ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧ್ಯಾತ್ಮಿಕ ವ್ಯಕ್ತಿ ಆಗಿರುವುದು ಅಂದರೆ ಏನು?

ಆಧ್ಯಾತ್ಮಿಕ ವ್ಯಕ್ತಿ ಆಗಿರುವುದು ಅಂದರೆ ಏನು?

“ದೇವರು ಕ್ರಿಸ್ತ ಯೇಸುವಿನಲ್ಲಿದ್ದ ಅದೇ ಮನೋಭಾವವನ್ನು ನಿಮಗೂ ದಯಪಾಲಿಸಲಿ.”—ರೋಮ. 15:5.

ಗೀತೆಗಳು: 84, 5

1, 2. (ಎ) ಆಧ್ಯಾತ್ಮಿಕ ವ್ಯಕ್ತಿಗಳಾಗಿದ್ದರೆ ಯಾವ ಪ್ರಯೋಜನಗಳು ಸಿಗುತ್ತವೆ ಎಂದು ಅನೇಕ ಸಹೋದರ ಸಹೋದರಿಯರು ಹೇಳುತ್ತಾರೆ? (ಬಿ) ಈ ಲೇಖನದಲ್ಲಿ ನಾವು ಯಾವ ಪ್ರಾಮುಖ್ಯ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?

“ಆಧ್ಯಾತ್ಮಿಕತೆ ಬೆಳೆಸಿಕೊಂಡಿದ್ದರಿಂದ ಸಂತೋಷವಾಗಿದ್ದೇನೆ ಮತ್ತು ಜೀವನದಲ್ಲಿ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗಿದೆ” ಎಂದು ಕೆನಡದ ಒಬ್ಬ ಸಹೋದರಿ ಹೇಳುತ್ತಾಳೆ. ಬ್ರಸಿಲ್‌ನಲ್ಲಿರುವ ಒಬ್ಬ ಸಹೋದರ ಹೇಳುವುದೇನೆಂದರೆ: “ನಾವು ಆಧ್ಯಾತ್ಮಿಕ ವ್ಯಕ್ತಿಗಳಾಗಿರಲು ಪ್ರಯತ್ನಿಸಿದ್ದರಿಂದ ನಮ್ಮ ಮದುವೆ ಜೀವನದ 23 ವರ್ಷಗಳನ್ನೂ ಸಂತೋಷವಾಗಿ ಕಳೆದಿದ್ದೇವೆ.” ಫಿಲಿಪೀನ್ಸ್‌ನಲ್ಲಿರುವ ಒಬ್ಬ ಸಹೋದರ ಹೇಳಿದ್ದು: “ಆಧ್ಯಾತ್ಮಿಕತೆ ಬೆಳೆಸಿಕೊಂಡಿದ್ದರಿಂದ ನನಗೆ ಮನಶ್ಶಾಂತಿ ಇದೆ. ಬೇರೆ ಬೇರೆ ಹಿನ್ನೆಲೆಯಿಂದ ಬಂದಿರುವ ಸಹೋದರರೊಂದಿಗೆ ಹೊಂದಿಕೊಂಡು ಹೋಗಲು ಸಾಧ್ಯವಾಗಿದೆ.”

2 ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರೆ ಏನೆಲ್ಲಾ ಪ್ರಯೋಜನ ಸಿಗುತ್ತದೆ ಎಂದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ನಾವು ಸಹ ಆಧ್ಯಾತ್ಮಿಕ ವ್ಯಕ್ತಿಯಾಗಿ ಬೆಳೆದು ಅದರಿಂದ ಸಿಗುವ ಪ್ರಯೋಜನಗಳನ್ನು ಆನಂದಿಸಲು ಏನು ಮಾಡಬೇಕು? ಮೊದಲು, ಬೈಬಲ್‌ ಯಾರನ್ನು ಆಧ್ಯಾತ್ಮಿಕ ವ್ಯಕ್ತಿ ಎಂದು ಕರೆಯುತ್ತದೆ ಎಂದು ನಾವು ತಿಳಿದುಕೊಳ್ಳಬೇಕು. ಈ ಲೇಖನದಲ್ಲಿ ನಾವು ಮೂರು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಿದ್ದೇವೆ. (1) ಆಧ್ಯಾತ್ಮಿಕ ವ್ಯಕ್ತಿ ಆಗಿರುವುದು ಅಂದರೆ ಏನು? (2) ಆಧ್ಯಾತ್ಮಿಕ ವ್ಯಕ್ತಿಯಾಗಿ ಬೆಳೆಯಲು ಯಾರ ಮಾದರಿಗಳು ನಮಗೆ ಸಹಾಯ ಮಾಡುತ್ತವೆ? (3) “ಕ್ರಿಸ್ತನ ಮನಸ್ಸನ್ನು” ಹೊಂದಲು ಪ್ರಯತ್ನಿಸುವಾಗ ಆಧ್ಯಾತ್ಮಿಕ ವ್ಯಕ್ತಿಯಾಗಲು ಹೇಗೆ ಸಹಾಯವಾಗುತ್ತದೆ?

ಒಬ್ಬ ಆಧ್ಯಾತ್ಮಿಕ ವ್ಯಕ್ತಿಯನ್ನು ಗುರುತಿಸುವುದು ಹೇಗೆ?

3. ಭೌತಿಕ ವ್ಯಕ್ತಿ ಮತ್ತು ಆಧ್ಯಾತ್ಮಿಕ ವ್ಯಕ್ತಿಯ ಮಧ್ಯೆ ಇರುವ ವ್ಯತ್ಯಾಸವನ್ನು ಬೈಬಲ್‌ ಹೇಗೆ ವಿವರಿಸುತ್ತದೆ?

