1921—ನೂರು ವರ್ಷಗಳ ಹಿಂದೆ
ಜನವರಿ 1, 1921ರ ಕಾವಲಿನಬುರುಜುವಿನಲ್ಲಿ “ಈ ವರ್ಷ ನಾವೇನು ಕೆಲಸ ಮಾಡಬೇಕಾಗಿದೆ” ಅಂತ ಬೈಬಲ್ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರ ಯೆಶಾಯ 61:1, 2 ರಲ್ಲಿತ್ತು. ಅಲ್ಲಿ ಹೇಳೋದು: “ಸೌಮ್ಯ ಸ್ವಭಾವದವರಿಗೆ ಸಿಹಿ ಸುದ್ದಿಯನ್ನ ಪ್ರಕಟಿಸೋಕೆ ಯೆಹೋವ ನನ್ನನ್ನ ಅಭಿಷೇಕಿಸಿದ್ದಾನೆ . . . ನಮ್ಮ ದೇವರು ಸೇಡುತೀರಿಸೋ ದಿನದ ಬಗ್ಗೆ ಹೇಳೋಕೆ . . . ನನ್ನನ್ನ ಕಳಿಸಿದ್ದಾನೆ.” ಬೈಬಲ್ ವಿದ್ಯಾರ್ಥಿಗಳು ಸಿಹಿಸುದ್ದಿ ಸಾರಬೇಕು ಅಂತ ಈ ವಚನ ಅವರಿಗೆ ನೆನಪಿಸ್ತು.
ಎದೆಗುಂದದೆ ಸಾರಿದವರು
ಬೈಬಲ್ ವಿದ್ಯಾರ್ಥಿಗಳು ಹೆದರದೆ ಸಿಹಿಸುದ್ದಿ ಸಾರಬೇಕಿತ್ತು. ಯಾಕಂದ್ರೆ ಅವರು ಸೌಮ್ಯ ಸ್ವಭಾವದವರಿಗೆ “ಸಿಹಿ ಸುದ್ದಿಯನ್ನ” ಮಾತ್ರ ಅಲ್ಲ, ಕೆಟ್ಟವರಿಗೆ “ದೇವರು ಸೇಡುತೀರಿಸೋ ದಿನದ” ಬಗ್ಗೆನೂ ಸಾರಬೇಕಿತ್ತು.
ಕೆನಡಾದಲ್ಲಿದ್ದ ಸಹೋದರ ಜೆ. ಎಚ್. ಹಾಸ್ಕಿನ್ರವರು ವಿರೋಧವಿದ್ದರೂ ಧೈರ್ಯವಾಗಿ ಸಿಹಿಸುದ್ದಿ ಸಾರುತ್ತಿದ್ದರು. 1921ರ ಬೇಸಿಗೆಯ ಸಮಯದಲ್ಲಿ ಅವರು ಸಾರುತ್ತಿದ್ದಾಗ ಒಬ್ಬರು ಪಾದ್ರಿ ಸಿಕ್ಕಿದ್ರು. ಸಹೋದರ ಹಾಸ್ಕಿನ್ ಆ ಪಾದ್ರಿಗೆ “ನಾವು ಕೆಲವು ಬೈಬಲ್ ವಿಷಯಗಳ ಬಗ್ಗೆ ಮಾತಾಡೋಣ ಮಾತಾಡುವಾಗ ನಿಮ್ಮ ಅಭಿಪ್ರಾಯ ಮತ್ತು ನನ್ನ ಅಭಿಪ್ರಾಯ ಬೇರೆಬೇರೆ ಆಗಿರಬಹುದು. ಆದರೆ ಜಗಳ ಆಡೋದು ಬೇಡ ಸಮಾಧಾನವಾಗಿ ಇರೋಣ” ಅಂತ ಹೇಳಿದ್ರು. ಆದ್ರೆ ಅದು ಹಾಗೆ ನಡೀಲಿಲ್ಲ. ಆ ದಿನಗಳ ಬಗ್ಗೆ ಹಾಸ್ಕಿನ್ ಹೇಳೋದು: “ನಾವು ಮಾತಾಡಿ ಸ್ವಲ್ಪ ಹೊತ್ತಾಗಿತ್ತು ಅಷ್ಟೇ. ಮಾತಾಡ್ತಾ ಇರುವಾಗಲೇ ಆ ಪಾದ್ರಿ ಎಷ್ಟು ಜೋರಾಗಿ ಬಾಗಿಲು ಹಾಕಿದ ಅಂದ್ರೆ ಕಿಟಕಿ ಗಾಜುಗಳು ಬಿದ್ದು ಹೋಗುತ್ತೆ ಅಂದ್ಕೊಂಡೆ.”
