ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೊರತೋರಿಕೆ ನೋಡಿ ತೀರ್ಪು ಮಾಡಬೇಡಿ

ಹೊರತೋರಿಕೆ ನೋಡಿ ತೀರ್ಪು ಮಾಡಬೇಡಿ

“ಹೊರತೋರಿಕೆಯನ್ನು ನೋಡಿ ತೀರ್ಪುಮಾಡುವುದನ್ನು ನಿಲ್ಲಿಸಿರಿ; ನ್ಯಾಯವಾಗಿ ತೀರ್ಪುಮಾಡಿರಿ.”—ಯೋಹಾ. 7:24.

ಗೀತೆಗಳು: 129, 125

1. (ಎ) ಯೆಶಾಯನು ಯೇಸುವಿನ ಬಗ್ಗೆ ಏನೆಂದು ಪ್ರವಾದನೆ ನುಡಿದನು? (ಬಿ) ಈ ಪ್ರವಾದನೆ ನಮಗೆ ಯಾಕೆ ಪ್ರೋತ್ಸಾಹದಾಯಕವಾಗಿದೆ?

ಯೇಸು “ಕಣ್ಣಿಗೆ ಕಂಡಂತೆ ತೀರ್ಪುಮಾಡುವದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವದಿಲ್ಲ” ಮತ್ತು “ಬಡವರಿಗೋಸ್ಕರ ನ್ಯಾಯವಾಗಿ ತೀರ್ಪುಮಾಡುವನು” ಎಂದು ಯೆಶಾಯನು ಮುಂತಿಳಿಸಿದನು. ಯೇಸು ಕ್ರಿಸ್ತನ ಬಗ್ಗೆ ಯೆಶಾಯನು ನುಡಿದ ಈ ಪ್ರವಾದನೆ ನಮಗೆ ನಿರೀಕ್ಷೆ ಮತ್ತು ಪ್ರೋತ್ಸಾಹ ಕೊಡುತ್ತದೆ. (ಯೆಶಾ. 11:3, 4) ಯಾಕೆ? ಯಾಕೆಂದರೆ ಈ ಲೋಕದಲ್ಲಿ ಎಲ್ಲೆಲ್ಲೂ ಪೂರ್ವಗ್ರಹ ತುಂಬಿದೆ. ಜನ ತಮ್ಮ ಕಣ್ಣಿಗೆ ಕಾಣುವ ವಿಷಯದ ಮೇಲೆ ಬೇರೆಯವರನ್ನು ತೀರ್ಪುಮಾಡುತ್ತಾರೆ. ಆದರೆ ಯೇಸು ಒಬ್ಬ ಪರಿಪೂರ್ಣ ನ್ಯಾಯಾಧೀಶ. ಆತನು ಹೊರತೋರಿಕೆಯನ್ನು ನೋಡಿ ತೀರ್ಪುಮಾಡುವುದಿಲ್ಲ.

2. (ಎ) ಯೇಸು ನಮಗೆ ಯಾವ ಆಜ್ಞೆ ಕೊಟ್ಟಿದ್ದಾನೆ? (ಬಿ) ಈ ಲೇಖನದಲ್ಲಿ ನಾವೇನು ಚರ್ಚಿಸಲಿದ್ದೇವೆ?

2 ಪ್ರತಿ ದಿನ ನಾವು ಬೇರೆಯವರ ಬಗ್ಗೆ ಕೆಲವು ಅಭಿಪ್ರಾಯಗಳನ್ನು ಬೆಳೆಸಿಕೊಳ್ಳುತ್ತೇವೆ. ಆದರೆ ನಾವು ಯೇಸುವಿನಂತೆ ಪರಿಪೂರ್ಣರಲ್ಲದ ಕಾರಣ ನಮ್ಮ ಅಭಿಪ್ರಾಯಗಳೂ ಪರಿಪೂರ್ಣವಾಗಿರಲ್ಲ. ಕಣ್ಣಿಗೆ ಕಂಡಂತೆ ತೀರ್ಪು ಮಾಡಿಬಿಡುತ್ತೇವೆ. ಆದರೆ “ಹೊರತೋರಿಕೆಯನ್ನು ನೋಡಿ ತೀರ್ಪುಮಾಡುವುದನ್ನು ನಿಲ್ಲಿಸಿರಿ; ನ್ಯಾಯವಾಗಿ ತೀರ್ಪುಮಾಡಿರಿ” ಎಂದು ಯೇಸು ಆಜ್ಞೆ ಕೊಟ್ಟಿದ್ದಾನೆ. (ಯೋಹಾ. 7:24) ಅಂದರೆ ‘ನೀವು ನನ್ನಂತೆ ಇರಿ, ಕಣ್ಣಿಗೆ ಕಂಡಂತೆ ತೀರ್ಪು ಮಾಡಬೇಡಿ’ ಎಂದು ಯೇಸು ಹೇಳಿದಂತಿದೆ. ಆದರೆ ನಾವು ಕೆಲವೊಮ್ಮೆ ಒಬ್ಬ ವ್ಯಕ್ತಿಯ ಜನಾಂಗ ಅಥವಾ ದೇಶ, ಆಸ್ತಿಪಾಸ್ತಿ ಅಥವಾ ವಯಸ್ಸು ನೋಡಿ ಕಣ್ಣಿಗೆ ಕಂಡಂತೆ ತೀರ್ಪು ಮಾಡಿಬಿಡುತ್ತೇವೆ. ಈ ಸನ್ನಿವೇಶಗಳಲ್ಲಿ ನಾವು ಹೇಗೆ ಯೇಸುವಿನ ಮಾತಿಗೆ ಕಿವಿಗೊಟ್ಟು ಬೇರೆಯವರನ್ನು ಅವರ ಹೊರತೋರಿಕೆ ನೋಡಿ ತೀರ್ಪು ಮಾಡಬಾರದು ಎಂದು ಈ ಲೇಖನದಲ್ಲಿ ನೋಡೋಣ.

ಜನಾಂಗ ಅಥವಾ ದೇಶ ನೋಡಿ ತೀರ್ಪು ಮಾಡಬೇಡಿ

3, 4. (ಎ) ಅನ್ಯಜನಾಂಗದವರ ಬಗ್ಗೆ ಪೇತ್ರನಿಗಿದ್ದ ಅಭಿಪ್ರಾಯವನ್ನು ಯಾವ ಘಟನೆಗಳು ಬದಲಾಯಿಸಿದವು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಯೆಹೋವನು ಪೇತ್ರನಿಗೆ ಯಾವ ಹೊಸ ಸತ್ಯವನ್ನು ಕಲಿಸಿದನು?