3 ಒಬ್ಬ ಆಧ್ಯಾತ್ಮಿಕ ವ್ಯಕ್ತಿಯನ್ನು ಗುರುತಿಸಲು ನಾವು ಮೊದಲಾಗಿ “ಆಧ್ಯಾತ್ಮಿಕ ಮನುಷ್ಯ” ಮತ್ತು “ಭೌತಿಕ ಮನುಷ್ಯನ” ಮಧ್ಯೆ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಇದನ್ನು ಅರ್ಥಮಾಡಿಕೊಳ್ಳಲು ಅಪೊಸ್ತಲ ಪೌಲನು ಸಹಾಯ ಮಾಡುತ್ತಾನೆ. (1 ಕೊರಿಂಥ 2:14-16 ಓದಿ.) ಒಬ್ಬ ಭೌತಿಕ ಮನುಷ್ಯನು “ದೇವರಾತ್ಮದ ವಿಷಯಗಳನ್ನು ಹುಚ್ಚುಮಾತಾಗಿ ಎಣಿಸುವುದರಿಂದ ಅವುಗಳನ್ನು ಸ್ವೀಕರಿಸುವುದಿಲ್ಲ; . . . ಅವನು ಅವುಗಳನ್ನು ತಿಳಿದುಕೊಳ್ಳಲಾರನು.” ಆದರೆ ಒಬ್ಬ ಆಧ್ಯಾತ್ಮಿಕ ವ್ಯಕ್ತಿ “ಎಲ್ಲವನ್ನೂ ಪರೀಕ್ಷಿಸುತ್ತಾನೆ.” ಅವನಲ್ಲಿ ‘ಕ್ರಿಸ್ತನ ಮನಸ್ಸು’ ಇರುತ್ತದೆ ಅಂದರೆ ಅವನು ಕ್ರಿಸ್ತನಂತೆ ಯೋಚಿಸಲು ಪ್ರಯತ್ನಿಸುತ್ತಾನೆ. ನಾವು ಆಧ್ಯಾತ್ಮಿಕ ವ್ಯಕ್ತಿಗಳಾಗಿರಬೇಕೆಂದು ಪೌಲನು ಪ್ರೋತ್ಸಾಹಿಸುತ್ತಾನೆ. ಬೇರೆ ಯಾವ ವಿಧಗಳಲ್ಲಿ ಭೌತಿಕ ವ್ಯಕ್ತಿಗಳು ಆಧ್ಯಾತ್ಮಿಕ ವ್ಯಕ್ತಿಗಳಿಗಿಂತ ಭಿನ್ನರಾಗಿರುತ್ತಾರೆ?

4, 5. ಭೌತಿಕ ವ್ಯಕ್ತಿಯನ್ನು ಗುರುತಿಸುವುದು ಹೇಗೆ?

4 ಒಬ್ಬ ಭೌತಿಕ ವ್ಯಕ್ತಿಯನ್ನು ಗುರುತಿಸಲು ಮೊದಲಾಗಿ ಅವನು ಹೇಗೆ ಯೋಚಿಸುತ್ತಾನೆ ಎಂದು ತಿಳಿದುಕೊಳ್ಳಬೇಕು. ಒಬ್ಬ ಭೌತಿಕ ವ್ಯಕ್ತಿ ಲೋಕದವರಂತೆ ಯೋಚಿಸುತ್ತಾನೆ. ಲೋಕದವರಲ್ಲಿ ಸ್ವಾರ್ಥ ತುಂಬಿದೆ. ಈ ಮನೋಭಾವ ‘ಅವಿಧೇಯತೆಯ ಪುತ್ರರಲ್ಲಿ ಈಗ ಕಾರ್ಯನಡೆಸುತ್ತಿದೆ’ ಎಂದು ಪೌಲನು ಹೇಳಿದ್ದಾನೆ. (ಎಫೆ. 2:2) ಈ ಮನೋಭಾವ ಎಲ್ಲ ಕಡೆ ಇರುವುದರಿಂದ ಜನ ಸ್ವಂತಿಕೆ ಕಳಕೊಂಡು ಬೇರೆಯವರು ಏನು ಮಾಡುತ್ತಾರೋ ಅದನ್ನೇ ಮಾಡುತ್ತಾರೆ. ದೇವರ ಮಾತಿಗೆ ಬೆಲೆ ಕೊಡದೆ ಮನಸ್ಸೋ ಇಚ್ಛೆಯಂತೆ ವರ್ತಿಸುತ್ತಾರೆ. ಇಂಥವರು ಮೂರು ಹೊತ್ತೂ ಭೌತಿಕ ವಿಷಯಗಳ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಅವರಿಗೆ ಅವರ ಸ್ಥಾನಮಾನ, ಆಸ್ತಿಪಾಸ್ತಿ, ವೈಯಕ್ತಿಕ ಹಕ್ಕುಗಳೇ ಎಲ್ಲಕ್ಕಿಂತಲೂ ಮುಖ್ಯ.

5 ಭೌತಿಕ ವ್ಯಕ್ತಿ ಬೈಬಲು ಯಾವುದನ್ನು “ಶರೀರಭಾವದ ಕಾರ್ಯಗಳು” ಎಂದು ಕರೆಯುತ್ತದೋ ಅದನ್ನೇ ಹೆಚ್ಚಾಗಿ ಮಾಡುತ್ತಾನೆ. (ಗಲಾ. 5:19-21) ಪೌಲನು ಕೊರಿಂಥ ಪಟ್ಟಣದಲ್ಲಿದ್ದ ಕ್ರೈಸ್ತರಿಗೆ ಬರೆದ ಮೊದಲ ಪತ್ರದಲ್ಲಿ ಭೌತಿಕ ವ್ಯಕ್ತಿಗಳು ಮಾಡುವಂಥ ಬೇರೆ ವಿಷಯಗಳ ಬಗ್ಗೆ ತಿಳಿಸಿದ್ದಾನೆ. ಭೌತಿಕ ವ್ಯಕ್ತಿಗಳು ಇಬ್ಬರ ಮಧ್ಯೆ ಏನಾದರೂ ಸಮಸ್ಯೆಯಾದರೆ ಒಬ್ಬರ ಪರವಹಿಸಿ ಮಾತಾಡುತ್ತಾರೆ, ಚೆನ್ನಾಗಿರುವವರ ಮಧ್ಯೆ ಜಗಳ ತಂದುಹಾಕುತ್ತಾರೆ, ಅಧಿಕಾರದ ವಿರುದ್ಧ ದಂಗೆ ಏಳುವಂತೆ ಮಾಡುತ್ತಾರೆ, ಒಬ್ಬರನ್ನೊಬ್ಬರು ಕೋರ್ಟಿಗೆ ಎಳೆಯುತ್ತಾರೆ, ತಲೆತನಕ್ಕೆ ಸ್ವಲ್ಪವೂ ಗೌರವ ಕೊಡಲ್ಲ, ತಿನ್ನುವುದು ಕುಡಿಯುವುದೇ ಅವರಿಗೆ ಜೀವನದಲ್ಲಿ ಮುಖ್ಯವಾಗಿರುತ್ತದೆ. ತಪ್ಪು ಮಾಡುವ ಪ್ರಲೋಭನೆ ಎದುರಾದರೆ ಭೌತಿಕ ವ್ಯಕ್ತಿ ಅದನ್ನು ಎದುರಿಸಿ ನಿಲ್ಲಲ್ಲ. (ಜ್ಞಾನೋ. 7:21, 22) ಇವರಲ್ಲಿ ಆಧ್ಯಾತ್ಮಿಕತೆ ಇರುವುದಿಲ್ಲ ಎಂದು ಯೂದನು ಬರೆದಿದ್ದಾನೆ.—ಯೂದ 18, 19.

