ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 9

ಹುಡುಗರೇ, ನೀವು ಹೇಗೆ ಬೇರೆಯವರ ವಿಶ್ವಾಸ ಗೆಲ್ಲಬಹುದು?

ಹುಡುಗರೇ, ನೀವು ಹೇಗೆ ಬೇರೆಯವರ ವಿಶ್ವಾಸ ಗೆಲ್ಲಬಹುದು?

‘ನಿನ್ನ ಜೊತೆ ನಿನ್ನ ಯುವಸೇನೆ ಇರುತ್ತೆ, ಅವರು ಮುಂಜಾನೆಯ ಇಬ್ಬನಿ ತರ ಇರ್ತಾರೆ.’—ಕೀರ್ತ. 110:3.

ಗೀತೆ 4 ದೇವರೊಂದಿಗೆ ಒಳ್ಳೆಯ ಹೆಸರನ್ನು ಮಾಡಿಕೊಳ್ಳುವುದು

ಕಿರುನೋಟ *

1. ನಮ್ಮ ಯುವ ಸಹೋದರರ ಬಗ್ಗೆ ಏನು ಹೇಳ್ತೀರಾ?

ಯುವ ಸಹೋದರರೇ, ಹುಡುಗರೇ, ನಿಮ್ಮಿಂದ ಸಭೆಗೆ ತುಂಬಾ ಪ್ರಯೋಜನ ಇದೆ. ನಿಮ್ಮಲ್ಲಿ ಅನೇಕರಿಗೆ ಹುರುಪು, ಹುಮ್ಮಸ್ಸು, ಶಕ್ತಿ ಇದೆ. (ಜ್ಞಾನೋ. 20:29) ನೀವು ಸಭೆಗೆ ಆಸ್ತಿ. ಸಭೆಯಲ್ಲಿ ಸಹಾಯಕ ಸೇವಕರಾಗೋಕೆ ನಿಮಗೆ ಆಸೆ ಇರಬಹುದಲ್ವಾ? ಆದ್ರೆ ನೀವಿನ್ನೂ ಚಿಕ್ಕ ಹುಡುಗ, ಅಷ್ಟು ದೊಡ್ಡ ಜವಾಬ್ದಾರಿಯನ್ನು ನಿಮ್ಮಿಂದ ಮಾಡಕ್ಕಾಗಲ್ಲ ಅಂತ ಕೆಲವರು ನೆನಸಬಹುದು. ನಿಜ, ನೀವು ಚಿಕ್ಕ ಹುಡುಗ ಇರಬಹುದು. ಆದ್ರೂ ನೀವು ಈಗ ಕೆಲವೊಂದು ವಿಷ್ಯಗಳನ್ನು ಮಾಡಿದ್ರೆ ಸಭೆಯವರ ಪ್ರೀತಿ-ವಿಶ್ವಾಸ ಗೆಲ್ಲಬಹುದು, ಗೌರವ ಕೂಡ ಗಳಿಸಬಹುದು.

2. ಈ ಲೇಖನದಲ್ಲಿ ನಾವೇನು ಚರ್ಚಿಸ್ತೇವೆ?

2 ಈ ಲೇಖನದಲ್ಲಿ ಮುಖ್ಯವಾಗಿ ರಾಜ ದಾವೀದನ ಬಗ್ಗೆ ಚರ್ಚಿಸ್ತೇವೆ. ಯೆಹೂದದ ರಾಜರಾದ ಆಸ ಮತ್ತು ಯೆಹೋಷಾಫಾಟರ ಜೀವನದಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆನೂ ನೋಡ್ತೇವೆ. ಈ ಮೂವರ ಜೀವನದಲ್ಲಿ ಯಾವ ಕಷ್ಟಗಳು ಬಂದ್ವು? ಆಗ ಅವರು ಏನು ಮಾಡಿದ್ರು? ಅದ್ರಿಂದ ಇವತ್ತು ಹುಡುಗರು ಏನು ಕಲಿಬಹುದು ಅಂತ ನೋಡ್ತೇವೆ.

ರಾಜ ದಾವೀದನಿಂದ ಕಲಿರಿ

3. ಸಭೆಯಲ್ಲಿರೋ ಅಜ್ಜಅಜ್ಜಿಯರಿಗೆ ಹುಡುಗರು ಸಹಾಯ ಮಾಡೋ ಒಂದು ವಿಧ ಯಾವುದು?

3 ದಾವೀದ ಹುಡುಗನಾಗಿದ್ದಾಗ ಕೆಲವು ಕೌಶಲಗಳನ್ನು ಬೆಳೆಸಿಕೊಂಡಿದ್ದ. ಅದ್ರಿಂದ ಬೇರೆಯವರಿಗೂ ಪ್ರಯೋಜನ ಆಯ್ತು. ಅವನು ಯೆಹೋವನ ಜೊತೆ ಆಪ್ತ ಸ್ನೇಹನೂ ಬೆಳೆಸಿಕೊಂಡಿದ್ದ. ದಾವೀದ ಸಂಗೀತ ನುಡಿಸೋದನ್ನೂ ಕಲಿತಿದ್ದ. ಹಾಗಾಗಿ ರಾಜನಾಗಿದ್ದ ಸೌಲನ ಮುಂದೆ ಸಂಗೀತ ನುಡಿಸ್ತಿದ್ದ. ಆಗ ರಾಜನಿಗೆ ತುಂಬ ಖುಷಿ ಆಗ್ತಿತ್ತು. (1 ಸಮು. 16:16, 23) ಹುಡುಗರೇ, ನೀವೂ ಕೌಶಲಗಳನ್ನ ಬೆಳೆಸಿಕೊಂಡಿದ್ದೀರಾ? ಅದನ್ನು ಸಭೆಯವರಿಗೆ ಸಹಾಯ ಮಾಡೋಕೆ ಉಪಯೋಗಿಸ್ತಾ ಇದ್ದೀರಾ? ನಿಮ್ಮಲ್ಲಿ ಅನೇಕರು ಈಗಾಗಲೇ ಅದನ್ನು ಮಾಡ್ತಾ ಇದ್ದೀರಿ. ಉದಾಹರಣೆಗೆ, ಸಭೆಯಲ್ಲಿರೋ ಅಜ್ಜಅಜ್ಜಿಯರಿಗೆ ಅವರ ಮೊಬೈಲ್‌ ಅಥ್ವಾ ಟ್ಯಾಬನ್ನ ಹೇಗೆ ಉಪಯೋಗಿಸಬೇಕು ಅಂತ ನೀವು ಕಲಿಸಿರಬಹುದು. ಇದ್ರಿಂದ ಕೂಟದಲ್ಲಿ, ವೈಯಕ್ತಿಕ ಅಧ್ಯಯನದಲ್ಲಿ ಆ ಸಾಧನಗಳನ್ನು ಅವರು ಚೆನ್ನಾಗಿ ಬಳಸ್ತಾ ಇರಬಹುದು. ನಿಮಗೆ ಟೆಕ್ನಾಲಜಿ ಬಗ್ಗೆ ಚೆನ್ನಾಗಿ ಗೊತ್ತಿರೋದ್ರಿಂದ ಬೇರೆಯವರಿಗೂ ಅದನ್ನು ಕಲಿಸಿದ್ರೆ ಅವರಿಗೂ ಪ್ರಯೋಜನ ಆಗುತ್ತೆ.