3 ಅಪೊಸ್ತಲ ಪೇತ್ರನ ಉದಾಹರಣೆ ತೆಗೆದುಕೊಳ್ಳಿ. ಕೈಸರೈಯದಲ್ಲಿದ್ದ ಅನ್ಯಜನಾಂಗದವನಾದ ಕೊರ್ನೇಲ್ಯನ ಮನೆಗೆ ಹೋಗುವಂತೆ ದೇವರಾತ್ಮ ಹೇಳಿದಾಗ ಪೇತ್ರನಿಗೆ ಹೇಗನಿಸಿರಬೇಕೆಂದು ಯೋಚಿಸಿ. (ಅ. ಕಾ. 10:17-29) ಅನ್ಯಜನಾಂಗದವರು ಅಶುದ್ಧರು ಎಂದು ಪೇತ್ರನಿಗೆ ಚಿಕ್ಕ ವಯಸ್ಸಿನಿಂದ ಕಲಿಸಲಾಗಿತ್ತು. ಆದರೆ ಕೆಲವು ಘಟನೆಗಳು ಅವನ ಅಭಿಪ್ರಾಯವನ್ನು ಬದಲಾಯಿಸಿದವು. ಅವುಗಳಲ್ಲೊಂದು ಅವನಿಗೆ ದೇವರಿಂದ ಸಿಕ್ಕಿದ ಒಂದು ದರ್ಶನ. (ಅ. ಕಾ. 10:9-16) ದರ್ಶನದಲ್ಲಿ ಒಂದು ದೊಡ್ಡ ಬಟ್ಟೆಯಂತಿರುವ ಪಾತ್ರೆಯು ಸ್ವರ್ಗದಿಂದ ಇಳಿದು ಬರುವುದು ಅವನಿಗೆ ಕಾಣಿಸಿತು. ಅದರಲ್ಲಿ ಅಶುದ್ಧವೆಂದು ಕರೆಯಲಾಗುತ್ತಿದ್ದ ಪ್ರಾಣಿಗಳು ಇದ್ದವು. ಆಗ ಒಂದು ವಾಣಿಯು “ಪೇತ್ರನೇ ಎದ್ದು ಕಡಿದು ತಿನ್ನು” ಎಂದು ಹೇಳಿತು. ಪೇತ್ರನು ಅದನ್ನು ಖಡಾಖಂಡಿತವಾಗಿ ನಿರಾಕರಿಸಿದನು. ಆ ವಾಣಿಯು “ದೇವರು ಶುದ್ಧೀಕರಿಸಿರುವುದನ್ನು ನೀನು ಹೊಲೆಯಾದದ್ದೆಂದು ಹೇಳುವುದನ್ನು ನಿಲ್ಲಿಸು” ಎಂದಿತು. ಆ ವಾಣಿಯು ತನಗೆ ಏನು ಹೇಳಲು ಪ್ರಯತ್ನಿಸುತ್ತಿದೆ ಎಂದು ಪೇತ್ರನು ದರ್ಶನ ಮುಗಿದ ಮೇಲೆ ಯೋಚಿಸುತ್ತಿರುವಾಗಲೇ, ಕೊರ್ನೇಲ್ಯನು ಕಳುಹಿಸಿದ ಮನುಷ್ಯರು ಅವನಿದ್ದ ಮನೆಗೆ ಬಂದರು. ಕೊರ್ನೇಲ್ಯನ ಮನೆಗೆ ಹೋಗುವಂತೆ ಪೇತ್ರನಿಗೆ ಪವಿತ್ರಾತ್ಮದ ನಿರ್ದೇಶನ ಸಿಕ್ಕಿತು. ಅವನು ಆ ಮನುಷ್ಯರೊಟ್ಟಿಗೆ ಹೋದನು.

4 ಪೇತ್ರನು “ಹೊರತೋರಿಕೆಯನ್ನು ನೋಡಿ” ತೀರ್ಪು ಮಾಡಿದ್ದರೆ ಕೊರ್ನೇಲ್ಯನ ಮನೆಗೆ ಖಂಡಿತ ಹೋಗುತ್ತಿರಲಿಲ್ಲ. ಯಾಕೆಂದರೆ ಯೆಹೂದ್ಯರು ಯಾವತ್ತೂ ಬೇರೆ ಜನಾಂಗದವರ ಮನೆಗಳಿಗೆ ಕಾಲಿಡುತ್ತಿರಲಿಲ್ಲ. ಹಾಗಾದರೆ ಪೇತ್ರನು ಯಾಕೆ ಹೋದನು? ಬೇರೆ ಜನಾಂಗದ ಜನರ ಮೇಲೆ ಪೂರ್ವಗ್ರಹ ಇದ್ದರೂ ಅವನಿಗೆ ಸಿಕ್ಕಿದ ದರ್ಶನದಿಂದ ಮತ್ತು ಪವಿತ್ರಾತ್ಮ ಕೊಟ್ಟ ನಿರ್ದೇಶನದಿಂದ ಅವನು ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಂಡನು. ಕೊರ್ನೇಲ್ಯನು ಹೇಳುವುದನ್ನು ಕೇಳಿಸಿಕೊಂಡ ಮೇಲೆ ಪೇತ್ರನು, “ದೇವರು ಪಕ್ಷಪಾತಿಯಲ್ಲ ಎಂಬುದು ನನಗೆ ನಿಶ್ಚಯವಾಗಿ ತಿಳಿದದೆ. ಆದರೆ ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ” ಎಂದನು. (ಅ. ಕಾ. 10:34, 35) ಈ ಹೊಸ ಹೊಂದಾಣಿಕೆ ಪೇತ್ರನಿಗೆ ತುಂಬ ಇಷ್ಟವಾಯಿತು. ಇದು ಎಲ್ಲ ಕ್ರೈಸ್ತರ ಮೇಲೆ ಪ್ರಭಾವ ಬೀರಲಿತ್ತು. ಹೇಗೆ?