6. ಆಧ್ಯಾತ್ಮಿಕ ವ್ಯಕ್ತಿಯನ್ನು ಗುರುತಿಸುವುದು ಹೇಗೆ?

6 ಹಾಗಾದರೆ ಒಬ್ಬ ಆಧ್ಯಾತ್ಮಿಕ ವ್ಯಕ್ತಿಯನ್ನು ಗುರುತಿಸುವುದು ಹೇಗೆ? ಇಂಥ ವ್ಯಕ್ತಿ ದೇವರೊಂದಿಗಿರುವ ತನ್ನ ಸಂಬಂಧದ ಬಗ್ಗೆ ತುಂಬ ಯೋಚಿಸುತ್ತಾನೆ. ಪವಿತ್ರಾತ್ಮದ ಮಾರ್ಗದರ್ಶನದಂತೆ ನಡೆಯುತ್ತಾನೆ ಮತ್ತು ಯೆಹೋವನನ್ನು ಅನುಕರಿಸಲು ಪ್ರಯತ್ನಿಸುತ್ತಾನೆ. (ಎಫೆ. 5:1) ವಿಷಯಗಳನ್ನು ಯೆಹೋವನ ದೃಷ್ಟಿಯಿಂದ ನೋಡಲು ಪ್ರಯತ್ನಿಸುತ್ತಾನೆ. ದೇವರು ಯಾವಾಗಲೂ ತನ್ನ ಮುಂದೆಯೇ ಇದ್ದಾನೆ ಅನ್ನುವ ರೀತಿ ನಡಕೊಳ್ಳುತ್ತಾನೆ. ಆಧ್ಯಾತ್ಮಿಕ ವ್ಯಕ್ತಿ ತನ್ನ ಜೀವನದ ಪ್ರತಿಯೊಂದು ವಿಷಯದಲ್ಲೂ ಯೆಹೋವನ ಮಟ್ಟಗಳಿಗೆ ಮಾನ್ಯತೆ ಕೊಡುತ್ತಾನೆ. (ಕೀರ್ತ. 119:33; 143:10) ಅವನು ‘ಶರೀರಭಾವದ ಕಾರ್ಯಗಳನ್ನು’ ಮಾಡುವುದಿಲ್ಲ, ‘ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು’ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಾನೆ. (ಗಲಾ. 5:22, 23) ಆಧ್ಯಾತ್ಮಿಕ ವ್ಯಕ್ತಿಯಾಗಿರುವುದು ಅಂದರೆ ಏನೆಂದು ಅರ್ಥಮಾಡಿಕೊಳ್ಳಲು ಈ ಹೋಲಿಕೆ ಸಹಾಯ ಮಾಡುತ್ತದೆ: ವ್ಯಾಪಾರ-ವ್ಯವಹಾರದಲ್ಲೇ ಸದಾ ಮುಳುಗಿರುವ ವ್ಯಕ್ತಿ ಒಳ್ಳೇ ವ್ಯಾಪಾರಿ ಆಗುತ್ತಾನೆ. ಆಧ್ಯಾತ್ಮಿಕ ವಿಷಯಗಳ ಮೇಲೆ ಸದಾ ಮನಸ್ಸಿಡುವ ವ್ಯಕ್ತಿ ಆಧ್ಯಾತ್ಮಿಕ ವ್ಯಕ್ತಿ ಆಗುತ್ತಾನೆ.

7. ಆಧ್ಯಾತ್ಮಿಕ ವ್ಯಕ್ತಿಗಳ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

7 ಆಧ್ಯಾತ್ಮಿಕ ವ್ಯಕ್ತಿಗಳು ಸಂತೋಷವಾಗಿರುತ್ತಾರೆ ಎಂದು ಬೈಬಲ್‌ ಹೇಳುತ್ತದೆ. ಮತ್ತಾಯ 5:3​ರಲ್ಲಿ “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು; ಸ್ವರ್ಗದ ರಾಜ್ಯವು ಅವರದು” ಎಂದು ಯೇಸು ಹೇಳಿದ್ದಾನೆ. ಆಧ್ಯಾತ್ಮಿಕ ವ್ಯಕ್ತಿಗಳಾಗುವುದರಿಂದ ಸಿಗುವ ಪ್ರಯೋಜನದ ಬಗ್ಗೆ ರೋಮನ್ನರಿಗೆ 8:6 ತಿಳಿಸುತ್ತದೆ. ಅದು ಹೇಳುವುದು: “ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ಮರಣದ ಅರ್ಥದಲ್ಲಿದೆ; ಆದರೆ ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ಜೀವ ಮತ್ತು ಶಾಂತಿಯ ಅರ್ಥದಲ್ಲಿದೆ.” ಹಾಗಾಗಿ ನಾವು ಆಧ್ಯಾತ್ಮಿಕ ವ್ಯಕ್ತಿಗಳಾಗಿದ್ದರೆ ದೇವರೊಂದಿಗೆ ಮತ್ತು ನಮ್ಮೊಳಗೇ ಶಾಂತಿ ಇರುತ್ತದೆ, ನಿತ್ಯಜೀವದ ನಿರೀಕ್ಷೆಯೂ ಸಿಗುತ್ತದೆ.