ದಾವೀದ ಮನೆ ಕುರಿಗಳನ್ನ ತುಂಬ ಜವಾಬ್ದಾರಿಯಿಂದ ಕಾಯುತ್ತಿದ್ದ. ಹೀಗೆ ಬೇರೆಯವರ ವಿಶ್ವಾಸ ಗೆದ್ದ. ಕುರಿಗಳ ಮೇಲೆ ಕರಡಿ ದಾಳಿ ಮಾಡಿದಾಗ ಕಾಪಾಡಿದ (ಪ್ಯಾರ 4 ನೋಡಿ)

4. ದಾವೀದನ ತರ ಇವತ್ತು ಹುಡುಗರು ಯಾವ ಗುಣಗಳನ್ನು ಬೆಳೆಸಿಕೊಳ್ಳಬೇಕು? (ಮುಖಪುಟ ಚಿತ್ರ ನೋಡಿ.)

4 ಏನೇ ಕೆಲಸ ಕೊಟ್ರೂ ದಾವೀದ ಜವಾಬ್ದಾರಿಯಿಂದ ಮಾಡ್ತಿದ್ದ. ಹೀಗೆ ಬೇರೆಯವರ ವಿಶ್ವಾಸ ಗೆಲ್ಲುತ್ತಿದ್ದ. ಅವನು ಹುಡುಗನಾಗಿದ್ದಾಗ ಮನೆಯ ಕುರಿಗಳನ್ನು ಶ್ರದ್ಧೆಯಿಂದ ಕಾಯುತ್ತಿದ್ದ. ಈ ಕೆಲಸ ಮಾಡುವಾಗ ತುಂಬ ಅಪಾಯನೂ ಇರುತ್ತಿತ್ತು. ಆ ಅಪಾಯದ ಬಗ್ಗೆ ಮುಂದಕ್ಕೆ ಸೌಲನ ಹತ್ರ ಹೀಗೆ ಹೇಳಿದ: “ನಿನ್ನ ಸೇವಕನಾದ ನಾನು, ನನ್ನ ತಂದೆಯ ಕುರಿ ಹಿಂಡನ್ನ ಕಾಯ್ತಿರುವಾಗ ಒಂದು ಸಿಂಹ ಬಂತು. ಇನ್ನೊಂದು ಸಲ ಒಂದು ಕರಡಿ ಬಂತು. ಅವೆರಡೂ ಹಿಂಡಿಂದ ಒಂದೊಂದು ಕುರಿ ಎತ್ಕೊಂಡು ಹೋದ್ವು. ನಾನು ಅವುಗಳ ಹಿಂದೆ ಹೋಗಿ, ಅವುಗಳನ್ನ ಸಾಯಿಸಿ ಕುರಿಗಳನ್ನ ಅದ್ರ ಬಾಯಿಂದ ಕಾಪಾಡಿದೆ.” (1 ಸಮು. 17:34, 35) ಕುರಿಗಳನ್ನು ಕಾಪಾಡೋದು ತನ್ನ ಜವಾಬ್ದಾರಿ ಅಂತ ದಾವೀದ ಅರ್ಥ ಮಾಡಿಕೊಂಡಿದ್ದ. ಅದಕ್ಕೆ ಧೈರ್ಯವಾಗಿ ಹೋರಾಡಿ ಆ ಕುರಿಗಳನ್ನು ಕಾಪಾಡಿದ. ದಾವೀದನ ತರಾನೇ ಇವತ್ತು ಹುಡುಗರು ಸಭೆಯಲ್ಲಿ ಏನೇ ಕೆಲಸ ಕೊಟ್ರೂ ಅದನ್ನು ಶ್ರದ್ಧೆಯಿಂದ ಮಾಡಬೇಕು.

5. ಹುಡುಗರು ಯಾವ ಮುಖ್ಯವಾದ ವಿಷ್ಯ ಮಾಡಬೇಕು ಅಂತ ಕೀರ್ತನೆ 25:14 ಹೇಳುತ್ತೆ?

5 ದಾವೀದನಿಗೆ ಇಷ್ಟು ಧೈರ್ಯ ಇದ್ರೂ, ಸಂಗೀತ ನುಡಿಸುವ ಕೌಶಲ ಇದ್ರೂ ಅವನಿಗೆ ತುಂಬ ಮುಖ್ಯವಾಗಿದ್ದ ವಿಷ್ಯ ಯಾವುದು ಗೊತ್ತಾ? ಯೆಹೋವನ ಜೊತೆ ಇದ್ದ ಸಂಬಂಧ. ಯೆಹೋವ ಅವನಿಗೆ ದೇವರು ಮಾತ್ರ ಅಲ್ಲ, ಕ್ಲೋಸ್‌ ಫ್ರೆಂಡ್‌ ಕೂಡ ಆಗಿದ್ದನು! (ಕೀರ್ತನೆ 25:14 ಓದಿ.) ಯುವ ಸಹೋದರರೇ, ಹುಡುಗರೇ, ನೀವು ಮಾಡಬೇಕಾದ ಮುಖ್ಯ ವಿಷ್ಯ ಯಾವುದು ಗೊತ್ತಾ? ಯೆಹೋವ ಅಪ್ಪ ಜೊತೆ ಇನ್ನೂ ಜಾಸ್ತಿ ಸ್ನೇಹ ಬೆಳೆಸಿಕೊಳ್ಳಬೇಕು. ಹೀಗೆ ಮಾಡಿದ್ರೆ ಸಭೆಯಲ್ಲಿ ನಿಮಗೆ ಹೆಚ್ಚು ಜವಾಬ್ದಾರಿಗಳು ಸಿಗಬಹುದು.

6. ದಾವೀದನ ಬಗ್ಗೆ ಕೆಲವರು ಏನು ನೆನಸುತ್ತಿದ್ರು?

