ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಮಿ ನಾಶವಾಗದೇ ಉಳಿಯುತ್ತಾ?

ಗಾಳಿ

ಗಾಳಿ

ಗಾಳಿ ನಮ್ಮೆಲ್ರಿಗೂ ಬೇಕೇಬೇಕು. ಆದ್ರೆ ಬರೀ ಉಸಿರಾಡೋಕೆ ಮಾತ್ರ ಅಲ್ಲ. ಸೂರ್ಯನಿಂದ ಬರೋ ಹಾನಿಕಾರಕ ಕಿರಣಗಳಿಂದ ಗಾಳಿ ನಮ್ಮನ್ನ ಸಂರಕ್ಷಿಸುತ್ತೆ. ಅಷ್ಟೇ ಅಲ್ಲ, ಇಡೀ ಭೂಮಿಯ ತಾಪಮಾನ 0 ಡಿಗ್ರಿ ಸೆಲ್‌ಸಿಯಸ್‌ಗಿಂತ ಕಮ್ಮಿ ಆಗದ ಹಾಗೆ ನೋಡ್ಕೊಳ್ಳುತ್ತೆ.

ಗಾಳಿಗಿರೋ ಅಪಾಯ

ವಾಯು ಮಾಲಿನ್ಯ ಜಾಸ್ತಿ ಆಗ್ತಾ ಇರೋದ್ರಿಂದ ಗಿಡ-ಮರಗಳ, ಜೀವರಾಶಿಗಳ ಮತ್ತು ಮನುಷ್ಯರ ಜೀವಕ್ಕೆ ಅಪಾಯ ಆಗ್ತಾ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇಡೀ ಭೂಮಿಯಲ್ಲಿ ಕೇವಲ 1% ಜನಸಂಖ್ಯೆ ಮಾತ್ರ ಶುದ್ಧ ಗಾಳಿಯನ್ನ ಸೇವಿಸ್ತಿದ್ದಾರೆ.

ವಾಯು ಮಾಲಿನ್ಯ ಹೆಚ್ಚಾಗ್ತಾ ಇರೋದ್ರಿಂದ ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಜಾಸ್ತಿ ಆಗ್ತಿದೆ. ಈ ಮಾಲಿನ್ಯದಿಂದಾಗಿ ಪ್ರತೀ ವರ್ಷ ಸುಮಾರು 70 ಲಕ್ಷ ಜನ ತುಂಬ ಬೇಗ ತೀರಿ ಹೋಗ್ತಿದ್ದಾರೆ.

ಭೂಮಿಗಿರೋ ಸಾಮರ್ಥ್ಯ

ಎಲ್ಲರಿಗೂ ಶುದ್ಧ ಗಾಳಿ ಸಿಗೋ ತರ ಈ ಭೂಮಿಯನ್ನ ರಚಿಸಲಾಗಿದೆ. ಆದ್ರೆ ಎಲ್ರಿಗೂ ಅದು ಸಿಗಬೇಕಂದ್ರೆ ಮನುಷ್ಯ ಗಾಳಿಯನ್ನ ಮಾಲಿನ್ಯ ಮಾಡಬಾರದು. ಇದಕ್ಕಿರೋ ಕೆಲವು ಉದಾಹರಣೆಗಳನ್ನ ನೋಡೋಣ:

  • ಕಾಡುಗಳು ಗಾಳಿಯಲ್ಲಿರೋ ಕಾರ್ಬನ್‌-ಡೈ-ಆಕ್ಸೈಡ್‌ನ ಹೀರಿಕೊಳ್ಳುತ್ತೆ ಅಂತ ನಮ್ಮೆಲ್ರಿಗೂ ಗೊತ್ತು. ಸಮುದ್ರದ ದಡದಲ್ಲಿ, ಉಪ್ಪು ನೀರಲ್ಲಿ ಬೆಳೆಯೋ ಮ್ಯಾಂಗ್ರೋ ಮರಗಳು ಕಾರ್ಬನ್‌-ಡೈ-ಆಕ್ಸೈಡ್‌ನ ಹೀರಿಕೊಳ್ಳೋ ಕೆಲಸವನ್ನ ಕಾಡುಗಳಿಂತ 5 ಪಟ್ಟು ಜಾಸ್ತಿ, ಚೆನ್ನಾಗಿ ಮಾಡುತ್ತೆ.