5. (ಎ) ಎಲ್ಲ ಕ್ರೈಸ್ತರು ಏನು ಅರ್ಥಮಾಡಿಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ? (ಬಿ) ನಮಗೆ ಸತ್ಯ ಗೊತ್ತಿದ್ದರೂ ನಮ್ಮಲ್ಲಿ ಪೂರ್ವಗ್ರಹ ಇರಲು ಸಾಧ್ಯನಾ?

5 ದೇವರು ತಾನು ಪಕ್ಷಪಾತಿಯಲ್ಲ ಎಂದು ಪೇತ್ರನ ಮೂಲಕ ಎಲ್ಲ ಕ್ರೈಸ್ತರಿಗೆ ಕಲಿಸಲು ಪ್ರಯತ್ನಿಸಿದನು. ನಾವು ಯಾವ ಜನಾಂಗ, ರಾಷ್ಟ್ರ, ಜಾತಿ, ಭಾಷೆಯವರು ಎಂದು ಯೆಹೋವನು ನೋಡುವುದಿಲ್ಲ. ನಾವು ಎಷ್ಟರ ವರೆಗೆ ದೇವರಿಗೆ ಭಯಪಟ್ಟು ಸರಿಯಾದದ್ದನ್ನು ಮಾಡುತ್ತೇವೋ ಅಷ್ಟರ ವರೆಗೆ ಆತನ ಅನುಗ್ರಹ ನಮ್ಮ ಮೇಲಿರುತ್ತದೆ. (ಗಲಾ. 3:26-28; ಪ್ರಕ. 7:9, 10) ನಿಮಗೆ ಇದು ಈಗಾಗಲೇ ಗೊತ್ತಿದೆ. ಆದರೆ ಪೂರ್ವಗ್ರಹ ತುಂಬ ಪ್ರಬಲವಾಗಿದ್ದ ಒಂದು ದೇಶದಲ್ಲಿ ಅಥವಾ ಕುಟುಂಬದಲ್ಲಿ ನೀವು ಬೆಳೆದು ಬಂದಿದ್ದರೆ ಆಗೇನು? ನಿಮ್ಮಲ್ಲಿ ಪಕ್ಷಪಾತ ಇಲ್ಲ ಎಂದು ನೀವು ನೆನಸುವುದಾದರೂ ನಿಮ್ಮಲ್ಲಿ ಸ್ವಲ್ಪವಾದರೂ ಪೂರ್ವಗ್ರಹ ಇರಲು ಸಾಧ್ಯನಾ? ದೇವರು ಪಕ್ಷಪಾತಿಯಲ್ಲ ಎಂದು ಅರ್ಥಮಾಡಿಕೊಳ್ಳಲು ಪೇತ್ರನು ಬೇರೆಯವರಿಗೆ ಸಹಾಯ ಮಾಡಿದ ಮೇಲೆ ಸಹ ಅವನಲ್ಲಿ ಪೂರ್ವಗ್ರಹ ಇತ್ತು. (ಗಲಾ. 2:11-14) ಹಾಗಾದರೆ ಯೇಸುವಿನ ಮಾತಿಗೆ ಕಿವಿಗೊಟ್ಟು ಜನರ ಹೊರತೋರಿಕೆ ನೋಡಿ ತೀರ್ಪು ಮಾಡದೇ ಇರಲು ನಾವು ಏನು ಮಾಡಬೇಕು?

6. (ಎ) ಪೂರ್ವಗ್ರಹವನ್ನು ತೆಗೆದುಹಾಕಲು ಯಾವುದು ಸಹಾಯ ಮಾಡುತ್ತದೆ? (ಬಿ) ಒಬ್ಬ ಸಹೋದರ ಬರೆದ ವರದಿಯಿಂದ ಅವರ ಬಗ್ಗೆ ಏನು ಗೊತ್ತಾಯಿತು?

6 ನಮ್ಮಲ್ಲಿ ಪೂರ್ವಗ್ರಹ ಇದೆಯಾ ಎಂದು ತಿಳಿದುಕೊಳ್ಳಲು ದೇವರ ವಾಕ್ಯ ಹೇಳುವ ಪ್ರಕಾರ ನಾವಿದ್ದೇವಾ ಎಂದು ಸ್ವಪರೀಕ್ಷೆ ಮಾಡಿಕೊಳ್ಳಬೇಕು. (ಕೀರ್ತ. 119:105) ನಮ್ಮಲ್ಲಿ ಪೂರ್ವಗ್ರಹ ಇರುವುದು ನಮಗೇ ಗೊತ್ತಾಗುವುದಿಲ್ಲ. ಆದ್ದರಿಂದ ಬೇರೆಯವರು ನಮ್ಮಲ್ಲಿ ಪೂರ್ವಗ್ರಹ ಇರುವುದನ್ನು ನೋಡಿದ್ದಾರಾ ಎಂದು ಕೇಳಬೇಕು. (ಗಲಾ. 2:11, 14) ಚಿಕ್ಕ ವಯಸ್ಸಿಂದಲೇ ಪೂರ್ವಗ್ರಹ ನಮ್ಮಲ್ಲಿದ್ದರೆ ನಾವು ಅದಕ್ಕೆ ಒಗ್ಗಿಹೋಗಿರುತ್ತೇವೆ. ಒಬ್ಬ ಜವಾಬ್ದಾರಿಯುತ ಸಹೋದರನಿಗೆ ಇದೇ ಆಯಿತು. ಪೂರ್ಣ ಸಮಯದ ಸೇವೆಯಲ್ಲಿದ್ದ ಒಬ್ಬ ಗಂಡ-ಹೆಂಡತಿಯ ಬಗ್ಗೆ ಈ ಸಹೋದರ ಶಾಖಾ ಕಚೇರಿಗೆ ಒಂದು ವರದಿಯನ್ನು ಕೊಡಬೇಕಿತ್ತು. ಗಂಡ ತುಂಬ ಜನರು ಕೀಳಾಗಿ ನೋಡುತ್ತಿದ್ದ ಜನಾಂಗಕ್ಕೆ ಸೇರಿದವರು. ಇವರ ಬಗ್ಗೆ ಆ ಸಹೋದರ ಅನೇಕ ಒಳ್ಳೇ ವಿಷಯಗಳನ್ನು ಬರೆದರು. ಆದರೆ ಕೊನೆಯಲ್ಲಿ, “ಇವರು [ಈ ದೇಶದವರು] ಆಗಿದ್ದರೂ ಇವರು ನಡಕೊಳ್ಳುವ ರೀತಿ ಮತ್ತು ಜೀವನ ಮಾಡುವ ವಿಧ ಅವರ [ಜನಾಂಗಕ್ಕೆ] ಸೇರಿದ ಜನರಲ್ಲಿ ಸಾಮಾನ್ಯವಾಗಿರುವಂತೆ ಕೊಳಕಾಗಿ, ಕೀಳಾಗಿ ಇಲ್ಲ” ಎಂದು ಬರೆದಿದ್ದರು. ಇದರಿಂದ ನಮಗೇನು ಪಾಠ? ನಾವು ಸಂಘಟನೆಯಲ್ಲಿ ಅದೆಂಥ ಜವಾಬ್ದಾರಿಯುತ ಸ್ಥಾನದಲ್ಲಿರಲಿ, ನಮ್ಮಲ್ಲಿ ಇನ್ನೂ ಪೂರ್ವಗ್ರಹ ಇದೆಯಾ ಎಂದು ತಿಳಿದುಕೊಳ್ಳಲು ಸ್ವಪರೀಕ್ಷೆ ಮಾಡಿಕೊಳ್ಳಬೇಕು ಮತ್ತು ಬೇರೆಯವರ ಸಹಾಯ ತೆಗೆದುಕೊಳ್ಳಬೇಕು. ನಾವು ಬೇರೇನು ಮಾಡಬಹುದು?