6 ‘ದಾವೀದ ಚಿಕ್ಕ ಹುಡುಗ ಅವನಿಗೆ ಇನ್ನೂ ಜವಾಬ್ದಾರಿ ಬಂದಿಲ್ಲ’ ಅಂತ ಕೆಲವರು ನೆನಸುತ್ತಿದ್ರು. ಗೊಲ್ಯಾತನ ವಿರುದ್ಧ ಹೋರಾಡೋಕೆ ದಾವೀದ ಮುಂದೆ ಬಂದಾಗ ಸೌಲ “ನೀನಿನ್ನೂ ಚಿಕ್ಕ ಹುಡುಗ” ಅಂತ ಹೇಳಿ ಅವನನ್ನು ತಡೆದ. (1 ಸಮು. 17:31-33) ಅದಕ್ಕಿಂತ ಮುಂಚೆ ದಾವೀದನ ಸ್ವಂತ ಅಣ್ಣ ಅವನನ್ನ ಬೈದ. ಜವಾಬ್ದಾರಿ ಇಲ್ಲದವನ ತರ ನಡಕೊಳ್ತಾ ಇದ್ದೀಯ ಅಂತ ದೂರಿದ. (1 ಸಮು. 17:26-30) ಆದ್ರೆ ಯೆಹೋವ ದೇವರಿಗೆ ದಾವೀದನ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಬುದ್ಧಿ ಇಲ್ಲದವನು, ಜವಾಬ್ದಾರಿ ಇಲ್ಲದ ಹುಡುಗ ಅಂತ ದೇವರು ನೆನಸಲಿಲ್ಲ. ದಾವೀದ ತನ್ನ ಫ್ರೆಂಡ್‌ ಯೆಹೋವನ ಸಹಾಯದಿಂದ ಗೊಲ್ಯಾತನನ್ನು ಕೊಂದುಬಿಟ್ಟ.—1 ಸಮು. 17:45, 48-51.

7. ದಾವೀದನಿಂದ ನೀವೇನು ಕಲಿಬಹುದು?

7 ಹುಡುಗರೇ, ದಾವೀದನಿಂದ ಏನು ಕಲಿಬಹುದು? ತಾಳ್ಮೆಯಿಂದ ಕಾಯಬೇಕು ಅಂತ ಕಲಿತೇವೆ. ನಿಮ್ಮನ್ನು ಚಿಕ್ಕ ವಯಸ್ಸಿಂದ ನೋಡಿದ ಕೆಲವರು ನೀವಿನ್ನೂ ಚಿಕ್ಕವರೇ ಅಂತ ನೆನಸ್ತಾ ಇರಬಹುದು. ಆದ್ರೆ ಯೆಹೋವ ದೇವರು ನೀವು ನೋಡೋಕೆ ಹೇಗಿದ್ದೀರ ಅನ್ನೋದಕ್ಕಷ್ಟೇ ಗಮನ ಕೊಡಲ್ಲ. ನಿಮ್ಮ ಹೃದಯದಲ್ಲಿ ಏನಿದೆ, ನಿಮಗೆ ಯಾವ್ಯಾವ ಸಾಮರ್ಥ್ಯ ಇದೆ ಅನ್ನೋದನ್ನೂ ನೋಡ್ತಾನೆ. (1 ಸಮು. 16:7) ದಾವೀದನ ಹಾಗೆ ನೀವು ಕೂಡ ಯೆಹೋವನಿಗೆ ಹೆಚ್ಚು ಆಪ್ತರಾಗಿ. ದಾವೀದ ಯೆಹೋವ ಮಾಡಿದ ಸೃಷ್ಟಿಗಳನ್ನು ಅಂದ್ರೆ ಆಕಾಶ, ಚಂದ್ರ, ನಕ್ಷತ್ರ ಇದನ್ನೆಲ್ಲ ಚೆನ್ನಾಗಿ ಗಮನಿಸ್ತಿದ್ದ. ಅದ್ರಿಂದ ದೇವರ ಬಗ್ಗೆ ಏನು ಗೊತ್ತಾಗುತ್ತೆ ಅಂತ ಯೋಚಿಸ್ತಿದ್ದ. ಹೀಗೆ ಅವನು ಯೆಹೋವನಿಗೆ ಆಪ್ತನಾದ. (ಕೀರ್ತ. 8:3, 4; 139:14; ರೋಮ. 1:20) ದಾವೀದನ ತರ ನೀವು ಇನ್ನೊಂದು ವಿಷ್ಯನೂ ಮಾಡಬಹುದು. ಬಲ ಕೊಡಪ್ಪಾ ಅಂತ ಯೆಹೋವನ ಹತ್ರ ಬೇಡಿಕೊಳ್ಳಬೇಕು. ಉದಾಹರಣೆಗೆ ನೀವು ಯೆಹೋವನ ಸಾಕ್ಷಿ ಆಗಿರೋದ್ರಿಂದ ಸ್ಕೂಲಲ್ಲಿ ಮಕ್ಕಳು ನಿಮ್ಮನ್ನು ಗೇಲಿ ಮಾಡಿದ್ರೆ ನೀವೇನು ಮಾಡಬೇಕು? ಆ ಕಷ್ಟ ಸಹಿಸಿಕೊಳ್ಳೋಕೆ ಬಲ ಕೊಡಪ್ಪಾ ಅಂತ ಯೆಹೋವನ ಹತ್ರ ಪ್ರಾರ್ಥನೆ ಮಾಡಬೇಕು. ಅಷ್ಟೇ ಅಲ್ಲ ಬೈಬಲಲ್ಲಿ, ಬೈಬಲ್‌ ಆಧಾರಿತ ಪ್ರಕಾಶನಗಳಲ್ಲಿ, ವಿಡಿಯೋಗಳಲ್ಲಿ ಇರೋ ಸಲಹೆಗಳನ್ನು ಅನ್ವಯಿಸಬೇಕು. ನಿಮಗೆ ಸಮಸ್ಯೆ ಬಂದಾಗೆಲ್ಲ ಯೆಹೋವ ದೇವರು ಈ ರೀತಿ ಸಹಾಯ ಮಾಡೋದನ್ನು ನೋಡಿದಾಗ ನಿಮಗೆ ಆತನ ಮೇಲಿರೋ ನಂಬಿಕೆ ಇನ್ನೂ ಜಾಸ್ತಿ ಆಗುತ್ತೆ. ನಿಮಗಿರೋ ನಂಬಿಕೆಯನ್ನು ಬೇರೆಯವರೂ ಗಮನಿಸ್ತಾರೆ. ಆಗ ನಿಮಗೇ ಗೊತ್ತಿಲ್ಲದೆ ನೀವು ಬೇರೆಯವರ ವಿಶ್ವಾಸ ಗೆಲ್ತೀರ.

ದೀನತೆ ಇರೋ ಯುವ ಸಹೋದರರು ಬೇರೆಯವರಿಗೆ ಸಹಾಯ ಮಾಡೋಕೆ ಮುಂದೆ ಬರುತ್ತಾರೆ (ಪ್ಯಾರ 8-9 ನೋಡಿ)

8-9. (ಎ) ದಾವೀದ ರಾಜನಾಗಿ ಆಳೋಕೆ ಕಾಯ್ತಿದ್ದ ಸಮಯದಲ್ಲಿ ಏನು ಮಾಡಿದ? (ಬಿ) ಈ ವಿಷ್ಯದಲ್ಲಿ ಇವತ್ತು ಹುಡುಗರು ದಾವೀದನಿಂದ ಏನು ಕಲಿಬಹುದು?

