ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿಗೂ ನಿಮ್ಮ ಭವಿಷ್ಯಕ್ಕೂ ಇರುವ ನಂಟು

ಬೈಬಲಿಗೂ ನಿಮ್ಮ ಭವಿಷ್ಯಕ್ಕೂ ಇರುವ ನಂಟು

ನೆನಸಿ, ಒಂದು ದಿನ ನೀವು ದಾರಿಯಲ್ಲಿ ನಡಕೊಂಡು ಹೋಗುತ್ತಾ ಇದ್ದೀರಿ. ಸೂರ್ಯ ಮುಳುಗಿ ತುಂಬ ಹೊತ್ತಾಗಿದೆ. ಎಲ್ಲಾ ಕಡೆ ಕತ್ತಲಿದೆ. ಆದರೂ ನಿಮಗೆ ಗಾಬರಿ ಆಗುತ್ತಿಲ್ಲ. ಏಕೆಂದರೆ ನಿಮ್ಮ ಕೈಯಲ್ಲಿ ಒಂದು ಒಳ್ಳೇ ಟಾರ್ಚು ಇದೆ. ಅದನ್ನು ಕೆಳಮುಖವಾಗಿ ಹಿಡಿದಾಗ ನಿಮ್ಮ ಕಾಲಿನ ಹತ್ತಿರ ಏನಿದೆ ಅಂತ ಸ್ಪಷ್ಟವಾಗಿ ಕಾಣುತ್ತದೆ. ಅದನ್ನು ಮುಂದೆ ಹಿಡಿದಾಗ ಅದರ ಬೆಳಕು ಕತ್ತಲನ್ನು ತೂರಿಕೊಂಡು ಹೋಗಿ ನಿಮಗೆ ದೂರದ ವರೆಗೆ ದಾರಿ ತೋರಿಸುತ್ತದೆ.

ಬೈಬಲ್‌ ಕೆಲವೊಂದು ವಿಧಗಳಲ್ಲಿ ಈ ಟಾರ್ಚಿನಂತಿದೆ. ಹಿಂದಿನ ಲೇಖನಗಳಲ್ಲಿ ನೋಡಿದಂತೆ ದೇವರ ವಾಕ್ಯ ನಮಗೆ ಹತ್ತಿರದಲ್ಲಿರುವ, ಅಂದರೆ ಈ ಅನಿಶ್ಚಿತ ಲೋಕದಲ್ಲಿ ಪ್ರತಿದಿನ ಎದುರಾಗುವಂಥ ಸಮಸ್ಯೆಗಳ ವಿಷಯದಲ್ಲಿ ಸಹಾಯಮಾಡುತ್ತದೆ. ಅಷ್ಟೇ ಅಲ್ಲ, ಅದು ನಮ್ಮ ಭವಿಷ್ಯದ ಮೇಲೂ ಬೆಳಕು ಚೆಲ್ಲುತ್ತದೆ. ನಿತ್ಯ ಸಂತೋಷ, ಸಂತೃಪ್ತಿಗೆ ನಡೆಸುವಂಥ ದಾರಿ ಯಾವುದೆಂದು ತೋರಿಸಿಕೊಡುತ್ತದೆ ಮತ್ತು ಅದರಲ್ಲಿ ನಡೆಯಲು ಸಹಾಯಮಾಡುತ್ತದೆ. (ಕೀರ್ತನೆ 119:105) ಹೇಗೆ?

ಭವಿಷ್ಯಕ್ಕಾಗಿ ಬೈಬಲ್‌ ನಮಗೆ ನೈಜವಾದ ನಿರೀಕ್ಷೆಯನ್ನು ಕೊಡುವ ಎರಡು ವಿಧಗಳನ್ನು ಈಗ ಚರ್ಚಿಸೋಣ: 1 ನಮ್ಮ ಬದುಕಿಗೊಂದು ಉದ್ದೇಶ ಕೊಡುತ್ತದೆ ಮತ್ತು 2 ನಮ್ಮ ಸೃಷ್ಟಿಕರ್ತನ ಜೊತೆ ಶಾಶ್ವತ ಸ್ನೇಹವನ್ನು ಬೆಳೆಸಿಕೊಳ್ಳುವುದು ಹೇಗೆಂದು ಕಲಿಸುತ್ತದೆ.

