ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 20

ದೌರ್ಜನ್ಯಕ್ಕೆ ಒಳಗಾದವರನ್ನು ಸಂತೈಸಿ

ದೌರ್ಜನ್ಯಕ್ಕೆ ಒಳಗಾದವರನ್ನು ಸಂತೈಸಿ

‘ಸಕಲ ಸಾಂತ್ವನದ ದೇವರು ನಮ್ಮ ಎಲ್ಲ ಸಂಕಟಗಳಲ್ಲಿ ನಮ್ಮನ್ನು ಸಾಂತ್ವನಗೊಳಿಸುತ್ತಾನೆ.’—2 ಕೊರಿಂ. 1:3, 4.

ಗೀತೆ 88 ಮಕ್ಕಳು—ದೇವರು ಕೊಡುವ ಹೊಣೆಗಾರಿಕೆ

ಕಿರುನೋಟ *

1-2. (ಎ) ಮನುಷ್ಯರು ಸಾಂತ್ವನಕ್ಕಾಗಿ ಹಂಬಲಿಸುತ್ತಾರೆ ಮತ್ತು ಬೇರೆಯವರನ್ನು ಸಂತೈಸಲು ಸಾಧ್ಯ ಅಂತ ಹೇಳುವುದಕ್ಕೆ ಒಂದು ಉದಾಹರಣೆ ಕೊಡಿ. (ಬಿ) ಕೆಲವು ಮಕ್ಕಳ ಮನಸ್ಸಿಗೆ ಯಾವ ಗಾಯ ಆಗುತ್ತದೆ?

ಮನುಷ್ಯ ಸಾಂತ್ವನಕ್ಕಾಗಿ ಹಂಬಲಿಸುವುದು ಸಹಜ. ಬೇರೆಯವರನ್ನು ಸಂತೈಸುವ ಸಾಮರ್ಥ್ಯನೂ ಮಾನವನಿಗಿದೆ. ಉದಾಹರಣೆಗೆ, ಒಂದು ಚಿಕ್ಕ ಮಗು ಆಡುವಾಗ ಬಿದ್ದು ಕಾಲಿಗೆ ಗಾಯವಾದರೆ ‘ಅಮ್ಮಾ’ ಅಂತನೋ ‘ಅಪ್ಪಾ’ ಅಂತನೋ ಅಳುತ್ತಾ ಹೆತ್ತವರ ಹತ್ತಿರ ಓಡುತ್ತೆ. ಆ ಮಗುವಿನ ತಂದೆ-ತಾಯಿಗೆ ಗಾಯವನ್ನು ವಾಸಿಮಾಡುವ ಶಕ್ತಿ ಇಲ್ಲ. ಆದರೆ ತಮ್ಮ ಮಗುವನ್ನು ಸಮಾಧಾನ ಮಾಡುವುದಕ್ಕಂತೂ ಆಗುತ್ತೆ. ಆ ಪುಟಾಣಿಯ ಕಣ್ಣೀರನ್ನು ಒರೆಸುತ್ತಾ, ಮುದ್ದಿಸುತ್ತಾ ‘ಏನಾಯ್ತು ಪುಟ್ಟಾ’ ಅಂತ ಕೇಳುತ್ತಾರೆ. ಸ್ವಲ್ಪ ಔಷಧಿ ಹಚ್ಚುತ್ತಾರೆ. ಬ್ಯಾಂಡೇಜ್‌ ಕಟ್ಟುತ್ತಾರೆ. ಇಷ್ಟೆಲ್ಲ ಮಾಡುವಷ್ಟರಲ್ಲಿ ಮಗು ಅಳು ನಿಲ್ಲಿಸಿರುತ್ತೆ, ತಿರುಗಿ ಆಟ ಆಡಕ್ಕೂ ಹೋಗಿರುತ್ತೆ. ದಿನ ಕಳೆದ ಹಾಗೆ ಆ ಗಾಯನೂ ವಾಸಿಯಾಗಿಬಿಡುತ್ತೆ.

2 ಇದೆಲ್ಲ ಚಿಕ್ಕಪುಟ್ಟ ಗಾಯ. ಆದರೆ ಕೆಲವೊಮ್ಮೆ ಮಕ್ಕಳ ಜೀವನದಲ್ಲಿ ತುಂಬ ದೊಡ್ಡ ಗಾಯಗಳು ಆಗುತ್ತವೆ. ಅದರಲ್ಲೊಂದು ಲೈಂಗಿಕ ದೌರ್ಜನ್ಯ. ಇದು ಮಕ್ಕಳ ಮೇಲೆ ಒಂದು ಸಾರಿ ನಡೆದಿರಬಹುದು ಅಥವಾ ತುಂಬ ವರ್ಷಗಳಿಂದ ನಡೆಯುತ್ತಿರಬಹುದು. ಏನೇ ಆದರೂ ದೌರ್ಜನ್ಯದಿಂದ ಮಕ್ಕಳ ಮನಸ್ಸಿಗೆ ಮಾಸದ ಗಾಯ ಆಗುತ್ತದೆ. ಕೆಲವೊಮ್ಮೆ ದೌರ್ಜನ್ಯ ನಡೆಸಿದ ಅಪರಾಧಿಗಳಿಗೆ ಶಿಕ್ಷೆ ಆಗಬಹುದು, ಕೆಲವೊಮ್ಮೆ ಶಿಕ್ಷೆಯಾಗದೆ ಅವರು ತಪ್ಪಿಸಿಕೊಂಡಿದ್ದಾರೆ ಅಂತ ಅನಿಸಬಹುದು. ಒಂದುವೇಳೆ ಅಪರಾಧಿಗೆ ತಕ್ಷಣ ಶಿಕ್ಷೆ ಸಿಕ್ಕಿದರೂ, ಅಮಾಯಕ ಮಕ್ಕಳ ಮನಸ್ಸಿಗೆ ಆಗುವ ನೋವು ಮಾತ್ರ ಅವರು ಬೆಳೆದು ದೊಡ್ಡವರಾದರೂ ಹೋಗಲಿಕ್ಕಿಲ್ಲ.

3. (ಎ) ಎರಡನೇ ಕೊರಿಂಥ 1:3, 4 ರ ಪ್ರಕಾರ ಯೆಹೋವನು ಏನು ಬಯಸುತ್ತಾನೆ? (ಬಿ) ಯಾವ ಪ್ರಶ್ನೆಗಳಿಗೆ ಉತ್ತರ ನೋಡಲಿದ್ದೇವೆ?

3 ಚಿಕ್ಕ ವಯಸ್ಸಲ್ಲಿ ಆದ ಕಹಿ ಘಟನೆ ಮತ್ತೆ-ಮತ್ತೆ ನೆನಪಾಗಿ ಕಷ್ಟ ಆಗುತ್ತಿರುವವರಿಗೆ ಯಾವ ಸಹಾಯ ಇದೆ? (2 ಕೊರಿಂಥ 1:3, 4 ಓದಿ.) ತನ್ನ ಕಣ್ಮಣಿಗಳಿಗೆ ಬೇಕಾದ ಪ್ರೀತಿ ಮತ್ತು ಸಾಂತ್ವನ ಸಿಗಬೇಕು ಅನ್ನುವುದು ಯೆಹೋವನ ಬಯಕೆ. ಈಗ ನಾವು ಮುಂದಿನ ಮೂರು ಪ್ರಶ್ನೆಗಳಿಗೆ ಉತ್ತರ ನೋಡೋಣ: (1) ಚಿಕ್ಕ ವಯಸ್ಸಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಯಾಕೆ ಸಾಂತ್ವನ ಬೇಕು? (2) ಯಾರೆಲ್ಲ ಸಾಂತ್ವನ ಕೊಡಬಹುದು? (3) ನಾವು ಹೇಗೆ ಸಾಂತ್ವನ ಕೊಡಬಹುದು?