8 ದಾವೀದನಿಗೆ ಇನ್ನೊಂದು ಕಷ್ಟ ಬಂತು. ಅವನು ರಾಜನಾಗಿ ಆಯ್ಕೆ ಆಗಿದ್ರೂ ಯೆಹೂದದ ರಾಜನಾಗಿ ಆಳೋಕೆ ಅವನು ತುಂಬ ವರ್ಷ ಕಾಯಬೇಕಿತ್ತು. (1 ಸಮು. 16:13; 2 ಸಮು. 2:3, 4) ಆ ಸಮಯದಲ್ಲಿ ದಾವೀದ ‘ನಾನೇನೂ ಮಾಡಲ್ಲ’ ಅಂತ ಕೈಕಟ್ಟಿ ಕೂತಿದ್ದನಾ? ಇಲ್ಲ, ತಾಳ್ಮೆಯಿಂದ ಕಾಯ್ತಾ ತನ್ನಿಂದ ಏನು ಮಾಡಕ್ಕಾಗುತ್ತೋ ಅದನ್ನು ಮಾಡಿದ. ಉದಾಹರಣೆಗೆ ಸೌಲನಿಂದ ತಪ್ಪಿಸಿಕೊಂಡು ಫಿಲಿಷ್ಟಿಯರ ದೇಶದಲ್ಲಿ ಅಲೆಮಾರಿ ಆಗಿದ್ದಾಗ ದಾವೀದ ಇಸ್ರಾಯೇಲ್ಯರ ಶತ್ರುಗಳ ವಿರುದ್ಧ ಹೋರಾಡಿದ. ಹೀಗೆ ಹೋರಾಡಿ ಯೆಹೂದದ ಗಡಿ ಪ್ರದೇಶಗಳನ್ನು ಕಾಪಾಡಿದ.—1 ಸಮು. 27:1-12.

9 ಹುಡುಗರೇ, ದಾವೀದನಿಂದ ನೀವೇನು ಕಲಿಬಹುದು? ಸಭೆಯಲ್ಲಿ ನಿಮಗೆ ಜವಾಬ್ದಾರಿ ಸಿಗೋ ತನಕ ಸಭೆಯವರಿಗಾಗಿ, ಯೆಹೋವನಿಗಾಗಿ ಏನೆಲ್ಲಾ ಮಾಡಕ್ಕಾಗುತ್ತೋ ಅದನ್ನು ಮಾಡ್ತಾ ಇರಿ. ಒಂದು ಉದಾಹರಣೆ ನೋಡಿ. ರಿಕಾರ್ಡೊ * ಅನ್ನೋ ಸಹೋದರನಿಗೆ ಚಿಕ್ಕವಯಸ್ಸಿಂದಲೂ ರೆಗ್ಯುಲರ್‌ ಪಯನೀಯರ್‌ ಆಗಬೇಕು ಅಂತ ಆಸೆ ಇತ್ತು. ಆದ್ರೆ ಹಿರಿಯರು ಅವನು ಇನ್ನೂ ಪ್ರಯತ್ನ ಹಾಕಬೇಕು ಅಂತ ಹೇಳಿದ್ರು. ಆಗ ರಿಕಾರ್ಡೊ ಕೋಪ ಮಾಡಿಕೊಳ್ಳಲಿಲ್ಲ, ಬೇಜಾರ್‌ ಮಾಡಿಕೊಳ್ಳಲಿಲ್ಲ. ಇನ್ನೂ ಜಾಸ್ತಿ ಸೇವೆ ಮಾಡಿದ. ರಿಕಾರ್ಡೊ ಹೀಗೆ ಹೇಳ್ತಾನೆ: “ಎಲ್ಲಿ ಪ್ರಗತಿ ಮಾಡಬೇಕು ಅಂತ ನಂಗೆ ಗೊತ್ತಾಯ್ತು. ಸಿಹಿಸುದ್ದಿ ಸಾರಿದಾಗ ಚೆನ್ನಾಗಿ ಕೇಳಿಸಿಕೊಂಡ ಜನ್ರನ್ನು ತಪ್ಪದೆ ಮತ್ತೆ ಭೇಟಿ ಮಾಡಬೇಕು ಅಂತ ನಿರ್ಧಾರ ಮಾಡಿದೆ. ಅವರನ್ನು ಭೇಟಿ ಮಾಡೋ ಮುಂಚೆ ಚೆನ್ನಾಗಿ ತಯಾರಿ ಮಾಡಿ ಹೋಗ್ತಿದ್ದೆ. ನನಗೊಂದು ಸ್ಟಡಿನೂ ಸಿಕ್ತು. ಹೀಗೆ ಹೆಚ್ಚು ಸೇವೆ ಮಾಡಿದಾಗ ನನಗಿದ್ದ ಭಯ ಹೋಗಿ ಧೈರ್ಯ ಬಂತು.” ಈಗ ರಿಕಾರ್ಡೊ ರೆಗ್ಯುಲರ್‌ ಪಯನೀಯರ್‌ ಆಗಿ, ಸಹಾಯಕ ಸೇವಕನಾಗಿ ಸೇವೆ ಮಾಡ್ತಿದ್ದಾನೆ.

10. ಒಮ್ಮೆ ದಾವೀದ ಒಂದು ದೊಡ್ಡ ನಿರ್ಧಾರ ಮಾಡೋ ಮುಂಚೆ ಏನು ಮಾಡಿದ?

10 ದಾವೀದ ಸೌಲನಿಂದ ತಪ್ಪಿಸಿಕೊಂಡು ಜೀವಿಸ್ತಿದ್ದಾಗ ಅವನಿಗೆ ಇನ್ನೊಂದು ಕಷ್ಟ ಬಂತು. ಅವನು ತನ್ನ ಜೊತೆ ಇದ್ದ ಗಂಡಸರನ್ನೆಲ್ಲ ಕರ್ಕೊಂಡು ಯುದ್ಧಕ್ಕೆ ಹೋಗಿದ್ದ. ಆಗ ಅವನ ಶತ್ರುಗಳು ಮನೆ ಮೇಲೆ ದಾಳಿ ಮಾಡಿ ಅವರ ಕುಟುಂಬದವರನ್ನೆಲ್ಲ ಹಿಡಿದುಕೊಂಡು ಹೋಗಿಬಿಟ್ರು. ದಾವೀದನಿಗೆ ಯುದ್ಧ ಮಾಡಿಮಾಡಿ ಅನುಭವ ಆಗಿತ್ತು. ‘ನಾನೇ ಒಂದು ಯುದ್ಧ ತಂತ್ರ ರಚಿಸಿ ಅವರನ್ನೆಲ್ಲ ಕಾಪಾಡುತ್ತೇನೆ’ ಅಂತ ನೆನಸಬಹುದಿತ್ತು. ಆದ್ರೆ ದಾವೀದ ಹಾಗೆ ಮಾಡಲಿಲ್ಲ. ಏನು ಮಾಡಬೇಕು ಅಂತ ಯೆಹೋವನ ಹತ್ರ ಕೇಳಿದ. ಅವನು ಪುರೋಹಿತ ಎಬ್ಯಾತಾರನ ಮೂಲಕ ಯೆಹೋವನ ಹತ್ರ “ನಾನು ಈ ಲೂಟಿಗಾರರ ಗುಂಪನ್ನ ಅಟ್ಟಿಸ್ಕೊಂಡು ಹೋಗ್ಲಾ?” ಅಂತ ವಿಚಾರಿಸಿದ. ಆಗ ಯೆಹೋವ ದಾವೀದನಿಗೆ ‘ಹೋಗು, ನೀನು ಎಲ್ರನ್ನ ಬಿಡಿಸ್ಕೊಂಡು ಬರ್ತಿಯ’ ಅಂತ ಹೇಳಿ ಧೈರ್ಯ ತುಂಬಿದನು. (1 ಸಮು. 30:7-10) ಇದ್ರಿಂದ ನೀವೇನು ಕಲಿಬಹುದು?