ಆ ಪಾದ್ರಿ ‘ಇದನ್ನೆಲ್ಲಾ ನನಗ್ಯಾಕೆ ಹೇಳ್ತಿಯಾ? ಕ್ರೈಸ್ತರಲ್ಲದವರಿಗೆ ಹೋಗಿ ಹೇಳು’ ಅಂತ ಕಿರುಚಿದ್ರು. ಅದಕ್ಕೆ ಸಹೋದರ ಹಾಸ್ಕಿನ್ ‘ನೀನು ಹೀಗೆ ಮಾಡೋದು ನೋಡಿದ್ರೆ ನೀನು ಕ್ರೈಸ್ತನಲ್ಲ, ನಿನಗೇ ಇದನ್ನ ಮೊದ್ಲು ಹೇಳಬೇಕಾಗಿದೆ’ ಅಂತ ಮನಸ್ಸಲ್ಲಿ ಅಂದುಕೊಂಡ್ರು. ಆದ್ರೆ ಹಾಗೆ ಹೇಳೋಕೆ ಹೋಗಿಲ್ಲ.
ಮಾರನೇ ದಿನ ಆ ಪಾದ್ರಿ ಚರ್ಚಲ್ಲಿ ಭಾಷಣ ಕೊಡ್ತಿದ್ದಾಗ ಹಾಸ್ಕಿನ್ ಬಗ್ಗೆ ತಪ್ಪು ತಪ್ಪಾಗಿ ಹೇಳಿದ್ರು. “‘ಇವನಂಥ ಸುಳ್ಳುಗಾರ ಈ ಊರಲ್ಲೇ ಇಲ್ಲ. ಇಂಥವರನ್ನ ಕೊಂದು ಬಿಡಬೇಕು’ ಅಂದ್ರು” ಅಂತ ಹಾಸ್ಕಿನ್ ನೆನಪಿಸಿಕೊಳ್ತಾರೆ. ಆದ್ರೆ ಹಾಸ್ಕಿನ್ ಇದಕ್ಕೆಲ್ಲ ಹೆದರಿ ಸಾರೋದನ್ನ ನಿಲ್ಲಿಸಲಿಲ್ಲ. ಅವರು ಹೇಳೋದು: “ನಾನು ಮುಂಚೆಗಿಂತ ಆಗ ಖುಷಿಯಾಗಿ ಸಾರುತ್ತಾ ಇದ್ದೆ. ಅಷ್ಟೇ ಅಲ್ಲ ಕೆಲವು ಜನರು ನನ್ನ ಹತ್ರ ಬಂದು ‘ನೀವು ನಿಜವಾಗ್ಲೂ ದೇವರ ಕೆಲಸ ಮಾಡ್ತಿದ್ದೀರಿ’ ಅಂತ ಹೇಳಿದ್ರು. ಅದರ ಜೊತೆಗೆ ನನಗೆ ಅವಶ್ಯಕತೆ ಇರೋದನ್ನೆಲ್ಲಾ ಕೊಡೋಕೆ ಅವರೇ ಮುಂದೆ ಬರುತ್ತಿದ್ರು.”
ವೈಯಕ್ತಿಕವಾಗಿ ಮತ್ತು ಕುಟುಂಬವಾಗಿ ಬೈಬಲ್ ಕಲಿಯೋಕೆ ಸಹಾಯ
ಜನರು ಬೈಬಲನ್ನ ಸರಿಯಾಗಿ ತಿಳುಕೊಳ್ಳೋಕೆ ಸಹಾಯವಾಗಲಿ ಅಂತ ಬೈಬಲ್ ವಿದ್ಯಾರ್ಥಿಗಳು ಬೈಬಲ್ ಪ್ರಶ್ನೆಗಳು ಮತ್ತು ಅದಕ್ಕಿರೋ ಉತ್ತರಗಳನ್ನ ದ ಗೋಲ್ಡನ್ ಏಜ್ ಪತ್ರಿಕೆಯಲ್ಲಿ ಕೊಡುತ್ತಿದ್ದರು. ಆ ಪತ್ರಿಕೆಯನ್ನ ನಾವೀಗ ಎಚ್ಚರ! ಅಂತ ಕರೆಯುತ್ತೇವೆ. ಹೆತ್ತವರು “ಈ ಪ್ರಶ್ನೆಗಳನ್ನ ಬಳಸಿ ಮಕ್ಕಳಿಗೆ ಸ್ಟಡಿ ಮಾಡಬಹುದಿತ್ತು. ಈ ಪ್ರಶ್ನೆಗಳಿಗೆ ಬೈಬಲಲ್ಲಿ ಉತ್ತರ ಹುಡುಕೋಕೆ ಮಕ್ಕಳಿಗೆ ಸಹಾಯ ಮಾಡಬಹುದಿತ್ತು.” ಅದರಲ್ಲಿ