ಯಾಕೆ ಸಾಂತ್ವನ ಕೊಡಬೇಕು?

4-5. (ಎ) ಮಕ್ಕಳು ದೊಡ್ಡವರ ತರ ಅಲ್ಲ ಎಂದು ಅರ್ಥಮಾಡಿಕೊಳ್ಳುವುದು ಯಾಕೆ ಮುಖ್ಯ? (ಬಿ) ದೌರ್ಜನ್ಯದಿಂದಾಗಿ ಮಕ್ಕಳ ನಂಬಿಕೆಗೆ ಏನಾಗುತ್ತೆ?

4 ದೌರ್ಜನ್ಯ ನಡೆದು ತುಂಬ ವರ್ಷಗಳೇ ಆಗಿದ್ದರೂ ಕೆಲವರಿಗೆ ಈಗಲೂ ಸಾಂತ್ವನ ಬೇಕಾಗಿರುತ್ತದೆ. ಯಾಕೆ? ಯಾಕೆಂದು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ಮಕ್ಕಳು ದೊಡ್ಡವರ ತರ ಅಲ್ಲ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ದೌರ್ಜನ್ಯ ದೊಡ್ಡವರ ಮೇಲೆ ಬೀರುವ ಪ್ರಭಾವಕ್ಕೂ ಚಿಕ್ಕವರ ಮೇಲೆ ಬೀರುವ ಪ್ರಭಾವಕ್ಕೂ ತುಂಬ ವ್ಯತ್ಯಾಸ ಇರುತ್ತೆ. ಕೆಲವು ಉದಾಹರಣೆ ನೋಡಿ.

5 ಮಕ್ಕಳು ತಮ್ಮನ್ನು ನೋಡಿಕೊಳ್ಳುವವರ ಮೇಲೆ ಪ್ರೀತಿ-ನಂಬಿಕೆ ಬೆಳೆಸಿಕೊಳ್ಳಬೇಕು. ಇದರಿಂದ ಅವರಿಗೆ ಸುರಕ್ಷಿತ ಭಾವನೆ ಬರುತ್ತೆ ಮತ್ತು ತಮಗೆ ಪ್ರೀತಿ ತೋರಿಸುವವರನ್ನು ನಂಬಬೇಕು ಎಂದು ಕಲಿಯುತ್ತಾರೆ. (ಕೀರ್ತ. 22:9) ಆದರೆ ದುಃಖದ ವಿಷಯ ಏನೆಂದರೆ, ದೌರ್ಜನ್ಯ ನಡೆಯುವುದು ಹೆಚ್ಚಾಗಿ ಮಕ್ಕಳ ಮನೆಯಲ್ಲೇ. ಹೆಚ್ಚಾಗಿ ಅವರ ಮನೆಯವರೇ ಅಥವಾ ಪರಿಚಯಸ್ಥರೇ ದೌರ್ಜನ್ಯ ನಡೆಸುತ್ತಾರೆ. ಆಗ ಆ ಮಕ್ಕಳ ನಂಬಿಕೆಗೆ ಮೋಸ ಆಗುತ್ತೆ. ಇದರಿಂದ ಬೇರೆಯವರನ್ನು ನಂಬಲು ಅವರಿಗೆ ಕಷ್ಟ ಆಗುತ್ತೆ. ತುಂಬ ವರ್ಷ ಆದರೂ ಅವರು ಯಾರನ್ನೂ ನಂಬಲ್ಲ.

6. ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಯಾಕೆ ಕ್ರೂರ ಕೃತ್ಯವಾಗಿದೆ?

6 ಮಕ್ಕಳಿಗೆ ತಮ್ಮನ್ನು ತಾವೇ ಕಾಪಾಡಿಕೊಳ್ಳಲು ಆಗಲ್ಲ ಮತ್ತು ಲೈಂಗಿಕ ದೌರ್ಜನ್ಯ ಅವರ ಮೇಲೆ ನಡೆಯುವ ಕ್ರೂರತನವಾಗಿದೆ, ತುಂಬ ಹಾನಿ ತರುತ್ತೆ. ಮಕ್ಕಳು ಮದುವೆ ಅಂದರೆ ಏನು, ಸೆಕ್ಸ್‌ ಅಂದರೆ ಏನು ಎಂದು ಅರ್ಥಮಾಡಿಕೊಳ್ಳುವ ಮುಂಚೆನೇ ಅವರನ್ನು ಲೈಂಗಿಕ ವಿಷಯಗಳಿಗೆ ಉಪಯೋಗಿಸಿಕೊಳ್ಳುವುದು ತುಂಬ ಹಾನಿ ಮಾಡುತ್ತೆ. ಯಾಕೆಂದರೆ ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಇದಕ್ಕೆ ಸಿದ್ಧರಾಗಲು ತುಂಬ ವರ್ಷಗಳು ಹಿಡಿಯುತ್ತೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಅವರು ಸೆಕ್ಸ್‌ ಬಗ್ಗೆ ತಪ್ಪಾದ ಅಭಿಪ್ರಾಯ ಬೆಳೆಸಿಕೊಳ್ಳುತ್ತಾರೆ. ತಮ್ಮ ಬಗ್ಗೆ ತಾವೇ ಕೆಟ್ಟ ಭಾವನೆ ಬೆಳೆಸಿಕೊಳ್ಳುತ್ತಾರೆ ಮತ್ತು ಬೇರೆಯವರ ಮೇಲೆ ನಂಬಿಕೆ ಕಳಕೊಳ್ಳುತ್ತಾರೆ.

7. (ಎ) ದೌರ್ಜನ್ಯ ನಡೆಸುವವರಿಗೆ ಮಕ್ಕಳನ್ನು ಮೋಸ ಮಾಡುವುದು ಯಾಕೆ ಸುಲಭ? (ಬಿ) ಮಕ್ಕಳನ್ನು ಮೋಸ ಮಾಡಲು ಅವರು ಏನು ಹೇಳಬಹುದು? (ಸಿ) ಇದರಿಂದ ಮಕ್ಕಳ ಮೇಲೆ ಯಾವ ಪರಿಣಾಮ ಆಗುತ್ತೆ?