8. ನಾವು ಆಧ್ಯಾತ್ಮಿಕತೆ ಬೆಳೆಸಿಕೊಂಡು ಅದನ್ನು ಉಳಿಸಿಕೊಳ್ಳುವುದು ಯಾಕೆ ಕಷ್ಟ?

8 ಆದರೆ ನಾವೊಂದು ಅಪಾಯಕಾರಿ ಲೋಕದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ಸುತ್ತಲಿರುವ ಜನರಲ್ಲಿ ದೇವರ ಯೋಚನೆಗಳು ಇಲ್ಲದಿರುವುದರಿಂದ ನಮ್ಮ ಮನಸ್ಸನ್ನು ಕಾಪಾಡುವುದು ಕಷ್ಟವಾಗಿದೆ. ನಾವು ನಮ್ಮ ಮನಸ್ಸಿನಲ್ಲಿ ಯೆಹೋವನ ಯೋಚನೆಗಳನ್ನು ತುಂಬಿಸಲಿಲ್ಲವಾದರೆ ಈ ಲೋಕ ತನ್ನ ಶಾರೀರಿಕ ಯೋಚನೆ, ಮನೋಭಾವಗಳನ್ನು ನಮ್ಮಲ್ಲಿ ತುಂಬಿಸಿಬಿಡುತ್ತದೆ. ಹೀಗಾಗದಂತೆ ನೋಡಿಕೊಳ್ಳುವುದು ಹೇಗೆ? ನಾವು ಆಧ್ಯಾತ್ಮಿಕವಾಗಿ ಬೆಳೆಯುವುದು ಹೇಗೆ?

ಒಳ್ಳೇ ಮಾದರಿಗಳಿಂದ ಕಲಿಯುವ ಪಾಠ

9. (ಎ) ಆಧ್ಯಾತ್ಮಿಕ ವ್ಯಕ್ತಿಗಳಾಗಲು ಯಾವುದು ನಮಗೆ ಸಹಾಯ ಮಾಡುತ್ತದೆ? (ಬಿ) ನಾವು ಯಾರ ಒಳ್ಳೇ ಮಾದರಿಗಳ ಬಗ್ಗೆ ಚರ್ಚಿಸಲಿದ್ದೇವೆ?

9 ಒಂದು ಮಗು ತನ್ನ ತಂದೆತಾಯಿಯ ಒಳ್ಳೇ ಮಾದರಿಯನ್ನು ನೋಡಿ ಎಷ್ಟೋ ವಿಷಯಗಳನ್ನು ಕಲಿಯಬಹುದು. ಅದೇ ರೀತಿ, ನಾವು ಸಹ ಯೆಹೋವನೊಂದಿಗೆ ಆಪ್ತ ಸಂಬಂಧ ಹೊಂದಿರುವ ವ್ಯಕ್ತಿಗಳ ಮಾದರಿಯನ್ನು ನೋಡಿ ಕಲಿಯಬೇಕು. ಆಧ್ಯಾತ್ಮಿಕ ವ್ಯಕ್ತಿಗಳಾಗಲು ಇದು ನಮಗೆ ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಭೌತಿಕ ವ್ಯಕ್ತಿಗಳನ್ನು ನೋಡಿ ನಾವು ಏನು ಮಾಡಬಾರದೆಂದೂ ಕಲಿಯುತ್ತೇವೆ. (1 ಕೊರಿಂ. 3:1-4) ಬೈಬಲಿನಲ್ಲಿ ಒಳ್ಳೇ ಮಾದರಿಗಳ ಬಗ್ಗೆಯೂ ಬರೆಯಲಾಗಿದೆ, ಕೆಟ್ಟ ಮಾದರಿಗಳ ಬಗ್ಗೆಯೂ ದಾಖಲಿಸಲಾಗಿದೆ. ನಾವೀಗ ಯಾಕೋಬ, ಮರಿಯ ಮತ್ತು ಯೇಸುವಿನ ಒಳ್ಳೇ ಮಾದರಿಗಳ ಬಗ್ಗೆ ನೋಡೋಣ. ಅವರಿಂದ ಏನು ಕಲಿಯಬಹುದು ಎಂಬುದಕ್ಕೆ ಗಮನ ಕೊಡೋಣ.

ಯಾಕೋಬ ಮಾದರಿಯಿಂದ ನಾವೇನು ಕಲಿಯಬಹುದು? (ಪ್ಯಾರ 10 ನೋಡಿ)

10. ತಾನೊಬ್ಬ ಆಧ್ಯಾತ್ಮಿಕ ವ್ಯಕ್ತಿ ಎಂದು ಯಾಕೋಬನು ಹೇಗೆ ತೋರಿಸಿಕೊಟ್ಟನು?