  • ಇತ್ತೀಚಿಗೆ ಮಾಡಿರೋ ಅಧ್ಯಯನದಿಂದ ಒಂದು ವಿಷ್ಯ ಗೊತ್ತಾಗಿದೆ ಏನಂದ್ರೆ, ಸಮುದ್ರದಲ್ಲಿರೋ ಒಂದು ಜಾತಿಯ ಪಾಚಿ ಕಾರ್ಬನ್‌-ಡೈ-ಆಕ್ಸೈಡ್‌ನ ಹೀರಿಕೊಳ್ಳೋದು ಮಾತ್ರ ಅಲ್ಲ, ಅದನ್ನ ಸಮುದ್ರದ ತಳದಲ್ಲಿ ಹೂತು ಹಾಕುತ್ತೆ. ಈ ಪಾಚಿಯ ಹೆಸರು ಕೆಲ್ಪ್‌. ಇದ್ರ ಎಲೆಗಳ ಮೇಲೆ ಚಿಕ್ಕ ಚಿಕ್ಕ ಚೀಲಗಳಿರುತ್ತೆ. ಇದ್ರಲ್ಲಿ ಗಾಳಿ ತುಂಬ್ಕೊಂಡಿರುತ್ತೆ. ಹಾಗಾಗಿ ಸಮುದ್ರದಲ್ಲಿ ತುಂಬ ದೂರದವರೆಗೆ ಇದು ತೇಲ್ಕೊಂಡು ಹೋಗುತ್ತೆ. ಸಮುದ್ರದ ದಡದಿಂದ ಕೆಲ್ಪ್‌ ತುಂಬ ದೂರ ಹೋದಾಗ, ಅದ್ರಲ್ಲಿರೋ ಚೀಲಗಳು ಹರಿದುಹೋಗುತ್ತೆ. ನಂತರ ಕಾರ್ಬನ್‌-ಡೈ-ಆಕ್ಸೈಡ್‌ನಿಂದ ತುಂಬ್ಕೊಂಡಿರೋ ಈ ಪಾಚಿ ಸಮುದ್ರದ ಆಳಕ್ಕೆ ಹೋಗಿ ಅಲ್ಲೇ ಹೂತು ಹೋಗುತ್ತೆ. ಹೀಗೆ ಸಾವಿರಾರು ವರ್ಷ ಅದು ಅಲ್ಲೇ ಇರುತ್ತೆ.

  • ನಮ್ಮ ವಾಯುಮಂಡಲಕ್ಕೆ ಎಷ್ಟು ಸಾಮರ್ಥ್ಯ ಇದೆ ಅಂದ್ರೆ ಅದು ಎಷ್ಟೇ ಮಾಲಿನ್ಯ ಆದ್ರೂ ತನ್ನಷ್ಟಕ್ಕೆ ತಾನೇ ಸರಿ ಹೋಗುತ್ತೆ. ಈ ತರ 2020ರಲ್ಲಿ ಆಯ್ತು. ಕೋವಿಡ್‌ ಮಹಾ ಪಿಡುಗಿನ ಸಮಯದಲ್ಲಿ ಲಾಕ್‌ಡೌನ್‌ ಆದಾಗ ಭೂಮಿ ಮೇಲಿರೋ ಫ್ಯಾಕ್ಟರಿಗಳು ಕೆಲಸ ಮಾಡೋದನ್ನ ನಿಲ್ಲಿಸಿದವು ಮತ್ತು ಜನ ತಮ್ಮ ವಾಹನಗಳನ್ನೂ ಬಳಸ್ತಾ ಇರಲಿಲ್ಲ. ಇದ್ರಿಂದಾಗಿ ಗಾಳಿಯಲ್ಲಿರೋ ಮಾಲಿನ್ಯ ತುಂಬ ಬೇಗ ಕಮ್ಮಿ ಆಯ್ತು. “2020ರ ವರ್ಲ್ಡ್‌ ಏರ್‌ ಕ್ವಾಲಿಟಿಯ” ವರದಿ ಪ್ರಕಾರ ಅವರು ಅಧ್ಯಯನ ಮಾಡಿದ 80% ಗಿಂತ ಹೆಚ್ಚು ದೇಶಗಳಲ್ಲಿ ಲಾಕ್‌ಡೌನ್‌ ಸಮಯದಲ್ಲಿ ಗಾಳಿ ಶುದ್ಧ ಆಯ್ತು.