“ಬೈಬಲಲ್ಲಿ ಎಷ್ಟು ಪುಸ್ತಕಗಳಿವೆ?” ಅನ್ನೋ ಚಿಕ್ಕಚಿಕ್ಕ ಪ್ರಶ್ನೆಗಳಿಂದ ಹಿಡಿದು “ಕ್ರೈಸ್ತರಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ತರದ ಹಿಂಸೆಯನ್ನ ಎದುರಿಸಬೇಕಾಗುತ್ತಾ?” ಅನ್ನುವಂಥ ಪ್ರಶ್ನೆಗಳೂ ಇದ್ದವು. ಇದರಿಂದ ಧೈರ್ಯವಾಗಿ ಸಾರೋಕೆ ಮಕ್ಕಳಿಗೆ ತರಬೇತಿ ಸಿಗ್ತಿತ್ತು.ಬೈಬಲ್ ಬಗ್ಗೆ ಸ್ವಲ್ಪ ತಿಳಿದುಕೊಂಡಿರುವವರಿಗೂ ಈ ಪತ್ರಿಕೆಯಲ್ಲಿ ಬೈಬಲ್ ಪ್ರಶ್ನೆಗಳು ಇದ್ದವು. ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ ಅನ್ನೋ ಪುಸ್ತಕದ ಒಂದನೇ ಸಂಪುಟದಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಇತ್ತು. ಈ ಪ್ರಶ್ನೆಗಳಿಂದ ಸಾವಿರಾರು ಜನರು ಪ್ರಯೋಜನ ಪಡೆದುಕೊಳ್ತಿದ್ರು. ಆದರೆ 1921, ಡಿಸೆಂಬರ್ 21ರ ದ ಗೋಲ್ಡನ್ ಏಜ್ ಪತ್ರಿಕೆಯಲ್ಲಿ ಇನ್ನು ಮುಂದೆ ಈ ತರ ಪ್ರಶ್ನೆಗಳು ಇರಲ್ಲ ಅಂತ ಪ್ರಕಟಣೆ ಮಾಡಲಾಯಿತು. ಯಾಕೆ ಇದನ್ನ ನಿಲ್ಲಿಸಿಬಿಟ್ರು?
ಹೊಸ ಪುಸ್ತಕ
ದ ಹಾರ್ಪ್ ಆಫ್ ಗಾಡ್ ಪುಸ್ತಕ
“ಎಷ್ಟು ಓದಬೇಕು” ಅಂತ ಇರೋ ಕಾರ್ಡ್
ಪ್ರಶ್ನೆಗಳಿರೋ ಕಾರ್ಡ್
ಹೊಸದಾಗಿ ಬೈಬಲ್ ಕಲಿಯುವವರು ಒಂದೊಂದೇ ವಿಷಯವನ್ನ ನಿಧಾನವಾಗಿ ಕಲೀಬೇಕು ಅಂತ ಮುಂದಾಳತ್ವ ವಹಿಸ್ತಿದ್ದ ಸಹೋದರರು ಅರ್ಥಮಾಡಿಕೊಂಡ್ರು. ಅದಕ್ಕೇ 1921ರಲ್ಲಿ ದ ಹಾರ್ಪ್ ಆಫ್ ಗಾಡ್ ಅನ್ನೋ ಪುಸ್ತಕ ಬಿಡುಗಡೆ ಮಾಡಿದ್ರು. ಆಸಕ್ತಿ ಇರುವವರು ಆ ಪುಸ್ತಕ ತಗೊಂಡ ಮೇಲೆ ಆ ಕೋರ್ಸಿಗೆ ಹೆಸರು ಕೊಡಬೇಕಿತ್ತು. ಅದನ್ನ ಅವರು ಮನೆಯಲ್ಲೇ ಕೂತು ಕಲೀಬಹುದಾಗಿತ್ತು. ಜನರಿಗೆ ಶಾಶ್ವತ ಜೀವ ಕೊಡಬೇಕು ಅನ್ನೋದೇ ದೇವರ ಉದ್ದೇಶ ಅಂತ ತಿಳಿದುಕೊಳ್ಳೋಕೆ ಈ ಕೋರ್ಸ್ ಸಹಾಯ ಮಾಡ್ತಿತ್ತು. ಆ ಕೋರ್ಸ್ ಹೇಗೆ ನಡೀತಿತ್ತು?
ಈ ಪುಸ್ತಕದ ಜೊತೆ ಒಂದು ಕಾರ್ಡ್ ಕೂಡ ಇರುತಿತ್ತು. ಅದರಲ್ಲಿ ಯಾವ ಪುಟಗಳನ್ನ ಓದಬೇಕು ಅಂತ ಬರೆದಿರುತ್ತಿತ್ತು. ಆ ಪುಟಗಳಲ್ಲಿರೋ ವಿಷಯಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿರೋ ಇನ್ನೊಂದು ಕಾರ್ಡ್ ಮುಂದಿನ ವಾರ ಪೋಸ್ಟ್ನಲ್ಲಿ ಬರುತ್ತಿತ್ತು. ಆ ವಾರ ಯಾವ ಪುಟಗಳನ್ನ ಓದಬೇಕು ಅಂತನೂ ಆ ಕಾರ್ಡಲ್ಲಿ ಇರುತ್ತಿತ್ತು.