ಯುವ ಸಹೋದರರು ಹಿರಿಯರ ಸಲಹೆ ಕೇಳಬೇಕು (ಪ್ಯಾರ 11 ನೋಡಿ)

11. ಒಂದು ನಿರ್ಧಾರ ತಗೊಳ್ಳೋ ಮುಂಚೆ ನೀವೇನು ಮಾಡಬೇಕು?

11 ಒಂದು ನಿರ್ಧಾರ ತಗೊಳ್ಳೋ ಮುಂಚೆ ಬೇರೆಯವರ ಸಲಹೆ ಕೇಳಿ. ನಿಮ್ಮ ಅಪ್ಪ-ಅಮ್ಮ ಹತ್ರ ಕೇಳಿ. ಸಭೆಯಲ್ಲಿರೋ ಅನುಭವಸ್ಥ ಹಿರಿಯರು ಕೂಡ ಒಳ್ಳೇ ಸಲಹೆ ಕೊಡ್ತಾರೆ. ಅವರನ್ನೂ ಕೇಳಿ. ಯೆಹೋವ ದೇವರಿಗೆ ಹಿರಿಯರ ಮೇಲೆ ನಂಬಿಕೆ ಇದೆ. ನೀವೂ ಅವರ ಮೇಲೆ ನಂಬಿಕೆ ಇಡಬಹುದು. ಯೆಹೋವ ಅವರನ್ನು ಸಭೆಗೆ ‘ಉಡುಗೊರೆಯಾಗಿ’ ಕೊಟ್ಟಿದ್ದಾನೆ. (ಎಫೆ. 4:8) ನೀವು ಹಿರಿಯರ ತರ ಯೆಹೋವನಲ್ಲಿ ನಂಬಿಕೆ ಬೆಳೆಸಿಕೊಳ್ಳಬೇಕು. ಅವರು ಕೊಡೋ ಸಲಹೆಗಳನ್ನು ಪಾಲಿಸಬೇಕು. ಆಗ ನಿಮಗೆ ಸರಿಯಾದ ನಿರ್ಧಾರಗಳನ್ನು ಮಾಡೋಕೆ ಆಗುತ್ತೆ. ನಾವೀಗ ರಾಜ ಆಸನ ಉದಾಹರಣೆ ನೋಡೋಣ.

ರಾಜ ಆಸನಿಂದ ಕಲಿರಿ

12. ರಾಜನಾಗಿ ಆಳೋಕೆ ಶುರು ಮಾಡಿದಾಗ ಆಸನಲ್ಲಿ ಯಾವ ಗುಣಗಳಿದ್ವು?

12 ಆಸ ಚಿಕ್ಕ ಹುಡುಗನಾಗಿದ್ದಾಗ ದೀನನಾಗಿದ್ದ, ಧೈರ್ಯವಂತನಾಗಿದ್ದ. ಅವನು ತನ್ನ ತಂದೆ ಅಬೀಯನ ನಂತ್ರ ರಾಜನಾದ. ರಾಜನಾದ ಕೂಡಲೇ ದೇಶದಲ್ಲಿದ್ದ ಎಲ್ಲಾ ಮೂರ್ತಿಗಳನ್ನು ತೆಗೆಸಿಬಿಟ್ಟ. ಅಷ್ಟೇ ಅಲ್ಲ “ಯೆಹೂದದ ಜನ್ರಿಗೆ ತಮ್ಮ ಪೂರ್ವಜರ ದೇವರಾದ ಯೆಹೋವನನ್ನ ಆರಾಧಿಸೋಕೆ ಮತ್ತು ಆತನು ಕೊಟ್ಟಿರೋ ನಿಯಮ ಪುಸ್ತಕನ ಮತ್ತು ಆಜ್ಞೆಗಳನ್ನ ಪಾಲಿಸೋಕೆ ಹೇಳಿದ.” (2 ಪೂರ್ವ. 14:1-7) ಒಮ್ಮೆ ಇಥಿಯೋಪ್ಯದ ಜೆರಹ 10 ಲಕ್ಷ ಜನ್ರನ್ನು ಕರ್ಕೊಂಡು ಬಂದು ಯೆಹೂದದ ಮೇಲೆ ದಾಳಿ ಮಾಡಿದಾಗ ಬುದ್ಧಿವಂತಿಕೆಯಿಂದ ಆಸ ಯೆಹೋವನ ಹತ್ರಾನೇ ಸಹಾಯ ಕೇಳಿದ. ಅವನು ಹೀಗೆ ಪ್ರಾರ್ಥಿಸಿದ: “ಯೆಹೋವನೇ, ನೀನು ಯಾರಿಗೆ ಸಹಾಯ ಮಾಡೋಕೆ ಇಷ್ಟ ಪಡ್ತೀಯೋ ಅವರು ತುಂಬ ಜನ ಇದ್ರೂ ಅವರಿಗೆ ಶಕ್ತಿ ಇಲ್ಲಾ ಅಂದ್ರೂ ನೀನು ಅದ್ರ ಬಗ್ಗೆ ತಲೆ ಕೆಡಿಸ್ಕೊಳ್ಳಲ್ಲ. ನಮ್ಮ ದೇವರಾದ ಯೆಹೋವನೇ, ದಯವಿಟ್ಟು ನಮಗೆ ಸಹಾಯಮಾಡು. ನಾವು ನಿನ್ನನ್ನೆ ನಂಬ್ಕೊಂಡಿದ್ದೀವಿ.” ಯೆಹೋವನಿಗೆ ತುಂಬ ಶಕ್ತಿ ಇದೆ, ತನ್ನ ಜನ್ರನ್ನು ಖಂಡಿತ ಕಾಪಾಡ್ತಾನೆ ಅಂತ ಆಸನಿಗೆ ನಂಬಿಕೆ ಇತ್ತು. ಅವನು ಮಾಡಿದ ಪ್ರಾರ್ಥನೆಯಿಂದ ಇದು ಗೊತ್ತಾಗುತ್ತೆ. ಯೆಹೋವನ ಮೇಲೆ ಆಸ ಇಟ್ಟ ನಂಬಿಕೆ ಸುಳ್ಳಾಗಲಿಲ್ಲ. ಯೆಹೋವ ದೇವರು “ಇಥಿಯೋಪ್ಯದ ಜನ್ರನ್ನ ಸೋಲಿಸಿದನು.”—2 ಪೂರ್ವ. 14:8-12.

