ದೇವರು ಎಲ್ಲ ಕಷ್ಟಗಳನ್ನು ಬೇಗನೆ ಕೊನೆಗೊಳಿಸಲಿದ್ದಾನೆ!
“ಯೆಹೋವನೇ, ನಾನು ಮೊರೆಯಿಡುತ್ತಿದ್ದರೂ ನೀನು ಎಷ್ಟು ಕಾಲ ಕೇಳದೇ ಇರುವಿ? ಹಿಂಸೆ ಹಿಂಸೆ ಎಂದು ನಿನ್ನನ್ನು ಕೂಗಿಕೊಂಡರೂ ರಕ್ಷಿಸದೆ ಇರುವಿ”? (ಹಬಕ್ಕೂಕ 1:2, 3) ಈ ಮಾತುಗಳನ್ನು ಹೇಳಿದವನು ಹಬಕ್ಕೂಕನು. ಇವನೊಬ್ಬ ಒಳ್ಳೇ ವ್ಯಕ್ತಿಯಾಗಿದ್ದ. ದೇವರ ಕೃಪೆ ಅವನ ಮೇಲಿತ್ತು. ಆದರೆ ಅವನ ಆ ಮಾತುಗಳು ದೇವರಲ್ಲಿ ಅವನಿಗೆ ನಂಬಿಕೆ ಕಡಿಮೆಯಾಗಿತ್ತೆಂದು ಸೂಚಿಸಿದವಾ? ಖಂಡಿತ ಇಲ್ಲ. ಕಷ್ಟಗಳಿಗೆ ಕೊನೆ ತರಲು ತನ್ನ ಒಂದು ನೇಮಿತ ಸಮಯ ಇದೆಯೆಂದು ದೇವರು ಹಬಕ್ಕೂಕನಿಗೆ ಆಶ್ವಾಸನೆ ಕೊಟ್ಟನು.—ಹಬಕ್ಕೂಕ 2:2, 3.
ನೀವು ಅಥವಾ ನಿಮ್ಮ ಆತ್ಮೀಯರೊಬ್ಬರು ಕಷ್ಟದಲ್ಲಿರುವಾಗ, ದೇವರು ತುಂಬ ತಡಮಾಡುತ್ತಿದ್ದಾನೆ, ಇಷ್ಟರೊಳಗೆ ಏನಾದರೂ ಕ್ರಮ ಕೈಗೊಳ್ಳಬೇಕಿತ್ತೆಂದು ಅನಿಸಬಹುದು. ಆದರೆ ಬೈಬಲ್ ನಮಗೆ ಹೀಗೆ ಧೈರ್ಯತುಂಬಿಸುತ್ತದೆ: “ಕೆಲವರು ನೆನಸುವ ಪ್ರಕಾರ ತನ್ನ ವಾಗ್ದಾನದ ವಿಷಯದಲ್ಲಿ ಯೆಹೋವನು ತಡಮಾಡುವವನಲ್ಲ, ಬದಲಾಗಿ ಯಾವನಾದರೂ ನಾಶವಾಗುವುದನ್ನು ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪವನ್ನು ಹೊಂದುವುದನ್ನು ಬಯಸುವಾತನಾಗಿರುವುದರಿಂದ ನಿಮ್ಮ ವಿಷಯದಲ್ಲಿ ತಾಳ್ಮೆಯಿಂದಿದ್ದಾನೆ.”—2 ಪೇತ್ರ 3:9.
ದೇವರು ಯಾವಾಗ ಕ್ರಮ ಕೈಗೊಳ್ಳುವನು?