7 ಮಕ್ಕಳಿಗೆ ಸರಿ ಯಾವುದು ತಪ್ಪು ಯಾವುದು ಅಂತ ಗೊತ್ತಿರಲ್ಲ, ಅಪಾಯವನ್ನು ಗುರುತಿಸಿ ಅದರಿಂದ ದೂರ ಇರಲು ಕಲಿತಿರಲ್ಲ. (1 ಕೊರಿಂ. 13:11) ಹಾಗಾಗಿ ಅತ್ಯಾಚಾರಿಗಳಿಗೆ ಮಕ್ಕಳನ್ನು ಮೋಸ ಮಾಡುವುದು ಸುಲಭ. ದೌರ್ಜನ್ಯ ನಡೆಸುವವರು ಮಕ್ಕಳಿಗೆ ಭಯಂಕರವಾದ ಸುಳ್ಳುಗಳನ್ನು ಹೇಳುತ್ತಾರೆ. ಈ ದೌರ್ಜನ್ಯ ನಡೆಯುತ್ತಿರುವುದಕ್ಕೆ ಆ ಮಗುನೇ ಕಾರಣ, ದೌರ್ಜನ್ಯ ನಡೆದದ್ದರ ಬಗ್ಗೆ ಯಾರ ಹತ್ತಿರಾನೂ ಹೇಳಬಾರದು, ಹೇಳಿದರೆ ಯಾರೂ ನಂಬಲ್ಲ, ಯಾರೂ ಸಹಾಯ ಮಾಡಲ್ಲ, ದೊಡ್ಡವರ ಮತ್ತು ಮಕ್ಕಳ ಮಧ್ಯೆ ನಡೆಯುವ ಇಂಥ ಲೈಂಗಿಕ ಕ್ರಿಯೆ ಪ್ರೀತಿ ತೋರಿಸುವ ಒಂದು ವಿಧ ಎಂದು ಹೇಳಬಹುದು. ಇದೆಲ್ಲಾ ಸುಳ್ಳು ಅಂತ ಅರ್ಥಮಾಡಿಕೊಳ್ಳಲು ಮಕ್ಕಳಿಗೆ ತುಂಬ ವರ್ಷ ಹಿಡಿಯುತ್ತೆ. ದೌರ್ಜನ್ಯಕ್ಕೆ ಒಳಗಾದ ಮಗುವಿಗೆ ತನ್ನ ಬಗ್ಗೆನೇ ಅಸಹ್ಯ ಭಾವನೆ ಬಂದುಬಿಡುತ್ತದೆ. ತನ್ನನ್ನು ಯಾರೂ ಪ್ರೀತಿಸಲ್ಲ, ಅಂಥ ಪ್ರೀತಿಗೆ ತಾನು ಯೋಗ್ಯ ಅಲ್ಲ ಅನ್ನುವ ಭಾವನೆ ಬಂದುಬಿಡುತ್ತೆ.

8. ದೌರ್ಜನ್ಯಕ್ಕೆ ಒಳಗಾದವರನ್ನು ಯೆಹೋವನು ಖಂಡಿತ ಸಂತೈಸುತ್ತಾನೆ ಎಂದು ನಮಗೆ ಹೇಗೆ ಗೊತ್ತು?

8 ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಯಾಕೆ ತುಂಬ ವರ್ಷ ಕಷ್ಟಪಡುತ್ತಾರೆ ಅನ್ನುವುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತೆ. ಲೈಂಗಿಕ ದೌರ್ಜನ್ಯ ನಿಜಕ್ಕೂ ಒಂದು ಘೋರ ಅಪರಾಧವಾಗಿದೆ! ನಾವು ಕಡೇ ದಿನಗಳಲ್ಲಿ ಜೀವಿಸುತ್ತಿದ್ದೇವೆ ಅನ್ನುವುದಕ್ಕೆ ಇದೊಂದು ಸ್ಪಷ್ಟ ರುಜುವಾತು. ಯಾಕೆಂದರೆ ಈಗ ಜನರಲ್ಲಿ “ಸ್ವಾಭಾವಿಕ ಮಮತೆಯಿಲ್ಲ” ಮತ್ತು “ದುಷ್ಟರೂ ವಂಚಕರೂ . . . ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ” ಹೋಗುತ್ತಿದ್ದಾರೆ. (2 ತಿಮೊ. 3:1-5, 13) ಸೈತಾನನ ನೀಚ ಕೃತ್ಯಗಳಿಂದ ತುಂಬ ಹಾನಿ ಆಗಿದೆ. ಜನರೂ ಅವನ ತರಾನೇ ನಡಕೊಳ್ಳುವಾಗ ನಮಗೆ ತುಂಬ ಬೇಜಾರಾಗುತ್ತೆ. ಆದರೆ ಯೆಹೋವ ದೇವರು ಸೈತಾನನಿಗಿಂತ ಮತ್ತು ಅವನ ತಾಳಕ್ಕೆ ತಕ್ಕಂತೆ ಕುಣಿಯುವ ಬೇರೆಯವರಿಗಿಂತ ತುಂಬ ಬಲಶಾಲಿ. ಸೈತಾನನ ಕುತಂತ್ರಗಳು ಯೆಹೋವನ ಕಣ್ಣಿಗೆ ಮರೆಯಾಗಿಲ್ಲ. ನಾವು ಎಷ್ಟು ಕಷ್ಟ ಅನುಭವಿಸುತ್ತೇವೆ ಅನ್ನುವುದು ಕೂಡ ಯೆಹೋವನಿಗೆ ಚೆನ್ನಾಗಿ ಗೊತ್ತು. ನಮಗೆ ಬೇಕಾದ ಸಾಂತ್ವನವನ್ನು ಆತನು ಕೊಟ್ಟೇ ಕೊಡುತ್ತಾನೆ. “ಸಕಲ ಸಾಂತ್ವನದ ದೇವರೂ” ಆಗಿರುವ ಯೆಹೋವನ ಆರಾಧಕರಾಗಿರಲು ನಾವು ಸಂತೋಷಪಡುತ್ತೇವೆ. “ನಮ್ಮ ಎಲ್ಲ ಸಂಕಟಗಳಲ್ಲಿ ಆತನು ನಮ್ಮನ್ನು ಸಾಂತ್ವನಗೊಳಿಸುತ್ತಾನೆ; ಹೀಗೆ ದೇವರಿಂದ ನಾವು ಹೊಂದಿರುವ ಸಾಂತ್ವನದಿಂದಾಗಿ ಯಾವುದೇ ರೀತಿಯ ಸಂಕಟದಲ್ಲಿರುವವರನ್ನು ನಾವು ಸಾಂತ್ವನಗೊಳಿಸಲು ಶಕ್ತರಾಗುತ್ತೇವೆ.” (2 ಕೊರಿಂ. 1:3, 4) ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರನ್ನು ಸಂತೈಸಲು ಯೆಹೋವ ದೇವರು ಯಾರನ್ನು ಉಪಯೋಗಿಸುತ್ತಾನೆ?

ಯಾರು ಸಂತೈಸಬಹುದು?

9. ಕೀರ್ತನೆ 27:10 ರಲ್ಲಿರುವ ರಾಜ ದಾವೀದನ ಮಾತಿಗನುಸಾರ, ಸ್ವಂತ ಕುಟುಂಬದವರೇ ಕೈಬಿಟ್ಟರೂ ಯೆಹೋವನು ಏನು ಮಾಡುತ್ತಾನೆ ಎಂದು ಗೊತ್ತಾಗುತ್ತೆ?