1 ಬದುಕಿಗೊಂದು ಉದ್ದೇಶ

ನಮ್ಮ ಸಮಸ್ಯೆಗಳನ್ನು ನಿಭಾಯಿಸುವ ವಿಷಯದಲ್ಲಿ ಬೈಬಲ್‌ ಭರವಸಾರ್ಹ ಸಲಹೆಸೂಚನೆ ಕೊಡುತ್ತದೆ. ಹಾಗಂತ ಅದೊಂದು ಸ್ವಸಹಾಯದ ಪುಸ್ತಕದಂತೆ ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸುವುದು ಹೇಗೆಂದು ಮಾತ್ರ ತೋರಿಸಿಕೊಡಲ್ಲ. ಬದಲಾಗಿ ಯಾವಾಗಲೂ ನಮ್ಮ ಸ್ವಂತ ಚಿಂತೆ, ಸಮಸ್ಯೆಗಳಿಗೆ ಮಾತ್ರ ಗಮನಕೊಡದೆ ಬೇರೆಯವರ ಬಗ್ಗೆಯೂ ಕಾಳಜಿವಹಿಸುವಂತೆ ಕಲಿಸುತ್ತದೆ. ಆಗ ನಮ್ಮ ಜೀವನಕ್ಕೆ ನಿಜವಾದ ಅರ್ಥವಿರುತ್ತದೆ.

ಇದಕ್ಕೊಂದು ಉದಾಹರಣೆ, “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಎಂಬ ಬೈಬಲ್‌ ತತ್ವ. (ಅಪೊಸ್ತಲರ ಕಾರ್ಯಗಳು 20:35) ಕಷ್ಟದಲ್ಲಿದ್ದ ಒಬ್ಬರಿಗೆ ನೀವು ಏನಾದರೂ ಕೊಟ್ಟು ಸಹಾಯಮಾಡಿದ ಸಂದರ್ಭ ನೆನಪಿದೆಯಾ? ಅಥವಾ ಸ್ನೇಹಿತರೊಬ್ಬರು ಮನದಾಳದ ನೋವನ್ನು ನಿಮ್ಮ ಹತ್ತಿರ ಹೇಳಿಕೊಂಡಾಗ ಅವರಿಗೆ ಕಿವಿಗೊಡುವ ಮೂಲಕ ನಿಮ್ಮನ್ನೇ ನೀಡಿಕೊಂಡಿದ್ದೀರಾ? ಹೀಗೆ ಸ್ವಲ್ಪ ಸಂತೋಷ ಪಡೆಯಲು ಬೇರೊಬ್ಬರಿಗೆ ಸಹಾಯಮಾಡಿದಾಗ ನಿಮಗೆ ಒಂದು ರೀತಿಯ ಸಂತೃಪ್ತಿ ಸಿಕ್ಕಿತಲ್ಲವಾ?

ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಬೇರೆಯವರಿಗೆ ಕೊಡುವಾಗ ಸಿಗುವಷ್ಟು ಸಂತೋಷ ಇನ್ಯಾವುದರಲ್ಲೂ ಸಿಗುವುದಿಲ್ಲ. ಒಬ್ಬ ಲೇಖಕನು ಹೀಗಂದನು: “ಪ್ರತಿಫಲವನ್ನು ನಿರೀಕ್ಷಿಸದೇ ನಿಮ್ಮನ್ನೇ ಬೇರೆಯವರಿಗೆ ನೀಡಿಕೊಂಡರೆ ನೀವು ಕೊಟ್ಟದ್ದಕ್ಕಿಂತಲೂ ಹೆಚ್ಚು ನಿಮಗೆ ಸಿಕ್ಕೇ ಸಿಗುತ್ತದೆ.” ಉಪಕಾರವನ್ನು ಹಿಂದಿರುಗಿಸಲು ಆಗದವರಿಗೆ ನಮ್ಮನ್ನೇ ನೀಡಿಕೊಳ್ಳುವಾಗ ನಾವು ಪ್ರತಿಫಲ ನಿರೀಕ್ಷಿಸದೇ ಇದ್ದರೂ ಸೃಷ್ಟಿಕರ್ತನಿಂದ ನಮಗೆ ಖಂಡಿತವಾಗಿ ಪ್ರತಿಫಲ ಸಿಗುತ್ತದೆ. ಹೀಗೆ ನಾವು ಆತನ ಜೊತೆಯಲ್ಲಿ ಕೆಲಸ ಮಾಡುವುದರಿಂದ ಆತನು ನಮ್ಮ ಆ ದಯಾಪರ ಕೆಲಸಗಳನ್ನು ತನಗೆ ಕೊಟ್ಟ ಸಾಲದಂತೆ ಎಣಿಸುತ್ತಾನೆ. (ಜ್ಞಾನೋಕ್ತಿ 19:17) ನಾವು ಬಡವರಿಗೆ ಕೊಡುವ ಸಹಾಯವನ್ನು ತುಂಬ ಅಮೂಲ್ಯವೆಂದೆಣಿಸುತ್ತಾನೆ. ಅದಕ್ಕೆ ಪ್ರತಿಫಲವಾಗಿ ನಮಗೆ ಸುಂದರವಾದ ತೋಟವಾಗಲಿರುವ ಈ ಭೂಮಿಯಲ್ಲೇ ಶಾಶ್ವತ ಜೀವನ ಕೊಡುವುದಾಗಿ ಮಾತುಕೊಟ್ಟಿದ್ದಾನೆ! ಇದು ನಿಜಕ್ಕೂ ಭವಿಷ್ಯಕ್ಕಾಗಿ ಒಂದು ರೋಮಾಂಚಕಾರಿ ನಿರೀಕ್ಷೆ ಆಗಿದೆಯಲ್ಲವೇ?—ಕೀರ್ತನೆ 37:29; ಲೂಕ 14:12-14. *

ಎಲ್ಲಕ್ಕಿಂತಲೂ ಮುಖ್ಯವಾಗಿ ಸತ್ಯ ದೇವರಾದ ಯೆಹೋವನನ್ನು ಆರಾಧಿಸುವಾಗ ಮಾತ್ರ ಜೀವನಕ್ಕೆ ನಿಜವಾದ ಉದ್ದೇಶ ಇರುತ್ತದೆ ಎಂದು ಬೈಬಲ್‌ ಕಲಿಸುತ್ತದೆ. ಆತನಿಗೆ ಸ್ತುತಿ, ಮಾನ, ವಿಧೇಯತೆಯನ್ನು ಕೊಡಬೇಕೆಂದು ಬೈಬಲ್‌ ಉತ್ತೇಜಿಸುತ್ತದೆ. ಯಾಕೆಂದರೆ ಅದನ್ನು ಪಡೆಯಲು ಆತನು ಅರ್ಹನಾಗಿದ್ದಾನೆ. (ಪ್ರಸಂಗಿ 12:13; ಪ್ರಕಟನೆ 4:11) ಇದನ್ನು ಮಾಡುವಾಗ ನಾವು ಒಂದು ವಿಸ್ಮಯಕಾರಿ ವಿಷಯವನ್ನು ಮಾಡುತ್ತಿದ್ದೇವೆ: ನಮ್ಮ ಸೃಷ್ಟಿಕರ್ತನನ್ನು ಸಂತೋಷಪಡಿಸುತ್ತೇವೆ. ಆತನೇ ನಮಗೆ ಹೀಗನ್ನುತ್ತಾನೆ: “ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು.” (ಜ್ಞಾನೋಕ್ತಿ 27:11) ಸ್ವಲ್ಪ ಯೋಚಿಸಿ—ಬೈಬಲಿನಲ್ಲಿರುವ ತತ್ವಗಳ ಮೇಲೆ ಆಧರಿತವಾಗಿ ವಿವೇಕದ ನಿರ್ಣಯಗಳನ್ನು ಮಾಡುವಾಗ ಸ್ವರ್ಗದಲ್ಲಿರುವ ನಮ್ಮ ಪ್ರೀತಿಯ ತಂದೆಯಾದ ದೇವರಿಗೆ ಸಂತೋಷ ತರುತ್ತೇವೆ! ಆತನಿಗೆ ಯಾಕೆ ಸಂತೋಷ ಆಗುತ್ತದೆ? ಆತನಿಗೆ ನಮ್ಮ ಬಗ್ಗೆ ಕಾಳಜಿ ಇರುವುದರಿಂದ ಮತ್ತು ಆತನ ಮಾರ್ಗದರ್ಶನ ಪಾಲಿಸಿ ನಮಗೆ ಪ್ರಯೋಜನ ಆಗಬೇಕೆಂದು ಆತನು ಬಯಸುವುದರಿಂದಲೇ. (ಯೆಶಾಯ 48:17, 18) ಇಡೀ ವಿಶ್ವದ ಒಡೆಯನಾದ ಆತನನ್ನು ಆರಾಧಿಸಿ, ಆತನಿಗೆ ಸಂತೋಷ ತರುವಂಥ ವಿಧದಲ್ಲಿ ಜೀವಿಸುವುದೇ ಬದುಕಿನ ಅತೀ ಶ್ರೇಷ್ಠ ಉದ್ದೇಶ. ಇದಕ್ಕಿಂತಲೂ ಶ್ರೇಷ್ಠವಾದ ಉದ್ದೇಶ ಇನ್ನೇನಿದೆ ಹೇಳಿ?