7. ನಾವು ಹೃದಯವನ್ನು ವಿಶಾಲ ಮಾಡಿಕೊಂಡಿದ್ದೇವೆ ಎಂದು ಹೇಗೆ ತೋರಿಸಬಹುದು?

7 ನಾವು ಹೃದಯವನ್ನು ವಿಶಾಲ ಮಾಡಿಕೊಂಡರೆ ಪೂರ್ವಗ್ರಹವನ್ನು ಬಿಟ್ಟು ಪ್ರೀತಿಸಲು ಆರಂಭಿಸುತ್ತೇವೆ. (2 ಕೊರಿಂ. 6:11-13) ನೀವು ನಿಮ್ಮ ಸ್ವಂತ ಜನಾಂಗ, ದೇಶ, ಜಾತಿ ಅಥವಾ ಭಾಷೆಯ ಜನರೊಟ್ಟಿಗೆ ಮಾತ್ರ ಸಮಯ ಕಳೆಯಲು ಬಯಸುತ್ತೀರಾ? ಬೇರೆಯವರೊಟ್ಟಿಗೂ ಸಮಯ ಕಳೆಯಲು ಪ್ರಯತ್ನಿಸಿ. ಬೇರೆ ಹಿನ್ನೆಲೆಯ ಸಹೋದರ ಸಹೋದರಿಯರೊಂದಿಗೆ ಸೇವೆಯಲ್ಲಿ ಭಾಗವಹಿಸಲು ಏರ್ಪಾಡು ಮಾಡಿಕೊಳ್ಳಿ. ನೀವು ಅವರನ್ನು ನಿಮ್ಮ ಮನೆಗೆ ಒಂದು ಊಟಕ್ಕೋ ಸಹವಾಸ ಕೂಟಕ್ಕೋ ಕರೆಯಬಹುದು. (ಅ. ಕಾ. 16:14, 15) ಹೀಗೆ ನಿಮ್ಮ ಹೃದಯದಲ್ಲಿ ಪ್ರೀತಿ ತುಂಬುತ್ತಾ ಇರುತ್ತದೆ, ಪೂರ್ವಗ್ರಹಕ್ಕೆ ಜಾಗನೇ ಇರಲ್ಲ. ಈಗ ನಾವು ‘ಹೊರತೋರಿಕೆಯನ್ನು ನೋಡಿ ತೀರ್ಪು ಮಾಡುವ’ ಇನ್ನೊಂದು ಸನ್ನಿವೇಶವನ್ನು ನೋಡೋಣ.   

ಹಣ-ಆಸ್ತಿ ನೋಡಿ ತೀರ್ಪು ಮಾಡಬೇಡಿ

8. ಯಾಜಕಕಾಂಡ 19:15​ರಲ್ಲಿ ಯಾವ ಸಲಹೆ ಇದೆ?

8 ನಾವು ಬೇರೆಯವರನ್ನು ಯಾವ ದೃಷ್ಟಿಯಿಂದ ನೋಡುತ್ತೇವೆ ಅನ್ನುವುದು ಅವರ ಹತ್ತಿರ ಎಷ್ಟು ಆಸ್ತಿಪಾಸ್ತಿ ಇದೆ ಅನ್ನುವುದರ ಮೇಲೆ ಹೊಂದಿಕೊಂಡಿರಬಹುದು. ಯಾಜಕಕಾಂಡ 19:15 ಹೀಗೆ ಹೇಳುತ್ತದೆ: “ಬಡವನ ಬಡತನವನ್ನಾಗಲಿ ದೊಡ್ಡ ಮನುಷ್ಯನ ಘನತೆಯನ್ನಾಗಲಿ ಲಕ್ಷ್ಯಮಾಡದೆ ಪಕ್ಷಪಾತವಿಲ್ಲದೆ ತೀರ್ಪನ್ನು ಕೊಡಬೇಕು.” ಒಬ್ಬ ವ್ಯಕ್ತಿಯ ಶ್ರೀಮಂತಿಕೆ ಅಥವಾ ಬಡತನ ನಾವು ಅವನನ್ನು ನೋಡುವ ವಿಧವನ್ನು ಹೇಗೆ ಪ್ರಭಾವಿಸಬಲ್ಲದು?

9. (ಎ) ಸೊಲೊಮೋನ ಯಾವ ಕಹಿ ಸತ್ಯವನ್ನು ಬರೆದಿದ್ದಾನೆ? (ಬಿ) ಇದರಿಂದ ನಮಗೇನು ಪಾಠ?