ತುಂಬ ಬೇಗ ಕೈಗೊಳ್ಳಲಿದ್ದಾನೆ! “ವಿಷಯಗಳ ವ್ಯವಸ್ಥೆಯ” ಅಥವಾ ಈ ಲೋಕದ ಕಡೇ ದಿವಸಗಳನ್ನು ಗುರುತಿಸುವಂಥ ವಿಭಿನ್ನ ಪರಿಸ್ಥಿತಿಗಳನ್ನು ಒಂದು ನಿರ್ದಿಷ್ಟ ಸಂತತಿಯವರು ನೋಡಲಿದ್ದಾರೆಂದು ಯೇಸು ಪ್ರಕಟಿಸಿದ್ದನು. (ಮತ್ತಾಯ 24:3-42) ಆತನ ಆ ಪ್ರವಾದನೆ ನಮ್ಮ ದಿನದಲ್ಲಿ ನೆರವೇರುತ್ತಿದೆ. ಹಾಗಾಗಿ ಮಾನವ ವ್ಯವಹಾರಗಳಲ್ಲಿ ದೇವರು ಮಧ್ಯಪ್ರವೇಶಿಸುವ ಸಮಯ ತುಂಬ ಹತ್ತಿರವಿದೆಯೆಂದು ಗೊತ್ತಾಗುತ್ತದೆ. *
ಆದರೆ ದೇವರು ಎಲ್ಲ ಕಷ್ಟಗಳನ್ನು ಹೇಗೆ ಕೊನೆಗೊಳಿಸುವನು? ಯೇಸು ಈ ಭೂಮಿಯಲ್ಲಿದ್ದಾಗ ಮಾನವರ ಕಷ್ಟಗಳನ್ನು ತೆಗೆದುಹಾಕಲು ದೇವರಿಗಿರುವ ಶಕ್ತಿಯನ್ನು ತೋರಿಸಿದನು. ಇದಕ್ಕೆ ಕೆಲವು ಉದಾಹರಣೆಗಳನ್ನು ನೋಡಿ:
ನೈಸರ್ಗಿಕ ವಿಪತ್ತುಗಳು: ಯೇಸು ಮತ್ತು ಅವನ ಅಪೊಸ್ತಲರು ಗಲಿಲಾಯ ಸಮುದ್ರದಲ್ಲಿ ದೋಣಿಯಲ್ಲಿ ಹೋಗುತ್ತಿದ್ದಾಗ ಭಯಂಕರವಾದ ಬಿರುಗಾಳಿಯಿಂದಾಗಿ ಅವರ ದೋಣಿ ಮುಳುಗಿಹೋಗುವ ಅಪಾಯದಲ್ಲಿತ್ತು. ಆಗ ಯೇಸು ತನಗೂ ತನ್ನ ತಂದೆಯಾದ ದೇವರಿಗೂ ನೈಸರ್ಗಿಕ ಶಕ್ತಿಗಳ ಮೇಲೆ ನಿಯಂತ್ರಣವಿದೆ ಎಂದು ತೋರಿಸಿದನು. (ಕೊಲೊಸ್ಸೆ 1:15, 16) ಯೇಸು “ಷ್! ಸುಮ್ಮನಿರು!” ಎಂದು ಹೇಳಿದನು ಅಷ್ಟೇ. ಪರಿಣಾಮ? “ಬಿರುಗಾಳಿಯು ನಿಂತು ಎಲ್ಲವೂ ಶಾಂತವಾಯಿತು.”—ಮಾರ್ಕ 4:35-39.
ಕಾಯಿಲೆಗಳು: ಯೇಸುವಿಗೆ ಕುರುಡರನ್ನು, ಕುಂಟರನ್ನು ಹಾಗೂ ಮೂರ್ಛೆರೋಗ, ಕುಷ್ಠರೋಗ ಮತ್ತು ಬೇರಾವುದೇ ಕಾಯಿಲೆ ಇರುವವರನ್ನು ವಾಸಿಮಾಡುವ ಶಕ್ತಿ ಇತ್ತೆಂದು ಎಲ್ಲರಿಗೆ ತಿಳಿದಿತ್ತು. ಆತನು “ಅಸ್ವಸ್ಥರಾಗಿದ್ದ ಎಲ್ಲರನ್ನೂ ವಾಸಿಮಾಡಿದನು.”—ಮತ್ತಾಯ 4:23, 24; 8:16; 11:2-5.
ಆಹಾರದ ಕೊರತೆ: ಸ್ವಲ್ಪವೇ ಇದ್ದ ಆಹಾರವನ್ನು ಹೆಚ್ಚಿಸಲು ಯೇಸು ತನ್ನ ತಂದೆ ಕೊಟ್ಟ ಶಕ್ತಿಯನ್ನು ಬಳಸಿದನು. ಅವನು ಭೂಮಿಯಲ್ಲಿದ್ದಾಗ ಎರಡು ಸಲ ಸಾವಿರಾರು ಜನರಿಗೆ ಆಹಾರ ಕೊಟ್ಟನೆಂದು ದಾಖಲಾಗಿದೆ.—ಮತ್ತಾಯ 14:14-21; 15:32-38.
ಮರಣ: ಯೆಹೋವನಿಗೆ ಮರಣದ ಮೇಲೆಯೂ ಶಕ್ತಿಯಿದೆಯೆಂದು, ಯೇಸು ನಡೆಸಿದ ಪುನರುತ್ಥಾನಗಳಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. ಇವುಗಳಲ್ಲಿ ಮೂರನ್ನು ಬೈಬಲಿನಲ್ಲಿ ದಾಖಲಿಸಲಾಗಿದೆ. ಇವರಲ್ಲಿ ಒಬ್ಬ ವ್ಯಕ್ತಿಯನ್ನಂತೂ ಸತ್ತು ನಾಲ್ಕು ದಿನಗಳಾದ ಮೇಲೆ ಯೇಸು ಜೀವಂತಗೊಳಿಸಿದ್ದನು.—ಮಾರ್ಕ 5:35-42; ಲೂಕ 7:11-16; ಯೋಹಾನ 11:3-44.
^ ಪ್ಯಾರ. 5 ಕಡೇ ದಿವಸಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ 32ನೇ ಪಾಠ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. www.pr418.comನಲ್ಲಿ ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.