9 ಕೆಲವು ಹೆತ್ತವರು ತಮ್ಮ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಅಂತ ಗೊತ್ತಿದ್ದರೂ ಅದರ ಬಗ್ಗೆ ಏನೂ ಮಾಡಿರಲ್ಲ. ಕೆಲವರ ಮೇಲೆ ಆಪ್ತರೇ ದೌರ್ಜನ್ಯ ನಡೆಸಿರಬಹುದು. ಮುಖ್ಯವಾಗಿ ಇಂಥ ಸಹೋದರ-ಸಹೋದರಿಯರಿಗೆ ಸಾಂತ್ವನ ಬೇಕು. ಯೆಹೋವನು ಯಾವಾಗಲೂ ಸಂತೈಸುತ್ತಾನೆ ಎಂದು ಕೀರ್ತನೆಗಾರನಾದ ದಾವೀದನು ನಂಬಿದನು. (ಕೀರ್ತನೆ 27:10 ಓದಿ.) ಸ್ವಂತ ಕುಟುಂಬದವರೇ ಕೈಬಿಟ್ಟರೂ ಯೆಹೋವನು ಕೈಬಿಡಲ್ಲ ಎಂದು ದಾವೀದನಿಗೆ ಗೊತ್ತಿತ್ತು. ಯೆಹೋವನು ಹೇಗೆ ಸಾಂತ್ವನ ಕೊಡುತ್ತಾನೆ? ಆತನು ತನ್ನ ನಂಬಿಗಸ್ತ ಸೇವಕರನ್ನು ಉಪಯೋಗಿಸಿ ಸಂತೈಸುತ್ತಾನೆ. ನಮ್ಮ ಜೊತೆ ಸೇರಿ ಯೆಹೋವನನ್ನು ಆರಾಧಿಸುವವರೇ ನಮ್ಮ ಆಧ್ಯಾತ್ಮಿಕ ಕುಟುಂಬ. ಯೇಸು ಕೂಡ ತನ್ನ ಜೊತೆ ಸೇರಿ ಯೆಹೋವನನ್ನು ಆರಾಧಿಸುತ್ತಿದ್ದವರನ್ನು ತನ್ನ ತಮ್ಮ-ತಂಗಿ-ತಾಯಿ ಅಂದನು.—ಮತ್ತಾ. 12:48-50.

10. ಒಬ್ಬ ಹಿರಿಯನಾಗಿ ಪೌಲನು ತನ್ನ ಜವಾಬ್ದಾರಿಯನ್ನು ಹೇಗೆ ನಿಭಾಯಿಸಿದನು?

10 ಕ್ರೈಸ್ತ ಸಭೆಯಲ್ಲಿ ನಮಗೆ ಸ್ವಂತ ಕುಟುಂಬದವರ ತರ ಇರುವವರು ಸಿಗುತ್ತಾರೆ ಅನ್ನುವುದಕ್ಕೆ ಒಂದು ಉದಾಹರಣೆ ನೋಡಿ. ಒಬ್ಬ ಹಿರಿಯನಾಗಿ ಅಪೊಸ್ತಲ ಪೌಲನು ಸಭೆಗಾಗಿ ತುಂಬ ಕೆಲಸ ಮಾಡುತ್ತಿದ್ದನು. ಆತನು ಬೇರೆಯವರಿಗೆ ಒಳ್ಳೇ ಮಾದರಿ ಇಟ್ಟನು ಮತ್ತು ತಾನು ಕ್ರಿಸ್ತನನ್ನು ಅನುಕರಿಸುವಂತೆಯೇ ಬೇರೆಯವರು ತನ್ನನ್ನು ಅನುಕರಿಸಬೇಕೆಂದು ಹೇಳಿದನು. (1 ಕೊರಿಂ. 11:1) ಒಬ್ಬ ಹಿರಿಯನಾಗಿ ಆತನು ಹೇಗೆ ಸೇವೆ ಮಾಡಿದನೆಂದು ಒಂದು ಸಲ ಹೀಗೆ ವರ್ಣಿಸಿದನು: “ಒಬ್ಬ ತಾಯಿಯು ತನ್ನ ಮಕ್ಕಳಿಗೆ ಹಾಲುಣಿಸಿ ಪೋಷಿಸುವಂತೆಯೇ ನಾವು ನಿಮ್ಮ ಮಧ್ಯೆ ವಾತ್ಸಲ್ಯದಿಂದ ನಡೆದುಕೊಂಡೆವು.” (1 ಥೆಸ. 2:7) ಇದೇ ರೀತಿ ಇಂದು ಸಹ ಹಿರಿಯರು ಸಹಾಯ ಬೇಕಾಗಿರುವವರ ಹತ್ತಿರ ಕೋಮಲವಾಗಿ ಮಾತಾಡಬೇಕು.

ಸಾಮಾನ್ಯವಾಗಿ ಪ್ರೌಢ ಸಹೋದರಿಯರು ತುಂಬ ಒಳ್ಳೇದಾಗಿ ಸಂತೈಸುತ್ತಾರೆ (ಪ್ಯಾರ 11 ನೋಡಿ) *

11. ದೌರ್ಜನ್ಯಕ್ಕೆ ಒಳಗಾದವರನ್ನು ಹಿರಿಯರು ಮಾತ್ರ ಸಂತೈಸಬೇಕಾ?

11 ದೌರ್ಜನ್ಯಕ್ಕೆ ಒಳಗಾದವರನ್ನು ಹಿರಿಯರು ಮಾತ್ರ ಸಂತೈಸಬೇಕಾ? ಇಲ್ಲ. “ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ” ಇರುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. (1 ಥೆಸ. 4:18) ಮುಖ್ಯವಾಗಿ ಪ್ರೌಢರಾದ ಕ್ರೈಸ್ತ ಸಹೋದರಿಯರು ಸಾಂತ್ವನ ಬೇಕಾಗಿರುವ ಸಹೋದರಿಯರಿಗೆ ಸಹಾಯ ಮಾಡಬೇಕು. ಯೆಹೋವನು ಸಹ ತನ್ನನ್ನು ಒಬ್ಬ ತಾಯಿಗೆ ಹೋಲಿಸಿ ಮಾತಾಡಿದ್ದಾನೆ. (ಯೆಶಾ. 66:13) ಕಷ್ಟದಲ್ಲಿದ್ದವರನ್ನು ಸಂತೈಸಿದ ಅನೇಕ ಸ್ತ್ರೀಯರ ಉದಾಹರಣೆ ಬೈಬಲಲ್ಲಿದೆ. (ಯೋಬ 42:11) ಭಾವನಾತ್ಮಕ ನೋವಿನಲ್ಲಿರುವ ಸಹೋದರಿಯರಿಗೆ ಬೇರೆ ಸಹೋದರಿಯರು ಸಹಾಯ ಮಾಡುವುದನ್ನು ನೋಡುವಾಗ ಯೆಹೋವನಿಗೆ ತುಂಬ ಸಂತೋಷ ಆಗುತ್ತೆ! ಕೆಲವೊಮ್ಮೆ ಸಭೆಯಲ್ಲಿರುವ ಒಬ್ಬ ಪ್ರೌಢ ಸಹೋದರಿಯನ್ನು ಒಬ್ಬ ಅಥವಾ ಇಬ್ಬರು ಹಿರಿಯರು ಪ್ರತ್ಯೇಕವಾಗಿ ಕರೆದು ಸಾಂತ್ವನ ಬೇಕಾಗಿರುವ ಒಬ್ಬ ಸಹೋದರಿಗೆ ಸಹಾಯ ಮಾಡಕ್ಕಾಗುತ್ತಾ ಎಂದು ಕೇಳಬಹುದು. *

ಹೇಗೆ ಸಂತೈಸಬೇಕು?