ಮನುಷ್ಯರ ಪ್ರಯತ್ನ

ಸೈಕಲ್‌ ಬಳಸೋದ್ರಿಂದ ವಾಯು ಮಾಲಿನ್ಯ ಕಮ್ಮಿ ಆಗುತ್ತೆ

ವಾಯು ಮಾಲಿನ್ಯ ಮಾಡೋದನ್ನ ನಿಲ್ಲಿಸಿ ಅಂತ ಫ್ಯಾಕ್ಟರಿಗಳಿಗೆ ಸರ್ಕಾರ ಆಗಾಗ ಎಚ್ಚರಿಕೆ ಕೊಡ್ತಾ ಇರುತ್ತೆ. ಈ ಮಾಲಿನ್ಯದಿಂದಾಗೋ ಕೆಟ್ಟ ಪರಿಣಾಮಗಳನ್ನ ತಡೆಯೋಕೆ ವಿಜ್ಞಾನಿಗಳು ಬೇರೆ ಬೇರೆ ವಿಧಾನವನ್ನ ಕಂಡು ಹಿಡಿತಾ ಇದ್ದಾರೆ. ಅಂಥ ಒಂದು ವಿಧಾನದಲ್ಲಿ ಬ್ಯಾಕ್ಟಿರಿಯಾಗಳನ್ನ ಬಳಸಲಾಗಿತ್ತು. ಈ ಸೂಕ್ಷ್ಮ ಜೀವಿ ವಿಷಕಾರಿ ಅನಿಲ ಮತ್ತು ಬೇರೆ ಕಣಗಳನ್ನ ಯಾವ ರೀತಿ ಬದಲಾಯಿಸುತ್ತೆ ಅಂದ್ರೆ, ಇದ್ರಿಂದ ಮನುಷ್ಯರಿಗೆ ಯಾವ ಹಾನಿನೂ ಆಗಲ್ಲ. ಅಷ್ಟೇ ಅಲ್ಲ ಎಲ್ಲಾದ್ರೂ ಪ್ರಯಾಣ ಮಾಡೋಕೆ ಕಾರನ್ನ, ಬೈಕನ್ನ ಬಳಸೋ ಬದಲು ನಡಕೊಂಡು ಹೋಗಿ ಅಥವಾ ಸೈಕಲ್‌ ಬಳಸಿ ಅಂತ ತಜ್ಞರು ಜನ್ರಿಗೆ ಸಲಹೆ ಕೊಡ್ತಾ ಇದ್ದಾರೆ. ಮನೆಯಲ್ಲಿ ಕರೆಂಟ್‌ ಮತ್ತು ಗ್ಯಾಸನ್ನ ಕಡಿಮೆ ಬಳಸಿ ಅಂತನೂ ಹೇಳ್ತಿದ್ದಾರೆ.

ಹೊಸ ತರ ಸ್ಟೋವ್‌ಗಳನ್ನ ಸರ್ಕಾರ ಜನ್ರಿಗೆ ಕೊಡ್ತಾ ಇದೆ. ಆದ್ರೆ ಎಲ್ಲಾ ಜನ್ರಿಗೆ ಇದು ಸಿಗ್ತಾ ಇಲ್ಲ

ಇಷ್ಟು ಮಾಡಿದ್ರೆ ಮಾತ್ರ ಸಾಕಾಗಲ್ಲ. ನಾವಿನ್ನೂ ಹೆಚ್ಚು ಪ್ರಯತ್ನ ಮಾಡಬೇಕು ಅಂತ 2022ರಲ್ಲಿ ವಿಶ್ವ ಆರೋಗ್ಯ ಸಂಘಟನೆ ಮತ್ತು ವರ್ಲ್ಡ್‌ ಬ್ಯಾಂಕ್‌ನಂತಹ ಅಂತಾರಾಷ್ಟ್ರೀಯ ಸಂಘಟನೆಗಳು ಮಾಡಿದ ಅಧ್ಯಯನದಿಂದ ಗೊತ್ತಾಯ್ತು.