13. (ಎ) ಮುಂದಕ್ಕೆ ಆಸನಿಗೆ ಏನಾಯ್ತು? (ಬಿ) ಅವನಿಗೆ ಯಾಕೆ ಈ ಗತಿ ಬಂತು?

13 ಆಸನ ವಿರುದ್ಧ 10 ಲಕ್ಷ ಸೈನಿಕರಿದ್ದ ದೊಡ್ಡ ಸೈನ್ಯ ಯುದ್ಧ ಮಾಡೋಕೆ ಬಂದಾಗ ಅವನಿಗೆ ತುಂಬ ಭಯ ಆಗಿರುತ್ತೆ ಅಲ್ವಾ? ಆಗ ಅವನು ಯೆಹೋವನ ಸಹಾಯ ಕೇಳಿದ, ಆ ದೊಡ್ಡ ಸೈನ್ಯವನ್ನು ಸೋಲಿಸಿಬಿಟ್ಟ. ಆಮೇಲೆ ಅದಕ್ಕಿಂತ ಒಂದು ಚಿಕ್ಕ ಸೈನ್ಯ ಅಂದ್ರೆ ಇಸ್ರಾಯೇಲಿನ ರಾಜನಾದ ಬಾಷನ ಸೈನ್ಯ ಆಸನ ಮೇಲೆ ದಾಳಿ ಮಾಡೋಕೆ ಬಂತು. ಆಗ ಅವನು ಯೆಹೋವನ ಸಹಾಯ ಕೇಳಲಿಲ್ಲ. ಅರಾಮ್ಯರ ರಾಜನ ಸಹಾಯ ಕೇಳಿದ. ಇದು ಅವನು ಮಾಡಿದ ದೊಡ್ಡ ಎಡವಟ್ಟಾಗಿತ್ತು! ಯೆಹೋವ ತನ್ನ ಪ್ರವಾದಿಯಾದ ಹನಾನಿ ಮೂಲಕ ಆಸನಿಗೆ “ನೀನು ನಿನ್ನ ದೇವರಾದ ಯೆಹೋವನಲ್ಲಿ ಭರವಸೆ ಇಡದೆ ಅರಾಮ್ಯರ ರಾಜನಲ್ಲಿ ಭರವಸೆ ಇಟ್ಟಿದ್ರಿಂದ ಅವನ ಸೈನ್ಯ ನಿನ್ನ ಕೈಯಿಂದ ತಪ್ಪಿಸಿಕೊಳ್ತು.” ಇದಾದ ಮೇಲೆ ಆಸ ತನ್ನ ಸಮಯವನ್ನೆಲ್ಲ ಯುದ್ಧ ಮಾಡೋದ್ರಲ್ಲೇ ಕಳಿಬೇಕಾಯ್ತು. (2 ಪೂರ್ವ. 16:7, 9; 1 ಅರ. 15:32) ಇದ್ರಿಂದ ನಾವೇನು ಕಲಿಬಹುದು?

14. (ಎ) ಒಂದು ನಿರ್ಧಾರ ತಗೊಳ್ಳೋ ಮುಂಚೆ ಏನು ಮಾಡಬೇಕು? (ಬಿ) ಹಾಗೆ ಮಾಡಿದ್ರೆ 1 ತಿಮೊತಿ 4:12 ಹೇಳೋ ಪ್ರಕಾರ ನಿಮ್ಗೆ ಯಾವ ಪ್ರಯೋಜನ ಸಿಗುತ್ತೆ?

14 ಯಾವಾಗ್ಲೂ ದೀನರಾಗಿರಿ ಮತ್ತು ಯೆಹೋವನ ಸಹಾಯ ಕೇಳ್ತಾ ಇರಿ. ನೀವು ದೀಕ್ಷಾಸ್ನಾನ ಪಡಕೊಂಡಾಗ ಯೆಹೋವನ ಮೇಲೆ ನಿಮಗೆ ತುಂಬ ನಂಬಿಕೆ ಇದೆ ಅಂತ ತೋರಿಸಿಕೊಟ್ರಿ. ಯೆಹೋವ ಕೂಡ ಖುಷಿಯಿಂದ ನಿಮ್ಮನ್ನ ತನ್ನ ಕುಟುಂಬಕ್ಕೆ ಸೇರಿಸಿಕೊಂಡನು. ನೀವು ಈಗ್ಲೂ ಯೆಹೋವನ ಸಹಾಯ ಕೇಳ್ತಾ ಇದ್ದೀರಾ? ನೀವು ಜೀವನದಲ್ಲಿ ದೊಡ್ಡದೊಡ್ಡ ತೀರ್ಮಾನಗಳನ್ನ ಮಾಡುವಾಗ ಯೆಹೋವನ ಸಹಾಯ ಕೇಳೇ ಕೇಳ್ತೀರಿ. ಅದೇ ತರ ಚಿಕ್ಕಚಿಕ್ಕ ನಿರ್ಧಾರ ಮಾಡುವಾಗ್ಲೂ ಕೇಳ್ತೀರಾ? ಮನೋರಂಜನೆಯಂಥ ವಿಷ್ಯದಲ್ಲಿ ಆಗಲಿ ಅಥವಾ ಕೆಲಸ, ಜೀವನದ ಗುರಿ ಇಂಥ ವಿಷ್ಯದಲ್ಲಿ ಆಗಲಿ ಏನೇ ನಿರ್ಧಾರ ಮಾಡೋ ಮುಂಚೆ ಯೆಹೋವನನ್ನು ಕೇಳೋದು ತುಂಬ ಮುಖ್ಯ. ನಿಮ್ಮ ಬುದ್ಧಿ ಏನು ಹೇಳುತ್ತೋ ಅದರ ಪ್ರಕಾರ ಮಾಡದೆ ಬೈಬಲ್‌ ಏನು ಹೇಳುತ್ತೆ ಅಂತ ನೋಡಿ. ಅದರ ಪ್ರಕಾರ ತೀರ್ಮಾನ ತಗೊಳ್ಳಿ. (ಜ್ಞಾನೋ. 3:5, 6) ಹಾಗೆ ಮಾಡಿದ್ರೆ ಯೆಹೋವ ದೇವರಿಗೆ ಖುಷಿ ಆಗುತ್ತೆ. ಅಷ್ಟೇ ಅಲ್ಲ ಸಭೆಯವರ ಪ್ರೀತಿ-ವಿಶ್ವಾಸ ಗೆಲ್ತೀರಿ, ಅವರ ಗೌರವ ಗಳಿಸ್ತೀರಿ.1 ತಿಮೊತಿ 4:12 ಓದಿ.