2 ನಮ್ಮ ಸೃಷ್ಟಿಕರ್ತನೊಟ್ಟಿಗೆ ಸ್ನೇಹ

ನಮ್ಮ ಸೃಷ್ಟಿಕರ್ತನೊಟ್ಟಿಗೆ ಸ್ನೇಹ ಬೆಳೆಸಿಕೊಳ್ಳುವುದರ ಬಗ್ಗೆಯೂ ಬೈಬಲ್‌ ಕಲಿಸುತ್ತದೆ. ಅದು ಹೀಗನ್ನುತ್ತದೆ: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ಸರ್ವಶಕ್ತನಾಗಿರುವ ಸೃಷ್ಟಿಕರ್ತನ ಸ್ನೇಹಿತರಾಗಲು ನಿಜವಾಗಲೂ ಸಾಧ್ಯನಾ ಅಂತ ನಮಗೆ ಕೆಲವೊಮ್ಮೆ ಸಂಶಯ ಹುಟ್ಟಬಹುದು. ಆದರೆ ಬೈಬಲ್‌ ಕೊಡುವ ಆಶ್ವಾಸನೆ ಏನೆಂದರೆ, ನಾವು ‘ದೇವರನ್ನು ಹುಡುಕಿದರೆ’ ಆತನನ್ನು ‘ನಿಜವಾಗಿಯೂ ಕಂಡುಹಿಡಿಯುವೆವು’ ಯಾಕೆಂದರೆ ಆತನು ನಮ್ಮಲ್ಲಿ ಒಬ್ಬನಿಗೂ ‘ಬಹಳ ದೂರವಾಗಿರುವುದಿಲ್ಲ.’ (ಅಪೊಸ್ತಲರ ಕಾರ್ಯಗಳು 17:27) ನಾವು ದೇವರ ಸ್ನೇಹಿತರಾಗುವುದರ ಬಗ್ಗೆ ಬೈಬಲ್‌ ಕೊಡುವ ಸಲಹೆ ನಮ್ಮ ಭವಿಷ್ಯಕ್ಕೆ ತುಂಬ ಉಪಯುಕ್ತವಾಗಿದೆ. ಅದು ಹೇಗೆ?

ಇದರ ಬಗ್ಗೆ ಸ್ವಲ್ಪ ಯೋಚಿಸಿ: ನಾವೆಷ್ಟೇ ಪ್ರಯತ್ನಿಸಿದರೂ ನಮ್ಮಲ್ಲಿ ಒಬ್ಬರೂ ಕಡೇ ಶತ್ರುವಾದ ಮರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. (1 ಕೊರಿಂಥ 15:26) ಆದರೆ ದೇವರು ನಿತ್ಯಕ್ಕೂ ಇರುವಾತನು, ಯಾವತ್ತೂ ಸಾಯದವನು. ತನ್ನ ಸ್ನೇಹಿತರೂ ಸದಾಕಾಲ ಬದುಕಿರಬೇಕೆಂದು ಆತನು ಬಯಸುತ್ತಾನೆ. ತನ್ನನ್ನು ಹುಡುಕುವವರ ವಿಷಯದಲ್ಲಿ ಆತನು ಏನು ಬಯಸುತ್ತಾನೆಂದು ಬೈಬಲ್‌ ಈ ಸರಳ, ಸುಂದರ ಪದಗಳಲ್ಲಿ ವರ್ಣಿಸುತ್ತದೆ: “ನೀವು ಸದಾಕಾಲ ಜೀವನವನ್ನು ಆನಂದಿಸುವಂತಾಗಲಿ.”—ಕೀರ್ತನೆ 22:26, ನೂತನ ಲೋಕ ಭಾಷಾಂತರ.