12. ನಾವು ಯಾವ ವಿಷಯದ ಬಗ್ಗೆ ಜಾಗ್ರತೆ ವಹಿಸಬೇಕು?

12 ನಾವು ಒಬ್ಬ ಸಹೋದರ ಅಥವಾ ಸಹೋದರಿಗೆ ಸಹಾಯ ಮಾಡುವಾಗ ಅವರು ಹೇಳಲು ಇಷ್ಟಪಡದ ವಿಷಯಗಳನ್ನು ಕೇಳಬಾರದು. (1 ಥೆಸ. 4:11) ಸಹಾಯ ಮತ್ತು ಸಾಂತ್ವನ ಬೇಕಾಗಿರುವವರಿಗೆ ನಾವು ಹೇಗೆ ನೆರವು ನೀಡಬಹುದು? ಐದು ವಿಧಗಳಲ್ಲಿ ಸಹಾಯ ಮಾಡಬಹುದೆಂದು ಬೈಬಲ್‌ ಹೇಳುತ್ತೆ.

13. (ಎ) ಒಂದನೇ ಅರಸು 19:5-8 ರಲ್ಲಿರುವ ಪ್ರಕಾರ, ಯೆಹೋವನ ದೂತನು ಎಲೀಯನಿಗೆ ಯಾವ ನೆರವು ನೀಡಿದನು? (ಬಿ) ಆ ದೇವದೂತನಂತೆ ನಾವು ಹೇಗೆ ಸಹಾಯ ಮಾಡಬಹುದು?

13 ಪ್ರಾಯೋಗಿಕ ಸಹಾಯ ಕೊಡಿ. ಪ್ರವಾದಿ ಎಲೀಯನು ಜೀವ ಬೆದರಿಕೆಯಿಂದಾಗಿ ತಪ್ಪಿಸಿಕೊಂಡು ಹೋಗುತ್ತಿರುವಾಗ ತುಂಬ ನಿರುತ್ಸಾಹಗೊಂಡಿದ್ದನು, ಸಾಯಲು ಬಯಸಿದನು. ತನ್ನ ಪ್ರವಾದಿಯನ್ನು ಬಲಪಡಿಸಲು ಯೆಹೋವನು ಒಬ್ಬ ಬಲಿಷ್ಠ ದೇವದೂತನನ್ನು ಕಳುಹಿಸಿದನು. ಆ ದೇವದೂತನು ತುಂಬ ಪ್ರಾಯೋಗಿಕವಾದ ಸಹಾಯ ಮಾಡಿದನು. ಎಲೀಯನಿಗೆ ಬಿಸಿಬಿಸಿ ಊಟ ಕೊಟ್ಟು ತಿನ್ನಲು ಪ್ರೋತ್ಸಾಹಿಸಿದನು. (1 ಅರಸು 19:5-8 ಓದಿ.) ಈ ದಾಖಲೆಯಿಂದ ಒಂದು ವಿಷಯ ಗೊತ್ತಾಗುತ್ತೆ: ಕೆಲವೊಮ್ಮೆ ನಾವು ದಯೆಯಿಂದ ಮಾಡುವ ಒಂದು ಚಿಕ್ಕ ವಿಷಯದಿಂದ ಸಹ ತುಂಬ ಸಹಾಯ ಆಗುತ್ತೆ. ದುಃಖದಲ್ಲಿರುವ ಸಹೋದರ ಅಥವಾ ಸಹೋದರಿಯನ್ನು ಊಟಕ್ಕೆ ಕರೆಯಬಹುದು, ಒಂದು ಸಣ್ಣ ಉಡುಗೊರೆ ಅಥವಾ ಕಾರ್ಡ್‌ ಕೊಡಬಹುದು. ಇದರಿಂದ ನಾವು ಅವರನ್ನು ಪ್ರೀತಿಸುತ್ತೇವೆ, ಅವರ ಬಗ್ಗೆ ಕಾಳಜಿ ವಹಿಸುತ್ತೇವೆ ಎಂದು ಅವರಿಗೆ ಗೊತ್ತಾಗುತ್ತೆ. ಬೇರೆಯವರ ಭಾವನೆಗಳಿಗೆ ಹೇಗೆ ಸ್ಪಂದಿಸುವುದು ಅಂತ ನಮಗೆ ಗೊತ್ತಿಲ್ಲದಿದ್ದರೂ ಪ್ರಾಯೋಗಿಕವಾಗಿ ಸಹಾಯ ಮಾಡಿ ನಮ್ಮ ಪ್ರೀತಿ ತೋರಿಸಬಹುದು.

14. ಎಲೀಯನ ವೃತ್ತಾಂತದಿಂದ ನಾವೇನು ಕಲಿಯಬಹುದು?

14 ದೌರ್ಜನ್ಯಕ್ಕೆ ಒಳಗಾದವರು ಚಿಂತೆ, ಗಾಬರಿಪಡದೇ ಇರಲು ಸಹಾಯ ಮಾಡಿ. ಎಲೀಯನ ದಾಖಲೆಯಿಂದ ನಾವು ಇನ್ನೊಂದು ಪಾಠವನ್ನೂ ಕಲಿಯಬಹುದು. ಯೆಹೋವನು ತನ್ನ ಈ ಪ್ರವಾದಿಗೆ ದೂರದಲ್ಲಿದ್ದ ಹೋರೇಬ್‌ ಬೆಟ್ಟದ ವರೆಗೆ ನಡಕೊಂಡು ಹೋಗಲು ಬೇಕಾದ ಶಕ್ತಿ ಕೊಟ್ಟನು. ಈ ಹೋರೇಬ್‌ ಬೆಟ್ಟದಲ್ಲಿ ಯೆಹೋವನು ಕೆಲವು ಶತಮಾನಗಳ ಹಿಂದೆ ತನ್ನ ಜನರ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದನು. ಇಲ್ಲಿ ಎಲೀಯನಿಗೆ ತಾನು ಸುರಕ್ಷಿತವಾಗಿದ್ದೇನೆ ಎಂದು ಅನಿಸಿರಬೇಕು. ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದ ವ್ಯಕ್ತಿಗಳಿಂದ ತುಂಬ ದೂರದಲ್ಲಿ ಇರುವುದರಿಂದ ಅವನಿಗೆ ಹಾಯೆನಿಸಿರಬಹುದು. ಇದರಿಂದ ಏನು ಕಲಿಯಬಹುದು? ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳನ್ನು ನಾವು ಸಂತೈಸಲು ಬಯಸುವುದಾದರೆ ಮೊದಲು ಅವರಲ್ಲಿ ಸುರಕ್ಷಿತ ಭಾವನೆ ಮೂಡಿಸಬೇಕು. ಉದಾಹರಣೆಗೆ, ದುಃಖದಲ್ಲಿರುವ ಒಬ್ಬ ಸಹೋದರಿಯನ್ನು ರಾಜ್ಯ ಸಭಾಗೃಹದಲ್ಲಿ ಕೂರಿಸಿ ಮಾತಾಡಿಸುವುದಕ್ಕಿಂತ ಅವರ ಮನೆಗೆ ಹೋಗಿ ಮಾತಾಡಿಸಿದರೆ ಅವರಿಗೆ ಸ್ವಲ್ಪ ಆರಾಮ ಅನಿಸಬಹುದೆಂದು ಹಿರಿಯರು ನೆನಪಲ್ಲಿಡಬೇಕು. ಆದರೆ ಇದೇ ರೀತಿ ಕಷ್ಟದಲ್ಲಿರುವ ಇನ್ನೊಬ್ಬ ವ್ಯಕ್ತಿಗೆ ರಾಜ್ಯ ಸಭಾಗೃಹದಲ್ಲಿ ಮಾತಾಡಿದರೆ ಒಳ್ಳೇದು ಅನಿಸಬಹುದು.