10 ನಮ್ಮಲ್ಲಿ ಅನೇಕರ ವಿಷಯದಲ್ಲಿ ನಿಜವಾಗಿರುವಂತೆ ಯಾಕೋಬನಿಗೆ ಜೀವನ ನಡೆಸುವುದು ಸುಲಭವಾಗಿರಲಿಲ್ಲ. ಅವನ ಸ್ವಂತ ಅಣ್ಣ ಏಸಾವ ಅವನನ್ನು ಕೊಲ್ಲಲು ನೋಡುತ್ತಿದ್ದನು. ಅವನ ಮಾವ ಅವನಿಗೆ ಮೋಸ ಮಾಡಲು ಪ್ರಯತ್ನಿಸುತ್ತಿದ್ದನು. ಆದರೆ ಯೆಹೋವನು ಅಬ್ರಹಾಮನಿಗೆ ಕೊಟ್ಟಿದ್ದ ವಾಗ್ದಾನದ ಮೇಲೆ ಯಾಕೋಬನಿಗೆ ನಂಬಿಕೆ ಇತ್ತು. ಈ ವಾಗ್ದಾನದ ನೆರವೇರಿಕೆಯಲ್ಲಿ ತನ್ನ ಕುಟುಂಬಕ್ಕೂ ಪಾಲಿದೆ ಎಂದು ತಿಳಿದು ಕುಟುಂಬವನ್ನು ಚೆನ್ನಾಗಿ ನೋಡಿಕೊಂಡನು. (ಆದಿ. 28:10-15) ತನ್ನ ಸುತ್ತಲಿದ್ದ ಜನರ ಭೌತಿಕ ಯೋಚನಾ ರೀತಿಯ ಪ್ರಭಾವಕ್ಕೆ ಒಳಗಾಗಿ ಅವನು ಯೆಹೋವನ ವಾಗ್ದಾನಗಳನ್ನು ಮರೆತುಬಿಡಲಿಲ್ಲ. ಉದಾಹರಣೆಗೆ, ತನ್ನ ಅಣ್ಣನಿಂದ ತನ್ನ ಜೀವಕ್ಕೆ ಅಪಾಯ ಇದೆ ಎಂದು ಗೊತ್ತಾದಾಗ ಯಾಕೋಬನು ಯೆಹೋವನ ಸಂರಕ್ಷಣೆಗಾಗಿ ಬೇಡುತ್ತಾ “ನಿನಗೆ ಒಳ್ಳೇದನ್ನು ಮಾಡಿ ನಿನ್ನ ಸಂತತಿಯನ್ನು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿ ಅಭಿವೃದ್ಧಿಮಾಡುವೆನೆಂದು ನೀನು ನನಗೆ ಹೇಳಿದಿಯಲ್ಲವೇ” ಎಂದು ಪ್ರಾರ್ಥಿಸಿದನು. (ಆದಿ. 32:6-12) ಯಾಕೋಬನಿಗೆ ಯೆಹೋವನ ವಾಗ್ದಾನಗಳಲ್ಲಿ ಬಲವಾದ ನಂಬಿಕೆ ಇತ್ತು. ಇದನ್ನು ಅವನು ಜೀವಿಸಿದ ರೀತಿಯಲ್ಲಿ ತೋರಿಸಿಕೊಟ್ಟನು.

ಮರಿಯಳ ಮಾದರಿಯಿಂದ ನಾವೇನು ಕಲಿಯಬಹುದು? (ಪ್ಯಾರ 11 ನೋಡಿ)

11. ಮರಿಯಳು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದಳೆಂದು ನಮಗೆ ಹೇಗೆ ಗೊತ್ತು?

11 ಈಗ ಮರಿಯಳ ಬಗ್ಗೆ ಯೋಚಿಸಿ. ಆಕೆ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದದರಿಂದ ಯೆಹೋವನು ಆಕೆಯನ್ನು ಯೇಸುವಿನ ತಾಯಿಯಾಗಲು ಆರಿಸಿದನು. ತನ್ನ ಸಂಬಂಧಿಕರಾದ ಜಕರೀಯ ಮತ್ತು ಎಲಿಸಬೇತಳನ್ನು ಭೇಟಿಮಾಡಲು ಹೋದಾಗ ಆಕೆ ಏನು ಹೇಳಿದಳೆಂದು ಓದಿ ನೋಡಿ. (ಲೂಕ 1:46-55 ಓದಿ.) ಇದರಿಂದ ಗೊತ್ತಾಗುವುದೇನೆಂದರೆ, ಮರಿಯಳಿಗೆ ದೇವರ ವಾಕ್ಯದ ಮೇಲೆ ಪ್ರೀತಿ ಇತ್ತು. ಅವಳಿಗೆ ಹೀಬ್ರು ಶಾಸ್ತ್ರಗ್ರಂಥದ ಒಳ್ಳೇ ಪರಿಚಯವಿತ್ತು. (ಆದಿ. 30:13; 1 ಸಮು. 2:1-10; ಮಲಾ. 3:12) ಮರಿಯ ಮತ್ತು ಯೋಸೇಫನಿಗೆ ಮದುವೆಯಾದ ಮೇಲೂ ಅವರು ಯೇಸು ಹುಟ್ಟುವ ತನಕ ಲೈಂಗಿಕ ಸಂಬಂಧ ಇಟ್ಟುಕೊಳ್ಳಲಿಲ್ಲ. ತಮ್ಮ ಆಸೆಗಳಿಗಿಂತ ಯೆಹೋವನು ಕೊಟ್ಟ ನೇಮಕವನ್ನು ಪೂರೈಸುವುದು ಅವರಿಗೆ ಮುಖ್ಯವಾಗಿತ್ತು. (ಮತ್ತಾ. 1:25) ಅಷ್ಟೇ ಅಲ್ಲ, ಯೇಸು ಬೆಳೆಯುತ್ತಿದ್ದಾಗ ಏನೆಲ್ಲಾ ಆಯಿತೋ ಅದನ್ನು ಮರಿಯ ಗಮನಿಸುತ್ತಾ ಇದ್ದಳು ಮತ್ತು ಅವನು ಬೋಧಿಸಿದ ವಿಷಯಗಳನ್ನು “ಜೋಪಾನವಾಗಿ ಹೃದಯದಲ್ಲಿಟ್ಟುಕೊಂಡಳು.” (ಲೂಕ 2:51) ಮೆಸ್ಸೀಯನ ಬಗ್ಗೆ ದೇವರು ಕೊಟ್ಟಿದ್ದ ವಾಗ್ದಾನಗಳಲ್ಲಿ ಮರಿಯಳಿಗೆ ತುಂಬ ಆಸಕ್ತಿ ಇತ್ತು ಎಂದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ನಾವು ಮರಿಯಳನ್ನು ಅನುಕರಿಸುತ್ತಾ ಯಾವಾಗಲೂ ದೇವರು ಬಯಸುವುದನ್ನೇ ಮಾಡೋಣವೇ?