ದೇವರೊಟ್ಟಿಗೆ ಶಾಶ್ವತ ಸ್ನೇಹವನ್ನು ಬೆಳೆಸಿಕೊಳ್ಳಲು ನೀವೇನು ಮಾಡಬೇಕು? ಆತನ ವಾಕ್ಯವಾದ ಬೈಬಲಿನಿಂದ ಆತನ ಬಗ್ಗೆ ಕಲಿಯುತ್ತಾ ಇರಿ. (ಯೋಹಾನ 17:3; 2 ತಿಮೊಥೆಯ 3:16) ಬೈಬಲನ್ನು ಅರ್ಥಮಾಡಿಕೊಳ್ಳಲು ಆತನ ಸಹಾಯಕ್ಕಾಗಿ ಬೇಡಿಕೊಳ್ಳಿ. ವಿವೇಕಕ್ಕಾಗಿ ಮನಃಪೂರ್ವಕವಾಗಿ “ದೇವರನ್ನು ಕೇಳಿಕೊಳ್ಳುತ್ತಾ” ಇರುವುದಾದರೆ ಆತನು ಅದನ್ನು ದಯಪಾಲಿಸುವನೆಂದು ಬೈಬಲ್‌ ಆಶ್ವಾಸನೆ ಕೊಡುತ್ತದೆ. * (ಯಾಕೋಬ 1:5) ಕೊನೆಯದಾಗಿ, ಕಲಿತದ್ದನ್ನು ಜೀವನದಲ್ಲಿ ಅನ್ವಯಿಸಲು ಪ್ರಯತ್ನಿಸಿ. ಹೀಗೆ ದೇವರ ವಾಕ್ಯ ಇಂದೂ ಎಂದೆಂದೂ ನಿಮ್ಮ “ಕಾಲಿಗೆ ದೀಪ,” “ದಾರಿಗೆ ಬೆಳಕೂ” ಆಗಿರಲಿ.—ಕೀರ್ತನೆ 119:105.

^ ಪ್ಯಾರ. 8 ಸುಂದರವಾದ ತೋಟವಾಗಲಿರುವ ಈ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವುದರ ಕುರಿತ ದೇವರ ವಾಗ್ದಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಮಗೆ ಏನು ಕಲಿಸುತ್ತದೆ? ಪುಸ್ತಕದ 3​ನೇ ಅಧ್ಯಾಯ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಪ್ಯಾರ. 13 ಬೈಬಲಿನ ಕುರಿತ ನಿಮ್ಮ ತಿಳುವಳಿಕೆಯನ್ನು ಹೆಚ್ಚಿಸಲಿಕ್ಕಾಗಿ ಯೆಹೋವನ ಸಾಕ್ಷಿಗಳು ಉಚಿತ ಬೈಬಲ್‌ ಕೋರ್ಸ್‌ ನಡೆಸುತ್ತಾರೆ. ಇದರ ಬಗ್ಗೆ ಹೆಚ್ಚು ತಿಳಿಯಲು www.pr418.com/knನಲ್ಲಿ ಬೈಬಲ್‌ ಅಧ್ಯಯನ ಅಂದರೇನು? ಎಂಬ ವಿಡಿಯೋವನ್ನು ದಯವಿಟ್ಟು ನೋಡಿ. (ಪ್ರಕಾಶನಗಳು > ವಿಡಿಯೋಗಳು ಎಂಬಲ್ಲಿ ನೋಡಿ)

ದೇವರು ನಿತ್ಯಕ್ಕೂ ಇರುವಾತನು, ತನ್ನ ಸ್ನೇಹಿತರು ಸದಾಕಾಲ ಬದುಕಿರಬೇಕೆಂದು ಬಯಸುತ್ತಾನೆ