ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸವಾಲುಗಳ ಮೇಲೆ ಸಂಪೂರ್ಣ ಗೆಲುವು

ದೇವರ ಸರಕಾರದಿಂದ ‘ಸಮಾಧಾನ’ ಸಾಧ್ಯ

ದೇವರ ಸರಕಾರದಿಂದ ‘ಸಮಾಧಾನ’ ಸಾಧ್ಯ

ನಾವೆಲ್ಲರೂ ಎದುರು ನೋಡುತ್ತಿರುವ ದೇವರ ರಾಜ್ಯವು ಅಂದರೆ ದೇವರು ಸ್ಥಾಪಿಸಿರುವ ವಿಶ್ವವ್ಯಾಪಿ ಸರಕಾರವು ಬಲುಬೇಗನೆ ಇಡೀ ಲೋಕದಲ್ಲಿ ಶಾಂತಿ ಮತ್ತು ಐಕ್ಯತೆಯನ್ನು ಸ್ಥಾಪಿಸುವುದು. ಆಗ “ಸಮೃದ್ಧಿಯಾದ ಸಮಾಧಾನವು . . . ಇರುವುದು” ಎಂದು ಕೀರ್ತನೆ 72:7​ರಲ್ಲಿ (ಪವಿತ್ರ ಗ್ರಂಥ ಭಾಷಾಂತರ) ಹೇಳಲಾಗಿದೆ. ಆದರೆ ಆ ರಾಜ್ಯ ಯಾವಾಗ ಆಳ್ವಿಕೆ ಆರಂಭಿಸುವುದು? ಅದು ಹೇಗೆ ಸಂಭವಿಸುವುದು? ಆ ರಾಜ್ಯದ ಆಳ್ವಿಕೆಯಿಂದ ಪ್ರಯೋಜನ ಪಡೆಯಲು ನಾವೇನು ಮಾಡಬೇಕು?

ದೇವರ ರಾಜ್ಯ ಯಾವಾಗ ಆಳುವುದು?

ದೇವರ ರಾಜ್ಯ ಆಳಲು ಆರಂಭಿಸುವ ಸ್ವಲ್ಪ ಮುಂಚೆ ಯಾವೆಲ್ಲಾ ಘಟನೆಗಳು ನಡೆಯುತ್ತವೆ ಎಂದು ಬೈಬಲ್‌ನಲ್ಲಿ ಈಗಾಗಲೇ ಸೂಚನೆಗಳನ್ನು ಕೊಡಲಾಗಿದೆ. ಅವು ನಡೆಯುವಾಗ ದೇವರ ರಾಜ್ಯ ಬೇಗ ಬರಲಿದೆ ಎಂದು ನಾವು ತಿಳಿದುಕೊಳ್ಳಬಹುದು. ರಾಷ್ಟ್ರಗಳ ಮಧ್ಯೆ ಯುದ್ಧ, ಬರಗಾಲ, ಕಾಯಿಲೆಗಳು, ಅನೇಕ ಭೂಕಂಪಗಳು ಮತ್ತು ತೀವ್ರ ಅನ್ಯಾಯ ಮುಂತಾದವುಗಳೇ ಆ ‘ಸೂಚನೆಗಳಾಗಿವೆ.’—ಮತ್ತಾಯ 24:3, 7, 12; ಲೂಕ 21:11; ಪ್ರಕಟನೆ 6:2-8.