ನಾವು ತಾಳ್ಮೆಯಿಂದ ಕಿವಿಗೊಡುವ ಮೂಲಕ, ಹೃದಯದಾಳದಿಂದ ಪ್ರಾರ್ಥಿಸುವ ಮೂಲಕ ಮತ್ತು ಮುದನೀಡುವ ಮಾತುಗಳನ್ನು ಹೇಳುವ ಮೂಲಕ ಸಂತೈಸಬಹುದು (ಪ್ಯಾರ 15-20 ನೋಡಿ) *

15-16. ಒಬ್ಬರು ಮಾತಾಡುವಾಗ ನಾವು ಹೇಗೆ ಚೆನ್ನಾಗಿ ಕೇಳಿಸಿಕೊಳ್ಳಬಹುದು?

15 ದೌರ್ಜನ್ಯಕ್ಕೆ ಒಳಗಾದವರು ಮಾತಾಡುವಾಗ ಕಿವಿಗೊಟ್ಟು ಕೇಳಿ. ಈ ವಿಷಯದಲ್ಲಿ ಬೈಬಲ್‌ ಕೊಡುವ ಸ್ಪಷ್ಟವಾದ ಬುದ್ಧಿವಾದ ಏನೆಂದರೆ, “ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ . . . ಆಗಿರಬೇಕು.” (ಯಾಕೋ. 1:19) ಬೇರೆಯವರು ಮಾತಾಡುವಾಗ ನಾವು ಚೆನ್ನಾಗಿ ಕೇಳಿಸಿಕೊಳ್ಳುತ್ತೇವಾ? ಕಿವಿಗೊಡುವುದು ಅಂದರೆ ತುಟಿಕ್‌-ಪಿಟಿಕ್‌ ಅನ್ನದೇ ಮಾತಾಡುತ್ತಿರುವ ವ್ಯಕ್ತಿಯ ಮುಖವನ್ನು ಕೂತು ನೋಡುತ್ತಾ ಇರುವುದು ಅಲ್ಲ. ಎಲೀಯನು ತನ್ನ ಮನದಾಳದ ಚಿಂತೆಗಳನ್ನು ಹೇಳಿಕೊಂಡಾಗ ಯೆಹೋವನು ಕಿವಿಗೊಟ್ಟು ಕೇಳಿದನು. ಎಲೀಯನಿಗೆ ಭಯ ಆಗಿದೆ, ಒಂಟಿಭಾವನೆ ಕಾಡುತ್ತಿದೆ, ಆತನು ಮಾಡಿದ ಸೇವೆ ಎಲ್ಲಾ ವ್ಯರ್ಥ ಆಯಿತು ಅನ್ನುವ ಭಾವನೆ ಇದೆ ಎಂದು ಅರ್ಥಮಾಡಿಕೊಂಡನು. ಈ ಭಾವನೆಗಳಿಂದ ಹೊರಬರಲು ಯೆಹೋವನು ಎಲೀಯನಿಗೆ ಪ್ರೀತಿಯಿಂದ ಸಹಾಯ ಮಾಡಿದನು. ಇದರಿಂದ ಎಲೀಯನು ಮಾತಾಡಿದಾಗ ತಾನು ನಿಜಕ್ಕೂ ಕೇಳಿಸಿಕೊಂಡೆ ಎಂದು ಯೆಹೋವನು ತೋರಿಸಿದನು.—1 ಅರ. 19:9-11, 15-18.

16 ಒಬ್ಬ ಸಹೋದರ ಅಥವಾ ಸಹೋದರಿ ಮಾತಾಡುವಾಗ ನಾವು ಹೇಗೆ ಪ್ರೀತಿ ಮತ್ತು ಅನುಕಂಪ ತೋರಿಸಬಹುದು? ಕೆಲವೊಮ್ಮೆ ನಾವು ಚೆನ್ನಾಗಿ ಯೋಚಿಸಿ ಹೇಳುವ ಕನಿಕರ ತುಂಬಿದ ಮಾತುಗಳು ನಮ್ಮ ಭಾವನೆಗಳನ್ನು ತೋರಿಸುತ್ತೆ. “ಇದನ್ನು ಕೇಳಿ ತುಂಬ ಬೇಜಾರಾಗ್ತಿದೆ. ಮಕ್ಕಳ ಮೇಲೆ ಇಂಥ ವಿಷಯ ನಡೆಯುವುದು ತುಂಬ ತಪ್ಪು” ಎಂದು ನೀವು ಹೇಳಬಹುದು. ಕಷ್ಟದಲ್ಲಿರುವ ವ್ಯಕ್ತಿ ನಿಮ್ಮ ಜೊತೆ ಮಾತಾಡುವಾಗ ನಿಮಗೆ ಏನಾದರೂ ಅರ್ಥ ಆಗಿಲ್ಲ ಅಂದರೆ ಒಂದೆರಡು ಪ್ರಶ್ನೆ ಕೇಳಿ. ಉದಾಹರಣೆಗೆ, “ನೀವು ಏನ್‌ ಹೇಳಿದ್ರಿ ಅಂತ ಸ್ವಲ್ಪ ವಿವರಿಸಿ ಹೇಳ್ತೀರಾ?” ಎಂದು ಅಥವಾ “ನೀವು ಹೇಳಿದ್ದರ ಅರ್ಥ ಇದೇನಾ . . . ” ಎಂದು ಕೇಳಿ. ಆಗ ಅವರಿಗೆ ನೀವು ನಿಜಕ್ಕೂ ಕೇಳಿಸಿಕೊಳ್ಳುತ್ತಾ ಇದ್ದೀರಿ ಎಂದು ಅರ್ಥ ಆಗುತ್ತೆ.—1 ಕೊರಿಂ. 13:4, 7.

17. ನಾವು ಯಾಕೆ ‘ಮಾತಾಡುವುದರಲ್ಲಿ ದುಡುಕದೆ’ ತಾಳ್ಮೆ ತೋರಿಸಬೇಕು?