ರಾಜ ಯೆಹೋಷಾಫಾಟನಿಂದ ಕಲಿರಿ

15. ಎರಡು ಪೂರ್ವಕಾಲವೃತ್ತಾಂತ 18:1-3; 19:2 ಹೇಳೋ ಪ್ರಕಾರ ಯೆಹೋಷಾಫಾಟ ಯಾವ ತಪ್ಪು ಮಾಡಿದ?

15 ನಾವೆಲ್ರೂ ಅಪರಿಪೂರ್ಣರು. ನೀವು ಕೂಡ ಅಪರಿಪೂರ್ಣ ವ್ಯಕ್ತಿ. ನಿಮ್ಮಿಂದಾನೂ ತಪ್ಪುಗಳಾಗುತ್ತೆ. ಅದ್ರ ಅರ್ಥ ನೀವು ಯೆಹೋವನ ಸೇವೆ ಮಾಡಕ್ಕಾಗಲ್ಲ ಅಂತಲ್ಲ. ನಿಮ್ಮಿಂದ ಆಗೋದನ್ನು ಮಾಡ್ತಾ ಇರಿ. ನಾವೀಗ ರಾಜ ಯೆಹೋಷಾಫಾಟನ ಬಗ್ಗೆ ನೋಡೋಣ. ಅವನಲ್ಲಿ ಒಳ್ಳೇ ಗುಣಗಳು ಇದ್ವು. ಅವನು ಚಿಕ್ಕವನಿದ್ದಾಗ ‘ತನ್ನ ತಂದೆಯ ದೇವರನ್ನ ಆರಾಧಿಸಿದ. ದೇವರ ಆಜ್ಞೆಗಳನ್ನ ಪಾಲಿಸಿದ.’ ಅಷ್ಟೇ ಅಲ್ಲ ಯೆಹೂದದ ಪಟ್ಟಣಗಳಿಗೆ ಅಧಿಕಾರಿಗಳನ್ನು ಕಳಿಸಿ ಯೆಹೋವನ ಬಗ್ಗೆ ಜನ್ರಿಗೆ ಕಲಿಸಿದ. (2 ಪೂರ್ವ. 17:4, 7) ಯೆಹೋಷಾಫಾಟ ತಪ್ಪುಗಳನ್ನೂ ಮಾಡಿದ, ಕೆಲವು ತಪ್ಪು ನಿರ್ಧಾರಗಳನ್ನೂ ತಗೊಂಡ. ಅವನು ಮಾಡಿದ ಒಂದು ನಿರ್ಧಾರ ಅಂತೂ ಯೆಹೋವನಿಗೆ ಇಷ್ಟನೇ ಆಗಲಿಲ್ಲ. ಅದನ್ನು ಅರ್ಥ ಮಾಡಿಸೋಕೆ ಯೆಹೋವ ತನ್ನ ಒಬ್ಬ ಸೇವಕನನ್ನು ಅವನ ಹತ್ರ ಕಳಿಸಿದನು. (2 ಪೂರ್ವಕಾಲವೃತ್ತಾಂತ 18:1-3; 19:2 ಓದಿ.) ಇದ್ರಿಂದ ನಾವೇನು ಕಲಿಬಹುದು?

ಕಷ್ಟಪಟ್ಟು ಕೆಲಸ ಮಾಡೋ ಯುವ ಸಹೋದರರು ಬೇರೆಯವರ ವಿಶ್ವಾಸ, ಗೌರವ ಗೆಲ್ತಾರೆ (ಪ್ಯಾರ 16 ನೋಡಿ)

16. ರಾಜೀವ್‌ ಅನುಭವದಿಂದ ನೀವೇನು ಕಲಿತ್ರಿ?

16 ಬೇರೆಯವರು ಬುದ್ಧಿವಾದ ಹೇಳಿದಾಗ ಅದನ್ನು ಕೇಳಿ ಅದರ ಪ್ರಕಾರ ನಡೀರಿ. ಬೇರೆ ಹುಡುಗರ ತರ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡೋಕೆ ನಿಮಗೆ ಕಷ್ಟ ಆಗ್ತಿದ್ಯಾ? ಹಾಗಿದ್ರೆ ಬೇಜಾರ್‌ ಮಾಡಿಕೊಳ್ಳಬೇಡಿ. ರಾಜೀವ್‌ ಅನ್ನೋ ಸಹೋದರ ಚಿಕ್ಕವನಿದ್ದಾಗ ಏನು ಮಾಡಿದ ಅಂತ ನೋಡೋಣ. ಅವನು ಹೀಗೆ ಹೇಳ್ತಾನೆ: “ಆ ದಿನಗಳಲ್ಲಿ ಬೇರೆ ಮಕ್ಕಳ ತರ ಆಟ ಆಡೋದು, ಮೋಜು-ಮಸ್ತಿ ಮಾಡೋದು ಅಂದ್ರೆ ತುಂಬ ಇಷ್ಟ ಆಗ್ತಿತ್ತು. ಮೀಟಿಂಗಿಗೆ, ಸೇವೆಗೆ ಹೋಗೋಕೆ ಇಷ್ಟಾನೇ ಆಗ್ತಿರಲಿಲ್ಲ. ಜೀವನದಲ್ಲಿ ಯಾವುದು ಮುಖ್ಯ ಅಂತ ನಂಗೆ ಅರ್ಥ ಆಗಿರಲಿಲ್ಲ.” ರಾಜೀವ್‌ಗೆ ಒಬ್ಬ ಹಿರಿಯ ಬುದ್ಧಿವಾದ ಹೇಳಿದ್ರು. ಅದರ ಬಗ್ಗೆ ರಾಜೀವ್‌ ಹೀಗೆ ಹೇಳ್ತಾನೆ: “1 ತಿಮೊತಿ 4:8 ರಲ್ಲಿರೋ ವಿಷ್ಯವನ್ನು ಅರ್ಥ ಮಾಡಿಕೊಳ್ಳೋಕೆ ಆ ಹಿರಿಯ ನಂಗೆ ಸಹಾಯ ಮಾಡಿದ್ರು.” ಹಿರಿಯ ಕೊಟ್ಟ ಬುದ್ಧಿವಾದವನ್ನು ರಾಜೀವ್‌ ದೀನತೆಯಿಂದ ಕೇಳಿದ, ತನ್ನ ಜೀವನದಲ್ಲಿ ಯಾವುದು ಮುಖ್ಯ ಆಗಿದೆ ಅಂತ ಚೆನ್ನಾಗಿ ಯೋಚಿಸಿದ. ಆಮೇಲೆ ದೇವರ ಸೇವೆಗೆ ಮೊದಲ ಸ್ಥಾನ ಕೊಡಬೇಕು ಅಂತ ನಿರ್ಧಾರ ಮಾಡಿದ. ಆಮೇಲೆ ಏನಾಯ್ತು? ಕೆಲವು ವರ್ಷ ಆದ್ಮೇಲೆ ರಾಜೀವ್‌ ಸಹಾಯಕ ಸೇವಕ ಆದ.