ಬೈಬಲಿನ ಇನ್ನೊಂದು ಕಡೆಯಲ್ಲಿ ಹೀಗೆ ಮುಂತಿಳಿಸಲಾಗಿದೆ: “ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವವು . . . ಜನರು ಸ್ವಪ್ರೇಮಿಗಳೂ ಹಣಪ್ರೇಮಿಗಳೂ ಸ್ವಪ್ರತಿಷ್ಠೆಯುಳ್ಳವರೂ ಅಹಂಕಾರಿಗಳೂ ದೇವದೂಷಕರೂ ಹೆತ್ತವರಿಗೆ ಅವಿಧೇಯರೂ ಕೃತಜ್ಞತೆಯಿಲ್ಲದವರೂ ನಿಷ್ಠೆಯಿಲ್ಲದವರೂ ಸ್ವಾಭಾವಿಕ ಮಮತೆಯಿಲ್ಲದವರೂ ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲದವರೂ ಮಿಥ್ಯಾಪವಾದಿಗಳೂ ಸ್ವನಿಯಂತ್ರಣವಿಲ್ಲದವರೂ ಉಗ್ರರೂ ಒಳ್ಳೇತನವನ್ನು ಪ್ರೀತಿಸದವರೂ . . . ಹೆಮ್ಮೆಯಿಂದ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರೂ” ಆಗಿರುವರು. (2 ತಿಮೊಥೆಯ 3:1-4) ಹಿಂದಿನಿಂದಲೂ ಕೆಲವು ಜನರಲ್ಲಿ ಈ ಗುಣಗಳು ಇದ್ದರೂ ಈಗ ಎಲ್ಲೆಲ್ಲೂ ಇಂಥವರೇ ಇದ್ದಾರೆ.

ಮೇಲೆ ಮುಂತಿಳಿಸಲಾದ ಘಟನೆಗಳು 1914​ರಿಂದ ನಡೆಯುತ್ತಾ ಇವೆ. ಆಗಿನಿಂದ ಲೋಕ ಹೇಗೆಲ್ಲಾ ಬದಲಾಗಿದೆ ಎಂದು ಇತಿಹಾಸಕಾರರು, ಗಣ್ಯ ವ್ಯಕ್ತಿಗಳು ಮತ್ತು ಲೇಖಕರು ಸಹ ತಿಳಿಸಿದ್ದಾರೆ. ಉದಾಹರಣೆಗೆ, ಡೆನ್ಮಾರ್ಕಿನ ಇತಿಹಾಸಕಾರನಾದ ಪೀಟರ್‌ ಮುಂಕ್‌ ಹೀಗೆ ಬರೆದಿದ್ದಾರೆ: “1914​ರಲ್ಲಿ ನಡೆದ ಯುದ್ಧವು ಮಾನವ ಇತಿಹಾಸದಲ್ಲೇ ದೊಡ್ಡ ತಿರುಗುಬಿಂದು ಆಗಿದೆ. ಪ್ರಗತಿಯ ಹಾದಿಯಲ್ಲಿದ್ದ . . . ನಾವು ವಿಪತ್ತು, ಭಯ, ಹಗೆ ಮತ್ತು ಅಸುರಕ್ಷತೆಯ ದಿನಗಳಿಗೆ ಕಾಲಿಟ್ಟಿದ್ದೇವೆ.”

ಆದರೆ ಸಂತೋಷದ ವಿಷಯವೇನೆಂದರೆ, ಈ ಎಲ್ಲಾ ಕೆಟ್ಟ ವಿಷಯಗಳ ನಂತರ ಬೇಗನೆ ಶಾಂತಿಯ ಪರಿಸ್ಥಿತಿ ಬರಲಿದೆ. ಈ ವಿಷಯಗಳು ದೇವರ ರಾಜ್ಯ ಬೇಗನೆ ಆಳಲು ಆರಂಭಿಸಲಿದೆ ಎಂದು ಸೂಚಿಸುತ್ತದೆ. ಆದರೆ ಯೇಸು ಅಂತ್ಯದ ಬಗ್ಗೆ ತಿಳಿಸುವಾಗ ಒಂದು ಒಳ್ಳೇ ಸೂಚನೆಯನ್ನೂ ತಿಳಿಸಿದ್ದಾನೆ: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.”—ಮತ್ತಾಯ 24:14.