9 ಸೊಲೊಮೋನನ ಮೂಲಕ ಒಂದು ಕಹಿ ಸತ್ಯವನ್ನು ಬೈಬಲಿನಲ್ಲಿ ದಾಖಲಿಸಲಾಗಿದೆ: “ಬಡವನು ನೆರೆಯವನಿಗೂ ಅಸಹ್ಯ; ಧನವಂತನಿಗೆ ಬಹು ಜನ ಮಿತ್ರರು.” (ಜ್ಞಾನೋ. 14:20) ಈ ಜ್ಞಾನೋಕ್ತಿಯ ಅರ್ಥವೇನು? ನಾವು ಜಾಗ್ರತೆ ವಹಿಸದಿದ್ದರೆ ಮುಖ ನೋಡಿ ಮಣೆ ಹಾಕಿಬಿಡುತ್ತೇವೆ. ಅಂದರೆ ಬರೀ ಶ್ರೀಮಂತ ಸಹೋದರರ ಸ್ನೇಹವನ್ನು ಮಾಡಿಬಿಡುತ್ತೇವೆ, ಬಡ ಸಹೋದರರನ್ನು ದೂರ ಇಟ್ಟುಬಿಡುತ್ತೇವೆ. ಜನರನ್ನು ಅವರ ಹತ್ತಿರ ಏನಿದೆ ಅಥವಾ ಏನಿಲ್ಲ ಅನ್ನುವುದರ ಮೇಲೆ ಅಳೆಯುವುದು ಯಾಕೆ ಅಪಾಯಕರ?   

10. ಯಾಕೋಬನು ಕ್ರೈಸ್ತರಿಗೆ ಯಾವ ಎಚ್ಚರಿಕೆ ಕೊಟ್ಟನು?

10 ನಾವು ನಮ್ಮ ಸಹೋದರರ ಶ್ರೀಮಂತಿಕೆ ಅಥವಾ ಬಡತನ ನೋಡಿ ಪಕ್ಷಪಾತ ಮಾಡುವುದಾದರೆ ಸಭೆಯಲ್ಲಿ ವಿಭಜನೆ ಬಂದುಬಿಡುತ್ತದೆ. ಮೊದಲನೇ ಶತಮಾನದಲ್ಲಿದ್ದ ಕೆಲವು ಸಭೆಗಳಲ್ಲಿ ಹೀಗೇ ಆಯಿತು. ಆದ್ದರಿಂದ ಯಾಕೋಬನು ಅಲ್ಲಿದ್ದ ಕ್ರೈಸ್ತರನ್ನು ಎಚ್ಚರಿಸಬೇಕಾಯಿತು. (ಯಾಕೋಬ 2:1-4 ಓದಿ.) ನಾವು ಸಭೆಯಲ್ಲಿ ಬಿರುಕು ಬರಲು ಬಿಡಬಾರದು. ಹಾಗಾದರೆ ಜನರ ಹತ್ತಿರ ಏನಿದೆ ಅನ್ನುವುದನ್ನು ನೋಡಿ ಅವರನ್ನು ತೀರ್ಪು ಮಾಡುವುದನ್ನು ನಾವು ಹೇಗೆ ತಪ್ಪಿಸಬಹುದು?

11. ಒಬ್ಬ ವ್ಯಕ್ತಿ ಶ್ರೀಮಂತನಾಗಿರುವುದರಿಂದ ಅಥವಾ ಬಡವನಾಗಿರುವುದರಿಂದ ಅವನು ಯೆಹೋವನಿಗೆ ಆಪ್ತನಾಗುತ್ತಾನಾ? ವಿವರಿಸಿ.

11 ನಾವು ನಮ್ಮ ಸಹೋದರರನ್ನು ಯೆಹೋವನು ನೋಡುವ ವಿಧದಲ್ಲಿ ನೋಡಬೇಕು. ಒಬ್ಬ ವ್ಯಕ್ತಿ ಶ್ರೀಮಂತನಾಗಿರುವುದರಿಂದ ಅಥವಾ ಬಡವನಾಗಿರುವುದರಿಂದ ಯೆಹೋವನಿಗೆ ಅಮೂಲ್ಯನಾಗಿಬಿಡುವುದಿಲ್ಲ. ನಮ್ಮ ಹತ್ತಿರ ಎಷ್ಟು ದುಡ್ಡು ಇದೆ ಅಥವಾ ಎಷ್ಟು ಆಸ್ತಿಪಾಸ್ತಿ ಇದೆ ಅನ್ನುವುದರ ಮೇಲೆ ಯೆಹೋವನೊಟ್ಟಿಗಿರುವ ನಮ್ಮ ಸಂಬಂಧ ಹೊಂದಿಕೊಂಡಿಲ್ಲ. “ಐಶ್ವರ್ಯವಂತನು ಸ್ವರ್ಗದ ರಾಜ್ಯವನ್ನು ಸೇರುವುದು ಕಷ್ಟ” ಎಂದು ಯೇಸು ಹೇಳಿದ್ದು ನಿಜ. ಆದರೆ ಇದು ಅಸಾಧ್ಯ ಎಂದು ಆತನು ಹೇಳಲಿಲ್ಲ. (ಮತ್ತಾ. 19:23) “ಬಡವರಾದ ನೀವು ಸಂತೋಷಿತರು; ದೇವರ ರಾಜ್ಯವು ನಿಮ್ಮದು” ಎಂದು ಸಹ ಯೇಸು ಹೇಳಿದ್ದಾನೆ. (ಲೂಕ 6:20) ಆದರೆ ಇದರರ್ಥ ಎಲ್ಲ ಬಡ ಜನರು ಯೇಸುವಿಗೆ ಕಿವಿಗೊಟ್ಟು ವಿಶೇಷ ಆಶೀರ್ವಾದಗಳನ್ನು ಪಡಕೊಳ್ಳುತ್ತಾರೆ ಎಂದಲ್ಲ. ಯೇಸುವಿನ ಕಾಲದಲ್ಲಿದ್ದ ಎಷ್ಟೋ ಬಡ ಜನರು ಆತನ ಹಿಂಬಾಲಕರಾಗಲಿಲ್ಲ. ವಿಷಯ ಇಷ್ಟೇ, ಒಬ್ಬ ವ್ಯಕ್ತಿಯ ಹತ್ತಿರ ಎಷ್ಟು ಸಂಪತ್ತಿದೆ ಅನ್ನುವುದರ ಮೇಲೆ ಯೆಹೋವನೊಟ್ಟಿಗಿರುವ ಅವನ ಸಂಬಂಧವನ್ನು ನಾವು ಅಳೆಯಲು ಸಾಧ್ಯವಿಲ್ಲ.