17 ಆದರೆ ‘ಮಾತಾಡುವುದರಲ್ಲಿ ದುಡುಕಬಾರದು’ ಅನ್ನುವುದನ್ನು ಮನಸ್ಸಲ್ಲಿಡಿ. ಅವರು ಮಾತಾಡುತ್ತಿರುವಾಗ ಮಧ್ಯೆ ಬಾಯಿ ಹಾಕಿ ಏನಾದರೂ ಸಲಹೆ ಕೊಡಲು ಅಥವಾ ಅವರು ಯೋಚಿಸುತ್ತಿರುವುದು ತಪ್ಪು ಎಂದು ಹೇಳಲು ಹೋಗಬೇಡಿ. ತಾಳ್ಮೆ ತೋರಿಸಿ. ಎಲೀಯನು ಯೆಹೋವನ ಹತ್ತಿರ ತನ್ನ ಮನಸ್ಸಲ್ಲಿ ಇರುವುದನ್ನೆಲ್ಲಾ ಹೇಳಿಕೊಂಡಾಗ ಅವನಲ್ಲಿ ಎಷ್ಟು ದುಃಖ ಇದೆ ಎಂದು ಗೊತ್ತಾಯಿತು. ಆಮೇಲೆ ಯೆಹೋವನು ಎಲೀಯನನ್ನು ಬಲಪಡಿಸಲು ಪ್ರಯತ್ನಿಸಿದನು. ಆದರೆ ಎಲೀಯನು ಮೊದಲು ಹೇಳಿದ್ದನ್ನೇ ಪುನಃ ಹೇಳಿದನು. (1 ಅರ. 19:9, 10, 13, 14) ಪಾಠ ಏನು? ಕೆಲವೊಮ್ಮೆ ದುಃಖದಲ್ಲಿರುವವರು ತಮ್ಮಲ್ಲಿರುವ ಭಾವನೆಗಳನ್ನು ಪುನಃ ಪುನಃ ಹೇಳಿಕೊಳ್ಳಬೇಕಾಗುತ್ತೆ. ಆಗ ಯೆಹೋವನಂತೆ ನಾವು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು. ಪರಿಹಾರದ ಬಗ್ಗೆ ಮಾತಾಡುವ ಬದಲು ನಾವು ಮಾತಾಡುತ್ತಿರುವ ವ್ಯಕ್ತಿಗೆ ಅನುಕಂಪ ಮತ್ತು ಕೋಮಲ ಕನಿಕರ ತೋರಿಸಬೇಕು.—1 ಪೇತ್ರ 3:8.

18. ನೋವಿನಲ್ಲಿರುವ ವ್ಯಕ್ತಿಯ ಜೊತೆ ಪ್ರಾರ್ಥನೆ ಮಾಡಿದರೆ ಅವರಿಗೆ ಹೇಗೆ ಸಾಂತ್ವನ ಸಿಗುತ್ತೆ?

18 ನೋವಿನಲ್ಲಿರುವವರ ಜೊತೆ ಹೃದಯದಾಳದಿಂದ ಪ್ರಾರ್ಥಿಸಿ. ದುಃಖದಲ್ಲಿ ಮುಳುಗಿಹೋಗಿರುವ ವ್ಯಕ್ತಿಗೆ ಪ್ರಾರ್ಥನೆ ಮಾಡಲು ಆಗದೇ ಇರಬಹುದು. ಯೆಹೋವನ ಹತ್ತಿರ ಮಾತಾಡಲು ತನಗೆ ಯೋಗ್ಯತೆ ಇಲ್ಲ ಅಂತ ಕೂಡ ಅನಿಸಬಹುದು. ಇಂಥ ಒಬ್ಬ ವ್ಯಕ್ತಿಯನ್ನು ಸಂತೈಸುವಾಗ ನಾವು ಅವರ ಜೊತೆ ಪ್ರಾರ್ಥನೆ ಮಾಡಬಹುದಾ ಎಂದು ಕೇಳಬಹುದು. ಅವರು ಒಪ್ಪಿದರೆ, ಅವರ ಹೆಸರೆತ್ತಿ ಪ್ರಾರ್ಥನೆ ಮಾಡಿ. ಆ ವ್ಯಕ್ತಿಯನ್ನು ನಾವು ಎಷ್ಟು ಪ್ರೀತಿಸುತ್ತೇವೆ, ಸಭೆಯಲ್ಲಿರುವವರು ಎಷ್ಟು ಪ್ರೀತಿಸುತ್ತಾರೆ ಎಂದು ಕೂಡ ಪ್ರಾರ್ಥನೆಯಲ್ಲಿ ಹೇಳಬಹುದು. ತನ್ನ ಈ ಪ್ರೀತಿಯ ಕುರಿಯನ್ನು ಸಂತೈಸುವಂತೆ ಯೆಹೋವನಿಗೆ ಕೇಳಿಕೊಳ್ಳಬಹುದು. ಇಂಥ ಪ್ರಾರ್ಥನೆಗೆ ತುಂಬ ಶಕ್ತಿ ಇದೆ.—ಯಾಕೋ. 5:16.

19. ಯಾರನ್ನಾದರೂ ಸಂತೈಸಲು ಯಾವುದು ಸಹಾಯ ಮಾಡುತ್ತೆ?

19 ಮನಸ್ಸಿಗೆ ಮುದನೀಡುವ ಮಾತುಗಳನ್ನಾಡಿ. ಯೋಚನೆ ಮಾಡಿ ಮಾತಾಡಿ. ಇಲ್ಲಾ ಅಂದರೆ ನಾವು ಹೇಳುವ ಮಾತುಗಳಿಂದ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗೆ ನೋವಾಗಬಹುದು. ಕನಿಕರದಿಂದ ನಾವು ಹೇಳುವ ಮಾತು ಗಾಯಕ್ಕೆ ಮದ್ದು ಹಚ್ಚಿದಂತೆ ಇರುತ್ತೆ. (ಜ್ಞಾನೋ. 12:18) ಆದ್ದರಿಂದ ದಯೆಯಿಂದ ಕೂಡಿದ, ಮನಸ್ಸಿಗೆ ಮುದನೀಡುವ ಮಾತುಗಳನ್ನು ಹೇಳಲು ಸಹಾಯ ಮಾಡುವಂತೆ ಯೆಹೋವ ದೇವರಿಗೆ ಪ್ರಾರ್ಥಿಸಿ. ಬೈಬಲಲ್ಲಿರುವ ಯೆಹೋವನ ಮಾತುಗಳಿಂದ ತುಂಬ ಸಹಾಯ ಸಿಗುತ್ತೆ ಅನ್ನುವುದನ್ನು ಮರೆಯಬೇಡಿ.—ಇಬ್ರಿ. 4:12

20. (ಎ) ದೌರ್ಜನ್ಯಕ್ಕೆ ಒಳಗಾದ ಕೆಲವರಿಗೆ ಏನು ಅನಿಸಬಹುದು? (ಬಿ) ಅವರು ಏನು ಅರ್ಥಮಾಡಿಕೊಳ್ಳಬೇಕೆಂದು ನಾವು ಬಯಸುತ್ತೇವೆ?