ಆ ಸುವಾರ್ತೆಯೇ ಯೆಹೋವನ ಸಾಕ್ಷಿಗಳ ಮುಖ್ಯ ಸಂದೇಶ. ಅವರ ಮುಖ್ಯ ಪತ್ರಿಕೆಯ ಹೆಸರು ಸಹ ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂದಾಗಿದೆ. ಈ ಪತ್ರಿಕೆಯು ಯಾವಾಗಲೂ, ದೇವರ ರಾಜ್ಯವು ಈ ಭೂಮಿಯಲ್ಲಿ ಮಾನವರಿಗಾಗಿ ಮಾಡಲಿರುವ ಅದ್ಭುತ ವಿಷಯಗಳ ಕುರಿತು ತಿಳಿಸುತ್ತದೆ.

ದೇವರ ರಾಜ್ಯ ಹೇಗೆ ಅಧಿಕಾರವನ್ನು ತನ್ನ ಕೈಗೆತ್ತಿಕೊಳ್ಳುತ್ತದೆ?

ಅದಕ್ಕೆ ಉತ್ತರ:

  1. ದೇವರ ರಾಜ್ಯವು ಈಗಿರುವ ರಾಜಕೀಯ ಮುಖಂಡರ ಮೂಲಕ ಆಳ್ವಿಕೆ ಮಾಡುವುದಿಲ್ಲ.

  2. ಲೋಕದ ರಾಜಕೀಯ ಮುಖಂಡರು ತಮ್ಮ ಅಧಿಕಾರವನ್ನು ಕಳೆದುಕೊಳ್ಳದಿರಲು ಮೂರ್ಖತನದಿಂದ ದೇವರ ರಾಜ್ಯದ ವಿರುದ್ಧ ಹೋರಾಡುವರು.—ಕೀರ್ತನೆ 2:2-9.

  3. ಮಾನವರ ಮೇಲಿನ ಅಧಿಕಾರವನ್ನು ಬಿಟ್ಟುಕೊಡಲು ಬಯಸದ ರಾಜಕೀಯ ಸರಕಾರಗಳನ್ನು ದೇವರ ರಾಜ್ಯವು ನಾಶ ಮಾಡುತ್ತದೆ. (ದಾನಿಯೇಲ 2:44; ಪ್ರಕಟನೆ 19:17-21) ಲೋಕವ್ಯಾಪಕವಾಗಿ ನಡೆಯುವ ಈ ಅಂತಿಮ ಯುದ್ಧದ ಹೆಸರು ಹರ್ಮಗೆದೋನ್‌.—ಪ್ರಕಟನೆ 16:14, 16.

  4. ದೇವರ ರಾಜ್ಯದ ಆಳ್ವಿಕೆಗೆ ಸ್ವಇಚ್ಛೆಯಿಂದ ಅಧೀನರಾಗುವವರನ್ನು ಹರ್ಮಗೆದೋನಿನಿಂದ ಪಾರು ಮಾಡಲಾಗುವುದು ಮತ್ತು ಅವರು ಶಾಂತಿಯುತ ಹೊಸ ಲೋಕದಲ್ಲಿ ಜೀವಿಸುವರು. ಅವರು ಲಕ್ಷಗಟ್ಟಲೆ ಇರುವುದರಿಂದ ಬೈಬಲಿನಲ್ಲಿ ಅವರನ್ನು “ಮಹಾ ಸಮೂಹ” ಎಂದು ಕರೆಯಲಾಗಿದೆ.—ಪ್ರಕಟನೆ 7:9, 10, 13, 14.

ಈ ಆಳ್ವಿಕೆಯಿಂದ ಪ್ರಯೋಜನ ಪಡೆಯಲು ಏನು ಮಾಡಬೇಕು?

ದೇವರ ರಾಜ್ಯದ ಪ್ರಜೆಗಳಾಗಲು ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆ ಜ್ಞಾನ ಪಡೆದುಕೊಳ್ಳುವುದೇ ಆಗಿದೆ. ದೇವರಿಗೆ ಪ್ರಾರ್ಥಿಸುವಾಗ ಯೇಸು ಹೀಗೆ ಹೇಳಿದನು: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.”—ಯೋಹಾನ 17:3.