ಬೈಬಲ್ ಕಲಿಯೋರಿಗೆ ಈ ತರ ಪ್ರಶ್ನೆಗಳಿರೋ ಕಾರ್ಡ್ ವಾರಕ್ಕೆ ಒಂದರಂತೆ 12 ವಾರ ಬರುತ್ತಿತ್ತು. ಆ ಕಾರ್ಡ್ಗಳನ್ನೆಲ್ಲಾ ಸಭೆಯಲ್ಲಿರೋ ವಯಸ್ಸಾಗಿರೋರು ಅಥವಾ ಯಾರಿಗೆ ಹೆಚ್ಚು ಸೇವೆ ಮಾಡೋಕೆ ಆಗಲ್ವೋ ಅವರು ಕಳಿಸ್ತಿದ್ದರು. ಉದಾಹರಣೆಗೆ ಅಮೇರಿಕಾದಲ್ಲಿರೋ ಆ್ಯನ ಕೆ. ಗಾರ್ಡ್ನರ್ ಹೇಳಿದ್ದು: “ನನ್ನ ತಂಗಿ ತೇಲ್ಗೆ ನಡೆಯೋಕೆ ಆಗ್ತಿರಲಿಲ್ಲ. ಹಾರ್ಪ್ ಆಫ್ ಗಾಡ್ ಪುಸ್ತಕ ಬಿಡುಗಡೆಯಾಗಿದ್ರಿಂದ ಅವಳಿಗೆ ತುಂಬ ಪ್ರಯೋಜನ ಆಯ್ತು. ಪ್ರಶ್ನೆಗಳನ್ನ ಬರೆದು ಕಾರ್ಡ್ ಕಳಿಸೋದ್ರಿಂದ ಅವಳಿಗೆ ಜಾಸ್ತಿ ಸೇವೆ ಮಾಡೋಕೆ ಒಂದು ಅವಕಾಶ ಸಿಗುತ್ತಿತ್ತು.” ಹೀಗೆ ಈ ಕೋರ್ಸ್ ಮುಗಿದ ಮೇಲೆ ಸಭೆಯಿಂದ ಯಾರಾದರೊಬ್ಬರು ಆ ವ್ಯಕ್ತಿಯನ್ನ ಹೋಗಿ ಭೇಟಿ ಮಾಡಿ ಬೈಬಲ್ ಬಗ್ಗೆ ಇನ್ನೂ ಜಾಸ್ತಿ ಕಲಿಯೋಕೆ ಸಹಾಯ ಮಾಡ್ತಿದ್ದರು.
ವೀಲ್ಚೇರ್ನಲ್ಲಿ ಕೂತಿರೋ ತೇಲ್ ಗಾರ್ಡ್ನರ್
ನಮ್ಮ ಮುಂದಿದ್ದ ಕೆಲಸ
ಆ ವರ್ಷದ ಕೊನೆಯಲ್ಲಿ ಸಹೋದರ ಜೆ. ಎಫ್. ರದರ್ಫರ್ಡ್ ಅವರು ಎಲ್ಲಾ ಸಭೆಗಳಿಗೆ ಒಂದು ಪತ್ರ ಬರೆದರು. ಅದರಲ್ಲಿ “ನಾವು ಮುಂಚೆಗಿಂತ ಈ ವರ್ಷನೇ ತುಂಬ ಜನರಿಗೆ ಸಾಕ್ಷಿ ಕೊಟ್ಟಿದ್ದೀವಿ” ಅಂತ ಹೇಳಿದ್ರು. ಆಮೇಲೆ “ಕೆಲಸ ಇನ್ನೂ ಬಾಕಿ ಇದೆ, ಅದನ್ನ ಮಾಡೋಕೆ ಇನ್ನೂ ತುಂಬ ಜನರಿಗೆ ಪ್ರೋತ್ಸಾಹ ಕೊಡಿ” ಅಂತನೂ ಬರೆದಿದ್ರು. ಬೈಬಲ್ ವಿದ್ಯಾರ್ಥಿಗಳು 1922ನೇ ವರ್ಷದಲ್ಲಿ ತುಂಬ ಸೇವೆ ಮಾಡಿದ್ರು. 1921ಕ್ಕಿಂತ 1922ರಲ್ಲಿ ಇನ್ನೂ ಜಾಸ್ತಿ ಜನರಿಗೆ ಅವರು ಸಿಹಿಸುದ್ದಿ ಸಾರಿದ್ರು.