12. (ಎ) ಯೇಸು ತಂದೆಗೆ ತಕ್ಕ ಮಗ ಎಂದು ಹೇಗೆ ಹೇಳಬಹುದು? (ಬಿ) ನಾವು ಹೇಗೆ ಯೇಸುವನ್ನು ಅನುಕರಿಸಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

12 ಆಧ್ಯಾತ್ಮಿಕತೆ ತೋರಿಸಿದವರಲ್ಲಿ ಅತ್ಯುತ್ತಮ ಮಾದರಿ ಯೇಸು ಕ್ರಿಸ್ತ. ಆತನು ಭೂಮಿಯಲ್ಲಿ ಸೇವೆ ಮಾಡುತ್ತಿದ್ದಾಗ, ತನ್ನ ತಂದೆಯನ್ನು ಅನುಕರಿಸಲು ಬಯಸುತ್ತೇನೆ ಎಂದು ತೋರಿಸಿಕೊಟ್ಟನು. ಯೇಸು ವಿಷಯಗಳನ್ನು ಯೆಹೋವನ ದೃಷ್ಟಿಯಿಂದ ನೋಡಿದನು. ತನ್ನ ತಂದೆಯಂತೆಯೇ ಯೋಚಿಸಿದನು, ನಡಕೊಂಡನು. ದೇವರ ಚಿತ್ತವನ್ನು ಮಾಡಿದನು ಮತ್ತು ಆತನ ಮಟ್ಟಗಳನ್ನು ಪಾಲಿಸಿದನು. (ಯೋಹಾ. 8:29; 14:9; 15:10) ಉದಾಹರಣೆಗೆ, ಯೆಶಾಯನು ಯೆಹೋವನ ಸಹಾನುಭೂತಿಯ ಬಗ್ಗೆ ವರ್ಣಿಸಿರುವ ಮಾತುಗಳನ್ನು ಮತ್ತು ಮಾರ್ಕನು ಯೇಸುವಿನ ಭಾವನೆಗಳ ಬಗ್ಗೆ ವರ್ಣಿಸಿರುವ ವಿಷಯಗಳನ್ನು ಹೋಲಿಸಿ ನೋಡಿ. (ಯೆಶಾಯ 63:9; ಮಾರ್ಕ 6:34 ಓದಿ.) ನಾವು ಸಹಾಯದ ಅಗತ್ಯ ಇರುವವರಿಗೆ ಯೇಸುವಿನಂತೆ ಯಾವಾಗಲೂ ಅನುಕಂಪ ತೋರಿಸುತ್ತೇವಾ? ಯೇಸುವಿನಂತೆ ನಾವು ಸಹ ಸುವಾರ್ತೆ ಸಾರುವ ಮತ್ತು ಕಲಿಸುವ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತೇವಾ? (ಲೂಕ 4:43) ಆಧ್ಯಾತ್ಮಿಕ ವಿಷಯಗಳಿಗೆ ಗಮನಕೊಡುವ ವ್ಯಕ್ತಿಗಳು ಸಹಾನುಭೂತಿ ತೋರಿಸುತ್ತಾರೆ ಮತ್ತು ಬೇರೆಯವರಿಗೆ ಸಹಾಯಮಾಡಲು ಪ್ರಯತ್ನಿಸುತ್ತಾರೆ.

13, 14. (ಎ) ಇಂದು ಆಧ್ಯಾತ್ಮಿಕತೆ ಇರುವ ವ್ಯಕ್ತಿಗಳಿಂದ ನಾವೇನು ಕಲಿಯಬಹುದು? (ಬಿ) ಒಂದು ಉದಾಹರಣೆ ಕೊಡಿ.

13 ಇಂದು ಆಧ್ಯಾತ್ಮಿಕತೆ ಇರುವ ಅನೇಕ ಸಹೋದರ ಸಹೋದರಿಯರು ಕ್ರಿಸ್ತನನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಇಂಥವರು ಹುರುಪಿನಿಂದ ಸೇವೆ ಮಾಡುವುದನ್ನು, ಅತಿಥಿಸತ್ಕಾರ ಮತ್ತು ಸಹಾನುಭೂತಿ ತೋರಿಸುವುದನ್ನು ನೀವು ನೋಡಿರುತ್ತೀರಿ. ಇವರು ಪರಿಪೂರ್ಣರಲ್ಲದಿದ್ದರೂ ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳಲು ಮತ್ತು ಯೆಹೋವನು ಏನು ಬಯಸುತ್ತಾನೋ ಅದನ್ನು ಮಾಡಲು ತುಂಬ ಪ್ರಯತ್ನಿಸುತ್ತಾರೆ. ಬ್ರಸಿಲ್‌ನಲ್ಲಿರುವ ರೇಚಲ್‌ ಎಂಬ ಸಹೋದರಿ ಹೇಳುವುದು: “ನನಗೆ ಈ ಲೋಕದ ಫ್ಯಾಶನ್‌ ತುಂಬ ಇಷ್ಟ ಆಗಿತ್ತು. ಹಾಗಾಗಿ ನಾನು ಹಾಕುವ ಬಟ್ಟೆಗಳು ಅಷ್ಟು ಸಭ್ಯವಾಗಿರಲಿಲ್ಲ. ಆದರೆ ಸತ್ಯ ಕಲಿತಾಗ ಆಧ್ಯಾತ್ಮಿಕ ವ್ಯಕ್ತಿಯಾಗಲು ಬೇಕಾದ ಬದಲಾವಣೆ ಮಾಡಬೇಕೆಂದು ಅನಿಸಿತು. ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಸುಲಭವಾಗಿರಲಿಲ್ಲ. ಆದರೆ ಬದಲಾವಣೆಗಳನ್ನು ಮಾಡಿಕೊಂಡದ್ದರಿಂದ ಈಗ ಹೆಚ್ಚು ಸಂತೋಷವಾಗಿದ್ದೇನೆ, ಜೀವನಕ್ಕೆ ಒಂದು ಉದ್ದೇಶ ಅಂತ ಇದೆ.”