12. ಬಡವರಿಗೂ ಶ್ರೀಮಂತರಿಗೂ ಬೈಬಲ್‌ ಕೊಡುವ ಸಲಹೆ ಏನು?

12 ಯೆಹೋವನ ಜನರಲ್ಲಿ ಶ್ರೀಮಂತರೂ ಇದ್ದಾರೆ ಬಡವರೂ ಇದ್ದಾರೆ. ಆದರೆ ಅವರೆಲ್ಲರೂ ಯೆಹೋವನನ್ನು ಪ್ರೀತಿಸುತ್ತಾರೆ ಮತ್ತು ಪೂರ್ಣ ಹೃದಯದಿಂದ ಆತನ ಸೇವೆ ಮಾಡುತ್ತಾರೆ. ಶ್ರೀಮಂತರು “ತಮ್ಮ ನಿರೀಕ್ಷೆಯನ್ನು ಅನಿಶ್ಚಿತವಾದ ಐಶ್ವರ್ಯದ ಮೇಲಲ್ಲ . . . ದೇವರ ಮೇಲೆ” ಇಡಬೇಕೆಂದು ಬೈಬಲ್‌ ಹೇಳುತ್ತದೆ. (1 ತಿಮೊಥೆಯ 6:17-19 ಓದಿ.) ಹಣದ ಪ್ರೇಮ ತುಂಬ ಅಪಾಯಕಾರಿ ಎಂದೂ ಬೈಬಲ್‌ ಯೆಹೋವನ ಸೇವಕರೆಲ್ಲರಿಗೆ ಎಚ್ಚರಿಕೆ ನೀಡುತ್ತದೆ. ಈ ಎಚ್ಚರಿಕೆ ಬಡವರಿಗೂ ಶ್ರೀಮಂತರಿಗೂ ಅನ್ವಯಿಸುತ್ತದೆ. (1 ತಿಮೊ. 6:9, 10) ನಾವು ನಮ್ಮ ಸಹೋದರರನ್ನು ಯೆಹೋವನು ನೋಡುವಂತೆ ನೋಡುವಾಗ ಅವರ ಹತ್ತಿರ ಏನಿದೆ ಅಥವಾ ಏನಿಲ್ಲ ಅನ್ನುವುದರ ಮೇಲೆ ನಾವು ಅವರನ್ನು ತೀರ್ಪು ಮಾಡುವುದಿಲ್ಲ. ಆದರೆ ಒಬ್ಬ ವ್ಯಕ್ತಿಯ ವಯಸ್ಸನ್ನು ನೋಡಿ ತೀರ್ಪು ಮಾಡುವುದು ಸರಿನಾ?

ವಯಸ್ಸು ನೋಡಿ ತೀರ್ಪು ಮಾಡಬೇಡಿ

13. ದೊಡ್ಡವರಿಗೆ ಗೌರವ ಕೊಡುವುದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

13 ದೊಡ್ಡವರಿಗೆ ಗೌರವ ಕೊಡಬೇಕೆಂದು ಬೈಬಲ್‌ ಅನೇಕ ಸಲ ಹೇಳುತ್ತದೆ. “ತಲೆನರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು” ಎಂದು ಯಾಜಕಕಾಂಡ 19:32 ಹೇಳುತ್ತದೆ. “ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವದು” ಎಂದು ಜ್ಞಾನೋಕ್ತಿ 16:31 ಹೇಳುತ್ತದೆ. “ವೃದ್ಧನನ್ನು ಕಟುವಾಗಿ ಟೀಕಿಸಬೇಡ. ಬದಲಾಗಿ ಅವನನ್ನು ತಂದೆಯಂತೆ” ನೋಡು ಎಂದು ಪೌಲನು ತಿಮೊಥೆಯನಿಗೆ ಹೇಳಿದನು. (1 ತಿಮೊ. 5:1, 2) ತಿಮೊಥೆಯನಿಗೆ ಇಂಥ ವೃದ್ಧ ಸಹೋದರರ ಮೇಲೆ ಸ್ವಲ್ಪಮಟ್ಟಿಗೆ ಅಧಿಕಾರ ಇತ್ತು. ಆದರೂ ಅವನು ಅವರ ಜೊತೆ ಯಾವಾಗಲೂ ಕನಿಕರದಿಂದ ಗೌರವದಿಂದ ನಡಕೊಳ್ಳುವಂತೆ ಪ್ರೋತ್ಸಾಹಿಸಲಾಯಿತು.

14. ನಾವು ಯಾವಾಗ ನಮಗಿಂತ ದೊಡ್ಡವರನ್ನು ತಿದ್ದಬೇಕಾಗಿ ಬರಬಹುದು?

14 ವಯಸ್ಸಿನಲ್ಲಿ ದೊಡ್ಡವರಾದ ಒಬ್ಬ ಸಹೋದರನೋ ಸಹೋದರಿಯೋ ಬೇಕುಬೇಕೆಂದೇ ತಪ್ಪು ಮಾಡಿದರೆ ಅಥವಾ ಯೆಹೋವನಿಗೆ ಇಷ್ಟವಿಲ್ಲದ ವಿಷಯವನ್ನು ಪ್ರೋತ್ಸಾಹಿಸಿದರೆ ಏನು ಮಾಡಬೇಕು? ಬೇಕುಬೇಕೆಂದೇ ತಪ್ಪು ಮಾಡುವವರ ವಯಸ್ಸು ಎಷ್ಟೇ ಇರಲಿ, ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಾನೆ. “ಪಾಪಿಗೆ ನೂರು ವರ್ಷ ಆಗಿದ್ದರೂ ಅವನಿಗೆ ಶಿಕ್ಷೆ ಸಿಕ್ಕೇ ಸಿಗುತ್ತದೆ” ಎಂದು ಯೆಶಾಯ 65:20 ಹೇಳುತ್ತದೆ. (ನೂತನ ಲೋಕ ಭಾಷಾಂತರ) ಇದೇ ತತ್ವವನ್ನು ಯೆಹೆಜ್ಕೇಲನಿಗೆ ಸಿಕ್ಕಿದ ದರ್ಶನದಲ್ಲಿ ನೋಡಬಹುದು. (ಯೆಹೆ. 9:5-7) ಈ ತತ್ವಗಳನ್ನು ಪಾಲಿಸಿದರೆ ಮಹಾವೃದ್ಧನಾದ ಯೆಹೋವನನ್ನು ಗೌರವಿಸುತ್ತೇವೆ. (ದಾನಿ. 7:9, 10, 13, 14) ಈ ಗೌರವ ತಪ್ಪು ಮಾಡಿದ ವ್ಯಕ್ತಿಯ ವಯಸ್ಸನ್ನು ನೋಡದೆ ಅವರನ್ನು ತಿದ್ದಲು ಬೇಕಾದ ಧೈರ್ಯವನ್ನು ಕೊಡುತ್ತದೆ.—ಗಲಾ. 6:1.