2020ರಲ್ಲಿ ಭೂಮಿ ಮೇಲಿರೋ ಪ್ರತೀ 3ನೇ ವ್ಯಕ್ತಿ ಆಹಾರವನ್ನ ತಯಾರಿಸೋಕೆ ಬಳಸೋ ಇಂಧನ ಮತ್ತು ಸ್ಟೋವ್‌ನಿಂದಾಗಿ ವಾಯು ಮಾಲಿನ್ಯ ಹೆಚ್ಚಾಗ್ತಿದೆ ಅಂತ ಅವರು ಕೊಟ್ಟ ವರದಿ ತಿಳಿಸ್ತು. ಎಷ್ಟೋ ಇಲಾಖೆಗಳಲ್ಲಿ ಇರೋ ಜನ್ರಿಗೆ ಹೊಸ ತರದ ಸ್ಟೋವ್‌ ಅಥವಾ ಇಂಧನ ಸಿಗ್ತಾ ಇಲ್ಲ. ಇದ್ರಿಂದನೂ ವಾಯು ಮಾಲಿನ್ಯ ಜಾಸ್ತಿ ಆಗ್ತಿದೆ.

ನಮ್ಮ ನಿರೀಕ್ಷೆಗಿರೋ ಕಾರಣಗಳು—ಬೈಬಲಲ್ಲಿ ಹೀಗಿದೆ

“ಆಕಾಶ ಸೃಷ್ಟಿಸಿ . . . ಭೂಮಿ ಮೇಲಿರೋ ಮಾನವ್ರಿಗೆ ಉಸಿರನ್ನ ಕೊಟ್ಟಿರೋ, ಅದ್ರಲ್ಲಿ ನಡೆಯುವವ್ರಿಗೆ ಜೀವಶಕ್ತಿಯನ್ನ ನೀಡಿರೋ, ಮಹಾನ್‌ ಸತ್ಯ ದೇವರಾದ ಯೆಹೋವ ಹೀಗೆ ಹೇಳ್ತಾನೆ.”—ಯೆಶಾಯ 42:5

ಗಾಳಿಯನ್ನ ರಚಿಸಿರೋದು ದೇವರು. ಇದ್ರಿಂದ ನಮಗೆ ಉಸಿರಾಡೋಕೆ ಆಗುತ್ತೆ. ಗಾಳಿ ತನ್ನಷ್ಟಕ್ಕೆ ತಾನೇ ಶುದ್ಧವಾಗೋ ರೀತಿಯಲ್ಲಿ ದೇವರು ನಿಸರ್ಗದಲ್ಲಿ ಚಕ್ರಗಳನ್ನ ಇಟ್ಟಿದ್ದಾನೆ. ಆತನು ಮನುಷ್ಯರನ್ನ ತುಂಬ ಪ್ರೀತಿಸ್ತಾನೆ, ಆತನಿಗೆ ತುಂಬ ಶಕ್ತಿನೂ ಇದೆ. ಇಷ್ಟೊಳ್ಳೆ ದೇವರಿಗೆ ವಾಯು ಮಾಲಿನ್ಯವನ್ನ ಸರಿಮಾಡೋಕೆ ಆಗಲ್ವಾ? ಇದ್ರ ಬಗ್ಗೆ ಹೆಚ್ಚು ತಿಳಿಯಲು “ನಮ್ಮ ಭೂಮಿ ನಾಶ ಆಗಲ್ಲ ಅಂತ ದೇವರು ಮಾತು ಕೊಟ್ಟಿದ್ದಾನೆ” ಅನ್ನೋ ಲೇಖನ ನೋಡಿ.