14 ಫಿಲಿಪೀನ್ಸ್‌ನಲ್ಲಿರುವ ರೇಲೀನ್‌ ಎಂಬ ಸಹೋದರಿಗೆ ಬೇರೆ ಸಮಸ್ಯೆ ಇತ್ತು. ಅವರು ಸತ್ಯದಲ್ಲಿದ್ದರೂ ಉನ್ನತ ಶಿಕ್ಷಣ ಪಡೆದು ಒಳ್ಳೇ ಕೆಲಸಕ್ಕೆ ಸೇರುವುದಕ್ಕೆ ಗಮನ ಕೊಟ್ಟರು. ಸಮಯ ಹೋಗುತ್ತಾ ಆಧ್ಯಾತ್ಮಿಕ ಗುರಿಗಳು ಅವರಿಗೆ ಅಷ್ಟು ಮುಖ್ಯವಾಗಿ ಕಾಣಲಿಲ್ಲ. ಅವರು ಹೇಳುವುದು: “ನನ್ನ ಜೀವನದಲ್ಲಿ ಏನೋ ಕಮ್ಮಿ ಇದೆ ಎಂದು ಅನಿಸಿತು. ಅದು ನನ್ನ ಉದ್ಯೋಗಕ್ಕಿಂತ ದೊಡ್ಡ ವಿಷಯವಾಗಿತ್ತು.” ರೇಲೀನ್‌ ಪುನಃ ದೇವರ ಸೇವೆಗೆ ಪೂರ್ತಿ ಗಮನ ಕೊಡಲು ಆರಂಭಿಸಿದರು. ಈಗ ಅವರು ಮತ್ತಾಯ 6:33, 34​ರಲ್ಲಿರುವ ಯೆಹೋವನ ವಾಗ್ದಾನವನ್ನು ನಂಬುತ್ತಾರೆ. “ಯೆಹೋವನು ನನ್ನನ್ನು ನೋಡಿಕೊಳ್ಳುತ್ತಾನೆ ಅಂತ ನನಗೆ ಖಂಡಿತ ಗೊತ್ತು!” ಎಂದವರು ಹೇಳುತ್ತಾರೆ. ನಿಮ್ಮ ಸಭೆಯಲ್ಲಿರುವ ಕೆಲವು ಸಹೋದರ ಸಹೋದರಿಯರಿಗೆ ಸಹ ಇದೇ ಮನೋಭಾವ ಇರುವುದು ನಿಮಗೆ ಗೊತ್ತಿರಬಹುದು. ಅವರು ಕ್ರಿಸ್ತನನ್ನು ಅನುಕರಿಸಲು ಏನೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ನೋಡುವಾಗ ನಾವು ಕೂಡ ಅವರ ನಂಬಿಗಸ್ತ ಮಾದರಿಯನ್ನು ಅನುಕರಿಸಲು ಬಯಸುತ್ತೇವೆ.—1 ಕೊರಿಂ. 11:1; 2 ಥೆಸ. 3:7.

“ಕ್ರಿಸ್ತನ ಮನಸ್ಸನ್ನು” ಹೊಂದಲು ಪ್ರಯತ್ನಿಸಿ

15, 16. (ಎ) ನಾವು ಕ್ರಿಸ್ತನಂತಿರಲು ಏನು ಮಾಡಬೇಕು? (ಬಿ) ನಾವು ಹೇಗೆ ಯೇಸುವಿನಂತೆ ಯೋಚಿಸಲು ಕಲಿಯಬಹುದು?

15 ನಾವು ಯೇಸು ಕ್ರಿಸ್ತನನ್ನು ಹೇಗೆ ಅನುಕರಿಸಬಹುದು? ನಾವು “ಕ್ರಿಸ್ತನ ಮನಸ್ಸನ್ನು” ಹೊಂದಿರಬೇಕೆಂದು 1 ಕೊರಿಂಥ 2:16 ತಿಳಿಸುತ್ತದೆ. ರೋಮನ್ನರಿಗೆ 15:5 “ಕ್ರಿಸ್ತ ಯೇಸುವಿನಲ್ಲಿದ್ದ ಅದೇ ಮನೋಭಾವವನ್ನು” ಬೆಳೆಸಿಕೊಳ್ಳಿ ಎಂದು ಹೇಳುತ್ತದೆ. ನಾವು ಯೇಸುವಿನಂತೆ ಇರಬೇಕಾದರೆ ಆತನಂತೆ ಯೋಚನೆ ಮಾಡಲು, ನಡಕೊಳ್ಳಲು ಕಲಿಯಬೇಕು. ಯೇಸುವಿಗೆ ದೇವರೊಂದಿಗಿದ್ದ ಸಂಬಂಧಕ್ಕಿಂತ ಬೇರೆ ಯಾವುದೂ ದೊಡ್ಡದು ಅನಿಸಲಿಲ್ಲ. ಹಾಗಾದರೆ ನಾವು ಯೇಸುವಿನಂತಿರಲು ಪ್ರಯತ್ನಿಸುವಾಗ ಹೆಚ್ಚೆಚ್ಚು ಯೆಹೋವನ ತರ ಆಗುತ್ತೇವೆ. ಈ ಕಾರಣಗಳಿಂದಾಗಿ ನಾವು ಯೇಸುವಿನಂತೆ ಯೋಚಿಸಲು ಕಲಿಯುವುದು ತುಂಬ ಮುಖ್ಯ.