ನೀವು ಯುವ ಸಹೋದರರನ್ನು ಗೌರವಿಸುತ್ತೀರಾ? (ಪ್ಯಾರ 15 ನೋಡಿ)

15. ಯುವ ಸಹೋದರರಿಗೆ ಗೌರವ ತೋರಿಸುವ ವಿಷಯದಲ್ಲಿ ಅಪೊಸ್ತಲ ಪೌಲನಿಂದ ಏನು ಕಲಿಯಬಹುದು?

15 ಒಬ್ಬ ಸಹೋದರನು ಚಿಕ್ಕವನಾಗಿದ್ದರೆ ಆಗೇನು? ಅವನಿಗೆ ಗೌರವ ಕೊಡಬೇಕಾಗಿಲ್ಲ ಅಂತನಾ? ಇಲ್ಲ. “ನಿನ್ನ ಯೌವನವನ್ನು ಯಾವನೂ ಎಂದಿಗೂ ಕಡೆಗಣಿಸದಿರಲಿ. ಬದಲಾಗಿ ಮಾತಿನಲ್ಲಿಯೂ ನಡತೆಯಲ್ಲಿಯೂ ಪ್ರೀತಿಯಲ್ಲಿಯೂ ನಂಬಿಕೆಯಲ್ಲಿಯೂ ನೈತಿಕ ಶುದ್ಧತೆಯಲ್ಲಿಯೂ ನಂಬಿಗಸ್ತರಿಗೆ ಮಾದರಿಯಾಗಿರು” ಎಂದು ಪೌಲನು ತಿಮೊಥೆಯನಿಗೆ ಬರೆದನು. (1 ತಿಮೊ. 4:12) ಪೌಲನು ಇದನ್ನು ಬರೆದಾಗ ತಿಮೊಥೆಯನಿಗೆ ಬಹುಶಃ 30 ವರ್ಷ ಇದ್ದಿರಬೇಕು. ಆದರೂ ಪೌಲನು ಅವನಿಗೆ ತುಂಬ ಪ್ರಾಮುಖ್ಯವಾದ ಜವಾಬ್ದಾರಿಗಳನ್ನು ಕೊಟ್ಟಿದ್ದನು. ಪಾಠ ಏನು? ನಾವು ಯುವ ಸಹೋದರರ ವಯಸ್ಸನ್ನು ನೋಡಿ ಅವರನ್ನು ಅಳೆಯಬಾರದು. ಯೇಸುವಿಗೆ ಬರೀ 33 ವರ್ಷ ಆಗುವಷ್ಟರಲ್ಲೇ ಏನೆಲ್ಲಾ ಸಾಧಿಸಿದನೆಂದು ನೆನಪಿಸಿಕೊಳ್ಳಿ!

16, 17. (ಎ) ಒಬ್ಬ ಸಹೋದರನು ಸಹಾಯಕ ಸೇವಕನಾಗಿ ಅಥವಾ ಹಿರಿಯನಾಗಿ ನೇಮಿಸಲ್ಪಡಲು ಅರ್ಹನಾ ಎನ್ನುವುದನ್ನು ಹಿರಿಯರು ಹೇಗೆ ತೀರ್ಮಾನಿಸುತ್ತಾರೆ? (ಬಿ) ನಮ್ಮ ವೈಯಕ್ತಿಕ ಅಭಿಪ್ರಾಯಗಳು ಅಥವಾ ಸ್ಥಳೀಯ ಪದ್ಧತಿಗಳು ಹೇಗೆ ಬೈಬಲ್‌ ಹೇಳುವುದಕ್ಕೆ ವಿರುದ್ಧವಾಗಿರಬಹುದು?

16 ಕೆಲವು ಸಂಸ್ಕೃತಿಗಳಲ್ಲಿ ಯುವಜನರಿಗೆ ಗೌರವ ಕೊಡುವುದಿಲ್ಲ. ಈ ಕಾರಣದಿಂದ ಕೆಲವು ಹಿರಿಯರು ಒಬ್ಬ ಯುವ ಸಹೋದರನು ಅರ್ಹನಾಗಿರುವುದಾದರೂ ಅವನನ್ನು ಸಹಾಯಕ ಸೇವಕನಾಗಿಯೋ ಹಿರಿಯನಾಗಿಯೋ ಶಿಫಾರಸ್ಸು ಮಾಡುವುದಿಲ್ಲ. ಆದರೆ ಒಬ್ಬ ಸಹೋದರನನ್ನು ಶಿಫಾರಸ್ಸು ಮಾಡುವ ಮುಂಚೆ ಅವನಿಗೆ ಇಂತಿಷ್ಟು ವಯಸ್ಸು ಆಗಿರಬೇಕೆಂದು ಬೈಬಲ್‌ ಹೇಳುವುದಿಲ್ಲ. (1 ತಿಮೊ. 3:1-10, 12, 13; ತೀತ 1:5-9) ಒಬ್ಬ ಹಿರಿಯನು ತನ್ನ ಸಂಸ್ಕೃತಿಯನ್ನು ಮನಸ್ಸಲ್ಲಿಟ್ಟು ಈ ವಿಷಯದಲ್ಲಿ ಒಂದು ನಿಯಮವನ್ನು ಮಾಡುವುದಾದರೆ ಅವನು ದೇವರ ವಾಕ್ಯ ಹೇಳುವಂತೆ ಮಾಡುತ್ತಿಲ್ಲ. ಹಿರಿಯರು ಯುವ ಸಹೋದರರನ್ನು ತಮ್ಮ ಸ್ವಂತ ಅಭಿಪ್ರಾಯಗಳು ಅಥವಾ ಸ್ಥಳೀಯ ಪದ್ಧತಿಗಳನ್ನು ಮನಸ್ಸಲ್ಲಿಟ್ಟು ಅಳೆಯಬಾರದು. ದೇವರ ವಾಕ್ಯದಲ್ಲಿರುವ ಮಟ್ಟಗಳ ಮೇಲಾಧರಿಸಿ ತೀರ್ಪು ಮಾಡಬೇಕು.—2 ತಿಮೊ. 3:16, 17.