20 ದೌರ್ಜನ್ಯಕ್ಕೆ ಒಳಗಾದ ಒಬ್ಬ ವ್ಯಕ್ತಿಗೆ ತನ್ನ ಬಗ್ಗೆ ಅಸಹ್ಯ ಭಾವನೆ ಬಂದಿರಬಹುದು, ತನ್ನನ್ನು ಯಾರೂ ಪ್ರೀತಿಸಲ್ಲ ಅಂತ ಅನಿಸುತ್ತಿರಬಹುದು. ಇದು ಖಂಡಿತ ಸತ್ಯ ಅಲ್ಲ. ಯೆಹೋವನು ಅವರನ್ನು ತುಂಬ ಪ್ರೀತಿಸುತ್ತಾನೆ ಎಂದು ತೋರಿಸಲು ಬೈಬಲಿನ ಕೆಲವು ವಚನಗಳನ್ನು ಉಪಯೋಗಿಸಿ. ( “ಬೈಬಲಿಂದ ಸಿಗುವ ಸಾಂತ್ವನ” ಎಂಬ ಚೌಕ ನೋಡಿ.) ತುಂಬ ದುಃಖದಲ್ಲಿದ್ದ ಪ್ರವಾದಿ ದಾನಿಯೇಲನನ್ನು ಒಬ್ಬ ದೇವದೂತನು ಹೇಗೆ ಬಲಪಡಿಸಿದನು ಅಂತ ನೆನಪು ಮಾಡಿಕೊಳ್ಳಿ. ಆತನನ್ನು ತಾನು ತುಂಬ ಪ್ರೀತಿಸುತ್ತೇನೆ ಎಂದು ಯೆಹೋವನು ದೇವದೂತನ ಮೂಲಕ ಹೇಳಿದನು. (ದಾನಿ. 10:2, 11, 19) ಅದೇ ರೀತಿ, ದುಃಖದಲ್ಲಿರುವ ನಮ್ಮ ಸಹೋದರ-ಸಹೋದರಿಯರನ್ನು ಯೆಹೋವನು ತುಂಬ ಪ್ರೀತಿಸುತ್ತಾನೆ.

21. (ಎ) ತಪ್ಪು ಮಾಡಿ ತಿದ್ದಿಕೊಳ್ಳದೇ ಇರುವವರಿಗೆ ಏನಾಗುತ್ತೆ? (ಬಿ) ದೌರ್ಜನ್ಯಕ್ಕೆ ಒಳಗಾದವರಿಗೆ ನಾವೇನು ಮಾಡಬೇಕು?

21 ನಾವು ಬೇರೆಯವರನ್ನು ಸಂತೈಸುವಾಗ ಯೆಹೋವನು ಅವರನ್ನು ಪ್ರೀತಿಸುತ್ತಾನೆ ಅಂತ ನೆನಪು ಹುಟ್ಟಿಸುತ್ತೇವೆ. ಯೆಹೋವ ದೇವರು ನ್ಯಾಯವಂತನು ಅನ್ನುವುದನ್ನು ಸಹ ನಾವು ಮರೆಯಬಾರದು. ಯಾವ ತಪ್ಪು ಕೃತ್ಯನೂ ಯೆಹೋವನ ಕಣ್ತಪ್ಪಿ ಹೋಗಲ್ಲ. ತಪ್ಪು ಮಾಡಿ ತಿದ್ದಿಕೊಳ್ಳದೇ ಇರುವವರಿಗೆ ತಕ್ಕ ಶಿಕ್ಷೆಯನ್ನು ಆತನು ಕೊಟ್ಟೇ ಕೊಡುತ್ತಾನೆ. (ಅರ. 14:18) ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ನಾವು ಪ್ರೀತಿ ತೋರಿಸಲು ನಮ್ಮಿಂದಾದ ಎಲ್ಲಾ ಪ್ರಯತ್ನ ಮಾಡೋಣ. ಸೈತಾನನಿಂದ ಮತ್ತು ಅವನ ಲೋಕದಿಂದ ಶೋಷಣೆಗೆ ಒಳಗಾದವರನ್ನು ಯೆಹೋವ ದೇವರು ಶಾಶ್ವತವಾಗಿ ಗುಣಪಡಿಸುತ್ತಾನೆ ಅಂತ ತಿಳಿಯುವಾಗ ನಮಗೆ ತುಂಬ ಸಾಂತ್ವನ, ನೆಮ್ಮದಿ ಸಿಗುತ್ತದೆ. ನಮ್ಮ ಮನಸ್ಸಿಗೆ ನೋವು ಕೊಡುವ ವಿಷಯಗಳು ತುಂಬ ಬೇಗನೆ ಇಲ್ಲದೆ ಹೋಗುತ್ತದೆ, ನೆನಪಿಗೂ ಬರಲ್ಲ.—ಯೆಶಾ. 65:17.

ಗೀತೆ 73 ಹೃದಯದಾಳದಿಂದ ಪ್ರೀತಿಸಿರಿ

^ ಪ್ಯಾರ. 5 ಚಿಕ್ಕ ವಯಸ್ಸಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ವರ್ಷಗಳು ಉರುಳಿದರೂ ಆ ನೋವು ಕಾಡುತ್ತಾ ಇರುತ್ತೆ. ಯಾಕೆ ಎಂದು ಅರ್ಥಮಾಡಿಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ. ಈ ರೀತಿ ನೊಂದಿರುವವರನ್ನು ಯಾರೆಲ್ಲ ಸಂತೈಸಬಹುದು ಎಂದು ಸಹ ಈ ಲೇಖನದಲ್ಲಿ ಕಲಿಯಲಿದ್ದೇವೆ. ಸಾಂತ್ವನ ಕೊಡುವ ಕೆಲವು ಒಳ್ಳೇ ವಿಧಗಳ ಬಗ್ಗೆನೂ ನೋಡಲಿದ್ದೇವೆ.

^ ಪ್ಯಾರ. 11 ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ ವೈದ್ಯರ ಸಲಹೆ ಪಡೆಯುವುದು ಅವರಿಗೆ ಬಿಟ್ಟ ವಿಷಯವಾಗಿದೆ.

^ ಪ್ಯಾರ. 76 ಚಿತ್ರ ವಿವರಣೆ: ನೋವಿನಲ್ಲಿರುವ ಒಬ್ಬ ಸಹೋದರಿಗೆ ಪ್ರೌಢರಾದ ಒಬ್ಬ ಸಹೋದರಿ ಸಂತೈಸುತ್ತಿದ್ದಾರೆ.

^ ಪ್ಯಾರ. 78 ಚಿತ್ರ ವಿವರಣೆ: ದುಃಖದಲ್ಲಿರುವ ಸಹೋದರಿಯ ಹತ್ತಿರ ಮಾತಾಡಲು ಇಬ್ಬರು ಹಿರಿಯರು ಬಂದಿದ್ದಾರೆ. ಆ ಸಹೋದರಿ ತನ್ನನ್ನು ಸಂತೈಸಿದ ಪ್ರೌಢ ಸಹೋದರಿಯನ್ನೂ ಕರೆಸಿಕೊಂಡಿದ್ದಾಳೆ.