ್ತಾರೆ. ಬೈಬಲಿನಲ್ಲಿ ಹೊಸ ವ್ಯಕ್ತಿತ್ವದ ಕುರಿತ ವರ್ಣನೆಯ ಕೊನೆಯಲ್ಲಿ “ಇದೆಲ್ಲಾದರ ಜೊತೆಗೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಏಕೆಂದರೆ ಇದು ಐಕ್ಯದ ಪರಿಪೂರ್ಣ ಬಂಧವಾಗಿದೆ” ಎಂದು ಕೊಡಲಾಗಿರುವ ಮಾತುಗಳು ಎಷ್ಟು ಸೂಕ್ತವಾಗಿವೆ!—ಕೊಲೊ. 3:14.

‘ನವೀಕರಿಸಲ್ಪಡುತ್ತಾ ಇರಿ’

20. (ಎ) ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು? ಯಾಕೆ? (ಬಿ) ಯಾವ ರೀತಿಯ ಭವಿಷ್ಯವನ್ನು ನಾವು ಎದುರುನೋಡಬಹುದು?

20 ನಾವೆಲ್ಲರೂ ಹೀಗೆ ಕೇಳಿಕೊಳ್ಳಬೇಕು: ‘ಹಳೆ ವ್ಯಕ್ತಿತ್ವವನ್ನು ತೆಗೆದುಹಾಕಿ ಅದನ್ನು ದೂರವಿಡಲಿಕ್ಕಾಗಿ ನಾನಿನ್ನೂ ಯಾವ್ಯಾವ ಬದಲಾವಣೆಗಳನ್ನು ಮಾಡಬೇಕು?’ ನಾವು ಯೆಹೋವನಿಗೆ ಪ್ರಾರ್ಥಿಸಿ ಸಹಾಯಮಾಡುವಂತೆ ಬೇಡಿಕೊಳ್ಳಬೇಕು. ನಾವು ‘ದೇವರ ರಾಜ್ಯಕ್ಕೆ ಬಾಧ್ಯರಾಗಬೇಕಾದರೆ’ ನಮ್ಮಲ್ಲಿರುವ ತಪ್ಪು ಯೋಚನೆಗಳು, ಕ್ರಿಯೆಗಳನ್ನು ತಿದ್ದಲು ಶ್ರಮಪಡಬೇಕು. (ಗಲಾ. 5:19-21) ನಾವು ಹೀಗೂ ಕೇಳಿಕೊಳ್ಳಬೇಕು: ‘ಯೆಹೋವನನ್ನು ಮೆಚ್ಚಿಸಲಿಕ್ಕಾಗಿ ನನ್ನ ಯೋಚನಾ ರೀತಿಯನ್ನು ಸರಿಪಡಿಸುತ್ತಾ ಇದ್ದೇನಾ?’ (ಎಫೆ. 4:23, 24) ನಾವು ಅಪರಿಪೂರ್ಣರಾಗಿರುವುದರಿಂದ, ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ಮತ್ತು ಅದನ್ನು ಉಳಿಸಿಕೊಳ್ಳಲು ತುಂಬ ಕಷ್ಟಪಡಬೇಕು. ಇದು ಮುಂದುವರಿಯುತ್ತಾ ಇರುವ ಒಂದು ಕ್ರಿಯೆ ಆಗಿದೆ. ಭವಿಷ್ಯದಲ್ಲಿ ಭೂಮಿಯಲ್ಲಿ ಇರುವವರೆಲ್ಲರೂ ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡು, ಯೆಹೋವನ ಸೊಗಸಾದ ಗುಣಗಳನ್ನು ಪರಿಪೂರ್ಣವಾಗಿ ಅನುಕರಿಸುವ ಸಮಯದ ಬಗ್ಗೆ ಯೋಚಿಸಿ. ಆಗ ಜೀವನ ತುಂಬ ಸುಂದರವಾಗಿರಲಿದೆ!