16 ನಾವು ಯೇಸುವಿನಂತೆ ಯೋಚಿಸಲು ಹೇಗೆ ಕಲಿಯಬಹುದು? ಯೇಸುವಿನ ಶಿಷ್ಯರು ಆತನು ಮಾಡಿದ ಅದ್ಭುತಗಳನ್ನು ನೋಡಿದರು, ಆತನು ಕೊಟ್ಟ ಭಾಷಣಗಳನ್ನು ಕೇಳಿಸಿಕೊಂಡರು, ಬೇರೆ ಬೇರೆ ರೀತಿಯ ಜನರೊಂದಿಗೆ ಹೇಗೆ ನಡಕೊಂಡನೆಂದು ನೋಡಿದರು, ದೇವರು ಕೊಟ್ಟಿದ್ದ ತತ್ವಗಳನ್ನು ಹೇಗೆ ಅನ್ವಯಿಸಿ ನಡೆದನೆಂದು ಕಂಡರು. “ಅವನು ಮಾಡಿದ ಎಲ್ಲ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ” ಎಂದು ಅವರೇ ಹೇಳಿದರು. (ಅ. ಕಾ. 10:39) ಇಂದು ನಾವು ಯೇಸುವನ್ನು ನೋಡಲು ಸಾಧ್ಯವಿಲ್ಲ. ಆದರೆ ನಮ್ಮ ಬಳಿ ಬೈಬಲಿದೆ. ಮತ್ತಾಯ, ಮಾರ್ಕ, ಲೂಕ, ಯೋಹಾನ ಪುಸ್ತಕಗಳನ್ನು ಓದುವಾಗ ಯೇಸುವಿನ ಜೀವನ ಚರಿತ್ರೆ ನಮ್ಮ ಕಣ್ಣ ಮುಂದೆ ಹಾದುಹೋದಂತೆ ಇರುತ್ತದೆ. ಈ ಸುವಾರ್ತಾ ಪುಸ್ತಕಗಳನ್ನು ಓದಿ ಧ್ಯಾನಿಸುವಾಗ ನಾವು ಯೇಸುವಿನಂತೆ ಯೋಚಿಸಲು ಕಲಿಯುತ್ತೇವೆ. ಇದರಿಂದ ‘ಆತನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಲು’ ಸಾಧ್ಯವಾಗುತ್ತದೆ ಮತ್ತು ಕ್ರಿಸ್ತನಲ್ಲಿದ್ದ “ಅದೇ ಮಾನಸಿಕ ಪ್ರವೃತ್ತಿಯನ್ನು” ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.—1 ಪೇತ್ರ 2:21; 4:1.

17. ಯೇಸುವಿನಂತೆ ಯೋಚನೆ ಮಾಡಲು ಕಲಿತರೆ ಯಾವ ಪ್ರಯೋಜನಗಳು ಸಿಗುತ್ತವೆ?

17 ನಾವು ಕ್ರಿಸ್ತನಂತೆ ಯೋಚಿಸಲು ಕಲಿತರೆ ಯಾವ ಪ್ರಯೋಜನ ಸಿಗುತ್ತದೆ? ಪೌಷ್ಠಿಕ ಆಹಾರ ತಿಂದರೆ ದೇಹ ಗಟ್ಟಿಮುಟ್ಟಾಗುವಂತೆ, ಕ್ರಿಸ್ತನಂತೆ ಯೋಚಿಸಲು ಕಲಿತರೆ ಆಧ್ಯಾತ್ಮಿಕವಾಗಿ ಗಟ್ಟಿಮುಟ್ಟಾಗುತ್ತೇವೆ. ಯಾವುದೇ ಸನ್ನಿವೇಶದಲ್ಲಿ ಯೇಸು ಏನು ಮಾಡುತ್ತಿದ್ದ ಎಂದು ಸಮಯ ಹೋಗುತ್ತಾ ಕಲಿಯುತ್ತೇವೆ. ಆಮೇಲೆ ನಾವು ದೇವರಿಗೆ ಇಷ್ಟವಾಗುವಂಥ ಒಳ್ಳೇ ತೀರ್ಮಾನಗಳನ್ನು ಮಾಡುತ್ತೇವೆ. ಇದರಿಂದ ನಮಗೆ ಒಳ್ಳೇ ಮನಸ್ಸಾಕ್ಷಿ ಇರುತ್ತದೆ. ‘ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಲು’ ಇದೆಲ್ಲಾ ಒಳ್ಳೇ ಕಾರಣಗಳಲ್ಲವೇ?—ರೋಮ. 13:14.

18. ಆಧ್ಯಾತ್ಮಿಕ ವ್ಯಕ್ತಿ ಆಗಿರುವುದರ ಬಗ್ಗೆ ಈ ಲೇಖನದಲ್ಲಿ ಏನು ಕಲಿತೆವು?

18 ಆಧ್ಯಾತ್ಮಿಕ ವ್ಯಕ್ತಿ ಆಗಿರುವುದು ಅಂದರೆ ಏನೆಂದು ಈ ಲೇಖನದಲ್ಲಿ ಕಲಿತೆವು. ಪವಿತ್ರಾತ್ಮದ ಮಾರ್ಗದರ್ಶನದಂತೆ ನಡೆದ ವ್ಯಕ್ತಿಗಳ ಒಳ್ಳೇ ಮಾದರಿಯಿಂದ ಸಹ ಕಲಿತೆವು. “ಕ್ರಿಸ್ತನ ಮನಸ್ಸನ್ನು” ಹೊಂದಿದ್ದರೆ ನಾವು ಯೆಹೋವನಂತೆ ಯೋಚನೆ ಮಾಡಲು ಸಾಧ್ಯವಾಗುತ್ತದೆ ಮತ್ತು ಆತನೊಂದಿಗೆ ಆಪ್ತ ಸಂಬಂಧ ಬೆಸೆಯಲು ಆಗುತ್ತದೆ ಎಂದು ಕಲಿತೆವು. ಆದರೆ ಇದರ ಬಗ್ಗೆ ನಾವು ಇನ್ನೂ ಹೆಚ್ಚನ್ನು ಕಲಿಯಲಿಕ್ಕಿದೆ. ಉದಾಹರಣೆಗೆ, ನಾವು ಆಧ್ಯಾತ್ಮಿಕವಾಗಿ ಗಟ್ಟಿಮುಟ್ಟಾಗಿದ್ದೇವೆ ಎಂದು ಹೇಗೆ ತಿಳಿದುಕೊಳ್ಳಬಹುದು? ಆಧ್ಯಾತ್ಮಿಕವಾಗಿ ಗಟ್ಟಿಮುಟ್ಟಾಗಲು ಏನು ಮಾಡಬೇಕು? ಆಧ್ಯಾತ್ಮಿಕತೆ ನಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಇದನ್ನು ಮುಂದಿನ ಲೇಖನದಲ್ಲಿ ನೋಡೋಣ.