17 ಸಹಾಯಕ ಸೇವಕರನ್ನು ಅಥವಾ ಹಿರಿಯರನ್ನು ನೇಮಿಸುವ ವಿಷಯದಲ್ಲಿ ಹಿರಿಯರು ಬೈಬಲಿನ ಮಟ್ಟಗಳನ್ನು ಪಾಲಿಸದಿದ್ದರೆ ಅರ್ಹತೆ ಇರುವ ಸಹೋದರರಿಗೆ ಅಡ್ಡಗಾಲು ಹಾಕಿದಂತೆ ಆಗುತ್ತದೆ. ಒಂದು ದೇಶದಲ್ಲಿ ಒಬ್ಬ ಸಹಾಯಕ ಸೇವಕನು ತನಗೆ ಕೊಡಲಾಗಿದ್ದ ಪ್ರಾಮುಖ್ಯ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದನು. ಈ ಸಹೋದರನಲ್ಲಿ ಹಿರಿಯನಾಗಿ ನೇಮಕ ಹೊಂದುವ ಅರ್ಹತೆ ಇದೆ ಎಂದು ಹಿರಿಯರಿಗೆ ಅನಿಸಿತು. ಆದರೆ ಆ ಸಹೋದರನು ನೋಡಲಿಕ್ಕೆ ತುಂಬ ಚಿಕ್ಕವನು ತರ ಕಾಣುತ್ತಾನೆ ಎಂದು ಕೆಲವು ವೃದ್ಧ ಹಿರಿಯರು ಹೇಳಿದರು. ಆದ್ದರಿಂದ ಅವನನ್ನು ಶಿಫಾರಸ್ಸು ಮಾಡಲಿಲ್ಲ. ದುಃಖಕರವಾಗಿ ಈ ಸಹೋದರನು ಹಿರಿಯನಾಗಿ ನೇಮಕ ಪಡೆಯಲಿಲ್ಲ. ಕಾರಣ ಇಷ್ಟೇ, ಅವನು ನೋಡಲಿಕ್ಕೆ ಚಿಕ್ಕವನು ತರ ಕಾಣುತ್ತಾನೆ. ಈ ರೀತಿಯ ಯೋಚನೆ ಲೋಕದ ಅನೇಕ ಕಡೆಗಳಲ್ಲಿ ಸಾಮಾನ್ಯ ಎಂದು ತೋರುತ್ತದೆ. ನಾವು ನಮ್ಮ ಅಭಿಪ್ರಾಯಗಳು ಅಥವಾ ಸ್ಥಳೀಯ ಆಚಾರಗಳನ್ನು ಬಿಟ್ಟು ಬೈಬಲ್‌ ಏನು ಹೇಳುತ್ತದೆ ಅನ್ನುವುದಕ್ಕೆ ಗಮನ ಕೊಡುವುದು ತುಂಬ ಪ್ರಾಮುಖ್ಯ. ಆಗ ನಾವು ಯೇಸುವಿನ ಮಾತಿಗೆ ವಿಧೇಯರಾಗಿ ಬೇರೆಯವರನ್ನು ಅವರ ಹೊರತೋರಿಕೆ ನೋಡಿ ತೀರ್ಪು ಮಾಡುವುದಿಲ್ಲ.

ನ್ಯಾಯವಾಗಿ ತೀರ್ಪು ಮಾಡಿರಿ

18, 19. ನಮ್ಮ ಸಹೋದರರನ್ನು ಯೆಹೋವನು ನೋಡುವಂತೆ ನೋಡಲು ಯಾವುದು ಸಹಾಯ ಮಾಡುತ್ತದೆ?

18 ನಾವು ಅಪರಿಪೂರ್ಣರು. ಆದರೂ ಬೇರೆಯವರನ್ನು ಯಾವುದೇ ಪೂರ್ವಗ್ರಹವಿಲ್ಲದೆ ಯೆಹೋವನು ನೋಡುವಂತೆ ನೋಡಲು ನಾವು ಕಲಿಯಬಹುದು. (ಅ. ಕಾ. 10:34, 35) ಆದರೆ ಇದಕ್ಕಾಗಿ ನಾವು ದೇವರ ವಾಕ್ಯದಲ್ಲಿರುವ ಸಲಹೆಗಳಿಗೆ ಯಾವಾಗಲೂ ಗಮನ ಕೊಡುತ್ತಿರಬೇಕು. ನಾವು ಆ ಸಲಹೆಗಳನ್ನು ಅನ್ವಯಿಸಿದರೆ “ಹೊರತೋರಿಕೆಯನ್ನು ನೋಡಿ ತೀರ್ಪುಮಾಡುವುದನ್ನು ನಿಲ್ಲಿಸಿರಿ” ಎಂದು ಯೇಸು ಹೇಳಿದ ಆಜ್ಞೆಯನ್ನು ಪಾಲಿಸಿದಂತೆ ಆಗುತ್ತದೆ.—ಯೋಹಾ. 7:24.

19 ನಮ್ಮ ರಾಜನಾದ ಯೇಸು ಕ್ರಿಸ್ತನು ಎಲ್ಲ ಜನರನ್ನು ತೀರ್ಪು ಮಾಡುವ ಸಮಯ ತುಂಬ ಹತ್ತಿರ ಇದೆ. ಆದರೆ ಆತನ ತೀರ್ಪು ದೇವರ ನೀತಿಯುತ ಮಟ್ಟಗಳ ಮೇಲೆ ಆಧರಿಸಿರುತ್ತದೆ. ಆತನು ಕಣ್ಣಿಗೆ ಕಂಡಂತೆ, ಕಿವಿಗೆ ಬಿದ್ದಂತೆ ತೀರ್ಪು ಮಾಡುವುದಿಲ್ಲ. (ಯೆಶಾ. 11:3, 4) ಆ ಅದ್ಭುತ ಸಮಯಕ್ಕಾಗಿ ನಾವೆಲ್ಲರೂ ತುಂಬ ಆಸೆಯಿಂದ ಎದುರುನೋಡುತ್ತೇವೆ!