ಜನರು ದೇವರ ಬಗ್ಗೆ ತಿಳಿದು ಆತನಿಗೆ ಆಪ್ತರಾಗುವಾಗ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಅವುಗಳಲ್ಲಿ ಎರಡನ್ನು ಗಮನಿಸಿ: ಮೊದಲನೆಯದಾಗಿ, ಅವರು ಆತನ ಮೇಲೆ ಬಲವಾದ ನಂಬಿಕೆ ಬೆಳೆಸಿಕೊಳ್ಳುತ್ತಾರೆ. ನಿಜತ್ವಗಳ ಮೇಲೆ ಆಧರಿಸಿದ ಈ ನಂಬಿಕೆಯಿಂದಾಗಿ ಅವರಿಗೆ, ದೇವರ ರಾಜ್ಯ ನಿಜ ಸರಕಾರ ಮತ್ತು ಅದು ಬೇಗನೆ ಆಳ್ವಿಕೆಯನ್ನು ಮಾಡಲಿದೆ ಎಂದು ಸ್ಪಷ್ಟವಾಗುತ್ತದೆ. (ಇಬ್ರಿಯ 11:1) ಎರಡನೆಯದಾಗಿ, ಅವರಿಗೆ ದೇವರ ಮತ್ತು ನೆರೆಯವರ ಮೇಲಿನ ಪ್ರೀತಿ ಹೆಚ್ಚಾಗುತ್ತದೆ. ದೇವರ ಮೇಲಿನ ಪ್ರೀತಿಯು ಇಷ್ಟಪೂರ್ವಕವಾಗಿ ಆತನಿಗೆ ವಿಧೇಯರಾಗಲು ಪ್ರೇರೇಪಿಸುತ್ತದೆ. ನೆರೆಯವರ ಮೇಲಿನ ಪ್ರೀತಿಯು ಯೇಸುವಿನ ಈ ಮಾತುಗಳನ್ನು ಪಾಲಿಸುವಂತೆ ಪ್ರೇರೇಪಿಸುತ್ತದೆ: “ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅದನ್ನೇ ನೀವು ಸಹ ಅವರಿಗೆ ಮಾಡಿರಿ.”—ಲೂಕ 6:31.

ಪ್ರೀತಿಯ ತಂದೆಯಂತೆ ನಮ್ಮ ಸೃಷ್ಟಿಕರ್ತನೂ ನಮಗೆ ಒಳ್ಳೇದನ್ನೇ ಬಯಸುತ್ತಾನೆ. ಬೈಬಲ್‌ನಲ್ಲಿ “ವಾಸ್ತವವಾದ ಜೀವನ” ಎಂದು ಕರೆಯಲಾದ ಜೀವನವನ್ನು ನಾವು ಪಡೆಯಬೇಕೆಂದು ಆತನು ಬಯಸುತ್ತಾನೆ. (1 ತಿಮೊಥೆಯ 6:19) ನಮ್ಮ ಈಗಿನ ಜೀವನ “ವಾಸ್ತವವಾದ ಜೀವನ” ಅಲ್ಲ. ಯಾಕೆಂದರೆ, ಲಕ್ಷಾಂತರ ಜನರ ಜೀವನ ಎಷ್ಟು ಹಾಳಾಗಿದೆಯೆಂದರೆ ಬದುಕುವುದೇ ಕಷ್ಟವಾಗಿದೆ. ಹಾಗಾದರೆ, “ವಾಸ್ತವವಾದ ಜೀವನ” ಹೇಗಿರುತ್ತದೆ ಎಂದು ತಿಳಿಯಲು ನಿಮಗಿಷ್ಟವಿದೆಯಾ? ದೇವರ ರಾಜ್ಯ ತನ್ನ ಪ್ರಜೆಗಳಿಗಾಗಿ ಮಾಡಲಿರುವ ಕೆಲವು ವಿಷಯಗಳನ್ನು ಪರಿಗಣಿಸಿ.

ದೇವರ ರಾಜ್ಯ ಆಳುವಾಗ ಜನರು ಸುರಕ್ಷಿತರಾಗಿರುವರು ಮತ್ತು ಅವರಿಗೆ ಆಹಾರ ಸಮೃದ್ಧವಾಗಿರುವುದು