ಯೆಹೋವ ನಿಮ್ಮ ಬಗ್ಗೆ ಹೆಮ್ಮೆ ಪಡೋ ತರ ನಡ್ಕೊಳ್ಳಿ

17. ಯೆಹೋವನ ಸೇವೆ ಮಾಡೋ ಹುಡುಗರನ್ನು ನೋಡಿದ್ರೆ ದೊಡ್ಡವರಿಗೆ ಏನನಿಸುತ್ತೆ?

17 ಯುವ ಜನ್ರೇ, ಹುಡುಗರೇ, ಯೆಹೋವನ ಸೇವೆಯಲ್ಲಿ ದೊಡ್ಡವರಿಗೆ ನೀವು “ಹೆಗಲಿಗೆ ಹೆಗಲು ಕೊಟ್ಟು” ಕೆಲಸ ಮಾಡ್ತಾ ಇದ್ದೀರಿ. ಇದನ್ನು ನೋಡಿದಾಗ ಅವರಿಗೆ ತುಂಬ ಖುಷಿ ಆಗುತ್ತೆ. (ಚೆಫ. 3:9) ಕೊಟ್ಟ ಕೆಲಸವನ್ನು ನೀವು ಉತ್ಸಾಹದಿಂದ, ಚುರುಕಾಗಿ, ಲವಲವಿಕೆಯಿಂದ ಮಾಡೋದನ್ನು ನೋಡಿದಾಗ ಅವರಿಗೆ ನಿಮ್ಮ ಮೇಲೆ ಪ್ರೀತಿ ಉಕ್ಕಿ ಬರುತ್ತೆ. ನೀವು ಅವರಿಗೆ ಕಣ್ಮಣಿಗಳ ತರ ಇದ್ದೀರಿ.—1 ಯೋಹಾ. 2:14.

18. ತನ್ನ ಸೇವೆ ಮಾಡೋ ಹುಡುಗರ ಬಗ್ಗೆ ಯೆಹೋವನಿಗೆ ಏನನಿಸುತ್ತೆ ಅಂತ ಜ್ಞಾನೋಕ್ತಿ 27:11 ಹೇಳುತ್ತೆ?

18 ಹುಡುಗರೇ, ಯುವ ಸಹೋದರರೇ, ಯೆಹೋವ ನಿಮ್ಮನ್ನು ಪ್ರೀತಿಸ್ತಾನೆ, ನಂಬುತ್ತಾನೆ. ಕೊನೇ ದಿನಗಳಲ್ಲಿ ಒಂದು ದೊಡ್ಡ ಯುವಸೇನೆ ಇರುತ್ತೆ ಮತ್ತು ಅವರಾಗಿಯೇ ಮುಂದೆ ಬಂದು ತನ್ನ ಸೇವೆ ಮಾಡ್ತಾರೆ ಅಂತ ಯೆಹೋವ ಮುಂಚೆನೇ ಹೇಳಿದ್ದಾನೆ. (ಕೀರ್ತ. 110:1-3) ಆತನನ್ನು ನೀವು ಪ್ರೀತಿಸ್ತೀರಿ, ಆತನ ಸೇವೆಯನ್ನು ಚೆನ್ನಾಗಿ ಮಾಡಬೇಕು ಅನ್ನೋ ಆಸೆ ನಿಮಗಿದೆ ಅಂತ ಯೆಹೋವನಿಗೆ ಗೊತ್ತು. ಹಾಗಾಗಿ ಈ ಲೇಖನದಲ್ಲಿ ಕಲಿತ ಹಾಗೆ ತಾಳ್ಮೆಯಿಂದ ಕಾಯಿರಿ, ಬೇರೆಯವರ ಜೊತೆನೂ ತಾಳ್ಮೆಯಿಂದ ನಡ್ಕೊಳ್ಳಿ. ನೀವು ತಪ್ಪು ಮಾಡಿದಾಗ ಬೇರೆಯವರು ತಿದ್ದಿದ್ರೆ, ತರಬೇತಿ ಕೊಟ್ರೆ ಅದರ ಪ್ರಕಾರ ನಡೀರಿ. ಯೆಹೋವನೇ ನಿಮ್ಮನ್ನು ತಿದ್ದುತ್ತಿದ್ದಾನೆ ಅಂತ ಅಂದ್ಕೊಳ್ಳಿ. (ಇಬ್ರಿ. 12:6) ಸಿಕ್ಕಿದ ನೇಮಕವನ್ನು ಚೆನ್ನಾಗಿ ಮಾಡಿ. ಎಲ್ಲಕ್ಕಿಂತ ಮುಖ್ಯವಾಗಿ ಏನೇ ಮಾಡಿದ್ರೂ ಯೆಹೋವ ಅಪ್ಪ ನಿಮ್ಮ ಬಗ್ಗೆ ಹೆಮ್ಮೆ ಪಡೋ ತರ ಮಾಡಿ.—ಜ್ಞಾನೋಕ್ತಿ 27:11 ಓದಿ.

ಗೀತೆ 89 ಯೆಹೋವನ ಸೌಹಾರ್ದಯುತ ಮನವಿ: “ನನ್ನ ಮಗನೇ, ವಿವೇಕಿಯಾಗಿರು”

^ ಪ್ಯಾರ. 5 ಯುವ ಸಹೋದರರು ಯೆಹೋವನಿಗೆ ಆಪ್ತರಾದ ಹಾಗೆ ಆತನ ಸೇವೆನೂ ಹೆಚ್ಚು ಮಾಡಬೇಕು ಅಂತ ಆಸೆಪಡ್ತಾರೆ. ಸೇವೆಯನ್ನ ಹೆಚ್ಚು ಮಾಡೋ ಒಂದು ವಿಧ ಸಹಾಯಕ ಸೇವಕರಾಗೋದು. ಸಹಾಯಕ ಸೇವಕರಾಗೋಕೆ ಅವರು ಮೊದಲು ಸಭೆಯವರ ಗೌರವ ಗಳಿಸಿ ಉಳಿಸಿಕೊಳ್ಳಬೇಕು. ಅದಕ್ಕಾಗಿ ಏನು ಮಾಡಬೇಕು ಅಂತ ಈ ಲೇಖನದಲ್ಲಿ ನೋಡೋಣ.

^ ಪ್ಯಾರ. 9 ಕೆಲವು ಹೆಸರುಗಳನ್ನ ಬದಲಾಯಿಸಲಾಗಿದೆ.